ಸೋಮವಾರ, ಫೆಬ್ರವರಿ 28, 2022

ಯೋಗ ಯಾತ್ರೆ - ಕನ್ಯಾಕುಮಾರಿ

ಭಾರತದ ದಕ್ಷಿಣದ ತುತ್ತತುದಿಯಲ್ಲಿ, ಹಿಂದೂ ಮಹಾ ಸಾಗರ, ಬಂಗಾಳ ಕೊಲ್ಲಿ ಮತ್ತು ಅರಬ್ಬೀ ಸಮುದ್ರ ಎಂಬ ಮೂರು ಮಹಾಸಾಗರಗಳು ಸಂಗಮವಾಗುವ ಸ್ಥಳದ ತಟದಲ್ಲಿದೆ ಕನ್ಯಾಕುಮಾರಿ. ಐತಿಹಾಸಿಕ ಪ್ರಸಿದ್ಧತೆ ಪಡೆದಿರುವ ಈ ಒಂದು ಪುಣ್ಯಕ್ಷೇತ್ರವನ್ನು ನೋಡುವ ಆಸೆ ಮೊದಲಿನಿಂದಲೂ ಇದ್ದರೂ, ಅದು ಹೇಗೋ ನನಗೆ  ಕನ್ಯಾಕುಮಾರಿ ನೋಡುವ ಕಾಲ ಕೂಡಿ ಬಂದಿರಲಿಲ್ಲ. ಯೋಗ ಟ್ರೈನರ್ ಕೋರ್ಸನ್ನು ಪಡೆಯುತ್ತಿರುವ ನನಗೆ, ನನ್ನ ಗುರುಗಳಾದ ಅಶೋಕ್ ಸರ್ ಇಂತಹದ್ದೊಂದು ಯೋಗ ಕಾನ್ಫರೆನ್ಸ್ ಬಗ್ಗೆತಿಳಿಸಿರದಿದ್ದರೆ, ಅದೆಂತಹ ಅದ್ಭುತ ಅವಕಾಶವನ್ನು ತಪ್ಪಿಸಿಕೊಳ್ಳುತ್ತಿದ್ದೆ ಎಂಬುದು ಈ ಪ್ರವಾಸ ಮುಗಿಸಿ ಬಂದವಳಿಗೆ ಅರಿವಾಗುತ್ತಿದೆ.  'ಯೋಗ ಶಾಸ್ತ್ರ ಸಂಗಮ' ಎಂಬ ರಾಷ್ಟ್ರೀಯ ಯೋಗ ಸಮ್ಮೇಳನಕ್ಕೆ ಭಾಗವಹಿಸುವ ಉದ್ದೇಶದ ಮೂಲಕ, ಕಲಿಯುತ್ತಿರುವ ಯೋಗ ವಿಚಾರವಾಗಿ ಅದೆಷ್ಟೋ ಗೊತ್ತಿರದ ಮಾಹಿತಿಗಳನ್ನು ತಿಳಿಯಲು, ಈ ಪುಣ್ಯಕ್ಷೇತ್ರದ ಪ್ರಸಿದ್ಧ ಸ್ಥಳಗಳನ್ನು ನೋಡಲು, ಇಷ್ಟದ ಟ್ರೆಕಿಂಗ್ ಮಾಡಲು, ಸತ್ಸಂಗದ ಮೂಲಕ ಮೂರು ದಿನಗಳಲ್ಲಿ ನಲವತ್ತಕ್ಕೂ ಹೆಚ್ಚು ಸ್ನೇಹಿತ ಸ್ನೇಹಿತೆಯರನ್ನು ಪಡೆಯುವ ಅವಕಾಶವಾದ್ದು ನನ್ನ ಪಾಲಿನ ಅದೃಷ್ಟವೇ ಸರಿ!


ವಿವೇಕಾನಂದ ಕೇಂದ್ರ, ಕನ್ಯಾಕುಮಾರಿ ಇವರು ಪ್ರತಿವರ್ಷದಂತೆ, ವಿಶಿಷ್ಟವಾಗಿ ರಾಷ್ಟ್ರೀಯ ಯೋಗ ಸಮ್ಮೇಳನವನ್ನು ನಡೆಸುತ್ತಾರೆ. ಈ ಮೂರು ದಿನಗಳಲ್ಲಿ ಯೋಗ ಶಾಸ್ತ್ರದ ಕುರಿತಾದ ಅನೇಕ ವಿಷಯಗಳ ಕುರಿತಾದ ಸೆಮಿನಾರ್ಗಳು,  ಹೊಸ ಯೋಜನೆಗಳ ಕುರಿತಾದ ಚರ್ಚಾಕೂಟಗಳು, ಪ್ರಾಯೋಗಿಕವಾಗಿ ಯೋಗ ಮತ್ತು ಧ್ಯಾನದ ಕ್ಲಾಸ್ಗಳು ನಡೆದವು. ಯೋಗ ಅಧ್ಯಾಯಗಳಲ್ಲಿ ಮುಖ್ಯವಾದ ಪತಂಜಲಿ ಯೋಗ ಸೂತ್ರ, ಹಠಪ್ರದೀಪಿಕಾ, ಶಿವ ಸಂಹಿತ, ಘೆರಂದ ಸಂಹಿತ, ವಸಿಷ್ಠ ಸಂಹಿತ ಇತ್ಯಾದಿ ಈ ಸಲದ ಮುಖ್ಯ ಚರ್ಚಿತ ವಿಷಯಗಳು. ಹಠಯೋಗ ಪ್ರದೀಪಿಕಾ ತಿಳಿದಷ್ಟೂ ಮುಗಿಯದಷ್ಟು ವಿಸ್ತಾರವಾದ್ದಾದರೂ, ತಮಗೆ ಸಿಕ್ಕಿರುವ ಸಮಯದಲ್ಲೇ, ೩-೪ ತಾಸಿನ ಮಾತುಗಾರಿಕೆಯಲ್ಲಿ, ಆ ವಿಷಯದ ಮೇಲೆ ಅತ್ಯಂತ ಸರಳವಾಗಿ ವಿವರಿಸಿದವರು ಡಾ. ಜಯರಾಮನ್ ಸರ್  Director, Division of Textual Research in Yoga, Indic Academy. ವಿವೇಕಾನಂದ ಕೇಂದ್ರದ ಕ್ಯಾಮ್ಪಸ್ ಇಷ್ಟವಾಯಿತು. ಅತ್ಯಂತ ಅಚ್ಚುಕಟ್ಟಾಗಿ ಮೂರುದಿನಗಳ ಕಾರ್ಯಾಗಾರವನ್ನುಆಯೋಜಿಸಿ, ಪಾಲ್ಗೊಳ್ಳುವವರಿಗೆಲ್ಲರಿಗೂ ಉತ್ತಮ ವಸತಿ, ಆಹಾರ, ಸಮಗ್ರ ಮಾಹಿತಿ ಮತ್ತು ಸ್ನೇಹ ಪರಿಸರದ ವ್ಯವಸ್ಥೆ ಮಾಡಿದ ಕ್ರೆಡಿಟ್ ಮಾನನೀಯ ಶ್ರೀ ಹನುಮಂತರಾವ್ (ಹನುಜೀ), ಉಪಾಧ್ಯಕ್ಷರು ವಿವೇಕಾನಂದ ಕೇಂದ್ರ ಮತ್ತು ತಂಗಲಕ್ಷ್ಮಿ, Conviener, ಯೋಗ ಶಾಸ್ತ್ರ ಸಂಗಮ ಇವರಿಗೆ ಸಲ್ಲುತ್ತದೆ. ಈ ವರ್ಷದ ಚರ್ಚೆಗಳಲ್ಲಿ ಮುಖ್ಯವಿಷಯಗಳಾಗಿ, ಯೋಗ ಪಠ್ಯಗಳ ಕುರಿತಾದ ಚರ್ಚೆ, ಮನುಷ್ಯನ ವ್ಯಕ್ತಿತ್ವ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಯೋಗದ ಪ್ರಾಮುಖ್ಯತೆ, ವಿದ್ಯಾರ್ಥಿಗಳು ಯುವಜನರಲ್ಲಿ ಯೋಗದ ಮಹತ್ವವನ್ನು ಅರ್ಥಮಾಡಿಸುವುದು ಮತ್ತು ಬಳಸುವಂತೆ ನೀಡಬಹುದಾದ ಪ್ರೇರಣೆ, ಹಠಯೋಗಪ್ರದೀಪಿಕಾ ಕುರಿತಾಗಿ ನೀಡಿದ ವಿಸ್ತಾರವಾದ ವಿವರಗಳು ಇತ್ಯಾದಿ ಸಮ್ಮೇಳನದ ಮುಖ್ಯ ವಿಷಯಗಳಾಗಿದ್ದವು. ಇನ್ನೂ ಕಲಿಕೆಯ ಪ್ರಾರಂಭದ ಹಂತದಲ್ಲಿರುವ ನಮ್ಮಂತಹ ವಿದ್ಯಾರ್ಥಿಗಳಿಗೆ ಕೆಲವಷ್ಟಾದರೂ ಅರ್ಥವಾಗುವಷ್ಟು ಸುಲಭವಾಗಿಯೂ, ಇನ್ನೂ ಅನ್ವೇಷಿಸಬೇಕಾದ ಆಳವನ್ನೂ ತಿಳಿಯುವಂತಾಯಿತು. ಕೇರಳದ ಗವರ್ನರ್, ಆರಿಫ್ ಮೊಹಮ್ಮದ್ ಖಾನ್ ಅವರು ಈ ಸಮ್ಮೇಳನದ ಉದ್ಘಾಟಕರಾಗಿ ಬಂದಿದ್ದರು. ಅವರ ೫೦ ನಿಮಿಷದ ಮಾತಿನಲ್ಲಿ, ಯೋಗದ ಮಹತ್ವದ ಕುರಿತಾದ ವಿವರಣೆ, ನಿರರ್ಗಳವಾಗಿ ಸಂಸ್ಕೃತ ಶ್ಲೋಕಗಳ ಬಳಕೆ, ಅಧ್ಯಾತ್ಮ ಮತ್ತು ಸಂಸ್ಕೃತಿಗಳ ಕುರಿತು ನೀಡಿದ ವಿಶ್ಲೇಷಣೆ ನಮಗೆಂತೂ ಅತ್ಯಾಶ್ಚರ್ಯವನ್ನುಂಟು ಮಾಡಿತು. ನನ್ನ ಗುರುಗಳಾದ ಅಶೋಕ್ ಸರ್ ಅನ್ನೂ ಒಳಗೊಂಡು ಅನೇಕರು ಮೇಲೆ ತಮ್ಮ ಪೇಪರ್ ಪ್ರೆಸೆಂಟ್ ಮಾಡಿದ್ದು ಯೋಗಕ್ಕೆ ಸಂಬಂಧ ಪಟ್ಟಂತೆ ಅನೇಕ ಹೊಸ ವಿಷಯಗಳ ಕುರಿತಾಗಿ ಆಸಕ್ತಿ ಹುಟ್ಟುವಂತಾಯಿತು.

ವಿವೇಕಾನಂದ ಕೇಂದ್ರ ಕ್ಯಾಮ್ಪಸ್ : ಮುಖ್ಯವಾಗಿ ಯೋಗ ಅಭ್ಯಾಸ ಮತ್ತು ಕಲಿಕೆಯ ಸಂಬಂಧಿತ ಕಾರ್ಯಕ್ರಮಗಳ ಜೊತೆಗೆ  ಬಾಲವಾಡಿ, ಆನಂದಾಲಯ, ಬಿ.ಎಡ್ ಕಾಲೇಜು ಇತ್ಯಾದಿ ಹತ್ತು ಹಲವಾರು ಮಕ್ಕಳ ಶಿಕ್ಷಣ ವ್ಯವಸ್ಥೆ, ಹಾಸ್ಪಿಟಲ್ಸ್ ಗಳ ವೈದ್ಯಕೀಯ ಸೇವೆ, ಗ್ರಾಮೀಣ ಜನರ ಅಭಿವೃದ್ಧಿ ಕುರಿತಾದ ಯೋಜನೆಗಳು, ಮಹಿಳೆ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಹಮ್ಮಿಕೊಂಡ ಯೋಜನೆಗಳು ಹೀಗೆ ಇನ್ನೂ ಅನೇಕ ಕ್ಷೇತ್ರಗಳಲ್ಲಿ ನೂರಾರು ಟ್ರಸ್ಟ್ಗಳನ್ನು ಹೊಂದಿ,  ಸಾಮಾಜಿಕ ಸೇವೆಯ ಮೂಲಕ ತಮ್ಮನ್ನು ತಾವೇ ಗುರುತಿಸಿಕೊಂಡಿರುವ ವಿವೇಕಾನಂದ ಕೇಂದ್ರ, ನಮ್ಮ ನಾಡು ಪರಂಪರೆ ಸಂಸ್ಕೃತಿಗಳ ಉನ್ನತಿಗಾಗಿ, ರಾಷ್ಟ್ರ ನಿರ್ಮಾಣಕ್ಕಾಗಿ ನಡೆಸುತ್ತಿರುವ ಎಲ್ಲಾ ಕಾರ್ಯಗಳು ಶ್ಲಾಘನೀಯ. ಕ್ಯಾಮ್ಪಸ್ಒಳಗಡೆ, ಯೋಗ ಕೇಂದ್ರ, ಸಾವಿರಕ್ಕೂ ಹೆಚ್ಚು ಯಾತ್ರಿಗಳಿಗೆ ವ್ಯವಸ್ಥೆ ನೀಡಬಹುದಾದ ವಸತಿ ಗೃಹಗಳು, ಪ್ರಾರ್ಥನಾ ಮಂದಿರ, ಸಭಾಭವನಗಳಿವೆ. ರಾಮಾಯಣ ದರ್ಶನಂ ಮತ್ತು ಭಾರತ ಮಾತಾ ಸದನ ಇವರ ಅಭಿವೃದ್ಧಿ ಕಾರ್ಯಗಳಲ್ಲಿ ಒಂದಾದ ಹೊಸ ಪ್ರಾಜೆಕ್ಟ್. ಗ್ರೌಂಡ್ ಫ್ಲೂರಿನಲ್ಲಿ ಸಂಪೂರ್ಣ ರಾಮಾಯಣವನ್ನು ಚಿತ್ರಕಥೆಯನ್ನು ಬಿಂಬಿಸುವ ೧೦೮ ಪೈಂಟಿಂಗ್ಗಳನ್ನು ಒಳಗೊಂಡಿರುವ ಇದ್ದರೆ, ಇನ್ನೊಂದು ಮಹಡಿಯಲ್ಲಿ, ೧೨.೫ ಅಡಿಯಷ್ಟು ದೊಡ್ಡದಾದ ಪಂಚ ಲೋಹಗಳಿಂದ ಮಾಡಿದ ತಾಯಿ ಭಾರತ ಮಾತೆಯ ಪುತ್ಥಳಿಯನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಇದನ್ನು ಕಂಡಾಗ ಮೈ ನವಿರೇಳುತ್ತದೆ. ಸ್ವಾಮಿ ವಿವೇಕಾನಂದ, ತಾಯಿ ಕನ್ಯಾಕುಮಾರಿ, ನಟರಾಜ, ಶಿವ ಇತ್ಯಾದಿ ಮೂರ್ತಿಗಳಿದ್ದು, ನಾವು ಎಂದಿಗೂ ನೆನಸಲೇ ಬೇಕಾದ ವೀರ ಮಾತೆಯರಾದ, ಜೀಜಾ ಬಾಯಿ, ಪರಾ ಶಕ್ತಿ, ತಾಯಿ ಶಾರದೆ, ತಾಯಿ ಯಶೋದೆ, ಶ್ರೀಮಾತಾ ಅಮೃತಾನಂದಮಯಿ ದೇವಿ, ಶಾಕುಂತಲೆ ಯವರ ಕುರಿತಾದ ಚಿತ್ರ ವಿವರಣೆಗಳಿವೆ. ಹಿಂದಿನವರ ತ್ಯಾಗ, ಧ್ಯೇಯ ಮತ್ತು ಶ್ರದ್ದೆಯನ್ನು ನಮ್ಮ ಅರಿವಿಗೆ ತಂದುಕೊಳ್ಳಲು ಇಂತಹದೊಂದು ಸಂಗ್ರಹಾಲಯ ಸಹಾಯಕವಾಗುತ್ತದೆ. ಸಮೀಲನಕ್ಕಾಗಿ ತಂಗಿದ್ದ ಮೂರು ದಿನಗಳೂ, ಸ್ವಚ್ಛ ಮತ್ತು ವ್ಯವಸ್ಥಿತವಾಗಿದ್ದು ನಮಗೆ ಅತ್ಯಂತ ಆಪ್ತವೆನಿಸಿತು.

 

ಭಾರತದ ತುತ್ತತುದಿಯಲ್ಲಿ ಸೂರ್ಯನಮಸ್ಕಾರ :
ಭರತ ಖಂಡದ ದಕ್ಷಿಣ ಭಾಗದ ತುದಿಯಲ್ಲಿ ನಿಂತಿದ್ದೇನೆ, ಇಲ್ಲಿನ ಸೂರ್ಯೋದಯ ಸೂರ್ಯಾಸ್ತವನ್ನು ನೋಡಲೆಂದೇ ಲಕ್ಷಗಟ್ಟಲೆ ಜನ ಸೇರುವಂತಹ ಪ್ರಸಿದ್ಧ ಸ್ಥಳ.. ಇದಕ್ಕಿಂತ ಮುಂದೆ ಒಂದು ಹೆಜ್ಜೆ ಇಟ್ಟರೂ ನೆಲ ಮುಗಿದು ಮಹಾಸಾಗರ ಎಂಬ ಭಾವನೆ ನನ್ನನ್ನು ಪದೇ ಪದೇ ರೋಮಾಂಚನಗೊಳಿಸುತ್ತಿತ್ತು. ಅಂತಹ ಸ್ಥಳದಲ್ಲಿ ಪ್ರಾತಃ ಕಾಲದಲ್ಲಿ ಸೂರ್ಯ ನಮಸ್ಕಾರ ಮಾಡಿ, ಸೂರ್ಯನ ಪ್ರಾರ್ಥಿಸಿ, ಉದಯಿಸುವ ಸೂರ್ಯನನ್ನು ನೋಡಿ ಬರಮಾಡಿಕೊಳ್ಳುವಂತಾದರೆ...? ಇಂತದ್ದೊಂದು ಅನುಭವ ಸಿಕ್ಕ ಕ್ಷಣ ನಮಗೆಲ್ಲ ಈ ಯೋಗ ಯಾತ್ರೆಯ ಒಂದು ಭಾಗವಾಗಿತ್ತು. ವಿವೇಕಾನಂದ ಯೋಗ ಕೇಂದ್ರದಿನ ತುಸು ದೂರದಲ್ಲಿ ಸೂರ್ಯೋದಯ ಕಾಣುವ ಬೀಚ್ ಒಂದರ ತಟದಲ್ಲಿ ನಿಂತು ಸೂರ್ಯ ನಮಸ್ಕಾರ ಮಾಡಿದ್ದು, ಸಮುದ್ರಕ್ಕೆ ಎದುರಾಗಿ ದಂಡೆಯ ಕಲ್ಲುಗಳ ಮೇಲೆ ಕುಳಿತು ದೃಷ್ಟಿ ಹಾಯಿಸಿದಷ್ಟು ನಿರ್ಮಲ ಆಕಾಶ ಮತ್ತು ಸಮುದ್ರದ ನೀಲಿ ನೀರು, ಹಾಲಿನಂತ ಬೆಳ್ಳನೆಯ ಅಲೆಗಳ ನಡುವೆ ಸೂರ್ಯೋದಯ ನೋಡಿದ್ದು, ಸ್ನೇಹಿತರೊಡಗೂಡಿ ಸಮುದ್ರದಲೆಗಳ ಜೊತೆ ಆಟ ಇವೆಲ್ಲವೂ ನನ್ನ ಪಾಲಿಗೆ ಮರೆಯಲಾಗದ ಕ್ಷಣಗಳು. ಕಪ್ಪೆಚಿಪ್ಪು ಆಯದೇ ನನ್ನ ಯಾವುದೇ ಸಮುದ್ರ ತೀರದ ಭೇಟಿ ಸಂಪೂರ್ಣವಾಗುವುದಿಲ್ಲ, ಒಂದಷ್ಟು ಕಪ್ಪೆ ಚಿಪ್ಪುಗಳನ್ನು  ಆಯ್ದುಕೊಂಡು, ಗೆಳೆಯರೊಡನೆ ಸೇರಿ ನಾವು ನಾವಾಗಿಯೇ ಇರುವ ಸಮಯ ಅದೆಷ್ಟು ಸುಂದರ..! 

ಇದರ ಜೊತೆಗೆ ಸಂಗಡಿಗರ ಜೊತೆಗೂಡಿ ಯೋಗಾಭ್ಯಾಸ ಮತ್ತು ಪ್ರಾಣಾಯಾಮ ಮಾಡಿದ್ದೂ ಕೂಡ ಒಂದು ಸುಯೋಗ ಎಂದೇ ಅನ್ನಿಸಿದ್ದು ಸುಳ್ಳಲ್ಲ


ಸಮ್ಮೇಳನಕ್ಕೆ ಎಂದು ಇದ್ದ ಮೂರು ದಿನಗಳಲ್ಲಿಯೇ, ಅಲ್ಪಸ್ವಲ್ಪ ಬಿಡುವಿನ ಸಮಯವನ್ನು ಬಳಸಿಕೊಂಡು, ನಮ್ಮನ್ನೆಲ್ಲ ಕನ್ಯಾಕುಮಾರಿ ಊರಿನ ಪ್ರಸಿದ್ಧ ಸ್ಥಳಗಳಿಗೆ ಓಡಾಡಿಸಲು ವ್ಯವಸ್ಥೆ ಮಾಡಿದ ಸುಬ್ಬು ಭೈಯ್ಯಾ ರಿಗೆ ಅದೆಷ್ಟು ವಂದನೆ ತಿಳಿಸಿದರೂ ಸಾಲದು. ಯೋಗ ಯಾತ್ರೆಯ ಪ್ರಾರಂಭದ ಗಳಿಗೆಯಿಂದ ಹಿಡಿದು ಕೊನೆಗೆ ಸುರಕ್ಷತೆಯಿಂದ ಮನೆ ತಲುಪುವ ವರೆಗೆ ಪ್ರತಿಯೊಬ್ಬರನ್ನೂ ತನ್ನದೇ ಮಗುವೆಂಬಂತೆ ಪ್ರತಿವಿಷಯದಲ್ಲಿ ಜವಾಬ್ಧಾರಿಯುತವಾಗಿ ನೋಡಿಕೊಂಡವರು 'ಸುಬ್ಬು ಭೈಯ್ಯಾ'! ಜುಬ್ಬಾ-ಪಂಚೆ ಉಟ್ಟು ಸರ್ವೇ ಸಾಮಾನ್ಯರಂತೆ ಕಾಣುವ ಈ ವ್ಯಕ್ತಿ ಅಸಾಮಾನ್ಯ ಎಂದು ತಿಳಿಯಲು ಅವರ ಜೊತೆ ೧೦ ನಿಮಿಷಗಳನ್ನು ಕಳೆದರೆ ಸಾಕು. ಯೋಗಗುರುವಾಗಿ, ಕರ್ಮ ಯೋಗಿಯಾಗಿ ತನ್ನ ಬದುಕನ್ನೇ ಯೋಗ ಸಾಧನೆ, ಅಧ್ಯಾತ್ಮಿಕತೆಯನ್ನು ಹಂಚುವುದಕ್ಕಾಗಿ ಮುಡಿಪಾಗಿಟ್ಟಿರುವ 'ಸುಬ್ಬು ಭೈಯ್ಯಾ' ರವರ ಪರಿಚಯ ಒಂದು ವರ ಎಂದೆನಿಸಿದ್ದು ಸುಳ್ಳಲ್ಲ. ನಾನಾ ಕಡೆಯಿಂದ ಬಂದ ಜನರನ್ನು ಅರ್ಧ ಘಂಟೆಯಲ್ಲಿ ಒಬ್ಬರಿಗೊಬ್ಬರು ಪರಿಚಯಸ್ಥರನ್ನಾಗಿಸುವ, ಸಂಗಡಿಗರಿಂದ ಆತ್ಮೀಯ ಸ್ನೇಹಿತರನ್ನಾಗಿಸುವ ಅವರ ಮಾತಿನ ವೈಖರಿ, ಅಷ್ಟೂ ಜನರ ಹರಿಯುವ ಮನಸ್ಸನ್ನು ಏಕಾಗ್ರತ ಗೊಳಿಸುವ, ಕಿವಿಗೆ ಇಂಪಾಗಿಸುವ, ಮನಸ್ಸಿಗೆ ಹಿತವೆನಿಸುವ ಅವರ ಭಜನಾ ಲಹರಿ ಕೇಳುವುದೇ ಒಂದು ಸುಖ. ಪ್ರತಿ ಸ್ಥಳ-ಅನುಭವಗಳ ಜೊತೆ ಅದಕ್ಕೆ ಸಂಬಂಧಿತ ಐತಿಹಾಸಿಕ ಕಥೆಗಳು, ಹೊಸ ಹೊಸ ವಿಚಾರಗಳನ್ನು ಆಗಾಗ್ಗೆ ನಮಗೆ ತಿಳಿಸಿಕೊಡುತ್ತಿದ್ದ ಒಬ್ಬ ಅದ್ಭುತ ಪ್ರವಾಸ ಮಾರ್ಗದರ್ಶಿ ಸುಬ್ಬು ಭೈಯ್ಯಾ. ಕನ್ಯಾಕುಮಾರಿಯಲ್ಲಿನ ಮುಖ್ಯ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವ ಅವಕಾಶ ಮಾಡಿಕೊಡುವುದರ ಜೊತೆಗೆ, ಆ ಸ್ಥಳಗಳ ಕುರಿತಾದ ಮಹಿಮೆಯನ್ನು, ಸವಿವರವಾಗಿ ತಿಳಿಸುತ್ತಿದ್ದ ಸುಬ್ಬು ಭೈಯ್ಯಾ, ಈ ಮೂರು ದಿನಗಳ ಮಟ್ಟಿಗೆ ನಮ್ಮ ಪಾಲಿನ ಗೂಗಲ್ ಆಗಿದ್ದರು :) :)


ತಿರುಪತಿ ವೆಂಕೆಟೇಶ್ವರ ದೇವಸ್ಥಾನ : ಮೊದಲ ದಿನದ ಕಾರ್ಯಾಗಾರಗಳೆಲ್ಲ ಮುಗಿದ ನಂತರ ಸಂಜೆ ಕಾಲ್ನುಡುಗೆ ದೂರದಲ್ಲಿದ್ದ ವೆಂಕಟೇಶ್ವರ ತಿರುಪತಿ ದೇವಸ್ಥಾನವನ್ನು ನೋಡಲು ಹೊರಟೆವು. ಪ್ರವಾಸಗಳು ಜನರನ್ನು ಹತ್ತಿರವಾಗಿಸುತ್ತದೆ ಎಂಬುದು ಸುಳ್ಳಲ್ಲ. ಆಡಿದಷ್ಟು ಮಾತು, ನಡೆದಷ್ಟೂ ದೂರ ಒಬ್ಬರನ್ನೊಬ್ಬರು ಪರಿಚಯಿಸಿಕೊಳ್ಳುತ್ತ, ನಗು ತಮಾಷೆಗಳ ಜೊತೆ ನಡೆದು ತಲಪುವಾಗ ಕಂಡದ್ದು, ಸಮುದ್ರ ತಟದಲ್ಲಿನ ತಿರುಪತಿ ದೇವಸ್ಥಾನ. ಎತ್ತರದ ಸ್ಥಳದಲ್ಲಿ ನಿರ್ಮಾಣವಾಗಿರುವ ಈ ದೇವಸ್ಥಾನದ ಪಕ್ಕದಲ್ಲಿ ಕಣ್ಣು ಹಾಯಿಸಿವಷ್ಟು ದೂರದವರೆಗೆ ಸಮುದ್ರ ಕಾಣುತ್ತದೆ. ತಣ್ಣನೆಯ ಸಂಜೆಯ ಗಾಳಿ, ಹಗಲಿನ ಬಿಸಿ ಬೇಗೆಯನ್ನು ತೆಗೆದು, ದೇಹಕ್ಕೆ ಮತ್ತು ಮನಸ್ಸಿಗೆ ಮುದವನ್ನು ನೀಡುತ್ತಿತ್ತು. ಸಮುದ್ರದಲೆಗಳ ಸುಮಧುರ ಶಬ್ದದ ಜೊತೆಗೆ, ವೆಂಕಟೇಶನ ನೆನೆಯುವ, ಹರಿಯ ಸ್ಮರಿಸುವ ಭಜನೆಗಳನ್ನು ನಾವೆಲ್ಲರೂ ದೇವಸ್ಥಾನದ ಆವರಣದಲ್ಲಿ ಒಟ್ಟಿಗೆ ಕುಳಿತು ಒಕ್ಕೊರಲಿನಿಂದ ಹಾಡಿದ್ದು ಮತ್ತಷ್ಟು ಧನ್ಯತಾ ಭಾವವನ್ನು ಮೂಡಿಸಿತ್ತು.  


ವಿವೇಕಾನಂದ ರಾಕ್ ಮೆಮೋರಿಯಲ್ : ಕನ್ಯಾಕುಮಾರಿಯಿಂದ ಸುಮಾರು ೪೦೦ ಮೀಟರ್ ದೂರದಲ್ಲಿ ಹಿಂದೂ ಮಹಾಸಾಗರದ ಮಧ್ಯೆ ಇರುವ ಬ್ರಹತ್ ಬಂಡೆಯ ಮೇಲೆ, ಅತೀ ದೊಡ್ಡದಾದ ವಿವೇಕಾನಂದ ರಾಕ್ ಮೆಮೋರಿಯಲ್ ನಿಂತಿದೆ. ೧೮೯೨ ರಲ್ಲಿ ಸ್ವಾಮೀ  ವಿವೇಕಾನಂದರು    ಕನ್ಯಾಕುಮಾರಿಯ ಈ ಬಂಡೆಯವರೆಗೆ ಈಜಿ ಬಂದು ಕುಳಿತು ಮೂರು ದಿನಗಳ ಕಾಲ (ಡಿಸೆಂಬರ್ ೨೫, ೨೬, ೨೭ ರಂದು) ಧ್ಯಾಸಸ್ಥರಾಗಿದ್ದರು ಎಂಬ ಸವಿ ನೆನಪಿಗಾಗಿ, ಈ ಸ್ಮಾರಕವನ್ನು ನಿರ್ಮಿಸಲಾಗಿದೆ, ಸ್ಮಾರಕದ ಒಳಗಡೆ ಸ್ವಾಮಿ ವಿವೇಕಾನಂದರ ದಿಟ್ಟ ನಡೆಯ ಮೂರ್ತಿಯನ್ನು ನಿರ್ಮಿಸಲಾಗಿದೆ, ಮತ್ತು ಕೆಳಗಡೆಯ ಅಂತಸ್ತಿನಲ್ಲಿ ಓಂ ಶಕ್ತಿಯ ಧ್ಯಾನ ಮಂದಿರವಿದೆ. ಬೋಟಿನಲ್ಲಿ ಹೋಗಬೇಕಾದ ಇಲ್ಲಿನ ಸವಾರಿ ಒಂದು ರೀತಿಯ ಖುಷಿ ಕೊಡುತ್ತದೆ. ಇದೇ ಕಲ್ಲಿನ ಬಂಡೆಯ ಮೇಲೆ ತಾಯಿ ಪಾರ್ವತಿ, ಕನ್ಯಾಕುಮಾರಿಯಾಗಿ ಶಿವನಿಗಾಗಿ ಒಂಟಿ ಕಾಲಿನಲ್ಲಿ ನಿಂತು ತಪಸ್ಸು ಮಾಡಿದ್ದಳು ಎಂಬ ಇತಿಹಾಸವೂ ಇದೆ. ಕನ್ಯಾಕುಮಾರಿಯ ಪಾದವಿರುವ ಬಂಡೆಯ ಸ್ಥಳಕ್ಕೆ ಪುಟ್ಟದೊಂದು ಕಲ್ಲಿನ ದೇವಾಲಯ ನಿರ್ಮಿಸಲಾಗಿದೆ. ಇಲ್ಲಿಂದ ಸ್ವಲ್ಪ ದೂರದಲ್ಲಿಯೇ ಇನ್ನೊಂದು ಬಂಡೆಯ ಮೇಲೆ, ತಮಿಳಿನ ಪ್ರಸಿದ್ಧ ತತ್ವಜ್ಞಾನಿ ಮತ್ತು ಕವಿ ಶ್ರೀ 'ತಿರುವಳ್ಳುವರ್' ಅವರ ೧೩೩ ಅಡಿ ಎತ್ತರದ ಕಲ್ಲಿನ ಶಿಲ್ಪಿ ಕೃತಿ ಇದೆ.  ಇದೇ ಸ್ಥಳದಲ್ಲಿ ಸಮುದ್ರ ಮತ್ತು ಸಾಗರಗಳ ಸಮ್ಮಿಲನ ಆಗುವುದನ್ನೂ ಬರಿಗಣ್ಣಿನಿಂದ ಅತ್ಯಂತ ಪಾರದರ್ಶಕವಾಗಿ ಕಾಣಬಹುದಾಗಿದೆ. 


ಅಲ್ಲಿಂದ ವಾಪಸು ಮರಳುವಾಗ ಕೋವಲಂ ರೋಡಿನ ಸನ್ಸೆಟ್ ಪಾಯಿಂಟ್ ಗೆ ಹೋಗಿ ಸೂರ್ಯಾಸ್ತವನ್ನೂ ಕಣ್ಣುತುಂಬಿಕೊಡಿದ್ದಾಯಿತು. ಅಸ್ತಾಂಗತನಾಗುತ್ತಿರುವ ಗುಂಡನೆಯ ಕೆಂಬಣ್ಣದ ಸೂರ್ಯ, ಕೇಸರಿ ಬಣ್ಣದೋಕುಳಿಯ ಆಗಸ, ನೀಲಿ ಸಮುದ್ರ, ಭೋರ್ಗರೆಯುವ ಅಲೆಗಳ ಶಬ್ದ ಮತ್ತು ತಂಗಾಳಿ, ಇದಕ್ಕಿಂತ ಹೆಚ್ಚಿನ ಧ್ಯಾನ ಇನ್ನೇನು ಬೇಕು ನಮಗೆ?
 


ಎಲ್ಲರೂ ನಾನಾಕಡೆಯಿಂದ ಎಷ್ಟೆಷ್ಟೋ ದೂರದಿಂದ ಕನ್ಯಾಕುಮಾರಿಗೆ ಬಂದಿದ್ದಾರೆ ಎಂಬ ಉದ್ದೇಶಕ್ಕೆ, ನಮ್ಮ ಪ್ರವಾಸವನ್ನು ಮತ್ತಷ್ಟು ಉತ್ಸಾಹಗೊಳಿಸಲು ಸುಬ್ಬು ಭೈಯ್ಯಾ ಹಮ್ಮಿಕೊಂಡ ಮೂರನೇ ದಿನದ ದಿನಚರಿ, ಬೆಳಗಿನ ಜಾವದ ಚಾರಣ. ಅತೀ ಉತ್ಸಾಹದಿಂದ ವಯಸ್ಸು ಶಕ್ತಿಗಳ ಹಂಗಿಲ್ಲದೆ ಹೆಚ್ಚೂ ಕಮ್ಮಿ ಎಲ್ಲರೂ ಬೆಳಿಗ್ಗೆ ೪. ೩೦ ಗೆ ಎದ್ದು ಹೊರಟದ್ದೇ ಒಂದು ಖುಷಿ! ವಿವೇಕಾನಂದ ಕೇಂದ್ರದಿಂದ ಸ್ವಲ್ಪ ದೂರ ಬಸ್ಸಿನಲ್ಲಿ ಹೋಗಿ ತಲುಪಿದ ಜಾಗ, ಮರುತುವಮಲೈ ಅಥವಾ ಮರುಂದವಾಳ್ ಮಲೈ  ಎಂಬ ಬೆಟ್ಟ (ಮರಂದು ಎಂದರೆ ಮದ್ದು). ವೀರ ಹನುಮಾನನು ಲಕ್ಷಣದ ಆರೈಕೆಗೆಂದು ಮಹೇಂದ್ರಗಿರಿಯಿಂದ ಶ್ರೀಲಂಕಾಕ್ಕೆ ಸಂಜೀವಿನ ಪರ್ವತ ಹೊತ್ತೊಯ್ಯುವಾಗ ಮುರಿದು ಬಿದ್ದ ತುಂಡು ಎಂಬ ಕಥೆಯನ್ನು ಆಧರಿಸಿರುವ ಈ ಬೆಟ್ಟ ಅನೇಕ ಬಗೆಯ ಗಿಡಮೂಲಿಕೆ ಸಸ್ಯಗಳಿಂದ ಕೂಡಿದೆ ಎಂದು ಬಲ್ಲವರು ಹೇಳುತ್ತಾರೆ. ಬೆಟ್ಟದ ತುದಿಯನ್ನು ತಲುಪಲು ಸುಮಾರು ಒಂದು ಕಿಲೋಮೀಟರ್ ನಷ್ಟು ದೂರ ಸಾಗಬೇಕಾದ ಈ ಬೆಟ್ಟ, ಪ್ರಾರಂಭದಲ್ಲಿ ಕಲ್ಲು ಕೆತ್ತಿದ ಮೆಟ್ಟಿಲಿನಿಂದ ಕೂದ್ದರೂ ಮುಂದಕ್ಕೆ ಕಡಿದಾದ ಕಲ್ಲು ಬಂಡೆಗಳ ಹಾದಿಯಲ್ಲಿ ಸಾಗುತ್ತದೆ. ನಮ್ಮ ಗುಂಪಿನಲ್ಲಿದ್ದ ಅದೆಷ್ಟೋ ಹಿರಿಯರು ತಮ್ಮ ಪ್ರಯತ್ನವನ್ನೂ ಮೀರಿ ನಡೆದದ್ದು, ಅವರಲ್ಲಿನ ದೈಹಿಕ ಶಕ್ತಿಗಿಂತಲೂ ಮಾನಸಿಕ ಸ್ಥೈರ್ಯವನ್ನು ತೋರಿಸುತ್ತಿತ್ತು. ಕಠಿಣ ಆರೋಹಣದ ನಂತರವೂ,  ಬೆಟ್ಟದ ಮೇಲೆ ಕುಳಿತು ರಾಮನಾಮ ಭಜನೆ, ವೀರ ಹನುಮಾನನ ಭಜನೆ, ಸೂರ್ಯೋದಯ ವೀಕ್ಷಣೆ, ಭಜನೆ ಮಾಡುತ್ತಾ, ಎತ್ತರದ ಬೆಟ್ಟದ ಮೇಲಿಂದ ಕೆಳಗಿನ  ಸಮಸ್ತ ಪ್ರಕೃತಿಯ ಕಣ್ತುಂಬಿಕೊಂಡದ್ದು ಬೇರೆಲ್ಲ ಚಾರಣಗಳಿಗಿಂತ ವಿಭಿನ್ನವಾದ ಅನುಭವ ನನಗೆ ಸಿಕ್ಕಂತಾಯಿತು. ಹತ್ತುವಾಗ ಅಲ್ಲದಿದ್ದರೂ, ಬಿಸಿಲೇರಿದ ಮೇಲೆ ಕಡಿದಾದ ಬಂಡೆಕಲ್ಲುಗಳ ಹಾದಿಯನ್ನು ಇಳಿಯುವುದು ಹೇಳಿದಷ್ಟು ಸುಲಭವಲ್ಲ. ಗುಂಪಿನಲ್ಲಿದ್ದ ಪ್ರತಿಯೊಬ್ಬರೂ ಒಬ್ಬರಿಗೊಬ್ಬರು ಸಹಾಯಹಸ್ತವನ್ನು ನೀಡುತ್ತಾ ಚಾರಣವನ್ನು ಯಶಸ್ವಿಯಾಗಿ ಯಾವುದೇ ತೊಂದರೆಯಿಲ್ಲದೆ ಮುಗಿಸಿದ್ದು,ನನಗೆ  ಈ ಸಂಪೂರ್ಣ ಪ್ರವಾಸದಲ್ಲಿ ಅತ್ಯಂತ ಇಷ್ಟವಾದ ಭಾಗ! 💓💓 ಚಾರಣ ಸ್ಥಳವನ್ನು ಸ್ವಚ್ಛವಾಗಿಡುವುದು ಪ್ರತಿಯೊಬ್ಬರ ಕರ್ತವ್ಯವಾದರೂ, ಅನೇಕರು ಪ್ಲಾಸ್ಟಿಕ್ ಕಸವನ್ನು ಕಂಡಕಂಡಲ್ಲಿ ಬಿಸಾಡಿ ಹೋಗುವುದು ಸರ್ವೇ ಸಾಮಾನ್ಯವಾದ ವಿಷಯವಾಗಿದೆ. ಪ್ರಕೃತಿಯ ಕೇವಲ ಆನಂದಿಸುವುದಷ್ಟೇ ನಮ್ಮ ಕೆಲಸವಲ್ಲ; ಅದನ್ನು ಕಾಪಾಡಿಕೊಳ್ಳುವುದೂ ಅಷ್ಟೇ ಮುಖ್ಯ ಎಂಬ ಧ್ಯೇಯಕ್ಕೆ ನನ್ನ ಕೈಲಾದ ಸಹಾಯವನ್ನು ನೀಡುವ ಪ್ರಯತ್ನಕ್ಕೆ, ನಾವು ಕೆಲವು ಗೆಳೆಯರು ಬೆಟ್ಟವನ್ನು ಇಳಿಯುವಾಗ ಹಾದಿಬದಿಗಿನ ಪ್ಲಾಸ್ಟಿಕ್ ಕಸಗಳನ್ನು ಒಂದಷ್ಟು ಆಯ್ದು ಒಟ್ಟು ಮಾಡಿದ್ದು, ದೇವರ ಸ್ತುತಿಸಿದಷ್ಟೇ ಸಾರ್ಥಕತೆ ನೀಡುವುದಕ್ಕಾಗಿ ಆ ಕೆಲಸವೂ ನಡೆದದ್ದು ಇನ್ನೊಂದು ಖುಷಿಗೆ ಕಾರಣವಾಯಿತು.


ಕೊನೆಯ ದಿನ ವಿವೇಕಾನಂದ ದೇವಸ್ಥಾನದಿಂದ ಹೊರಟು ೧೨ ಕಿಮೀ ದೂರದಲ್ಲಿ ನೋಡಿದ ಇನ್ನೊಂದು ಸುಂದರವಾದ ಸ್ಥಳ, ಸುಚಿಂದ್ರಂ ದೇವಸ್ಥಾನ. ಸ್ಥಾನುಮಾಲಯ್ ಸ್ವಾಮಿ 
ಇಲ್ಲಿನ ದೇವರು ಸ್ಥಾನು ಎಂದರೆ ಶಿವ, ಮಾಲ್  ಎಂದರೆ ವಿಷ್ಣು ಮತ್ತು ಅಯ್ಯನ್  ಎಂದರೆ ಬ್ರಹ್ಮ ಎಂಬ ಮೂರು ದೇವರುಗಳ ಆವಾಹನೆ ಇರುವ ಶಿವಲಿಂಗದ ಪೂಜೆ ಇಲ್ಲಿನ ವಿಶೇಷ. ಸಾವಿರಾರು ಕಂಬಗಳಿರುವ ಸುಮಾರು ೧೩೦೦ ವರ್ಷಗಳಷ್ಟು ಪುರಾತನ ದೇವಾಲಯ ಇದಾಗಿದೆ. ಇಂದ್ರನಿಗೆ ಶಾಪ ವಿಮೋಚನೆಯಾಗಲು ಶುದ್ಧಿ ಪಡೆದ ಸ್ಥಳ ಇದು ಎಂಬ ಪ್ರತೀತಿಯೂ ಇದೆ. ಅತ್ಯಂತ ನಗುಮುಖದ ಸುಬ್ರಮಣ್ಯ ದೇವರು  ಇಲ್ಲಿನ ವಿಶೇಷ. ಅಂತೆಯೇ,  ನವಪಾಶಣ ಬಾಲಾಜಿ, ದೊಡ್ಡದಾದ ನಂದಿ, ಜಗದ್ಗುರು ಆದಿಶಂಕರಾಚಾರ್ಯರು, ಉತ್ಸುಕತೆಯಲ್ಲಿರುವ ಬಾಲವನ್ನೆತ್ತಿ ನಿಂತಿರುವ ಆಂಜನೇಯ, ದತ್ತಾತ್ರೇಯ, ಗಜನನಿ ಎಂದು ಕರೆಸಿಕೊಳ್ಳುವ ಸ್ತ್ರೀರೂಪದ ಗಣಪತಿ, ಸಪ್ತಸ್ವರಗಳನ್ನು ಕೇಳಿಸುವಂತಹ ಕಲ್ಲಿನ ಕಂಬಗಳು ಇತ್ಯಾದಿ ಇಲ್ಲಿನ ವಿಶೇಷಗಳು.. ಎಲ್ಲರೂ ಒಟ್ಟು ಸೇರಿ.. ಈಶ್ವರನ ಕುರಿತಾದ ಭಜನೆಯ ಸೇವೆ ಧನ್ಯತೆಯ ಭಾವವನ್ನು ನೀಡುತ್ತಿತ್ತು. ದೇವಾಲಯದ ಉದ್ದಕ್ಕೂ ಛಾವಣಿಯನ್ನು ಮಂಡಲ ಪೇಂಟಿಂಗ್ ಗಳಿಂದ ಅಲಂಕರಿಸಿದ್ದು ನನ್ನಂತವಳಿಗೆ ನೋಡಿದಷ್ಟೂ ಮುಗಿಯದ ಆನಂದವಾಯಿತು.  


ಟ್ರೇನ್ ಹತ್ತಿ ಹೊರಡುವಾಗ ಪರಿಚಯವೇ ಇಲ್ಲದವರ ಜೊತೆ ಮೂರು ದಿನಗಳ ಪ್ರವಾಸ, ವಾಪಸು ಮರಳಿ ಬರುವಷ್ಟರಲ್ಲಿ ವಿದಾಯಕ್ಕೆ ಕಣ್ಣೀರು ಇಳಿಯುವಷ್ಟು ಸಲಿಗೆ ಪ್ರೀತಿಯನ್ನುತಂದುಕೊಟ್ಟಿತ್ತು. ಚಲಿಸುವ ಟ್ರೇನಿನಲ್ಲಿ, ಗಂಡಸರು-ಹೆಂಗಸರೆನ್ನದೆ, ಹಿರಿಯ ಕಿರಿಯ ಬೇಧಭಾವವಿಲ್ಲದೆ, ೪೫ಕ್ಕೂ ಹೆಚ್ಚು ಜನರು ಎರಡು ಘಂಟೆಗೂ ಹೆಚ್ಚಿನ ಸಮಯಗಳ ಕಾಲ ಭಜನೆ ಮಾಡುತ್ತಾ, ಹಾಡುತ್ತ ನಲಿಯುತ್ತ ಕಳೆದದ್ದು ನನ್ನ ರೀತಿಯ ಪ್ರವಾಸಗಳಲ್ಲಿ ಹೊಸತು. ನಗು ತಮಾಷೆ, ತಿಳಿದಿರದ ಹೊಸ ವಿಷಯಗಳ ಕುರಿತಾಗಿ ಚರ್ಚೆ, ಆರೈಕೆ ಹೀಗೆ ಸನ್ಮಿತ್ರರಾಗಿ ಒಬ್ಬರಿಗೊಬ್ಬರು ಅನ್ಯೋನ್ಯತೆಯಿಂದ ಕಳೆದ ಈ ಮೂರು ದಿನಗಳ ಸತ್ಸಂಗ ನನಗೆ ಸದಾ ನೆನಪಿನಲ್ಲಿ ಉಳಿಯುವಂತಹ ಪ್ರಾವಾಸಗಳಲ್ಲಿ ಒಂದು!