ಶುಕ್ರವಾರ, ಡಿಸೆಂಬರ್ 2, 2022

ಭಾರತೀಯ ನೃತ್ಯಕಲೆ

ಭಾರತವು ತನ್ನ ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಹೆಸರುವಾಸಿಯಾಗಿದೆ. ಭಾರತೀಯ ನೃತ್ಯವು ಅಂತಹ ಗೌರವಾನ್ವಿತ ಗುರುತುಗಳಲ್ಲಿ ಒಂದು.  ಭಾರತದಲ್ಲಿ, ಆಯಾಯ ಭೌಗೋಳಿಕ  ಪ್ರದೇಶಗಳಿಗೆ, ಅಲ್ಲಿನ ಸ್ಥಳೀಯ ಸಂಪ್ರದಾಯಗಳಿಗೆ, ರೀತಿನೀತಿಗಳಿಗೆ ತಕ್ಕಂತೆ ಅನೇಕ ಮಾದರಿಯ ನೃತ್ಯಗಳು, ರೂಪ ತಾಳಿ, ಅಭಿವೃದ್ಧಿ ಹೊಂದಿವೆ. ಮುಖ್ಯವಾಗಿ, ಭರತನಾಟ್ಯ, ಕುಚಿಪುಡಿ, ಕಥಕ್, ಒಡಿಸ್ಸಿ, ಕಥಕಳಿ ಇತ್ಯಾದಿ  ಶಾಸ್ತ್ರೀಯ ನೃತ್ಯಮಾದರಿಗಳು ಜಗತ್ಪ್ರಸಿದ್ಧ ಕಲೆಗಳೆನಿಸಿವೆ.  ಇದರ ಜೊತೆಗೆ, ಯಕ್ಷಗಾನ, ಡೊಳ್ಳು, ಕರಗ, ಝೂಮರ್, ಲಾವಣಿ, ಭಾಂಗ್ರಾ, ಗಿಡ್ಡ, ರಾಸಲೀಲಾ, ಗರ್ಬಾ, ಧಾಂಡೀಯ, ಲಂಬಾಡಿ ನೃತ್ಯ, ಬಿಹು ಇತ್ಯಾದಿ ಮೂವತ್ತಕ್ಕೂ ಹೆಚ್ಚು ಬಗೆಯ ಜಾನಪದ ನೃತ್ಯ ಕಲೆಗಳು  ನಮ್ಮ ಭಾರತೀಯ ಸಂಸ್ಕೃತಿಗೆ  ಅನನ್ಯತೆ ಮತ್ತು ನವೀನತೆಯನ್ನು ತಂದಿದೆ. 

ಪ್ರತೀ ೧೦೦ ಕಿ.ಮೀ ಗೆ ಉಪಭಾಷೆಗಳು ಬದಲಾಗುವಂತಹ ವೈವಿಧ್ಯಮಯ ದೇಶ ನಮ್ಮದು. ನೃತ್ಯ ಶೈಲಿ, ಉಡುಗೆ, ಕಲಾವಿದರು ಬದಲಾಗುತ್ತಾರೆ. ಆದರೆ ಎಲ್ಲದರ ಮೂಲ ಉದ್ದೇಶವೊಂದೇ. ಮನುಷ್ಯನ ಹುಟ್ಟಿನಿಂದ ಸಾವಿನವರೆಗೆ ಉಂಟಾಗುವ ನಾನಾ ಬಗೆಯ ಅನುಭವಗಳಿಗೆ ಒಂದು ಜನಾಂಗ ಚಲನೆಯ  ವ್ಯಕ್ತಪಡಿಸುವ ಪ್ರತಿಕ್ರಿಯೆಯಾಗಿ ಜಾನಪದ ನೃತ್ಯಗಳು ಹುಟ್ಟಿಕೊಂಡದ್ದು. ದೇವರಿಗೆ ಕೃತಜ್ಞತೆ ಸಲ್ಲಿಸಲು, ಬದುಕಿನ  ಬೇರೆ ಬೇರೆ ವೃತ್ತಿ ಜವಾಬ್ಧಾರಿಗಳ ನೆನಪಿಸಿಕೊಳ್ಳಲು , ಸಂತೋಷ ಸಂಭ್ರಮಿಸಲು, ಕೆಡುಕು ನಿವಾರಿಸಿಕೊಳ್ಳಲು, ಒಗ್ಗಟ್ಟಾಗಿರಲು,  ಋತುಮಾನದಲ್ಲಾಗುವ ಬದಲಾವಣೆ ಕುರಿತು ಅನಿಸಿಕೆ ವ್ಯಕ್ತಪಡಿಸಲು, ಸೂರ್ಯ ಚಂದ್ರರ ಉದಯ ಅಸ್ತಮ ಸೂಚಿಸಲು, ಪ್ರಕೃತಿ, ಪ್ರಾಣಿ-ಪಕ್ಷಿಗಳ ಚಲನವಲನಗಳನ್ನು ಅಭಿನಯದ ಮೂಲಕ ಹಿಡಿದಿಡಲು,  ಹಿಂದಿನಕಾಲದವರು  ಕಂಡುಕೊಂಡ ಒಂದು ಮುಖ್ಯ ಮಾಧ್ಯಮವಾಗಿತ್ತು!  

 ಭಾರತೀಯ ಮುಖ್ಯ ಎಂಟು ಶಾಸ್ತ್ರೀಯ ನೃತ್ಯಗಳು 'ನಾಟ್ಯಶಾಸ್ತ್ರ'ದ ನಿಯಮಗಳನ್ನೊಳಗೊಂಡಿವೆ. ನಾಟ್ಯಶಾಸ್ತ್ರದಲ್ಲಿ, ಪ್ರತಿಯೊಂದು ಶಾಸ್ತ್ರೀಯ ನೃತ್ಯ ಪ್ರಕಾರಗಳ ನಿರ್ಧಿಷ್ಟ ಲಕ್ಷಣಗಳನ್ನೂ, ಉಲ್ಲೇಖಿಸಲಾಗಿದೆ. ಜೀವನದ ನವರಸ ಭಾವನೆಗಳನ್ನೂ ಅತ್ಯಂತ ಸುಂದರವಾಗಿ ನಿರೂಪಿಸುವ ಇಂತಹ ನೃತ್ಯ ಪ್ರದರ್ಶಕ ಕಲೆಗಳು, ಬದುಕಿನ ಸಾರವನ್ನು ಆಚರಿಸಲು ಸಹಾಯ ಮಾಡುತ್ತವೆ. 
 
ನೃತ್ಯ  ಎಂಬುದು ಕೇವಲ ಮನೋರಂಜನೆಯ ವಿಷಯವಲ್ಲ, ನೃತ್ಯ ಮತ್ತು ನರ್ತಕರ ಬದುಕು ಕೇವಲ ವಾಣಿಜ್ಯ ಉದ್ದೇಶಕ್ಕಾಗಿ ತಯಾರಾಗುವ ಸರಕಲ್ಲ, ಅದು ನಮ್ಮ ಸಂಸ್ಕೃತಿ. ಲಯಬದ್ಧವಾಗಿ ಸಂಗೀತಕ್ಕೆ ದೇಹವನ್ನು ಚಲಿಸುವ ಕಲೆ ಸರ್ವೇ ಸಾಮಾನ್ಯವಾದುದ್ದಲ್ಲ;  ಅದೊಂದು ಧ್ಯಾನ! ಇಂತಹ ಭಾರತೀಯ ಸಂಸ್ಕೃತಿಯ ಪ್ರತೀಕವಾದ ನೃತ್ಯಕಲೆ ಮತ್ತು ಅದರಲ್ಲಿನ ವೈವಿಧ್ಯತೆಯ ಕುರಿತಾದ ವಿಷಯಗಳ ಹಂಚಿಕೊಳ್ಳುವ ಪ್ರಯತ್ನ ನನ್ನ ಕೈಯಿಂದ ಬರೆದ ಚಿತ್ರಗಳ ಮೂಲಕ...  



 (ನೃತ್ಯಾಭ್ಯಾಸ ಮಾಡಿದವಳು ನಾನಲ್ಲ; ಶಾಸ್ತ್ರಪಠ್ಯಗಳಿರುವ ನೃತ್ಯ ಮಾದರಿಗಳಲ್ಲಿ, ಯಾವುದೇ ಭಂಗಿ ಅಥವಾ ಸನ್ನೆಗಳ ದೋಷ ಕಂಡರೆ, ನನಗೆ ತಿಳಿಸಿ, ತಿದ್ದಿ ಪ್ರೋತ್ಸಾಹಿಸುವಿರಿ ಎಂಬ ನಂಬಿಕೆಯೊಂದಿಗೆ.. )



ಸಿಕ್ಕಿಂ - ಟಿಬೆಟಿಯನ್ ಧ್ವಜಗಳು

ಹಿಮಾಲಯದ ಕಾಂತೀಯ ನೋಟಗಳೊಂದಿಗೆ, ಗಮನಾರ್ಹವಾದ ಗಮ್ಯಸ್ಥಾನಗಳ ಹೇರಳತೆಯೊಂದಿಗೆ ಸರ್ವ ಕಾಲಕ್ಕೂ, ಭೇಟಿ ನೀಡಬಹುದಾದ ಪ್ರವಾಸ ಸ್ಥಳಗಳಲ್ಲಿ, ಭಾರತದ ಈಶಾನ್ಯ ಭಾಗದಲ್ಲಿರುವ ಸಿಕ್ಕಿಂ ಕೂಡ ಒಂದು. ಸೆವೆನ್ ಸಿಸ್ಟರ್ಸ್ ರಾಜ್ಯಗಳ ಪೈಕಿ ಕಿರಿದು. ದಾರ್ಜೀಲಿಂಗ್ ನಲ್ಲಿರುವಂತೆಯೇ, ಸಿಕ್ಕಿಂನಲ್ಲೂ ಕೂಡ ಟಿಬೆಟಿಯನ್ ಮೊನಸ್ಟರಿಗಳು, ಬೌದ್ಧ ಧರ್ಮದ ಅನುಯಾಯಿಗಳು ಸಾಕಷ್ಟು ಜನರಿದ್ದಾರೆ.  ಹಿಮಾಲಯದ ಪರ್ವತಗಳು, ಬೆಳ್ಳನೆಯ ಮೋಡಗಳು, ಇಬ್ಬನಿ ಹರಡಿ ಕ್ಷಣಕ್ಷಣಕ್ಕೆ ಮಬ್ಬಾಗುವ ಹಾದಿಗಳು, ಹಚ್ಚಹಸಿರು ಮತ್ತವುಗಳ ಮಧ್ಯೆ ಅಲ್ಲಲ್ಲಿ ಕಾಣಿಸುವ ಬೌದ್ಧ ಧರ್ಮದ ಬಣ್ಣ ಬಣ್ಣದ ಧ್ವಜಗಳು!ಈ ವಿವಿಧ ಬಗೆಯ ಧ್ವಜಗಳು ನೋಡುಗರಿಗೆ ಅವರವರ ಭಾವಕ್ಕೆ ತಕ್ಕಂತೆ ಸಾಂತ್ವನ, ಸಂತಸದ ಅನುಭವವನ್ನು ನೀಡುತ್ತದೆ. ನಮ್ಮ ಪ್ರವಾಸದ ಹಾದಿಯುದ್ದಕ್ಕೂ ಕಾಣಸಿಗುತ್ತಿದ್ದ ಈ ಬಣ್ಣಬಣ್ಣದ ಧ್ವಜಗಳ ಕುರಿತಾಗಿ ಸಂಗ್ರಹಿಸಿದ ಒಂದಷ್ಟು ವಿಷಯಗಳು.. 

ಚಿತ್ರಗಳೊಂದಿಗೆ.. 






ಟಿಬೆಟಿಯನ್ ಜನರು ಪ್ರಕೃತಿಯನ್ನು ಗೌರವಿಸಲು ಈ ಪ್ರಾರ್ಥನಾ ಧ್ವಜಗಳನ್ನು ನೆಡುತ್ತಾರೆ. ಧ್ವಜದಲ್ಲಿನ ಐದು ಬಣ್ಣಗಳಲ್ಲಿ ಬಿಳಿ ಬಣ್ಣ ಗಾಳಿಯನ್ನೂ, ಕೆಂಪು ಬಣ್ಣ ಬೆಂಕಿಯನ್ನೂ, ಹಸಿರು ಬಣ್ಣ ನೀರನ್ನೂ, ಹಳದಿ ಭೂಮಿಯನ್ನೂ ಮತ್ತು ನೀಲಿ ಆಕಾಶವನ್ನು ಸಂಕೇತಿಸುತ್ತದೆ. ಈ ಧ್ವಜಗಳಲ್ಲಿ ಬೌದ್ಧರ ಮೂಲ ಪ್ರಾರ್ಥನಾ ಮಂತ್ರವಾದ ' ಓಂ ಮಣಿ ಪದ್ಮೇಹಂ" ಎಂದು ಬರೆದಿರುತ್ತದೆ. ಅಹಂಕಾರ, ಅಸೂಯೆ, ಅಜ್ಞಾನ, ದುರಾಸೆ ಮತ್ತು  ಕೋಪವನ್ನು ನಿಗ್ರಹಿಸಲು ಈ ಮಂತ್ರ ಸಹಾಯ  ಮಾಡುತ್ತದೆ ಎಂಬ ನಂಬಿಕೆಯಿದೆ. ಈ ಬಣ್ಣಬಣ್ಣದ ಧ್ವಜಗಳಲ್ಲಿ ಬರೆದಿರುವ ಮಂತ್ರಗಳು ೨೫೦೦ ವರ್ಷಗಳ ಹಿಂದೆ ಭಾರತದಲ್ಲಿ ಶಾಕ್ಯಮುನಿ ಬುದ್ಧನ ಪ್ರವಚನಗಳ ಪಠ್ಯಗಳು, ಧಾರಣೀ ಮಂತ್ರ ಇನ್ನೂ ಅನೇಕ ಬಗೆಯ ಸಂಸ್ಕೃತಮಂತ್ರಗಳಿಂದ ಕೂಡಿವೆ ಎಂದು ಹೇಳಲಾಗುತ್ತದೆ. ಈ ಧ್ವಜಗಳು ಎಂದೂ ಸ್ಥಿತವಾಗಿ ನಿಲ್ಲಬಾರದಂತೆ, ಧ್ವಜಗಳನ್ನು ನೆಲಕ್ಕೆ ಇಡಬಾರದಂತೆ, ಇವುಗಳು ಹಾರಾಡುತ್ತಲೇ ಇರಬೇಕಂತೆ. ಹಾಗಾಗಿಯೇ ಇದನ್ನು ಸಾಮಾನ್ಯ ಮನೆಯ ತೋರಣವಾಗಿ ಕಟ್ಟುತ್ತಾರೆ ಇಲ್ಲವೇ ಮೇಲ್ಚಾವಣಿ ಇನ್ನಿತರ ಎತ್ತರದ ಸ್ಥಳಗಳಲ್ಲಿ ಕಟ್ಟುತ್ತಾರೆ. ದೇವರಿಗೋಸ್ಕರ ಕಟ್ಟುವ ಧ್ವಜಗಳಲ್ಲ ಇವು. ಬದಲಾಗಿ ಈ ಧ್ವಜಗಳಲ್ಲಿನ ಮಂತ್ರಗಳು ಗಾಳಿಯನ್ನುಶುದ್ಧೀಕರಿಸುತ್ತವೆ, ವಾತಾವರಣವನ್ನು ಪವಿತ್ರಗೊಳಿಸುತ್ತವೆ,  ದೈವದ ಧನಾತ್ಮಕ ಶಕ್ತಿಯನ್ನು ಎಲ್ಲೆಡೆ ಪಸರಿಸುತ್ತದೆ, ಶಾಂತಿಯನ್ನು ತರುತ್ತವೆ. ಬಣ್ಣಗಳು ಸಂತೋಷವನ್ನು ಕೊಡುತ್ತವೆ ಎಂಬ ಪ್ರತೀತಿಯಿದೆ. 










ಈ ರೀತಿಯ ಧ್ವಜಗಳಲ್ಲಿ ಎರಡು ಬಗೆಗಳಿವೆ. ಸಮತಲವಾಗಿರುವ ಧ್ವಜಗಳಿಗೆ ಲುಂಗ್ದಾ ಎಂದೂ, ಲಂಬವಾಗಿರುವ ಧ್ವಜಗಳಿಗೆ ದಾರ್ಚೊ ಎಂದೂ ಕರೆಯುತ್ತಾರೆ. ಲಂಬವಾದ ಧ್ವಜಗಳು ಸಾಮಾನ್ಯವಾಗಿ ನಮಗೆ ಹಿಮಾಲಯದ ಎತ್ತರೆತ್ತರ ಬೆಟ್ಟಗಳ ಮೇಲೆ ಅತ್ಯಂತ ಎತ್ತರದ ಸ್ಥಳಗಳಲ್ಲಿ ಕಂಡು ಬಂದವು. ಯುದ್ಧ ಭಾವನೆಯಿಂದ ಶಾಂತಿ ಭಾವನೆಗೆ ಪರಿವರ್ತಿತಗೊಳ್ಳುವ ಸಂದೇಶವನ್ನು ಈ ಧ್ವಜಗಳು ಸಾರುತ್ತವೆ. ಕೇವಲ ಬಣ್ಣ ಬಣ್ಣದ ಬಟ್ಟೆಗಳ ಚೂರಿನಂತೆ ಕಾಣುವ ೪೦೦ ಕ್ಕೂ ಹೆಚ್ಚು ಬಗೆಯ ಮಂತ್ರಗಳು ಓದಲು ಸಿಗುತ್ತವೆಯಂತೆ.  ಧ್ವಜಗಳ ಬಣ್ಣ ಮಾಸಿದಷ್ಟೂ ಕೂಡ ಶ್ರೇಷ್ಠ!ಧ್ವಜಗಳ ಕಟ್ಟುವುದು ಮತ್ತು ತೆಗೆಯುವುದಕ್ಕೂ ಕೂಡ ಅವರ ಪಂಚಾಂಗದಲ್ಲಿನ ಶುಭದಿನಗಳ ಎಣಿಕೆಯ ಪದ್ಧತಿ ಇದೆ. ಹಳೆಯ ಧ್ವಜಗಳನ್ನು ತೆಗೆಯುವ ಸಂದರ್ಭ ಬಂದರೆ, ಅವುಗಳನ್ನು ಅಷ್ಟೇ ಗೌರವದಿಂದ ಬೆಂಕಿಗೆ ಆಹುತಿ ನೀಡುತ್ತಾರೆ.  ಮಂತ್ರಗಳು, ಪ್ರಾರ್ಥನೆಗಳು ಪಂಚಭೂತಗಳಲ್ಲಿ ಅವು ಲೀನವಾಗುತ್ತಿವೆ, ಜಗತ್ತಿಗೆ ಒಳಿತಾಗುತ್ತಿದೆ ಎಂಬ ವಿಶ್ವಾಸ ಇಲ್ಲಿನ ಜನರದ್ದು. 



ಹಾಗೆಯೇ ಇಲ್ಲಿನ ಎತ್ತರದ ಬೆಟ್ಟದ ಪ್ರದೇಶಗಳಲ್ಲಿ ರಸ್ತೆಯ ಪಕ್ಕ ಕಾಣಸಿಗುವ ಬಿಳಿಯ ಬಣ್ಣದ ಲಂಬ ಧ್ವಜಗಳನ್ನು ಕಟ್ಟುವುದು, ಮರಣ ಹೊಂದಿದವರ ಜೀವನ್ಮುಕ್ತಿ ಕ್ರೆಯೆಯ ವಿಧಿವಿಧಾನಗಳಲ್ಲಿ ಒಂದು.