ಬುಧವಾರ, ಅಕ್ಟೋಬರ್ 19, 2022

ಟಿಬೆಟಿಯನ್ ಘುಮ್ ಮೊನಸ್ಟರಿ

ದಾರ್ಜೀಲಿಂಗ್ ಸುತ್ತಮುತ್ತಲಿನ ಪ್ರಾಕೃತಿಕ ಸೌಂದರ್ಯವಂತೂ ವರ್ಣಿಸಲಸದಳ. ಅದರ ಜೊತೆಯಲ್ಲಿ, ದಸರಾ ಸಮಯದಲ್ಲಿ ದಾರ್ಜೀಲಿಂಗ್ ಪ್ರವಾಸ ಹೋದದ್ದು, ಅಲ್ಲಿನ ಅನೇಕ ಧರ್ಮಗಳ ಹಬ್ಬಗಳ ಆಚರಣೆಯ ಕುರಿತಾಗಿಯೂ ತಿಳಿಯಲು ಸಹಾಯಕವಾಯಿತು. ಅಂತದೇ ಒಂದು ದೇವಿ ಪೂಜೆಯ ಆಚರಣೆಯ ವಿಶೇಷತೆ ಕಂಡದ್ದು ಅಲ್ಲಿನ ಟಿಬೆಟಿಯನ್ ಘುಊಮ್ಮೊನಸ್ಟರಿಯಲ್ಲಿ.   

ದಾರ್ಜೀಲಿಂಗ್ ನಲ್ಲಿರುವ ಟಿಬೆಟಿಯನ್ ಘುಮ್ ಮೊನಸ್ಟರಿಗೆ (ಮಠ) ಭೇಟಿ ಇತ್ತ ಕ್ಷಣ. ಭವಿಷ್ಯದ ಬುದ್ಧ ಎಂದು ಕರೆಯಲಾಗುವ ಗೌತಮ ಬುದ್ಧನ ಉತ್ತರಾಧಿಕಾರಿ, 'ಮೈತ್ರೇಯ' ಬುದ್ಧನ ದೇವಾಲಯವಿದು. ಟಿಬೆಟಿಯನ್ ಶೈಲಿಯಲ್ಲಿ ನಿರ್ಮಾಣವಾಗಿರುವ ಈ ಧರ್ಮಮಠದ ಬಾಗಿಲಿನ ಕಮಾನಿನಲ್ಲಿ ಗರುಡನ ಕೆತ್ತನೆಯಿದೆ.  ಮೈತ್ರೇಯ ಬುದ್ಧನ ೧೫ ಅಡಿ ಎತ್ತರದ ಸಿಂಗರಿಸಿದ ಅದ್ಭುತ ಮೂರ್ತಿಯನ್ನು ಟಿಬೆಟಿನ್ನಿಂದಲೇ ಮಣ್ಣನ್ನು ತರಿಸಿ ಮಾಡಿದ ಮೂರ್ತಿಯಂತೆ! ಇದರ ಮುಂದಿರುವ ಎರಡು ದೊಡ್ಡ ಎಣ್ಣೆಯ ದೀಪಗಳು ಈ ವರೆಗೆ ಆರಿದ ದಾಖಲೆಯಿಲ್ಲ ಎನ್ನುತ್ತಾರೆ ಅಲ್ಲಿನ ಬೌದ್ಧ ಸನ್ಯಾಸಿಯೊಬ್ಬರು. ದೀಪದ  ಸುತ್ತಲಿನ ಗೋಡೆಗಳಮೇಲೆ ಬುದ್ಧನ ಕುರಿತಾದ ವರ್ಣರಂಜಿತ ಕಿರುಚಿತ್ರಗಳು,ಅಲ್ಲಿ ಟಿಬೆಟಿಯನ್ ಬೌದ್ಧರು ಸಾಲಾಗಿ ಕುಳಿತುಕೊಂಡು ಒಂದೇ ರಾಗದಲ್ಲಿ ಮಂತ್ರ ಪಠನೆ ಮಾಡುತ್ತಿದ್ದುದು, ಡ್ರಮ್ಸ್ ಮತ್ತು ಸಿಂಬಲ್ಸ್ ಬಡಿತ, ಪೈಪ್ಮಾದರಿಯ ಸಂಗೀತ ವಾದ್ಯಗಳ ನುಡಿಸುತ್ತ ಮಾಡಿದ ಪ್ರಾರ್ಥನೆ ಎಲ್ಲವೂ ಸೇರಿ ಒಂದು ರೀತಿಯ ಮಾಂತ್ರಿಕ ಭಾವನೆ ನೀಡುತ್ತಿತ್ತು. 







ದಶೈನ್(ದಸರಾ) ಹಬ್ಬದ ಆಚರಣೆಯ ಪ್ರಯುಕ್ತವಾಗಿ ಅಲ್ಲಿ ದೇವಿ ತಾರಾ ಕುರಿತಾದ ೧ ಲಕ್ಷ ಮಂತ್ರ ಪಠನೆ ಕಾರ್ಯಕ್ರಮ ನಡೆಯುತ್ತಿತ್ತು. ತಾರಾ ದೇವಿ ಯನ್ನು ವಜ್ರಯಾನ ಬೌದ್ಧ ಧರ್ಮದಲ್ಲಿ ಸ್ತ್ರೀ ಬುದ್ಧನಾಗಿ ಚಿತ್ರಿಸಲಾಗಿದೆ. 'ವಿಮೋಚನೆಯ ತಾಯಿ' ಎಂದು ಅವಳನ್ನುಕರೆಯುತ್ತಾರೆ . ಸಾಧನೆಗೆ ಬೇಕಾದ ಸದ್ಗುಣವನ್ನು ಈಕೆ ಪ್ರತಿನಿಧಿಸುತ್ತಾಳೆ ಎಂದು ನಂಬಲಾಗಿದೆ. 




ಪ್ರಾರ್ಥನೆಯ ನಂತರ ನೆರೆದವರಿಗೆ ಟಿಬೆಟಿಯನ್ ಹೋಲಿ ಟೀ ಅನ್ನು ವಿತರಿಸಲಾಗುತ್ತದೆ. ಟಿಬೆಟಿಯನ್ ಪಾಕಪದ್ಧತಿಯ ಪ್ರಕಾರ ತಯಾರಿಸಲಾಗುವ 'ಪವಿತ್ರ ಟೀ' ಅನ್ನು ಕುಡಿಯಲು ಪೇಯವಾಗಿ ನೀಡುತ್ತಾರೆ. ಟೀ ಮತ್ತು ವಿವಿಧ ಬಗೆಯ ಗಿಡಮೂಲಿಕೆ ಸೊಪ್ಪುಗಳನ್ನು ಹಾಕಿ ಕುದಿಸಿ ಘಾಡವಾದ ಡಿಕಾಕ್ಷನ್ ಮಾಡಿ, ಅದನ್ನು ಬಿದಿರಿನ ಬೆತ್ತಳಿಕೆಯ ಮಾದರಿಯ ಬೊಂಬಿನೊಳಗೆ ಹಾಕಿ,  ಅದಕ್ಕೆ ಯಾಕ್ ಮೃಗದ ಹಾಲು, ಬೆಣ್ಣೆ ಮತ್ತು ಉಪ್ಪು ಹಾಕಿ, ಬೆಣ್ಣೆಯ ಎಣ್ಣೆಯಂಶ ಸಂಪೂರ್ಣ ಮಿಳಿತಗೊಳ್ಳುವಲ್ಲಿಯವರೆಗೆ, ಸಾಕಷ್ಟು ಸಮಯವಾದವರೆಗೆ ಕಡೆದು ಬಿಸಿ ಬಿಸಿ ಹಬೆಯಾಡುತ್ತಿರುವಾಗಲೇ ಕುಡಿಯಲು ಕೊಡುತ್ತಾರೆ. ನಾವು ಹೋದ ದಿನದಂದು, ಮಾನಸ್ಟ್ರಿಯ ಹೊರಗಡೆ ಸ್ವಯಂ ಸಂಘವೊಂದು ಚಳಿಯಿಂದ ಕೊರೆಯುತ್ತಿರುವವರಿಗಾಗಿ ಬಿಸ್ಕೀಟು ಮತ್ತು ಚಹಾ ವಿತರಿಸಿ ತಮ್ಮ ಸೇವೆಯನ್ನು ನಡೆಸುತ್ತಿದ್ದರು.


ಯಾವುದೇ ಮೊನಸ್ಟರಿ ಹೊರಾಂಗಣದಲ್ಲಿ ಟಿಬೆಟಿಯನ್ ಬೌದ್ಧರು ಪ್ರಾರ್ಥನೆಗಾಗಿ ಬಳಸುವ ಪ್ರಾರ್ಥನಾ ಚಕ್ರವಿರುತ್ತದೆ. ಕಬ್ಬಿಣ, ಮರದ ತುಂಡುಗಳಿಂದ ಕೆಲವೊಮ್ಮೆ ಕಲ್ಲಿನ ಕೆತ್ತೆನೆಯಲ್ಲೂ ಈ ಸುರುಳಿನ ಚಕ್ರವನ್ನು ನೋಡಬಹುದು, ಇದನ್ನು ಮಣಿ ಚಕ್ರ ಎಂದು ಕರೆಯುತ್ತಾರೆ. ನಮ್ಮಲ್ಲಿನ ಜಪಮಾಲೆ ಇದ್ದಂತೆ. ಅದರ ಮೇಲೆ 'ಓಂ ಮಣಿ ಪದ್ಮೇ ಹಮ್" ಎಂಬ ಪ್ರಾರ್ಥನೆಯ ಬೀಜಮಂತ್ರವನ್ನು ಬರೆದಿರುತ್ತಾರೆ. ಜೊತೆಗೆ ಅಷ್ಟಮಂಗಲ ರಕ್ಷಕರ ಚಿಹ್ನೆ ಕೂಡ ಚಿತ್ರಿತವಾಗಿರುತ್ತದೆ. ಈ ಪ್ರಾರ್ಥನಾ ಚಕ್ರವನ್ನು ತಿರುಗಿಸುತ್ತಾ, ಈ ಮಂತ್ರವನ್ನು ಹೇಳಿದರೆ, ಸುಖ ಶಾಂತಿ ಲಭಿಸುತ್ತದೆ ಎಂಬ ನಂಬಿಕೆಯಿದೆ. 


ಬೌದ್ಧ ಧರ್ಮದಲ್ಲಿ ನೀರೆಂಬ ಪವಿತ್ರ ವಸ್ತುವಿಗೆ ಅತ್ಯಂತ ಪ್ರಾಶಸ್ತ್ಯ. ನೀವು ಯಾವುದೇ ಬೌದ್ಧ ಮೊನಾಸ್ಟರಿಗೆ ಹೋದರೂ ಅಲ್ಲಿ ಬುದ್ಧನ ಎದುರು ಏಳು ಬಟ್ಟಲುಗಳಲ್ಲಿ ನೀರನ್ನು ಇಟ್ಟಿರುತ್ತಾರೆ. ಇವು ಸಾಂಕೇತಿಕವಾಗಿ, ಕುಡಿಯಲು ನೀರು (ಅರ್ಘ್ಯ), ಸ್ನಾನಕ್ಕೆ ನೀರು (ಪದ್ಯಮ್), ಹೂವು (ಪುಷ್ಪ), ಧೊಪದೃವ್ಯ, ಬೆಳಕು, ಸುಗಂಧದ್ರವ್ಯ ಮತ್ತು ಆಹಾರ ವನ್ನು ಸೂಚಿಸುತ್ತವೆ. ಸಾಂಕೇತಿಕ ರೂಪದ ಅರ್ಪಣೆಗಳಲ್ಲದೆ, ಅನೇಕರು ಅನೇಕ ಬಗೆಯ ಬಿಸ್ಕೀಟು, ಚಾಕಲೇಟು, ವಿಧವಿಧವಾದ ಧಾನ್ಯಗಳಿಂದ ಮಾಡಿದ ಕೇಕ್, ಸಿಹಿತಿಂಡಿಗಳು, ವಿಧವಿಧವಾದ ಪೇಯಗಳನ್ನು ಕೂಡ ನೈವೇದ್ಯಕ್ಕೆ ನೀಡುತ್ತಾರೆ. ಹೀಗಿದ್ದಾಗ,  ಮಗಳ ಬುದ್ಧನನ್ನು ಕಮ್ಮಿ, ನೈವೇದ್ಯಗಳನ್ನು ಜಾಸ್ತಿ ನೋಡುತ್ತಿದ್ದಳು ಎಂಬುದನ್ನು ಮತ್ತೆ ಹೊಸತಾಗಿ ಹೇಳಬೇಕಿಲ್ಲ ಅಲ್ಲವೇ? 

 

ಶುಕ್ರವಾರ, ಅಕ್ಟೋಬರ್ 14, 2022

ಬೆಟ್ಟಗಳ ರಾಣಿ - ದಾರ್ಜೀಲಿಂಗ್

ಹಿಮಾಲಯದ ಪರ್ವತ ಶ್ರೇಣಿಗಳೆಂದರೆ ನನಗೇಕೋ ಮುಗಿಯದ ಆಸೆ. ಈ ಸಲದ ಪ್ರವಾಸಕ್ಕೆ ನಮ್ಮ ಗಮನ ಸೆಳೆದದ್ದು ಪಶ್ಚಿಮ ಬಂಗಾಳ. 

ದಾರ್ಜೀಲಿಂಗ್ ಒಂದು ಅತ್ಯಂತ ಸುಂದರವಾದ ಗಿರಿಧಾಮ, ಹಿಮಾಲಯದ ಪರ್ವತ ಶ್ರೇಣಿಯ ಕೆಳಭಾಗದಲ್ಲಿ ಇರುವ ಈ ಪಟ್ಟಣ, ಯುನೆಸ್ಕೋ ದ ವಿಶ್ವ ಪರಂಪರೆಯ ತಾಣದಲ್ಲಿ ಒಂದು. ಪ್ರವಾಸಿಗರಾಗಿ ಈ ಪ್ರದೇಶದ ಸೌಂದರ್ಯವನ್ನು ಸವಿಯಬೇಕೆಂದರೆ, ಡಿಸೇಂಬರ್ ನಂತರದ ಹಿಮಸುರಿತವನ್ನು ಅನುಭವಿಸಬೇಕು ಎಂದು ಕೆಲವರು ಹೇಳಿದ್ದನ್ನು ಕೇಳಿದ್ದೆವು. ಆದರೂ ವರ್ಷವಿಡೀ ಮಂಜು ಕವಿದಿರುವ ಊರು, ಹಿಮಾಲಯದ ಮಹೋನ್ನತ ಶ್ರೇಣಿಯ ಪ್ರದೇಶ ಎಂಬ ಅರಿವಿದ್ದರಿಂದ, ಈ ಸಮಯಕ್ಕೆ ಕಾಣಸಿಗುವ ವೈವಿದ್ಯತೆಯನ್ನು ನೋಡಲು ನಾವು ತಯಾರಾಗಿಯೇ ಹೋಗಿದ್ದೆವು. 

ದಾರ್ಜೀಲಿಂಗ್ ಅನ್ನು ಹೆಚ್ಚು ಕಮ್ಮಿ ಬ್ರಿಟಿಷರು ಕಟ್ಟಿದ ನಾಡು ಎಂದೇ ಹೇಳಬಹುದು. ದಾರ್ಜೀಲಿಂಗ್ ನ ಉತ್ತಮ ಹವಾಗುಣದಿಂದ ಆಕರ್ಷಿತವಾಗಿ, ಈಸ್ಟ್ ಇಂಡಿಯಾ ಕಂಪೆನಿಯ ಅಧಿಕಾರಿಗಳ ನಿಯೋಗ, ಈ ಊರನ್ನು ಸಿಕ್ಕಿಂ ರಾಜರಿಂದ ಗುತ್ತಿಗೆಪಡೆದಿದ್ದು. ತೀಕ್ಷ ಉಷ್ಟತೆಯಿಂದ ರಕ್ಷಿಸಿಕೊಳ್ಳಲು ಬ್ರಿಟಿಷರಿಗೆ ಇದೊಂದು ಅತ್ಯಂತ ಪ್ರಿಯವಾದ ಸ್ಟಳವಾಗಿತ್ತು. ಗಿರಿಧಾಮದ ನಿರ್ಮಾಣ, ಪ್ರಾಯೋಗಿಕ ಚಹಾ ತೋಟದ ಹುಟ್ಟು, ಅಲ್ಲಿ ಬಂದು ತಂಗುವ ಬ್ರಿಟಿಷ್ ಜನರಿಗಾಗಿ ಶಿಕ್ಷಣ ಮತ್ತು ಅನೇಕ ಬಗೆಯ ಕ್ಷೇಮಾಭಿವೃದ್ಧಿ ಕೇಂದ್ರಗಳ ನಿರ್ಮಾಣ ಹೀಗೆ ಹಂತಹಂತವಾಗಿ ಮೂಡಿತು ದಾರ್ಜೀಲಿಂಗ್ ಪಟ್ಟಣ. ಅಂದಿನ ದಾರ್ಜೀಲಿಂಗ್ ಹಿಮಾಲಯನ್ ರೈಲ್ವೆ ವ್ಯವಸ್ಥೆಯಿಂದಲೇ, ಈ ಪಟ್ಟಣ ಅತ್ಯಂತ ವೇಗವಾಗಿ ಅಭಿವೃದ್ಧಿಗೊಳ್ಳಲು ಸಹಕಾರವಾದದ್ದು ಎಂದು ಕೂಡಾ ಕೇಳಿ ತಿಳಿದೆವು. 'ಬೆಟ್ಟಗಳ ರಾಣಿ' ಎಂದೇ ಪ್ರಸಿದ್ಧವಾದ ದಾರ್ಜೀಲಿಂಗ್ ನ ಮುಖ್ಯ ಆದಾಯವೇ ಪ್ರವಾಸೋದ್ಯಮ ಮತ್ತು ಚಹಾ ಬೆಳೆ. ಬೆಳ್ಳನೆ  ಹಿಮಾಲಯದ ಹೊಳಪು, ಮೇಲೇರಿದಂತೆ ಮೋಡಗಳ ಜೊತೆಜೊತೆಯೇ ನಾವು ಸಂಚಾರ ಮಾಡುತ್ತಿದ್ದೇವೇನೋಎಂದೆನಿಸುವ ಹಾದಿಗಳು, ಈಗಿನ್ನೂ ಮಳೆಗಾಲ ನಡೆಯುತ್ತಿದ್ದುದರಿಂದ, ಒಂದು ಕ್ಷಣಕ್ಕೆ ಇಬ್ಬನಿಯಿಂದ ೫ ಅಡಿಯಿಂದ ಮುಂದೇನೂ ಕಾಣದಷ್ಟು ಮುಸುಕು, ಮತ್ತೊಂದು ಕ್ಷಣಕ್ಕೆ ಸ್ವಚ್ಛ ತೊಳೆದಿಟ್ಟ ನಿಸರ್ಗ ಸೌಂದರ್ಯದ ಅನಾವರಣ.. ದಾರ್ಜೀಲಿಂಗ್ ಪಟ್ಟಣದ ಸುತ್ತಮುತ್ತ ಕಣ್ಣು ಹಾಯಿಸಿದಷ್ಟೂ ದೂರಕ್ಕೆ, ಪದಗಳಲ್ಲಿ ಬಣ್ಣಿಸಿದಷ್ಟೂ ಕಮ್ಮಿ ಎನ್ನುವಂತಹ ಪ್ರಾಕೃತಿಕ ಸೌಂದರ್ಯ! ಚುಮುಚುಮು ಚಳಿಯ ಸೀಸನ್ ನಡೆಯುತ್ತಿದ್ದ ಈ ಊರಿನಲ್ಲಿ ಬೆಳಗಾಯಿತು ಎನ್ನುವುದು ೪.೩೦ ಸುಮಾರಿನಿಂದಲೇ ಮತ್ತು ಸಂಜೆ ೫.೩೦ ಅಷ್ಟರಲ್ಲಿ ಕತ್ತಲಾಗಿ ಸುಮಾರು ೭.೩೦-೮ ಆಗುವಷ್ಟರಲ್ಲಿ ಇಡೀ ಪಟ್ಟಣ ಮಲಗಿಯಾಗಿರುತ್ತದೆ! ಪ್ರವಾಸೋದ್ಯಮ  ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಇಲ್ಲಿಂದ ೭೦% ಜನರಿಗೆ ಮುಖ್ಯ ಆದಾಯವನ್ನು ಒದಗಿಸಿಕೊಡುತ್ತಿದೆ. ಉಳಿದಂತೆ ಚಹಾ ಉದ್ಯಮಕ್ಕೆ ಹೆಚ್ಚಿನ ಹೆಂಗಸರು ದುಡಿಮೆಗೆ ಹೋಗುತ್ತಾರೆ. ಆದರೂ ಹೆಚ್ಚಿದ ಪ್ರವಾಸೋದ್ಯಮ, ನಿರಂತರವಾಗಿ ಬೆಳೆಯುತ್ತಿರುವ ಜನಸಂಖ್ಯೆಗೆ ಸಮಪಾತವಾಗಿ ಸಂಪೂನ್ಮೂಲಗಳ ನಿರ್ವಹಣೆ ಇಲ್ಲ, ನಗರದ ನಿರ್ಮಾಣ ಅತ್ಯಂತ ಕಿಷ್ಕಿಂದೆಯೆನಿಸುತ್ತದೆ. ಬೆಟ್ಟದ ಮೇಲಿನ ಊರುಗಳು ಹಾಗಾಗಿ ರಸ್ತೆಗಳು ಯಾವುದು ಸಪಾತವಾಗಿರದೆ, ಏರು ಅಥವಾ ಇಳಕಲಿನ ರಸ್ತೆಯೇ ಅಲ್ಲಿ ಸಾಮಾನ್ಯ ಹಾದಿ. ಒಂದೇ ವಾಹನ ಹೋಗುವಷ್ಟು ಕಿರಿದಾದ ರಸ್ತೆ, ಅದರಲ್ಲಿ ಚಾಲಕರ ಚಾಕಚಕ್ಷತೆಯಿಂದ ಎರಡೆರಡು ವಾಹನಗಳು ದಾಟಬೇಕಾದ ಅನಿವಾರ್ಯತೆ. ಇಕ್ಕೆಲಗಳಲ್ಲಿ ಪ್ರಪಾತ ಒಮ್ಮೊಮ್ಮೆ ಎದೆ ಝಲ್ಲೆನ್ನುವ ಅನುಭವ. ಇಲ್ಲಿನ ನಿಸರ್ಗ ಸೌಂದರ್ಯ ನೋಡಿ ಸಂತೋಷಪಡುವಷ್ಟೇ, ನಗರ ಸ್ವಚ್ಛತೆಯ ಕುರಿತಾಗಿ ನಿರ್ಲ್ಯಕ್ಷತೆ ನೋಡಲು ಬೇಸರವಾಗುತ್ತದೆ. ಮೈ ನವಿರೇಳಿಸುವ ಪ್ರಾಕೃತಿಕ  ಸೌಂದರ್ಯವನ್ನು ನೋಡುವುದು ಒಂದು ಕಡೆಯಾದರೆ, ಭೂಕುಸಿತದಂತಹ ಅನಿರೀಕ್ಷಿತ ಪ್ರಾಕೃತಿಕ ವಿಕೋಪದ ಸಮಸ್ಯೆಗಳ ನಡುವೆ ಜನರ ನಿತ್ಯ ಜೀವನ ಮೈಜುಮ್ಮೆನ್ನಿಸುತ್ತದೆ. 

ದಾರ್ಜೀಲಿಂಗ್ ನ ಮತ್ತೊಂದು ವಿಶೇಷ ಇಲ್ಲಿನ ಟ್ರೈನ್. ಇದನ್ನು "ಟಾಯ್ ಟ್ರೈನ್" ಎಂದೂ ಕರೆಯುತ್ತಾರೆ. ಸಿಲಿಗುರಿಯಿಂದ ಡಾರ್ಜಿಲಿಂಗ್‌ ಹಿಮಾಲಯನ್‌ ರೈಲ್ವೆಯಲ್ಲಿ80 ಕಿ.ಮೀ ಪಯಣ. ಮಧ್ಯೆ ಮುಖ್ಯವಾದ ಒಂದೆರಡು ಊರುಗಳಲ್ಲಿ ಮಾತ್ರನಿಲ್ದಾಣ. ಎತ್ತರದ ಬೆಟ್ಟವನ್ನು ವಾಹನಗಳು ಓಡಾಡುವ ರಸ್ತೆಯ ಪಕ್ಕದಲ್ಲೇ, ರಸ್ತೆಗೆ ಹೊಂದಿಕೊಂಡಂತೆ ರೈಲಿನ ಹಳಿಗಳ ಮೇಲೆ ಹತ್ತಿಳಿಯುವ ಟಾಯ್ ಟ್ರೈನ್ ಬರುತ್ತಿದ್ದರೆ, ಜನರು ಆ ಸಮಯಕ್ಕೆ ರೈಲಿನ ಹಳಿಗಳಿಂದ ಸರಿದುಕೊಂಡು, ಟ್ರೈನ್ ಹೋಗಿಯಾದ ನಂತರ ಮತ್ತೆ ಆ ಜಾಗವನ್ನು ಮಾಮೂಲು ರಸ್ತೆಯಂತೆ ಬಳಸುವ ಬಗೆ ನೋಡಲೇ ಒಂದು ರೀತಿಯ ಮಜಾ.  UNESCOದಿಂದ ವಿಶ್ವ ಪರಂಪರೆ ತಾಣ ಎಂದು ಘೋಷಿಸಲ್ಪಟ್ಟಿದ್ದು, ಈ ಗೌರವ ಪಡೆದ ವಿಶ್ವದ ಎರಡನೇ ರೈಲ್ವೆ ಇಲ್ಲಿಯದಾಗಿದೆ. 

ನೇಪಾಳಿ ಭಾಷೆ ಹೆಚ್ಚಿನ ಜನರ  ಭಾಷೆಯಾಗಿದ್ದರೂ ಇಲ್ಲಿ ನೇಪಾಳ, ಸಿಕ್ಕಿಂ, ಬಂಗಾಳ ಮತ್ತು ಭೂತಾನ್ ನ ಜನಾಂಗ ಮೂಲದ ಜನರಿದ್ದಾರೆ. ನಾವು ಹೋಗಿದ್ದು ನವರಾತ್ರಿಯ ಸಮಯದಲ್ಲಿ ಆದ್ದರಿಂದ, ಬೆಂಗಾಳಿಯರ ದಸರಾ ಹಬ್ಬದ ವಾತಾವರಣ ಎಲ್ಲೆಡೆ ಕಾಣಸಿಗುತ್ತಿತ್ತು. ಬೌದ್ಧರ ಧರ್ಮಶಾಲೆಯೊಂದಕ್ಕೆ ಭೇಟಿ ಕೊಟ್ಟಾಗ,  ದಸರಾ ಆಚರಣೆಯ ಅಂಗವಾಗಿ ನಡೆಯುತ್ತಿದ್ದ ಒಂದು ಲಕ್ಷ ತಾರಾ ದೇವಿ ಮಂತ್ರ ಪಠಣ ಕಾಣುವ ಅವಕಾಶವಾಯಿತು. 

 ಆಯ್ದ ಚಿತ್ರಗಳು ನಮ್ಮ ಸಧ್ಯದ ಪಶ್ಚಿಮ ಬಂಗಾಳದ ದಾರ್ಜೀಲಿಂಗ್ ಟ್ರಿಪ್ ನಿಂದ. ಮಳೆಗಾಲದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣ ಇಂತಿಷ್ಟೇ ಸಮಯ ಎಂದು ಇಲ್ಲಿ ಹೇಳಲಾಗದು. ಹಸಿ ಅಂಶ ಹೆಚ್ಚಾದ ಹಾಗೆಯೂ ಗುಡ್ಡ ಬೆಟ್ಟ ಬಂಡೆಗಳು ಕುಸಿಯುವುದು ಇಲ್ಲಿ ಸರ್ವೇ ಸಾಮಾನ್ಯ ಸಂಗತಿ. ಪ್ರವಾಸದುದ್ದಕ್ಕೂ  ಪಡೆದ ಒಂದಷ್ಟು ಮಾಹಿತಿಗಳನ್ನು, ನೋಡಿದ ಸ್ಥಳಗಳ ನೆನಪುಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. 


೧. ಹಾದಿಯಲ್ಲಿ ಕಂಡ ನವರಾತ್ರಿ ಉತ್ಸವ. 


೨. ಸ್ವರ್ಗಕ್ಕೆ ಹಾದಿ ಎಂಬಂತೆ ಕಾಣುವ ನಿಸರ್ಗದ ಚಿತ್ರಣ 


೩. ರಸ್ತೆಯ ಪಕ್ಕದಲ್ಲೇ ಚಲಿಸುವ ಟಾಯ್ ಟ್ರೈನ್ 


೪. ಸಂಜೆ ೫.೩೦ ಅಷ್ಟಕ್ಕೆಲ್ಲ ಕತ್ತಲು ಆವರಿಸಿಯಾಗಿರುತ್ತದೆ 

೫. Famous iconic place - center of the city - Darjeeling Clock tower. Its also called as Chowrasta means where four roads joins.

೬. ಬೆಟ್ಟದ ಮ್ಯಾಗಿನ ಊರು ಇದು.. ಒಂದೋ ಹತ್ತಬೇಕು ಇಲ್ಲವೇ ಇಳಿಯಬೇಕು. ನಡೆಯುವಂತಹ ಸಾದಾ ರಸ್ತೆ ಅತ್ಯಂತ ವಿರಳ
೭. ಹಾವಿನಂತೆ ಬಳಸಿ ಬರುವ ರಸ್ತೆಗಳನ್ನು ಜೋಡಲು ಅಲ್ಲಲ್ಲಿ ಕಟ್ಟಡಗಳ ಮಧ್ಯೆ ಮೆಟ್ಟಿಲುಗಳ pathway. ಏರ್ಪೋರ್ಟ್ ನಿಂದ ಬರುವಾಗ ದಾರ್ಜೀಲಿಂಗ್ ನಲ್ಲಿ ಮಳೆ-ಟ್ರಾಫಿಕ್ನಿಂದಾಗಿ ಒಂದು ಕಿಮೀ ನಷ್ಟು ದೂರದಲ್ಲಿದ್ದ ನಮ್ಮ ಹೋಟೆಲ್ ಗೆ ಗಾಡಿಯಲ್ಲಿ ಹೋಗಲು ತೆಗೆದುಕೊಂಡ ಸಮಯ ೫೦ ನಿಮಿಷಗಳು. ಅದೇ ಸ್ಥಳಕ್ಕೆ ಮರುದಿನ ಹೋಟೆಲ್ ನಿಂದ ನಾನು ವಾಕ್ ಬಂದದ್ದು ಈ ಮೆಟ್ಟಿಲುಗಳ ಮೂಲಕವೇ..ಕೇವಲ 4 ನಿಮಿಷದಲ್ಲಿ!

೮. ದಾರ್ಜೀಲಿಂಗ್ ರೈಲ್ವೆ ಶೇಷನ್ ನಿಂದ ಸಂಜೆಯ ನೋಟ  


೯. ಡಾರ್ಜಿಲಿಂಗ್ ಚಹಾ ಕಪ್ಪು ಚಹಾಗಳಲ್ಲೇ ಅತ್ಯುತ್ಕೃಷ್ಠವಾದದ್ದು ಎಂದು ಗುರುತಿಸಲ್ಪಟ್ಟಿದ್ದು, ಇದು ಜಗತ್ತಿನೆಲ್ಲೆಡೆ ಜನಪ್ರಿಯವಾಗಿದೆ

೧೦.  ಹ್ಯಾಪಿ ವ್ಯಾಲಿ ಟೀ ಎಸ್ಟೇಟ್ 







೧೧. ದುಡ್ಡು ಕಟ್ಟಿ ಆಡುವ ರಸ್ತೆ ಬದಿಯ ಲಾಟರಿ ಮತ್ತು ಡೈಸ್ ಆಟಗಳು  





೧೨.  ದಾರ್ಜೀಲಿಂಗ್ ನ ಪ್ರಸಿದ್ಧ ತಿಂಡಿ ಮೊಮೋ. ಪ್ರತಿದಿನ ಸಂಜೆ ರಸ್ತೆಬದಿಗೆ ಬಿಸಿಬಿಸಿ ವೆಜ್ ಮೊಮೊ ಹುಡುಕಿ ತಿನ್ನುವ ಮಜವೇ ಬೇರೆ! 

೧೩. ಜಪಾನೀಸ್ ಪೀಸ್ ಪಗೋಡ 


೧೪.  ಪ್ರವಾಸದ ನಮ್ಮ ತಂಡ 

೧೫. ಹರಡಿದ ಹತ್ತಿಯ ಉಂಡೆಗಳಂತೆ ಮೇಘಗಳು..!



೧೬. ಕೆಲವು ಮಳೆಯಲ್ಲಿ ನೆಂದ ನೆಲಗಳು, ಕೆಲವು ಬಿಸಿಲೇ ಕಾಣದ ನೆಲಗಳು..!





೧೭. ಕರ್ನಾಟಕದ ದಸರಾ ನೇಪಾಳಿಗರ ದಶೈನ್ ಹಬ್ಬ. ಒಂಭತ್ತು ದಿನಗಳ ನವರಾತ್ರಿಯ ಜೊತೆಗೆ, ಹತ್ತನೇ ದಿನದ ವಿಜಯದಶಮಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ. ಹಬ್ಬಗಳೆಲ್ಲ ಒಂದೇ ಆದರೂ ಆಚರಣೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಅದೆಷ್ಟು ವಿಭಿನ್ನ ಮತ್ತು ವೈವಿಧ್ಯಮಯ. ನವರಾತ್ರಿ ಕೊನೆಯಲ್ಲಿ ದಾರ್ಜೀಲಿಂಗ್ನಲ್ಲಿದ್ದೆವು. ಬಾಗ್ದೋಗ್ರಾ ಏರ್ಪೋರ್ಟ್ ನಿಂದ ಹೊರಟ ಲಾಗಾಯ್ತು ಒಂದು ವಿಶೇಷತೆ ಗಮನಿಸಿದ್ದೆವು.ಅನೇಕ ಜನರ ಹಣೆಯ ಮೇಲೆ ಕೆಂಪು ಬಣ್ಣದ ಅಕ್ಕಿಯನ್ನು 'ಬಳಿದು'ಕೊಂಡಿದ್ದರು. ಸಣ್ಣಕೆ ಹಚ್ಚಿಕೊಂಡ ಕುಂಕಿ ಅಲ್ಲ ಅದು, ಕೆಲವರ ಹಣೆಯ ಮೇಲೆ ದೊಡ್ಡ ರೌಂಡ್ ಇದ್ದರೆ, ಇನ್ನು ಕೆಲವರು ಇಡೀ ಹಣೆಯ ತುಂಬಾ ಈ ಕೆಂಪು ಅಕ್ಕಿಯನ್ನು ಬಳಿದುಕೊಂಡಿದ್ದರು. ಅದು ದಶೈನ್ ಹಬ್ಬ ನಡೆಯುತ್ತಿದೆಯಲ್ಲ ಅದಕ್ಕಾಗಿ ನಾವು 'ಟೀಕಾ' ಹಾಕಿಕೊಳ್ಳುತ್ತೇವೆ ಎಂದ ಡ್ರೈವರಣ್ಣ. ವಿಜಯದಶಮಿಯ ದಿನವಂತೂ ಬೆಳಿಗ್ಗೆ ವಾಕ್ ಹೋದಾಗ ಸಾಕಷ್ಟು ಜನರ ಹಣೆಯಲ್ಲಿ ಈ ಸುಂದರ ದೊಡ್ಡ 'ಟೀಕಾ' ರಾರಾಜಿಸುತ್ತಿತ್ತು. ದೇವಸ್ಥಾನದಿಂದ ಬರುತ್ತಿದ್ದ ಇಬ್ಬರು ಮಹಿಳೆಯರನ್ನು ಮಾತನಾಡಿಸಿದಾಗ ಅಲ್ಲಿನ ಆಚರಣೆಯ ಕುರಿತು ಕೇಳಿ ಭಾರೀ ಖುಷಿಯಾಯಿತು. 

ವಿಜಯದಶಮಿ ಇಲ್ಲಿನವರ ಅದರಲ್ಲೂ ನೇಪಾಳಿಗರಿಗೆ ದೊಡ್ಡ ಹಬ್ಬವೆಂದೇ ಹೇಳಬಹುದು. ಅಂದು ಬೇಗನೆ ಎದ್ದು ಸ್ನಾನ ಮಾಡಿ ಪೂಜೆ ಮಾಡಿ, ಈ 'ಟೀಕಾ' ಎಂದು ಏನು ತಿಳಿಸಿದೆನೋ, ಇದನ್ನು ತಯಾರಿಸುತ್ತಾರೆ. ಇದನ್ನು 'ಅಕ್ಕಿ, ಮೊಸರು ಮತ್ತು ಸಿಂಧೂರ' ಸೇರಿಸಿ ಕಲಸಿ ತಯಾರಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೆಂಪು ಬಣ್ಣದ ಹೊರತಾಗಿ,  ಗುಲಾಬ್ ಪಕಳೆಯಿಂದ ತಯಾರಿಸಿದ ಗುಲಾಬಿ ಬಣ್ಣವನ್ನು ಮಾರುಕಟ್ಟೆಯಿಂದ ತಂದು ಕೂಡ ಮಾಡುತ್ತಾರೆ ಎಂದು ಮತ್ತೊಂದು ಮಹಿಳೆ ಧ್ವನಿಗೂಡಿಸಿದರು. ಇಂದಿನ ದಿನ ಮನೆ ಮಂದಿಯೆಲ್ಲ ಸೇರಿಕೊಂಡು, ಪೂಜೆ ಇತ್ಯಾದಿ ಪೂರೈಸಿ, ಮನೆಯ ಹಿರಿಯರು, ತಮಗಿಂತ ಕಿರಿಯರಿಗೆ ಈ 'ಟೀಕಾ' ಹಣೆಗೆ ಹಚ್ಚಿ, ಅವರಿಗೆ ಒಳ್ಳೆಯದಾಗುವಂತೆ ಮನಸಾರೆ ಆಶೀರ್ವದಿಸುತ್ತಾರಂತೆ. ಈ 'ಟೀಕಾ' ದ ಜೊತೆಗೆ,  'ಜಮರ' ಎಂಬ ಹುಲ್ಲನ್ನು ಪ್ರಸಾದವಾಗಿ ನೀಡುತ್ತಾರೆ.  ( ಹುಲ್ಲು) ನವರಾತ್ರಿಯ ಪ್ರಾರಂಭದ ದಿನದಿಂದಲೇ ಮನೆಯಲ್ಲಿ ಬಾರ್ಲಿ, ಗೋಧಿ, ಅಕ್ಕಿ, ಜೋಳ ಇತ್ಯಾದಿ ಧಾನ್ಯಗಳ ಮಣ್ಣಿಗೆ ಹಾಕಿ, ಈ ಹುಲ್ಲನ್ನು ಬೆಳೆಸುತ್ತಾರಂತೆ. ವೈಜ್ಞಾನಿಕ ಕಾರಣ ಏನಿದೆಯೋ ತಿಳಿಯದು ಆದರೆ ಮನೆ ಮಂದಿಯೆಲ್ಲ ಒಟ್ಟು ಸೇರಿ ಈ 'ಟೀಕಾ' ಹಚ್ಚುವ ಕಾರ್ಯಕ್ರಮ ಮಾತ್ರ ಅತ್ಯಂತ ಅತೀಯತೆಯಿಂದ ಕೂಡಿರುತ್ತದೆಯಂತೆ. ಅನೇಕ ದೇವಸ್ಥಾನಗಳಲ್ಲಿ ಈ ದಶೈನ್ ಹಬ್ಬದ ಸಮಯದಲ್ಲಿ, ದೇವಸ್ಥಾನದ ಪ್ರಾಂಗಣದಲ್ಲೇ 'ಜಮರ' ಹುಲ್ಲನ್ನು ಬೆಳೆಸಿ, ಬಂದವರಿಗೆಲ್ಲ ಟೀಕಾ ಹಚ್ಚಿ ಪ್ರಸಾದ ನೀಡಿ ಕಳಿಸುತ್ತಾರೆ. ಎಂತೆಂತ ಆಧುನಿಕ ವೆಸ್ಟೆರ್ನ್ ಡ್ರೆಸ್ ಹಾಕಿದವರೂ, ಫಾರ್ಮಲ್ ಡ್ರೆಸ್ಸಿನಲ್ಲಿರುವವರೂ ಕೂಡ ಅಂದು ಹಣೆ ತುಂಬಾ ದೊಡ್ಡ ಟೀಕಾ ಹಾಕಿಕೊಂಡು ಓಡಾಡುತ್ತಿರುವುದನ್ನು ನೋಡಲೇ ಒಂದು ರೀತಿಯ ಖುಷಿಯಾಗುತ್ತಿತ್ತು. ಒಂದು ಸಮಯದಲ್ಲಿ, ಯಾವುದೋ  ಮಾತಿನ ಮಧ್ಯೆ, ನಮ್ಮನ್ನು ಅಂದು ಸೈಟ್ಸೈ ಸೀಯಿಂಗ್ಗೆ ಕರೆದೊಯ್ಯುತ್ತಿದ್ದ ಸೈಯಮ್,  "ನಾವು ಈ ಟೂರಿಸ್ಟ್ ಸೀಸನ್ನಿನಲ್ಲಿ, ಮನೆಯಲ್ಲಿ ಹಬ್ಬ ಬಿಟ್ಟು ಬರುತ್ತೇವೆ, ಇಂದು ಯಾರೂ ಇಲ್ಲ ಎಂದು ನಾನು ಬಂದದ್ದು ಇಲ್ಲವಾದರೆ ನಮ್ಮ ಕುಟುಂಬದ ಜೊತೆ ಹಬ್ಬ ಮಾಡುತ್ತಿರುತ್ತಿದ್ದೆ.." ಎಂದುಹೇಳಿದ್ದನ್ನು ಕೇಳುವಾಗ, ಈ ಹಬ್ಬಗಳು ಅದೆಷ್ಟು ಆತ್ಮೀಯತೆ ಮತ್ತು ಒಗ್ಗಟ್ಟನ್ನು ತರುತ್ತದೆ ಎಂದು ಖುಷಿಯಾಯಿತು. ವಿಜಯದಶಮಿಯ ದಿನ ಸಂಜೆ, 'ಮಹಾಕಾಲ' ದೇವಸ್ಥಾನಕ್ಕೆ ಭೇಟಿಯಿತ್ತಾಗ, ಅಲ್ಲಿ ನಮಗೂ ಆ ಕೆಂಪನೆಯ ಅಕ್ಕಿಯ 'ಟೀಕಾ' ಸಿಕ್ಕಿದ್ದು ಮತ್ತಷ್ಟು ಖುಷಿ :) :)