ಶನಿವಾರ, ಸೆಪ್ಟೆಂಬರ್ 28, 2019

ಪರಿಸರದಿನ_ಆಗಲಿಪ್ರತಿದಿನ

ಒಂದೆರಡು ಅನುಭವಗಳೊಂದಿಗೆ:

ಬಂಧು ಒಬ್ಬರ ಮನೆಗೆ ಹೋಗಿದ್ದೆವು. ಎಲ್ಲರೂ ಕೂತು ಮಾತನಾಡುತ್ತ ಇರುವಾಗ ಅದು ಇದು ಸುದ್ದಿ ಬಂದು, ಒಂದು ಸುಂದರವಾದ ಆಕರ್ಷಣೀಯ ಬಣ್ಣದ ಪ್ಲಾಸ್ಟಿಕ್ ಬೌಲ್ ಒಂದನ್ನು ತೋರಿಸಿ, "ಈ ಬೌಲ್ ಅಂಗಡಿಲಿ ನೋಡಿ ಎಷ್ಟು ಇಷ್ಟ ಆತು ಅಂದ್ರೆ, ಈ ಬೌಲ್ ಗಾಗಿಯೇ ೪ ದೊಡ್ಡ ಪ್ಯಾಕೆಟ್ ಮ್ಯಾಗಿ ತಗಂಡಿದ್ದು ನಾನು, ಅದರಲ್ಲಿ ಫ್ರೀ ಬತ್ತು .." ಎಂದು ಅವರು ಹೆಮ್ಮೆಯಿಂದ ಹೇಳುವಾಗ ಒಮ್ಮೆಲೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದೇ ತಿಳಿಯಲಿಲ್ಲ. ಆದರೆ ಪರಿಸರಕ್ಕೆ ನಮ್ಮ ಕೊಡುಗೆ ಎನ್ನುವುದು - ಕೇವಲ ನಮ್ಮ ಸ್ವಂತ ಪ್ರಯತ್ನ ಒಂದೇ ಅಲ್ಲದೆ, ಅದರ ಕುರಿತಾಗಿ ಒಂದಷ್ಟು ಅರಿವು ನೀಡಬೇಕ್ಕಾದ್ದು ಕೂಡ ಅಷ್ಟೇ ಮುಖ್ಯ. ಸಂದರ್ಭ ನೋಡಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮತ್ತು ನಮ್ಮಲ್ಲೇ ಇರುವಂತಹ ವಸ್ತುಗಳ ಮರುಬಳಕೆಯ ಕುರಿತು ವಿನಂತಿಸಿಯೇ ಬಂದೆ. ಈಗ ಸಂತೋಷದ ವಿಚಾರವೆಂದರೆ, ಅವರು ತರಕಾರಿ ಚೀಲಗಳನ್ನು ಬಟ್ಟೆಯಿಂದಲೇ ಹೊಲೆದು ಪ್ಲಾಸ್ಟಿಕ್ ಕಡಿಮೆ ಮಾಡಿದ್ದರ ಕುರಿತಾಗಿ ಹೇಳಿಕೊಂಡಿದ್ದಾರೆ.

ಉತ್ತರಾಖಂಡ್ ಟ್ರೆಕ್ ಹೋದ ಸಮಯದಲ್ಲಿ, ಚಾರಣದ ಹಾದಿಯ ಮಧ್ಯೆ ಚಾ ಅಂಗಡಿಯಲ್ಲಿ ಒಂದು ಸ್ಟಾಪು ಕೊಟ್ಟುಕೊಂಡೆವು. ಸಾಕಷ್ಟು ಸಿಖ್ಖ ಯಾತ್ರಿಗಳು ಅಲ್ಲಿ ಇದ್ದರು. ಅವರಲ್ಲೊಬ್ಬ 'ಚಿರಯುವಕ' ಅಂಗಡಿಯವನ ಬಳಿ ಬಿಸ್ಕತ್ತಿನ ಪಟ್ಟಣ ಕೊಂಡುಕೊಂಡು ಅಲ್ಲೇ ನಾಲಿಗೆ ಚಾಚಿ ಮುಖ ಮುಖ ನೋಡುತ್ತಿದ್ದ ನಾಯಿಗೆ ಅಷ್ಟೂ ಬಿಸ್ಕತ್ತನ್ನು ತಿನ್ನಿಸಿದ. ಪ್ರಾಣಿ-ಪ್ರೀತಿ, ಕರುಣೆ, ಮನುಷ್ಯತ್ವ ಎಲ್ಲವೂ ಸರಿಯಾಗಿತ್ತು.. ಅದರ ಮರುಕ್ಷಣವೇ ಕುಳಿತ ಕುರ್ಚಿಯಿಂದ ಎದ್ದು ಬಿಸ್ಕತ್ತಿನ ಪ್ಲಾಸ್ಟಿಕ್ ಕವರನ್ನು ಅಲ್ಲಿಯೇ ರಸ್ತೆಗೆ ಒಗೆದು ಹೊರಟೇಬಿಟ್ಟ. 'ಉಂಹೂಂ', ಸಹಿಸಲು ಸಾಧ್ಯವಾಗಲೇ ಇಲ್ಲ. "ಅರ್ರೆ, ವೊ ಪ್ಲಾಸ್ಟಿಕ್ ರ್ಯಾಪರ್ ಉಟಾಕೆ, ಆಪ್ಕೆ ಸಾಮಾನೆ ಜೊ ಡಸ್ಟ್ಬಿನ್ ದಿಖ್ ರಹಾ ಹೈನ ಉಸ್ ಮೆ ಡಾಲ್ ದೀಜ್ಯೇಗ ಪ್ಲೀಸ್.." ಎಂದು ನಯವಾಗಿಯೇ ವಿನಂತಿಸಿದೆ. ಆ ಮನುಷ್ಯ "ಅಪ್ಕೋ ಉಸ್ಸೆ ಕ್ಯಾ? ಕೊಯಿ ಧಿಕ್ಕತ್ ಹೈ..?" ಎಂದು ಗರ್ಜಿಸಿದ.. "ಹಾಂ ಹೈ; ಯೇ ಧರ್ತಿ ಮೇರಾ ಔರ್ ಆಪಕ ದೋನೋಕ ಹೈ, ಔರ್ ಇಸ್ಕ ಖಯಾಲ್ ರಖನ ಹಮ್ ದೋನೋ ಕ ಫರ್ಜ್ ಬಂತಾಹೈ, ತೊ ಪ್ಲೀಸ್..." ಎಂದು ಹೇಳುವಾಗ ನನ್ನ ಧ್ವನಿ ದುಪ್ಪಟ್ಟಾಗಿತ್ತು.. ಅಷ್ಟು ಜನರ ಎದುರು ಅವಮಾನವಾದಂತಾಗಿ, ಆತ ತಕ್ಷಣ ಅಲ್ಲಿಂದ ಬಿಸ್ಕತ್ತಿನ ಕವರನ್ನು ಎತ್ತದೇ ಸಿಟ್ಟಿನ ಮುಖ ಮಾಡಿಕೊಂಡು ಹೊರಡಲು ಅಣಿಯಾದ. ಅಲ್ಲಿಯೇ ಇದ್ದ ಪಂಜಾಬಿ ಹಿರಿಯರೊಬ್ಬರು, ದೊಡ್ಡ ಧ್ವನಿಯಲ್ಲಿ ಪಂಜಾಬಿ ಭಾಷೆಯಲ್ಲಿ ಏನೋ ಒಂದಷ್ಟು ಬೈದದ್ದು ಅಲ್ಪಸ್ವಲ್ಪ ಅರ್ಥವಾಯಿತು. "ಹೇಮಕುಂಡ್ ಯಾತ್ರೆ ಮುಗಿಸಿ ಬರುವವ, ಈ ರೀತಿ ಕೆಲಸ ಮಾಡಿದರೆ ಗುರು ಸಾಹೇಬ ಮೆಚ್ಚಿಯಾನೇ.. " ಎಂಬ ಅರ್ಥದಲ್ಲಿ ಹೇಳಿದರೆಂದು ತಿಳಿಯಿತು. ಒಲ್ಲದ ಮನಸ್ಸಿನಿಂದ ವಾಪಸು ಬಂದು ಕವರನ್ನು ಎತ್ತಿ ಡಸ್ಟ್ ಬಿನ್ ಗೆ ಹಾಕಿ ಆತ ಚಾರಣದ ಸುಸ್ತಿಲ್ಲದೆಯೆ ದುಸು ದುಸು ಎನ್ನುತ್ತಾ ಕಣ್ಮರೆಯಾದ.. 

ಅಮೆಜಾನ್ ನಿಂದ ಉಪಯುಕ್ತ ವಸ್ತುವೊಂದರ ತರಿಸಿದ್ದೆ. ಸೂಕ್ಷ್ಮ ವಸ್ತುವಲ್ಲದ ಕಾರಣದಿಂದ, ಅಮೆಜಾನ್ ಅವರು, ಕೇವಲ ಒಂದು ರೊತ್ತಿನ ತೆಳು ರ್ಯಾಪಿಂಗ್ ಅಲ್ಲಿ ಕಳುಹಿಸಿ ಕೊಟ್ಟಿದ್ದರು. ಜೊತೆಗೆ "ಪ್ಲಾಸ್ಟಿಕ್ ರೆಡ್ಯೂಸ್" ಮಾಡುವುದರೆಡೆಗೆ ಎಂಬ ಮೆಸ್ಸೇಜ್ ಇತ್ತು. ಸಹಜವಾಗಿಯೇ ಇದು ಖುಷಿಯೆನಿಸಿ ವಾಟ್ಸಪ್ಪ್ ಸ್ಟೇಟಸ್ಸಿನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದೆ. ಸ್ವಲ್ಪ ದಿನಗಳ ನಂತರ ಗೆಳತಿಯೊಬ್ಬಳು ಮೆಸ್ಸೇಜ್ ಮಾಡಿ, "ನನಗೆ ಬಂದ ಅಮೆಜಾನ್ ಕೊರಿಯರ್ ನಲ್ಲಿ ಪ್ಲಾಸ್ಟಿಕ್ ಸುತ್ತಿಯೇ ಕಳುಹಿಸಿದ್ದಾರೆ ನೋಡು" ಎಂದು ಹೇಳಿದ್ದಳು. ಸೂಕ್ಷ್ಮ ವಸ್ತುಗಳು ಮತ್ತು ಬಟ್ಟೆಯ ವಸ್ತುಗಳಾದ್ದರಿಂದ ಪ್ಲಾಸ್ಟಿಕ್ ಕವರ್ ಹಾಕಿ ಕಳುಹಿಸುವುದು ಅವರಿಗೆ ಅನಿವಾರ್ಯ ಇರಬಹುದು, ನಮ್ಮದು ಕೇವಲ ರೆಡ್ಯೂಸ್ ಮಾತ್ರ ಅಲ್ಲ, ರಿಸೈಕಲಿಂಗ್ ಕಾನ್ಸೆಪ್ಟ್ ಕೂಡ ಅಷ್ಟೇ ಮುಖ್ಯ, ಹೀಗೆ ಹೀಗೆ ಉತ್ತಮವಾಗಿ ನೀನು ಇವಿಷ್ಟನ್ನು ಮರು ಬಳಕೆ ಮಾಡಬಹುದು ಎಂದು ನನಗೆ ತಿಳಿದಿದ್ದ ಟಿಪ್ಸ್ ನೀಡಿದ್ದೆ. ಆದರೂ ಮತ್ತೆ ಯೋಚಿಸಿ ಇಂಟರ್ನೆಟ್ ಅಲ್ಲಿ ಹುಡುಕಿ ಒಂದಷ್ಟು ಮಾಹಿತಿ ಒಟ್ಟು ಮಾಡಿದೆ. ಮತ್ತೆ ಮುಂದಿನ ಸರ್ತಿ ಅದೇ  ಸೈಟಿನಿಂದ ಇನ್ನೇನನ್ನೋ ಆರ್ಡರ್ ಮಾಡುವಾಗ, ಕಸ್ಟಮರ್ ಸರ್ವಿಸ್ ಗೆ ಆರ್ಡರ್ ನಂಬರ್ ಜೊತೆ "ನನಗೆ ಅತ್ಯಂತ ಮಿನಿಮಲ್ ಪ್ಲಾಸ್ಟಿಕ್ ಫ್ರೀ ಪ್ಯಾಕಿಂಗ್ ಬೇಕು" ಎಂದು ಬರೆದಿದ್ದೆ. ಕೇವಲ ರೊಟ್ಟಿನ ಬಾಕ್ಸಿನಲ್ಲಿ ನನಗೆ ನನ್ನ ವಸ್ತು ಬಂದು ತಲುಪಿತು :)

ಅಕ್ಕಾ ತೇಜಸ್ವಿನಿ ಹೆಗಡೆ ತಮ್ಮ ಪೋಸ್ಟಿನಲ್ಲಿ ಹೇಳಿದಂತೆ, ನಮ್ಮ ಪರಿಸರದ ಮೇಲಾಗುತ್ತಿರುವ ಅನಾಹುತಗಳ ಬಗ್ಗೆ ಮಾತನಾಡುವವರ ಸ್ವಾರ್ಥ-ನಿಸ್ವಾರ್ಥದ ಬಗ್ಗೆ ಬೆಟ್ಟು ಮಾಡಿ ತೋರಿಸುವುದು ಅತ್ಯಂತ ಸುಲಭದ ಕೆಲಸ ಮತ್ತು ನಮ್ಮಗಳ ರೂಢಿ  ಕೂಡ. ಸಮುದ್ರದ ಜೀವಿಗಳು ಉಸಿರುಗಟ್ಟಿ ಸಾಯುತ್ತಿದ್ದರೆ, ಅಲ್ಲೆಲ್ಲೋ ಹಿಮನದಿಗಳು ಕರಗಿ ನೀರಾಗುತ್ತಿದ್ದರೆ, ಪ್ರವಾಹ ಬಂದು ಊರಿಗೆ ಊರೇ ಕೊಚ್ಚಿ ಹೋದರೆ, ಅವೆಲ್ಲ ನೈಸರ್ಗಿಕ ವಿಕೋಪಗಳು, ಅದಕ್ಕೆ ನಾವೇನು ಮಾಡಲು ಸಾಧ್ಯ? ಯಾವುದೋ ಊರಿನ ನೀರಿನ ಮೂಲಕ್ಕೆ ಸೇರಿಸುತ್ತಿರುವ ಯಾವುದೋ ದೊಡ್ಡ ಫ್ಯಾಕ್ಟರಿಯ ರಾಸಾಯನಿಕ ಮಲಿನ, ಅಮೆಜಾನಿನ ಕಾಡುಗಳು ಹೊತ್ತಿ ಉರಿದಾಗ,  "ಛೆ ಹೀಗಾಗಬಾರದಿತ್ತು" ಎಂದು ಟಿ.ವಿ ಮುಂದೆ ಕುಳಿತು ಮಾಡುವ ಮರುಗಿದರೂ ಸಹ, ನಮ್ಮ ಕೈಯಲ್ಲಿ ಏನೂ ಮಾಡಲು ಸಾಧ್ಯವಿಲ್ಲ ಎಂದು ಮತ್ತೆ ನಮ್ಮ ನಮ್ಮ ಕೆಲಸಕ್ಕೆ ಮರಳಿ ಹೋಗುವ ಸಹಜತೆ ಮೈಗೂಡಿಸಿಕೊಂಡುಬಿಟ್ಟಿದ್ದೇವೆ. ಆದರೆ  “Understanding is the first step to acceptance, and only with acceptance can there be recovery.” ಎಂದು ಹ್ಯಾರಿ ಪಾಟರ್ ನಲ್ಲಿ ಬರುವ ಮಾತಿನಂತೆ ಮೊದಲಿಗೆ, ಪರಿಸರದಲ್ಲಿ ಆಗುತ್ತಿರುವ ಅಸಮತೋಲನ, ನಷ್ಟ, ತೊಂದರೆ ಪ್ರಕೃತಿ ವಿಕೋಪಗಳಿಗೆ ಒಂದಲ್ಲ ಒಂದು ರೀತಿಯಲ್ಲಿ "ನಾವು" ಪ್ರತಿಯೊಬ್ಬ ವ್ಯಕ್ತಿಯ ಪಾಲು ಇದೆ ಎಂಬುದನ್ನು ಒಪ್ಪಿಕೊಳ್ಳುವ ಮನಸ್ಥಿತಿಗೆ ಬರಬೇಕು. ಪ್ರತಿಯೊಬ್ಬ ಸಾಮಾನ್ಯನಿಂದಲೂ ಮುಂದಿನ ಸರ್ವನಾಶವನ್ನು ತಡೆಯುವ ಶಕ್ತಿಯಿದೆ ಎಂಬುದನ್ನು ಮೊದಲು ನಂಬಬೇಕು. "ನಮ್ಮನ್ನು ನಾವು ಮೊದಲು ನಂಬಬೇಕು".  ಪರಿಸರದಿಂದ ಪಡೆಯುವಷ್ಟೇ, ನಾವು ಕೊಡುವುದೂ ಕೂಡ ಇದೆ. ಇಲ್ಲವಾದಲ್ಲಿ ಈ ಭೂಮಿಗೆ ಆಗುತ್ತಿರುವ ತೊಂದರೆ ಮತ್ತು ನಷ್ಟಕ್ಕೆ, ಬಲಿಪಶುಗಳಾಗುವುದು ನಾವೇ.. ಹಾಗಾದರೆ ನಮ್ಮಿಂದ ಏನು ಮಾಡಲು ಸಾಧ್ಯ? ನಾವೇನೋ ಮಾಡುತ್ತೇವೆ ಉಳಿದವರು ಅಷ್ಟೇ ಕಸ ಬಿಸಾಡುತ್ತಾರೆ, ಸ್ಥಳ ಮಲಿನ ಮಾಡುತ್ತಾರೆ, ಹಾಗಾಗಿ ನಾವೇ ಒಬ್ಬರೇ ಏಕೆ ಮಾಡಬೇಕು? ಇತ್ಯಾದಿ ಪ್ರಶ್ನೆಗಳು ನಮ್ಮಲ್ಲಿ  ಮೂಡುವುದು ಸಹಜ. ಆದರೆ ಫ್ರೆಂಡ್ಸ್, 'ಹನಿ ಹನಿ ಗೂಡಿದರೆ ಹಳ್ಳ". ನಮ್ಮ ಎಷ್ಟೊಂದು ಹಬ್ಬ-ಹರಿದಿನಗಳಲ್ಲಿ ಪ್ರಕೃತಿಯ ಪೂಜೆ ನಡೆಯುತ್ತದೆ. ದೇವರಂತೆ ಪೂಜಿಸುವ ಪ್ರಕೃತಿಯನ್ನು, ದೇವರಿಗೆ ಮಾಡುವಷ್ಟೇ ಶ್ರದ್ಧೆಯಿಂದ ಕಾಪಾಡಿಕೊಳ್ಳಬೇಕು.


ಎರಡು ವರ್ಷಗಳ ಹಿಂದೆ ನಾನು ಪರಿಸರ ದಿನಾಚರಣೆಯ ಸಂದರ್ಭದಲ್ಲಿ  ಸಾಕಷ್ಟು ನನ್ನ ತಿಳುವಳಿಕೆಯ ಮಟ್ಟಿಗೆ ದಿನನಿತ್ಯದ ಜೀವನದಲ್ಲಿ ನಾವು ಹೇಗೆ ಪ್ಲಾಸ್ಟಿಕ್ ಕಡಿಮೆ ಮಾಡಬಹುದು ಎಂಬುದರ ಕುರಿತು ಬರೆದಿದ್ದೆ. ಅದರಲ್ಲಿ ಬರೆದಿರುವ ಪ್ರತಿಯೊಂದು ವಿಷಯವನ್ನೂ ಇವತ್ತಿನವರೆಗೂ ನಮ್ಮ ಮನೆಯಲ್ಲಿ ಎಲ್ಲರೂ ಪಾಲಿಸುತ್ತಬಂದಿದ್ದೇವೆ. ಆ ಬರಹವನ್ನು ಇಲ್ಲಿ ಮತ್ತೊಮ್ಮೆ ಹಂಚಿಕೊಳ್ಳುತ್ತಿದ್ದೇನೆ.

http://sowmyabeena.blogspot.com/2018/11/blog-post_13.html

ಇವಿಷ್ಟು ಟಿಪ್ಸ್ ಗಳ ಹೊರತಾಗಿ ಮತ್ತೊಂದಷ್ಟು ನಾವು ಅನುಸರಿಸುತ್ತಿರುವ ಪ್ರಕಾರಗಳನ್ನು ಸೇರಿಸಲು ಇಷ್ಟಪಡುತ್ತೇನೆ. 


  • ಮಕ್ಕಳು ನಮ್ಮನ್ನು ಕೇಳಿ ಕಲಿಯುವುದಿಲ್ಲ ಆದರೆ ನಮ್ಮನ್ನು ನೋಡಿ ಕಲಿಯುತ್ತಾರೆ. ಹಾಗಾಗಿ ಅವರಿಗೆ ಏನು ಕಲಿಸಬೇಕು ಅದನ್ನು ನಮ್ಮಲ್ಲಿ ಮೊದಲು ರೂಡಿಸಿಕೊಳ್ಳಬೇಕಾದ್ದು ಅತ್ಯವಶ್ಯಕ.  ಮಗಳು ಹುಟ್ಟಿದ ಸಮಯದಿಂದ ಬಣ್ಣ ಬಣ್ಣದ ಪ್ಲಾಸ್ಟಿಕ್ ಆಟಿಕೆಗಳನ್ನು ತೆಗೆದುಕೊಂಡಿದ್ದೆವು. ಸಹಜ ಆಕಾರ್ಷಣೆ ಹೌದು ಅಥವಾ ಈಗಿನ ಮಟ್ಟಿಗೆ ಇರುವಷ್ಟು ಗಂಭೀರತೆ ಅವಾಗ ಇರಲಿಲ್ಲವೆಂದೇ ಒಪ್ಪಿಕೊಳ್ಳುತ್ತೇವೆ. ಮಗಳಿಗೆ ಈಗ ಆರು ವರ್ಷ. ತಕ್ಕ ಮಟ್ಟಿಗೆ ಸಮಾಧಾನದಿಂದ ಹೇಳಿದರೆ ಪಾಪ ಅರ್ಥಮಾಡಿಕೊಂಡು ಒಪ್ಪುವ ಕೂಸು. "ಪ್ಲಾಸ್ಟಿಕ್ ಆಟಿಗೆಗಳು ನಮಗೆ ಬೇಡ ಮಗು", ಮತ್ತು "ನಾವು ಯಾರಿಗೂ ಪ್ಲಾಸ್ಟಿಕ್ ಗಿಫ್ಟ್ ಗಳ ಉಡುಗೊರೆ ಕೊಡುವುದು ಬೇಡ" ಎಂಬ ವಿಷಯಕ್ಕೆ ಮಗಳ ಸಮ್ಮತಿಯಿದೆ. ಬಣ್ಣ ಬಣ್ಣದ ಆಟದ ಸಾಮಾನುಗಳು ಕಣ್ಣು ಕುಕ್ಕಿದರೂ, ಅದು ಬೇಡ ಅಮ್ಮ ಎಂದು ಚೆನ್ನಪಟ್ಟಣ ಆಟಿಕೆಗಳು, ಬೆತ್ತ-ಬಿದಿರಿನ ಆಟಿಕೆಗಳು, ಡ್ರಾಯಿಂಗ್ ಐಟಮ್ಸ್, ಕಥೆ ಪುಸ್ತಕಗಳನ್ನು ತೆಗೆದುಕೊಂಡು ಖುಷಿಪಡುತ್ತಾಳೆ. ಕೆಳಗಿನ ಚಿತ್ರದಲ್ಲಿ ತೋರಿಸುವಂತೆ ಗಿಫ್ಟ್ ಐಟಂ ಗಳ ಪ್ಯಾಕಿಂಗ್ ಕೂಡ ನಮ್ಮದು ಪ್ಲಾಸ್ಟಿಕ್ ರಹಿತ ಬಟ್ಟೆ ಚೀಲ ಅಥವಾ ಪೇಪರ್ ಪ್ಯಾಕಿಂಗ್. ಈ ವಿಷಯದಲ್ಲಿ ಹೆಮ್ಮೆ ಇದೆ. 


  • ಇನ್ನು ಆನ್ಲೈನ್ ವಸ್ತುಗಳನ್ನು ಖರೀದಿ ಮಾಡುವಾಗ, ಕೆಲವೊಮ್ಮೆ ಹೀಗಾಗುತ್ತದೆ. ಕೆಲವು ವಸ್ತುಗಳನ್ನು ತಕ್ಷಣಕ್ಕೆ ಕಳಿಸುತ್ತೇವೆ, ಕೆಲವು ೩-೪ ದಿನಗಳು ತಡವಾಗುತ್ತದೆ - ಎಂಬ ಮೆಸ್ಸೇಜ್ ಇದ್ದರೆ, ನಮಗೆ ಆ ಎಲ್ಲ ವಸ್ತುಗಳು ತತ್ತಕ್ಷಣಕ್ಕೆ ಬೇಕಾಗಿಲ್ಲ ಎಂಬಂತಿದ್ದರೆ, ಎಲ್ಲವನ್ನೂ ಒಟ್ಟಿಗೆ ಒಂದೇ ಪ್ಯಾಕೇಜ್ ನಲ್ಲಿ ಕಳುಹಿಸಿ ಎಂದು ಬರೆಯುತ್ತೇನೆ. ಆಗ ಕೊರಿಯರ್ ಡೆಲಿವರಿಯ ಪ್ರತಿಸಲದ ಗಾಡಿ ಓಡಾಟ, ಸೆಪೆರೇಟ್ ಪ್ಯಾಕಿಂಗ್ ಮತ್ತು ಪ್ಲಾಸ್ಟಿಕ್ ಗಳ ಹಾವಳಿ ಕಡಿಮೆಯಾಗುತ್ತದೆ. ನಾವು ತೆಗೆದುಕೊಳ್ಳುವ ವಸ್ತುವಿಗೆ ಪ್ಲಾಸ್ಟಿಕ್ ರ್ಯಾಪರ್ ಅವಶ್ಯಕತೆಯಿಲ್ಲವಾದಲ್ಲಿ, ಕಸ್ಟಮರ್ ಕೇರ್ ಗೆ ಆರ್ಡರ್ ನಂಬರ್ ಜೊತೆಗೆ ವಿನಂತಿಸಿ ಬರೆದರೆ ಇನ್ನಷ್ಟು ಅನುಕೂಲ. 

  • ಮನೆಗಳಲ್ಲಿ ಮಕ್ಕಳ ವಸ್ತುಗಳನ್ನು ಜೋಡಿಸಿದಳು ಎಷ್ಟು ಖಾನೆಗಳಿದ್ದರೂ ಸಾಲ. ದೊಡ್ಡ ಮನೆ ಹೆಚ್ಚಿನ ಕಪಾಟು ಇದ್ದವರಿಗೆ ಹೇಗೋ ನಡೆಯುತ್ತದೆ. ಆದರೆ ಇದ್ದುಷ್ಟು ಜಾಗದಲ್ಲೇ ಸರಿಯಾಗಿ ಹೊಂದಿಸಿಡಬೇಕು ಎಂಬ ಆಲೋಚನೆ ಇದ್ದರೆ, ಅದಕ್ಕಾಗಿ ಪ್ಲಾಸ್ಟಿಕ್ ಬುಟ್ಟಿ ಅಥವಾ ಟ್ರೇ ಗಳ  ಬಳಕೆ ಸರ್ವೇ ಸಾಮಾನ್ಯ. ಅದಕ್ಕಾಗಿಯೇ ಈ ಕೆಳಗಿನ ಚಿತ್ರದಲ್ಲಿ ತೋರಿಸಿದಂತೆ ಕಸದಿಂದ ರಸ ಬುಟ್ಟಿಗಳು ನಮ್ಮ ಮನೆಯಲ್ಲಿ ತಯಾರಾಗುತ್ತದೆ. ಸಣ್ಣ ಸಣ್ಣ ರೊಟ್ಟಿನ ಬಾಕ್ಸ್ಗಳನ್ನು ಸಂಗ್ರಹಿಸಿಟ್ಟುಕೊಂಡು, ಅದಕ್ಕೆ ಯಾವುದಾದರೂ ಬೇಡವಾದ ಚಂದದ ಬಟ್ಟೆಯನ್ನು ಕಟ್ ಮಾಡಿ ಫೆವಿಕಾಲ್ ಗಮ್ ಹಾಕಿ ಅಂಟಿಸಿ ಚಂದಗಾಣಿಸಿದರೆ, ಮಕ್ಕಳಿಗೂ ತಮ್ಮ ಕಪಾಟಿನಲ್ಲಿ ವಸ್ತುಗಳನ್ನು ಜೋಡಿಸಿಕೊಳ್ಳಲು ಆಸಕ್ತಿ ಮೂಡುತ್ತದೆ. ಮಗಳ ಸಾಕ್ಸ್ ಬುಟ್ಟಿ, ಚಡ್ಡಿ ಬುಟ್ಟಿ, ಸ್ಟೇಷನರಿ ಐಟಮ್ಸ್ ಬಾಕ್ಸ್, ಅವಳು 'explorer' ಆದಾಗ ಹುಡುಕಿ ತರುವಂತಹ 'collectibles' ಮತ್ತವಳ 'treasures' ಗಳಿಗೆಲ್ಲ ನಮ್ಮದು ಇಂತವೇ ಅಂದಚಂದಗಳು :) 

  • ಮನೆ ಎಂದ ಮೇಲೆ ಅಡುಗೆ ಸಾಮಾನು ಇನ್ನಿತರ ದಿನನಿತ್ಯದ ವಸ್ತುಗಳನ್ನು ತರಲು ಹಿಂದೆ ಮುಂದೆ ಅಂಗಡಿಗೆ ಹೋಗುವುದು ಇದ್ದಿದ್ದೇ. ಹತ್ತಿರ ಅಂಗಡಿಗಳಿಗೆ ಹೋಗಲು ತೀರಾ ಅವರಸವಿಲ್ಲದ ಸಮಯವೆಂದಾದಲ್ಲಿ, ಮಗಳ ಸೈಕಲ್ ರೈಡ್ ನೆಪದಲ್ಲಿ ನಡೆದೇ ಹೋಗುತ್ತೇವೆ. ನನಗಿಂತ ಹಿರಿಯಳಾದ ನನ್ನ ಅಕ್ಕ ಎಲ್ಲಾ ವಿಷಯದಲ್ಲೂ 'ಅಕ್ಕ' ನೇ ಹೌದು ನನಗೆ. ಅವಳಿಂದ ಕಲಿಯಲು ಸಾಕಷ್ಟಿರುತ್ತದೆ. ಹಗಲಿನ ಕ್ಲಾಸ್ ಮುಗಿಸಿ ಕಾರ್ ಡ್ರೈವ್ ಮಾಡಿಕೊಂಡು ಮನೆಗೆ ಬಂದು, ಮನೆಯಲ್ಲೆಲ್ಲ ನಿಭಾಯಿಸಿ ಮತ್ತೆ ಸಂಜೆ ಕಾಲೇಜಿಗೆ ಹೋಗಿ ಸೈಗ್ನ್ ಮಾಡಿ ಬರುವ ಸಂದರ್ಭವಿದ್ದರೆ, ಸಂಜೆಯ ಕಾಲೇಜಿಗೆ ಹೋಗುವ ೫ ಕಿ.ಮೀ ದೂರದ ಹಾದಿಯನ್ನು ನಡೆದೇ ಹೋಗುತ್ತಾಳೆ ಅಕ್ಕಾ!! ವಾಕಿಂಗ್ ಜೊತೆಜೊತೆಯಲ್ಲಿ ಹೈದರಾಬಾದಿನ ಟ್ರಾಫಿಕ್ಕಿಗೆ ನಿಂತು ನಿಂತು ಗಾಡಿಯ ಹೊಗೆ ಬಿಡುವುದು ಇಷ್ಟವಿಲ್ಲ ಅವಳಿಗೆ. ಇದನ್ನು ಕಂಡು ಬಂದ ದಿನದಿಂದ ನಾನು ನನ್ನ ಸಣ್ಣ ಪುಟ್ಟ ವಸ್ತುಗಳ ಖರೀದಿಗೆ ಅಥವಾ ಸಮಯದ ಅನುಕೂಲವಿದೆ ಎಂದಾದಲ್ಲಿ ನನ್ನ ಗಾಡಿಯನ್ನು ಬಳಸದೇ,  ನಡೆದುಕೊಂಡು ಹೋಗುವ ಅಭ್ಯಾಸ ಮಾಡಿಕೊಂಡಿದ್ದೇನೆ. ಸಾಮಾನಿನ ಪಟ್ಟಿ ಬರೆದುಕೊಳ್ಳುತ್ತೇವೆ ನಾವು ೩ ಜನ ನಮ್ಮ ಒಂದು ಕಾಮನ್ ಪುಸ್ತಕದಲ್ಲಿ ಮತ್ತು ಆಗ್ಗಾಗ್ಗೆ ಹೋಗಿ ಒಮ್ಮೆಲೇ ಸಾಮಗ್ರಿಗಳನ್ನು ತಂದುಬಿಡುತ್ತೇವೆ. ಇನ್ನು ಚೀಲ ತೆಗೆದುಕೊಂಡು ಹೋಗುವುದು ಬೇಸಿಕ್ ಎನ್ನುವಷ್ಟರ ಮಟ್ಟಿಗೆ ಅಭ್ಯಾಸ ಮೈಗೂಡಿದೆ. ಒಂದೆರಡು ನಿಗದಿತ ಪ್ಲಾಸ್ಟಿಕ್ ಕೊಟ್ಟೆಯನ್ನು ಇಟ್ಟುಕೊಂಡಿದ್ದೇನೆ. ಅದರಲ್ಲಿ ಹಾಲು ಮೊಸರು ಬೆಣ್ಣೆ ಇತ್ಯಾದಿ ನೀರಿನ ಅಂಶ ತಾಗುವಂತಹ ವಸ್ತುಗಳನ್ನು, ಬೇರೆ ಬೇರೆಯಾಗಿ ಹಾಕಿಕೊಂಡು ಬರುತ್ತೇವೆ ಮತ್ತು ಹಾಗೆಯೆ ಅದನ್ನು ಸ್ವಚ್ಛಗೊಳಿಸಿಕೊಂಡು ಒಣಗಿಸಿ ಮುಂದಿನ ಸರ್ತಿಯ ಬಳಕೆಗೆ ಎತ್ತಿಟ್ಟುಕೊಳ್ಳುತ್ತೇವೆ.  

  • ಮಗಳು ಚಿಕ್ಕವಳಾದ್ದರಿಂದ ಗೀಚಿ ಏನಾದರೂ ಚಿತ್ರ ಬರೆಯುವುದು ಅತ್ಯಂತ ಸಹಜ. ಪೇಪರ್ ಕೊಟ್ಟು ಪೂರೈಸಲು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಚಿತ್ರ ಬರೆಯುತ್ತಲೇ ಇರುತ್ತಾಳೆ. ಅವಳ ಆ ತೃಪ್ತಿಗಾಗಿಯೇ ಅಮೆಜಾನ್ ನಲ್ಲಿ ದೊರೆತ ಬ್ಯಾಟರಿ ಚಾಲಿತ ಪ್ಯಾಡ್ ತಂದು ಕೊಟ್ಟೆವು. ಅವಳ ಪರೀಕ್ಷೆಯ ಸಮಯದಲ್ಲಿ, ಪುನರಾವರ್ತನೆ ಮಾಡಿಸಲು ಜೊತೆಗೆ ಅವಳ ಚಿತ್ರ ಬರೆಯುವ ಚಾಳಿಗೆ ಅತ್ಯಂತ ಉಪಯುಕ್ತವಾಗಿದೆ, ಬಿಳಿ ಹಾಳೆಗಳ ಬಳಕೆ ಕಡಿಮೆಯಿದೆ. 

  • ರನ್ನಿಂಗ್ ಗೆ ಹೋಗುವ ಪಾರ್ಕಿನಲ್ಲಿ ಶನಿವಾರ ಒಂದು ಗಂಟೆ, ಒಂದಷ್ಟು ಕಸ ಹೆಕ್ಕುವ ಕೆಲಸಕ್ಕೆ ನಾನೂ ಭಾಗಿಯಾಗುತ್ತೇನೆ. ಚಾರಣಕ್ಕೆ/ಪ್ರವಾಸಕ್ಕೆ ಹೋದಾಗ ಕಂಡ ಪ್ಲಾಸ್ಟಿಕ್ ಮಾಲಿನ್ಯ ನಮ್ಮಿಂದ ಆಗದಂತೆ ಎಲ್ಲ ಎಚ್ಚರಿಕೆ ವಹಿಸಿಕೊಳ್ಳುವುದರ ಜೊತೆಗೆ, ಅಲ್ಲಲ್ಲಿ ಕಂಡ ಪ್ಲಾಸ್ಟಿಕ್ ಕಸವನ್ನು ಹೆಕ್ಕಿ ಆ ಸ್ಥಳಕ್ಕೆ ನಮ್ಮ ಕೊಡುಗೆ ನೀಡಿ ಬರುವುದನ್ನು ಕಲಿತುಕೊಂಡಿದ್ದೇನೆ.  

  • ಅನುಕೂಲಕರವಾದ ಸ್ಥಳಗಳಿಗೆ ಹೋಗಿ ನಾನು ಮತ್ತು ಅಕ್ಷಯ್ ಒಂದಷ್ಟು ಗಿಡಗಳನ್ನು ನೆಟ್ಟು, ಆ ಸಸಿಗಳನ್ನು ಕಾಪಾಡಿಕೊಳ್ಳುತ್ತಿದ್ದೇವೆ. ಮನೆಯ ಪಾಟಿನಲ್ಲಿಯೇ ಇದ್ದಷ್ಟು ಜಾಗದಲ್ಲಿಯೇ ಸಣ್ಣ ಪುಟ್ಟ ನಮಗೆ ಸಾಧ್ಯವಾದ ತರಕಾರಿಗಳನ್ನು ನಾವೇ ಬೆಳೆದುಕೊಳ್ಳುತ್ತಿದ್ದೇವೆ. 

ಸಧ್ಯಕ್ಕೆ ನನಗೆ ನೆನಪಾದಷ್ಟನ್ನು ನಾನಿಲ್ಲಿ ದಾಖಲಿಸಿದ್ದೇನೆ. ನನ್ನಂತೆಯೇ ಅನೇಕರು ತಮ್ಮ ತಮ್ಮ ಮಟ್ಟಿಗೆ ಅನುಸರಿಸಲು ಸಾಧ್ಯವಾಗುತ್ತಿರುವ ಮತ್ತು ನಾವು ಇನ್ನಷ್ಟು ಕಲಿಯಬಹುದಾದ ಪ್ಲಾಸ್ಟಿಕ್ ಕಡಿತ ಮತ್ತು ಮರುಬಳಕೆಯ ಕುರಿತಾಗಿ ಹಂಚಿಕೊಂಡರೆ, ಪ್ರತಿಯೊಂದು ಮನೆಯಿಂದ ಇಷ್ಟರ ಮಟ್ಟಿಗೆ ಮಾಲಿನ್ಯ ಕಡಿಮೆಯಾದರೂ ಅದು ದೊಡ್ಡ ಸಾಧನೆಯೇ.. ಸಾಧ್ಯವಾದಷ್ಟು ಪ್ರಯತ್ನಿಸೋಣ.. 





ಗುರುವಾರ, ಸೆಪ್ಟೆಂಬರ್ 26, 2019

'ವ್ಯಾಲಿ ಆಫ್ ಫ್ಲವರ್ಸ್'

ಅಲ್ಲಿ ನಿಂತು ನೋಡಿದರೆ, ೩೬೦ ಡಿಗ್ರಿ ಸುತ್ತಲೂ ಆವರಿಸಿದ ಮಂಜಿನ ಬೆಟ್ಟಗಳ ಸಾಲು,ಅದರಾಚೆಗೆ ಹಿಮ ಹೊತ್ತ ರುದ್ರ ರಮಣೀಯ ಪರ್ವತ, ಹಿಮ ಕರಗಿ ನೀರಾಗಿ, ಕಾಲ್ಬದಿಗೆ ಹರಿವ ಸಣ್ಣ ತೊರೆ, ಅಲ್ಲೇ ಪಕ್ಕದ ಹಚ್ಚ ಹಸಿರ ಬೆಟ್ಟದಿಂದ ದುಮ್ಮಿಕ್ಕುವ ಬೆಳ್ನೊರೆಯ ಜಲಪಾತ, ನೀಲಾಕಾಶ, ಬಿಳಿ ಮೋಡಗಳ ಚಿತ್ತಾರ..ಸೂರ್ಯ ನೆತ್ತಿ ಮೇಲಿದ್ದರೂ ಮೈಸೋಕುವ ತಂಗಾಳಿಇದೆಲ್ಲದರ ಮಧ್ಯೆ ಭೂಮಿಯ ಮೇಲೆ ಪುಷ್ಪ ವೃಷ್ಟಿಯಾಗಿದೆಯೇನೋ ಎಂದು ಭಾಸವಾಗುವಂತೆ  ಆ ಹುಲ್ಲುಗಾವಲಿನ ಕಣಿವೆಯ ತುಂಬಾ ಕಣ್ಣು ಹಾಯಿಸಿದಷ್ಟು ದೂರಕ್ಕೂ ಬಣ್ಣ ಬಣ್ಣದ ಹೂಗಳ ಹಾಸು..!! ಇಂತದ್ದೊಂದು ಸಮ್ಮೋಹನಗೊಳಿಸುವಂತಹ ನೈಸರ್ಗಿಕ ಸೌಂದರ್ಯ ಕಾಣಸಿಗುವುದು, ಉತ್ತರಾಂಚಲದ ಪ್ರಸಿದ್ಧ ಚಾರಣ ಸ್ಥಳ 'ವ್ಯಾಲಿ ಆಫ್ ಫ್ಲವರ್ಸ್' ನಲ್ಲಿ.  






ವ್ಯಾಲಿ ಆಫ್ ಫ್ಲವರ್ಸ್ ನಲ್ಲೇನಿದೆ ? 

ವ್ಯಾಲಿ ಆಫ್ ಫ್ಲವರ್ಸ್ ಪ್ರಾರಂಭಿಕ ಹಂತದ ಪರ್ವತಾರೋಹಣರಿಗೆ ಹೇಳಿ ಮಾಡಿಸಿದಂತಹ ಚಾರಣ. ಜೂನ್ ತಿಂಗಳಿನಿಂದ ಪ್ರಾರಂಭವಾಗಿ ಅಕ್ಟೊಬರ್ ಕೊನೆಯವರೆಗೂ ಮಾತ್ರ ಟ್ರೆಕಿಂಗ್ ಮಾಡಬಹುದಾದ ಈ ಸ್ಥಳಗಳು, ನಂತರದ ೬ ತಿಂಗಳು ಸಂಪೂರ್ಣ ಹಿಮಾವೃತ್ತವಾಗುತ್ತದೆ. ಸಮುದ್ರ ಮಟ್ಟಕ್ಕಿಂತ ೧೨೦೦೦ ಅಡಿಗಳಷ್ಟು ಎತ್ತರದಲ್ಲಿರುವ ವ್ಯಾಲಿ ಆಫ್ ಫ್ಲವರ್ ಕಣಿವೆಯು ದಟ್ಟ ಹೂವಿನ ವನದಂತೆ ವ್ಯಾಪಿಸಿರುವ ವಿಸ್ತೀರ್ಣ ೮೭.೫ ಚದರ ಕಿ.ಮೀ ಗಳಷ್ಟು! ಚಾರಣದ ಪ್ರಮಾಣ ಅತ್ಯಂತ ಕಠಿಣವಲ್ಲದಿದ್ದರೂ, ಚಾರಣದ ಹಾದಿ, ಎತ್ತರೆತ್ತರ ಕಡಿದಾದ ಕಲ್ಲು ಬಂಡೆಗಳಿಂದ ಕೂಡಿದ್ದಾದ್ದರಿಂದ ತಕ್ಕ ಮಟ್ಟಿನ ಪರ್ವತಾರೋಹಣದ ಪೂರ್ವ ತಯಾರಿ ಅವಶ್ಯಕ.  








ಈ ಹೂವಿನ ಕಣಿವೆಯಲ್ಲಿ ೫೨೦ ಕ್ಕೂ ಹೆಚ್ಚು ಪ್ರಭೇದಗಳ ಆಲ್ಫ್ಐನ್ ಹೂಗಳಿವೆ ಎಂದು ಅಂದಾಜಿಸಲಾಗಿದೆ. ದಿನದಿಂದ ದಿನಕ್ಕೆ ಮಾರ್ಪಾಟಾಗುವ ಈ ಬೆಟ್ಟಗಳು ಈಗ ಕಂಡಂತೆ ಇನ್ನೊಂದು ತಿಂಗಳಿಗೆ ಕಾಣಿಸುವುದಿಲ್ಲ. ಒಮ್ಮೆ ನೀಲಿ-ನೇರಳೆ ಹೂಗಳಿಂದ ಕಂಗೊಳಿಸುವ ಬೆಟ್ಟ, ಮತ್ತೊಂದಷ್ಟು ಮಳೆಯ ನಂತರ ಅರಳಿ ನಿಲ್ಲುವ ಹಳದಿ-ಗುಲಾಬಿ ಹೂವಿನಿಂದ ಮೈದಳೆದು ನಿಂತಿರುತ್ತದೆ. ಈ ಪುಷ್ಪಗಳ ಕಣಿವೆಯಿಂದ ಹರಿದು ಬರುವ ಹಿಮನದಿಗೆ 'ಪುಷ್ಪವತಿ' ಎಂದೇ ಹೆಸರಿಡಲಾಗಿದೆ . ಬ್ರಹ್ಮ ಕಮಲ, ಬ್ಲೂ ಪಾಪ್ಪಿಲ್, ವಿವಿಧ ಬಗೆಯ ಆರ್ಕಿಡ್ಗಳು, ನಾಗುಮಲ್ಲಿಗೆ ಇತ್ಯಾದಿ ಇಲ್ಲಿನ ಮುಖ್ಯವಾದ ಹೂಗಳು. ವೈದ್ಯಕೀಯ ಮಹತ್ವವಿರುವ ೪೫ ಕ್ಕೂ ಹೆಚ್ಚು ಗಿಡ ಮೂಲಿಕೆಗಳು ಕೂಡ ಇಲ್ಲಿ ಗುರುತಿಸಿಕೊಂಡಿದೆ. ಕೇವಲ ಹಿಮ, ಹೂವುಗಳಷ್ಟೇ ಅಲ್ಲದೆ, ಇಲ್ಲಿ ಹಿಮಕರಡಿ, ಹಿಮ ಚಿರತೆ, ಕಸ್ತೂರಿ ಮೃಗ, ನೀಲಿ ಕುರಿಗಳು, ಬಂಗಾರದ ಕೋಗಿಲೆ, ಹಿಮ ಪಾರಿವಾಳ ಇನ್ನಿತರ ಬಣ್ಣಬಣ್ಣದ ಪಕ್ಷಿಗಳು ಮತ್ತು ಸಾವಿರಾರು ಬಗೆಯ ಬಣ್ಣಬಣ್ಣದ ಚಿಟ್ಟೆಗಳ ಜೀವಸಂಕುಲವಿದೆ. 




ವ್ಯಾಲಿ ಆಫ್ ಫ್ಲವರ್ಸ್  ಇತಿಹಾಸ 

 ಈ ಕಣಿವೆಯ ಹುಟ್ಟು ಕೂಡ ಒಂದು ಆಕಸ್ಮಿಕ ಸಂಶೋಧನೆ.  ೧೯೩೧ ರಲ್ಲಿ ಮೂವರು ಬ್ರಿಟಿಷ್ ಪರ್ವತಾರೋಹಿಗಳು, ಮೌಂಟ್ ಕಾಮೆಟ್ ಪರ್ವತಾರೋಹಣ ಮುಗಿಸಿ ಹಿಂದಿರುಗುವಾಗ ತಮ್ಮ ಹಾದಿಯನ್ನು ತಪ್ಪಿ ಒಂದು ಹುಲ್ಲುಗಾವಲಿನ ಬೆಟ್ಟವನ್ನು ಪ್ರವೇಶಿಸಿದರಂತೆ. ಆ ವರೆಗೂ ಯಾರು ಓಡಾಡದೇ ಇದ್ದ ಆ ಸ್ಥಳ ಸಂಪೂರ್ಣ ಹೂಗಳ ರಾಶಿಯಿಂದ ಆವೃತ್ತಗೊಂಡಿದ್ದನ್ನು ನೋಡಿ ದಿಗ್ಭ್ರಾಂತರಾಗಿ ಅದನ್ನು ವ್ಯಾಲಿ ಆಫ್ ಫ್ಲವರ್ಸ್ ಎಂದು ಉದ್ಗರಿಸಿ ನಾಮಕರಣ ಮಾಡಿದರೆಂಬುದು ಈ ಸ್ಥಳದ ಇತಿಹಾಸ. ಆ ಪರ್ವತಾರೋಹಿಗಳ ಪೈಕಿ, ಫ್ರಾಂಕ್ ಸ್ಮಿಥ್ ತನ್ನ ಪರ್ವತಾರೋಹಣ ಬಗ್ಗೆ ಬರೆದು ಪ್ರಕಟಗೊಳಿಸಿದ ಪುಸ್ತಕ ಕೂಡ ಇದೇ ಹೆಸರಿನಲ್ಲಿದೆ.  ನಂತರದ ವರ್ಷಗಳಲ್ಲಿ ಜಾನ್ ಮಾರ್ಗರೇಟ್ ಲೆಗ್ಗ್ ಎಂಬ ಸಸ್ಯ ಶಾಸ್ತ್ರಜ್ಞೆ ಇಲ್ಲಿಗೆ ಬಂದು, ಇಲ್ಲಿನ ಸಸ್ಯರಾಶಿಯ ಮಹತ್ವದ ಕುರಿತಾಗಿ ಸಾಕಷ್ಟು ಸಂಶೋಧನೆ ನಡೆಸಿದರು ಎನ್ನಲಾಗಿದೆ. ಆದರೆ ಅಧ್ಯಯನದ ಸಮಯದಲ್ಲಿ, ಈ ಕಣಿವೆಯಲ್ಲಿ ಕಾಲು ಜಾರಿ ತಮ್ಮ ಜೀವತೆತ್ತರಾದ್ದರಿಂದ ಅವರ ನೆನಪನಲ್ಲಿ ಕಟ್ಟಿದ ಸಮಾಧಿ ಇಂದಿಗೂ ವ್ಯಾಲಿ ಆಫ್ ಫ್ಲವರ್ಸ್ ನಲ್ಲಿ ಕಾಣಬಹುದು. ಇಲ್ಲಿನ ಸಸ್ಯ ಮತ್ತು ಪ್ರಾಣಿ ಸಂಕುಲಗಳ ಪ್ರಾಮುಖ್ಯತೆಯ ಕುರಿತಾದ ಹೆಚ್ಚಿನ ಅಧ್ಯಯನ ಮತ್ತು ಉಳಿವಿಗೋಸ್ಕರ, ಸ್ಥಳೀಯರ ಓಡಾಟ, ಜಾನುವಾರುಗಳ ಮೇವಿಗಾಗಿ ಬಳಸಿಕೊಳ್ಳುವುದನ್ನು ನಿಷೇದಿಸಲಾಗಿದೆ. ೧೯೮೨ ರಲ್ಲಿ ಈ ಕಣಿವೆಯನ್ನು ನ್ಯಾಷನಲ್ ಪಾರ್ಕ್ ಎಂದು ಘೋಷಿಸಲಾಯಿತು. ಜೊತೆಗೆ ೧೯೮೮ ರಿಂದ ಈ ಕಣಿವೆಯನ್ನು 'ವಿಶ್ವ ಪಾರಂಪರಿಕ ಜೀವ ವೈವಿಧ್ಯ ತಾಣ'ವೆಂದು ಕೂಡ ಯುನೆಸ್ಕೊ ಇಂದ ಘೋಷಿಸಲಾಗಿದೆ. ಈ ಪ್ರವಾಸೀ ಸ್ಥಳಕ್ಕೆ ಕೇವಲ ಟ್ರೆಕಿಂಗ್ ಗೆ ಅನುಮತಿ ನೀಡುತ್ತಾರೆಯೇ ಹೊರತು ಅಲ್ಲೇ ಉಳಿಯುವಂತಿಲ್ಲ.  








ಚಾರಣ ಹೇಗೆ ?

ಪಶ್ಚಿಮ ಹಿಮಾಲಯ ಪ್ರದೇಶದಲ್ಲಿರುವ ಚಮೋಲಿ ಜಿಲ್ಲೆಯ ಗಢವಾಲ್ ಊರಿನ, ಭ್ಹುಂದರ್ ಗಂಗಾ ಕಣಿವೆಯ ಮೇಲ್ತಟ್ಟಿನಲ್ಲಿದೆ ಈ 'ವ್ಯಾಲಿ ಆಫ್ ಫ್ಲವರ್ಸ್'. ಇದು ತನ್ನ ಅಲೌಕಿಕ ನಿಸರ್ಗ ಸೌಂದರ್ಯದಿಂದಾಗಿ ಚಾರಣಿಗರ, ಛಾಯಾಗ್ರಾಹಕರ ಪಾಲಿಗೆ ಸ್ವರ್ಗವೆನಿಸಿದೆ. ಹರಿದ್ವಾರದಿಂದ ೨೭೫ ಕಿ.ಮೀ ದೂರಕ್ಕೆ ಪ್ರಯಾಣಿಸಿ ಜೋಷಿಮಠಕ್ಕೆ ಬಂದು ತಂಗಿದರೆ, ಅಲ್ಲಿಂದ ವಾಹನದ ಮೂಲಕ ಗೋವಿಂದಘಾಟ್ ನಂತರದ ಊರು ಪುಲ್ನ ವರೆಗೆ ತಲುಪಬಹದು. ಇಲ್ಲಿಂದ ಮುಂದೆ ವಾಹನಗಳು ಸಾಗದು. 'ವ್ಯಾಲಿ ಆಫ್ ಫ್ಲವರ್ಸ್' ಮತ್ತು ಸಿಖ್ಖರ ಪ್ರಮುಖ ಯಾತ್ರಾಮಂದಿರ 'ಹೇಮಕುಂಡ್ ಸಾಹಿಬ್'ಗೆ ಚಾರಣ ಪ್ರಾರಂಭವಾಗುವುದು ಇಲ್ಲಿಂದಲೇಚಾರಣದ ಸೀಸನ್ ಇಲ್ಲಿಯ ಸ್ಥಳೀಯರಿಗೆ ದುಡಿಮೆಯ ಪರ್ವಕಾಲ. ತಿಂಡಿ-ಚಾಯ್ ಗಳು, ಚಾರಣಕ್ಕೆ ಬೇಕಾಗುವ ಊರುಗೋಲು, ಬ್ಯಾಗ್, ರೈನ್ ಕೋಟ್ ಮತ್ತಿತರ ಅಗತ್ಯ ಸಾಮಗ್ರಿಗಳು ಇಲ್ಲಿನ ಅಂಗಡಿಗಳಲ್ಲಿ ದೊರಕುತ್ತವೆ. ಮೊದಲ ದಿನ ಪುಲ್ನದಿಂದ ಸುಮಾರು ೮-೯ ತಾಸುಗಳ, ೧೧ ಕಿ.ಮೀ ಗಳಷ್ಟು ಆರೋಹಣ ನಡೆಸಿದರೆ ಸಿಗುವುದು ಗಾಂಗ್ರಿಯ ಎಂಬ ಊರು. ಇದನ್ನು ಬೇಸ್ ಕ್ಯಾಮ್ಪ್ ಸ್ಥಳ ಎಂದುಕರೆಯುತ್ತಾರೆ. ಈ ಸ್ಥಳವನ್ನು ತಲುಪುವವರೆಗೆ ಸಾಕಷ್ಟು ಮುಖ್ಯ ಹಳ್ಳಿಗಳಲ್ಲಿ ಸಣ್ಣಪುಟ್ಟ ತಿಂಡಿ ಸ್ನಾಕ್ಸ್ ಗಳ ಅಂಗಡಿಗಳು ಸಿಗುವುದರಿಂದ ಊಟ ತಿಂಡಿಗೆ ತೊಂದರೆಯಾಗುವುದಿಲ್ಲ . ಚಾರಣ ಮಾಡಲುಸಾಧ್ಯವಾಗದೇ ಅಥವಾ ಇಷ್ಟಪಡದೇ ಇರುವುವವರು ಜೋಷಿಮಠ ದಿಂದ ಗಾಂಗ್ರಿಯ ವರೆಗೆ ಹೆಲಿಕಾಪ್ಟರ್ ಮೂಲಕ ಪ್ರಯಾಣಿಸಬಹುದು ಮತ್ತು ವೈಮಾನಿಕ ಹಿಮಾಲಯ ಶ್ರೇಣಿಗಳ ವೈಮಾನಿಕ ನೋಟವನ್ನು ಆಸ್ವಾದಿಸಬಹುದು.(ಈ ವ್ಯವಸ್ಥೆಅಲ್ಲಿನ ವಾತಾವರಣದ ಮೇಲೆ ಅವಲಂಭಿತ)ಇನ್ನೊಂದು ಮುಖ್ಯವಾದ ಸೌಲಭ್ಯ, 'ಮ್ಯೂಲ್ ಅಥವಾ ಹೆಸರಗತ್ತೆ ಸವಾರಿ. ಬೆಟ್ಟದ ಮೇಲಿನ ಗಾಂಗ್ರಿಯ ಊರಿಗೆ ಸಕಲ ಸಾಮಗ್ರಿಗಳನ್ನು ಸಾಗಿಸಲು ಮ್ಯೂಲ್ ಗಳೇ ಇಲ್ಲಿನ ಮುಖ್ಯ ಆಧಾರ. ಇದರ ಜೊತೆಗೆ ಪೋರ್ಟರ್ಸ್ ಅಥವಾ ಮಾಲಿಗಳು ತಮ್ಮ ಬೆನ್ನಿನ ಬುಟ್ಟಿಯಲ್ಲಿ ಪ್ರವಾಸಿಗರನ್ನು ಮತ್ತು ಭಾರದ ಚೀಲಗಳನ್ನು ಹೊತ್ತುಕೊಂಡು ಹೋಗುವ ದುಡಿಮೆಯನ್ನು ಮಾಡುತ್ತಾರೆ. ಪ್ರವಾಸೋದ್ಯಮವೇ ಮುಖ್ಯ ಆದಾಯವಾದುದರಿಂದ, ಸ್ಥಳದ ಸ್ವಚ್ಛತೆಗೆ ಉತ್ತಮ ಪ್ರಾಧಾನ್ಯತೆ ನೀಡಿದ್ದಾರೆ. ಚಾರಣ ಹಾದಿಗೆ ಅಡಚಣೆಯಾಗುವ ಮ್ಯೂಲ್ ತ್ಯಾಜ್ಯ, ಪ್ರವಾಸಿಗರು ಎಲ್ಲೆಂದರಲ್ಲಿ ಎಸೆಯುವ ಕಸಗಳು ಇತ್ಯಾದಿ ತ್ಯಾಜ್ಯವಸ್ತುಗಳ ನಿರ್ವಹಣೆಯನ್ನು, ಸ್ವಚ್ಛತಾಕಾರ್ಮಿಕರು ಅತ್ಯಂತ ಸಮಗ್ರವಾಗಿ ನಿರ್ವಹಿಸಿವುದು ಪ್ರಶಂಸನೀಯ. ಚಾರಣದ ಹಾದಿಯುದ್ದಕ್ಕೂ ಆಗಸದೆತ್ತರಕ್ಕೆ ಚಿಮ್ಮಿ ನಿಂತ ಹಸಿರು ಪೈನ್, ಓಕ್ ಮರಗಳು,ಸಮೃದ್ಧ ಸಸ್ಯರಾಶಿ, ಪಕ್ಕದಲ್ಲಿ ಕಣಿವೆಯಿಂದಿಳಿದು ರಭಸದಲ್ಲಿ ತನ್ನ ಪಥದಲ್ಲಿ ಸಾಗುವ ಪುಷ್ಪವತಿ ನದಿ, ಹಿಮಾಲಯದ ಶ್ರೇಣಿಗಳು, ಬಾಯಾರಿಕೆ ನೀಗಲು ಖನಿಜಯುಕ್ತ ತಣ್ಣನೆಯ ನೈಸರ್ಗಿಕ ನೀರು,ಇಂತಹ ಪ್ರಕೃತಿ ಮಡಿಲಲ್ಲಿ ಚಾರಣ ಮಾಡುತ್ತಿದ್ದರೆ, ನಡಿಗೆಯೇ ಗೊತ್ತಾಗುವುದಿಲ್ಲ. ಗಾಂಗ್ರಿಯಾ ತಲುಪಿದ ಮೇಲೆ ವಸತಿಗಾಗೆಂದು ಅಲ್ಲಿ ಸಾಕಷ್ಟು ಶೆರ್ಡ್ ಟೆಂಟ್ ಗಳು, ಖಾಸಗೀ ಹೋಟೆಲು ಲಾಡ್ಜುಗಳಿವೆ. ಉತ್ತಮ ಊಟ ತಿಂಡಿಗಳು ದೊರೆಯುತ್ತವೆ. ಇಲ್ಲಿರುವ ಸಿಖ್ಖರ ಗುರುದ್ವಾರ ಹೇಮಕುಂಡ್ ಸಾಹಿಬ್ ಗೆ ಬರುವ ಯಾತ್ರಾರ್ಥಿಗಳಿಗೆ ವಸತಿ ನೀಡುವ ವ್ಯವಸ್ಥೆ ಹೊಂದಿದೆ. ಗಾಂಗ್ರಿಯ ದಿಂದ ಎರಡನೇ ದಿನದ ೩ ಕಿ.ಮೀ ಗಳ ಚಾರಣ 'ವ್ಯಾಲಿ ಆಫ್ ಫ್ಲವರ್ಸ್' ಕಣಿವೆಗೆ ಮುಂದುವರೆಯುತ್ತದೆ. ಈ ಸಸ್ಯರಾಶಿಯ ಕಣಿವೆಗೆ ಮ್ಯೂಲ್ ಗಳು ಹೋಗುವುದಿಲ್ಲ. ಪೋರ್ಟರ್ಸ್ ಗಳ ಬಾಡಿಗೆ ಸೌಲಭ್ಯ ಸಿಗುತ್ತದೆ. ಚಾರಣದ ತುದಿ ತಲುಪುವ ವರೆಗೂ ಯಾವುದೇ ಅಂಗಡಿಗಳು ಲಭ್ಯವಿಲ್ಲ. ಹಾಗಾಗಿ ಆಹಾರವನ್ನು ಮುಂಚಿತವಾಗಿಯೇ ಕಟ್ಟಿಕೊಂಡು ಹೋಗಬೇಕು. 

ಇತರ ಆಕರ್ಷಣೆ 

ಇದರ ಜೊತೆ ಇದೇ ಪ್ರದೇಶದಲ್ಲಿರುವ ಹೇಮಕುಂಡ್ ಸಾಹಿಬ್ ಗೂ ಒಂದು ಹೊತ್ತಿನ ಚಾರಣ ಮಾಡಬಹುದು. ಸಿಖ್ಖರ ಪವಿತ್ರ ತೀರ್ಥ ಯಾತ್ರಾ ಸ್ಥಳ ಇದಾಗಿದ್ದು, ಹಿಮಾವೃತ್ತ ಬೆಟ್ಟಗಳ ನಡುವೆ, ಹಿಮಸರೋವರದ ಬುಡದಲ್ಲಿರುವ ಗುರುದ್ವಾರ ಇಲ್ಲಿನ ಪ್ರೇಕ್ಷಣೀಯ ಸ್ಥಳ. ಇಲ್ಲಿ ಪ್ರಸಾದಕ್ಕೆಂದು ನೀಡುವ ಲಂಗಾರ್ ಬಾಯಿ ಚಪ್ಪರಿಸಿ ತಿನ್ನುವಷ್ಟು ರುಚಿಕರವಾಗಿರುತ್ತದೆ.  


(26/09/2019 ವಾರದ ಸುಧಾ ಪತ್ರಿಕೆಯಲ್ಲಿ ಪ್ರಕಟಿತ ಲೇಖನ)