'ಸಾಗರ' ವೆಂಬ ಮೋಹ
ಎಂದಿನಂತೆ ಇಂದಿನ ದಿನಚರಿ ಪ್ರಾರಂಭವಾಗಿದೆ. ಮುಂಜಾವಿನ 5 ಗಂಟೆಯ ಚುಮು ಚುಮು ಚಳಿ, ಬೆಳಕಾಗುತ್ತಿದ್ದರೂ ಕಾಣದ ಸೂರ್ಯ, ಮಳೆಗಾಲದ ಮೋಡ. ನಮ್ಮ ಊರ ಕಡೆಯಂತಲ್ಲ ಬೆಂಗಳೂರಿನ ಮಳೆ. ಇಲ್ಲಿ ಹೇಗೆಂದರೆ "ದಿಸ್ ಇಸ್ ರೈನಿ ಸೀಸನ್" ಎಂಬ ಹೇಳಿಕೆಗೆ ಆಗೊಮ್ಮೆ ಈಗೊಮ್ಮೆ ಸುರಿವ ಮಳೆ ಮತ್ತದರ ನೆನಪಿಗೆ ಎರಡು ದಿನ ನಿಲ್ಲುವ ನೀರು. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಸಿಗದಿರುವ ವಸ್ತುವಿಲ್ಲ. ಈ ಊರು ಬದುಕನ್ನು ಕಟ್ಟುಕೊಟ್ಟಿದೆ. ಭವಿಷ್ಯ ರೂಪಿಸಿಕೊಡುವ ಕೆಲಸ, ಪುಟ್ಟ ಮನೆ ಮತ್ತು ಸಂಸಾರ, ಮಗಳೆಂಬ ಶಕ್ತಿ, ಓಡಾಡಲು, ತಿನ್ನಲು, ಹಾರಾಡಲು, ವೀಕೆಂಡ್ ಮಸ್ತಿ, ನೆಂಟರಿಷ್ಟರು, ಸ್ನೇಹಿತರು ಎಲ್ಲವೂ, ಎಲ್ಲರೂ ಇದ್ದಾರೆ ನಿಜ. ಇಷ್ಟಾಗ್ಯೂ ಯಾರಾದರೂ ಮಾತಿಗೆ ಸಿಕ್ಕಿ, ಯಾವೂರು ನಿಮ್ಮದು ಎಂದು ಕೇಳಿದಾಗ ಮಾತ್ರ, "ನಮ್ಮೂರು ಸಾಗರ" ಎಂದು ಲೀಲಾಜಾಲವಾಗಿ ಉತ್ತರಿಸಿಯಾಗಿರುತ್ತದೆ ಮನ. ಅಂಥದ್ದೇನಿದೆಯಪ್ಪಾ ಸಾಗರದಲ್ಲಿ ಇಲ್ಲಿ ಬೆಂಗಳೂರಿನಲ್ಲಿಲ್ಲದಿರುವುದು? ಎಂದು ನೀವು ಪ್ರಶ್ನಿಸಬಹುದು. ಖಂಡಿತವಾಗಿಯೂ ಪ್ರತಿಯೊಂದು ಪ್ರದೇಶವೂ ವಿಶಿಷ್ಟ ಮತ್ತು ವಿಭಿನ್ನ. ಆದರೂ ತುಲನೆ ಕೇವಲ ಭೌಗೋಳಿಕವಾಗಿ ಅಥವಾ ಭೌತಿಕವಾಗಿ ಅಲ್ಲ. ಈ ಹುಟ್ಟೂರು ಎನ್ನುವ ಮಾಯೆ ಮಾನಸಿಕವಾಗಿ ಮೂಡಿ ಬರುವಂತದ್ದು. ಮಳೆ ಬರುತ್ತಿಲ್ಲವೇ ಬೆಂಗಳೂರಿನಲ್ಲಿ? ಇದೆ. ಆದರೂ, ಅಪ್ಪಟ ಮಲೆನಾಡಿನ ಹಗಲು-ರಾತ್ರಿ ಧೋ ಎಂದು ಎಡೆಬಿಡದೆ ಸುರಿವ ಮಳೆಯ ಸದ್ದಿಗೆ ಮನ ಮುದಗೊಳ್ಳುವುದು ಸ...