ಶನಿವಾರ, ಅಕ್ಟೋಬರ್ 28, 2023

Odisha - Land of Art

ನಮ್ಮ ಓಡಿಶಾ ಪ್ರವಾಸದಲ್ಲಿ, ನಾವು ಮೊದಲು ಮೆಟ್ಟಿದ ನಗರ ರಾಜಧಾನಿ ಭುವನೇಶ್ವರ. ಸುಮಾರು  400+ sq. Km ಇರುವ ಈ ನಗರದಲ್ಲಿ, ಏರ್ಪೋರ್ಟ್ನಿಂದ ಹೊರಟು ಹೋಟೆಲ್ ತಲುಪುವವರೆಗೂ ಕಣ್ಣಾಡಿಸಿದ ಜಾಗದಲ್ಲೆಲ್ಲಾ ನಮ್ಮನ್ನು ಆಕರ್ಷಿಸಿದ ಎರಡು ಮುಖ್ಯ ವಸ್ತು ವಿಷಯಗಳು ಒಂದು ನಗರದ ಅದ್ಭುತ ಸ್ವಚ್ಛತೆ ಮತ್ತೊಂದು, ರಸ್ತೆಯ ಬದಿಯ ಗೋಡೆಗಳಿಂದ ಹಿಡಿದು, ರಸ್ತೆಯ ಬದಿಯ ಮನೆಗಳ ಗೋಡೆಗಳು ಸೇರಿದಂತೆ ಎಲ್ಲವೂ ಕೂಡ ಚಿತ್ರಕಲೆಗಳಿಂದ ಸಿಂಗರಿಸಿ ಹೋಗಿತ್ತು, ಇಡೀ ಊರಿಗೆ ಊರಿನ ಗೋಡೆಗಳೆಲ್ಲವೂ ಪೇಂಟಿಂಗ್ ಕ್ಯಾನ್ವಾಸ್ಗಳೇ!! ಕಣ್ಣು ಹಾಯಿಸಿದಲ್ಲೆಲ್ಲ ರಸ್ತೆಯ ಬದಿ ಕಾಂಪೌಂಡಿನ ಮೇಲೆಲ್ಲಾ, ಒಡಿಸ್ಸಾದ ಇತಿಹಾಸ, ನೃತ್ಯ, ಜಾನಪದ ಕಲೆ, ಸಂಸ್ಕೃತಿ-ಸಾಹಿತ್ಯಕ್ಕೆ ಸಂಬಂಧಪಟ್ಟ ವಿಷಯಗಳನ್ನು ಕುರಿತಾದ, ಒಂದಕ್ಕಿಂತ ಒಂದು ಚೆಂದದ ಪೇಂಟಿಂಗ್ಗಳು!! ಪೌರಾಣಿಕ ನಿರೂಪಣೆ ಮತ್ತು ಜಾನಪದ ಕಥೆಗಳನ್ನು ಚಿತ್ರಗಳ ಮೂಲಕ ಪ್ರತಿಬಿಂಬಿಸುವ ಪಟ್ಟ ಚಿತ್ರಗಳ ಡಿಸೈನ್ಗಳು ನೋಡಿದಲ್ಲೆಲ್ಲ ಮನಸ್ಸಿಗೆ ಮುದವನ್ನು ನೀಡುವಂತಿದೆ. ಶಾಲಾ ಕಾಲೇಜುಗಳು, ಪೋಸ್ಟ್ ಆಫೀಸ್, ಪೊಲೀಸ್ ಠಾಣೆ, ಆಸ್ಪತ್ರೆ, ಫ್ಲೈ ಓವರ್, ಟ್ರಾಫಿಕ್ ಜಂಕ್ಷನ್ಗಳು ಇತ್ಯಾದಿ ಕಟ್ಟಡಗಳ ಜೊತೆಗೆ ಇನ್ನಿತರ ಸರ್ಕಾರಿ ಕಚೇರಿಗಳ ಗೋಡೆಗಳ ಮೇಲೆ ಮೇಲೆ ಅವುಗಳ ಕಾರ್ಯನಿರ್ವಹಣೆಯ ಕುರಿತಾದ ವಿಷಯಗಳ ಪೇಂಟಿಂಗ್ಗಳು ಎಲ್ಲೆಡೆ ಕಾಣಸಿಗುತ್ತಿದ್ದವು. ಇಲ್ಲಿನ ದೇವಾಲಯಗಳು ಮತ್ತು ದೈವಿಕತೆಗೆ ಸಂಬಂಧಪಟ್ಟಂತಹ ಚಿತ್ರಗಳು, ಜಾನಪದ ಶೈಲಿಯ ಚಿತ್ರಕಲೆ, ಹಲವಾರು ಬುಡಕಟ್ಟು ಜನಾಂಗಗಳ ಜೀವನ ಮೌಲ್ಯಗಳು ಮತ್ತು ಅವರ ಜೀವನಶೈಲಿಗೆ ಕುರಿತಾದ ವಸ್ತು ವಿಷಯಗಳ ಪೇಂಟಿಂಗ್ಗಳು ಪೋರ್ಟ್ರೇಟ್, ಅಬ್ಸ್ಟ್ರಾಕ್ಟ್, ತ್ರೀಡಿ ಆರ್ಟ್ ಮತ್ತು ಇನ್ನಿತರ ಮಾಡರ್ನ್ ಆರ್ಟ್ ಇನ್ನೂ  ಏನೇನೋ ಪೇಂಟಿಂಗ್ಗಳ ಚಿತ್ತಾರ! 

ಪ್ರವಾಸೋದ್ಯಮ ಅಭಿವೃದ್ಧಿಯ ದೃಷ್ಟಿಯಿಂದ ಪ್ರಾರಂಭವಾದ ಭಿತ್ತಿ ಚಿತ್ರಗಳ ಈ ಪ್ರಾಜೆಕ್ಟ್, ಕಳೆದ ಕೆಲವು ವರ್ಷಗಳಿಂದ ನಡೆಯುತ್ತಾ ಬಂದಿದೆಯಂತೆ. ಆದರೂ ಕೂಡ, 2023 ಜನವರಿಯಲ್ಲಿ ಭುವನೇಶ್ವರದಲ್ಲಿ ನಡೆದ ಪುರುಷರ ಹಾಕಿ ವಿಶ್ವಕಪ್ ಸಮ್ಮೇಳನ ಕೊಸ್ಕರವಾಗಿ ಈ ಪ್ರಾಜೆಕ್ಟ್ ಅನ್ನು ತ್ವರಿತವಾಗಿ ಮುಗಿಸಿಕೊಂಡ ಖ್ಯಾತಿ ಒಡಿಸ್ಸಾ ಲಲಿತ ಅಕಾಡೆಮಿಗೆ ಸಲ್ಲುತ್ತದೆ. ಆ ಸಮಯದಲ್ಲಿ, ಹತ್ತಕ್ಕೂ ಹೆಚ್ಚು ಏಜೆನ್ಸಿಯ, ಇಲ್ಲಿನ ಕೆಲವು arts and craft ಕಾಲೇಜು ವಿದ್ಯಾರ್ಥಿಗಳೂ ಒಳಗೊಂಡು, 1500 ಜನ ಆರ್ಟಿಸ್ಟ್ ಗಳು ನಗರದ ಎಲ್ಲ ಗೋಡೆಗಳ ಮೇಲೆ ನಿರಂತರವಾಗಿ ಪೇಂಟಿಂಗ್ಗಳನ್ನು ಮಾಡಿದ್ದರು ಎನ್ನುತ್ತಾರೆ ಇಲ್ಲಿನ ಸ್ಥಳೀಯರು. ಕಳಿಂಗ ಸ್ಟೇಡಿಯಂನ ಸುತ್ತಮುತ್ತಲಿನ ಜಾಗದಲ್ಲಿ ಪ್ರಸಿದ್ಧ ಹಿಂದಿನ ಹಾಕಿ ಚಾಂಪಿಯನ್ಸ್ ಗಳು ಮತ್ತು ಈಗಿನ ಹಾಕಿ ಪ್ಲೇಯರ್ಸ್ಗಳ ಪೇಂಟಿಂಗ್ಸ್ ಗಳು ಅತ್ಯಂತ ಆಕರ್ಷಣೀಯವೆನೆಸಿತು. 
ಕಲಾಭಿಮಾನವಿರುವ ಯಾರೇ ಈ ಊರಿಗೆ ಹೋದರೂ, ಕಲಾ ಸೌಂದರ್ಯವನ್ನು ನೋಡುತ್ತಾ ಕಳೆದು ಹೋಗುವಷ್ಟು ಚಿತ್ರಕಲೆಗಳ ಹಾದಿಬೀದಿಗಳಲ್ಲಿಯೇ ಸವಿಯಬಹುದು. ಕಲೆಗಳ ಮೂಲಕ ಸಾಂಸ್ಕೃತಿಕ ಪರಂಪರೆಯನ್ನು ಜನರಿಗೆ ತೋರ್ಪಡಿಸುವ, ಆ ಮೂಲಕ ಪ್ರವಾಸ ಉದ್ಯಮವನ್ನು ಅಭಿವೃದ್ಧಿಪಡಿಸುವ ಸರ್ಕಾರದ ಈ ಯೋಜನೆಗೆ, ಭುವನೇಶ್ವರದ ನಾಗರೀಕರ ಸ್ವಚ್ಛತಾ ಅರಿವು ಕೂಡ ಅಷ್ಟೇ ಪ್ರೋತ್ಸಾಹಿಸಿದೆ ಎಂದು ನನಗನಿಸಿತು. 
#odisha #bubhaneshwar #landofart #tourism #promoteculture

ಮಂಗಳವಾರ, ಅಕ್ಟೋಬರ್ 24, 2023

ಚೌಸಟ್ ಯೋಗಿನಿ ದೇವಾಲಯ

ಭುವನೇಶ್ವರದ ನಗರದೊಳಗಿನ ಪ್ರಮುಖ ದೇವಾಲಯಗಳನ್ನೆಲ್ಲ ಮುಗಿಸಿ, ಮತ್ತಿನ್ಯಾವ ವಿಶಿಷ್ಟ ಸ್ಥಳವನ್ನು ನೋಡಬಹುದು ಎಂದು ಹುಡುಕಿದಾಗ ಗೂಗಲಮ್ಮ ಹೇಳಿದ್ದು, ಚೌಸ ಯೋಗಿನಿ ದೇವಾಲಯದ ಬಗ್ಗೆ. ಬೇರೆ ದೇವಾಲಯಗಳಷ್ಟು ಪ್ರಸಿದ್ಧ ಮಾಹಿತಿಗಳು ಇರದಿದ್ದರೂ, ಯೋಗಿನಿ ದೇವಾಲಯ ಭೇಟಿ ನೀಡಲೇ ಬೇಕು ಎಂದುಕೊಂಡು ಹೋಟೆಲ್ಲಿನಿಂದ ಆಕ್ಷಣಕ್ಕೆ ಕಾಲ್ಕಿತ್ತೆವು. ಗೂಗಲ್ ಮ್ಯಾಪ್ ಪ್ರಕಾರ ಪಟ್ಟಣದಿಂದ ಸುಮಾರು ೧೫ ಕಿಮೀ ಹೊರಭಾಗದಲ್ಲಿ ಇತ್ತು ಈ ದೇವಾಲಯ. ಹಾದಿ ಸಾಗುತ್ತ ಹೋದಂತೆ, ಮುಂದಕ್ಕೆ ಯಾರೂ ಹೆಚ್ಚು ಓಡಾಡದ ಹಳ್ಳಿಯ ರಸ್ತೆಗಳಲ್ಲಿ ನಮ್ಮ ಗಾಡಿಚಲಿಸುತ್ತಿತ್ತು. ಭೈರವಿ ನದಿಯ ಪಕ್ಕದಲ್ಲಿ ಹಾದುಹೋಗುವ ಈ ಹಾದಿಯಲ್ಲಿ ಎಡ ಬಲಗಳ ತಿರುಗಾಟವಾಗಿ, ಸ್ವಲ್ಪ ಸಮಯಕ್ಕೆ  ಗೂಗಲ್ ಮ್ಯಾಪ್ ಕೂಡ ಹಾದಿ ತೋರಿಸುತ್ತಿಲ್ಲ ಎಂದಾಗ ಹೇಗೆ ತಲುಪುವುದಪ್ಪಾ ಎಂದು ತುಸು ಆತಂಕವಾದರೂ, ಯಾರನ್ನಾದರೂ ಕೇಳುತ್ತಲೇ ಸಾಗುವುದು ಎಂದು ನಿರ್ಧರಿಸಿ ಮುಂದೆ ಸಾಗಿದೆವು. ತುಸು ಹೊತ್ತಿಗೆ ಮತ್ತೆ ಗೂಗಲ್ ಮ್ಯಾಪ್ಸ್ ಮಾಹಿತಿ ನೀಡಿ ಸಹಕರಿಸಿತು.  ಅದೊಂದು ಪುಟ್ಟ ಹಳ್ಳಿ ಹಿರಾಪುರ. ಊರ ಮನೆಗಳ ಮುಂದೆ ಹಾದು ಹೋಗುವ ಸಣ್ಣ ರಸ್ತೆಗಳ ದಾಟಿದಂತೆ ಮುಂದೆ ಅನಾವರಣ ಗೊಂಡಿದ್ದು ಒಂದು ಪುರಾತನ ಸಣ್ಣ ದೇವಾಲಯದ ವರಾಂಗಣ. ದೂರದಿಂದ ಕಲ್ಲಿನ ಸಣ್ಣ ವರ್ತುಲದಂತೆ ಕಾಣುತ್ತಿದ್ದ ಕಲ್ಲಿನ ಸ್ಮಾರಕದಲ್ಲಿ ಅಂತಹದ್ದೇನಿರಬಹುದು ಎಂದುಕೊಂಡು ಹೋದವಳಿಗೆ, ಹೊರಬರುವಾಗ ಇಂತದ್ದೊಂದು ಸ್ಥಳವನ್ನು ನೋಡದೇ ಹೋಗಿದ್ದರೆ, ಏನೋ ಕಳೆದುಕೊಂಡಿರುತ್ತಿದ್ದೆವು ಎನ್ನುವ ಭಾವ.    




ದೇವಾಲಯದ ವಾರಾಂಗಣದ ಪ್ರಾರಂಭದಲ್ಲಿ ಒಂದು ಈಶ್ವರನ ಸಣ್ಣ ಗುಡಿ, ಪಕ್ಕದಲ್ಲಿ ತಾಯಿ ಮಾಶಕ್ತಿಯ ವಿಗ್ರಹ ಅದರಿಂದ ಅಣತಿ ದೂರದಲ್ಲಿ ಕಾಣುತ್ತದೆ, ಕೇವಲ ನಾಲ್ಕು ಅಡಿ ಎತ್ತರದ ಶ್ರೀಯಂತ್ರದ ಸಾಂಕೇತಿಕವಾಗಿ ವರ್ತುಲದ ರೂಪದಲ್ಲಿನ ಕಲ್ಲಿನ ಪುರಾತನ  ದೇವಾಲಯ ಚೌಸಟ್ ಯೋಗಿನಿ ಮಂಡಲ, ಭಾರತದ ತಾಂತ್ರಿಕ ವಿದ್ಯೆಯ ಪ್ರಯೋಗಗಳ ಸಂಪ್ರದಾಯಗಳ ಉದಾಹರಿಸುವ ವಿಶೇಷ ಪೂಜಾ ಸ್ಥಳವಿದು. ಇತರ ದೇವಾಲಯಗಳಿಗಿಂತ ಭಿನ್ನವಾದ ವಿನ್ಯಾಸವನ್ನು ಹೊಂದಿರುವ ಈ ದೇವಾಲದಲ್ಲಿ, ಹೆಸರಿಗೆ ತಕ್ಕಂತೆ, ಚೌಸಟ್ ಅಂದರೆ ಹಿಂದಿ ಭಾಷೆಯಲ್ಲಿ ೬೪ ಎಂದರ್ಥ ಮತ್ತು 'ಯೋಗಿನಿ' ಎಂದರೆ ಶಕ್ತಿಗಳ ಒಟ್ಟುಗೂಡುವಿಕೆ. ವಾಸ್ತು ಶಾಸ್ತ್ರದ ಪ್ರಕಾರ, ಈ ವರ್ತುಲದ ದೇವಾಲಯದಲ್ಲಿ, ೬೪ ದಿಕ್ಕುಗಳಿಂದ ಶಕ್ತಿಗಳು ಮಿಳಿತವಾಗಿ, ಅದರ ಉನ್ನತಿ ಎಲ್ಲೆಡೆ ಪಸರಿಸುವುದರಿಂದ, ಈ ದೇವಾಲಯಕ್ಕೆ ಛಾವಣಿಯಾಗಲಿ, ಇತರ ದೇವಾಲಯಗಳಿಗೆ ಇರುವಂತೆ ಗೋಪುರವಾಗಲಿ ಇಲ್ಲ! ಇತರ ವಿಗ್ರಹಗಳಿಗಿಂತ ಮಧ್ಯದಲ್ಲಿರುವ ತುಸು ದೊಡ್ಡ ವಿಗ್ರಹವಾದ, ಕಮಲದ ಮೇಲೆ ನಿಂತಿರುವ, ಹತ್ತು ಭುಜಗಳುಳ್ಳ ಮುಖ್ಯ ಮಾಯಾಮಾಯ ದೇವಿಯ ವಿಗ್ರಹವಿದೆ. ಹಾಗಾಗಿ ಇದನ್ನು ಮಾಯಮಾಯ ದೇವಾಲಯ ಎಂದೂ ಕೂಡ ಕರೆಯಲಾಗುತ್ತದೆ.  ಮಧ್ಯಪ್ರದೇಶದ ಖಜರಾಹೋ ಯೋಗಿನಿ ದೇವಾಲಯ ಹೊರತು ಪಡಿಸಿದರೆ, ಭಾರತದಲ್ಲಿ, ಒಡಿಶಾದಲ್ಲಿ ಮಾತ್ರ ಕಂಡು ಬರುವ ಯೋಗಿನಿ ದೇವಾಲಯ, ಸಾವಿರಾರು ವರ್ಷಗಳ ಹಿಂದೆ  ೬೪ ಬಗೆಯ ವಿದ್ಯೆಗಳು ಮತ್ತು ಪ್ರಭಾವಿಸಬಲ್ಲ ತಂತ್ರ ವಿದ್ಯೆಯ ಅಭ್ಯಾಸದ ಸ್ಥಳವಾಗಿತ್ತು ಈ ದೇವಾಲಯ ಎಂಬ ಪುರಾಣ ಸಾಕ್ಷಿಯ ಬಗ್ಗೆ ಎಂದು ಅಲ್ಲಿನ ಅರ್ಚಕರು ತಿಳಿಸುತ್ತಾರೆ. ಸಾವಿರಾರು ವರ್ಷಗಳ ಶಿಥಿಲತೆ ಮತ್ತು ಧಾಳಿಗಳಿಗೆ ಈಡಾಗಿ, ಅನೇಕ ಯೋಗಿನಿಯರ ಮೂರ್ತಿಗಳು ಧ್ವಂಸಗೊಂಡಿದ್ದರೂ ಕೂಡ, ನೋಡಬಲ್ಲ ಸ್ಥಿತಿಯಲ್ಲಿ ಇದೆ ಈ ದೇವಾಲಯ. ಇದೀಗ ಭಾರತದ ಪುರಾತತ್ವ ಸಮೀಕ್ಷೆಯ ವತಿಯಿಂದ ಹಾನಿಯಿಂದ ಸಂರಕ್ಷಿಸಲ್ಪಟ್ಟ ದೇವಾಲಯಗಳಲ್ಲಿ ಇದೂ ಒಂದು. ದೇವಾಲಯದ ಒಳಹೊಕ್ಕರೆ ವರ್ತುಲಾಕಾರದ ಮಂಟಪದ ಮಧ್ಯದಲ್ಲೊಂದು ಮಂಟಪ. ವರ್ತುಲಾಕಾರದ ಕಲ್ಲಿನ ಗೋಡೆಗೆ ಅಂಟಿಕೊಂಡಂತೆ ಯೋಗಿನಿಯರ ವಿಗ್ರಹಗಳು. ೬೪ ಯೋಗಿನಿಯರ ಮೂರ್ತಿಗಳಲ್ಲಿ ಮುಖ್ಯವಾಗಿ ತಾರಾ, ಇಂದ್ರಾಣಿ, ವಾರಾಹಿ, ಕುಬೇರಿ, ಕೌಮಾರಿ, ಗೌರಿ,  ಸ್ವರಸ್ವತಿ,ಯಮುನಾ, ಯಶ, ವಿನಾಯಕಿ, ಕಾಮಾಕ್ಯ, ಸಮುದ್ರಿ, ಶಿವಾನಿ, ಗಂಗಾ, ಚಾಮುಂಡ, ಗಾಂಧಾರಿ, ಸರ್ವ ಮಂಗಳೆ, ವಾಯುವೇಗ ಇತ್ಯಾದಿ ಯೋಗಿನಿಯರು ತಮ್ಮ ತಮ್ಮ ವಾಹನದ ಮೇಲೆ ನಿಂತಿರುವ ಭಂಗಿಗಳ ಅವಶೇಷಗಳನ್ನು ಕಾಣಬಹುದು. ಗಣಪತಿಯ ಶಕ್ತಿಯನ್ನು ಸ್ತ್ರೀ ರೂಪದಲ್ಲಿನ ವಿನಾಯಕಿ ಅಥವಾ ಗಣೇಶ್ವರಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇವುಗಳ ಜೊತೆಯಲ್ಲಿಯೇ ನಾಲ್ಕು ಏಕ ಪಾದ ಭೈರವ ಮೂರ್ತಿಗಳ ಕೆತ್ತನೆ, ಮಂಟಪದ ಹೊರಾಂಗಣದಲ್ಲಿ ಒಂಭತ್ತು ಕಾತ್ಯಾಯಿನಿಗಳ ವಿಗ್ರಹಗಳನ್ನೂ ಸೇರಿಸಿ ಒಟ್ಟಾರೆ ೮೧ ವಿಗ್ರಹಗಳ ಕೆತ್ತನೆ ಈ ಸುಂದರ ಮಂಟಪದಲ್ಲಿದೆ. ಎದುರಿಗೆ ಕೈ ಹಾಕಿದರೆ ಎಟುಕುವಷ್ಟು ನೀರಿನ ಒರತೆ ಇರುವ ಅಷ್ಟೇ ಪುಟ್ಟದಾದ ಬಾವಿಯೊಂದಿದೆ. ಊರಿನ ಗ್ರಾಮಸ್ಥರು ಅತ್ಯಂತ ಭಕ್ತಿಯಿಂದ ಪ್ರತಿನಿತ್ಯ ತುಪ್ಪದ ದೀಪ ಹಚ್ಚಿ ಯೋಗಿನಿಯರ ಪೂಜಿಸುತ್ತಾರೆ. ವರ್ಷಕ್ಕೊಮ್ಮೆ ಡಿಸಂಬರ್ ತಿಂಗಳಿನಲ್ಲಿ, ಚೌಸಟ್ ಯೋಗಿನಿ ಮಹೋತ್ಸವ ಕೂಡ ವಿಜೃಂಭಣೆಯಿಂದ ಜರುಗುತ್ತದೆ . ವಿಶೇಷತಃ ಪೂಜೆ ಪುನಸ್ಕಾರಗಳು, ಒರಿಸ್ಸಾದ ಇತಿಹಾಸದ, ಪುರಾಣಗಳ ಪ್ರಾಮುಖ್ಯತೆಯನ್ನು ತಿಳಿಸುವಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಜರುಗುತ್ತದೆ ಎಂದು ಇಲ್ಲಿನ ಸ್ಥಳೀಯರು ಹೆಮ್ಮೆಯಿಂದ ಹೇಳುತ್ತಾರೆ. 





ಸ್ಥಳೀಯರ ಅನುಕರಿಸಿ, ಊದಿನಕಡ್ಡಿ ಹಚ್ಚಿ, ದೇವಿಯ ಕುರಿತಾದ ಸಂಗೀತದ ಹಾಡುಗಳ ಸೇವೆ ನೀಡಿ, "ಒಡಿಶಾದಲ್ಲಿ ನಾನು ನೋಡಿರ ಎಲ್ಲ ದೇವಸ್ಥಾನಕ್ಕಿಂತ ನಂಗೆ ಈ ಜಾಗ ತುಂಬಾ ಇಷ್ಟ ಆತು" ಎಂದು ಮಗಳು ಹೇಳುವಾಗ, ಕಳೆದೇ ಹೋದೆವು ಎಂದುಕೊಂಡಿದ್ದ ಸ್ಥಳದಲ್ಲಿ ಏನೋ ಸಿಕ್ಕಿದ ಧನ್ಯತೆಯ ಭಾವವೊಂದು ಮೂಡಿ ಬಂದದ್ದು ಸುಳ್ಳಲ್ಲ. ಒಮ್ಮೊಮ್ಮೆ ಗೂಗಲ್ ಮ್ಯಾಪ್ ಸುತ್ತಾಡಿಸುವುದರಿಂದ, ಈ ಸ್ಥಳಕ್ಕೆ ಸ್ಥಳೀಯರ ಕೇಳಿಕೊಂಡು, ಒಮ್ಮೆ ಖಂಡಿತಾ ಭೇಟಿ ನೀಡಬಹುದಾದ ಸ್ಥಳವಿದು. 

ಸೋಮವಾರ, ಅಕ್ಟೋಬರ್ 9, 2023

ನಮ್ಮ ಆಹಾರವೇ ನಮಗೆ ಔಷಧಿ

ಮೇಲಿಂದ ಮೇಲೆ ಬರುವ ಸಾಂಕ್ರಾಮಿಕ ರೋಗಗಳು , ಹೃದಯ ಸಂಬಂಧೀ ಕಾಯಿಲೆಗಳ ಅನುಭವ ಪಡೆದ ಮೇಲೆ, ಸಾವು ನೋವುಗಳ ಸುದ್ದಿಗಳ ಕೇಳಿದ ಮೇಲೆ, "ಆರೋಗ್ಯವೇ ಭಾಗ್ಯ" ಎಂಬ ಮಾತು ಸತ್ಯ ಎಂಬುದು ಅರಿವಾಗಿದೆ. ಆದರೇನು ಮಾಡುವುದು? ಇಂದಿನ ಯಾಂತ್ರಿಕ ಯುಗದಲ್ಲಿ ಕೈಯಳತೆಯಲ್ಲಿ ಬೇಕಾಗಿದ್ದೆಲ್ಲ ಸಿಗುವ ಮಾರಾಟ ಸೌಲಭ್ಯ, ಹೆಚ್ಚಾದ ಮನುಷ್ಯನ ಆಸೆಗಳು, ಮೆಚ್ಚುಗೆಯಾದ ಕಷ್ಟಪಡದ ಬದುಕು ಇತ್ಯಾದಿ ಅಂಶಗಳಿಂದ, ಆಹಾರ ಸಾಮಗ್ರಿಗಳು ಸ್ಥಳೀಯತೆ ಕಳೆದುಕೊಂಡು, ಹೆಚ್ಚೆಚ್ಚು ರೆಡಿ ಟು ಈಟ್, ಪ್ಯಾಕಡ್ ಫುಡ್ಸುಗಳು ನಮ್ಮ ಬದುಕಿನಲ್ಲಿ ಹಾಸುಹೊಕ್ಕಿ ಹೋಗಿವೆ. ಮನೆಯ ಮೆಟ್ಟಿಲಿಳಿ್ದರೆ ಹೊರಗಿನ ತಿಂಡಿ ಕಣ್ಣು ಕುಕ್ಕುತ್ತದೆ.  ಆ ಮೋಹದಿಂದ ಹೊರಬರುವುದು ಹೇಗೆ? ಅದಕ್ಕೆ ಒಂದೇ ಪರಿಹಾರ. ನಾವು ಮನೆಯಲ್ಲಿ ತಿನ್ನುವ ಆಹಾರವನ್ನು ಅರಿತುಕೊಳ್ಳುವುದು. ಜಗತ್ತಿನಲ್ಲಿ ಒಬ್ಬರಂತೆ ಇನ್ನೊಬ್ಬರಿರುವುದಿಲ್ಲ. ಪ್ರತಿಯೊಬ್ಬರ ದೇಹ ಪ್ರಕೃತಿಯೂ ವಿಭಿನ್ನ. ನಮ್ಮ ದೇಹಕ್ಕೆ ಯಾವುದು ಹಿತ ಅಹಿತ ಎಂಬುದು ನಾವೇ ಅಧ್ಯಯನ ಮಾಡಿಕೊಳ್ಳಬೇಕು. ಆಹಾರ ಎಂದರೆ ಕೇವಲ ಹೊಟ್ಟೆ ತುಂಬಿಸುವುದು ಎಂದರ್ಥವಲ್ಲ. ದೇಹವನ್ನು ರೋಗಮುಕ್ತವನ್ನಾಗಿಸಿ, ಸ್ವಾಸ್ಥತೆಯಿಂದ ಇಡಲು ಬೇಕಾದ ಪೋಷಕಾಂಶಗಳನ್ನು ನೀಡುವುದೇ ಆಹಾರ. ಹಾಗಾಗಿ ಎಷ್ಟು ಪ್ರಮಾಣದ ಆಹಾರ, ಯಾವ ಬಗೆಯ ಆಹಾರ, ಯಾವ ಕ್ರಮದಲ್ಲಿ, ಯಾವಾಗ ತೆಗೆದುಕೊಳ್ಳಬೇಕು ಎಂಬ ವಿಷಯಗಳೂ ಇಲ್ಲಿ ಮುಖ್ಯ.  ಆಹಾರವನ್ನು ಔಷಧಿಯೇ ಎಂದುಕೊಂಡು ಬಳಸಿದರೆ, ಮುಂದೆ ಔಷಧಿಯನ್ನೇ ಆಹಾರವನ್ನಾಗಿ ಮಾಡಿಕೊಳ್ಳುವ ಪರಿಸ್ಥಿತಿಯ ತಡೆಯಬಹುದು ಅಥವಾ ಭವಿಷ್ಯದಲ್ಲಿ ಅನಾರೋಗ್ಯದ ಪರಿಣಾಮವನ್ನು ಕಡಿಮೆ ಮಾಡಿಕೊಳ್ಳಬಹುದು. 

ಹೀಗೊಂದಷ್ಟು ಟಿಪ್ಸ್ಗಳು ದೇಹದ ಆರೋಗ್ಯಕ್ಕಾಗಿ.  

ನೀರು ಸೇವನೆ ಸರಿಯಾದ ಕ್ರಮ : ಬೆಳಿಗ್ಗೆ ಎದ್ದು ಒಂದು ಲೋಟ ಅರಿಶಿನ ಪುಡಿ ಸೇರಿಸಿ ಬಿಸಿನೀರು ಕುಡಿಯುವುದರಿಂದ ಅಜೀರ್ಣ ಸಂಬಂಧಿ ಸಮಸ್ಯೆ ಕಡಿಮೆಯಾಗುತ್ತದೆ. ದೇಹದ ಕಶ್ಮಲ ಹೊರಹೋಗಲು ಮತ್ತು ಮಾನಸಿಕ ಸಮತೋಲನಕ್ಕಾಗಿ, ದಿನಕ್ಕೆ ಮೂರು ಲೀಟರ್ ನಷ್ಟು ನೀರಿನ ಅವಶ್ಯಕತೆ ಇರುತ್ತದೆ. ಊಟದ ಮಧ್ಯದಲ್ಲಿ ನೀರು ಸೇವಿಸಬಾರದು. ಊಟಕ್ಕೂ ಕನಿಷ್ಠ ೨೦ ನಿಮಿಷ ಮುಂಚೆ ಮತ್ತು ಊಟ ಮಾಡಿದ ಕನಿಷ್ಠ ಅರ್ಧ ಗಂಟೆಯ ನಂತರ ನೀರನ್ನು ಸೇವಿಸಬೇಕು, ಮಳೆಗಾಲದಲ್ಲಿ ಕಾಯಿಸಿ ಆರಿಸಿದ ನೀರು, ಬೇಸಿಗೆಯಲ್ಲಿ ಫ್ರಿಡ್ಜ್ ನೀರಿನ ಬದಲಾಗಿ ಮಣ್ಣಿನ ಮಡಕೆಯ ತಂಪಾದ ನೀರು ಬಳಸುವುದು ಉತ್ತಮ. 

ನಿಗದಿತ ಸಮಯಕ್ಕೆ ಆಹಾರ ಸೇವನೆ : ಪಾಶ್ಚಿಮಾತ್ಯ ಸಂಸ್ಕೃತಿಗೆ ಒಳಗಾಗಿ ದಿನಕ್ಕೆ ಐದು ಆರು ಸಲ ತಿನ್ನುವುದು ಸರಿ ಅಲ್ಲ. ಆಹಾರದ ಸಮಯದ ಕುರಿತಾಗಿ ಸಣ್ಣ ಯೋಜನೆ ಮತ್ತು ಸಿದ್ಧತೆ ದಿನವಿಡೀ ನಮ್ಮ ದೇಹಕ್ಕೆ ಬೇಕಾದ ಪೌಷ್ಟಿಕಾಂಶವನ್ನು ಸಮತೋಲನದಲ್ಲಿರಿಸುತ್ತದೆ. ಬೆಳಗ್ಗಿನ ಉಪಹಾರ ಯಾವುದೇ ಕಾರಣಕ್ಕೂ ತಪ್ಪಿಸಬಾರದು. ರಾತ್ರಿಯಿಡೀ ತಿಂದಿಲ್ಲಎಂದು ಅಧಿಕವಾಗಿ ತಿನ್ನುವುದೂ ಸರಿಯಲ್ಲ.ನಮ್ಮ ಆಹಾರದಲ್ಲಿ ನಮಗೆ ಇಡೀ ದಿನಕ್ಕೆ ಬೇಕಾಗುವ ಪ್ರೊಟೀನ್, ವಿಟಮಿನ್, ಕ್ಯಾಲೋರಿ, ಮಿನರಲ್ಸ್, ನಾರಿನ ಅಂಶದ ಆಹಾರ ಮತ್ತು ಹಣ್ಣುಗಳ ಪ್ರಮಾಣ ಸರಿಸಮನಾಗಿರಬೇಕು. ದೈಹಿಕ ಕೆಲಸ ಇರುವವರಿಗೆ ಆಹಾರ ಪ್ರಮಾಣ ತುಸು ಜಾಸ್ತಿ ಬೇಕು. ಕುಳಿತು ಕೆಲಸ ಮಾಡುವವರು, ಕಡಿಮೆ ಪ್ರಮಾಣಪೌಷ್ಟಿಕ ಆಹಾರ ತಿಂದರೆ ಸಾಕು. ಒಟ್ಟಾರೆಯಾಗಿ ಮಧ್ಯಾಹ್ನದ ವೇಳೆಯೇ ಸರಿಯಾಗಿ ಜೀರ್ಣವಾಗಿರುವಂತಹ ಆಹಾರ ತಿನ್ನಬೇಕು. ರಾತ್ರಿಯ ಆಹಾರ ಎಷ್ಟು ಲಘುವಾಗಿರಬೇಕೆಂದರೆ, ಮಲಗುವ ಮುನ್ನವೇ ಆಹಾರ ಜೀರ್ಣವಾಗಿರಬೇಕು ಅಂದರೆ  ಮಲಗುವ ಕನಿಷ್ಠ ೧.೫ ಘಂಟೆ ಮುನ್ನ ಊಟ ಮಾಡಿರಬೇಕು. ರಾತ್ರಿಯ ನಿದ್ದೆಯಲ್ಲಿ ದೇಹದ ಅಂಗಾಂಗಗಳ ರಿಪೇರಿ ಕೆಲಸಗಳು ಮತ್ತು ಬೆಳವಣಿಗೆ ನಡೆಯುವುದರಿಂದ, ಹೊಟ್ಟೆ ತುಂಬಾ ತಿನ್ನುವ ಹೆಚ್ಚಿನ ಆಹಾರ, ಸ್ಥೂಲ ಕಾಯಕ್ಕೆ, ಮರುದಿನದ ಅಜೀರ್ಣನಂತೆಗೆ ದಾರಿಯಾಗುತ್ತದೆ. ಹಸಿವಿಲ್ಲದೆ ಇದ್ದಾಗಲೂ ಹೊತ್ತು ಕಳೆಯಲು, ಸ್ಟ್ರೆಸ್  ಇತ್ಯಾದಿ ಸಂದರ್ಭಗಳಲ್ಲಿ ಮಧ್ಯೆ ಮಧ್ಯೆ ಏನಾದರೂ ತಿಂಡಿಯನ್ನು ಬಾಯಾಡುತ್ತ ಇರುವ ಅಭ್ಯಾಸ ಅವಶ್ಯಕತೆಗಿಂತಲೂ, ದೇಹಕ್ಕೆ ಅನಾವಶ್ಯಕ ಅನಗತ್ಯ ಆಹಾರದ ಜೀರ್ಣಕ್ರಿಯೆಯ ಶ್ರಮ ನೀಡಿದಂತೆ ಆಗುತ್ತದೆ. ಅದರ ಬದಲು ನೀರು, ಹಣ್ಣಿನ ರಸ, ಎಳನೀರು, ಮಜ್ಜಿಗೆ ಕುಡಿಯುವುದು ಉತ್ತಮ. 

ಆಹಾರ ತಯಾರಿಸುವ ಬಗೆ: ಆಹಾರ ತಯಾರಿಸುವುದು ಕೂಡ ಒಂದು ಸುಂದರ ಕಲೆ, ಜೀವನೋತ್ಸಾಹದ ಚಟುವಟಿಕೆಯದು. "ಅಯ್ಯೋ ಏನು ತಿಂಡಿ ಮಾಡೋದು?", "ಯಾರು ಇಷ್ಟೆಲ್ಲಾ ಮಾಡುತ್ತಾರೆ?" ಇತ್ಯಾದಿ ನಕಾರಾತ್ಮಕ ಯೋಚನೆಗಳನ್ನಿಟ್ಟುಕೊಂಡು ಆಹಾರ ತಯಾರಿಸಬಾರದು. ಕೈಕಾಲು ಸ್ವಚ್ಛವಾಗಿರಲಿ ತಲೆಕೂದಲು ಕಟ್ಟಿರಲಿ.ಅಂತೆಯೇ ಆಹಾರ ತಿನ್ನುವಾಗ ಇತರರ ಕುರಿತು ದ್ವೇಷ, ಹತಾಶೆ, ಅಸೂಯೆ, ದುರುದ್ದೇಶ ಇಟ್ಟುಕೊಂಡರೆ, ಆ ಭಾವನೆಗಳ ರಾಸಾಯನಿಕಗಳು ದೇಹದಲ್ಲಿ ಸ್ರವಿಸುತ್ತಿರುತ್ತವೆಯಾದ್ದರಿಂದ, ನಾವು ತಿನ್ನುವ ಆಹಾರ ಜೀರ್ಣವಾಗದೇ ಉಳಿಯುತ್ತದೆ ಹಾಗಾಗಿ ಊಟ ಮಾಡುವಾಗ ಆದಷ್ಟು ಮೌನವಾಗಿರುವುದು ಪ್ರಯೋಜನಕಾರಿ.  


ಸಾಧ್ಯವಾದಷ್ಟು ನಿಸರ್ಗಕ್ಕೆ ಹತ್ತಿರವಿರಿ : ನಿಸರ್ಗಕ್ಕೆ ಹತ್ತಿರವಿದ್ದಷ್ಟೂ ವ್ಯಾಧಿ ನಮ್ಮನ್ನು ಬಾಧಿಸದು. ಹುಷಾರು ತಪ್ಪಿದರೆ ಮಾತ್ರೆ ಎಂಬ ತತ್ವ ನಮ್ಮದಾಗಿರಬಾರದು.  ತಲೆನೋವು ಎಂದ ಕೂಡಲೇ ತಕ್ಷಣ ಆನಸೀನ್ಮಾತ್ರೆಗಳ ಮೊರೆ ಹೋಗಬೇಡಿ. ತಲೆನೋವಿಗೆ ಕೇವಲ ದೈಹಿಕ ಸಮಸ್ಯೆಗಳೇ ಕಾರಣವಾಗಿರುವುದಿಲ್ಲ. ಮಾನಸಿಕ ಒತ್ತಡ, ಶೀತದಿಂದಾಗುವ ಅಡ್ಡ ಪರಿಣಾಮ ಕೆಲವೊಮ್ಮೆ ಗ್ಯಾಸ್ಟ್ರೈಟಿಸ್ ಕಾರಣದಿಂದಲೂ ತಲೆನೋವು ಪರಿಣಮಿಸುತ್ತದೆ. ಸಣ್ಣ ಪುಟ್ಟ ಥಂಡಿ ಕೆಮ್ಮುಗಳಿಗೆ ತಕ್ಷಣಕ್ಕೆ ಆಂಟಿಬಯೋಟಿಕ್ ಬೇಕಾಗುವುದಿಲ್ಲ. ನಿತ್ಯ ದೊರೆಯುವ ತುಳಸಿ, ಶುಂಠಿ, ಪುದೀನಾ, ದೊಡ್ಡಪತ್ರೆ, ಕರಿಬೇವು, ಕಾಳುಮೆಣಸು, ಅರಿಶಿನ, ಕೊತ್ತಂಬರಿ ಜೀರಿಗೆಗಳ ಬಳಕೆ ಸಹಾಯಕವಾಗುತ್ತದೆ. ಗಿಡಮೂಲಿಕೆಗಳ ಕಷಾಯ ಜೊತೆಗೆಅತ್ಯಂತ ಅಗತ್ಯ - ವಿಶ್ರಾಂತಿ! ಬಿಸಿನೀರ ಹಬೆ, ಬೇಳೆಕಟ್ಟಿನ ಸಾರು ಹೀಗೆ ಪೋಷಿಸಿದರೆ ಸಾಕು ಸಾಕಷ್ಟು ಸಣ್ಣ ಪುಟ್ಟ ಖಾಯಿಲೆಗಳು ಕಡಿಮೆಯಾಗುತ್ತವೆ. ಒತ್ತಡದ ಬದುಕಿಗೆಪೌಷ್ಟಿಕಾಂಶದ ಆಹಾರದ ಅಗತ್ಯತೆ ಇರುತ್ತದೆ. ಅದು ಪ್ರಕೃತಿಯಲ್ಲಿ ದೊರಕುವ ಹಣ್ಣು ತರಕಾರಿಗಳಲ್ಲಿ ಹೆಚ್ಚಾಗಿರುತ್ತದೆ. ಹೀಗಾಗಿ ಆಯಾ ಋತುಮಾನದಲ್ಲಿ ದೊರಕುವ ಎಲ್ಲ ಹಣ್ಣು ತರಕಾರಿಗಳನ್ನು, ಋತುಮಾನಕ್ಕೆ ತಕ್ಕಂತೆ ಬಳಸುತ್ತ ಹೋದರೆ, ದೇಹಕ್ಕೆ ಒಗ್ಗುತ್ತದೆ.  ಅಡುಗೆ ಎಣ್ಣೆ ಸಾಧ್ಯವಾದಷ್ಟು ಗಾಣದಲ್ಲಿ ನಾವೇ ಖುದ್ದಾಗಿ ನಿಂತು ಮಾಡಿಸಿದ್ದಾದರೆ, ಕಲಬೆರಿಕೆ ಕಮ್ಮಿಯಾಗುತ್ತದೆ. ಬಾಣಂತಿಯರು ಕರಿ ಗಿಜಿವಿಲಿ ಅಕ್ಕಿ ಸೇವಿಸಿದರೆ, ಎದೆ ಹಾಲುಹೆಚ್ಚಾಗುತ್ತದೆ, ಸಕ್ಕರೆ ಖಾಯಿಲೆ ಇಂದ ಬಳಲುತ್ತಿರುವವರ, ಕೆಂಪಕ್ಕಿ ಸೇವಿಸಿದರೆ ಖಾಯಿಲೆ ನಿಯಂತ್ರಣಕ್ಕೆ ಬರುತ್ತದೆ. ಕೆಂಪುಪ್ಪು, ರಾಕ್ಸಾಲ್ಟ್, ಸೈನ್ದ್ರ ಲವನದಲ್ಲಿರುವಷ್ಟು ಲವಣ ಅಂಶ, ಬಿಳಿಯ ಉಪ್ಪಿನಲ್ಲಿರುವುದಿಲ್ಲವಿಪರೀತ ಪಾಲಿಶ್ ಮಾಡಿದ ಅಕ್ಕಿ ನೋಡಲು ಬೆಳ್ಳಗೆನಿಸಿದರೂ, ಅದರಲ್ಲಿ ರುಚಿ ನಾರಿನಂಶ ಮತ್ತು ಪರಿಮಳ ಇರುವುದಿಲ್ಲ. ಕಹಿ ರುಚಿಯ ಬಳಕೆ ಇತರ ರುಚಿಯ ಬಳಕೆಯಷ್ಟೇ ಸಹಜವಾಗಿರಬೇಕು. ಹಾಗಲಕಾಯಿ, ಕಹಿ ಸೌತೆ, ಕಹಿಬೇವು, ಕಂಚಿಕಾಯಿ, ಹೇರಳೇಕಾಯಿ, ಇತ್ಯಾದಿ ಪದಾರ್ಥಗಳನ್ನು ತಿನ್ನಲು ರೂಡಿಸಿಕೊಡಿರಬೇಕು  ಮನೆಯ ಪಾಟಿನಲ್ಲೇ ಸಾಧ್ಯವಾದಷ್ಟು ಹಸಿರು ಸೊಪ್ಪುಗಳನ್ನು ಸಣ್ಣ ಪುಟ್ಟ ಗಿಡಮೂಲಿಕೆಗಳನ್ನು ಬೆಳೆಸಿಟ್ಟುಕೊಳ್ಳಬಹುದು. ತಿಂಗಳಿಗೊಮ್ಮೆ, ನಿರಾಹಾರ ಉಪವಾಸ ಮಾಡುವುದು ಒಳ್ಳೆಯದು. ಜೀರ್ಣಾಂಗಗಳಿಗೆ ಆಗೀಗ ವಿಶ್ರಾಂತಿ ನೀಡಿದರೆ, ಹಲವು ವರ್ಷಗಳ ವರೆಗೆ ಜೀರ್ಣಾಂಗಗಳು ಗಟ್ಟಿಯಾಗಿರುತ್ತವೆ. ಇದೊಂದೇ ಉತ್ತಮ ಜೀವನಕ್ಕೆ ಅಡಿಪಾಯ ಆಗಿದೆ. ಅಂತೆಯೇ, ಸ್ಥೂಲ ಕಾಯ ಕಡಿಮೆಗೊಳಿಸಬೇಕು ಎಂದು ಹಠಾತ್ತನೆ ಊಟ ತಿಂಡಿ ಕಡಿಮೆ ಮಾಡುವುದು, ಜಿಮ್ ವರ್ಕಿಗಾಗಿ ಕೃತಕ ಪ್ರೋಟೀನುಗಳ ಬಳಕೆ ಮಾಡುವುದು ಇತ್ಯಾದಿ ಜೀವಕ್ಕೆ ಮಾರಣಾಂತಿಕವಾಗಬಹುದು. ಅದರ ಬದಲಾಗಿ ಸೂಕ್ತ ವೈದ್ಯಕೀಯ ಸಲಹೆ ಪಡೆದು, ಡಯಟ್ ಫುಡ್ ತೆಗೆದುಕೊಳ್ಳಬೇಕು. 

ಆಹಾರ ಸೇವಿಸುವ ಬಗೆ : ಮಲಗಿಕೊಂಡು, ಟೀವಿ ನೋಡುತ್ತಾ ಊಟ ಮಾಡುವುದು ಖಂಡಿತ ಸಲ್ಲ. ಟೀವಿ ಮತ್ತು ಮೊಬೈಲ್ ಆಕರ್ಷಣೆಯೆದುರು ನಾವು ತಿನ್ನುತ್ತಿರುವ ಆಹಾರದ ಪ್ರಮಾಣವಾಗಲಿ, ರುಚಿ ಗಳಾಗಲಿ ಮೆದುಳಿಗೆ ಸಂವಹನೆ ಆಗದೆ, ಅತ್ಯಧಿಕ ಆಹಾರ ಸೇವನೆ, ಜಗಿಯದೇ ತಿನ್ನುವುದು ಇತ್ಯಾದಿ ತೊಂದರೆಯಿರುತ್ತದೆ. ಹಾಗೆಯೇ ಕೈಬೆರಳುಗಳ ಬಳಸಿ ಊಟಮಾಡಿ.  ಇದರಿಂದ ಊಟದ ಅನುಭವ ಮೆದುಳಿಗೆ ಸಂವಹನೆ ಆಗುತ್ತದೆ. ಊಟಕ್ಕೂ ಮುಂಚೆ ಸಿಕ್ಕ ಆಹಾರಕ್ಕೆ ಕೃತಜ್ಞತೆ ಹೇಳುವುದು, ಹಸಿದವರಿಗೆಲ್ಲ ಅನ್ನ ಸಿಗಲಿ ಎಂದು ಪ್ರಾರ್ಥಿಸಿ ತಿನ್ನುವುದು ಒಳ್ಳೆಯದು. 

ಫ್ರಿಡ್ಜ್ ಬಳಕೆ ಅತಿಯಾಗಿ ಬೇಡ : ಮೂರೂ ನಾಲ್ಕು ದಿನಗಳವರೆಗೆ ಫ್ರಿಡ್ಜ್ ನಲ್ಲಿ ಶೇಖರಿಸಿಟ್ಟು ತಿನ್ನುವ ಆಹಾರ ಖಂಡಿತ ಆರೋಗ್ಯಕ್ಕೆ ಮಾರಕ. ಆಹಾರದಲ್ಲಿನ ಸತ್ವ ನಶಿಸಿ ಹೋಗಿದ್ದರೂ, ಆಹಾರ ಕೆಡದಿರುವಂತೆ ಕಾಣುವುದು ಇದರ ಮಾಯೆ. ನಿತ್ಯ ಅಡುಗೆ ಮಾಡುವುದು, ನಮ್ಮ ದೇಹ ಮತ್ತು ಮನಸ್ಸು ಚಟುವಟಿಕೆಯಿಂದಿರವು ಸಹಾಯಕ  ಮತ್ತು ಆಯಾ ದಿನದ ಆಹಾರ ಆಯಾ ದಿನವೇ ಬಳಕೆ ಮಾಡುವ ಪದ್ಧತಿಯೇ ಆರೋಗ್ಯಕರ. 


ಪ್ಲಾಸ್ಟಿಕ್ ಪರಿಕರಗಳು ಬೇಡ : ಬಿಸಿ ಆಹಾರಗಳ ಪ್ಲಾಸ್ಟಿಕ್ ತಟ್ಟೆ ಅಥವಾ ಪಾತ್ರೆಗಳಲ್ಲಿ ಬಳಸುವುದು, ಬಿಸಿ ಮಾಡುವುದು ಇತ್ಯಾದಿಗಳಿಂದ, ನಮಗೆ ಅರಿವಿಲ್ಲದೆ ಅಲ್ಪಸ್ವಲ್ಪ ಪ್ರಮಾಣದ ಪ್ಲಾಸ್ಟಿಕ್ ನಮ್ಮ ದೇಹದ ಒಳಕ್ಕೆ ಹೋಗುತ್ತಿರುತ್ತದೆ. ಆದಷ್ಟು ಹಿತ್ತಾಳೆ, ಸ್ಟೀಲ್ ತಟ್ಟೆ  ಬಾಳೆ ಎಲೆ ಊಟ ಉತ್ತಮ.

ಊಟದ ನಂತರ ನಡುಗೆ: ಊಟದ ನಂತರ ತಕ್ಷಣ ವಾಹನ ಸವಾರಿ, ಕುದುರೆ ಸವಾರಿ, ಊಟ ಸಲ್ಲದು. ಕುಳಿತುಕೊಳ್ಳಲು ಬಯಸಿದರೆ ವಜ್ರಾಸನ ಸೂಕ್ತ ಅದು ಜೀರ್ಣಕ್ರಿಯೆಗೆ ಸಹಕಾರಿ. ಇಲ್ಲವಾದಲ್ಲಿ ಸ್ವಲ್ಪಸಮಯ ನಡುಗೆ, ರಾತ್ರಿ ಊಟವಾದ ಮೇಲೆ ೧೦೦ ಹೆಜ್ಜೆ ನಡೆಯುವುದು ಇತ್ಯಾದಿ ಅಭ್ಯಾಸ ಒಳ್ಳೆಯದು.  

ಆಹಾರ ಸೇವನೆಯಲ್ಲಿ ಬುದ್ಧಿವಂತಿಕೆ : ಹೊರಗಡೆ ತಿಂಡಿಗಳ ಆಕರ್ಷಣೆ ಕಮ್ಮಿಯಾಗಬೇಕು ಎಂದರೆ, ನಮ್ಮ ಮನೆಯಲ್ಲಿನ ಆಹಾರವರ್ಣಮಯವಾಗಬೇಕು. ಇಂದ್ರೀಯಗಳ ಮೂಲಕ ನಾವು ನೀಡುವ ಮಾಹಿತಿಯ ಮೇರೆಗೆ, ಮನಸ್ಸು ಆಸೆಯನ್ನುನಿರ್ಧರಿಸುತ್ತದೆ. ನಿತ್ಯ ಆಹಾರದಲ್ಲಿ ಮೊಸರು, ಸಲಾಡ್, ದಾಳಿಂಬೆ, ಹಸಿರು ಎಳೆಗಳ ತರಕಾರಿಗಳು, ಬೆಳ್ಳುಳ್ಳಿ, ಜೀರಿಗೆ, ಹಣ್ಣುಗಳು, ದ್ವಿದಳ ಧಾನ್ಯಗಳು ಮತ್ತು ಹೆಚ್ಚು ಎಣ್ಣೆಯಲ್ಲಿ ಕಾರಿಯಾದ ಒಣ ಆಹಾರ ಇತ್ಯಾದಿ ವೈವಿದ್ಯತೆ ನೀಡಿದಾಗ ದೇಹ ಮತ್ತು ಮನಸ್ಸು ತೃಪ್ತಿ ಹೊಂದಿ, ಹೊರಗಿನ ತಿಂಡಿಗಳ ಆಸೆ ಅತ್ಯಧಿಕವಾಗುವುದಿಲ್ಲ. ಪೇಟೆಯ ಕೆಲಸಕ್ಕೆ ಹೋಗುವುದಿದ್ದರೆ, ಸಣ್ಣದೊಂದು ಆರೋಗ್ಯಕರ ಸ್ನ್ಯಾಕ್ ಅಥವಾ ಹಣ್ಣೊಂದನ್ನು  ತಿಂದು ಹೊರಟರೆ, ಹಾದಿಬದಿಯ ತಿಂಡಿಗಳ ಪರಿಮಳಕ್ಕೆ ದೇಹ ಸ್ಪಂದಿಸುವುದು ಕಡಿಮೆಯಾಗಿಸುತ್ತದೆ.


ನಾವು ಖರೀದಿಸುವ ಆಹಾರದ ಮೇಲೆಗಮನವಿರಬೇಕು. ಜಂಕ್ ಎಂದರೆ ಕೇವಲ ಕರಿದ ಪದಾರ್ಥಗಳು, ಜಿಡ್ಡಿನ ಅಂಶಗಳು ಎಂದಷ್ಟೇ ಅಲ್ಲ; ಅತಿಯಾದ ಯಾವುದೇ ರುಚಿಯೂ ಉದಾಹರಣೆಗೆ, ಅತಿಯಾದ ಸಿಹಿ ಗಳು, ಉಪ್ಪಿನ ತಿಂಡಿಗಳೂ ಕೂಡ ಜಂಕ್ ಫುಡ್ ಗಳೇ. ಪ್ಯಾಕೇಟು ಆಹಾರಗಳಲ್ಲಿ ಕೊಬ್ಬಿನಂಶ, ಸಕ್ಕರೆಯ ಅಂಶ, ಕೃತಕ ಬಣ್ಣಗಳು ಸಂರಕ್ಷಕಗಳ ಓದಿ ನೋಡಿ ಕೊಳ್ಳಿ. ಅತಿಯಾಗಿ ಸಂಸ್ಕರಿಸಿ, ಸಂರಕ್ಷಿಸಿ ಪ್ಯಾಕ್ ಮಾಡಲಾದ ಆಹಾರವನ್ನು ಕೆಡದಂತೆ ತಡೆಯಲು, ರಾಸಾಯನಿಕ ಮತ್ತು ಕೆಲವು ವರ್ಧಕಗಳನ್ನು ಬಳಕೆಮಾಡಲಾಗುತ್ತದೆ . ಗ್ರಾಹಕರನ್ನು ಆಕರ್ಷಿಸಲು, ರುಚಿಸಲು, ಅತೀ ಹೆಚ್ಚು ಸಿಹಿ, ಉಪ್ಪು, ಬಣ್ಣ, ಕೊಬ್ಬು ಇರುವಂತಹ ವರ್ಧಕಗಳ ಮೂಲ ಆಹಾರಕ್ಕೆ ಬೆರೆಸುತ್ತಾರೆ. ಇವೆಲ್ಲವೂ ಆ ಸಮಯಕ್ಕೆ ರುಚಿ ಎನಿಸಿದರೂ, ದೇಹಕ್ಕೆ ವಿಷಮ. ಮಕ್ಕಳಿಗೆ ನೀಡುವ  ಪ್ಯಾಕೆಟ್ ಜ್ಯೂಸು, ಜ್ಯಾಮ್, ಬಿಸ್ಕತ್ತು ಚಾಕೊಲೇಟ್ ಗಳಲ್ಲಿ ಅತ್ಯಂತ ಹೆಚ್ಚಿನ ರಾಸಾಯನಿಕ ಮತ್ತು ವರ್ಧಕಗಳಿರುತ್ತವೆ. ಬಿಸ್ಕತ್ತಿನ ಮೈದಾ ಹೊಟ್ಟೆಗೆ ಜೀರ್ಣವಾಗುವುದಿಲ್ಲ. ಮಕ್ಕಳು ಸದಾ ಹೊಟ್ಟೆನೋವಿನಿಂದ ನರಳುತ್ತಾರೆ. ದೇಹ ರಿಪೇರಿಯ ಶ್ರಮಕ್ಕೆ ದೇಹದ ಎಲ್ಲ ಶಕ್ತಿಯೂ ವ್ಯವವಾದರೆ, ಸದೃಢ ಬೆಳವಣಿಗೆ ಹೇಗೆ ತಾನೇ ಸಾಧ್ಯ?  ಹಾಗಾಗಿ ಮಕ್ಕಳಿಗೆ  ಬಾಯಾಡಲು ಮನೆಯಲ್ಲಿಯೇ ಮಾಡಿದ ತಾಜಾ ತಿಂಡಿ ಅಥವಾ ಹಣ್ಣುಆರೋಗ್ಯಕರ ಡ್ರೈಫ್ರೂಟ್ಸ್ ಗಳ ಆಯ್ಕೆ ಮಾಡಿಕೊಳ್ಳಿ. ವಿಟಮಿನ್ ಡಿ, ಮೆಗ್ನಿಶಿಯಂ, ಸತು, ಒಮೇಗಾ ೩ ಕೊಬ್ಬಿನಾಮ್ಲ ಇರುವ ಆಹಾರ ಸತ್ವಗಳನ್ನು ಹುಡುಕಿ ಪಟ್ಟಿ ಮಾಡಿಕೊಂಡು ಅವುಗಳ ಬಳಕೆ ಪ್ರಯತ್ನಪೂರಕವಾಗಿ ಪದಾರ್ಥಗಳಲ್ಲಿ ಮಾಡಬೇಕು. 

 ಕೊನೆ ಹನಿ : ಆಹಾರ ಎಂದರೆ ಕೇವಲ ಹೊಟ್ಟೆಗೆ ತಿನ್ನುವ ಆಹಾರವೊಂದೇ ಅಲ್ಲ, ದೇಹಕ್ಕೆ ನೀಡುವ ಸಕಲ ಸವಲತ್ತುಗಳೂ ಆಹಾರವೇ. ಪೌಷ್ಟಿಕ ಶಕ್ತಿಯ ಜೊತೆ, ಧನಾತ್ಮಕ ಚಿಂತನೆ, ಅಸೂಯೆ ಕೋಪ  ಇಲ್ಲದಿರುವ ಬದುಕು, ಮನಸ್ಪೂರ್ತಿಯಾಗಿ ಅನುಭವಿಸುವ ಸಂತೋಷ , ನಗು, ವ್ಯಾಯಾಮ , ಪ್ರಾಣಾಯಾಮ, ಎಲ್ಲರ ಒಳಿತಿಗಾಗಿ ಪ್ರಾರ್ಥನೆ ಎಲ್ಲವೂ ಕೂಡ ಈ ದೇಹಕ್ಕೆ ಆಹಾರವೇ. ನಿರೋಗಿಯಾಗಿ ಬದುಕುವ ಜೀವನ ಶೈಲಿಯೇ ಮನುಷ್ಯನ ಈಗಿನ ನಿಜವಾದ ಶ್ರೀಮಂತಿಕೆ ಆಗಿದೆ. ಅದೊಂದು ಕಲಿಕೆ. ಹಾಗಾಗಿ ಉತ್ತಮ ಆಹಾರ ತಿನ್ನಲು ಕಲಿಯೋಣ. 








 .