ಬುಧವಾರ, ಆಗಸ್ಟ್ 30, 2023

ಬೆಂಕಿ ಕಡ್ಡಿ ಆಟ

ಸುತ್ತ ಮುತ್ತ ಎಲ್ಲಾ ಕಡೆಗೂ ಸ್ಕ್ರೀನ್ ಇರುವಾಗ, ಮಕ್ಕಳಿಗೆ ಟೀವಿ ನೋಡಬೇಡಿ, ಮೊಬೈಲ್ ನೋಡಬೇಡಿ ಅಂತ ಹೇಳ್ತಿದ್ರೆ, ಮನೇಲಿರೋ ಮಕ್ಕಳಾದರೂ ಏನು ಮಾಡಬೇಕು? ಹೊರಾಂಗಣ ಆಟಕ್ಕೆ ಅವಕಾಶ, ಸಮಯ ಸಂದರ್ಭ, ಸ್ನೇಹಿತರು ಇತ್ಯಾದಿ ಇದ್ದಾಗ ಓಕೆ ಒಪ್ಪಬಹುದು. ಮನೇಲಿದ್ದಾಗ ಮಕ್ಕಳ ಜೊತೆ ಏನೇನು ಆಟಗಳನ್ನು ಆಡಬಹುದು? ಆಟದ ಸಾಮಾನುಗಳನ್ನು ತಂದು ಪೂರೈಸುವುದು ಹೌದ? ಎಂಬಿತ್ಯಾದಿ ಯೋಚನೆಗಳು ನಮಗೂ ಒಂದು ಸಲ ತಲೆ ಕೆರೆದುಕೊಳ್ಳುವಂತೆ ಮಾಡುತ್ತೆ ಅಲ್ವ? ಹಿಂಗಿದ್ದೇ ಒಂದು ಟೈಮ್ ಪಾಸ್ ಆಟ, ಆದ್ರೆ ತಲೆಗೆ ಭಾರೀ ಕೆಲಸ ಕೊಡುವ ಆಟ, ನಮ್ಮ ಬಾಲ್ಯದ ಚೀಪ್ ಅಂಡ್ ಬೆಸ್ಟ್ ಆಟ - ಬೆಂಕಿ ಕಡ್ಡಿ ಆಟ!


ದೇವರಿಗೆ ದೀಪ ಹಚ್ಚಲು, ಅಡುಗೆ ಮನೇಲಿ ಮ್ಯಾಚ್ ಬಾಕ್ಸೆನ್ತು ಸಾಮಾನ್ಯ ಎಲ್ಲರ ಮನೆಯಲ್ಲಿ ಇದ್ದೇ ಇರುತ್ತದೆ. ಅಷ್ಟೇ ನಮ್ಮ ಆಟದ ವಸ್ತು :) ಬೆಂಕಿ ಕಡ್ಡಿ ಬಳಸಿ, ಸಂಖ್ಯೆಗಳ ಸಮೀಕರಣ ಬಗೆಹರಿಸುವುದೇ ನಮ್ಮ ಆಟ. ಯಾವ ವಯಸ್ಸಿನವರಿಗೆ ಈ ಆಟ ಅಂತ ಕೇಳಿದ್ರ? ಪ್ಲಸ್ಸು ಮೈನಸ್ಸು  ಲೆಕ್ಕ ಗೊತ್ತಿರೋ ಎಲ್ಲ ಸಣ್ಣ ದೊಡ್ಡ ಮಕ್ಕಳಿಗೆ ಈ ಆಟ. ಒಂದಷ್ಟು ಬೆಂಕಿ ಕಡ್ಡಿಗಳ ಜೋಡಿಸಿ ಅಂಕೆಗಳ ಮಾದರಿ ಮಾಡಿ, ಕೂಡು ಕಳೆಯೋ ಲೆಕ್ಕಾಚಾರದ ರಸಪ್ರಶ್ನೆ ಹಾಕಿ, ಒಂದೆರಡು ಕಡ್ಡಿಗಳ ಮಾತ್ರ ಬದಲಾಯಿಸಿ ಬಗೆಹರಿಸಬೇಕು ಎಂದು ಕೇಳಿ, ತಲೆಗೆ ಸ್ವಲ್ಪ ಕೆಲಸ ಕೊಡುವುದೇ ಈ ಆಟ ಆಡುವ ಬಗೆ.  ಚಿಕ್ಕಂದಿನಲ್ಲಿ ಈ ಆಟದ ಪ್ರಶ್ನೆ ಹಾಕುವವರೇ ದೊಡ್ಡ ಗಣಿತ ಶಾಸ್ತ್ರಜ್ಞರಂತೆ ಅನ್ನಿಸ್ತಿತ್ತು. ಕೇವಲ ಒಂದು ೧೦-೧೨ ಬೆಂಕಿ ಕಡ್ಡಿ ಇವತ್ತು ನಾವು ಮನೆಯ ಮೂರೂ ಜನರ ೫೦ ನಿಮಿಷವನ್ನು ಹಿಡಿದಿಟ್ಟಿತ್ತು ಎಂದರೆ ನಂಬುತ್ತೀರ!? ಆಡುವ ಬಗೆಗೆ ಒಂದು ಪುಟ್ಟ ಮಾಹಿತಿ ಕೆಳಗಿದೆ, ಮತ್ತೊಂದಷ್ಟು ಪ್ರಶ್ನೆಗಳು ನಿಮ್ಗೂ ಕೂಡ! ಇಂಟರ್ನೆಟ್ ಸಹಾಯ ಇಲ್ಲದೇ ಉತ್ತರ  ಕಂಡು ಹಿಡೀಬೇಕು ಗೊತ್ತಾಯ್ತಾ ?ಹಾಂ! ನೋ ಚೀಟಿಂಗ್!🤗🤗

#ನಮ್ಕಾಲದಾಟ #ಬೆಂಕಿಕಡ್ಡಿಆಟ #ಸಾನ್ವಿಸ್ಟೋರಿ #childhoodgames #brainteasers

ಮಂಗಳವಾರ, ಆಗಸ್ಟ್ 29, 2023

ಬಾಲ್ಕನಿ ಗಾರ್ಡನಿಂಗ್

ನಗರ ಪಟ್ಟಣಗಳಲ್ಲಿ ವಾಸಿಸುವವರಿಗೆ ಹೂದೋಟ ಅಥವಾ ಅಗತ್ಯ ಗಿಡಗಳ ಆಸೆ ಇದ್ದರೂ ಅವಕಾಶವಿರುವುದಿಲ್ಲ. ಗಿಡದ ಬಗ್ಗೆ ಆಸಕ್ತಿ ಇರುವವರು, ಮನಸ್ಸಿದ್ದರೆ ಬಾಲ್ಕನಿಯನ್ನೇ ಸುಂದರ ಹೂದೊಟವಾಗಿಸಬಹುದು. ಕೈತೋಟ ಮಾಡುವುದು ಮನೆಗೆ ಅಂದ, ಮನಸ್ಸಿಗೆ ಚೆಂದ ಎನ್ನಿಸುವಂತಹ ಒಂದು ಹವ್ಯಾಸ. ಯಾವ್ಯಾವ ಗಿಡಗಳಿಂದ ಯಾವೆಲ್ಲ ಪ್ರಯೋಜನವಿದೆ ಎಂದು ತಿಳಿದುಕೊಂಡು ಸಣ್ಣ ಪ್ರಮಾಣದಲ್ಲಿಯಾದರೂ ಸ್ವತಃ ತರಕಾರಿ ಸೊಪ್ಪು ಬೆಳೆಯುವುದು ಆರೋಗ್ಯಕ್ಕೂ ಅನುಕೂಲ. ಬಾಲ್ಕನಿ ಗಾರ್ಡನಿಂಗ್ ಬಗ್ಗೆ ಹೀಗೊಂದಷ್ಟು ಟಿಪ್ಸ್. 




ಮೊದಲಿಗೆ, ಬಾಲ್ಕನಿಯ ನೆಲದ ಜಾಗ, ನೇತು ಹಾಕಬಹುದಾದ ಗಿಡಗಳಿಗೆ ವ್ಯವಸ್ಥೆ, ಗೋಡೆಗಳಿಗೆ ಸ್ಟಾಂಡ್ ಮಾಡಿಸಬಹುದಾದ ಸಾಧ್ಯತೆ ಇತ್ಯಾದಿಯಾಗಿ ಒಂದು ಗಾರ್ಡನ್ ಲೇಔಟ್ ಪ್ಲಾನ್ ಮಾಡಿಕೊಳ್ಳಿ. ಹೆಚ್ಚಿನ ಜಾಗವಿದ್ದರೂ ಸಹ, ಸಣ್ಣದಾಗಿ ಪ್ರಾರಂಭ ಮಾಡಿ ಆರು ತಿಂಗಳುಗಳ ಕಾಲ ಸಾಧ್ಯತೆ ಅಸಾಧ್ಯತೆಗಳ ಪರಿಶೀಲಿಸಿಕೊಂಡು ಮುಂದುವರೆಯಿರಿ. ಪ್ರಾರಂಭದಲ್ಲಿ, ವಿಶೇಷ ಬಗೆಯ ಪಾಟ್ಗಳಿಗಿಂತ, ಉತ್ತಮ ಸತ್ವವಿರುವ ಮಣ್ಣಿಗೆ ಬಂಡವಾಳ ಹೂಡುವುದು ಜಾಣ್ಮೆಯ ನಿರ್ಧಾರ. ಭಾರದ ಸಿಮೆಂಟ್ ಅಥವಾ ಕಲ್ಲಿನ ಪಾಟ್ಗಳಿಗಿಂತ, ಮಣ್ಣಿನ, ಸೆಣಬಿನ ಚೀಲಗಳು ಒಳ್ಳೆಯದು. ಹೆಚ್ಚಿನ ಭಾರವನ್ನು ತಡೆದುಕೊಳ್ಳುವ ಸಾಮರ್ಥ್ಯ ಬಾಲ್ಕನಿಗಿದ್ದರೆ, ಲಂಬವಾದ ಕಬ್ಬಿಣದ ಅಥವಾ ಮರದ ಸ್ಟ್ಯಾಂಡ್ ಕಪಾಟುಗಳನ್ನು ಮಾಡಿಸಿಕೊಂಡರೆ, ಸರಳುಗಳಿಗೆ ನೇತು ಹಾಕುವ ಪಾಟ್ಗಳನ್ನು ಕೊಂಡರೆ ಬಾಲ್ಕನಿಯಲ್ಲಿ ಓಡಾಡುವ ಅವಕಾಶದ ಜೊತೆಗೆ ಹೆಚ್ಚಿನ ಗಿಡಗಳಿಗೆ ಸ್ಥಳಾವಕಾಶ ಸಿಗುತ್ತದೆ. 

ಸಿಗಬಹುದಾದ ಬಿಸಿಲು ಮತ್ತು ಶಾಖದ ಲಭ್ಯತೆಯನ್ನು ಪರಿಶೀಲಿಸಿ ಗಿಡಗಳ ಆಯ್ಕೆ ಮಾಡಿ. ಪೂರ್ವಕ್ಕಿರುವ ಬಾಲ್ಕನಿಯಲ್ಲಿ ೮-೧೦ ತಾಸುಗಳ ಕಾಲ ಬಿಸಿಲು ಸಿಗುತ್ತದೆ. ಅಲ್ಲಿ ತರಕಾರಿಗಳು, ಬಳ್ಳಿ ಬಸಳೆಗಳು  ಚೆನ್ನಾಗಿ ಬೆಳೆಯುತ್ತವೆ. ನೆರಳಿರುವ ಜಾಗವಾದರೆ ಸಣ್ಣ ಪುಟ್ಟ ಗಿಡಮೂಲಿಕೆ ಗಿಡಗಳು, ಕಡಿಮೆ ಬೆಳಕಿನ ಪರಿಸ್ಥಿತಿಗೆ ಹೊಂದಿಕೊಳ್ಳುವಂತಹ ಗೆಡ್ಡೆಗೆಣಸು, ಒಳಾಂಗಣ ಶೋ ಗಿಡಗಳು, ಆಸ್ಟಿಲ್ಬ್, ಜೆರೇನಿಯಂ, ಲೋಬಿಲಿಯ ಗಳಂತಹ ಬಣ್ಣದ ಹೂವಿನ ಗಿಡಗಳನ್ನೂ ಬೆಳೆಸಿಕೊಳ್ಳಬಹುದು. 

ನಿಮ್ಮ ಸಮಯಾವಕಾಶವನ್ನು ಗಮನಿಸಿಕೊಳ್ಳಿ. ಚಿಕ್ಕದೇ ಗಾರ್ಡನ್ ಆದರೂ, ಅದರ ನಿರ್ವಹಣೆ ಅತೀ ಮುಖ್ಯ. ಹೆಚ್ಚಿನ ಸಮಯವಿಲ್ಲದಿದ್ದಲ್ಲಿ, ಕಡಿಮೆ ನಿರ್ವಹಣೆಯ ಗಿಡಗಳಾದ, ಟೊಮೇಟೊ, ಬಣ್ಣದ ಎಲೆಗಳಿರುವ ಶೋ ಗಿಡಗಳು, ಗಿಡಮೂಲಿಕೆ ಗಿಡಗಳು, ಗೆಡ್ಡೆ ಸಸ್ಯಗಳು, ಇತ್ಯಾದಿ ಬೆಳೆಯಬಹುದು. ನೀರಿನ ಲಭ್ಯತೆ ಕಡಿಮೆ ಇದ್ದಲ್ಲಿ, ಪಾಟ್ಗಳಿಗೆ ಹನಿ ನೀರಾವರಿಯ ಅನೇಕ ಬಗೆಯ ಸಾಧನಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿದೆ. ಮಣ್ಣಿನ ಪಾಟ್ಗಳ ಕೆಳಗಡೆ ನೀರಿನ ತಟ್ಟೆ ಇಡುವುದರಿಂದ ತೇವಾಂಶ ಉಳಿಯಲು ಸಹಾಯಕ.  

 ಬೇಸಿಗೆಯ ಬಿರು ಶಾಖಕ್ಕೆ ಗಿಡಗಳು ಸಾಯದಂತೆ, ಪಾಟುಗಳಿಗೆ ಒಣಹುಲ್ಲಿನ ಅಥವಾ ತರಗೆಲೆಗಳ ಹೊದಿಕೆಯಿಟ್ಟು ನೀರು ಹಾಕಬಹುದು. ತೀವ್ರ ಗಾಳಿ ಬೀಸುವೆಡೆ ಗಾರ್ಡನ್ ಇದ್ದರೆ, ಗಾಳಿ ತಡೆಹಿಡಿಯಬಹುದಾದಂತಹ ದೊಡ್ಡ ಗಿಡಗಳ ಕೆಳಗೆ-ನಡುವಿನಲ್ಲಿ ಸಪೂರ ಗಿಡಗಳಿಗೆ ಅವಕಾಶ ಮಾಡಿದರೆ, ರಕ್ಷಣೆ ಸಿಗುತ್ತದೆ. ಶೀತ ಶುಷ್ಕ ಗಾಳಿಗೆ ಗಿಡಗಳು ಒಣಗದಂತೆ, ಪ್ರಯೋಜನಕ್ಕಿಲ್ಲದ ದಪ್ಪ ಬಟ್ಟೆಯನ್ನು ನೆನೆಸಿ ಗಿಡದ ಬುಡಕ್ಕೆ ಹಾಕಿ ತಂಪನ್ನು ಕಾಯ್ದಿರಿಸಬಹುದು. 

ಬಾಲ್ಕನಿ ಗಾರ್ಡನ್ ನ ಸ್ವಚ್ಛತೆಕ್ರಮವಾಗಿ. ಸೊಳ್ಳೆಗಳಿಗೆ ಅನುಕೂಲವಾಗುವಂತೆ ನೀರು ನಿಲ್ಲಿಸಬಾರದು. ನೈಸರ್ಗಿಕ ಕೀಟನಾಶಕಗಳಾಗಿ, ಬೆಳ್ಳುಳ್ಳಿ ಕಾಳುಮೆಣಸಿನ ಸ್ಪ್ರೇ, ನೀಲಗಿರಿ ಎಣ್ಣೆ, ಬೇವಿನ ಎಣ್ಣೆ ಇತ್ಯಾದಿ ಬಳಸಿ ಗಿಡಗಳಿಗೆ ಬಾಧೆ ನೀಡುವಂತಹ ಶಿಲೀಂಧ್ರನಾಶಕಗಳು, ಸಸ್ಯನಾಶಕ ಹುಳುಗಳು, ಮೃದ್ವಂಗಿಗಳಿಂದ ರಕ್ಷಿಸಬಹುದು. 

ಟ್ರೇನಲ್ಲಿ,  ಗಿಡಗಳಿಗೆ ಭೂಮಿಯ ನೈಸರ್ಗಿಕ ವಾತಾವರಣದ ಅನುಭವ ನೀಡಲು, ಪಾಟ್ಗಳಲ್ಲಿ ಸಣ್ಣಪುಟ್ಟ ಸ್ಥಳೀಯ ಹುಲ್ಲುಗಳ ಗರಿಕೆಗಳ  ಬೇರುಗಳನ್ನು ನೆಡಬಹುದು. ಪಾಲಕ್, ಕೊತ್ತಂಬರಿ ಬೀಜಗಳನ್ನು  ಬಿತ್ತಿ, ವಿಟಮಿನ್ಸ್, ಮಿನರಲ್ಸ್ ಮತ್ತು ಆಂಟಿಓಕ್ಸಿಡೆಂಟ್ಸ್ ನಿಂದ ಹೇರಳವಾಗಿರುವ ಮೈಕ್ರೊಗ್ರೀನ್ಸ್ ಗಳನ್ನು ಬೆಳೆಸಿದರೆ, ಮಣ್ಣನ್ನು ಹಿಡಿದಿಡುವಲ್ಲಿ ಇವು ಸಹಾಯವೂ ಮಾಡುತ್ತವೆ.  

ಅದೃಷ್ಟದ ನಂಬಿಕೆಯ ಗಿಡಗಳ ಹೊರತಾಗಿ, ಆದಷ್ಟು ರೆಡಿ ಗಿಡಗಳನ್ನು ತೆಗೆದುಕೊಳ್ಳುವುದಕ್ಕಿಂತ, ಸ್ನೇಹಿತರಿಂದ, ಬೆಳೆಗಾರರಿಂದ, ಗಿಡಗಳ ಬೀಜ ಮತ್ತು ಹೆಣಿಕೆ ಪಡೆದು, ಹೊಸತಾಗಿ ನೆಟ್ಟು ಬೆಳೆಸುವುದು ಉತ್ತಮ. ಬಾಲ್ಕನಿ ಗಾರ್ಡನಿಂಗ್ ಕುರಿತಾಗಿ ಸಮಾನ ಮನಸ್ಕರರ ಗ್ರೂಪ್ ಗಳಿಗೆಸೇರಿಕೊಂಡರೆ, ಬೀಜಗಳನ್ನು ಮೊಳಕೆಯೊಡೆಸಿ ಗಿಡ ಮಾಡುವುದು, ಹುಳಗಳಿಂದ ಸಂರಕ್ಷಣೆಯ ಬಗೆ, ಪಾಲಿನೇಶನ್  ಇತ್ಯಾದಿಯಾಗಿ ಇತರರ ಅನುಭವ ಮತ್ತು ಸಲಹೆ ಸೂಚನೆಗಳು ದೊರೆಯುತ್ತವೆ. 

ಆರೋಗ್ಯಕರ ಮಣ್ಣು, ಒಳ್ಳೆಯ ಗಾರ್ಡನ್ಗೆ ಮೂಲಮಂತ್ರ. ಸಣ್ಣ ಕಲ್ಲುಗಳ ಸಹಿತವಾಗಿ, ಮರಳ ಮಿಶ್ರಣ, ಗಾಳಿ ಮತ್ತು ಸೂಕ್ಷಾಣುಜೀವಿಗಳಿರುವ ಮಣ್ಣು, ಗಿಡಗಳಿಗೆ ಸಂಪೂರ್ಣ ಆಹಾರ. ಹಾಗಾಗಿ ಇವೆಲ್ಲದರ ಸಮತ್ವತೆ ಅತ್ಯವಶ್ಯಕ. ಕೃತಕ ರಾಸಾಯನಿಕ ಗೊಬ್ಬರಗಳಿಂದ ಮಲಿನಗೊಳಿಸದೇ, ಸಹಜ ಮನೆಯಲ್ಲಿಯೇ ತಯಾರಿಸಿದ ಹಸಿಕಸದ ಗೊಬ್ಬರ, ಸಗಣಿ ಇತ್ಯಾದಿ ಪೂರಕಗಳನ್ನುಕಾಲ ಕಾಲಕ್ಕೆ ಮಣ್ಣಿನೊಂದಿಗೆ ಸೇರಿಸುತ್ತಿರಬೇಕು. ಗಿಡಗಳನ್ನು ಬದಲಾಯಿಸುವಾಗ ಹಳೆಯ ಗಿಡಗಳ ಬೇರನ್ನು ಬಿಡಿಸಿ ತೆಗೆಯುವುದು, ವಾರಕ್ಕೊಮ್ಮೆ ಮಣ್ಣನ್ನು ಕೆತ್ತಿ ಗಿಡಗಳಿಗೆ ಉಸಿರಾಟಕ್ಕೆ ಸಹಾಯ ಮಾಡುವುದು ಇನ್ನಿತರ ಕ್ರಮಗಳು ಗಿಡಗಳು ಬೇಗನೆ ಬೆಳೆಯಲು ಸಹಾಯ ಮಾಡುತ್ತದೆ. 

ಗಿಡಗಳು ಪರಸ್ಪರ ಬೆಳವಣಿಗೆಗೆ ಸಹಾಯ ಮಾಡುತ್ತವೆಯಾದ್ದರಿಂದ, ಒಂದೇ ಕುಟುಂಬದ ಗಿಡಗಳ ಹೊರತಾಗಿ, ಒಂದೇ ಪಾಟಿನಲ್ಲಿ ಮಿಶ್ರ ಬೆಳೆಗಳ ಪ್ರಯತ್ನ ಕೂಡಾ ಮಾಡಬಹುದು. ಮುಖ್ಯ ತರಕಾರಿ ಗಿಡಗಳು ಬೆಳೆಯುವಷ್ಟರಲ್ಲಿ, ಚುರುಕು ಬೆಳವಣಿಗೆಯ ಕೆಲವು ಸೊಪ್ಪುಗಳನ್ನು ಬೆಳೆಸಿ, ಬಳಸಿ ತೆಗೆಯಬಹುದು. ಪ್ಲಾಂಟ್ ರೊಟೇಷನ್ ಅಂದರೆ ಗಿಡಗಳನ್ನು ಎರಡ್ಮೂರು ವರ್ಷಕ್ಕೊಮ್ಮೆ ಅವುಗಳ ಸ್ಥಳ ಬದಲಾವಣೆ ಮಾಡುವುದರಿಂದ ಪಾಟಿನಲ್ಲಿರುವ ಮಣ್ಣಿನ ಫಲವತ್ತತೆ ಕಾಯ್ದಿರಿಸಲು ಸಹಾಯಕ.  

ಮನೆಯ ಸಣ್ಣ ಪುಟ್ಟ ಹಸಿಕಸಗಳನ್ನು ಸಮರ್ಪಕವಾಗಿ ಗೊಬ್ಬರ ಮಾಡಲು ಪ್ರಯತ್ನಿಸಿ. ಪಾಟ್ಗಳಿಗೆ ನೇರವಾಗಿ ಹಾಕಿದರೆ, ಅದು ಮಣ್ಣಾಗಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಮತ್ತು ಅಲ್ಲಿಯವರೆಗೆ ಗಿಡಗಳಿಗೆ ರೋಗ ಮತ್ತು ಕೀಟಗಳಿಗೆ ಆಶ್ರಯತಾಣವಾಗುತ್ತದೆ. 

ಮನೆ ಎಷ್ಟೇ ಚೆನ್ನಾಗಿದ್ದರೂ, ಅದಕ್ಕೊಂದು ಹಸಿರಿನ ಟಚ್ ಇದ್ದರೆ,  ಆ ಮನೆಗೆ ಜೀವಂತಿಕೆ ಬರುತ್ತದೆ. ಉಸಿರಾಡಲು ಸ್ವಚ್ಛ ಗಾಳಿ, ರಾಸಾಯನಿಕ ರಹಿತ, ತರಕಾರಿ ಸೊಪ್ಪುಗಳನ್ನು ಬೆಳೆದುಕೊಳ್ಳುವುದು. ಆರೋಗ್ಯ ಕೆಟ್ಟಾಗ ಮಾಡಬಹುದಾದ ಮನೆಮದ್ದಿಗೆಔಷಧೀಯ ಮೂಲಿಕೆಗಳು, ದೇವರ ಮುಡಿಗೊಂದು ಮನೆಯದ್ದೇ ಹೂವು ಇವೇ ಅಲ್ಲವೇ ಆತ್ಮನಿರ್ಭರತೆ ಎಂದರೆ?  ಹಾಗೆಯೇ ಬಾಲ್ಕನಿ ಕೈತೋಟ ಮಾಡಿಕೊಂಡು ಮಕ್ಕಳೊಂದಿಗೆ ಗಿಡಗಳ ಪೋಷಣೆಯತ್ತ ಸ್ವಲ್ಪ ಸಮಯ ಕೊಟ್ಟರೂ, ಪರಿಸರ ಕಾಳಜಿ ಮತ್ತು ಬಾಂಧವ್ಯದ ಕುರಿತಾದ ಜ್ಞಾನ, ಮಕ್ಕಳಿಗೆ ಪಾಠ ಮಾಡದೆಯೇ ದೊರೆತಂತಾಗುತ್ತದೆ. 



 




ರಾಖಿಯಾಗಲಿ ಪರಿಸರಮುಖಿ

ಶ್ರಾವಣ ಪೂರ್ಣಿಮೆಯ ದಿನದಂದು, ಸಹೋದರಿಕೆಯ ಪ್ರಾಮುಖ್ಯತೆಯನ್ನು ಸಾರಲು ರಕ್ಷಾಬಂಧನ ಹಬ್ಬವನ್ನುಆಚರಿಸಲಾಗುತ್ತದೆ. ಅಕ್ಕ ತಂಗಿಯರು ಅಣ್ಣ ತಮ್ಮಂದಿರಿಗೆ ಈ ದಿನ ರಾಖಿ ಕಟ್ಟಿ ಅವರ ದೀರ್ಘಾಯುಸ್ಸಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತಾರೆ. ಕೆಲವರು ಸಹೋದರನ ಹಣೆಗೆ ತಿಲಕವನ್ನಿಟ್ಟು, ಆರತಿ ಬೆಳಗಿ ಆತನ ಯೋಗಕ್ಷೇಮಕ್ಕಾಗಿ ದೇವರಲ್ಲಿ ಬೇಡುತ್ತಾರೆ. ಸಹೋದರರು ಸಹೋದರಿಯರನ್ನು ಇಂದಿನ ದಿನ ಹರಸಿ ಆಶೀರ್ವದಿಸಿ, ಅವರ ರಕ್ಷಣೆಗಾಗಿ ಪಣ ತೊಟ್ಟು, ಹಣ ಅಥವಾ ಉಡುಗೊರೆಯನ್ನು ನೀಡಿ ತಮ್ಮ ಪ್ರೀತಿಯನ್ನು ತೋರ್ಪಡಿಸುತ್ತಾರೆ. 




ರಾಖಿ ಹಬ್ಬದ ಇತಿಹಾಸವೇನು?

ಹಿಂದೂ ಧರ್ಮದಲ್ಲಿ ರಕ್ಷಾಬಂಧನ ಆಚರಣೆಗೆ ಸಾಕಷ್ಟು ಮಹತ್ವವಿದೆ. ಪುರಾಣದ ದಂತಕಥೆಗಳಲ್ಲಿ ಒಂದಾದ ಮಹಾಭಾರತದ ಪ್ರಕಾರ, ಒಮ್ಮೆ ಶ್ರೀಕೃಷ್ಣನ ಬೆರಳು ಆಕಸ್ಮಿಕವಾಗಿ ಸುದರ್ಶನ  ಸಿಲುಕಿ ಕತ್ತರಿಸಿ ಹೋಗುತ್ತದೆ. ಆ ಸಂದರ್ಭದಲ್ಲಿ ಅಲ್ಲಿಯೇ ಇದ್ದ ದ್ರೌಪದಿ ಹಿಂದೆ ಮುಂದೆ ನೋಡದೆ, ಓಡಿ ಹೋಗಿ, ತನ್ನ ಸೀರೆಯ ತುಂಡನ್ನು ಹರಿದು, ಕೃಷ್ಣನ ಬೆರಳಿಗೆ ಕಟ್ಟಿ ರಕ್ತ ಸುರಿಯುವುದನ್ನು ನಿಲ್ಲಿಸಲು ಪ್ರಯತ್ನಿಸುತ್ತಾಳೆ. ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟದಿದ್ದರೂ ಆ ಪೋಷಿಸುವ ಗುಣವನ್ನು ಕಂಡು ಕೃಷ್ಣ ದ್ರೌಪದಿಯನ್ನು ತನ್ನ ತಂಗಿಯಾಗಿ ಮನಸ್ಸಿನಲ್ಲೇ ಸ್ವೀಕರಿಸುತ್ತಾನೆ. ಅದೇ ಕಾರಣಕ್ಕಾಗಿ, ಮುಂದೆ ಕೌರವರು ತುಂಬು ಸಭೆಯಲ್ಲಿ ದ್ರೌಪದಿಯ ವಸ್ತ್ರಾಪಹಾರಣ ಮಾಡುವ ಪ್ರಯತ್ನ ಪಟ್ಟಾಗ, ತಂಗಿಯ ಮಾನ ಕಾಪಾಡಲು ಕೃಷ್ಣ ದ್ರೌಪದಿಗೆ ಎಳೆದಷ್ಟೂ ಮುಗಿಯದ ಸೀರೆಯ ದೊರಕಿಸಿ ಅವಳ ಮಾನ ಕಾಪಾಡುತ್ತಾನೆ. ಹೀಗೆ ಕಷ್ಟಕ್ಕೂ ಸುಖಕ್ಕೂ ಜೊತೆಯಲ್ಲಿ ನಿಲ್ಲುವ ಸಹೋದರ ಸಹೋದರಿಯರ ಸಂಬಂಧವನ್ನು ಸಂಭ್ರಮಿಸಲೆಂದೇ ರಾಖಿ ಹಬ್ಬ ಹುಟ್ಟಿಕೊಂಡಿತು ಎನ್ನುತ್ತದೆ ಪುರಾಣ. 

ರಾಖಿಯಿಂದಲೂ ತ್ಯಾಜ್ಯ!

ರಾಖಿ ಹಬ್ಬ ಹತ್ತಿರವಾದಂತೆಯೂ ಇದೀಗ ಅಂಗಡಿ ಮಳಿಗೆಗಳಲ್ಲಿ, ರಾಖಿ ಹಬ್ಬದ ಸಲಕರಣೆಗಳ, ರಾಖಿ ದಾರಗಳ, ಉಡುಗೊರೆಗಳ ಅಬ್ಬರ. ಪ್ರತಿ ವರ್ಷ ಸರಿಸುಮಾರು ೫೦೦೦ ಲಕ್ಷ ಜನ ಪ್ರಪಂಚದಾದ್ಯಂತ ರಾಖಿ ಹಬ್ಬವನ್ನು ಆಚರಿಸುತ್ತಾರೆ. ಎಲ್ಲಿ ನೋಡಿದರಲ್ಲಿ ಚಿಣಿಮಿಣಿ ಮಿನುಗುವ ಪ್ಲಾಸ್ಟಿಕ್ ಜರಿಗಳಿಂದ, ಪ್ಲಾಸ್ಟಿಕ್ ವಸ್ತುಗಳಿಂದ ಮಾಡಿದ ರಾಖಿ. ಕೇಳುವವರು ನಾವಿರುವಾಗ ತಯಾರಕರೂ ಅಷ್ಟೇ ಇರುತ್ತಾರೆ. ಅನೇಕ ರಾಖಿ ತಯಾರಿಕಾ ಕಂಪೆನಿಗಳು ಜನರ ಆಕರ್ಷಣೆ ಮತ್ತು ಕೊಳ್ಳುವಿಕೆಯ ದರವನ್ನಷ್ಟೇ  ಗುರಿಯಾಗಿಸಿಕೊಂಡು, ಪ್ಲಾಸ್ಟಿಕ್ ಮತ್ತು ಇನ್ನಿತರ ಜೈವಿಕ ವಿಘಟನೀಯವಲ್ಲದ ವಸ್ತುಗಳನ್ನು ಬಳಸಿ ಬಣ್ಣಬಣ್ಣದ ರಾಖಿಗಳನ್ನು ತಯಾರಿಸುತ್ತಾರೆ. ಚಿಕ್ಕ ಮಕ್ಕಳಿಗೆ ಹಬ್ಬದ ಸಂಸ್ಕಾರ ತಿಳಿಸಲು ರಾಖಿ ಕಟ್ಟಿಸಿ ಸಂಭ್ರಮ ಪಡುತ್ತೇವೆ.  ಅರ್ಧ ಗಂಟೆಯಲ್ಲಿ ಆ ರಾಖಿ ಆಟದ ಭರದಲ್ಲಿ ನೆಲಕ್ಕೆ ಬಿದ್ದು ಹೊರಳಾಡುತ್ತಿರುತ್ತದೆ. ಇಂತಹ ಸಣ್ಣ ಪ್ಲಾಸ್ಟಿಕ್ ಚೂರುಗಳು, ಪ್ಲಾಸ್ಟಿಕ್ ಬೇರ್ಪಡಣೆಗೆ ದೊರಕುವುದು ಕಷ್ಟ. ಕಸವಿಂಗಡನೆ  ಘಟಕವನ್ನೂ ತಲುಪದ ಇಂತಹ ಅದೆಷ್ಟೋ ಲಕ್ಷ ಸಣ್ಣ ಸಣ್ಣ ಪ್ಲಾಸ್ಟಿಕ್ ವಸ್ತುಗಳು ಮಣ್ಣಿಗೆ ಮತ್ತು ನದಿಗಳ ನೀರಿಗೆ ಸೇರುತ್ತವೆ. ಪಕ್ಷಿಗಳು ಮತ್ತು ಮೀನುಗಳು ಇಂತವೇ ಸಣ್ಣ ಸಣ್ಣ ಪ್ಲಾಸ್ಟಿಕ್ ಕಸಗಳನ್ನು ತಿಂದು ಸಾವನ್ನಪ್ಪುತ್ತ್ತವೆ! ಸುಟ್ಟರೂ ಕೂಡ ಪ್ಲಾಸ್ಟಿಕ್ ಶಾಶ್ವತವಾಗಿ ಕರಗದು!  ನಮಗೇ ಅರಿವಿಲ್ಲದಂತೆ ಈ ಭೂಮಿಯನ್ನು ಸಣ್ಣ ಪುಟ್ಟ ಇಂತಹ ತ್ಯಾಜ್ಯಗಳಿಂದ ನಾವೇ ಕಲುಷಿತ ಗೊಳಿಸುವುದು ನಮ್ಮ ಗಮನಕ್ಕೆ ಬರುವುದಿಲ್ಲ!

ರಾಖಿ ದಾರದ ಆಯ್ಕೆ ಹೇಗಿರಲಿ? 

ರಾಖಿ ಮಾಡಲು ನಿಯಮಗಳೇನು ಇಲ್ಲ. ಆಡಂಬರಕ್ಕಿಂತ ರಾಖಿ ಎನ್ನುವುದು ಬಾಂಧವ್ಯದ, ಒಗ್ಗಟ್ಟಿನ ಪ್ರತೀಕವಷ್ಟೇ. ರಕ್ಷಣೆಯ ಕಂಕಣವಷ್ಟೇ.  ಕೆಲವರು ಸರಳವಾದ ರಾಖಿಯನ್ನು ಬಯಸುತ್ತಾರೆ, ಕೆಲವರಿಗೆ ವಿಶಿಷ್ಟವಾದ ರಾಖಿ ಕಟ್ಟುವ ಆಸೆಯಿರುತ್ತದೆ. ಯಾವುದೇ ಭಾವನೆಯಾಗಲಿ, ಭ್ರಾತೃತ್ವಕ್ಕೆ ಬಳಸುವ ರಕ್ಷಣೆಯ ದಾರ ನಮ್ಮ ಪರಿಸರವನ್ನೂ ರಕ್ಷಣೆ ಮಾಡುವಂತಿರಲಿ.  ಸಾಧ್ಯವಾದ ಕಡೆಗೆಲ್ಲ, ಅಳಿಲು ಸೇವೆಯಂತೆಯೇ ಆದರೂ,  ಮೂಲಭೂತ ಅವಶ್ಯಕತೆ ಅಲ್ಲದಿರುವೆಡೆ ಪ್ಲಾಸ್ಟಿಕ್ ಬಳಕೆ ಕಮ್ಮಿ ಮಾಡಬೇಕು ಅಥವಾ ಮರುಬಳಕೆಯಾದರೂ ಮಾಡಬೇಕು.  

ಚಿಕ್ಕಂದಿನಲ್ಲಿ ಶಾಲೆಗಳಲ್ಲಿ ರಾಖಿ ಮಾಡುವುದನ್ನು ಕಲಿಸುತ್ತಿದ್ದರು. ನಿರುಪಯುಕ್ತ ಸೀರೆ ಅಥವಾ ಬ್ಲೌಸ್ ಪೀಸ್ ಗಳನ್ನು ತರಲು ಹೇಳಿ, ಅದನ್ನು ಕತ್ತರಿಯಿದ ಕತ್ತರಿಸಿ, ಅದರಿಂದ ಸಿಗುವ ಸಣ್ಣ ರೇಷ್ಮೆಯ ನೂಲು ಅಥವಾ ಹತ್ತಿಯ ನೂಲನ್ನು ಒಂದೊಂದೇ ಬಿಡಿಸಿ, ಜೋಡಿಸಿ, ರಾಖಿಯ ನೇಯ್ಗೆ ಮಾಡುತ್ತಿದ್ದೆವು. ಆ ಹಿನ್ನಲೆಯಲ್ಲಿಯೋ ಏನೋ ನನಗೆ ಪ್ರತಿವರ್ಷ ರಾಖಿಗಳನ್ನು ಕೈಯಾರೆ ತಯಾರು ಮಾಡುವುದು ಅಭ್ಯಾಸ ಆಗಿದೆ. ಕಲಾವಿದೆಯಾಗಿ ನನ್ನ ಕಲಾತ್ಮಕತೆಯನ್ನು ಬಳಸಿ ಪರಿಸರ ಸ್ನೇಹಿ ರಾಖಿಯನ್ನು ಮಾಡುತ್ತಿರುವ ಕುರಿತು ನನಗೆ ವೈಯುಕ್ತಿಕವಾಗಿ ಹೆಮ್ಮೆಯಿದೆ. ಯಾವುದೇ ಕಾರಣಕ್ಕೂ ಮನೆಯಲ್ಲೇ ಪರಿಸರ ಸ್ನೇಹಿ ರಾಖಿ ಕಟ್ಟಲು ಸಾಧ್ಯವಾಗದಿದ್ದರೆ, ಈಗಿನ ಇಂಟರ್ನೆಟ್ ಯುಗದಲ್ಲಿ ಒಡಹುಟ್ಟಿದವರಿಗಾಗಿ ಆನಲೈನ್ ನಲ್ಲಿ ಮಾಡಿ ಪರಿಸರ ಸ್ನೇಹಿ ರಾಖಿಯನ್ನು ಆರ್ಡರ್ ಮಾಡಬಹುದು. 

ಪರಿಸರ ಸ್ನೇಹಿ ರಾಖಿಗಳ ಬಳಕೆ ಮತ್ತು ತಯಾರಿಕೆ 

ರಾಖಿ ದಾರಕ್ಕಾಗಿ ಆದ್ಯತೆಯ ನೈಸರ್ಗಿಕ ಫೈಬರ್ ಅನ್ನು ಆರಿಸಿಕೊಳ್ಳಬಹುದು. ಸರಳವಾದ ಕಾಟನ್ ದಾರ ಕೂಡ ಸಾಕು. ಕ್ರೋಶ ವಿಧಾನದ ಅರಿವಿದ್ದರೆ, ವಿವಿಧ ವಿನ್ಯಾಸದ ಗಂಟುಗಳಿಂದ ಡಿಸೈನ್  ದಾರಗಳನ್ನು ತಯಾರಿಸಬಹುದು. ರಾಖಿಯನ್ನು ಐಚ್ಛಿಕ ವಿಷಯಗಳಿಗೆ ಹೊಂದಿಸುವ ಉದ್ದೇಶವಿದ್ದರೆ,  ಕಾಟನ್, ಸೆಣಬು, ಬಣ್ಣದ ಪೇಪರ್, ನ್ಯೂಸ್ ಪೇಪರ್, ಮಣ್ಣು, ಇತ್ಯಾದಿ ವಸ್ತುಗಳ ಬಳಸಿ ಬೇಸ್ ತಯಾರಿಸಬಹುದು. ವೃತ್ತಪತ್ರಿಕೆಗಳು, ಮ್ಯಾಗಜೀನುಗಳು. ಡೆನಿಮ್ ಇನ್ನಿತರ ಹಳೆಯ ಬಟ್ಟೆಯ ಸ್ಕ್ರ್ಯಾಪ್ಮ ಗಳಂತಹ ಮರುಬಳಕೆಯ ವಸ್ತುಗಳನ್ನೇ ಕಲಾತ್ಮಕವಾಗಿ ಬಳಸಿ ರಾಖಿ ತಯಾರಿಸಬಹುದು. ಮಣ್ಣಿನ ಉಂಡೆಯಲ್ಲಿ ತುಳಸಿ  ಬೀಜ, ಹೂವಿನ ಬೀಜಗಳ ತುಂಬಿಸಿ ಸೀಡ್ ಬಾಲ್ ರಾಖಿ ಮಾಡಬಹುದು. ರಾಖಿಯ ದಾರವು ಸಹೋದರನಿಗೆ ರಕ್ಷಣೆ ಮತ್ತು ರಾಖಿ  ಹಬ್ಬದ ನಂತರ ಆ ಮಣ್ಣಿನ ಉಂಡೆಯನ್ನು ಮನೆಯ ಪಾಟಿನಲ್ಲಿ ನೆನೆಸಿ ಸೇರಿಸಿದರೆ, ಅಲ್ಲೊಂದು ಗಿಡ ಬೆಳೆದು ಪರಿಸರಕ್ಕೆ ಕೊಡುಗೆ ನೀಡಿದಂತಾಗುತ್ತದೆ. ಕ್ವಿಲ್ಲಿಂಗ್ ಪೇಪರ್ರಿನ ರಾಖಿ, ಮಣ್ಣನ್ನು ಬಳಸಿ ಟೆರಾಕೋಟಾ ರಾಖಿ, ನ್ಯೂಸ್ ಪೇಪರಿನ ಮೇಲೆ ಪೈಂಟ್ ಮಾಡಿಯೋ ಅಥವಾ ನೆನೆಸಿ ರುಬ್ಬಿ ಒಣಗಿಸಿ ವಿವಿಧ ಆಕೃತಿಯ ರಾಖಿ, ನಮ್ಮ ಸುತ್ತಮುತ್ತಲಿನಲ್ಲೇ ದೊರೆಯುವ ವಿವಿಧ ಬಗೆಯ ಕಾಯಿ ಹಣ್ಣುಗಳ, ಮರದ, ಬೀಜಗಳನ್ನು ಆಯ್ದಿಟ್ಟುಕೊಂಡು ಜೋಡಿಸಿ ಮಾಡುವ ರಾಖಿ,  ಸಸ್ಯ ಆಧಾರಿತ ಬಣ್ಣಗಳಿಂದ ಅಲಂಕಾರ, ಗಿಡಮೂಲಿಕೆಯ ರಾಖಿ, ವಿಶಿಷ್ಟ ಬಗೆಯ ಎಲೆಗಳು ಮತ್ತು ಹೂಗಳನ್ನು ಒಣಗಿಸಿಟ್ಟುಕೊಂಡು, ಅವುಗಳನ್ನು ಸೇರಿಸಿ ಮಾಡಬಹುದಾದ ರಾಖಿ ಇತ್ಯಾದಿ ಹಲವು ಬಗೆಯ ಪರಿಸರ ಸ್ನೇಹಿ ರಾಖಿಗಳೀಗ ಮಾರುಕಟ್ಟೆಯಲ್ಲಿಯೂ ಕೂಡ ಹೊಸ ಟ್ರೆಂಡ್ ಆಗಿದೆ! ಮರದ ಬೇಸ್ ಮೇಲೆ ಮಂಡಲ ಆಧಾರಿತ ಪೇಂಟಿಂಗ್ ಮಾಡಿ, ರಾಖಿ ದಾರದ ಜೊತೆಗಿನ ಫ್ರಿಡ್ಜ್ ಮ್ಯಾಗ್ನೆಟ್ ಪರಿಕಲ್ಪನೆಯಲ್ಲಿ ನಾನು ಮಾಡಿದ ರಾಖಿಗಳು ಅನೇಕರ ಮನ ಗೆದ್ದಿದೆ. ಸೀಡ್ಬಾಲ್ ರಾಖಿಗಳು ಅದೆಷ್ಟೋ ಮನೆಯ ಬಾಲ್ಕನಿಯಲ್ಲಿ ಗಿಡವಾಗಿ ನಳನಳಿಸುತ್ತಿವೆ.   

ಹೀಗೆ ಕಲಾತ್ಮಕತೆ ಮತ್ತು ಆಸಕ್ತಿ ಇದ್ದರೆ ನಾವೇ ಖುದ್ದಾಗಿ ನಮ್ಮ ನಮ್ಮ ಮನೆಗಳಲ್ಲಿಯೇ ತಯಾರು ಮಾಡಿಕೊಳ್ಳಬಹುದು ಅಥವಾ ಕೊಂಡು ಬಳಸಿ ಇತರರಿಗೆ ಮಾದರಿಯಾಗಬಹುದು. ಮಕ್ಕಳಿಗೆ ಈ ಕುರಿತು ತಿಳಿಸಿದರೆ, ಮಕ್ಕಳ ಜೊತೆಗೂಡಿ ರಾಖಿ ಮಾಡಿದರೆ ಅದುವೇ ಹಬ್ಬದ ಸಂಭ್ರಮವಾಗುತ್ತದೆ. ಮೇಲಿನವುಗಳ ಹೊರತಾಗಿ ನಮ್ಮ ನಮ್ಮ ಸೃಜನಾತ್ಮಕ ಭಾವನೆಯಿಂದ ಭೂಮಿತಾಯಿಯ ಮೇಲಿನ ಗೌರವವನ್ನು ಅನೇಕ ಬಗೆಯಲ್ಲಿ ತೋರಿಸಬಹುದು. ಈ ರೀತಿಯ ಪರಿಸರ ಸ್ನೇಹಿ ರಾಖಿಯ ಬಳಕೆ ಅನವಶ್ಯಕ ಆಡಂಬರ ಮತ್ತು ಮಾಲಿನ್ಯವನ್ನು ಕಡಿತಗೊಳಿಸಿ, ಬಾಂಧವ್ಯದ ಹಬ್ಬವನ್ನು ಮತ್ತಷ್ಟು ಅರ್ಥಪೂರ್ಣ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. 

 ರಾಖಿ ಎನ್ನುವುದು ಜಗತ್ತಿಗೆ ಕೇವಲ ಒಂದು ದಾರವಾಗಿರಬಹುದು. ಆದರೆ ಅದೊಂದು ರಕ್ಷಣೆ ಮತ್ತು ಒಗ್ಗಟ್ಟಿನ ವಿಶೇಷ ಸಂಕೇತ. ಭ್ರಾತೃತ್ವದ ಆಚರಣೆಯ ಈ ಸಂಭ್ರಮದಲ್ಲಿ, ಪರಿಸರಕ್ಕೊಂದಷ್ಟು ಪೂರಕವಾಗಿ ಸೀಡ್ಬಾಲ್ ರಾಖಿ ಮುಖೇನ ಹಸಿರು ಗಿಡಗಳನ್ನು ಬೆಳೆಸುವುದು, ಪ್ಲಾಸ್ಟಿಕ್ ಮಾಲಿನ್ಯ ಕಡಿಮೆಗೊಳಿಸುವುದು,  ರಾಖಿ ಹಬ್ಬಕ್ಕೆ ನಿಜವಾದ ಅರ್ಥ ನೀಡುವುದರ ಜೊತೆಗೆ ಗೋ ಗ್ರೀನ್ ರಾಖಿಗಳು ಕೈಗಳಿಗೆ ಕಲಾತ್ಮಕ ಮೆರಗನ್ನೂ ನೀಡುತ್ತವೆ. 


   


ಮಂಗಳವಾರ, ಆಗಸ್ಟ್ 8, 2023

ಡಿಕ್ಲಟ್ಟರಿಂಗ್

ಮನುಷ್ಯ ಎಂದ ಮೇಲೆ ಉತ್ತಮ ಬದುಕಿನ ಆಸೆ ಇದ್ದೇ ಇರುತ್ತದೆ. ಇತರರಂತೆ ಐಷಾರಾಮಿ ಬದುಕು ಬೇಕೆಂಬ ತುಡಿತ ಅನೇಕರಿಗಿರುತ್ತದೆ. ಮೂಲಭೂತ ಸೌಕರ್ಯಗಳು ಎಲ್ಲರಿಗೂ ಬೇಕು ನಿಜ, ಆದರೆ ನಮಗೆ ಅವಶ್ಯಕತೆಯೇ ಇಲ್ಲದ, ಅದೆಷ್ಟೋ ವಸ್ತುಗಳ ಹೊಣೆಗಾರಿಕೆ ಹೊತ್ತು, ಉಸಿರುಗಟ್ಟಿಕೊಂಡು ನಾವು ಬದುಕುತ್ತಿದ್ದೇವೆ ಎಂಬುದನ್ನು ಯಾರಾದರು ಗಮನಿಸಿದ್ದೀರಾ? 

ಇದು ಚೆಂದ, ಇದು ಟ್ರೆಂಡಿ ಎನ್ನುತ್ತಾ ಕೊಂಡ ೪೦ ಶರ್ಟುಗಳು ಕಪಾಟಿನಲ್ಲಿದ್ದರೂ ಇಷ್ಟವಾಗುವ ಬಟ್ಟೆ ಅರ್ಜೆಂಟಾಗಿ ಬೇಕಾದಾಗ ಸಿಗುವುದಿಲ್ಲ. ಅಜ್ಜಿಯ ಕಾಲದಿಂದ ಬಳುವಳಿಯಾಗಿ ಬಂದ ೧೫೦ ಪಾತ್ರೆಗಳು ಇದ್ದರೂ, ಬೇಕಾದ ಸೌಟು ಎಲ್ಲಿದೆ ಎಂದು ಹುಡುಕುವುದು ತಪ್ಪುವುದಿಲ್ಲ. ಫ್ರಿಡ್ಜಿನಿಂದ  ಬೀಳುವ ವಸ್ತುಗಳ ಹಿಡಿದುಕೊಂಡು ಸರ್ಕಸ್ ಮಾಡಿ ಕೊತ್ತಂಬರಿ ಸೊಪ್ಪು ತೆಗೆಯಬೇಕು. ಮನೆ ಹೆಂಗೂ ದೊಡ್ಡದು, ಮುಂದೆ ಯಾವಾಗಲಾದರೂ ಬೇಕಾಗುತ್ತದೆ ಎಂದು ಪೇರಿಸಿಟ್ಟ ವಸ್ತುಗಳ ಮೇಲೆಲ್ಲಾ ಧೂಳು, ಆಪ್ತರ ನೆನಪಿನ ಕಾಣಿಕೆ ಎಂದು ಅಟ್ಟ ಹತ್ತಿಸಿ ಇಟ್ಟಿದ್ದ ವಸ್ತುಗಳು ಇಲಿ ಜಿರಳೆಗೆ ಆಹಾರವಾಗಿರುತ್ತದೆ,  ನಮ್ಮ ಪ್ರೆಸ್ಟೀಜ್ ಗೆ ತಂದುಕೊಂಡಿರುವ ಪೀಠೋಪರಕರಣಗಳು ಮಕ್ಕಳಿಗೆ ಆಟವಾಡಲು ಜಾಗವಿಲ್ಲದಂತೆ ಮಾಡಿವೆ. ಹೀಗೆ ಮನೆಯ ಅಥವಾ ಕೆಲಸದ ಸ್ಥಳದಲ್ಲಿನ ಭೌತಿಕ ವಸ್ತುಗಳಾಗಲಿ ಅಥವಾ ಎಲ್ಲರೊಂದಿಗೆ ಸಂಪರ್ಕದಲ್ಲಿರುವ ಇಚ್ಛೆಗೆ, ಇತರ ವ್ಯವಹಾರಗಳಿಗೆ, ಗುಡ್ಡೆ ಆಗುವ ಇನ್ಬಾಕ್ಸ್ ಮತ್ತು ಇತರ ಗ್ಯಾಡ್ಜೆಟ್ ನೋಟಿಫಿಕೇಷನ್ನುಗಳು, ನಮ್ಮ ಮನೆ ಮತ್ತು ಮನಸ್ಸನ್ನು ಅದೆಷ್ಟು 'ರಾಡಿ' ಮಾಡಿಬಿಟ್ಟಿದೆ. ಉಫ್! 'ಈಗಿನ ಟ್ರೆಂಡ್' ಎಂಬ ಹೆಸರಿನಲ್ಲಿ 'ಕೊಳ್ಳುಬಾಕತನ' ಹಾಸುಹೊಕ್ಕಿಯಾಗಿದೆ. ಇಲ್ಲಿ ವಸ್ತುಗಳ ಶೇಖರಣೆ ಜೊತೆಗೆ, ಅವುಗಳ ಸ್ವಚ್ಛತೆ, ಸಂರಕ್ಷಣೆ  ಮತ್ತು ಪ್ರತಿಕ್ರಿಯಿಸುವ 'ಗೊಂದಲ'ಗಳನ್ನೂ ತೆಗೆದುಕೊಂಡು, ನಮ್ಮ ಉಪಯುಕ್ತ ಸಮಯ ಮತ್ತು ಶಕ್ತಿಯನ್ನು ನಮಗೇ ಅರಿವಿಲ್ಲದೆ  ಅನಾವಶ್ಯಕವಾಗಿ ವ್ಯಯಿಸುತ್ತಿದ್ದೇವೆ! ಮನೆಯೆಲ್ಲಿರುವ ವಸ್ತುಗಳನ್ನೆಲ್ಲ ಸಂಭಾಳಿಸಿ ಶುಚಿಯಿಡುವಷ್ಟರಲ್ಲಿ, ಮಕ್ಕಳು ಮತ್ತು ಮನೆ ಮಂದಿಯೊಡನೆ, ಸ್ವಂತ ಸಂತೋಷಕ್ಕೆ ಬಳಸಬಹುದಾದ ಸಮಯವೆಲ್ಲಿದೆ ನಮಗೀಗ? ಈ ಅಗೋಚರ ಒತ್ತಡದ ಜೀವನಶೈಲಿಗೆ ಬಗ್ಗಿ ಬಳಲುತ್ತಿರುವುದರಿಂದ  ಹೊರಬರಬೇಕೆಂದರೆ, ನಾವುಮಾಡಬೇಕಾದ್ದು 'ಡಿಕ್ಲಟರಿಂಗ್'!

'ಡಿಕ್ಲಟರಿಂಗ್' ಎಂದರೆ, ಪ್ರಜ್ಞಾ ಪೂರ್ವಕವಾಗಿ ನಾವು ಬದುಕುತ್ತಿರುವ ಕಿಕ್ಕಿರಿದ ಸ್ಥಳದಿಂದ ನಮಗೆ 'ಗೊಂದಲ'  ಉಂಟುಮಾಡುವ ವಸ್ತುಗಳನ್ನು, ಬೇಡವಾದುದ್ದನ್ನು ಕಡಿತಗೊಳಿಸುವುದು. 'ಡಿಕ್ಲಟರಿಂಗ್' ಒತ್ತಡ ಮತ್ತು ಆತಂಕವನ್ನು ಹೆಚ್ಚಿಸುತ್ತಿರುವ, ಅಸ್ಥವ್ಯಸ್ಥವಾಗಿರುವ ಜೀವನ ಪರಿಸರಕ್ಕೆ, ಸುಂದರ ಮತ್ತು ಶುಚಿತ್ವದ ಕ್ರಮವನ್ನು ಮರುಸ್ಥಾಪಿಸುವ,  ಮಾನಸಿಕ ಯೋಗಕ್ಷೇಮ ಪಡೆಯುವ ಒಂದು ಚಿಕಿತ್ಸಕ ಕ್ರಿಯೆ. 

 ಡಿಕ್ಲಟ್ಟರಿಂಗ್ ಒಂದು ಸವಾಲು- ಏಕೆ?  

ಹೆಚ್ಚೆಚ್ಚು ವಸ್ತುಗಳಿದ್ದರೆ ಅದು ಶ್ರೀಮಂತಿಕೆ ಎಂಬ ಭಾವ, ಕಷ್ಟಪಟ್ಟು ಹಣ ವ್ಯಯಿಸಿ ಪಡೆದ ವಸ್ತುಗಳ ಹೊರಹಾಕುವುದು ಹಣಕಾಸಿನ ನಷ್ಟ ಎಂಬ ಯೋಚನೆ, ಕಾರ್ಯ ನಿರ್ವಹಿಸುತ್ತಿರುವ ಒಳ್ಳೊಳ್ಳೆ ವಸ್ತುಗಳ ಬಿಡುವುದಕ್ಕೆ ಒಲ್ಲದ ಮನಸ್ಸು, ಮುಂದೆ ಭವಿಷ್ಯದಲ್ಲಿ ಎಂದಾದರೂ ಉಪಯೋಗಕ್ಕೆ ಬರುತ್ತದೆ ಎಂಬ ದೂರಾಲೋಚನೆ, ಮತ್ತೊಮ್ಮೆ ತೆಗೆದುಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಆಗಬಹುದಾದ ಖರ್ಚು ವೆಚ್ಚಗಳ ಕುರಿತಾದ ಭಯ, ಕನಿಷ್ಠ ವಸ್ತುಗಳಿದ್ದರೆ, ಇತರರು ಏನಂದುಕೊಂಡಾರು ಎಂಬ ಸಂಕುಚಿತ ಭಾವನೆ, ಹಿಂದಿನ ನೆನಪುಗಳಿಗೆ ಕೂಡಿಕೊಂಡಿರುವ ವಸ್ತುಗಳ ಕಳೆದುಕೊಳ್ಳುವ ಭಾವನಾತ್ಮಕತೆ  ಹೀಗೆ ಸಾಕಷ್ಟು ಕಾರಣಗಳಿಗೆ ನಾವು ನಮಗೆ ಮೂಲಭೂತ ಅಗತ್ಯತೆ ಇಲ್ಲದಿದ್ದರೂ ಕಷ್ಟಪಟ್ಟು ಪೋಷಿಸಿಕೊಂಡು ಬಂದಿರುವ ವಸ್ತುಗಳನ್ನು ಕಡಿತಗೊಳಿಸಿಕೊಳ್ಳಲು, ಅಚ್ಚುಕಟ್ಟಾದ ಜೀವನಶೈಲಿಯನ್ನು ಹೊಂದಲು ಹೆದರುತ್ತೇವೆ. 

ಡಿಕ್ಲಟ್ಟರಿಂಗ್ ಮಾಡುವುದು ಹೇಗೆ?

ನಮಗೆ ಸಂಬಂಧಿಸಿದ ಪ್ರತಿಯೊಂದು ವಸ್ತುವಿನ ಕುರಿತಾಗಿ, ಅದರ ಮಹತ್ವ ಮತ್ತು ನಿಯಮಿತ ಬಳಕೆಯ ಬಗ್ಗೆ ನಮ್ಮನ್ನೇ ನಾವು ಪ್ರಶ್ನಿಸಿಕೊಂಡು, ಸೀಸನಲ್ ವಸ್ತುಗಳ ಒಳಗೊಂಡು, ಕನಿಷ್ಠ ಪ್ರಮಾಣದಲ್ಲಿ ಬಳಕೆ ಮಾಡುವ ಬಗೆಗೆ ಪ್ಲಾನ್ ಮಾಡಬೇಕು. ಸಣ್ಣ ಹೋಟೆಲ್ ಬಿಲ್ ಚೀಟಿಯಾದರೂ ಸರಿ, ಪ್ರತಿನಿತ್ಯ ಒಂದಾದರೂ ಬೇಡದ ವಸ್ತುವನ್ನು ನಿರ್ಧರಿಸಿ, ವಿಲೇವಾರಿ, ರೆಸೆಲ್ಲಿಂಗ್, ದಾನದ ಮೂಲಕ ಹೊರ ಹಾಕುತ್ತಲಿರಬೇಕು.  ಸಮಯಾವಕಾಶವನ್ನಿಟ್ಟುಕೊಂಡು ವಾರಕ್ಕೊಂದು ಕಪಾಟು, ಕಿಕ್ಕಿರಿದ ಮೂಲೆಗಳನ್ನು ಗಮನಿಸಿ ಮುರಿದ, ಹರಿದ, ಜೋಡಿ ಕಳೆದುಕೊಂಡ ವಸ್ತುಗಳಿಗೆ ತಿಲಾಂಜಲಿ ನೀಡಿ, ಬೇಕಾದ ವಸ್ತುಗಳಿಗಷ್ಟೇ ಆದ್ಯತೆ ನೀಡಬೇಕು. 

ಮನೆಯಲ್ಲಿ ಮಕ್ಕಳಿದ್ದರೆ, ಎಲ್ಲ ಪುಸ್ತಕಗಳು ಮತ್ತು ಆಟದ ಸಾಮಾನುಗಳನ್ನು ಬುಟ್ಟಿಯಲ್ಲಿ ಹರಡಿಕೊಂಡು ಇಡುವುದಕ್ಕಿಂತ, ಸ್ವಲ್ಪವೇ ವಸ್ತುಗಳನ್ನು ಎದುರಿಗಿಟ್ಟು ವಾರಕ್ಕೊಮ್ಮೆ ಬದಲಾಯಿಸುತ್ತ, ಉಳಿದ್ದನ್ನು ಒಳಗೆ ಜೋಡಿಸಿಡುವುದು ಉತ್ತಮ. ಬಿಲ್ಲ್ಗಳ ಡಿಜಿಟಲ್ ಕಾಪಿ ಇದ್ದರೆ ಸಾಕು.  ಕಂಪ್ಯೂಟರ್ ನಲ್ಲಿ ಮೇಲ್ಬಾಕ್ಸ್, ಫೋಟೋಸ್, ಪಿಡಿಎಫ್ ಇನ್ನಿತರ ಸಾವಿರಾರು ಫೈಲ್ಸ್ ಗಳನ್ನು  ಪ್ರತ್ಯೇಕಿಸಿ, ದಿನಾಂಕದ ಜೊತೆಯಲ್ಲಿ ಸರಿಯಾದ ಹೆಸರಿನಿಂದ ಲೇಬಲ್ ಮಾಡಿ, ಆಗಾಗ್ಗೆ ಬ್ಯಾಕುಪ್ ವ್ಯವಸ್ಥೆಗಳ ಮೂಲಕ ಸೇವ್ ಮಾಡುತ್ತಿದ್ದರೆ, ಬೇಕಾದಾಗ ಹುಡುಕುವ ತಾಪತ್ರಯ ತಪ್ಪುತ್ತದೆ. ಅಂತೆಯೇ ಮೊಬೈಲ್ ನಲ್ಲಿ ಸದ್ಬಳಕೆಯಾಗದಿರುವ ಅಪ್ಗಳನ್ನು ತೆಗೆದರೆ, ಪದೇ ಪದೇ ನೋಟಿಫಿಕೇಶನ್ಮಗಳ ಹಾವಳಿಯಿಂದ, ನಾವು ಗ್ಯಾಡ್ಜೆಟ್ಗೆ ಮತ್ತಷ್ಟು ಅಡ್ದಿಕ್ಟ್ ಆಗುವುದು ತಪ್ಪುತ್ತದೆ. 

ನಿತ್ಯದಡುಗೆಗೆ ಬೇಕಾವಷ್ಟು ಅಡುಗೆ ಪರಿಕರಗಳನ್ನು ಇಟ್ಟುಕೊಳ್ಳುವುದು. ಉಳಿದಿದ್ದನ್ನು ಆದ್ಯತೆಯ ಮೇರೆಗೆ ಸ್ಟೋರೇಜ್ ನಲ್ಲಿ ಎತ್ತಿಡುವುದು, ಸಾಮಗ್ರಿಗಳ ಡಬ್ಬಿಯನ್ನು ಅದರ ಹೆಸರಿನೊಂದಿಗೆ ಲೇಬಲ್ ಮಾಡುವುದರಿಂದ, ಗೊಂದಲವಿಲ್ಲದ ಜಾಗ ಅಡುಗೆಗೆ ಆಸಕ್ತಿಯನ್ನು ತರುತ್ತದೆ. ಸೂಪರ್ ಮಾರ್ಕೆಟ್ಟಿಗೆ ಹೋಗಿ ಅಲ್ಲಿ ಕಂಡಿದ್ದೆಲ್ಲ ತೆಗೆದುಕೊಂಡು ಬರುವುದಕ್ಕಿಂತಲೂ, ಸಾಮಾನು ಪಟ್ಟಿ ಮಾಡಿಕೊಂಡು ಅದಷ್ಟೇ ವಸ್ತುಗಳ ಶಾಪಿಂಗ್ ಮುಗಿಸಿ ಬರುವುದು ಉತ್ತಮ. ತಿಂಗಳಿಗೊಮ್ಮೆ ಫ್ರಿಡ್ಜ್ ಪರಿಶೀಲಿಸಿ ಪ್ಯಾಕೆಟ್ ಫುಡ್ ಗಳ ಬಳಕೆಯ ಕೊನೆಯ ದಿನಾಂಕ ಪರಿಶೀಲಿಸಿ ವಿಲೇವಾರಿ ಮಾಡುತ್ತಿರಿ. ನಿನ್ನೆ ಮೊನ್ನೆಯ ಆಹಾರಗಳ ನೈರ್ಮಲ್ಯದ ಕಡೆಗೆ ಗಮನ ಕೊಡಿ. 

ಆದಷ್ಟು ನಿತ್ಯ ಬಳಸುವ ವಸ್ತುಗಳಿಗೆ ಅದರದ್ದೇ ಆದ ಜಾಗ ಮೀಸಲಿರಲಿ. ನೆಲಕ್ಕೆ ವಸ್ತುಗಳನ್ನು ಇಡುವ ಅಭ್ಯಾಸ ಬಿಟ್ಟರೆ. ಸ್ವಚ್ಛ ಖಾಲಿ ನೆಲ ಕಣ್ಣಿಗೆ ಹಿತವೆನಿಸುತ್ತದೆ. ಬಾಗಿಲಿಗೆ ಕೊಕ್ಕೆಗಳನ್ನು ಸ್ಥಾಪಿಸಿ, ಕೋಟು ಬ್ಯಾಗ್ಗಳನ್ನು ನೇತುಹಾಕಬಹುದು. ಎಲೆಕ್ಟ್ರಾನಿಕ್ ಸಾಧನಗಳಿಗಾಗಿಯೇ ಎಕ್ಸ್ಟೆಂಡೆಡ್ ಚಾರ್ಜಿನ್ಗ್ ಸ್ಟೇಷನ್ ಒಂದೆಡೆ ಮಾಡಿಟ್ಟರೆ, ಎಲ್ಲೆಲ್ಲೋ ಮರೆಯುವ ತೊಂದರೆ ತಪ್ಪುತ್ತದೆ. 

ಸೇಲ್ ನಲ್ಲಿ ತೆಗೆದುಕೊಂಡ ವಸ್ತುಗಳನ್ನು ಮರುವ್ಯಾಪಾರ ಮಾಡಲು ಬರುವುದಿಲ್ಲ, ಹಾಳಾದ ವಸ್ತುಗಳನ್ನು ಇತರರಿಗೆ ಕೊಡಲು ಮನಸ್ಸೂ ಬಾರದು. ಆದರೆ ಹಣ ಪೋಲು. ಹಾಗಾಗಿ ಯೋಚಿಸಿ ಉತ್ತಮ ದರ್ಜೆಯ ವಸ್ತುಗಳನ್ನು ಅವಶ್ಯಕತೆ ಇದ್ದರೆ ಮಾತ್ರ ತೆಗೆದುಕೊಳ್ಳಿ.

ಡಿಕ್ಲಟರಿಂಗ್ ಎನ್ನುವುದು ಯಾವುದೇ ಒಂದು ವಸ್ತುವಿಗೆ ಸೀಮಿತ ಅಲ್ಲ. ನಮ್ಮ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮಕ್ಕೆ ಬೇಕಾದಷ್ಟು ಸಮಯಾವಕಾಶ ನೀಡಿ, ಉತ್ತಮ ಆಹಾರ ಸೇವನೆ, ವ್ಯಾಯಾಮ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಂಡರೆ, ಅನವಶ್ಯಕ ಶಾಪಿಂಗ್ ಗಳಿಂದ ವಸ್ತು ಕೊಂಡು ತರುವ ಹಂಬಲ, ಗ್ಯಾಡ್ಜೆಟ್ ಗಳಲ್ಲಿ ಅವಶ್ಯಕತೆಗೂ ಮೀರಿ ಕಳೆಯುವ ಸಮಯ ಕಡಿಮೆ ಮಾಡಬಹುದು. ಮನಸ್ಸು ಶಾಂತವಾಗುತ್ತದೆ. ಪ್ರೀತಿಪಾತ್ರರಿಗೆ ಉಪಯೋಗಕ್ಕಿಲ್ಲದ ನೆನಪಿನ ಕಾಣಿಕೆಗಳು ಕಾಪಿಟ್ಟುಕೊಳ್ಳಲು ಭಾರವೇ. ಬಳಕೆದಾರರಿಗೆ ವಿಚಾರಿಸಿ ಸಣ್ಣದಾದರೂ ಸರಿ, ಉಪಯುಕ್ತಉಡುಗೊರೆಗಳನ್ನು ನೀಡುವುದು ಒಳಿತು