ಶನಿವಾರ, ಏಪ್ರಿಲ್ 1, 2017

ಸಿರಿಕಲ್ಚರ್ - ರೇಷ್ಮೆ ಸಾಕಾಣಿಕೆ

ಬೇಸಿಗೆ ರಜೆಗೆ ಸಾಮಾನ್ಯವಾಗಿ ಅಕ್ಕ ಮತ್ತು ನಾನು ಊರ ಕಡೆ ಸಿಕ್ಕೇ ಸಿಗುತ್ತೇವೆ.  ನಮ್ಮ ನಮ್ಮ ಮಕ್ಕಳು ಕೂಡ ಒಬ್ಬರಿಗೊಬ್ಬರು ಹೊಂದಿಕೊಂಡು ಪ್ರೀತಿಯಿಂದ ರಜೆಯನ್ನು ಕಳೆಯುತ್ತಾರೆ. ಪ್ರತಿ ಸಲವೂ, ಹೊಸತನ್ನು ಹುಡುಕುತ್ತೇವೆ ಸಂಭ್ರಮಿಸಲು, ಕಲಿಯಲು. ಈ ಸರ್ತಿಯ ರಜೆಯಲ್ಲಿ, ಸಂಬಂಧಿಕರೊಬ್ಬರು ಮಾಡಿಕೊಂಡಿರುವ ರೇಷ್ಮೆ ಸಾಕಾಣಿಕೆ ಕೃಷಿಯನ್ನು ನೋಡಲು ಹೋಗಿದ್ದೆವು. ಇದರ ಬಗ್ಗೆ ಕಂಡು, ಕೇಳಿ, ತಿಳಿದುಕೊಂಡ ವಿಷಯಗಳ ಪುಟ್ಟ ಸಾರಾಂಶ.

ನಾಗೇಶ ಭಟ್ಟರು, ಹೊಡಬಟ್ಟೆ ಇವರು ಮೂಲತಃ ಕೃಷಿಕರು, ಅಡಿಕೆ, ಬಾಳೆ, ತೆಂಗು, ರಬ್ಬರ್, ಫೈನ್ಯಾಪಲ್ ಹೀಗೆ ವಿವಿಧ ಬಗೆಯ ಬೆಳೆಯನ್ನು ಬೆಳೆಯುತ್ತಿರುವ ಇವರು ಹೊಸತಾಗಿ ರೇಷ್ಮೆ ಹುಳುಗಳ ಸಾಕಾಣಿಕೆಯನ್ನು ಪ್ರಾರಂಭಿಸಿದ್ದಾರೆ ಎಂದು ಕೇಳಿಬಂದಾಗ, ಸಹಜವಾಗಿಯೇ ಕಿವಿ ನೆಟ್ಟಗಾಯಿತು. ಮಕ್ಕಳೆಂತೂ ಪಿಕ್ನಿಕ್ ಗೆ ಯಾವಾಗಲೂ ತಯಾರು. ಸರಿ, ಒಂದು ಹೊತ್ತಿನ ಭೇಟಿ ನಿರ್ಧರಿಸಿ ಹೊರೆಟೆವು.




ಸಿರಿಕಲ್ಚರ್ (ರೇಷ್ಮೆ ಸಾಕಾಣಿಕೆ) ಜಾಗದ ಮುಂಭಾಗಕ್ಕೆಯೇ ನಮ್ಮನ್ನು ಹಚ್ಚಹಸಿರಿನಿಂದ ಸ್ವಾಗತಿಸಿದ್ದು, ಸಾಲಾಗಿ ತಲೆ ಎತ್ತಿ ನಿಂತ ಹಿಪ್ಪು ನೇರಳೆ ಗಿಡಗಳು (Mulberry plants). ಒಳ್ಳೆಯ ಜಾಗ ಮತ್ತು ನೀರಿನ ವ್ಯವಸ್ಥೆಯಿದ್ದರೆ, ರೇಷ್ಮೆ ಸಾಕಾಣಿಕೆ ಸುಲಭ ಸಾಧ್ಯ ಎಂದೇ ಮಾತು ಶುರುಮಾಡಿದ, ನಾಗೇಶಣ್ಣ, ನಮ್ಮನೆಲ್ಲಾ, ರೇಷ್ಮೆ ಸಾಕಾಣಿಕಾ ಮನೆಗೆ ಕರೆದೊಯ್ದರು. ಹೆಚ್ಚು ಬಿಸಿಲಿನ ಝಳ ತಾಗದಂತೆ ಎಲ್ಲ ಬದಿಯಿಂದಲೂ ಹಸಿರು ಬಟ್ಟೆಯಿಂದ ಆವರಿಸಿ ನಿರ್ಮಿಸಿದ ಮನೆ ಅದಾಗಿತ್ತು.



ರೇಷ್ಮೆ ಹುಳು ಸಾಕಾಣಿಕೆಗೆ ಮತ್ತು ನಿರ್ವಹಣೆಗೆ ಮೊದಲು ನೀಡಬೇಕ್ಕಾದ್ದು ಆ ಜಾಗದ ಸ್ವಚ್ಛತೆಯೆಡೆಗಿನ ಗಮನ. ಪ್ರತೀ ಕಾರ್ಮಿಕರು/ರೈತರು ಹುಳು ಸಾಕಾಣಿಕೆ ಮನೆಯ ಒಳಹೊಕ್ಕುವ ಮೊದಲು, ಪ್ರವೇಶ ದ್ವಾರದಲ್ಲಿಯೇ ಚೆನ್ನಾಗಿ ಕೈ ಕಾಲನ್ನು ತಿಳಿ ಸುಣ್ಣದ ನೀರಿನಲ್ಲಿ ಅಥವಾ ಡೆಟಾಲ್ ನೀರಿನಲ್ಲಿ ತೊಳೆದುಕೊಂಡು. ಒಣ ಕಾಟನ್ ಬಟ್ಟೆಯಲ್ಲಿ ಒರೆಸಿಕೊಂಡು ಒಳಹೋಗುವುದು ಸೂಕ್ತ, ಇದೊಂದು ಸೋಂಕು ನಿವಾರಣೆಯ ಮಹತ್ವವಾದ ಮತ್ತು ಪ್ರಮುಖವಾದ ಅಂಶ. ಇದರಿಂದ ರೇಷ್ಮೆ ಹುಳುಗಳಿಗೆ ಹೊರಗಿನಿಂದ ಯಾವುದೇ ರೀತಿಯ ರೋಗಾಣುವಿನ ಸೋಂಕು ಹರಡದಂತೆ ತಡೆಗಟ್ಟಬಹುದು ಎಂದು ತಿಳಿಸುತ್ತ ನಮ್ಮನ್ನು ಒಳ ಕರೆದೊಯ್ದರು.





ಅಲ್ಲಿ ಒಳ ಹೊಕ್ಕ ನಂತರ ನಮಗೆ ಯಾವುದೊ ಬೇರೆಯ ಲೋಕಕ್ಕೆ ಹೋಗಿ ನಿಂತಂತಾಗಿತ್ತು, ಹಸಿರು ಮನೆಯ ಉದ್ದಗಲಕ್ಕೂ, ನೇರವಾಗಿ ಅಡಿಕೆ ದಬ್ಬೆಯಿಂದ ನಿರ್ಮಿತವಾಗ ರೇಷ್ಮೆ ಹುಳುವಿನ ಸಾಕಾಣಿಕಾ ಸ್ಟಾಂಡ್ ಗಳು. ನಮ್ಮಗಳ ಮಾತಿಲ್ಲದಿದ್ದರೆ, ವಿಚಿತ್ರವಾದ ಚರಚರ ಶಬ್ಧವೊಂದೇ ಅಲ್ಲಿ ಕೇಳುತ್ತಿತ್ತು. ಆಲೈಸಿದಾಗ ತಿಳಿಯಿತು, ಅದು ಹುಳುಗಳು, ಎಲೆಗಳನ್ನು ಒಂದೇ ಸಮನೆ ತಿನ್ನುತ್ತಿರುವ ಭರಾಟೆ! ಲಾರ್ವ ಹಂತದಲ್ಲಿದ್ದ ಆ ಹುಳುಗಳು, ಕೇವಲ ತಿನ್ನುವುದೊಂದೇ ತನ್ನ ಕಾಯಕವನ್ನಾಗಿ ಮಾಡಿಕೊಂಡಿದ್ದು ಮೊದಲ ನೋಟಕ್ಕೆ ನಮ್ಮನ್ನು ಅಶ್ಚ್ಯರ್ಯ ಚಕಿತರನ್ನಾಗಿ ಮಾಡಿತು.


ನಾಗೇಶಣ್ಣ ಮತ್ತು ಸಿರಿಕಲ್ಚರ್ ಉಸ್ತುವಾರಿ ನಡೆಸುತ್ತಿರುವ ಅವರ ಮಗನಾದ ಕೇಶವ ಭಟ್ ಹೇಳುವಂತೆ,  ಅವರು ರೇಷ್ಮೆ ಹುಳುಗಳ ಮೇಲೆ, ನೆಟ್ ಒಂದನ್ನು ಹಾಸಿ, ಅದರ ಮೇಲೆ ಹಿಪ್ಪು ನೇರಳೆ ಸೊಪ್ಪಿನ ಹೊದಿಕೆಯನ್ನು ಹಾಕಿ, ಸೊಪ್ಪನ್ನು ತಿನ್ನುತ್ತಾ ಹುಳುಗಳು ಮೇಲೆ ಬಂದ ನಂತರದಲ್ಲಿ, ಕೆಳಗಿನ ಹೊದಿಕೆಯಲ್ಲಿ ಒಟ್ಟುಗೂಡುವ ರೇಷ್ಮೆ ಹುಳುವಿನ ಕಸ ಸ್ವಚ್ಛಮಾಡುತ್ತಾರೆ ಮತ್ತು ಈ ನೆಟ್ ಅನ್ನು ನಿಯಮಿತವಾಗಿ ಬದಲಾಯಿಸುತ್ತಾರೆ. ಹುಳುವಿನ ಕಸವನ್ನು, ಗೊಬ್ಬರವಾಗಿ ಮಾರ್ಪಾಡು ಮಾಡಿ ಕೃಷಿಗೆ ಬಳಸಲಾಗುತ್ತದೆ. ಹುಳುವಿನ ಬೆಳವಣಿಗೆಯ ಪ್ರತಿ ಹಂತವನ್ನು 'ಜ್ವರ' ಎಂದು ಕರೆಯುತ್ತಾರೆ. ಹೀಗೆ ಸೊಪ್ಪನ್ನು ತಿನ್ನುತ್ತಾ ರೇಷ್ಮೆ ಹುಳುವಿನ ದೈಹಿಕ ಗಾತ್ರ ಹೆಚ್ಚುತ್ತಾ ಹೋಗುತ್ತದೆ. ಹುಳುವಿಗೆ ಯಾವುದೇ ರೀತಿಯ ಸೋಂಕು ಉಂಟಾಗದಂತೆ ತಿಳಿ ಸುಣ್ಣದ ಪುಡಿಯನ್ನು, ನಾಲ್ಕನೇ ಜ್ವರದ ನಂತರ, ಹಂತಹಂತವಾಗಿ ಅವಶ್ಯಕವಾಗಿರುವ ರಾಸಾಯನಿಕವನ್ನು ತಿಳಿ ಹಿಟ್ಟಿನಂತೆ ಸಿಂಪಡಿಸಿ, ಹುಳುಗಳಿಗೆ ಉಂಟಾಗುವ ಸೋಂಕನ್ನು ನಿವಾರಿಸುತ್ತಾರೆ.  ಸೊಪ್ಪನ್ನು ತಿಂದು ಮೇಲೆ ಬರಲಾಗದ ಹುಳುಗಳನ್ನು ಸೋಂಕಿಗೆ ಒಳಗಾಗಿರುವ ಹುಳುಗಳೆಂದು ಗುರುತಿಸಲ್ಪಡುತ್ತದೆ. ನಾವು ಹೋದ ಸಮಯಕ್ಕೆ, ಹುಳುವಿನ ಮೇಲೆ ಆಗಷ್ಟೇ ಹಾಸಿದ್ದ ಸೊಪ್ಪುಗಳ ಹೊದಿಕೆಯಿತ್ತು. ನಾವು ಸುತ್ತುವರೆದು ಮಾತನಾಡಿ ಮತ್ತೆ ವಾಪಸು ಬರುವಷ್ಟರಲ್ಲಿ, ಆ ಒಂದು ಸೊಪ್ಪಿನ ಹೊದಿಕೆ ಸಂಪೂರ್ಣವಾಗಿ ಮುಕ್ತಾಯವಾಗಿತ್ತು, ಅಷ್ಟು ಭರದಲ್ಲಿ, ವೇಗವಾಗಿ ಹೊಟ್ಟೆ ತುಂಬಿಸಿಕೊಳ್ಳುತ್ತವೆ ಆ ಹುಳುಗಳು.





ಹೀಗೆ ಸ್ವಲ್ಪ ಸಮಯ, ಆಹಾರವನ್ನು ಸೇವಿಸಿ ದೈಹಿಕವಾಗಿ ಪ್ರೌಢಿಮೆ ಪಡೆದ ಹುಳುಗಳು (pupa stage) ನಂತರದಲ್ಲಿ ಕ್ರಮೇಣ ಆಹಾರವನ್ನು ನಿಲ್ಲಿಸಿ, ಕಕೂನ್ ಅಥವಾ ತನ್ನ ಸುತ್ತ ರೇಶಿಮೆ ತತ್ತಿಯನ್ನು ಹೆಣೆಯಲು ಪ್ರಾರಂಭಿಸುತ್ತದೆ ಎಂದು ಕೇಳಿ ತಿಳಿದೆವು. ಆ ಸಮಯಕ್ಕೆ ತತ್ತಿಯನ್ನು ಹೆಣೆಯಲು ಸಹಾಯಕವಾಗುವಂತೆ, ರೆಕ್ ಗಳನ್ನೂ ಆಧಾರವಾಗಿ ಇಡುತ್ತೇವೆ, ರೇಷ್ಮೆ ತತ್ತಿ ಪೂರ್ಣ ಗೊಂಡ ನಂತರ, ಅದನ್ನು ರಾಮನಗರಕ್ಕೆ ರಫ್ತು ಮಾಡುತ್ತೇವೆ, ವರ್ಷಕ್ಕೆ ೪-೫ ಬಾರಿ ಬೆಳೆಯನ್ನು ಪಡೆಯಬಹುದು ಎಂಬುದಾಗಿ ನಮಗೆ ತಿಳಿಸಿದರು




ಬಿರು ಬೇಸಿಗೆಯಲ್ಲಿ ರೇಷ್ಮೆ ಹುಳುವಿಗೆ ಬೇಕಾಗುವ ತಂಪಿನ ವಾತಾವರಣ ಕಾಯ್ದುಕೊಳ್ಳುವುದೂ ಕೂಡ ಅಷ್ಟೇ ಅವಶ್ಯಕ. ರೇಷ್ಮೆ ಹುಳುವಿನ ಮನೆಯನ್ನ, ತಂಪಾಗಿರಿಸಲು, ಮೇಲ್ಚಾವಣಿಗೆ, ಅಡಿಕೆ ಸೋಂಗೆಯ ಹೊದಿಕೆಯ ಮೇಲೆ, ದಿನನಿತ್ಯ ನೀರು ಸಿಂಪಡಿಸಿ, ತೇವಾಂಶವನ್ನು ಕಾಯ್ದಿರಿಸಿಕೊಳ್ಳುವ ಪ್ರಯತ್ನವನ್ನು ಪ್ರತ್ಯಕ್ಷವಾಗಿ ಗಮನಿಸಿದೆವು.



ರೇಷ್ಮೆ ಹುಳುವಿನ ಸಾಕಾಣಿಕೆಯ ಜೊತೆಗೆ, ಅದರ ಆಹಾರವಾಗಿ ಬೆಳೆಸುವ , ಹಿಪ್ಪು ನೇರಳೆ ಗಿಡವನ್ನು ಬೆಳೆಸುವಲ್ಲಿಯೂ ಕೂಡ ಅಷ್ಟೇ ಶ್ರಮವಿದೆ ಎಂದು ತಿಳಿಯಲ್ಪಟ್ಟೆವು. ಹದವಾದ ಮಣ್ಣು, ನೀರು, ಗೊಬ್ಬರ, ರಾಸಾಯನಿಕಗಳು, ಸ್ಲರಿ, ಇತ್ಯಾದಿ ವಿಷಯಗಳ ಕುರಿತು ನಾಗೇಶಣ್ಣ ನಮಗೆ ಉಪಯುಕ್ತ ಮಾಹಿತಿಗಳನ್ನು ನೀಡಿದರು.





ಸೊಪ್ಪನ್ನು ತಿನ್ನಲು ನೀಡಿ, ಹುಳುಗಳು ಸೊಪ್ಪನ್ನು ತಿನ್ನುವ ಪ್ರಕ್ರಿಯೆಯನ್ನು ನಮ್ಮ ಮೂರು ಮಕ್ಕಳು ಬಹಳ  ಕೌತುಕದಿಂದ ನೋಡಿ ಆಶ್ಚರ್ಯಪಟ್ಟರು, ಸಂತೋಷಪಟ್ಟರು. ನನ್ನ ಮಗಳಿಗೆ ಅವಳ ಪ್ಲೇ ಹೋಂ ನಲ್ಲಿ ಹೇಳಿಕೊಟ್ಟ, ಕ್ಯಾಟರ್ಪಿಲ್ಲರ್ ಸ್ಟೋರಿ - worm ಎಷ್ಟು ತಿಂದರೂ , but still hungry..ಯಾಗಿರುತ್ತಿದ್ದುದು, ನಂತರದಲ್ಲಿ cocoon ನ್ನು ಮಾಡಿ, ಅದರಲ್ಲಿ ೩ ದಿನವಿದ್ದು, ಆಮೇಲೆ caterpillar ಆಗಿ ಹೊರಗೆ ಹಾರಿ ಹೋಗುವ ಕಥೆಯ ನೈಜತೆಯ ಹಂತವನ್ನು ನೋಡುವಾಗ, ಅವಳಿಗೆ ಎಲ್ಲಿಲ್ಲದ ಸಂತೋಷವಾಯಿತು. ರೇಷ್ಮೆ ಉಡುಪುಗಳ ಉತ್ಪಾದನೆಯ ನಂತರದ ಹಂತಗಳು, ರೇಷ್ಮೆ ಹುಳುವಿನ ಅಂತ್ಯ ಇವೆಲ್ಲವೂ ಕಠಿಣ ಸತ್ಯವಾಗಿದ್ದರೂ, ಬಾಲ್ಯದ ವಯಸ್ಸಿನಲ್ಲಿರುವ ನಮ್ಮ ಮಕ್ಕಳಿಗೆ ಹೊಸತನ್ನು ತಿಳಿಯಲು, ತೋರಿಸಲು ನಮಗಿವಿಷ್ಟು ಸಹಾಯಕವಾಯಿತು.