ಭಾನುವಾರ, ಮಾರ್ಚ್ 19, 2023

ಕಾಲಿಂಪಾಂಗ್ ಸೈನ್ಸ್ ಸೆಂಟರ್

 ದಾರ್ಜೀಲಿಂಗ್ ನ ಕಾಲಿಂಪಾಂಗ್ ಅದರ ಮನೋಹರ ಪ್ರಾಕೃತಿಕ ಸೌಂದರ್ಯಕ್ಕೆ, ಬೌದ್ಧ ಧಾರ್ಮಿಕ ಕೇಂದ್ರಗಳಿಗೆ, ವಿಶಾಲವಾದ ಹಿಮಾಲಯ ಪರ್ವತಗಳ ನಡುವೆ ಉದಯಿಸುವ, ಮುಳುಗುವ ಸೂರ್ಯನ ಸೌಂದರ್ಯಕ್ಕೆ ಪ್ರಸಿದ್ಧಿಯಾಗಿದೆ. ಇಲ್ಲಿನ ಕ್ಯಾಕ್ಟಸ್ಆರ್ಕಿಡ್ ಹೂಗಳಷ್ಟೇ ಪ್ರಸಿದ್ಧಿ ಆಗಸದಲ್ಲಿ ಹಕ್ಕಿಯಂತೆ ಹಾರುವ ಪ್ಯಾರಾಗ್ಲೈಡಿಂಗ್ ಸಾಹಸ ಕ್ರೀಡೆ. ಇವೆಲ್ಲದರ ಜೊತೆಗೆ ಇನ್ನೊಂದು ಆಕರ್ಷಕ ಪ್ರವಾಸೀ ಸ್ಥಳ, ಕಾಲಿಂಪಾಂಗ್ ಸೈನ್ಸ್ ಸೆಂಟರ್. ಈ ವಿಜ್ಞಾನ ಕೇಂದ್ರ ಸ್ಥಾಪನೆಗೊಂಡಿದ್ದು, ಸಮಾಜದಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವ ಉದ್ದೇಶದಿಂದ, ಶಿಕ್ಷಣಕ್ಕೆ ಸಂಬಂಧಿಸಿದಂತೆ, ಶೈಕ್ಷಣಿಕ ಸಂಸ್ಥೆಗಳಿಗಾಗಿ, ವಿದ್ಯಾರ್ಥಿಗಳಿಗಾಗಿ ೨೦೦೮ ರಲ್ಲಿ. ಭಾರತ ಸರ್ಕಾರ ಸಂಸ್ಕೃತಿ ಸಚಿವಾಲಯದ ವತಿಯಿಂದ ನಿರ್ಮಿತ, ಏಳು ಎಕರೆಯಷ್ಟು ವಿಶಾಲ ಜಾಗದಲ್ಲಿರುವ ಈ ವಿಜ್ಞಾನ ಕೇಂದ್ರವನ್ನು, ಮಕ್ಕಳು ದೊಡ್ಡವರು ಎನ್ನದೇ ಎಲ್ಲರೂ ಒಮ್ಮೆ ನೋಡಿಬರಬೇಕಾದಂತಹ ಸ್ಥಳವಿದು. 










ಪ್ರಾರಂಭದಲ್ಲಿಯೇ ವಿಜ್ಞಾನ ಕೇಂದ್ರದ ಹೊರಾಂಗಣದಲ್ಲಿ ದೊಡ್ಡ ಡೈನೊಸಾರ್ಸ್ಗಳು ನಮ್ಮನ್ನು ಸ್ವಾಗತಿಸುತ್ತವೆ. ಪ್ರಸಿದ್ಧ ಗಣಿತ ಮತ್ತು ವಿಜ್ಞಾನ ಶಾಸ್ತ್ರಜ್ಞರ ಪುತ್ತಳಿಗಳು ನಮ್ಮ ದೇಶಕ್ಕೆ ಸಿಕ್ಕ ಅಮೂಲ್ಯ ಕೊಡುಗೆಗಳ ನೆನಪಿಸುತ್ತವೆ. ಹೊರಾಂಗಣ ದೊಡ್ಡ ವಿಸ್ತೀರ್ಣದ ಜಾಗದಲ್ಲಿ ಅಲ್ಲಲ್ಲಿ ವಿವಿಧ ಜಾತಿಯ ಡೈನೊಸಾರ್ಸ್ಗಳ ದೊಡ್ಡ ದೊಡ್ಡ ಪುತ್ಥಳಿಗಳನ್ನು ನಿರ್ಮಿಸಿದ್ದಾರೆ. ಭೂಮಿಯ ಐತಿಹಾಸಿಕತೆಗೆ ಇದೊಂದು ಕಥಾಸರಣಿಯಂತೆ ಭಾಸವಾಗುತ್ತದೆ. ಪ್ರಯೋಗಗಳ ಮೂಲಕ ವಿಜ್ಞಾನ ನಮಗೆ ಸುಲಭವಾಗಿ ಅರ್ಥ ಮಾಡಿಸುವ ಉದ್ದೇಶದಿಂದ ಸಾಕಷ್ಟು ಬಗೆಯ ಆಟದ ರೂಪದ ವಿಜ್ಞಾನದ ಪ್ರಾತ್ಯಕ್ಷಿಕೆಗಳನ್ನು ಕೇಂದ್ರದ ಒಳಗೂ ಹೊರಗೂ ನಿರ್ಮಿಸಲಾಗಿದೆ. ಹೊರಗಡೆ ಶಬ್ದದ ವೇಗ ಮತ್ತು ಕೊಳವೆಯ ಉದ್ದಕ್ಕೆ ಅನುಪಾತವಾಗಿ ಪ್ರತಿಧ್ವನಿ ಹೊರಡಿಸುವಂತಹ - ಏಕೋ ಟ್ಯೂಬ್, ದೂರ ಮತ್ತು ಆಕಾರದ ಅನುಪಾತ ತಿಳಿಸುವಂತಹ ಆಟ. ಬೇರೆ ಬೇರೆ ಅಳತೆಯ ಕೊಳವೆಗಳಿಂದ ಹೊರಹೊಮ್ಮಬಹುದಾದ ಸಂಗೀತ, ಉದ್ದ ಮತ್ತು ಭಾರಗಳ ಅನುಪಾತವನ್ನು ಅರಿತುಕೊಳ್ಳಬಹುದಾದ ತೂಕದ ಗುಂಡಿನ ಮಾಡೆಲ್, ಜೀಕುವ ಜೋಕಾಲಿ ಆಟದಲ್ಲೂ ಸೈನ್ಸ್ ಹೇಗೆ ವರ್ಕ್ ಆಗುತ್ತದೆ ಎಂಬುದು ಸ್ವತಃ ಅನುಭವಕ್ಕೆ ಪಡೆಯುವಂತಹ ರೀತಿಯಲ್ಲಿ ಪ್ರಾತ್ಯಕ್ಷಿಕೆಗೆ ಅವಕಾಶ ಇದೆ. ಅದೆಷ್ಟೋ ಪರಿಕಲ್ಪನೆ ನಮ್ಮ ನಿತ್ಯ ಜೀವನದಲ್ಲಿ ಕಾಣಸಿಗುತ್ತಿದ್ದರೂ, ನಮಗೆ ಆ ವಿಜ್ಞಾನದ ಅರಿವು ಮೂಡಿರುವುದಿಲ್ಲ. ಆವಿಷ್ಕಾರಗಳು ನಮ್ಮ ಜೀವನದ ಪ್ರತಿಯೊಂದು ಅಂಶವನ್ನು ಕ್ರಾಂತಿಗೊಳಿಸಿದೆ ಎಂಬುದು ಇಲ್ಲಿನ ಪ್ರಾತ್ಯಕ್ಷಿಕೆ ಕಂಡಾಗ ನಮ್ಮ ತಿಳುವಳಿಕೆಗೆ ಬರುತ್ತದೆ. ಪ್ರಾಯೋಗಿಕ ವೀಕ್ಷಣೆಯ ಮಾಡೆಲ್ ಗಳನ್ನು ಇಟ್ಟಿರುವುದು, ಜನರಿಗೆ ವೈಜ್ಞಾನಿಕ ತಿಳುವಳಿಕೆ ಸಿಗುವಲ್ಲಿ ಸಹಾಯಕವಾಗುವಂತಿದೆ. 



ಕೇಂದ್ರದ ಒಳಗೆ, ಮ್ಯಾಜಿಕ್ ವಾಟರ್ ಟ್ಯಾಪ್,  ಒಳ ಹೊಕ್ಕರೆ ಕಳೆದೇ  ಹೋದೆವೆಂದು ಭಾಸವಾಗುವ ಕನ್ನಡಿಯ ಕೋಣೆಗಳು, ಆಯಾಸ್ಕಾಂತೀಯ ಗುಣಗಳು ಮತ್ತು ಉಷ್ಣತೆಯ ಕುರಿತಾದ ಪ್ರಾತ್ಯಕ್ಷಿಕೆಗಳು, ವಿವಿಧ ಬಗೆಯ ದ್ರವ್ಯಗಳ ಸಾಂದ್ರತೆ, ವಿದ್ಯುತ್ ಕೋಶಗಳು, ಪೈತಾಗೋರಸ್ ಥಿಯೆರಂ. ಫ್ಯಾರ್ಡ್ ನಿಯಮಗಳು ಇನ್ನೂ ಅನೇಕ ಬಗೆಯ ತಾಂತ್ರಿಕ ವಸ್ತುಗಳ ಸಂಗ್ರಹಾಲಯ ವಿದ್ಯಾರ್ಥಿಗಳ ಕುತೂಹಲ ತಣಿಸುವಂತಹದಾಗಿದೆ. ಇಂತಹದೊಂದು ಮಾಹಿತಿ ಸ್ಥಳ ನಮ್ಮ ಪ್ರವಾಸದ ಭಾಗವಾದದ್ದು, ನಮ್ಮ ದಾರ್ಜೀಲಿಂಗ್ ಟ್ರಿಪ್ ನ ಖುಷಿ.  

ಸೋಮವಾರ, ಮಾರ್ಚ್ 6, 2023

ಲೇ-ಪಾಕ್ಷಿ!

 ದಕ್ಷಿಣ ಭಾರತದಲ್ಲಿ ಐತಿಹಾಸಿಕ ಸ್ಥಳಗಳಲ್ಲಿ ಒಂದು ಪ್ರಮುಖವಾದ ಸ್ಥಳ ಎನಿಸಿಕೊಂಡ, ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ದೇವಾಲಯ, ಪಕ್ಕಾ ಆಗಿನ ಸಾಂಪ್ರದಾಯಿಕ ವಾಸ್ತುಶೈಲಿಯಲ್ಲಿ ೧೬ ನೇ ಶತಮಾನದಲ್ಲಿ ನಿರ್ಮಾಣಗೊಂಡ ದೇವಾಲಯ ಲೇಪಾಕ್ಷಿ ದೇವಾಲಯ. ಮುಖ್ಯವಾಗಿ ವೀರಭದ್ರ ಸ್ವಾಮಿ, ಶಿವ ಮತ್ತು ವಿಷ್ಣುವಿನ ಪೂಜೆಗೆ ಬದ್ಧವಾದ ದೇವಾಲಯ. ಬೆಂಗಳೂರಿನಿಂದ ೧೨೦ ಕಿಮೀ ದೂರದಲ್ಲಿರುವ ಈ ದೇವಾಲಯ, ಒಂದು ದಿನದ ಪ್ರವಾಸಕ್ಕೆ  ಸೂಕ್ತವಾದ ತಾಣವಾಗಿದೆ. ನೋಡ ನೋಡುತ್ತಿದ್ದಂತೆಯೇ ೨.೫ ತಾಸಿನಲ್ಲಿ ಕರ್ನಾಟಕ ದಾಟಿ ಪಕ್ಕದ ರಾಜ್ಯಕ್ಕೆ ದಾಟುವ ಖುಷಿ ೯.೫ ವರ್ಷದ ಮಗಳಿಗೆ. 


ಲೇಪಾಕ್ಷಿ ಊರು ತಲುಪುತ್ತಿದ್ದಂತೆಯೇ ದೊಡ್ಡದೊಂದು ಬಂಡೆ ಕಲ್ಲಿನ ಮೇಲೆ ದೊಡ್ಡದಾದ ಜಟಾಯುವಿನ ಮೂರ್ತಿಯೊಂದನ್ನು ಪ್ರತಿಷ್ಠಾಪಿಸಲಾಗಿದೆ. (ಆ ಬಂಡೆಕಲ್ಲಿನ ಸ್ಥಳಕ್ಕೆ ಹೋಗಲು ದಾರಿಯಿದೆ ಮತ್ತು ಮೇಲಿನವರೆಗೆ ಹೋಗಲು ಮೆಟ್ಟಿಲುಗಳಿವೆ) ಈ ಊರಿನ ಹೆಸರಿಗೂ ಆ ಮೂರ್ತಿ ಕಾಣುವುದಕ್ಕೂ, ಒಂದು ರೀತಿಯ ಸಂಭ್ರಮ ಅಲ್ಲಿಂದಲೇ ಪ್ರಾರಂಭವಾಗುತ್ತದೆ.  ಪುರಾಣ ಕಥೆಗಳ ಪ್ರಕಾರ, ಸೀತೆಯನ್ನು ರಾವಣನು ಅಪಹರಿಸಿಕೊಂಡು ಹೋಗುವ ಸಮಯದಲ್ಲಿ ಜಟಾಯು ಪಕ್ಷಿಯು ತನ್ನ ಕೈಲಾದಷ್ಟು ರಕ್ಷಿಸುವ ಪ್ರಯತ್ನ ಮಾಡುತ್ತದೆ. ಆದರೆ ಕೊನೆಯಲ್ಲಿ, ರಾವಣನ ಪರಾಕ್ರಮದ ಮುಂದೆ ಜಟಾಯುವು ರೆಕ್ಕೆ ಕತ್ತರಿಸಿದ ಅಸಹಾಯಕ ಪಕ್ಷಿಯಾಗಿ ಕೆಳಗೆ ಬೀಳುತ್ತದೆ. ಆನಂತರ ರಾಮ ಜಟಾಯುವನ್ನು ಕಂಡಾಗ, ಲೇ…ಪಕ್ಷಿ (ಎದ್ದೇಳು ಪಕ್ಷಿಯೇ) ಎಂಬ ಉಚ್ಚಾರಿಸಿ ಜಟಾಯುವಿಗೆ ಮುಕ್ತಿ ನೀಡಿದ ಸ್ಥಳವೇ ಈ ಲೇಪಾಕ್ಷಿ ಎನ್ನಲಾಗುತ್ತದೆ. 

ಏಕಶಿಲೆಯಲ್ಲಿ ಮಾಡಿದ ೪.೫ ಮೀ ಅಷ್ಟು ಎತ್ತರದ, ೮.೫ ಮೀ ಅಷ್ಟು ಉದ್ದದ  ನಂದಿ ವಿಗ್ರಹ ಲೇಪಾಕ್ಷಿಯ ಪ್ರಾರಂಭದಲ್ಲೇ ನಮ್ಮನ್ನು ಸ್ವಾಗತಿಸುತ್ತದೆ. ಅಲ್ಲಿಂದ ಒಂದು ೨೦೦ಮೀ ದೂರಕ್ಕೆ ಲೇಪಾಕ್ಷಿ ದೇವಾಲಯ ಸಿಗುತ್ತದೆ. ಹಿಂದೆ ಏಳು ಪ್ರಾಕಾರಗಳಷ್ಟು ವಿಸ್ತಾರವಾಗಿದ್ದ ದೇವಾಲಯ ಈಗ ಮೂರು ಪ್ರಾಕಾರಗಳಷ್ಟು ಮಾತ್ರ ಉಳಿದುಕೊಂಡಿದೆ ಎಂಬ ಮಾಹಿತಿಯಿದೆ. ಇಲ್ಲಿನ ದೇವಾಲಯದ ಮುಖ್ಯ ವಿಶೇಷತೆ ಎಂದರೆ,  ೭೦ ಕಂಬಗಳ ಮೇಲೆ ನಿಂತಿರುವ ಇಲ್ಲಿನ ಮುಖ್ಯ ದೇವಾಲಯದ ಒಂದು ವಿಶಿಷ್ಟ ಕಂಬ,  ನೆಲಕ್ಕೆ ಆಧಾರಿತವಾಗದೆ 'ತೇಲುವ ಕಂಬ'ವಾಗಿದೆ ಮತ್ತು ಈ ಕಂಬ, ಆ ಇಡೀ ದೇವಾಲಯದ ಆಧಾರಸ್ಥಮಭ ಎಂದು ಅಲ್ಲಿನವರು ತಿಳಿಸುತ್ತಾರೆ. ಆದರೆ ದೇವಾಲಯದ ಪ್ರತಿಯೊಂದು ಕಂಬದಲ್ಲೂ ಒಂದೊಂದು ಅಮೋಘ ಶಿಲ್ಪಕಲೆಗಳನ್ನು ಒಳಗೊಂಡಿದೆ. ನಿಧಾನಕ್ಕೆ ನೋಡುತ್ತಾ ಹೋದರೆ, ಸುಮಾರು ಮೂರು ಗಂಟೆಗಳಷ್ಟು ಸಮಯ ಕಲ್ಲಿನ ಕೆತ್ತನೆಗಳನ್ನು ನೋಡಲೇ ಹಿಡಿಯುತ್ತದೆ. ಮಗಳು ಕಲ್ಲಿನಲ್ಲಿ ಕೆತ್ತಿದ್ದ ಪ್ರಾಣಿ ಪಕ್ಷಿಗಳನ್ನು ನೋಡಿ ಖುಷಿ ಪಟ್ಟಳು. ನೃತ್ಯಗಾರರ ಭಂಗಿಗಳನ್ನು ಪ್ರಯತ್ನಿಸುವ ಆಟಗಳನ್ನು ಆಡುತ್ತಿದ್ದಳು. ಶಿವನ ಅವತಾರಗಳ ಶಿಲ್ಪಕಲೆಗಳು, ರಾಮಾಯಣ ಮಾಹಾಭಾರತದಂತಹ ಪುರಾಣಗಳ ಕಥೆಗಳನ್ನು ಒಳಗೊಂಡಿರುವ ಸನ್ನಿವೇಶಗಳ ಕೆತ್ತನೆಗಳು ಕಣ್ತುಂಬಿಕೊಳ್ಳಲು ತುಂಬಾ ಸಂತೋಷವಾಗುತ್ತದೆ. ಗೋಡೆಗಳು ಮತ್ತು ದೇವಾಲಯದ ಛಾವಣಿಯ ಮೇಲೆ ಅಳಿದುಳಿದ ಗೋಡೆ ವರ್ಣಚಿತ್ರಗಳು (ಮ್ಯೂರಲ್ ಪೇಂಟಿಂಗ್), ಅನೇಕ ಚಿತ್ರಗಳು ಸಾವಿರಾರು ವರ್ಷಗಳ ಪ್ರಾಕೃತಿಕ ಸವೆತದಿಂದ  ಮಾಸಿ ಹೋಗಿದ್ದರೂ ಕೂಡ, ಅದನ್ನು ಸ್ವಚ್ಛಗೊಳಿಸಿ ನೈಸರ್ಗಿಕ ಬಣ್ಣಗಳಿಂದ ಮರುಸ್ಪರ್ಶ ನೀಡುತ್ತಿದ್ದಾರೆ. 


ಒಟ್ಟಾರೆಯಾಗಿ, ಪುರಾತನ ಶಿಲ್ಪಕಲೆ, ನಮ್ಮ ಸಂಸ್ಕೃತಿ, ಪುರಾಣಕಥೆಗಳ ಕುರಿತಾಗಿ ಆಸಕ್ತಿಇರುವವರು ನಿರಾಯಾಸವಾಗಿ ಅರ್ಧ ದಿನ ಇಲ್ಲಿಯೇ ಸಂತೋಷದಿಂದ ಕಳೆಯಬಹುದಾದಂತಹ ಸುಂದರ ಪ್ರವಾಸೀ ತಾಣ ಈ ಲೇಪಾಕ್ಷಿ. 


#travel #architecture #incredibleindia