ಬುಧವಾರ, ನವೆಂಬರ್ 20, 2019

ಲಿವಿಂಗ್ ರೂಟ್ ಬ್ರಿಡ್ಜ್

ಪ್ರಪಂಚದಾದ್ಯಂತ ಅದೆಷ್ಟೋ ಸೇತುವೆಗಳು, ತಮ್ಮ ನಿರ್ಮಾಣದ  ಐತಿಹಾಸಿಕತೆಗೆ, ವಿಜ್ಞಾನ ಮತ್ತು ತಂತ್ರವಿದ್ಯೆಗೆ ಪ್ರಸಿದ್ಧಿಯನ್ನು ಪಡೆದಿದೆ. ಮಾನವನ ಆವಿಷ್ಕಾರಗಳ ಚಾಣಾಕ್ಷ್ಯತೆಯ ಇಂತಹ ಕೊಡುಗೆಗಳ ಪೈಕಿ, ಕಲ್ಲು, ಇಟ್ಟಿಗೆ, ಕಬ್ಬಿಣ, ಉಕ್ಕು, ಕಾಂಕ್ರೀಟ್ ಇತ್ಯಾದಿ ಯಾವುದೇ ವಸ್ತುಗಳನ್ನು ಬಳಸದೇ,  ಪ್ರಕೃತಿಯನ್ನೇ ಸಂಪರ್ಕ ಕೊಂಡಿಯಾಗಿ ಬಳಸಿಕೊಂಡು ನಿರ್ಮಿಸಿರುವ, ನೂರಾರು ವರ್ಷಗಳಷ್ಟು ಹಳೆಯ ಆದರೂ ಸುಧೃಡವಾಗಿ ಚಾಲ್ತಿಯಲ್ಲಿರುವ, ಸೇತುವೆಗಳ ದಾಖಲೆಯೊಂದು ನಮ್ಮ ಭಾರತದಲ್ಲಿದೆ. ಅದುವೇ ಪ್ರಪಂಚದ ಅದ್ಭುತ ಅಚ್ಚರಿಗಳಲ್ಲಿ ಒಂದಾದ ಮೇಘಾಲಯದ ನಿಸರ್ಗವುದು ಕೇವಲ ಮರಗಳ ಬೇರುಗಳಿಂದ! ಭಾರತದ ಆರ್ದ್ರ ಸ್ಥಳ ಎಂಬ ಮನ್ನಣೆಗೆ ಪಾತ್ರಗೊಂಡಿರುವ ಮೇಘಾಲಯದ ಚಿರಾಪುಂಜಿಯಲ್ಲಿ ವರ್ಷವಿಡೀ ಮಳೆ. ಸರ್ವ ನಿರ್ಮಿತ ಸೇತುವೆ - ಲಿವಿಂಗ್ ರೂಟ್ ಬ್ರಿಡ್ಜ್.



'ಲಿವಿಂಗ್ ರೂಟ್ ಬ್ರಿಡ್ಜ್' ಹೆಸರೇ ಸೂಚಿಸುವಂತೆ, ಈ ಸೇತುವೆಗಳು ನಿರ್ಮಾಣಗೊಂಡಿರುವುದು ಜೀವಂತ ಮರದ ಬೇರುಗಳಿಂದ! ಸಂಪನ್ನ ಅರಣ್ಯ ರಾಶಿ ಇಲ್ಲಿನ ವರವೇನೋ ಹೌದು. ಆದರೆ ಈ ಮಳೆ ನಾಡಿನಲ್ಲಿ ಮೂಲನಿವಾಸಿಗಳ ಕಾಲದಿಂದಲೂ ನದಿ ಮತ್ತು ಹೊಳೆಗಳನ್ನು ದಾಟಲು ಸಂಪರ್ಕ ಕೊಂಡಿಯ ವ್ಯವಸ್ಥೆ ಅತ್ಯಂತ ದೊಡ್ಡ ಸವಾಲು. ಹಿಂದೆ, ಬಿದಿರು ಮತ್ತು ಇತರ ಮರಮುಟ್ಟುಗಳನ್ನು ನೀರಿಗೆ ಅಡ್ಡವಾಗಿ ಕಟ್ಟಿ ಚಿಕ್ಕ ಪುಟ್ಟ ಕಾಲುದಾಟುಗಳನ್ನಾಗಿ ನಿರ್ಮಿಸಿಕೊಳ್ಳುತ್ತಿದ್ದರಾದರೂ, ಸರ್ವಕಾಲಿಕ ಮಳೆಯಿಂದುಂಟಾಗುವ  ತೇವಾಂಶ-ಆರ್ದ್ರತೆಗೆ ಅವುಗಳು ಬಲುಬೇಗ ನಶಿಸಿ ಹೋಗುತ್ತಿದ್ದವು. ಇದಕ್ಕೊಂದು ಶಾಶ್ವತ ಪರಿಹಾರವೆಂಬಂತೆ, ಖಾಸೀ ಬುಡಕಟ್ಟು ಜನಾಂಗದವರು, ಪ್ರಕೃತಿಯ ಮೇಲಿನ ಗೌರವ ಮತ್ತು ನಂಬಿಕೆಯಿಂದ ಕಂಡುಕೊಂಡ ಉಪಾಯವೇ ಈ ಲಿವಿಂಗ್ ರೂಟ್ ಬ್ರಿಡ್ಜ್. ಖಾಸಿ ಮತ್ತು ಜೇನ್ತಿಯಾ ಬೆಟ್ಟಗಳಲ್ಲಿ, ಅಲ್ಲಿನ ಆರ್ದ್ರತೆಗೆ ದಷ್ಟಪುಷ್ಟವಾಗಿ ಬೆಳೆಯುವ ಒಂದು ಜಾತಿಯ ರಬ್ಬರ್ (Ficus Elastica) ನ ಗಟ್ಟಿಮುಟ್ಟಾದ ಉದ್ದದ ಬೇರುಗಳನ್ನು ಬಳಸಿ, ಸೇತುವೆ ಕಟ್ಟುವ ಅನನ್ಯ ಪ್ರಯತ್ನ ಅಲ್ಲಿನ ಬುಡಕಟ್ಟು ಜನಾಂಗದವರಿಂದ ಪ್ರಾರಂಭವಾಯಿತು. ಅವರು ಈ ರಬ್ಬರ್ ಮತ್ತು ಆಲದ ಗಿಡಗಳನ್ನು ನದಿ ದಂಡೆಯ ಪಕ್ಕದಲ್ಲಿ ಒಂದಕ್ಕೊಂದು ಸಮೀಪದಲ್ಲಿ ನೆಟ್ಟು ಬೆಳೆಸಲಾರಂಭಿಸಿದರು. ಆ ಸಸಿಗಳು ದೊಡ್ಡದಾಗಿ,ಅವುಗಳಿಂದ ಟಿಸಿಲೊಡೆದ ಬೇರು ಮತ್ತು ಬಿಳಲುಗಳನ್ನು, ಅತ್ಯಂತ ಕುಶಲತೆಯಿಂದ ಹಂತಹಂತವಾಗಿ ಸೇರಿಸಿ ಮತ್ತಷ್ಟು ಗಟ್ಟಿಗೊಳಿಸುತ್ತಿದ್ದರು. ಹೀಗೆ ಬೆಳೆಯುವ ಮೀಟರುಗಟ್ಟಲೆ ಉದ್ದದ ಬಿಳಲುಗಳನ್ನು ಪ್ರತಿ ೪-೫ ತಿಂಗಳಿಗೊಮ್ಮೆ ಎಳೆದು ಹುರಿಗೊಳಿಸಿ, ನದಿಗಳಿಗೆ ಅಡ್ಡಲಾಗಿ ತಾತ್ಕಾಲಿಕವಾಗಿ ಕಟ್ಟಿರುತ್ತಿದ್ದ ಮರದ ಅಥವಾ ಬಿದಿರಿನ ಸಂಕೋಲೆಗಳ ಮೇಲೆ ನೈಪುಣ್ಯತೆಯಿಂದ ಹೆಣೆಯುತ್ತಿದ್ದರು. ಈ ನಿರಂತರ ಕಾರ್ಯವನ್ನು ಖಾಸೀ ಜನರು ಕಾಲದಿಂದ ಕಾಲಕ್ಕೆ ಒಂದು ಸಾಂಪ್ರದಾಯಿಕ ಕ್ರಮದಂತೆ ಮುಂದುವರೆಸುತ್ತ ಬಂದರು. ಕ್ರಮೇಣ ಮರದ ಬಿಳಲು ಮತ್ತು ಬೇರುಗಳು, ಅವುಗಳನ್ನು ರೂಪುಗೊಳಿಸಿದ  ರೀತಿಯಲ್ಲಿಯೇ ಅಗಲ-ಉದ್ದವಾಗಿ ಹಿಗ್ಗಿಕೊಂಡು ಬೆಳೆದು ಗಟ್ಟಿಯಾದ ಸೇತುವೆಯಾಗಿ ಮಾರ್ಪಾಟುಗೊಂಡಿತು. ಹೀಗೆ ಸುದೃಢವಾಗಿ ಬೆಳೆದ ಬೇರುಗಳ ಸಂಕೋಲೆಗಳ ಮೇಲೆ, ಬಿದಿರು ಮತ್ತು ಮರದ ತೊಗಟೆಗಳ  ಹೊದಿಕೆಯನ್ನು ನೀಡಿ, ಅದರ ಮೇಲೆ ಮಣ್ಣು ಮತ್ತು ಸಣ್ಣ ಕಲ್ಲುಗಳ ಜೋಡಣೆ ಮಾಡುತ್ತಾ ಬಂದಂತೆಯೂ, ಬೇರುಗಳು ಅದಕ್ಕೆ ಒಗ್ಗಿಕೊಂಡು, ಜನರ ಓಡಾಟದ 'ಲಿವಿಂಗ್ ರೂಟ್ ಬ್ರಿಡ್ಜ್' ಆಗಿ ನಿರ್ಮಾಣಗೊಂಡಿತು. ಅನಕ್ಷರಸ್ಥರಾಗಿದ್ದರೂ ಕೂಡ ಆ ಕಾಲಕ್ಕೆ 'ಆರ್ಗ್ಯಾನಿಕ್ ಇಂಜಿನಿಯರಿಂಗ್' ತಂತ್ರವಿದ್ಯೆಯ ಸೇತುವೆಯ ನಿರ್ಮಾಣ ಖಾಸೀ ಬುಡಕಟ್ಟು ಜನಾಂಗದವರ ಅದ್ಬುತ ಸಾಧನೆ. ಈ ರೀತಿಯ ಒಂದೊಂದು ಸೇತುವೆ ನಿರ್ಮಾಣವೂ ಸುಮಾರು ೩೦-೪೦ ವರ್ಷಗಳವರೆಗೆ ನಡೆದಿದೆ ಎನ್ನುತ್ತಾರೆ ಇಲ್ಲಿನ ಹಿರಿಯರು.

ಪೂರ್ವ ಖಾಸಿ ಹಿಲ್ಸ್ ಜಿಲ್ಲೆಗಳಲ್ಲಿ, ಮ್ಯಾವಲಾಂಗ್ ಮತ್ತು ನಾನ್ಗ್ರಿಯಾಟ್ ಇನ್ನಿತರ ಚಿರಾಪುಂಜಿಯ ಗ್ರಾಮಗಳಲ್ಲಿ ಕಾಣಸಿಗುವ ಈ ಸೇತುವೆಗಳು, ಮೇಘಾಲಯದ ಈಗಿನ ಮುಖ್ಯ ಪ್ರವಾಸೀ ಸ್ಥಳಗಳಲ್ಲಿ ಒಂದಾಗಿದೆ. ಕೇವಲ ನೋಡಲಷ್ಟೇ ಅಲ್ಲದೆ ಇಂದಿಗೂ ಕೂಡ ಸುತ್ತಮುತ್ತಲಿನ ಹಳ್ಳಿಗರು ನೂರಾರು ವರ್ಷಗಳ ಹಿಂದೆ 'ಬೆಳೆಸಿದ' ಈ ಸೇತುವೆಗಳನ್ನು ಈಗಲೂ ನಿರ್ಭಯವಾಗಿ  ದಿನನಿತ್ಯದ ಓಡಾಟಕ್ಕೆ,  ಕೃಷಿಭೂಮಿಗೆ ಸಾಮಾನುಗಳನ್ನು ಸಾಗಾಟಕ್ಕೆ ಇತ್ಯಾದಿಯಾಗಿ  ಬಳಕೆ  ಮಾಡುತ್ತಿದ್ದಾರೆ. ಹಲವು ಸೇತುವೆಗಳಿಗೆ ನೂರಾರು ವರ್ಷಗಳ ಇತಿಹಾಸವಿದೆ. ಈ  ರೂಟ್ ಬ್ರಿಡ್ಜ್ ಸೇತುವೆಗಳು , ಕನಿಷ್ಠವೆಂದರೂ ೮ ಅಡಿಗಳಷ್ಟು ಅಗಲ, ೭೦ ಅಡಿಗಳಷ್ಟು ಉದ್ದದಷ್ಟಿದೆ. ಖಾಸಿ ಜಿಲ್ಲೆಯ ಮಾವ್ಕಿರ್ಣಟ್ ಹಳ್ಳಿಯಲ್ಲಿರುವ ಲಿವಿಂಗ್ ರೂಟ್ ಬ್ರಿಡ್ಜ್ ೧೭೫ ಫೀಟ್ ಉದ್ದವಾಗಿದ್ದು ಮೇಘಾಲಯದ ಅತೀ ಉದ್ದದ ಲಿವಿಂಗ್ ರೂಟ್ ಬ್ರಿಡ್ಜ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಟ್ಟಿಗೆ ನೂರಾರು ಜನರು ನಿಂತರೂ ಕೂಡ ತಡೆದುಕೊಳ್ಳುವ ಶಕ್ತಿ, ನೂರಾರು ವರ್ಷಗಳಿಂದ ನಿಂತಿರುವ ಆ ಮರದ ಬೇರುಗಳಿಗಿವೆ. ಇದರಂತೆಯೇ, ಒಂದು ಸೇತುವೆಯ ಮೇಲೆ ಮತ್ತೊಂದು ಸೇತುವೆಯಂತೆ ನಿರ್ಮಿಸಿದ, ಉಂಶಿಯಾಂಗ್ 'ಡಬ್ಬಲ್ ಡೆಕ್ಕರ್ ರೂಟ್ ಬ್ರಿಡ್ಜ್' ನೋಡಲು ಅತ್ಯಂತ ಆಕರ್ಷಣೀಯವಾಗಿದ್ದು, ಅದು ಸುಮಾರು ೧೮೦ ವರ್ಷಗಳಷ್ಟು ಪುರಾತನವಾದದ್ದಂತೆ!

 ಪ್ರಕೃತಿಯಿಂದ ಕೇವಲ ಪಡೆಯುವ ಇಚ್ಛೆಯಲ್ಲದೇ, ನಿಸರ್ಗ ಮತ್ತು ಮಾನವನ ಪರಸ್ಪರ ಕೊಡುವುದು ಮತ್ತು ತೆಗೆದುಕೊಳ್ಳುವ ಸಮತೋಲನದ ಅದ್ಭುತ ಉದಾಹರಣೆ ಈ 'ಲಿವಿಂಗ್ ರೂಟ್ ಬ್ರಿಡ್ಜ್' ಗಳು. ಉತ್ತಮ ದರ್ಜೆಯ ಸಾಮಗ್ರಿಗಳು, ವಿಜ್ಞಾನ ಮತ್ತು ತಂತ್ರವಿದ್ಯೆ, ಪೂರಕ ನಿರ್ಮಾಣ ಘಟಕಗಳು, ಮೆಷಿನರಿ ಉಪಕರಣಗಳನ್ನು ಬಳಸಿ ನಿರ್ಮಿಸಿದ ನೂತನ ಸೇತುವೆಗಳು, ಕಟ್ಟಿ ಕೆಲವೇ ವರ್ಷಗಳಲ್ಲಿ ತಾಂತ್ರಿಕ ದೋಷಗಳಿಂದ ಮುರಿದು ಬೀಳುವ ಘಟನೆಗಳೆದುರು, ನೂರಾರು ವರ್ಷ ಸ್ಥಿರವಾಗಿ ನಿಲ್ಲುವ ಅಂತಹ ಮಳೆನಾಡಿನ ನಿಸರ್ಗದತ್ತ ಸೇತುವೆಗಳು ನಮ್ಮನ್ನು ಅಚ್ಚರಿಗೊಳಿಸದೇ ಇರುವುದಿಲ್ಲ. ಇಂತಹ ಪ್ರಾಕೃತಿಕ, ಪಾರಂಪರಿಕ ಅದ್ಭುತಗಳು ಇತ್ತೀಚೆಗಿನ ಕಾಂಕ್ರೀಟು ಸೇತುವೆಗಳ ಅಭಿವೃದ್ಧಿಯ ಹೆಸರಿನಲ್ಲಿ ಕಳೆದು ನಶಿಸಿ ಹೋಗುತ್ತಿರುವುದು ಅತ್ಯಂತ ವಿಷಾದನೀಯ. ಇಂತಹ ರೂಟ್ ಬ್ರಿಡ್ಜ್ ನ ಪ್ರಾಮುಖ್ಯತೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು, ನಿರ್ಮಾಣದ ಕುಶಲತೆಯ ಪಾರಂಪರ್ಯತೆಯನ್ನು ಉಳಿಸಿಕೊಳ್ಳಲು ಕೆಲವು ನಿಸರ್ಗ ಪ್ರಿಯರು, ಸಂಘ ಸಂಸ್ಥೆಗಳ ಜನರು ಪ್ರಯತ್ನಿಸುತ್ತಲೇ ಇದ್ದಾರೆ . "ಈ ಲಿವಿಂಗ್ ರೂಟ್ ಬ್ರಿಡ್ಜ್ಗಳ ಆಯುಷ್ಯ ೫೦೦ ವರ್ಷಗಳಿರಬಹುದು ಎಂದು ಕೆಲವು ಪರಿಸರ ತಜ್ಞರು, ಸಂಶೋಧಕರು ಊಹಿಸುತ್ತಾರೆ. ಆದರೆ ರಕ್ಷಿಸಿ ಪೋಷಿಸಿಕೊಂಡರೆ ತನ್ನ ನಿಷ್ಕ್ರೀಯತೆಯ ಬುಡದಲ್ಲೇ ಹೊಸ ಸೃಷ್ಟಿಯ ಬೇರುಗಳಿಂದಾಗಿ ಈ ಸೇತುವೆಗಳು ಎಂದೂ ಸಾಯುವುದಿಲ್ಲ"ಎಂದು ಅಭಿಪ್ರಾಯ ಪಡುತ್ತಾರೆ ಊರಿಂದ ಊರಿಗೆ ಓಡಾಡಿ ಲಿವಿಂಗ್ ರೂಟ್ ಬ್ರಿಡ್ಜ್ ನ ಕುರಿತಾಗಿ ಹೆಚ್ಚಿನ ಜ್ಞಾನವನ್ನು ಹಂಚುವ 'ಲಿವಿಂಗ್ ಬ್ರಿಡ್ಜ್ ಫೌಂಡೇಶನ್' ನ ಸ್ಥಾಪಕ, ಮಾರ್ನಿಂಗ್ಸ್ಟಾರ್ ಕಾಂಗ್ತಾವ್.  ಏನೇ ಆದರೂ, ಜನರ ಬಳಕೆ ಮಾತ್ರಕ್ಕೆ ಸೀಮಿತವಾಗದೆ, ಪ್ರವಾಸೋದ್ಯಮದ ಲಾಭಿಗಾಗಿ ಅಲ್ಲದೇ, ಪರಿಸರವನ್ನು ಹಾಳುಗೆಡುವದೇ ಮತ್ತಷ್ಟು ಸಮೃದ್ಧಗೊಳಿಸುವ ಉದ್ದೇಶಕ್ಕಾದರೂ ಇಂತಹ ಪಾರಂಪರಿಕ ವಸ್ತುಗಳು ಉಳಿದುಕೊಂಡಿರಲಿ ಎಂಬುದೇ ನಮ್ಮ ಆಶಯ.

ಗುರುವಾರ, ನವೆಂಬರ್ 14, 2019

ಹೇಮಕುಂಡ್ ಸಾಹಿಬ್ - ಹಿಮಾಲಯ ಟ್ರೆಕ್

ಜಿಟಿ ಜಿಟಿ ಮಳೆ, ಹಿಮಾಲಯದ ಶೃಂಗಗಳಿಂದ ಬೀಸುವ ಶೀತಗಾಳಿ, ಹಾದಿಯ ಅಕ್ಕಪಕ್ಕದಲ್ಲೆಲ್ಲ ಮಳೆಯಲ್ಲಿ ತೋಯ್ದು ತೆಪ್ಪೆಯಾದ ಹಸಿರು ಗಿಡ ಮರಗಳು, ಸೂರ್ಯನ ಪ್ರಕಾಶಕ್ಕೆ, ಹವಳಗಳಂತೆ ಹೊಳೆವ ಹೂವಿನ ಮೇಲಿನ ಮಳೆ ಹನಿಗಳು, ಕಣ್ಣೆತ್ತಿ ನೋಡಿದಷ್ಟೂ ಪರ್ವತಾವಳಿ,  ಕ್ಪಣ ಕ್ಷಣಕ್ಕೂ ಸುತ್ತಲಿನ ನಿಸರ್ಗವನ್ನು ಮಾಂತ್ರಿಕವಾಗಿ ಬದಲಾಯಿಸುವ  ಇಬ್ಬನಿ, ಮಂಜು ಮತ್ತು ಮೋಡಗಳ ಆಟ, ದೊಡ್ಡ ದೊಡ್ಡ ಪರ್ವತಗಳನ್ನು ಹಾದು,ಬೆಳ್ಳಗೆ ಹಾಸಿ ಬಂದು ನಿಂತಿರುವ ಹಿಮನದಿ, ಆ ಬ್ರಹತ್ ಹಿಮನದಿಗಳ ಪಕ್ಕದಲ್ಲೇ, ಮೈಯ ಕೊರೆಯುವ ಚಳಿಯಲ್ಲಿ ನಮ್ಮ ನೆಡಿಗೆ.. ಅಬ್ಬಾಬ್ಬಾ..ಅನುಭವಿಸಿಯೇ ತೀರಬೇಕು ಆ ರಮ್ಯತೆಯನ್ನು! ಹೀಗೊಂದು ರೋಚಕ ಚಾರಣದ ಅನುಭವವನ್ನು ಕಳೆದ ಅಗಸ್ಟ್ ತಿಂಗಳಿನಲ್ಲಿ ಉತ್ತರಾಂಚಲದ 'ಹೇಮಕುಂಡ್ ಸಾಹಿಬ್' ಗೆ ಭೇಟಿ ನೀಡುವ ಸಂದರ್ಭದಲ್ಲಿ ನಾವು ಪಡೆದೆವು. 


'ಹೇಮಕುಂಡ್ ಸಾಹಿಬ್' -ಸ್ಥಳ ಇತಿಹಾಸ :

ಸಂಸ್ಕೃತದಲ್ಲಿ 'ಹೇಮ್' ಎಂದರೆ ಹಿಮ ಮತ್ತು 'ಕುಂಡ್' ಎಂದರೆ ಬಟ್ಟಲು. ಹೌದು, ಹೇಮಕುಂಡ್ ಸಾಹಿಬ್ ಒಂದು ಹಿಮದ ಬೋಗುಣಿಯಲ್ಲಿರುವ ಗುರುದ್ವಾರ. ಈಗಿನ ಹೇಮಕುಂಡ್ ಸಾಹಿಬ್ ಗುರುದ್ವಾರವಿರುವ ಸ್ಥಳದಲ್ಲಿ, ಹಿಂದಿನಿಂದಲೂ ರಾಮನ ತಮ್ಮ ಲಕ್ಷ್ಮಣ ತನ್ನ ಹಿಂದಿನ ಜನ್ಮದವತಾರದಲ್ಲಿ ದೈವಕೃಪೆಗಾಗಿ ಕುಳಿತು ತಪಸ್ಸು ಮಾಡಿದ್ದನು ಎಂಬ ಪ್ರತೀತಿಯಿಂದ ಜೋಷಿಮಠದ ಸ್ಥಳೀಯರು ಬಂದು ಪೂಜಿಸುತ್ತಿದ್ದರು ಹಾಗೂ ಈ ಸ್ಥಳವನ್ನು 'ಲೋಕ್ಪಾಲ್' (ಲೋಕಪಾಲ - ಲಕ್ಷ್ಮಣ) ಎಂದೂ ಕೂಡ ಕರೆಯಲಾಗುತ್ತದೆ ಎಂದು ತಿಳಿದುಬಂದಿದೆ. ಹೆಚ್ಚಾಗಿ ಹಿಮಾವೃತ್ತಗೊಂಡು ಹೆಚ್ಚೇನೂ ಹೊರಪ್ರಪಂಚದ ಬೆಳಕಿಗೆ ಬಂದಿರದ ಈ ಸ್ಥಳದಲ್ಲಿ, ಸಿಖ್ಖರ ಗುರು, ಗೋಬಿಂದ್ ಸಿಂಗ್ ಅವರು ತಮ್ಮ ಹಿಂದಿನ ಒಂದು ಅವತಾರದಲ್ಲಿ ತಪಸ್ಸು ಮಾಡಿ  ಇಲ್ಲಿಯೇ ಮೋಕ್ಷ ಪಡೆದರೆಂಬ ನಂಬಿಕೆಗಳಿವೆ. ಇಲ್ಲಿನ ಹೇಮಕುಂಡ್ ಸರೋವರ, ಸಪ್ತಋಷಿ ಶಿಖರಗಳಿಂದ ಹಿಮನದಿಗಳು ಹರಿದುಬಂದು ಮಾರ್ಪಾಟುಗೊಂಡಿರುವ ಒಂದು ದೊಡ್ಡ ಸರೋವರ. ಈ ಪವಿತ್ರ-ಅದಮ್ಯ ಶಕ್ತಿಸ್ಥಳವನ್ನು, ಅನೇಕ ದಶಮಾನಗಳ ಹಿಂದೆ, ಸಂತ ಸೋಹಾನ ಸಿಂಗ್ ರವರು ಗುರುತಿಸಿ, ೧೯೩೬ ರಲ್ಲಿ ಇಲ್ಲಿ ಗುರುದ್ವಾರವೊಂದನ್ನು ನಿರ್ಮಾಣ ಮಾಡಿ, 'ಹೇಮಕುಂಡ್ ಸಾಹಿಬ್' ಎಂಬ ಹೆಸರಿನಲ್ಲಿ, ಹೊರಜಗತ್ತಿಗೆ ಪರಿಚಯಿಸಿದರು ಎಂಬ ಐತಿಹಾಸಿಕ ಕಥೆಯಿದೆ. ಗುರುದ್ವಾರದ ಜೊತೆ ಜೊತೆಯಲ್ಲೇ ಪುಟ್ಟದೊಂದು ಲಕ್ಷಣ ಮಂದಿರವಿದೆ. ಇದೇ  ಕಾರಣದಿಂದಾಗಿ ಈ ಸ್ಥಳವನ್ನು ಹಿಂದೂಗಳು ಮತ್ತು ಸಿಖ್ಖರು ಸಮಾನವಾಗಿ ಆದರಿಸುತ್ತಾರೆ. 

'ಹೇಮಕುಂಡ್ ಸಾಹಿಬ್' ಗುರುದ್ವಾರದ ಪ್ರಾಮುಖ್ಯತೆ :

ಪ್ರಪಂಚದ ಎರಡನೇ ಅತೀ ಎತ್ತರದ ಸ್ಥಳದಲ್ಲಿರುವ ಸಿಖ್ಖರ ಗುರುದ್ವಾರ ಎಂದೇ ಖ್ಯಾತಿ ಪಡೆದಿರುವ ಹೇಮಕುಂಡ್ ಸಾಹಿಬ್ ಅಥವಾ ಹೇಮಕುಂಟ್ ಇರುವುದು ಉತ್ತರಾಂಚಲದ ಚಮೋಲಿ ಜಿಲ್ಲೆಯ ಘಡ್ವಾಲ್ ಊರಿನ ಮೇಲ್ತಟ್ಟಿನಲ್ಲಿ. ಸಮುದ್ರ ಮಟ್ಟಕ್ಕಿಂತ ೪೬೩೨ ಮೀ. ಎತ್ತರದಲ್ಲಿರುವ ಈ ಸ್ಥಳ ಕೇವಲ ತನ್ನ ಆಧ್ಯಾತ್ಮಿಕ ಪ್ರಾಮುಖ್ಯತೆಗೊಂದೇ ಅಲ್ಲದೇ, ಯಾತ್ರಾ ಮಾರ್ಗದ ಸುತ್ತಮುತ್ತಲಿನ ಅಲೌಕಿಕ ನಿಸರ್ಗ ಸೌಂದರ್ಯದಿಂದಾಗಿ, ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುತ್ತದೆ. ವರ್ಷದ ೭ ತಿಂಗಳುಗಳು ಸಂಪೂರ್ಣ ಹಿಮದಿಂದ ಆವೃತ್ತಗೊಳ್ಳುವ ಈ ಸ್ಥಳ, ಜೂನ್ ನಿಂದ ಅಕ್ಟೋಬರ್ ವರೆಗಿನ ಸಮಯದಲ್ಲಿ ಮಾತ್ರ ಯಾತ್ರೆಗೆ ತೆರೆದಿರುತ್ತದೆ. ಸಹಸ್ರ ಸಂಖ್ಯೆಯಲ್ಲಿ, ಹಿರಿಯರು-ಕಿರಿಯರು ಎಂಬ ವಯಸ್ಸಿನ ಮಿತಿಯಿಲ್ಲದೆ, ಪ್ರತಿವರ್ಷವೂ ಸಂಸಾರ ಸಮೇತವಾಗಿ ಈ ಗುರುದ್ವಾರಕ್ಕೆ ಭೇಟಿ ನೀಡುವವರು ಒಂದು ಕಡೆಯಾದರೆ, ಜೀವನದಲ್ಲಿ ಒಮ್ಮೆಯಾದರೂ ನೋಡಬೇಕೆಂಬ ಮಹದಾಸೆಯಿಂದ ನೂರಾರು ಮೈಲಿ ದೂರದಿಂದ ಹರಕೆ ಹೊತ್ತು ಬರುವ ಭಕ್ತಾದಿಗಳು ಇನ್ನೊಂದು ಕಡೆ. ಜೊತೆಗೆ, ಇಲ್ಲಿಯೇ ಇರುವ ಭುಂದರ್ ಗಂಗಾ ಕಣಿವೆಯ 'ವ್ಯಾಲಿ ಆಫ್ ಫ್ಲವರ್ಸ್' ಮತ್ತು 'ಹೇಮಕುಂಡ್ ಸಾಹಿಬ್' ಈ ಎರಡು ಗಮ್ಯಸ್ಥಾನಗಳ ರುದ್ರ ರಮಣೀಯ ಪ್ರಾಕೃತಿಕ ಸೌಂದರ್ಯವನ್ನು ಸವಿಯಲೆಂದೇ ಪ್ರತಿದಿನ ನೂರಾರು ಚಾರಣಿಗರು ಇಲ್ಲಿಗೆ ಬರುತ್ತಾರೆ. ಥರಗುಟ್ಟುವ ಚಳಿ ಮತ್ತು ಭೂಕುಸಿತ, ಕಲ್ಲು ಬಂಡೆಗಳ ಉರುಳುವಿಕೆಯ ಅಸ್ಥಿರ ಹಾದಿಯಿದ್ದರೂ ಕೂಡ ವರ್ಷಕ್ಕೆ ಸರಿಸುಮಾರು ೧. ೫ ಲಕ್ಷದಿಂದ ೨ ಲಕ್ಷ ಜನರು 'ಹೇಮಕುಂಡ ಸಾಹಿಬ್' ಗೆ ಭೇಟಿ ನೀಡುತ್ತಾರೆಂದು ಎಂಬ ಮಾಹಿತಿಯಿದೆ.




















ಗುರುದ್ವಾರದ ಒಳಗೆ ಹೋಗುವ ಮುನ್ನ ಅನೇಕ ಭಕ್ತರು ಇಲ್ಲಿನ ಪವಿತ್ರ ಹೇಮಕುಂಡ್ ಸರೋವರ ಅಥವಾ ಲೋಕಪಾಲ ಸರೋವರದಲ್ಲಿ ಮುಳುಗೆದ್ದು ತೀರ್ಥ ಸ್ನಾನ, ತೀರ್ಥ ಪ್ರೋಕ್ಷಣ್ಯ ಮಾಡಿಕೊಂಡು ಪುನೀತರಾಗುತ್ತಾರೆ. ಇಲ್ಲಿನ ತೀರ್ಥ ಸ್ನಾನ ಮಾಡಿದರೆ, ಕಷ್ಟ ಕಾರ್ಪಣ್ಯಗಳು ರೋಗ ರುಜಿನಗಳು ತೊಲಗಿ ಹೋಗುತ್ತವೆ ಎಂಬ ನಂಬಿಕೆ ಇದೆ. ಆದರೆ ಸರೋವರದ ನೀರು ಎಷ್ಟರ ಮಟ್ಟಿಗೆ ಕೊರೆಯುತ್ತಿರುತ್ತದೆಯೆಂದರೆ,ಇಂತಹ ಹಿಮಗಟ್ಟಿದ ನೀರಿನಿಂದ ಆಚೆ ಬಂದು, ಅಂಗಾಂಗಗಳ ಚಲನವಲನವೇ ಇಲ್ಲದಂತಾಗಿದೆ ಜಡಗಟ್ಟಿಸಿ ಬಿಡುತ್ತದೆ. ಈ ಸರೋವರದ ನೀರಿನಲ್ಲಿ ಸ್ಪಷ್ಟವಾಗಿ ಪ್ರತಿಫಲಿತವಾಗುವ ಸುತ್ತುವರೆದ ಶಿಖರಗಳನ್ನು ನೋಡಲು ಎರಡು ಕಣ್ಣುಗಳು ಸಾಲವು. ಗುರುದ್ವಾರವು, ದರ್ಬಾರ್ ಸಾಹಿಬ್ ಮತ್ತು ಲಂಗಾರ್ ಹಾಲ್ ಅನ್ನು ಒಳಗೊಂಡಿದೆ. ಒಳಗೆ ದರ್ಶನಕ್ಕೆ ಹೋಗುವವರು ಕಡ್ಡಾಯವಾಗಿ ತಲೆಯ ಮೇಲೆ ಬಟ್ಟೆಯನ್ನು ಹಾಕಿಕೊಂಡಿರಬೇಕು. ಇಲ್ಲದಿದ್ದ ಪಕ್ಷದಲ್ಲಿ ಅಲ್ಲಿಯೇ ಗುರುದ್ವಾರದ ಎದುರಿಗೆ ಬಟ್ಟೆಯನ್ನು ಇಟ್ಟುರುತ್ತಾರೆ. ಒಳಗೆ ಹೋಗಿ ಬರಲು ಬಳಸಿ ಮತ್ತೆ ಅಲ್ಲಿಯೇ ಇಟ್ಟು ಬರುವುದು ಅಲ್ಲಿನ ರೂಢಿ.  ಲಂಗಾರ್ ಹಾಳ್ ಅಥವಾ ಊಟದ ಮನೆಯಲ್ಲಿ ನೀಡುವ ಪ್ರಸಾದ ಅತ್ಯಂತ ಶುಚಿ ರುಚಿಯಾಗಿದೆ. ಸಿಹಿಯಾದ ತುಪ್ಪದಲ್ಲೇ ಮುಳುಗಿಸಿ ಮಾಡಿದ ಹಲ್ವಾ, ಬಿಸಿ ಬಿಸಿ ರುಚಿ ರುಚಿ ಕಿಚಡಿ, ಮತ್ತು ಬಿಸಿ ಬಿಸಿ ಕುಡಿದಷ್ಟೂ ಮತ್ತೆ ಮತ್ತೆ ಬೇಕೆನಿಸುವ ಗಿಡಮೂಲಿಕೆಯುಕ್ತ ಚಹಾ..  ಜನ ವಸತಿ ಇರದಂತಹ ಇಷ್ಟು ಎತ್ತರ ಸ್ಟಳಕ್ಕೆ ಪ್ರತಿಯೊಂದು ವಸ್ತುವನ್ನು ತಂದು ಪ್ರಸಾದ ಮಾಡಿ , ಯಾತ್ರಾ ಸೀಸನ್ನಿನಲ್ಲಿ ಪ್ರತಿನಿತ್ಯ ಬರುವ ನೂರಾರು ಭಕ್ತರಿಗೆ ನಿರ್ಬಂಧವಿಲ್ಲದೆ ಬೇಕಾದಷ್ಟು ನೀಡುವ ಇಲ್ಲಿನ ದಾಸೋಹ ಆಕರ್ಷಣೀಯವೆನಿಸುತ್ತದೆ.    

ಹೇಮಕುಂಡಕ್ಕೆ ಹೋಗುವ ಹಾದಿ :

ಹೇಮಕುಂಡ್ ಸಾಹಿಬ್ ದರ್ಶನಕ್ಕೆ, ಗುರುದ್ವಾರದ ವರೆಗೆ ವಾಹನದ ಮೂಲಕ ಸಾಗಲು ಸಾಧ್ಯವಿಲ್ಲ. ಗೋವಿಂದ್ಘಾಟ್ ನಂತರದ ಊರು ಪುಲ್ನ ದಿಂದ ಪ್ರಾರಂಭಿಸಿ, ಕಾಲ್ನಡಿಗೆಯಲ್ಲಿ ಸಾಗಬೇಕು. ಮೊದಲ ದಿನ ಘಾನ್ಘ್ರೀಯ ಎಂಬ ಊರಿನವರೆಗೆ ೧೧ ಕಿ.ಮೀ ಗಳ ಒಂದು ದಿನದ ನೆಡಿಗೆ ಮತ್ತು ಎರಡನೇ ದಿನ ಘಾನ್ಗ್ರೀಯ ದಿಂದ ಹೇಮಕುಂಡ್ ಸಾಹಿಬ್ ವರೆಗೆ ಅರ್ಧ ದಿನದ ೬ ಕಿ.ಮೀ ನೆಡಿಗೆ, ಒಟ್ಟು ೧೬ ಕಿ.ಮೀ ಗಳ ಪ್ರಯಾಸಕರ ಚಾರಣ ಹಾದಿ. ನೆಡಿಗೆ ಸಾಧ್ಯವಿಲ್ಲದವರಿಗೆ ಪರ್ಯಾಯ ವ್ಯವಸ್ಥೆಗಳಿವೆ. ವಾತಾವರಣ ಅನುಕೂಲಕರವಾಗಿದ್ದರೆ, ಜೋಷಿಮಠ ದಿಂದ ಘಾನ್ಗ್ರಿಯ ವರೆಗೆ ಹೆಲಿಕಾಪ್ಟರ್ ಮೂಲಕ ವೈಮಾನಿಕ ಪ್ರಯಾಣ ಬೆಳೆಸಬಹುದು. ಇಲ್ಲವಾದಲ್ಲಿ ಮ್ಯೂಲ್ ಅಥವಾ ಹೆಸರಗತ್ತೆಯ ಸವಾರಿ ಲಭ್ಯವಿದೆ. ಜೊತೆಗೆ, ತಮ್ಮ ಬೆನ್ನಿನ ಬುಟ್ಟಿಯಲ್ಲಿ ಪ್ರವಾಸಿಗರನ್ನು ಮತ್ತು ಅವರ ಬ್ಯಾಗುಗಳನ್ನು ಹೊತ್ತುಕೊಂಡು ಹೋಗುವ ಪೋರ್ಟರ್ಸ್ ಅಥವಾ ಮಾಲಿಗಳು ಕೂಡ ಸಿಗುತ್ತಾರೆ. 

ಚಾರಣ ನಡೆಸುತ್ತ ಮೇಲೇರಿದಂತೆ ಆವೃತ್ತಗೊಳ್ಳುವ ಇಬ್ಬನಿಯ ಸೌಂದರ್ಯ ಅಸೀಮವಾಗಿರುತ್ತದೆ. ಆಗಸದೆತ್ತರಕ್ಕೆ ಚಿಮ್ಮಿ ನಿಂತ ಹಸಿರು ಪೈನ್, ಓಕ್ ಮರಗಳು, ವೈವಿಧ್ಯಮಯ ಹೂಗಳು, ಸಮೃದ್ಧ ಸಸ್ಯರಾಶಿ, ಪಕ್ಕದಲ್ಲಿ ಕಣಿವೆಯಿಂದಿಳಿದು ರಭಸದಲ್ಲಿ ತನ್ನ ಪಥದಲ್ಲಿ ಸಾಗುವ ಪುಷ್ಪವತಿ ನದಿ, ಹಿಮಾಲಯದ ಶ್ರೇಣಿಗಳು, ಹಿಮ ಕರಗಿ ನೀರಾಗಿ ಹರಿದು ಉಂಟಾದ ಪುಟ್ಟ ಪುಟ್ಟ ಜಲಪಾತಗಳು ಕಾಣಸಿಗುತ್ತವೆ, ಇಂತಹ ಪ್ರಕೃತಿ ಮಡಿಲಲ್ಲಿ ಯಾತ್ರೆ ಮಾಡುವುದೇ ಒಂದು ಪುಣ್ಯ. ಚಾರಣದ ಹಾದಿಯುದ್ದಕ್ಕೂ ಶ್ರದ್ಧೆಯಿಂದ ಗುರು ಸಾಹೇಬನನ್ನು ನೆನೆಯುತ್ತಾ,  ಯಾತ್ರಾರ್ಥಿಗಳ 'ಬೋಲೇ ಸೊ ನಿಹಾಲ್ - ಸತ್ ಸ್ರೀ ಅಕಾಲ್' ಎಂಬ ಜಯಘೋಷ ಇತರ ಚಾರಣಿಗರು ಮತ್ತು ಯಾತ್ರಾರ್ಥಿಗಳಿಗೆ  ಹುಮ್ಮಸ್ಸನ್ನು ಹೆಚ್ಚಿಸುತ್ತದೆ. ಪ್ರಮುಖ ಪ್ರವಾಸೀ ತಾಣವಾದ್ದರಿಂದ ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಿ, ಚಾರಣ ಹಾದಿಗೆ ಅಡಚಣೆಯಾಗುವ ಮ್ಯೂಲ್ ತ್ಯಾಜ್ಯ, ಪ್ರವಾಸಿಗರು ಎಲ್ಲೆಂದರಲ್ಲಿ ಎಸೆಯುವ ಕಸಗಳು ಇತ್ಯಾದಿ ತ್ಯಾಜ್ಯವಸ್ತುಗಳ ನಿರ್ವಹಣೆಯನ್ನು, ಸ್ವಚ್ಛತಾಕಾರ್ಮಿಕರು ಅತ್ಯಂತ ಸಮಗ್ರವಾಗಿ ನಿರ್ವಹಿಸಿವುದು ಪ್ರಶಂಸನೀಯವೆನಿಸುವ ವಿಷಯ. ಘಾನ್ಗ್ರಿಯದಲ್ಲಿ ಸಾಕಷ್ಟು ಶೆರ್ಡ್ ಟೆಂಟ್ ಗಳು, ಖಾಸಗೀ ಹೋಟೆಲು ಲಾಡ್ಜುಗಳ ವಸತಿ ವ್ಯವಸ್ಥೆ ಇದೆ. ಉತ್ತಮ ಊಟ ತಿಂಡಿಗಳು ದೊರೆಯುತ್ತವೆ. ಇಲ್ಲಿರುವ ಸಿಖ್ಖರ ಗುರುದ್ವಾರ ಹೇಮಕುಂಡ್ ಸಾಹಿಬ್ ಗೆ ಬರುವ ಯಾತ್ರಾರ್ಥಿಗಳಿಗೆ ವಸತಿ - ಪ್ರಸಾದವನ್ನು ನೀಡುವ ವ್ಯವಸ್ಥೆ ಹೊಂದಿದೆ. 

ಘಾನ್ಗ್ರಿಯ ದಿಂದ ಹೇಮಕುಂಡಕ್ಕೆ ಚಾರಣ ಬೆಳಗಿನ ಜಾವ ತುಸು ಬೇಗನೆ ಪ್ರಾರಂಭಿಸಬೇಕಾಗುತ್ತದೆ. ಏಕೆಂದರೆ ಹೇಮಕುಂಡದಲ್ಲಿ ಜನವಸತಿ ವ್ಯವಸ್ಥೆಯಿರುವುದಿಲ್ಲ. ಮಳೆ-ಚಳಿ ಹೆಚ್ಚಿದ್ದಾಗ, ಮಧ್ಯಾಹ್ನದ ನಂತರದಲ್ಲಿ ಹಿಮ ಪಾತವಾಗುವ ಸಂಭವವಿರುವುದರಿಂದ, ಹೇಮಕುಂಡ್ ದರ್ಶನ ಮುಗಿಸಿ ಎಲ್ಲರೂ ಮಧ್ಯಾಹ್ನ ೧ ಗಂಟೆಯಷ್ಟರಲ್ಲಿ ಕೆಳಗೆ ಇಳಿಯಲು ಪ್ರಾರಂಭಿಸಬೇಕು. ಇಲ್ಲಿನ ಹಾದಿಗಳು ತುಸು ಕಠಿಣವಾಗಿದ್ದು, ಚಾರಣ ನಡೆಸಲು ಅಶಕ್ತವೆನಿಸುವವರಿಗೆ ಮ್ಯೂಲ್ ಮತ್ತು ಪೋರ್ಟರ್ಸ್ಗಳ ಲಭ್ಯತೆ ಇದೆ. ಮಳೆಗಾಲದ ಸಮಯದಲ್ಲೇ ಹೋದರೆ, ಕುಸಿದ ತಾಪಮಾನದಿಂದಾಗಿ  ಪದರ ಪದರವಾಗಿ ಮಂಜು ಬಿದ್ದು ಸಂಗ್ರಹವಾಗಿ, ಸುಣ್ಣದ ಬಂಡೆಯಂತೆ ಕಾಣುವ ಬೃಹತ್ ಗಾತ್ರದ ಹಿಮನದಿಗಳು ಚಾರಣದ ಹಾದಿಯಲ್ಲಿ ಕಾಣಬಹುದು. ಇನ್ನು ನೋಡಬಹುದಾದಂತಹ  ವೈವಿಧ್ಯಮಯ ಹೂಗಳಿಗೆ ಲೆಕ್ಕವಿಲ್ಲ..ಅದೃಷ್ಟವಿದ್ದರೆ, ಉತ್ತರಾಖಂಡ ರಾಜ್ಯದ ಹೂವೆಂದೇ ಪ್ರಸಿದ್ಧವಾದ 'ಬ್ರಹ್ಮ ಕಮಲ' ಕೂಡ ಕೆಲವು ಸ್ಥಳಗಳಲ್ಲಿ ಕಾಣಸಿಗುತ್ತವೆ. ಮೇಲಕ್ಕೆ ಏರಿದಂತೆಯೂ ಪ್ರಕೃತಿಯ ಚೆಲುವು ರುದ್ರ ರಮಣೀಯವೆನಿಸುತ್ತದೆ. 

ಇನ್ನೊಂದು ವಿಶೇಷ ಸಂಗತಿಯೆಂದರೆ, ದೇಶದ ನಾನಾ ಕಡೆಯಿಂದ ತೀರ್ಥಯಾತ್ರೆಗೆಂದು ಬರುವ ಭಕ್ತಾದಿಗಳ ಕುರಿತು ಇಲ್ಲಿನ ಸ್ಥಳೀಯರಿಗೆ ಹೆಚ್ಚಿನ ಗೌರವವಿದೆ. ಉತ್ತರಾಖಂಡದ ಸಾಕಷ್ಟು ಊರುಗಳಲ್ಲಿ,ಅನೇಕ ಸಮಾಜ ಸೇವಕರು, ಸಂಘ ಸಂಸ್ಥೆಗಳು, ರಾಷ್ಟ್ರೀಯ ಹೆದ್ದಾರಿಯ ಬದಿಗಿನ ಕೆಲವು ಅಂಗಡಿ ಮಾಲೀಕರು, ಹೀಗೆ ಬರುವ ಸಿಖ್ಖರು ಮತ್ತು ಪಂಜಾಬಿ ಯಾತ್ರಿಗಳಿಗೆ ಉಚಿತವಾಗಿ ವಸತಿ ಮತ್ತು ಆಹಾರ-ಪಾನೀಯಗಳನ್ನು ನೀಡಿ, ಪ್ರಯಾಣಕ್ಕೆ ಅನುಕೂಲ ಮಾಡಿಕೊಡುವ  ಕುರಿತು ಕೇಳಿ ಆಶ್ಚರ್ಯವಾಯಿತು. ಹೇಮಕುಂಡ್ ಚಾರಣದ ಹಾದಿಯಲ್ಲೂ ಕೂಡ ಎತ್ತರದ ಸ್ಥಳಗಳಲ್ಲಿ ಕೆಲವು ಅಂಗಡಿಯವರು, ಹಿರಿಯ ಯಾತ್ರಾರ್ಥಿಗಳಿಗೆ, ಅಂಗವಿಕಲರಿಗೆ, ಕೊರೆವ ಚಳಿಗೆ ಉಚಿತವಾಗಿ ಚಹಾ ನೀಡುವುದು ನೋಡಿ ಸಂತಸವಾಯಿತು. 

ವಿನಂತಿ : 

ನಾನು ಜೀವನದಲ್ಲಿ ಮೊದಲ ಬಾರಿಗೆ ಅಷ್ಟು ಸಮೀಪದಿಂದ ಹಿಮನದಿಗಳನ್ನು ಕಣ್ಣಾರೆ ನೋಡುತ್ತಿದ್ದರಿಂದ ಅಕ್ಷರಶಃ ಮೂಕಳಾಗಿ ಹೋಗಿದ್ದೆ. ಈ ವಿಹಂಗಮ ನೋಟವನ್ನು ನೋಡಿ ಸಂತೋಷ ಪಟ್ಟ ಮರುಕ್ಷಣಕ್ಕೆ, ಮಾನವ ಪ್ರಕೃತಿಗೆ ಕೊಡುಗೆಯಾಗಿ ನೀಡುತ್ತಿರುವ ಮಾಲಿನ್ಯ ಮತ್ತು ಹೆಚ್ಚಿನ ಇಂಗಾಲದ ಪ್ರಮಾಣದಿಂದಾಗಿ ಏರುತ್ತಿರುವ ಜಾಗತಿಕ ತಾಪಮಾನ ಇಂತಹ ಸಾವಿರಾರು ಹಿಮನದಿಗಳ ಸೃಷ್ಟಿಯನ್ನು ಕುಂಠಿತಗೊಳಿಸಿದೆ ಎಂಬ ಆತಂಕವೂ ಮನದಲ್ಲಿ ಮೂಡಿತು. ಸ್ವಚ್ಛತೆಯ ಮನ್ನಣೆ ಕೇವಲ ಪ್ರವಾಸೋದ್ಯಮ ಇಲಾಖೆಯವರೊಬ್ಬರ ಜವಾಬ್ದಾರಿ ಎಂಬ ಭಾವನೆ ಅನೇಕರಲ್ಲಿದೆ. ಸಾವಿರಾರು ಅಡಿಗಳಷ್ಟು ಎತ್ತರದ ಸ್ಥಳದಿಂದ ಹಿಮ ಕರಗಿ ಹರಿದು ಬರುವ ನೀರಿನ ತೊರೆಗಳಲ್ಲೂ ಕೂಡ, ಪ್ರವಾಸಿಗರು ಎತ್ತೆಸೆದ ಪ್ಲಾಸ್ಟಿಕ್ ಮಾಲಿನ್ಯವನ್ನು ಕಂಡಾಗ, ಧಾರ್ಮಿಕ ನಂಬಿಕೆಗಳೆಡೆಗೆ ಇರುವ ನಮ್ಮ ಶ್ರದ್ಧಾಭಕ್ತಿಗಳು, ನಾವೇ ಒಂದು ಭಾಗವಾಗಿರುವ ಈ ಪ್ರಕೃತಿಯ ಕಾಪಾಡಿಕೊಳ್ಳುವ ವಿಷಯದಲ್ಲಿ ಏಕೆ ಇಲ್ಲವಾಗಿದೆ ಎಂಬ ಬೇಸರ ಕಾಡುವುದು ಸುಳ್ಳಲ್ಲ. ಕೇವಲ ಪ್ರಕೃತಿಯ ಕಂಡು ಮನಸ್ಸು ಪ್ರಫುಲ್ಲಗೊಳಿಸಿಕೊಂಡು ಮನೆಗೆ ಮರಳದೇ ಒಬ್ಬ ಜವಾಬ್ಧಾರಿಯುತ ಪ್ರವಾಸಿಗನಾಗಿ, ಭೂಮಿಯ ಮೇಲಿನ ಜವಾಬ್ಧಾರಿಯುತ ಜೀವಿಯಾಗಿ, ಎಲ್ಲವೂ ಸರ್ವನಾಶವಾಗುವ ಮುಂಚೆ, ಕಸಗಳನ್ನು ಎಲ್ಲೆಂದರಲ್ಲಿ ಎಸೆಯದೆ, ಮರಗಿಡಗಳನ್ನು ಉಳಿಸಿಕೊಂಡು ಮಾಲಿನ್ಯವನ್ನು ಕಡಿಮೆ ಮಾಡಿ, ಇಂಗಾಲದ ಪ್ರಮಾಣ ಕಡಿಮೆಗೊಳಿಸಿ, ಭೂಮಂಡಲದ ಸಮತೋಲನ ಕಾಪಾಡಿಕೊಳ್ಳುವ ಕರ್ತವ್ಯ ನಮ್ಮ ಮೇಲಿದೆ. 

ಸೋಮವಾರ, ನವೆಂಬರ್ 11, 2019

ಈ ಸರ್ತಿಯ ರಜೆ ಹೀಗಿದ್ದರೆ ಹೇಗೆ ಮುದ್ದು ಮಕ್ಕಳೇ..?

ಮುದ್ದು ಮಕ್ಕಳೇ ಪರೀಕ್ಷೆಗಳು ಮುಗಿದು ರಜೆ ಪ್ರಾರಂಭವಾಗಿದೆ. ರಜೆ ಎಂದರೆ ಪಠ್ಯಪುಸ್ತಕ ಹೊಂವರ್ಕ್ ಗಳಿಂದ ಬಿಡುಗಡೆ, ಟಿ.ವಿ, ಮೊಬೈಲು, ಕೈಯಲ್ಲಿ ಕುರುಕಲು ತಿಂಡಿ ಮಾತ್ರ ಅಲ್ಲ ಪುಟಾಣಿಗಳೇ.. ಅದಕ್ಕಿಂತ ಮಿಗಿಲಾಗಿ ನಿಮ್ಮನ್ನು ರಂಜಿಸುವ ಅನೇಕ ವಿಷಯಗಳು ಹೊರಗಿನ ಪ್ರಪಂಚದಲ್ಲಿವೆ. ಈ ಸರ್ತಿ ಅವೆಲ್ಲವನ್ನು ಹುಡುಕಿ ಇಂಟರೆಸ್ಟಿಂಗ್ ಹಾಲಿಡೆ ಮಾಡಿಕೊಳ್ಳೋಣವೆ?
ಈ ರಜೆಯನ್ನು ಉತ್ತಮವಾಗಿ ಸದುಪಯೋಗಪಡಿಸಿಕೊಳ್ಳಲು, ಮತ್ತಷ್ಟು ರಂಗು ರಂಗಾಗಿಸಲು ನಿಮಗೆ ಇಲ್ಲಿವೆ ಕೆಲವು ಹಾಲಿಡೇ ಟಿಪ್ಸ್

  • ನಿಮಗೆ ದೊರಕಿರುವ ಈ ದಸರಾ ರಜೆಯ ಉದ್ದೇಶ, ಹಬ್ಬ ಹರಿದಿನಗಳ ಆಚರಣೆ, ಹಿನ್ನಲೆಗಳ ಬಗ್ಗೆ ಹಿರಿಯರಿಂದ ಕೇಳಿ ತಿಳಿದುಕೊಳ್ಳಿ. 'ನಿಮ್ಮದೇ ಹಾಬಿ ಪುಸ್ತಕವಿದ್ದರೆ ಅದರಲ್ಲಿ ತಿಳಿದುಕೊಂಡಿದ್ದನ್ನು ಬರೆದಿಟ್ಟುಕೊಂಡು ಸ್ನೇಹಿತರೊಂದಿಗೆ ಹಂಚಿಕೊಳ್ಳಿ. 
  • ದೊಡ್ಡವರ ಜೊತೆ ಚರ್ಚಿಸಿ, ಆಟದ ಮೂಲಕ ಒಂದು ದಿನ ನಿಮ್ಮ 'ಅಮ್ಮ' ನ ರೋಲ್ ನೀವು ತೆಗೆದುಕೊಳ್ಳಿ. ಅಮ್ಮ ತರಹ ಆಕ್ಟ್ ಮಾಡುವುದು, ಅಮ್ಮನ ತರಹ ಮನೆಯಲ್ಲಿನ  ಎಲ್ಲ ಕೆಲಸ ಮಾಡುವುದು, ಎಲ್ಲವೂ ಅಮ್ಮನಂತೆ.. ! ಬೇಕಾಗುವ ಕೆಲವು ಜವಾಬ್ಧಾರಿಯುತ ಕೆಲಸಕ್ಕೆ ಕೇಳಿ ಸಹಾಯ ಪಡೆದುಕೊಳ್ಳಿ ಆದರೆ ನಿಮ್ಮ ಪ್ರಯತ್ನ ಮೊದಲು ಇರಲಿ. 
  • ಪ್ರತಿದಿನ ನಿಮ್ಮಿಂದ ಸಾಧ್ಯವಾಗುವ ಯಾವುದಾದರೂ ಒಂದು ಮನೆಗೆಲಸವನ್ನು ಮುಂಚಿತವಾಗಿಯೇ ದೊಡ್ಡವರಿಗೆ ತಿಳಿಸಿ ಮಾಡಿ ಕೊಡಿ ಮತ್ತು ಮಾಡಿಯಾದ ನಂತರಆ ಕೆಲಸ ಇಷ್ಟವಾಗಿದ್ದರೆ, ಮನೆಯ ಪ್ರತಿಯೊಬ್ಬರಿಂದಲೂ ಒಂದೊಂದು ಸ್ಮೈಲಿ ಬರೆದು ಕೊಡಲು ಹೇಳಿ. ರಜೆ ಮುಗಿಸುವಷ್ಟರಲ್ಲಿ  ಮನೆಯವರ ಎಷ್ಟು 'ಸ್ಮೈಲ್' ನಿಮಗೆ ಸಿಗುತ್ತದೆ ನೋಡಿ.. ಅಷ್ಟು ಖುಷಿ ನೀವು ಬೇರೆಯವರಿಗೆ ಕೊಟ್ಟಿದ್ದೀರಿ !! 
  • ರಜೆಯೆಂದರೆ ರಾತ್ರಿ ತುಂಬಾ ಹೊತ್ತಿನವರೆಗೆ ಟಿ.ವಿ ನೋಡಿ, ಸುಮಾರು ಬಿಸಿಲು ತಲೆಯ ಮೇಲೇರುವವರೆಗೆ ಮಲಗುವುದಲ್ಲ. ಸಾಕಷ್ಟು ಇಂಟರೆಸ್ಟಿಂಗ್ ವಿಷಯಗಲು ಬೆಳಗಿನ ಜಾವದಲ್ಲಿ ಸಿಗುತ್ತವೆ. 
  • ಹಬ್ಬದ ಸಮಯದಲ್ಲಿ ನ್ಯೂಸ್ ಪೇಪರ್ರಿನಲ್ಲಿ ಬರುವ ಪ್ರತಿ ವಿಷಯವನ್ನೂ ಗಮನಿಸಿ, ಚಿತ್ರ ಸಂಗ್ರಹ ಮಾಡಿ. ಉದಾಹರಣೆಗೆ, 'ಹಬ್ಬ ಆಚರಣೆ' ಎಂಬ ವಿಷಯದಡಿಯಲ್ಲಿ ಬರುವ ದೈನಂದಿನ ಪತ್ರಿಕೆಯಲ್ಲಿ ಹಬ್ಬದ ಚಿತ್ರಗಳು, ಪೂಜೆಜಿಸಲ್ಪಡುವ ದೇವರುಗಳು, ಜನರ ವೇಷಭೂಷಣಗಳು, ಹೊಸ ತಿಂಡಿಗಳು, ವಿಶೇಷ ಸ್ಥಳಗಳ ಚಿತ್ರಗಳು ಇತ್ಯಾದಿ ಹುಡುಕಿಟ್ಟುಕೊಂಡು ಪೇಪರ್ ಕಟಿಂಗ್ ಗೆ ಅವಕಾಶವಿದ್ದರೆ, ಅವುಗಳನ್ನೆಲ್ಲ ಕಟ್ ಮಾಡಿ ಒಂದು ಕೊಲಾಜ್ ರೆಡಿ  ಮಾಡಿ. 
  • ಊರಿಗೆ ನೆಂಟರ ಮನೆಗೆ ಹೋಗಿ ಬಂದರೆ, ಅವರೆಲ್ಲರ ಹೆಸರು ಡೈರಿಯಲ್ಲಿ ಬರೆದಿಟ್ಟುಕೊಂಡು ನಿಮ್ಮ ಫ್ಯಾಮಿಲಿ ಚಾರ್ಟ್ ಅಥವಾ ಅವರು ನಿಮ್ಮ ಸಂಬಂಧಿ ಹೇಗೆ ಎಂಬುದನ್ನು ಕಂಡುಕೊಳ್ಳಿ 
  • ಮುಂದೆ ಬರುತ್ತಿರುವ ದೀಪಾವಳಿ ಹಬ್ಬ, ನಿಮ್ಮ ಆರ್ಟ್ ನಿಂದಲೇ ಶೋಭಿಸಲಿ.. ಹಣತೆಗಳಿಗೆ ಪೈಂಟ್ ಮಾಡುವುದು , ರೊಟ್ಟು-ಬಣ್ಣದ ಹಾಳೆಗಳನ್ನು ಬಳಸಿ ಆಕಾಶ ಬುಟ್ಟಿ ಮಾಡುವುದು, ಕುಂದನ್ ರೀತಿಯ ಅಲಂಕಾರಿಕ ಕ್ರಾಫ್ಟ್ ವಸ್ತುಗಳನ್ನು ಅಂಟಿಸಿ ನಿಮ್ಮದೇ ಆದ ಬಣ್ಣಬಣ್ಣದ ರೆಡಿಮೇಡ್ ರಂಗೋಲಿ ಇತ್ಯಾದಿ ಹ್ಯಾಂಡ್ ಮೇಡ್ ವಸ್ತುಗಳನ್ನು ತಯಾರಿಸಿಟ್ಟುಕೊಳ್ಳಿ.  
  • ಮನೆಯ ಹಿತ್ತಲಿನಲ್ಲಿ ಸ್ವಲ್ಪ ಜಾಗವಿದ್ದರೆ ಅಥವಾ ಮಣ್ಣಿನ ಪಾಟಿನಲ್ಲಿ ಟೊಮ್ಯಾಟೋ, ಕೊತ್ತಂಬರಿ, ಮೆಂತೆ ಇತ್ಯಾದಿ ಬೀಜಗಳನ್ನು ಬಿತ್ತಿ, ಇಲ್ಲವೇ ಪುಟ್ಟ ತರಕಾರಿ ಗಿಡವೊಂದನ್ನು ನೆಟ್ಟು ಅದರ ಆರೈಕೆ ಮಾಡಿ ಬೆಳೆಸಿಕೊಳ್ಳಿ, ಪ್ರತಿ ಹೊಸ ಚಿಗುರು ಕೂಡ ಖುಷಿ ಗೊತ್ತೇ.. ಜೊತೆಗೆ ನೀವೇ ಬೆಳೆದ ಹಣ್ಣು ತರಕಾರಿಯ ರುಚಿಯೇ ಬೇರೆ.
  • ಈ ಸರ್ತಿಯ ರಜೆಯಲ್ಲಿಯಾವುದಾದರೂ ಒಂದು ಹೊಸ ಅಡುಗೆ/ಪಾನೀಯ ಮಾಡುವುದನ್ನು ಕಲಿಯಿರಿ. ಸ್ಟವ್ ಬಳಸಿ ಮಾಡುವಂತದ್ದಾದರೆ ಸುರಕ್ಷತೆಗೆ ಹಿರಿಯರ ಮಾರ್ಗದರ್ಶನವಿರಲಿ. 
  • ಊರ ಕಡೆಗೆ, ಹಳ್ಳಿಯ ಕಡೆಗೆ ಹೋಗುವ ಅವಕಾಶವಿದ್ದರೆ ಅಲ್ಲಿನ ಆಟಗಳನ್ನು ಕೇಳಿ ಹುಡುಕಿ ಆಟವಾಡಿ ಬನ್ನಿ. ಆಟಕ್ಕೆ ದೊಡ್ಡವರು ಚಿಕ್ಕವರೆಂಬ ಬೇಧಭಾವವಿಲ್ಲ, ಪೋಷಕರಿಗೆ ಸಮಯವಿದ್ದಾಗ ಅವರನ್ನೂ ನಿಮ್ಮ ಜೊತೆ ಎಳೆದುಕೊಂಡು ಆಟವಾಡಿ. 
  • ಆಸಕ್ತಿದಾಯಕ ವಸ್ತುವನ್ನು ಸಂಗ್ರಹ ಮಾಡುವುದು ಕೂಡ ಒಂದು ಹವ್ಯಾಸ. ನೀರಿನ ಸ್ಥಳಗಳಿಗೆ ಹೋದರೆ ಅಲ್ಲಿನ ಕಲ್ಲಿನ ರಚನೆ ಗಮನಿಸಿ ಪುಟ್ಟ ಪುಟ್ಟ ಇಷ್ಟವಾದ ವಸ್ತುಗಳನ್ನು ಸಂಗ್ರಹಿಸಿಕೊಳ್ಳಿ. ಕಾಡು ಮೇಡು ಅಲೆಯುವ ಅವಕಾಶ ಸಿಕ್ಕಿದರೆ ಬೀಜಗಳು, ಹಣ್ಣುಗಳು, ಬೇರೆ ಬೇರೆ ರೀತಿಯ ಎಲೆಗಳನ್ನು ಸಂಗಹಿಸಬಹುದು. ಅವುಗಳ ಆಕಾರ, ಬಣ್ಣಇತ್ಯಾದಿ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಬಂದು ನಿಮ್ಮ ಹಾಬಿ ಪುಸ್ತಕದಲ್ಲಿ ಚಿತ್ರ ಬರೆಯಲು ಪ್ರಯತ್ನಿಸಿ
  • ಎಲ್ಲಾದರೂ ಪ್ರವಾಸಕ್ಕೆ ಹೋಗುವವರಿದ್ದರೆ, ಆ ಸ್ಥಳಕ್ಕೆ ಹೋಗಿ ಬಂದ ಅನುಭವ, ವಿಶೇಷವಾಗಿ ಕಂಡು ಇಷ್ಟವಾದ ವಸ್ತು ಅಥವಾ ವಿಷಯದ ಬಗ್ಗೆ ಚಿತ್ರಿಸಿ ಅಥವಾ ಬರೆಯಿರಿ 
  • ಕನಿಷ್ಠ ಎರಡಾದರೂ ಕಥೆ ಪುಸ್ತಕ ಕೊಂಡು ಓದಿ. 
  • ಪ್ರವಾಸಕ್ಕೆ ಹೋಗುತ್ತಿದ್ದಲ್ಲಿ, ಹಾದಿಯಲ್ಲಿ ಸಿಗುವ ಊರಿನ ಮಜಾ ಮಜಾ ಹೆಸರುಗಳನ್ನು ಬರೆದಿಡಿ. ಯಾವ ಊರಿಗೆ ಹೋಗಿದ್ದೀರೋ ಆ ಊರಿಗೆ ಕುಡಿಯುವ ನೀರು ಯಾವ ನದಿಯಿಂದ ಬರುತ್ತದೆ? ಆ ಊರಿನಲ್ಲಿ ಯಾವ ಯಾವ ಫ್ಯಾಕ್ಟರಿಗಳಿವೆ? ಅಲ್ಲಿ ಕಾಣುವ ಪ್ರಾಣಿ ಪಕ್ಷಿಗಳು ಯಾವ್ಯಾವುದು? ಮಣ್ಣು ಯಾವ ಬಣ್ಣದಲ್ಲಿದೆ? ಯಾವ್ಯಾವ ತರಕಾರಿ ಹಣ್ಣು ಧಾನ್ಯ ಬೆಳೆಯುತ್ತಾರೆ ಆ ಊರಿನ ರೈತರು ಇತ್ಯಾದಿ ವಿಷಯಗಳ ಪ್ರಶ್ನಾವಳಿ ಲಿಸ್ಟ್ ಬರೆದಿಟ್ಟುಕೊಂಡು ಹಿರಿಯರಲ್ಲಿ ವಿಚಾರಿಸಿ ನಿಮ್ಮದೇ ಆದ ಟ್ರಾವೆಲಾಗ್ ತಯಾರಿಸಿ.  
  • ವೆಸ್ಟ್ ನ್ಯೂಸ್ ಪೇಪರ್ರು ಮನೆಯಲ್ಲಿದ್ದರೆ, ಅಂಟು ಮತ್ತು ಸೆಣಬಿನ ದಾರ ಬಳಸಿ ಗಟ್ಟಿ ಪೇಪರ್ ಬ್ಯಾಗ್ ಮಾಡುವುದನ್ನು ತಯಾರಿಸಿ. ೧೦ ಪೇಪರ್ ಬ್ಯಾಗ್ ಮಾಡಿದರೆ ನೀವು ೧೦ ಪ್ಲಾಸ್ಟಿಕ್ ಚೀಲಗಳನ್ನು ಕಡಿಮೆ ಮಾಡಿದಂತೆ. 
  • ಒಂದಾದರೂ ಹೊಸ ಆಟವನ್ನು ಕಲಿಯಿರಿ.