ಭಾನುವಾರ, ನವೆಂಬರ್ 1, 2020

ನಮ್ಮ ಭಾಷೆ ಕನ್ನಡ - ಅಕ್ಷರಕ್ಕೊಂದು ಗಾದೆ ಮಾತು

ನಮ್ಮ ಭಾಷೆ ನಮ್ಮ ಹೆಮ್ಮೆ..

ಈ ಕನ್ನಡ ರಾಜ್ಯೋತ್ಸವದ ವಿಶೇಷ ದಿನವನ್ನು ನನ್ನಿಷ್ಟದ ಕಲೆಯ ಮೂಲಕ ಸಂಭ್ರಮಿಸೋಣ ಎಂಬ ಇಚ್ಛೆಯಿಂದ ಕಳೆದ ೫೯ ದಿನಗಳಿಂದ ದಿನಕ್ಕೊಂದರಂತೆ ಕನ್ನಡದ ಅಕ್ಷರಗಳನ್ನು ಚಿತ್ರಿಸಿ ಹಂಚಿಕೊಳ್ಳುತ್ತಿದ್ದಲಿದ್ದೆ.ಕನ್ನಡ ಮಾತನಾಡುವ ಜೊತೆಜೊತೆಯಲ್ಲೇ, ಗಾದೆಮಾತುಗಳ ಬಳಕೆ ನಮ್ಮ ನುಡಿಯನ್ನು ಪುಷ್ಟಿಗೊಳಿಸುತ್ತದೆ. ಹಾಗಾಗಿ ನಾನು ಬರೆಯುವ ಅಕ್ಷರಕ್ಕೆ ನಿಮಗೆ ತಿಳಿದ ಗಾದೆಮಾತುಗಳನ್ನು ಹಂಚಿಕೊಳ್ಳಿ ಎಂದು ಸ್ನೇಹಿತರಲ್ಲಿಯೂ ವಿನಂತಿಸಿದ್ದೆ. ಕಲ್ಪನೆಗೂ ಮೀರಿ ಬಂದ ಪ್ರತಿಕ್ರಿಯೆ ನನ್ನನ್ನು ಇನ್ನಷ್ಟು ಮತ್ತಷ್ಟು ಚಿತ್ರಗಳನ್ನು ರಚಿಸಲು ಹುರುಪು ನೀಡಿತ್ತು. ನಾನು ರಚಿಸಿದ ಕನ್ನಡ ಅಂಕಾಕ್ಷರಗಳು ಮತ್ತು ಅವುಗಳಿಗೆ ಪೂರಕವಾದ ಗಾದೆಮಾತುಗಳು ನಿಮ್ಮ ಮುಂದಿಡುತ್ತಿದ್ದೇನೆ. ಎಲ್ಲರ ಬೆಂಬಲ ಮತ್ತು ಭಾಗವಹಿಸುವಿಕೆಗೆ ನಾನು ಕೃತಜ್ಞಳು. ಮತ್ತೊಮ್ಮೆ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ, ಶುಭಾಶಯಗಳು 

#ಸಿರಿಗನ್ನಡಂಗೆಲ್ಗೆ #ಕರ್ನಾಟಕರಾಜ್ಯೋತ್ಸವ 


ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬರಲ್ಲ

ಅತ್ತೆಗೊಂದು ಕಾಲ ಸೊಸೆಗೊಂದು ಕಾಲ.

ಅಲ್ಪನ್ಗೆ ಐಶ್ವರ್ಯ ಬಂದ್ರೆ ಅರ್ಧ ರಾತ್ರಿಲಿ ಕೊಡೆ ಹಿಡಿದನಂತೆ

ಅತಿಯಾಸೆ ಗತಿಗೇಡು

ಅತಿಯಾದರೆ ಅಮೃತವೂ ವಿಷ.

ಅಡ್ಡ ಗೋಡೆ ಮೇಲೆ ದೀಪ ಇತ್ತಂತೆ

ಅಂಚು ಮೆಟ್ಟಿ ಅಡಿ ಮೆಟ್ಟಿ ನಡುಮನೆಗೆ ಕಾಲಿಟ್ಟ ಹಾಗೆ

ಅಜ್ಜಿಗೆ ಅರಿವೆ ಚಿಂತೆ. ಮೊಮ್ಮಗಳಿಗೆ ಮಿಠಾಯಿ ಚಿಂತೆ.

ಅಲ್ಪರ ಸಂಘ ಅಭಿಮಾನ ಭಂಗ

ಅಂಗೈ ಹುಣ್ಣಿಗೆ ಕನ್ನಡಿ ಬೇಕೇ

ಅಜ್ಜ ನೆಟ್ಟ ಆಲದ ಮರಕ್ಕೆ ಜೋತು ಬಿದ್ದಂತೆ.

ಅತ್ತ ದರಿ. ಇತ್ತ ಪುಲಿ.

ಅತ್ತೆ ಮೇಲಿನ ಸಿಟ್ಟು ಕೊತ್ತಿ ಮೇಲೆ.

ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ

ಅತ್ತೆಗೊಂದು ಕಾಲ ಸೊಸೆಗೊಂದು ಕಾಲ

ಅಕ್ಕ ಸತ್ತರೆ ಅಮಾವಾಸ್ಯೆ ನಿಂತಿತೇ??

ಅಳಿವುದೇ ಕಾಯ ಉಳಿವುದೇ ಕೀರ್ತಿ

ಅರ್ಧ ಕಲಿತವನ ಅಬ್ಬರ ಹೆಚ್ಚು

ಅತ್ತೆ ಮನೇಲಿ ಹೇಗಿದ್ಯಾ ಮಗಳೇ ಅಂದ್ರೆ ಚಿಲುಕಕ್ಕೆ ಮೊಳಕೈ ತಗುಲಿದ ಹಾಗೆ ಅಂದಳಂತೆ

ಆಪತ್ತಿಗಾದವನೇ ನೆಂಟ.

ಆಕಳು ಕಪ್ಪಾದರೆ ಹಾಲು ಕಪ್ಪೇ

ಆನೆ ಹೋದಲ್ಲೇ ದಾರಿ ಶೆಟ್ಟಿ ಬಿಟ್ಟಲ್ಲೇ ಪಟ್ಟಣ,

ಆರು ಕಾಸು ಕೊಟ್ರೆ ಅತ್ತೆ ಕಡೆ, ಮೂರು ಕಾಸು ಕೊಟ್ರೆ ಮಾವನ ಕಡೆ

ಆದ್ರೆ ಒಂದು ಅಡಿಕೆ ಮರ, ಹೋದ್ರೆ ಒಂದು ಗೋಟಡಿಕೆ

ಆಯ ನೋಡಿ, ಪಾಯ ಹಾಕು

ಆಟಕ್ಕುಂಟು,ಲೆಕ್ಕಕ್ಕೆ ಇಲ್ಲ

ಆನೆ ಕದ್ದರೂ ಕಳ್ಳ ಅಡಿಕೆ ಕದ್ದರೂ ಕಳ್ಳ

ಆನೆಯ ಭಾರ ಆನೆಗೆ ಇರುವೆಯ ಭಾರ ಇರುವೆಗೆ

ಆತುರಗಾರನಿಗೆ ಬುದ್ದಿ ಮಟ್ಟ

ಆಸೆಯೇ ದುಃಖಕ್ಕೆ ಮೂಲ

ಆಡು ಮುಟ್ಟದ ಸೊಪ್ಪಿಲ್ಲ.

ಆಡು ತಿಂದು ಮೇಕೆ ಬಾಯಿಗೆ ವರಸಿತ್ತಂತೆ.

ಆಳು ಮಾಡಿದ್ದು ಹಾಳು

ಆಡ್ತಾ (ಆಡುತ್ತಾ) ಆಡ್ತಾ ಭಾಷೆ .ಹಾಡ್ತಾ ಹಾಡ್ತಾ ರಾಗ.

ಆಚಾರ್ಯರಿಗೆ ಮಂತ್ರಕ್ಕಿಂತ ಉಗುಳೇ ಜಾಸ್ತಿ

ಆಳಾಗಿ ದುಡಿ ಅರಸಾಗಿ ಉಣ್ಣು

ಆಕಳು ದಾನಕ್ಕೆ ಕೊಟ್ರೆ, ಹಲ್ಲು ಹಿಡಿದು ನೋಡಿದ್ರಂತೆ

ಆಗುವ ವರೆಗೆ ಇದ್ದು, ಆರುವ ವರೆಗೆ ಇರಲಾರರೆ

ಆರಕ್ಕೆ ಹೆಚ್ಚಿಲ್ಲ, ಮೂರಕ್ಕೆ ಕಮ್ಮಿಯಿಲ್ಲ

ಆಗೋ ಪೂಜೆ ಆಗುತ್ತಿರಲಿ ಊದೋ ಶಂಖ ಊದಿ ಬಿಡುವ

ಆಳಾಗದವ ಅರಸನಲ್ಲ, ಹಟ ಹಿಡಿದವ ಸಾಮ್ರಾಟನಲ್ಲ

ಆನೆಯಂಥದೂ ಮುಗ್ಗರಿಸುತ್ತದೆ

ಇದ್ದೋರ್ ಮೂರು ಜನರಲ್ಲಿ ಕದ್ದೋರ್ ಯಾರು?

ಇಬ್ಬರ ಜಗಳ ಮೂರನೆಯವನಿಗೆ ಲಾಭ

ಇತಿತ್ತ ಬಾ ಅಂದ್ರೆ , ಇದ್ದ ಮನೇನೂ ಕಿತ್ತುಕೊಂಡ

ಇಲಿ ಬ೦ತು ಅ೦ದರೆ ಹುಲಿ ಬ೦ತು ಎ೦ದರು

ಇಮ್ಮನದಿಂದ ಸುಮ್ಮನೆ ಕೆಟ್ಟೆ

ಇದ್ದಿದ್ದು ಇದ್ದ ಹಾಂಗೆ ಹೇಳಿರೆ ಎದ್ ಬಂದು ಎದೆಗ್ ಒದ್ರಂತೆ

ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು

ಇದ್ದಲ್ಲೇ ಇರಬೇಕು ಬಿದ್ದಲ್ಲೇ ಹೆಕ್ಕಬೇಕು

ಇರುಳು ಕಂಡ ಬಾವಿಯಲ್ಲಿ ಹಗಲು ಬಿದ್ದಂತೆ

ಇಲಿಯ ವ್ಯಾಜ್ಯಕ್ಕೆ ಬೆಕ್ಕು ಸಾಕ್ಷಿಯಂತೆ

ಈಚಲ ಮರದ ಕೆಳಗೆ ಕುಳಿತು ಮಜ್ಜಿಗೆ ಕುಡಿದ ಹಾಗೆ

ಈರಣ್ಣ ನ ಮುಂದೆ ಬಸ್ಸಣ್ಣ ಕೂತಂತೆ

ಉ೦ಡೂ ಹೋದ, ಕೊ೦ಡೂ ಹೋದ

ಉಂಬಾಗ ಉಡುವಾಗ ಊರೆಲ್ಲ ನೆಂಟರು

ಉಪ್ಪಿಗಿಂತ ರುಚಿ ಇಲ್ಲ. ತಾಯಿಗಿಂತ ಬಂಧುವಿಲ್ಲ

ಉಪಾಯವಿದ್ದಲ್ಲಿ ಅಪಾಯವಿಲ್ಲ

ಉಗಮವಾಗದಿರಲಿ ಹಿಂಸೆ, ಹೆಚ್ಚಿಗೆಯಾಗದಿರಲಿ ಆಸೆ

ಉಪ್ಪು ತಿಂದ ಮನೆಗೆ ಎರಡು ಬಗೆಯಬೇಡ

ಉಂಬೋಕೆ ಉಡೋಕೆ ಅಣ್ಣಪ್ಪ ಕೆಲಸಕ್ಕಷ್ಟೇ ಇಲ್ಲಪ್ಪ

ಉಣ್ಣೋಕಿಲ್ಲದಿದ್ದರೂ ಸಣ್ಣಕ್ಕಿ ಅನ್ನ ತಿಂದರು ; ಉಡೋಕಿಲ್ಲದಿದ್ದರೂ ಪಟ್ಟೆ ಸೀರೆ ಉಟ್ಟರು

ಉಪಕಾರಕ್ಕೋಗಿ ಉಪದ್ರ ಬಂತು

ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು

ಉಡ ಹೊಕ್ಕ ಮನೆ ಹಾಳು

ಉಟ್ರೆ ತೊಟ್ರೆ ಪುಟ್ಟಕ್ಕ ಚಂದ.

ಉರಿಯೋ ಬೆಂಕಿಗೆ ತುಪ್ಪ ಹಾಕಿದಂತೆ.

ಉತ್ತರ ಕುಮಾರನ ಪೌರುಷ ಒಲೆ ಮುಂದೆ.

ಉರಿಯೋ ಮನೆ ಬೆಂಕಿ ಲಿ ಗಳ ಹಿರಿದರಂತೆ.

ಉಪಾಯ ಇದ್ರೆ ಅಪಾಯವನ್ನು ಎದುರಿಸಬಹುದು.

ಉದ್ದರಿ ಕೊಟ್ಟು ಶೆಟ್ಟಿ ಕೆಟ್ಟ, ಕಡ ಸಿಕ್ಕು ಬಡವ ಕೆಟ್ಟ

ಉದ್ದುದ್ದ ಮಾತಿನವರ ಮೊಳಕೈ ಮೊಂಡ

ಉಗುರಿನಲ್ಲಿ ಹೋಗೋ ಚಿಗುರಿಗೆ ಕೊಡಲಿ ಏಕೆ?

ಊರಿಗೆ ಉಪಕಾರಿ ಮನೆಗೆ ಮಾರಿ

ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರಂತೆ

ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ

ಊರು ಹೋಗು ಅನ್ನುತ್ತೆ, ಕಾಡು ಬಾ ಬಾ ಅನ್ನುತ್ತೆ

ಊರಿಗೆ ಬಂದವರು ನೀರಿಗೆ ಬಾರದೇ ಇರುತ್ತಾರೆಯೇ ?

ಊಟಕ್ಕೆ ಇಲ್ಲದಿದ್ ಉಪ್ಪಿನಕಾಯಿ ಇದ್ದರೇನು ಬಿಟ್ಟರೇನು

ಊಟಕ್ಕೆ ಮೊದಲು ಉಪ್ಪಿನಕಾಯಿ. ಮಾತಿಗೆ ಮೊದಲು ಗಾದೆ.

ಊರಿಗೆ ಅರಸನದರೂ ತಾಯಿಗೆ ಮಗ

ಊರು ಬಾವಿಗೆ ಬಿದ್ದರೂ, ಊರ ಬಾಯಿಗೆ ಬೀಳಬಾರದು

ಊದದು ಕೊಟ್ಟು ಬಾರ್ಸದು ತಂದಹಂಗೆ

ಊರಿಗೆ ಒಂದು ದಾರಿಯಾದ್ರೆ ಪೋರಂಗೇ ಒಂದು ದಾರಿ

ಊರು ನೋಡಿ ಬಾ ಅಂದರೆ ತೋರಣ ಕಟ್ಟಿ ಬಂದ

ಊಟವಿಲ್ಲದ ಉಪದೇಶಿ ಊರಿಗೆಲ್ಲಾ ನಿವಾಸಿ

ಊಟ ತನ್ನಿಚ್ಚೆ, ನೋಟ ಪರರಿಚ್ಚೆ

ಊರ ದನ ಕಾದು ದೊಡ್ಡ ಬೋರೇಗೌಡ ಅನ್ನಿಸಿಕೊಂಡ

ಊರಿಗೊಬ್ಬಳೇ ಪದ್ಮಾವತಿ

ಊರಿದ್ದಲ್ಲಿ ಒಂದು ಹೊಲಸು ಕೇರಿ

ಊಟಕ್ಕೆ ಬಾರೋ ದಾಸಯ್ಯ ಅಂದ್ರೆ, ನಿಮ್ನನೆನಲ್ಲಿ ಏನಡಿಗೆ ಅಂದಿದ್ನಂತೆ

ಊರಿಗೊಂದು ದಾರಿ ಆದ್ರೆ ಪೋರoಗೆ ಒಂದು ದಾರಿ

ಋಷೀ ಮೂಲ ನದಿ ಮೂಲ ಕೇಳಬಾರದು

ಎಲ್ಲಾ ಬಣ್ಣ ಮಸಿ ನುಂಗಿತು

ಎತ್ತು ಈಯಿತು ಅಂದರೆ ಕೊಟ್ಟಿಗೆಗೆ ಕಟ್ಟು ಅದರಂತೆ

ಎತ್ತು ಏರಿಗೆ ಎಳೆದ್ರೆ ಕೋಣ ನೀರಿಗೆ ಎಳೀತು.

ಎಲ್ಲಾರ ಮನೆ ದೋಸೇನೂ ತೂತೇ

ಎರಡೂ ಕೈ ಸೇರಿದ್ರೆ ಚಪ್ಪಾಳೆ

ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕಿದ್ರಂತೆ

ಎಣ್ಣೆ ಬರುವಾಗ ಗಾಣ ಮುರಿದಂತೆ

ಎಲ್ರದ್ದೂ ಒಂದು ದಾರಿ ಆದ್ರೆ ಎಡವಟ್ಟನ್ಗೆ ಒಂದು ದಾರಿ ಅಂತೆ

ಏನೂ ಇಲ್ಲದವಗೆ ಭಯವಿಲ್ಲ

ಏರಿ ಮ್ಯಾಗಿನ ಪಂಜು ನೀರೊಳಗೆ ಉರಿಯಿತು

ಏರಿದವ ಇಳಿದಾನು

ಏಕಾದಶಿಯ ಮನೆಗೆ ಶಿವರಾತ್ರಿ ಬಂದ ಹಾಗೆ

ಏತಿ ಅಂದರೆ ಪ್ರೇತಿ ಅಂದಂತೆ

ಏಳು ಸುತ್ತು ಓಲೆನ ಏಳೂರಿಂದ ತಂದ್ರಂತೆ

ಐದು ಕುರುಡರು ಆನೆಯನ್ನು ಬಣ್ಣಿಸಿದ ಹಾಗೆ

ಒಗ್ಗಟ್ಟಿನಲ್ಲಿ ಬಲವಿದೆ.

ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು

ಒಲ್ಲದ ಕೆನ್ನೆಯ ಮುತ್ತು ಸಿಹಿಯಲ್ಲ

ಒಂದು ಕಣ್ಣಿಗೆ ಸುಣ್ಣ...ಒಂದು ಕಣ್ಣಿಗೆ ಬೆಣ್ಣೆ.

ಒಲ್ಲೆ ಒಲ್ಲೆ ಅಂದ ಅಳಿಯ ಕಡೆಗೆ ಒರಳು ನೆಕ್ಕಿದನಂತೆ

ಒಂಡಂಬಡಿಕೆಯಿಂದ ಆಗದ್ದು ದಡಂಬಡಿಕೆಯಿಂದ ಆದೀತೇ?

ಒನಕೆ ಮುಂಡು ಚಿಗುರಿದಂತೆ

ಒಂದಕ್ಕೆರಡು ದಂಡ,ಹೆಂಡಕ್ಕೆ ರಾಗಿ ದಂಡ

ಒಂದು ಒಳ್ಳೇ ಮಾತಿಗೆ ಸುಳ್ಳೇ ಪ್ರಧಾನ

ಒಂದು ಹೊತ್ತು ಉಂಡವ ಯೋಗಿ ಎರಡು ಹೊತ್ತು ಉಂಡವ ಭೋಗಿ ಮೂರು ಹೊತ್ತು ಉಂಡವ ರೋಗಿ ನಾಲ್ಕು ಹೊತ್ತು ಉಂಡವನ ಎತ್ತುಕೊಂಡು ಹೋಗಿ

ಒಂದೊಂದು ಕಾಲಕ್ಕೆ ಒಂದೊಂದು ಪರಿ

ಒಂದೊಂದು ಹನಿ ಬಿದ್ದು ನಿಂತಲ್ಲಿ ಮಡುವಾಯ್ತು

ಒಕ್ಕಣ್ಣ ತನಗೆ ಹತ್ತು ಕಣ್ಣು ಅಂತಿದ್ನಂತೆ.

ಒಕ್ಕಣ್ಣನ ರಾಜ್ಯದಲ್ಲಿ ಒಂದು ಕಣ್ಣು ಮುಚ್ಚಿಕೊಂಡು ನಡಿ

ಒಕ್ಕುವುದು ರೈತನ ಗುಣ ನೆಕ್ಕುವುದು ನಾಯಿಯ ಗುಣ

ಒಗ್ಗಟ್ಟಿಲ್ಲದ ಊರಲ್ಲಿ ಒಪ್ಪತ್ತೂ ಇರಬೇಡ.

ಒಗ್ಗಿದರೆ ಮನೆಯಾದರೇನು, ಸ್ಮಶಾನವಾದರೇನು?

ಒಣ ಮಾತು ಒಣಗಿದ ಹುಲ್ಲು, ಒಳ್ಳೆಯ ಮಾತು ಬೆಳ್ಳಗಿನ ಹಾಲು

ಒಲೆಯಮೇಲೆ ಇಟ್ಟಾಗ ಉಕ್ಕಿದಂತೆ ಹಾಲು, ಒಗ್ಗಟ್ಟಿಲ್ಲದ ಮನೆ ಬೀದಿಪಾಲು.

ಓದಿ ಓದಿ ಮರುಳಾದ ಕೂಚುಭಟ್ಟ

ಓದು ಒಕ್ಕಲು, ಬುದ್ಧಿ ಮುಕ್ಕಾಲು

ಓಡಿ ಹೋಗೊಳು ಮೊಸರಿಗೆ ಹೆಪ್ಪು ಹಾಕ್ತಾಳ

ಓಲೆ ಆಸೆಗೆ ಬೆಕ್ಕು ಮೂಗುತಿ ಕಳಕೊಂಡಿತು

ಓಲೆ ಮಾಡ್ಸೋಕೆ ಸಾಲಮಾಡಿದ, ಸಾಲ ತೀರ್ಸೊಕೆ ಮನೆ ಮಾರಿದ

ಓತಿಕ್ಯಾತಕ್ಕೆ ಬೇಲಿ ಗೂಟವೇ ಸಾಕ್ಷಿ

ಓಡಿದವನಿಗೆ ಓಣಿ ಕಾಣಲಿಲ್ಲ, ಹಾಡಿದವನಿಗೆ ಹಾದಿ ಕಾಣಲಿಲ್ಲ.

ಓದೋದು ಕಾಶಿಕೆಂಡ, ತಿನ್ನೋದು ಮಸಿಕೆಂಡ.

ಓದಿದ ಓದೆಲ್ಲ ಮೇದ ಕಬ್ಬಿನ ಹಿಪ್ಪೆ, ಓದಿದರ ಅರಿವು ಮೇದ ಕಬ್ಬಿನ ರಸ

ಓದುವಾಗ ಓದು; ಆಡುವಾಗ ಆಡು

ಔಷಧವಿಲ್ಲದ ಸಸ್ಯವಿಲ್ಲ

ಔತಣಕ್ಕೆ ಕರೆದಾಗ ಹೊಟ್ಟೆನೋವು ಅಂದ್ನಂತೆ

ಅಂತೂ ಇಂತೂ ಕುಂತೀ ಮಕ್ಳಿಗೆ ರಾಜ್ಯ ಇಲ್ಲ.

ಅಂಗೈ ಹುಣ್ಣಿಗೆ ಕನ್ನಡಿ ಬೇಕೇ?

ಕೆಲಸ ಇಲ್ಲದ ಬಡಗಿ ಮಗನ ಅಂಡು ಕೆತ್ತಿದನಂತೆ.

ಕೊಟ್ಟಿದ್ದು ತನಗೆ ಬಚ್ಚಿಟ್ಟದ್ದು ಪರರಿಗೆ

ಕಬ್ಬು ಡೊಂಕಾ ದರೆ ಸಿಹಿ ಡೊಂಕೇ??

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ

ಕೂತು ತಿಂದರೆ ಕುಡಿಕೆ ಹೊನ್ನು ಸಾಲದು

ಕದ್ದ ರೊಟ್ಟಿಗೆ ಮ್ಯಾಲೆ ತುಪ್ಪ ಬೇರೆ ಕೇಡು

ಕಳ್ಳನ ಮನಸು ಹುಳ್ಳಗೆ.

ಕೈ ಕೆಸರಾದರೆ ಬಾಯಿ ಮೊಸರು.

ಕುಂಬಾರನ ಮಗಳು ಲಾಭ ಬಂದ ಹೊರತು ಮಡಿಕೆ ಒಡೆಯುವುದಿಲ್ಲ.

ಕೀಟ ಸಣ್ಣದಾದರೂ ಕಾಟ ಬಹಳ.

ಕಾಗೆಗೆ ಯಜಮಾನನ ಸ್ಥಾನ ಕೊಟ್ಟರೆ ಮನೆ ತುಂಬಾ ಪಿಷ್ಟ.

ಕಿಡಿ ಸಣ್ಣದಾದರೂ ಕಾಡೆಲ್ಲವನ್ನು ಸುಡುತ್ತದೆ.

ಕೃತಿ ಇಲ್ಲದ ಮಾತು ಕಸ ಬೆಳೆದ ತೋಟವಿದ್ದಂತೆ.

ಕಾರ್ಯವಾಸಿಗೆ ಕತ್ತೆ ಕಾಲು ಕಟ್ಟು.

ಕುಂಬಾರಂಗೆ ವರುಷ, ದೊಣ್ಣೆಗೆ ನಿಮಿಷ

ಕಣ್ಣಿಗೂ ಮೂಗಿಗೂ ಮೂರು ಗಾವುದ.

ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ

ಕಳ್ಳನನ್ನ ನಂಬಿದರೂ ಕುಳ್ಳನನ್ನ ನಂಬಬಾರದು.

ಕೋತಿ ತಾನು ಕೆಡೋದಲ್ದೆ ವನನೆಲ್ಲ ಕೆಡಿಸಿತಂತೆ

ಕೋತಿ ಮೊಸರು ತಿಂದು ಆಡು ಬಾಯಿಗೆ ವರ್ಸ್ಥಂತೆ

ಕುಂಬಳಕಾಯಿ ಕಳ್ಳ ಅಂದ್ರ ಹೆಗಲು ಮುಟ್ಟಿ ನೋಡಿಕೊಂಡ

ಕುಣಿಲಾರದವಳು ನೆಲ ಡೊಂಕು ಅಂದಳಂತೆ

ಕಳ್ಳನಿಗೊಂದು ಪಿಳ್ಳೆ ನೆವ

ಕಳ್ಳತನಕ್ಕೋಗಿ ಕೆಮ್ಮಿದಂಗೆ

ಕಷ್ಟ ಪಟ್ಟರೆ ಫಲವುಂಟು

ಕಂತೆ ಗೆ ತಕ್ಕ ಬೊಂತೆ

ಕೆಟ್ಟು ಪಟ್ಟಣ ಸೇರು

ಕುರುಡನಿಗೆ ಒಂದು ಚೇಷ್ಟೆ ಆದ್ರೆ ಕುಂಟ ನಿಗೆ ನಾನಾ ಚೇಷ್ಟೆ

ಕೈಲಿಯಾಗದವ ಮೈ ಪರಚಕೊಂಡ

ಕತ್ತೆ ಗೆ ಏನು ಗೊತ್ತು ಕಸ್ತೂರಿ ಸುಗಂಧ

ಕಂಡಿದ್ದು ಹೇಳಿದ್ರೆ ಕೆಂಡದಂತ ಕೋಪ ..

ಕಾಮಾಲೆ ಕಣ್ಣಿಗೆ ಕಂಡದ್ದೆಲ್ಲ ಹಳದಿ

ಕೆಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟಿತ್ತಂತೆ

ಖಡ್ಗಕ್ಕಿಂತ ಲೇಖನಿ ಹರಿತ

ಖಾರ ಅರೆಯುವವನ ಮಾತೂ ಖಾರ

ಖಂಡಿತ ವಾದಿ,ಲೋಕ ವಿರೋಧಿ

ಖೀರು ಕುಡಿದವ ಓಡಿಹೋದ, ನೀರು ಕುಡಿದವ ಸಿಕ್ಕಿಬಿದ್ದ

ಗಾಳಿ ಬಂದಾಗ ತೂರಿಕೊ

ಗಂಡಿಸಿಗೆ ಯಾಕೆ ಗೌರಿ ದುಃಖ

ಗಂಡ ಹಂಡತಿ ಜಗಳ ಉಂಡು ಮಲಗೋ ತನಕ

ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡ ವಾಯಿತು

ಗಂಟೂ ಹೋಯ್ತು ನಂಟೂ ಹೋಯ್ತು.

ಗಂಡ ಸರಿಯಿದ್ರೆ ಗುಂಡೂ ಪಾವನ.

ಗಂಡನಿಗೆ ಹೊರಸು ಆಗದು , ಹೆಂಡತಿಗೆ ನೆಲ ಆಗದು

ಗಂಧ ಹೆಚ್ಚಾಯ್ತು ಅಂತ ಎಲ್ಲೆಲ್ಲಿಗೂ ಬಳಿದುಕೊಂಡರಂತೆ

ಗಂಧದ ಮರವನ್ನು ಸುಟ್ಟು ಬೂದಿಯ ತಂದು ಪೂಸಿದ

ಗಡ ಪಟ್ಟೆ ಸೀರೆ ತರುತ್ತಾನೆದು ಇದ್ದ ಬಟ್ಟೆ ಸುಟ್ಟಳಂತೆ.

ಗಡ್ಡಕ್ಕೆ ಬೇರೆ ಸೀಗೇಕಾಯಿ

ಗಳಕ್ಕನೇ ಉಂಡವ ರೋಗಿ , ಘಳಿಗೆ ಉಂಡವ ಭೋಗಿ

ಗಾಣವಾಡದೆ ಎಣ್ಣೆ ಬಂದೀತೇ?

ಗಾಣಿಗಿತ್ತಿ ಅಯ್ಯೋ ಅಂದರೆ ನೆತ್ತಿ ತಂಪಾದೀತೇ?

ಗುರುಕೊಟ್ಟ ಜೋಳಿಗೆ ಅಂತ ಗೂಟಕ್ಕೆ ಹಾಕಿದರೆ ಊಟ ಹಾಕೀತೆ?

ಗುಡಿಸಿದ ಮೇಲೆ ಕಸವಿರಬಾರದು ಬಡಿಸಿದ ಮೇಲೆ ಹಸಿವಿರಬಾರದು.

ಗಂಜಿ ಕುಡಿಯುವವನಿಗೇ ಮೀಸೆ ಹಿಡಿಯುವವರು ಇಬ್ಬರು

ಗಿಡುಗನ ಕೈಯಲ್ಲಿ ಗಿಣಿ ಕೊಟ್ಟ ಹಾಗೆ

ಗಂಡಂಗೆ ಬ್ಯಾಡದೆ ಇದ್ದ ಹೆಂಡತಿಗುಂಡಕಲ್ಲಿಗಿಂತ ಕಡೆ

ಗುಂಡ ಮದುವೆ ಆಗೋ ಅಂದ್ರೆ ನೀನೇ ನನ್ನ ಹೆಂಡತಿಯಾಗು ಅಂದನಂತೆ

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?

ಗಾಜಿನ ಮನೆಯಲ್ಲಿ ಇರುವವರು ಇತರರಿಗೆ ಕಲ್ಲು ಹೊಡೆದಂತೆ.

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ

ಗಾಣಿಗಿತ್ತಿ ಅಯ್ಯೋ ಅಂದರೆ ನೆತ್ತಿ ತಂಪಾ ಆಗುತ್ತ

ಗುಣ ನೋಡಿ ಗೆಳೆತನ ಮಾಡು

ಘಟಾ (ದೇಹ ) ಇದ್ದರೆ ಮಠಾ ಕಟ್ಟಿಸಬಹುದು.

ಘಳಿಗೆ ಮಾರಿದರೆ ಗದ್ಯಾಣ ಕಡಿಮೆ

ಘಟ್ಟ ಏರಿದವ ಅಟ್ಟ ಏರನೇ?

ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ದೆ

ಚರ್ಮ ಸುಕ್ಕಾದ್ರೆ ಮುಪ್ಪು, ಕರ್ಮ ಮುಕ್ಕಾದ್ರೆ ಮುಕ್ತಿ

ಚೇಳಿಗೆ ಪಾರುಪತ್ಯ ಕೊಟ್ಟರೆ , ಮನೆಯವರಿಗೆಲ್ಲಾ ಮುಟ್ಟಿಸಿತಂತೆ.

ಚರ್ಮ ಹೋದರೂ ಪರವಾಗಿಲ್ಲ,ಕಾಸು ಹೋಗಬಾರದು ಎಂದಂತೆ.

ಚಿತ್ತದ ಕಳವಳ ನಿಲ್ಲಿಸಿದವರೇ ಉತ್ತಮರು

ಚಿತ್ತಾ ಮಳೆ ವಿಚಿತ್ರ ಬೆಳೆ!

ಚಿತ್ತಾರದ ಅಂದವನ್ನು ಮಸಿ ನುಂಗಿತು

ಚಿನ್ನದ ಸೂಜಿ ಅಂತ ಕಣ್ಣು ಚುಚ್ಚಿಕೊಂಡಾರೆ?

ಚೆಲ್ಲಿದ ಹಾಲಿಗೆ ಅತ್ತುಪ್ರಯೋಜನವಿಲ್ಲ

ಚೌಲದಾಗ ದೌಲು ಮಾಡು

ಚಾತುರ್ಯ ಬಲ್ಲವನಿಗೆ ಚಾಚೂ ಚಿಂತಿಲ್ಲ.

ಛತ್ರದಲ್ಲಿ ಊಟ ಮಠದಲ್ಲಿ ನಿದ್ರೆ

ಛತ್ರಿ ಸಿಡಿಲಿಗೆ ಅಡ್ಡವಾದೀತೇ?

ಛೀ ಅಂದರೆ ನನ್ನ ಭಲಾ ಅಂದರು ಅಂದಂತೆ

ಛಲವಿಲ್ಲದ ಹೆಂಡ್ತಿ ಕಟ್ಕೊಂಡ್ರೆ ಕಷ್ಟಬಿಟ್ರೆ ಅವಮಾನ.

ಜನ ಮಳ್ಳೊ ಜಾತ್ರೆ ಮಳ್ಳೊ

ಜಟ್ಟಿ ನೆಲಕ್ ಬಿದ್ದರೂ ಮೀಸೆ ಮಣ್ಣಾಜಿಲ್ಲೆ

ಜಾಣನಿಗೆ ಮಾತಿನ ಪೆಟ್ಟಾದರೆ..ದಡ್ಡನಿಗೆ ದೊಣ್ಣೆ ಯ ಪೆಟ್ಟು

ಜನಕ್ಕಂಜದಿದ್ದರೂ ಮನಕ್ಕಂಜಬೇಕು

ಜಲ ಶೋಧಿಸಿ ನೀರು ತರ್ಬೇಕು, ಕುಲ ಶೋಧಿಸಿ ಹೆಣ್ಣು ತರ್ಬೇಕು

ಜೀವ ಜೀವವ ತಿಂದು ಜೀವಿಸುತಿದೆ ಜಗವೆಲ್ಲ

ಜಾರುವುದು ತಪ್ಪಿದರೆ ಏರುವುದು ಸಾಧ್ಯ.

ಜೋಡಿದ್ದರೆ ನಾಡು ತಿರುಗಬಹುದು.

ಜ್ಞಾನಿ ಬಂದರೆ ಗೌರವಿಸು, ಹೀನ ಬಂದರೆ ತ್ಯಜಿಸು.

ಜ್ಯೋತಿಯ ನೆಲೆ ಅರಿತವನೇ ಯೋಗಿ

ಜಪ-ತಪ ಉಪವಾಸ ಇದ್ದರೆ ಅಂತಕನ ವಿಪರೀತ ತಪ್ಪೀತೆ

ಝಣಝಣ ಹಣವ ಕಂಡರೆ ಹೆಣವೂ ಬಾಯ್ಬಿಡುವುದಂತೆ!

ಟೊಳ್ಳು ಮಾತು ಸುಳ್ಳಿಗಿಂತ ಕಡೆ.

ಟೊಣಪೆ ಶಾಸ್ತ್ರಕ್ಕೆ ಹೆಣಗುವುದೇ ಅರ್ಥ

ಠಕ್ಕು ಇರುವವನಿಗೆ ಠಿಕಾಣಿ ಸಿಗದು

ಡಾವರ ಹತ್ತಿದಾಗ ದೇವರ ಧ್ಯಾನ

ತುಂಬಿದ ಕೊಡ ತುಳುಕುವುದಿಲ್ಲ

ತಾಳಿದವನು ಬಾಳಿಯಾನು.

ತಾ ಕಳ್ಳ..ಪರರ ನಂಬ..

ತಾಯಿಗಿಂತ ದೇವರಿಲ್ಲ ಉಪ್ಪಿಗಿಂತ ರುಚಿಯಿಲ್ಲ

ತಾಯಿ ಮಾಡಿದ ಹೊಟ್ಟೆ ಊರು ಮಾಡಿದ ಕೊಳಗ

ತಾಯಿ ಕಂಡರೆ ತಲೆ ಬೇನೆ

ತಾನು ಕೆಟ್ಟರೂ ತವರು ಕೆಡಬಾರದು.

ತಲೆ ಗಟ್ಟಿ ಇದ್ದು ಹೇಳಿ ಬಂಡೆಗೆ ಜಪ್ಪಿದ್ನಡ

ತನುವರಿಯದ ನೋವಿಲ್ಲ ಮನವರಿಯದ ತಾಪವಿಲ್ಲ

ತನ್ನೂರಲಿ ರಂಗ, ಪರೂರಲಿ ಮಂಗ

ತಟ್ಟನೆ ಆಡಿದರೆ ಕೊಟ್ಟಷ್ಟು ಫಲ

ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ತೂಗಬಲ್ಲುದು

ತಾನು ಮಾಡಿದ್ದು ಉತ್ತಮ,ಮಗ ಮಾಡಿದ್ದು ಮಧ್ಯಮ, ಆಳು ಮಾಡಿದ್ದು ಹಾಳು

ತಣ್ಣೀರಾದ್ರೂ..ತಣಿಸಿ ಕುಡಿ..

ತಾ ಕಳ್ಳ ಪರರ ನಂಬ..

ತಾಯಿಯಂತೆ ಮಗಳು ನೂಲಿನಂತೆ ಸೀರೆ

ತಂಬಿಗೆ ಬಿಟ್ಟು ಥಾಲಿ ತಂದರು ಗುಮ್ಮೋದು ಕೊಟ್ಟು ಒದೆಯೋದು ತಂದರು

ತೀರ್ಥ ತೆಗೆದುಕೊಂಡರೆ ಥಂಡಿ (ಶೀತ), ಪ್ರಸಾದ ತಿಂದರೆ ಅಜೀರ್ಣ, ಮಂಗಲಾರತಿ ತೆಗೆದುಕೊಂಡರೆ ಉಷ್ಣ.

ದಾನಕ್ಕೆ ಎತ್ತು ಕೊಟ್ರೆ ಹಲ್ಲು ಎಣಿಸಿ ನೋಡಿದ್ನಂತೆ.

ದುಡ್ಡಿದ್ದೊನೆ ದೊಡ್ಡಪ್ಪ.

ದೂರದ ಬೆಟ್ಟ ನುಣ್ಣಗೆ.

ದುಡದ್ದು ಉಣ್ತೀಯೋ.. ಪಡದ್ದು ಉಣ್ತೀಯೊ.

ದೇವರು ವರ ಕೊಟ್ಟರು ಪೂಜಾರಿ ವರ ಕೊಡೆಬೇಕಲ್ಲ

ದಾರಿಲಿ ಹೋಪ ಮಾರಿ ಮನೆಗ್ ಕರ್ದು ಕೂಡ್ರಸಿದ್ವಡ

ದುಡ್ಡೇ ದೊಡ್ಡಪ್ಪ ಬುದ್ಧಿ ಅದ್ರಪ್ಪ

ದಾಕ್ಷಿಣ್ಯಕ್ ಬಸುರಾದ್ರೆ ನೋವು ತಪ್ಪುತ್ತಾ?

ದೀಪದ ಕೆಳಗೆ ಯಾವತ್ತೂ ಕತ್ತಲೇ

ದಿಟವೇ ಪುಣ್ಯದ ಪುಂಜ ಸಟೆಯೇ ಪಾಪದ ಬೀಜ

ದನ ತಿನ್ನುವವನಿಗೆ ಗೊಬ್ಬರದ ಆಣೆ

ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಿಗೆ ಹೋಗಿ ಮೊಳ ಹಾಕಿದರಂತೆ

ಧರ್ಮಕ್ಕೆ ಕೊಟ್ಟ ಆಕಳ ಹಲ್ಲು ಎಣಿಸಿದರು

ಧೂಳಿ ಧೂಪವಾದೀತೆ, ಮಾಳಿಗೆ ಸ್ವರ್ಗವಾದೀತೆ?

ನೂಲಿನಂತೆ ಸೀರೆ ತಾಯಿಯಂತೆ ಮಗಳು

ನಮ್ಮೂರಲ್ಲಿ ರಂಗ, ಪರವೂರಲ್ಲಿ ಮಂಗ

ನಾರಿ ಮುನಿದರೆ ಮಾರಿ

ನವಿಲು ಕುಣಿತು ಹೇಳಿ ಕೆಂಬೂತ ಕುಣಿಯಲಾಗ್ತಾ?

ನೆಂಟ್ರ ಹೇಳಿಕೆಲಿ ಊಟ..ಮಕ್ಳ ಹೇಳಿಕೆಲಿ ನಿದ್ದೆ

ನೆತ್ತಿ ಮೇಲಿನ ಕತ್ತಿ ಇದ್ದಂಗೆ.

ನಾಳೆ ಎಂದವನ ಮನೆ ಹಾಳು

ನಡೆದಷ್ಟು ನೆಲ, ಪಡೆದಷ್ಟು ಫಲ

ನಿಧಾನವೇ ಪ್ರಧಾನ

ನಾಯಿ ಬೊಗಳಿದರೆ ದೇವಲೋಕ ಹಳಾದೀತೆ

ನಾಚಿಕೆ ಬಿಟ್ಟವ ಊರಿಗೆ ದೊಡ್ಡವ.

ನಾಯಿ ಬಾಲ ನಳಿಕೆಲಿ ಇಪ್ಪಷ್ಟೇ ಹೊತ್ತು

ನಾಯಿ ತಗಂಡೊಗಿ ಸಿಂಹಾಸನದ ಮೇಲೆ ಕುಂಡ್ರಸಿರೂಮೂಳೆ ಕಂಡ್ಕೂಳೆ ಹಾರಬುಡ್ತು

ನೊಣ ತಿಂದು ಜಾತಿ ಕೆಟ್ಟ

ನೀರು ಹತ್ರ ಇರಬೇಕು, ನೆಂಟರು ದೂರ ಇರಬೇಕು

ಪರ ಊರ್ ಸಂಪನ್ನಂಗಿಂತ ಊರ್ ಪಟಿಂಗ ಲೇಸು.

ಪ್ರತ್ಯಕ್ಷ ಕಂಡ್ರೂ ಪ್ರಮಾಣಿಸಿ ನೋಡು

ಪಾಪಿ ಸಮುದ್ರ ಹೊಕ್ರೂ ಮೊಣಕಾಲುದ್ದ ನೀರು

ಪಾಂಡವರು ಪಗಡೆಯಾಡಿ ಕೆಟ್ಟರು, ಹೆಣ್ಣುಮಕ್ಕಳು ಕವಡೆಯಾಡಿ ಕೆಟ್ಟರು

ಪಾಪಿ ಚಿರಾಯು

ಬಡವನ ಸಿಟ್ಟು ದವಡೆಗೆ ಮೂಲ

ಬೂದಿ ಮುಚ್ಚಿದ ಕೆಂಡವಿದ್ದಂತೆ

ಬೀದಿ ಕೂಸು ಬೆಳಿತು, ಕೋಣೆ ಕೂಸು ಕೊಳಿತು

ಬೇಲಿ ಎದ್ದು ಹೊಲ ಮೇಯ್ದಂಗೆ

ಬಾಲ ಸುಟ್ ಬೆಕ್ಕಿನಂಗೆ

ಬಡವ ನೀ ಮಡಗದಂಗಿರು

ಬಾಯಲ್ಲಿ ಬೆಣ್ಣೆ ಬಗಲಲ್ಲಿ ದೊಣ್ಣೆ

ಬಾಯಿದ್ದಂವ ಬರಗಾಲದಲ್ಲೂ‌ ಬದಕ್ತ

ಬಾಯಿ ಬಿಟ್ರೆ ಬಣ್ಣ ಗೇಡು

ಬರಗಾಲದಲ್ಲಿ ಮಗ ಉಂಬ್ದು ಕಲಿತಿದ್ನಡ

ಬಳ್ಳಿಗೆ ಕಾಯಿ ಭಾರವೇ.

ಬೆರಳು ತೋರಿಸಿದರೆ ಹಸ್ತ ನುಂಗೋರ್ ಥರ.

ಬಿದ್ರೆ ಆಳಿಗೊಂದ್ ಕಲ್ಲು.

ಬೆಣ್ಣೆ ಲಿ ಕೂದಲು ತೆಗೆದ ಹಾಗೆ.

ಬೆಟ್ಟ ಅಗೆದು ಇಲಿ ಹಿಡಿದ ಹಾಗೆ

ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದ ಹಾಗೆ

ಬಾವಿ ತೋಡದೆ ನೀರು ಸಿಗದು, ಪ್ರಯತ್ನ ಮಾಡದೆ ಫಲ ಸಿಗದು

ಬಂದದ್ದೆಲ್ಲಾ ಬರಲಿ ಗೋವಿಂದನೊಬ್ಬನ ದಯೆ ಇರಲಿ

ಬೆಳ್ಳಗಿರೋದೆಲ್ಲ ಹಾಲಲ್ಲ ಹೊಳೆಯೋದೆಲ್ಲ ಚಿನ್ನ ಅಲ್ಲ

ಬಕ್ಕಂಗೆ ಬಾರಿ ಮಗಂಗೆ ಮದುವೆ

ಬರಗಾಲದಲ್ಲಿ ಅಧಿಕಮಾಸ.

ಬಡವೆ ಸೀರೆ ಉಡದೆ ಮಾಸಿತು

ಬೆಕ್ಕು ನಮ್ಮನೇದು, ಹಾಲು ಪಕ್ಕದ ಮನೇದು

ಭಾವಿಸಿದರೆ ಬಳಗ, ಕೂಡಿಸಿದರೆ ಕಾಸು

ಭಾರವಾದ ಪಾಪಕ್ಕೆ ಘೋರವಾದ ನರಕ

ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು

ಮಾತು ಆಡಿದರೆ ಹೋಯಿತು..ಮುತ್ತು ಒಡೆದರೆ ಹೋಯಿತು..

ಮಳ್ಳಿ ಮಳ್ಳಿ ಮಂಚಕ್ ಕೆಷ್ಟು ಕಾಲು ಅಂದ್ರೆ..ಮೂರು,ಮತ್ತೊಂದು ಅಂದ್ಲಂತೆ..

ಮಾತು ಬೆಳ್ಳಿ ಮೌನ ಬಂಗಾರ

ಮಾಡಿದುಣ್ಣೊ ಮಹರಾಯ

ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು.

ಮಾಡೋದು ದುರಾಚಾರ, ಮನೆ ಮುಂದೆ ಬೃಂದಾವನ

ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡಿದರಂತೆ

ಮೂರ್ತಿ ಚಿಕ್ಕದಾದ್ರು ಕೀರ್ತಿ ದೊಡ್ಡದು

ಮದುವೆಯಾಗೋ ಗುಂಡ ಅಂದ್ರೆ ನೀನೇ ನನ್ನ ಹೆಂಡ್ತಿ ಅಂದನಂತೆ

ಮನೆಗೆ ಮಾರಿ ಪರರಿಗೆ ಉಪಕಾರಿ

ಮಂತ್ರಕ್ಕೆ ಮಾವಿನಕಾಯಿ ಉದುರಿತೇ

ಮೂರು ಬಿಟ್ಟವ ಊರಿಗೆ ದೊಡ್ಡವ

ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು

ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು.

ಮುಳುಗುತ್ತಿರುವವನಿಗೆ ಹುಲ್ಲು ಕಡ್ಡಿಯೂ ಆಸರೆ

ಮಾತು ಬಲ್ಲವನಿಗೆ ಜಗಳ ವಿಲ್ಲ

ಮಣ್ಣಿನ ಬೆಕ್ಕಾದ್ರೇನು.. ಯಲಿ (ಇಲಿ) ಹಿಡದ್ದೇ ಗೊತ್ತು

ಮೊಸರು ಇಟ್ಟುಕೊಂಡು ಮಜ್ಜಿಗೆಗೆ ಅತ್ತಹಾಗೆ.

ಮೆತ್ತಗಿದ್ದವರನ್ನು ಮೊಣಕೈಯಲ್ಲಿ ಗುದ್ದಿದರು

ಮನೆಯಲ್ಲಿದ್ದರೆ ಲಿಂಗಾಕಾರ, ಹಾದಿ ಹಿಡಿದರೆ ಚಕ್ರಾಕಾರ, ಇಲ್ಲಿಗೂ ಬಂದೆಯಾ ಜಡೆ ಶಂಕರ

ಮುಳ್ಳನ್ನು ಮುಳ್ಳಿನಿಂದಲೇ ತೆಗಿಬೇಕು

ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ

ಯಾರಿಗೆ ಯಾರು ಉಂಟು ಯರವಿನ ಸಂಸಾರ

ಯಾವ ಹುತ್ತದಲ್ಲಿ ಯಾವ ಹಾವು

ಯಥಾ ರಾಜಾ ತಥಾ ಪ್ರಜಾ

ಯೋಗಿ ತಂದಿದ್ದು ಯೋಗಿಗೆ ಭೋಗಿ ತಂದಿದ್ದು ಭೋಗಿಗೆ

ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ.

ಯಜಮಾನಿಲ್ಲದ ಮನೆ ಮೇಟಿ ಇಲ್ಲದ ಕಣದಂತೆ

ಯೋಗಿಗೆ ರಾಗ ಇರಬಾರದು ಭೋಗಿಗೆ ರೋಗ ಇರಬಾರದು

ರಾವಣನ ಹೊಟ್ಟೆಗೆ ಆರು ಕಾಸು ಮಜ್ಜಿಗೆ

ರಾಮೇಶ್ವರಕ್ಕೆ ಹೋದ್ರೂ ಶನೀಶ್ವರನ ಕಾಟ ತಪ್ಪಲ್ಲಿಲ್ಲ

ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ.

ರಾತ್ರಿಯೆಲ್ಲಾ ರಾಮಾಯಣ ಕೇಳಿ, ಬೆಳಗಾಗೆದ್ದು ರಾಮನಿಗೂ ಸೀತೆಗು ಏನು ಸಂಬಂಧ ಅಂದ ಹಾಗೆ..

ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದು ಹಾಲು ಅನ್ನ

ರಾಜ ಇರೋತಂಕ ರಾಣಿಗೆ ವೈಭೋಗ.

ರಾಗಿ ಕಲ್ಲು ತಿರುಗೋವಾಗ ರಾಜ್ಯವೆಲ್ಲ ನೆಂಟರು.

ರಾಯ ಸತ್ತರೂ ಹೆಣ..ನಾಯಿ ಸತ್ತರೂ ಹೆಣ.

ರಾಗ ನೆನೆಪಾದಾಗ ತಾಳ ಮರೆತು ಹೋಯಿತಂತೆ

ರಾವಣನ ಮಾತಿಗೆ ಮನಸೋತವ, ರಾಮನ ಮಾತಿಗೆ ಜಾಣನಾಗುವನೇ?

ರೊಕ್ಕ ಇದ್ರೆ ಗೋಕರ್ಣ, ಸೊಕ್ಕು ಇದ್ರೆ ಯಾಣ

ಲಾಲಕ್ಕೆ ಕುದ್ರೆ ಹುಡುಕಿದ ರಂತೆ

ಲಂಕೆಲಿ ಹುಟ್ಟದವೆಲ್ಲ ರಾವಣರೆಯ

ಲಾಲಿಸಿದರೆ ಮಕ್ಳು ಪೂಜಿಸಿದರೆ ದೇವ್ರು.

ಲೋಕ ತಿಳಿಯಬೇಕು ಲೆಕ್ಕ ಕಲಿಯಬೇಕು

ಲಾಭವಿಲ್ಲದ ವ್ಯಾಪಾರ ಕತ್ತೆ ಮೈ ಪರಚಿದಂಗೆ

ವಿನಾಶ ಕಾಲೇ ವಿಪರೀತ ಬುದ್ಧಿ - ಇದು ಗಾದೆನ ಹೌದ ಗೊತ್ತಿಲ್ಲೆ.

ವ್ಯಕ್ತಿ ಗಿಂತ ವ್ಯಕ್ತಿತ್ವ ದೊಡ್ಡದು

ವಿದ್ಯೆ ಬಲ್ಲವ ಇದ್ದಲ್ಲು ಸಲ್ಲುವ ಹೋಗಿದ್ದಲ್ಲು ಸಲ್ಲುವ

ವ್ಯಾಪಾರಕ್ಕೆ ನಿಮಿಷ ಬೇಸಾಯಕ್ಕೆ ವರುಷ

ವ್ರತ ಕೆಟ್ಟರೂ ಸುಖ ಇರಬೇಕು

ಶಂಖದಿಂದ ಬಂದ್ರೇನೇ ತೀರ್ಥ

ಶೆಟ್ಟಿ ಶೃಂಗಾರ ಆಗೋದರೊಳಗೆ ಪಟ್ಟಣ ಹಾಳಾಯ್ತು

ಶರಣು ಆದವನಿಗೆ ಮರಣವಿಲ್ಲ.

ಶುಭ ನುಡಿಯೋ ಸೋಮ ಅಂದರೆ ಗೂಬೆ ಕಾಣ್ತಲ್ಲೋ ಮಾಮ ಅಂದ ಹಾಗೆ

ಶಾನಭೋಗ್ರ ಮನೆ ಎಮ್ಮೆ ಕಂಡಿದ್ದೆ ಹೇಳಿದ್ದೆ, ತಗಬಂದು ಕೊಟ್ಗೆಲಿ ಕಟ್ಟಲಾಗಿತ್ತು ಅಂದ್ವಡ.

ಶಿವಪೂಜೇಲಿ ಕರಡಿಗೆ ಬಿಟ್ಟ ಹಾಗೆ

ಶೆಟ್ಟಿ ಬಿಟ್ಟಲ್ಲೆ ಪಟ್ಟಣ

ಶಿವರಾತ್ರಿ ಮನೆಗೆ ಏಕಾದಶಿ ಬಂದಂಗೆ

ಶಕ್ತಿಗಿಂತ ಯುಕ್ತಿ ಮೇಲು

ಸುಳಿಲಾರದವಳು ಅಂಗಳ ಡೊಂಕು ಅಂದ್ಳಂತೆ.

ಸೇರಿಗೆ ಸವ್ವಾಸೇರು.

ಸತ್ತ ಎಮ್ಮೆಗೆ ಅಚ್ಚೇರು ಹಾಲು.

ಸಂಸಾರಿ ಸಹವಾಸ ಮಾಡಿ ಸನ್ಯಾಸಿ ಕೆಟ್ಟ

ಸಂಧಿಲಿ ಸಮಾರಾಧನೆ ಮಾಡ್ದಂಗೆ

ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ

ಸಕ್ಕರೆಗೆ ಇರುವೆ ಮುತ್ತಿದಂಗೆ.

ಸಂಬಳಕ್ಕಿಂತ ಗಿಂಬಳವೆ ಜಾಸ್ತಿ ಅಂದಂಗೆ.

ಸು ಅಂದ್ರೆ ಸುಕನುಂಡೆ ಅನ್ನೋ ಜಾತಿ.

ಸುಂಕದವನ ಮುಂದೆ ಸುಖ ದುಃಖ ಹೇಳುಕಿಂಡಹಾಗೆ

ಸಂಕಟ ಬಂದಾಗ ವೆಂಕರಮಣ

ಸೂಜಿಯಷ್ಟು ಬಾಯಿ ಗುಡಾಣದಷ್ಟು ಹೊಟ್ಟೆ,

ಸಗಣಿಯವನ ಜೊತೆಗಿನ ಸರಸಕ್ಕಿಂತ ಗಂಧದವನ ಜೊತೆಗಿನ ಗುದ್ದಾಟ ಲೇಸು

ಹೆಣ್ಣಿಗೆ ಹೆಣ್ಣೇ ಶತ್ರು.

ಹನಿಗೂಡಿದರೆ ಹಳ್ಳ..ತೆನೆಗೂಡಿದರೆ ಬಳ್ಳ

ಹಸು ಕಪ್ಪಾದರೆ..ಅದರ ಹಾಲು ಕಪ್ಪೆ..?

ಹೋದೆಯಾ ಪಿಶಾಚಿ ಎಂದರೆ ಬಂದೆಯಾ ಗವಾಕ್ಷಿಯಿಂದ.

ಹನಿ ಹನಿ ಕೂಡಿ ಹಳ್ಳ, ತೆನೆ ತೆನೆ ಕೂಡಿ ಬಳ್ಳ.

ಹಲ್ಲಿದ್ದಾಗ ಕಡಲೆ ಇಲ್ಲ. ಕಡಲೆ ಇದ್ದಾಗ ಹಲ್ಲಿಲ್ಲ.

ಹೆಣ್ಣಿಗೆ ಹಠ ಇರಬಾರದು, ಗಂಡಿಗೆ ಚಟ ಇರಬಾರದು

ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪೆ

ಹೇಳಿಕೊಟ್ಟ ಮಾತು ಕಟ್ಟಿಕೊಟ್ಟ ಬುತ್ತಿ ಹೆಚ್ಚು ದಿನ ಬಾರದು

ಹಾವು ಸಾಯಬಾರದು ಕೋಲು ಮುರಿಯಬಾರದು

ಹೊಟ್ಟೆಗೆ ಹಿಟ್ಟಿಲ್ಲದೆ ಹೋದರು ಜುಟ್ಟಿಗೆ ಮಲ್ಲಿಗೆ ಹೂವು

ಹಣ ಕಂಡ್ರೆ ಹೆಣವೂ ಬಾಯ್ಬಿಡತ್ತೆ

ಹೆತ್ತವರಿಗೆ ಹೆಗ್ಗಣ ಮುದ್ದು ಕಟ್ಟಿಕೊಂದವರಿಗ್ಗೆ ಕೊಡಗ ಮುದ್ದು

ಹಾಸಿಗೆ ಇದ್ದಷ್ಟು ಕಾಲು ಚಾಚು.

ಹಾಗಲಕಾಯಿಗೆ ಬೇವಿನ ಕಾಯಿ ಸಾಕ್ಷಿ.

ಹಾವಿಗೆ ಹಾಲೆರೆದರೇನು ಫಲ?

ಹಾಳೂರಿಗೆ ಉಳಿದವನೇ ಗೌಡ.

ಹಳೆ ಗಂಡನ ಪಾದವೇ ಗತಿ..

ಹಣ ಇದ್ದವರ ಕೈ ಹಿಡಿದ್ರೂ ಋಣವಿದ್ದಷ್ಟೇ ಸಿಗುವುದು