ಬುಧವಾರ, ಜನವರಿ 17, 2024
ನುಗ್ಗೆ ಸೊಪ್ಪಿನ ಚಟ್ನಿ ಪುಡಿ
ಬುಧವಾರ, ಜನವರಿ 3, 2024
ಕೈವಾರ ಬೆಟ್ಟ ಮತ್ತು ಕೈಲಾಸಗಿರಿ ಗುಹೆ
ಬೆಂಗಳೂರಿನಿಂದ ೬೫ ಕಿಮೀ ದೂರದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿದೆ ಕೈವಾರವೆಂಬ ಊರು. ಆಸ್ತಿಕರಿಗೆ ಇದೊಂದು ಪುಣ್ಯಕ್ಷೇತ್ರ, ಚಾರಣಿಗರಿಗೆ ಮತ್ತೊಂದು ಸ್ವರ್ಗ. ಕರ್ನಾಟಕ ಅರಣ್ಯ ಇಲಾಖೆಯವರ ನಿರ್ವಹಣೆಯಲ್ಲಿರುವ ಇಲ್ಲಿನ ಕೈವಾರ ಬೆಟ್ಟಕ್ಕೆ ಟ್ರೆಕಿಂಗ್ ಹೋಗಲು ಮುಂಚಿತವಾಗಿ ಅನುಮತಿ ಪಡೆಯಬೇಕಾಗುತ್ತದೆ. karnatakatourism.org ನಲ್ಲಿ ಕೂಡ ಆನ್ಲೈನ್ ಟಿಕೆಟ್ ಬುಕಿಂಗ್ ಮಾಡಬಹುದು. ಬೆಂಗಳೂರಿನಿಂದ ಹೊರಟು ಹೊಸಕೋಟೆ ಮಾರ್ಗವಾಗಿ ಅಥವಾ ದೇವನಹಳ್ಳಿ-ಬಿಜಯಪುರ ಮಾರ್ಗವಾಗಿ ಬಸ್ಸು ಅಥವಾ ಸ್ವಂತ ವಾಹನದಲ್ಲಿ ಕೈವಾರವನ್ನು ತಲುಪಬಹುದು. ನಾವು ಹೋದದ್ದು ನಮ್ಮ ಯೋಗ ಶಿಕ್ಷಣ ಕೇಂದ್ರದ ವತಿಯಿಂದ, ಸಂಚಾರದ ವ್ಯವಸ್ಥೆ, ಊಟ ತಿಂಡಿಗಳ ವ್ಯವಸ್ಥೆ ಮುಂಚಿತವಾಗಿಯೇ ನಮ್ಮ ತಂಡದ ನೇಕಾರರಿಂದ ಆದ್ದ ಕಾರಣ, ನಮಗೆ ಹೆಚ್ಚಿನ ನಿರ್ವಹಣಾ ಜವಾಬ್ಧಾರಿ ಬೀಳಲಿಲ್ಲ. ಚಾರಣ ಯೋಗಬಂಧುಗಳ ಜೊತೆಯಾದ್ದರಿಂದ ದೇಹದ ಸ್ನಾಯುಗಳನ್ನು ಚಲನಶೀಲವಾಗಿರಿಸಲು ಆಸಕ್ತಿ ಹೊಂದಿರುವ ಸಮಾನ ಮನಸ್ಕರರ ಗುಂಪು ದೊರೆತಂತಾಗಿತ್ತು. ಇದರ ಜೊತೆಯಲ್ಲಿ, ಈ ಸ್ಥಳದ ಮಹಿಮೆಯನ್ನು ಅತ್ಯಂತ ನಿಖರವಾಗಿ ಬಲ್ಲವರಾದ ನಮ್ಮ ಗುರುಗಳಾದ ಸುಬ್ಬು ಬೈಯ್ಯ ಮತ್ತು ಅಶೋಕ್ ಸರ್ ನ ನೇತೃತ್ವದ ಯೋಗಯಾತ್ರೆ ಇದಾದ್ದರಿಂದ, ಸ್ಥಳ ಮಹಿಮೆಯನ್ನು ವಿಸ್ತಾರವಾಗಿ ತಿಳಿಯಲು ಇನ್ನಷ್ಟು ಸಹಾಯಕವಾಯಿತು. ಈ ಸ್ಥಳ ಸಂತ ಕೈವಾರ ತಾತಯ್ಯ ಆಶ್ರಮ ಮತ್ತು ದೇವಾಲಯದ ಸಂಕೀರ್ಣಕ್ಕೆ ಹೆಸರುವಾಸಿಯಾಗಿದೆ.
ಮೊದಲಿಗೆ ಭೇಟಿಯಿತ್ತದ್ದು, ಸದ್ಗುರು ಯೋಗಿ ನಾರೇಯಣ ಮಠಕ್ಕೆ. ನಾರಾಯಣನ ಭಕ್ತ, ಸಂತ ತಾತಯ್ಯನವರು ಅಲ್ಲಿಯೇ ದೇಹ ತ್ಯಾಗ ಮಾಡಿದರು ಎಂದು ಹೇಳಲಾಗುತ್ತದೆ. ಅಲ್ಲಿಯ ವಿಶಿಷ್ಟತೆ ಎಂದರೆ ಅಲ್ಲಿ ಬರುವ ಹೆಣ್ಣುಮಕ್ಕಳಿಗೆ ಪ್ರಸಾದವೆಂದು ಬಳೆಯನ್ನು ನೀಡುತ್ತಾರೆ. ಹಿಂದೆ ಸಂತ ತಾತಯ್ಯನವರು ದೇವಸ್ಥಾನದ ಹೊರಗೆ ಇದೇ ರೀತಿ ಎಲ್ಲ ಹೆಣ್ಣುಮಕ್ಕಳಿಗೆ ಬಳೆಗಳನ್ನು ನೀಡಿ ಹರಸುತ್ತಿದ್ದರಂತೆ. ಒಳಾಂಗಣದಲ್ಲಿ ಧಾನ್ಯ ಕುಟ್ಟುವ ಒರಳಿದೆ, ಒಂದಷ್ಟು ಕಾಣಿಕೆ ನೀಡಿ, ಹಳೆಯ ಕಾಲದಲ್ಲಿ ಧಾನ್ಯವನ್ನು ಕುಟ್ಟಿ ಹಿಟ್ಟು ಮಾಡುತ್ತಿದ್ದ ಅನುಭವವನ್ನು ಅಲ್ಲಿ ಪಡೆಯಬಹುದು. ಈ ಮಠದ ಎದುರಲ್ಲಿಯೇ ಕಾಣುತ್ತದೆ ಕೈವಾರ ಬೆಟ್ಟ. ನಮ್ಮ ಜೊತೆಗಿದ್ದ ಚಳ್ಳಪಿಳ್ಳೆಗಳನ್ನೆಲ್ಲ ಕಟ್ಟಿಕೊಂಡು, ಒಟ್ಟು ೩೫ ಜನರ ನಮ್ಮ ತಂಡ ಚಾರಣ ಪ್ರಾರಂಭಿಸಿತು. ಕೈವಾರ ಬೆಟ್ಟದ ತುಂಬಾ ಕಲ್ಲುಬಂಡೆಗಳು. ಹಾಗಾಗಿ ಅತಿಯಾದ ಬಿಸಿಲಿನ ಸಮಯದಲ್ಲಿ ಕಾಲುಸುಡುತ್ತದೆ. ನಮ್ಮ ಚಾರಣದ ಹಿಂದಿನ ದಿನ ಮಧ್ಯೆ ರಾತ್ರೆವರೆಗೆ ಧೋ ಎಂದು ಮಳೆ ಸುರಿಯುತ್ತಿತ್ತು. ಎಲ್ಲಿ ನಮ್ಮ ಪ್ರವಾಸ ರದ್ದಾಗುವುದೋ ಎಂದುಕೊಂಡಿದ್ದವರಿಗೆ, ಮರುದಿನ ಮಳೆ ನಿಂತಿದ್ದು, ಮತ್ತು ಆ ತೇವಾಂಶಕ್ಕೆ ವಾತಾವರಣವೂ ತಂಪಾದ್ದು ನಮ್ಮ ಪಾಲಿಗೆ ವರವಾಯಿತು.
ದಂತಕಥೆಯ ಪ್ರಕಾರ ಭೀಮ ಮತ್ತು ಬಕಾಸುರ ಮಹಾಭಾರತದ ಅವಧಿಯಲ್ಲಿ ಈ ಬೆಟ್ಟದ ಮೇಲೆ ಕಾದಾಡಿದ್ದರು. ಬೆಟ್ಟದ ತುದಿ ತಲುಪಿದ ಮೇಲಂತೂ ಅಷ್ಟೆತ್ತರದ ಸ್ಥಳದಿಂದ ಕೈವಾರ ಪಟ್ಟಣದ ಸುತ್ತಮುತ್ತಲಿನ ನೋಟ ವಿಹಂಗಮವಾಗಿದೆ. ನನಗಂತೂ ಬಣ್ಣದ ಪ್ಯಾಲೆಟ್ ಎನಿಸುವಂತೆ ಕಾಣುತ್ತಿತ್ತು ಅಲ್ಲಿಂದ ಕೆಳಗಿನ ಭೂಮಿ. ಒಂದಷ್ಟು ಹೊತ್ತು ವಿಶ್ರಾಂತಿ, ಮಾತುಕತೆ ಧ್ಯಾನ ಫೋಟೋಶೂಟ್ ಗಳು ನಡೆದವು. ಮಂಗಗಳ ಕಾಟ ಅಷ್ಟೇ ಇದೆ ಎಲ್ಲಿಂದ ಎಲ್ಲಿಯವರೆಗೆ ಹೋದರೂ.. ನಂತರ ನಿಧಾನಕ್ಕೆ ಹತ್ತಿ ಹೋಗಿದ್ದ ಉತ್ಸಾಹದಲ್ಲೇ ಬೆಟ್ಟವನ್ನು ಇಳಿದು ಬಂದೆವು. ಯಾವ ಸುಸ್ತು ಬಳಲಿಕೆ ತೋರಿಸದೇ ಮಕ್ಕಳೆಲ್ಲ ಓಡಾಡಿದ್ದು ಚಾರಣದ ಬೆಸ್ಟ್ ಪಾರ್ಟ್.
ಅಲ್ಲಿಂದ ಕೆಳಗಿಳಿದು, ಒಳ ಹೊಕ್ಕಿದ್ದೆ ಅಮರನಾರಾಯಣ ದೇವಸ್ಥಾನಕ್ಕೆ. ನೂರಾರು ವರ್ಷಗಳಿಂದಲೂ ದೇವರಿರುವ ಆ ಸ್ಥಳ ಸ್ವತಃ ಇಂದ್ರನಿಂದಲೇ ನಿರ್ಮಿತ ಎನ್ನುತ್ತಾರೆ ಅಲ್ಲಿನ ಹಿರಿಯರು. ಅಲ್ಲಿನ ಹೊರಾಂಗಣ ಆವರಣದಲ್ಲಿ ಬಳೆಗಾರರೊಬ್ಬರ ಅಂಗಡಿಯಿದೆ. ಇಷ್ಟವಾದ ಬಳೆಗಳನ್ನು ಅಲ್ಲಿ ಕೊಳ್ಳಬಹುದು.
ಮರಳಿ ಬರುವಾಗ ಹಾಗೂ ಹೀಗೂ ಸಮಯ ಉಳಿಸಿಕೊಂಡು, ತಾತಯ್ಯ ಗುಹೆ ಮತ್ತು ಆಧ್ಯಾ ತ್ಮಿಕ ಸ್ಥಳಕ್ಕೊಂಡು ಶೀಘ್ರ ಭೇಟಿ ನೀಡಿದೆವು. ಸಂತ ತಾತಯ್ಯ ನವರು ಜ್ಞಾನೋದಯ ಪಡೆದುಕೊಂಡ ಗುಹೆಯಿದು ಎಂಬ ಪ್ರತೀತಿಯಿದೆ. ಸೂರ್ಯ ಮುಳುಗುವ ಹೊತ್ತಾದ್ದರಿಂದ ದೇವಾಲಯದ ಹೊರಾಂಗಣ ಮತ್ತು ಸುತ್ತಮುತ್ತಲಿನ ಬೆಟ್ಟಗುಡ್ಡಗಳು ಹೊಂಬಣ್ಣದಿಂದ ಕೂಡಿದ್ದು ನೋಡಲುಅದ್ಭುತವಾಗಿತ್ತು. ಭಕ್ತಿಯೋಗದ ಪ್ರಕಾರಗಳಲ್ಲಿ ಸಂಗೀತ ನೃತ್ಯ ಎಲ್ಲವೂ ಒಪ್ಪಿತ. ಭಜನೆಗಳ ಜೊತೆಗೆ ಎಲ್ಲರೂ ಸಂಗೀತ ನೃತ್ಯ ಕೊಳಲು ವಾದನದ ಜೊತೆಗೆ ಧ್ಯಾನ ಮುಗಿಸಿ, ಸವಿ ಸವಿ ನೆನಪುಗಳೊಂದಿಗೆ, ಹಗುರಾದ ಮನಸ್ಸಿನೊಂದಿಗೆ ಅಲ್ಲಿಂದ ಹೊರಟು ರಾತ್ರೆಗೆ ಬೆಂಗಳೂರು ತಲುಪಿದೆವು.