ಶುಕ್ರವಾರ, ನವೆಂಬರ್ 24, 2023

ಒಂದು ದ್ವೀಪದ ಕಥೆ!!


ಮಕ್ಕಳ ಪಾರ್ಕಿನಲ್ಲಿ ಮಗಳ ಆಟದ ದಿನಚರಿ. ಅಲ್ಲೊಂದು ಪುಟ್ಟ ಮಗು ಕಲ್ಲು ಮಣ್ಣುಗಳನ್ನು ಹೆಕ್ಕಿ ತಂದು ಜೋಡಿಸಿ ತನ್ನದೇ ಆದ ಆಟವನ್ನು ಆಡುತ್ತಿತ್ತು. ಅಣತಿ ದೂರದಲ್ಲಿ ಅವರಪ್ಪ ಫೋನಿನಲ್ಲಿ ಮಾತನಾಡುತ್ತಾ ಓಡಾಡುತ್ತಿದ್ದರು. ಮಗುವಿನ ಜೋಡಣಾ ಶೈಲಿ ನನಗಿಷ್ಟವಾಗಿ ಹೋಗಿ ಮಾತನಾಡಿಸಿ ಗೆಳೆತನ ಮಾಡಿಕೊಂಡೆ. ನಾಲ್ಕು ವರ್ಷದ ಹುಡುಗ ಅವನು. ಮಾಶಾ ಅಂಡ್ ದಿ ಬೇರ್ ಕಾರ್ಟೂನ್ ನಲ್ಲಿ ಬರುವ ಸಂದರ್ಭವನ್ನು ತನ್ನ ಮನಸ್ಸಿನಲ್ಲಿಟ್ಟುಕೊಂಡು, ಕ್ಯಾಂಪ್ಫೈರ್ ಗೆ ತಯಾರಿ ನಡೆಸುತ್ತಿದ್ದ. ಸರಿ, ಅವನ ಕಲ್ಪನೆಯ ಕಥೆಗೆ ತಕ್ಕಂತೆ , ಇಬ್ಬರು ಸೇರಿ ವಸ್ತುಗಳ  ಒಟ್ಟು ಮಾಡುವುದು ಇನ್ನಿತರ ಚಟುವಟಿಕೆ ನಡೆಸುತ್ತಾ ಹೋದೆವು. ನನ್ನ ಮಗಳಿಗೋ ವ್ಯಾಯಮದ ಪಾರ್ಕಿನಲ್ಲಿ ಕಸರತ್ತು ಮಾಡುವ ಹುಚ್ಚು. ಆದರೆ ಈ ಕಡೆಗೂ ಒಲವು. ಆಗಾಗ ಬಂದು ನಮ್ಮನ್ನು ಮಾತನಾಡಿಸುತ್ತಾ, ಕಥೆಯನ್ನು ಕೇಳುತ್ತಾ, ಮಧ್ಯೆಮಧ್ಯೆ ಸಹಾಯ ಮಾಡಿ ಹೋಗುತ್ತಿದ್ದಳು. ಇದ್ದಕ್ಕಿದ್ದಂತೆ, ಯಾವುದೋ ಒಂದು ದ್ವೀಪದಲ್ಲಿದ್ದ ನಾವು ಕ್ಯಾಂಪ್ ಫೈರ್ ತಯಾರಿ ನಡೆಸುತ್ತಿದ್ದವರು, ಹಾಸ್ಪಿಟಲ್ ಗೆ ಹೋಗುವ ಕಥೆಯ ಮೂಲಕ, ನಮ್ಮೆಲ್ಲ ಜೋಡಣೆಯನ್ನು ಆ ಹುಡುಗ ಬದಲಾಯಿಸುತ್ತಾ ಬಂದ. ಯಾವುದಕ್ಕೂ ಒಪ್ಪದಾದ. ನನಗೋ ಆ ಕಾರ್ಟೂನ್ ನ ಹಿಂದೆ ಮುಂದೆ ತಿಳಿಯದು. ನಾನು ಜೋಡಿಸಿಟ್ಟಿದ್ದನ್ನೆಲ್ಲ ಆತ ಮುರಿಯುತ್ತಿದ್ದ. ನಾನು ಕಷ್ಟಪಡುತ್ತಿದ್ದುದ್ದನ್ನು ಕಂಡು ಮಗಳು ಓಡಿಬಂದಳು. ಆಸ್ಪತ್ರೆಯ ಕಥೆ ಮಾಷಾ ಅಂಡ್ ದ ಬೇರ್ ನ ಇನ್ನೊಂದು ಎಪಿಸೋಡ್ ಎಂದು ಮಗಳು ತಿಳಿಸಿದಾಗ, ಮಗಳ ನಾಲ್ಕೈದು ವರ್ಷಗಳ ಹಿಂದಿನ ನೆನಪಿನ ಶಕ್ತಿಗೆ ಮೆಚ್ಚಿದೆ. ಆ ಹುಡುಗನಿಗೆ ಆಸ್ಪತ್ರೆಯ ಕಥೆ ಮತ್ತು ಫೈಯರ್ ಕ್ಯಾಂಪನ ಕಥೆ ಎರಡನ್ನೂ ಹೇಗೋ ಮಾಡಿ ಜೋಡಣೆ ಮಾಡಿಸಿ, ಮಗಳು ಆತನ ಮನವೊಲೈಸಿ, ನಮ್ಮ ಕಥಾ ಪ್ರಸಂಗದ ಜೋಡಣೆಗಳೆಲ್ಲ ಉಳಿಯುವಂತೆ ಮಾಡಿದಳು :) ದ್ವೀಪದೊಳಗೆ ಸಿಲುಕಿಕೊಂಡ ನಮ್ಮ ರಕ್ಷಣೆಗೆಂದು ಬರುವವರಿಗೆ ಗುರುತು ಕಾಣಿಸುವಂತೆ ಧ್ವಜ ಬಾವುಟವನ್ನು ತಯಾರು ಮಾಡಿಯೂ ಆಯ್ತು. ಒಳ್ಳೆಯ ಗಿರಿಕಿ ಎಲೆಗಳು ಸಿಕ್ಕಿದ್ದರಿಂದ ದ್ವೀಪದಲ್ಲಿ ನಾವಷ್ಟೇ ಅಲ್ಲದೆ, ಒಂದು ನಾಲ್ಕೈದು ಜನ ಸರ್ಫಿಂಗ್ ಗೆಳತಿಯರನ್ನೂ ಸೃಷ್ಟಿಸಲಾಯಿತು. ಜನಸಂಖ್ಯೆಗೆ ತಕ್ಕಂತೆ ಡೈನಿಂಗ್ ಟೇಬಲ್ ವಿಸ್ತರಣೆ ಕೂಡ ಮಾಡಲಾಯಿತು. ಹಾವು ಪಿರಾನಾ ಮೀನುಗಳನ್ನೆಲ್ಲಾ ಸೃಷ್ಟಿಸಲಾಯಿತು. ಆ ಹುಡುಗನ ಅಪೇಕ್ಷೆಯಂತೆ ಆ ದ್ವೀಪ ರಾತ್ರಿಯಲ್ಲಿ ಚೆನ್ನಾಗಿ ಕಾಣಲೆಂದು, ಸಮುದ್ರದಿಂದ ಅಂಡರ್ ಲೈಟ್ಸ್ ವ್ಯವಸ್ಥೆ ಕೂಡ ಮಾಡಲಾಯಿತು. ಮಕ್ಕಳು ಮಣ್ಣಾಡಲು ಕುಳಿತರೆ ಇತರ ಮಕ್ಕಳಿಗೂ ಆಕರ್ಷಣೆ ಸಹಜ. ಮತ್ತೊಂದೆರಡು ಸಣ್ಣ ಸಣ್ಣ ಮಕ್ಕಳು ಬಂದು ಹಾಗಾಗಿ ಕಲ್ಲು ಎಲೆ ಕೋಲುಗಳನ್ನು ಎತ್ತಿ ಹೊತ್ತೊಯ್ಯುತ್ತಿದ್ದರು. ಅವರವರ ಪೋಷಕರಿಂದಲೂ ಆ ಮಕ್ಕಳನ್ನು ತಡೆಯಲಾಗದ್ದು, ನಮಗೊಂದು ದೊಡ್ಡ ಸವಾಲ್ ಆಗಿತ್ತು! ರೀತಿಯ ಅನಪೇಕ್ಷಿತ ವೈರಿಗಳ ದಾಳಿಯಿಂದ ನಮ್ಮ ಸೃಷ್ಟಿಯನ್ನು ಕಾಪಾಡಿಕೊಳ್ಳಲು, ಆ ಪುಟ್ಟ ಮಕ್ಕಳಿಗೆ ಮತ್ತೊಂದಷ್ಟು ಕಲ್ಲುಗಳನ್ನು ಹೆಕ್ಕಿ ತಂದು ಕೊಟ್ಟು, ಸ್ವಲ್ಪ ದೂರದಲ್ಲಿ ಆಡಿಕೊಳ್ಳಲು ಹೇಳಿ, ನಮ್ಮ ದ್ವೀಪಕ್ಕೆ ಕಲ್ಲುಗಳ ಕಾಂಪೌಂಡ್ ಹಾಕಿ ಭದ್ರತೆ ಮಾಡಲಾಯಿತು. ಅರ್ಧ ಗಂಟೆಗೂ ಹೆಚ್ಚು ಸಮಯಗಳ ಕಾಲ, ನಾವು ಮೂರೂ ಜನ, ನಮ್ಮನಮ್ಮ  ಕಲ್ಪನೆಗೆ ಆದ್ಯತೆಗಳನ್ನು ನೀಡುತ್ತಾ, ಇದ್ದಿದ್ದರಲ್ಲಿಯೇ ಹೊಂದಾಣಿಕೆ ಮಾಡಿಕೊಂಡು, ತಾಳ್ಮೆಯಿಂದ ಕೂತು , ನಮ್ಮ ಈ ಐಲ್ಯಾಂಡ್ ಪ್ರಾಜೆಕ್ಟ್ ಅನ್ನು ಮಾಡಿ ಮುಗಿಸುವ ಹಂತಕ್ಕೆ ಬಂದೆವು. ಅಷ್ಟರಲ್ಲಿ ಆ ಮಗುವಿನ ತಂದೆಯ ಫೋನ್ ಕಾಲ್ ಮುಕ್ತಾಯವಾಯಿತು. ಅವರು ತಿರುಗಿ ನೋಡುವಾಗ ಆ ಮಗು ನಮ್ಮೊಂದಿಗೆ ಮಣ್ಣಿನಲ್ಲಿ ಆಡುತ್ತಲಿತ್ತು. "ಎಂತ ಮಣ್ ಹಿಡ್ಕೊಂಡು ಆಡ್ತಿದ್ದೀಯಾ,  ಚೀ..ಗಲೀಜು ಬಿಡು, ಈ ಕಡೆ ಬಾ " ಎಂದು ಬೈದರು. ಒಂದು ಕ್ಷಣಕ್ಕೆ ತಲೆತಗ್ಗಿಸಿ ನಿಂತಿದ್ದ ಮಗು ಆ ಬೈಗುಳದ ಮಧ್ಯೆಯು, ಅಪ್ಪನ ಕಾಲ ಬುಡದಲ್ಲಿಯೇ ಕೂತು ಕೋಲಿನಿಂದ ಮಣ್ಣು ಕೆರೆಯುತ್ತಲಿತ್ತು. ಅಪ್ಪಾ ಇನ್ನೊಬ್ಬರ ಜೊತೆ ಮಾತನಾಡುತ್ತಾ ನಿಂತಿದ್ದ ಕಂಡು,ಮತ್ತೆ ತನ್ನ ಹೊಸ ದ್ವೀಪವನ್ನು ಸೃಷ್ಟಿಸುವ ಜವಾಬ್ದಾರಿ ತೆಗೆದುಕೊಂಡಿದ್ದಲ್ಲದೆ, ನಮ್ಮೆಡೆಗೆ ಮತ್ತೆ ಬಂದು ಒಂದಷ್ಟು ಕಲ್ಲು ಮತ್ತು ಕೋಲುಗಳನ್ನು ತೆಗೆದುಕೊಂಡು ಹೋಯಿತು ಎಂಬಲ್ಲಿಗೆ...

 #childhood #letitbewithnature #ಸಾನ್ವಿಸ್ಟೋರಿ

ಮಂಗಳವಾರ, ನವೆಂಬರ್ 21, 2023

ಸೂರ್ಯನಿಗೊಂದು ದೇವಾಲಯ!!

ನಮಗೆಲ್ಲ ಬೆಳೆಗೆದ್ದ ಕೂಡಲೇ ಮನೆಯ ಬಾಗಿಲ ಮುಂದೆ ಹೋಗಿ ಸೂರ್ಯನ ಕಂಡು ನಮಸ್ಕರಿಸಿ ಬರಲು ಚಿಕ್ಕಂದಿನಲ್ಲಿ ಹೇಳಿಕೊಡುತ್ತಿದ್ದರು. ಅದೆಷ್ಟೋ ಸುಂದರ ಸೂರ್ಯೋದಯ, ಸೂರ್ಯಾಸ್ತಗಳನ್ನು ಕಂಡು ಕೊಂಡಾಡಿಯಾಗಿದೆ ಇನ್ನು ಸೂರ್ಯ ನಮಸ್ಕಾರ ಆಸನಗಳ ಅಭ್ಯಾಸ ಇವೆಲ್ಲವೂ ಸಾಮಾನ್ಯ ಬಳಕೆಯಲ್ಲಿದ್ದರೂ, ಸೂರ್ಯನಿಗಾಗಿಯೇ ಬ್ರಹತ್ ದೇವಾಲಯವನ್ನು ಕಾಣುವಾಗ ಮಾತ್ರ ರೋಮಾಂಚವಾದ್ದು ಸುಳ್ಳಲ್ಲ. ಹೀಗೊಂದು ಸೂರ್ಯನ ದೇವಾಲಯಕ್ಕೆ ಭೇಟಿಯ ಅವಕಾಶ ಸಿಕ್ಕಿದ್ದು ನಮಗೆ ನಮ್ಮ ಒಡಿಶಾ ಪ್ರವಾಸದಲ್ಲಿ..

ಕೊನಾರ್ಕ್ ಸೂರ್ಯ ದೇವಾಲಯವಿರುವುದು, ಭಾರತದ ಪೂರ್ವ ಕರಾವಳಿ ಒಡಿಸ್ಸಾದ ಪುರಿಯಲ್ಲಿ.  ಇದು ಯುನೆಸ್ಕೋ ದ ವಿಶ್ವ ಪರಂಪರೆಯಲ್ಲಿ ಪಟ್ಟಿ ಮಾಡಿರುವ ಸುಂದರ ಸಂರಕ್ಷಿತ ತಾಣಗಳಲ್ಲಿ ಒಂದಾಗಿದ್ದು,ಇದು  ತನ್ನ ಸೊಗಸಾದ ಕಳಿಂಗ ವಾಸ್ತು ಶಿಲ್ಪ ಮತ್ತು ಕೆತ್ತನೆಗಳಿಗೆ ಪ್ರಖ್ಯಾತವಾಗಿದೆ. ಸೂರ್ಯನು ಶಕ್ತಿಯ ಸ್ವರೂಪ. ಭಾರತದಲ್ಲಿರುವ ಸೂರ್ಯದೇವನಿಗೆ ಸಮರ್ಪಿತ ಮೂರು ದೇವಾಲಯಗಳ ಪೈಕಿ ಇದು ಒಂದು. ಗುಜರಾತ್ನ ಮೊಧೇರಾ ಸೂರ್ಯ ದೇವಾಲಯ ಮತ್ತು ಕಾಶ್ಮೀರದ ಮಾರ್ಥಾಂಡ ದೇವಾಲಯವು ಕೂಡ ಇದರಷ್ಟೇ ಜನಪ್ರಿಯವಾಗಿದೆ. 12ನೇ ಶತಮಾನದಲ್ಲಿ ನರಸಿಂಹ ದೇವನಿಂದ ಕಟ್ಟಿಸ ಕಟ್ಟಿಸಲ್ಪಟ್ಟ ಈ ದೇವಾಲಯ, ಸಮುದ್ರದ ತುದಿಯಲ್ಲಿದ್ದು ಶಿಥಿಲಗೊಂಡಿದ್ದರೂ ಕೂಡ 2,000 ಕ್ಕೂ ಹೆಚ್ಚು ವರ್ಷಗಳಿಂದ ಸ್ಥಿರವಾಗಿ ನಿಂತಿದೆ. ಭಾರತದ ವಿಶಿಷ್ಟ ದೇವಾಲಯಗಳಲ್ಲಿ ಒಂದಾದ ಈ ದೇವಾಲಯ ವಾಸ್ತವವಾಗಿ ಹೇಳಬೇಕೆಂದರೆ ಒಂದು ಕಲ್ಲಿನ ರಥ! ಎರಡು ಸಾಲುಗಳಲ್ಲಿ 12 ಚಕ್ರಗಳಿರುವಂತೆ, ರಥದ ಸುತ್ತಲೂ 24 ದೊಡ್ಡ ದೊಡ್ಡ ಕಲ್ಲಿನ ಚಕ್ರಗಳು! ಪ್ರತೀ ಚಕ್ರವು ಸುಮಾರು 10 ಅಡಿ ಎತ್ತರವಿದೆ. ಪ್ರತಿಯೊಂದು ಚಕ್ರ, ದಿನದ ಒಂದೊಂದು ಗಂಟೆಯನ್ನು ಅಥವಾ ಒಂದು ಸಾಲಿನ 12 ಚಕ್ರಗಳು ವರ್ಷದ 12 ತಿಂಗಳುಗಳನ್ನು ಪ್ರತಿಬಿಂಬಿಸುತ್ತದೆ ಎನ್ನುತ್ತಾರೆ ಇಲ್ಲಿನ ಟೂರಿಸ್ಟ್ ಗೈಡ್. ಈ ಬೃಹತ್ ಕಲ್ಲಿನ ರಥವನ್ನು ನಾಗಲೋಟದ ಏಳು ಕುದುರೆಗಳು ಎಳೆಯುತ್ತಿರುವ ಮಾದರಿ ಕೆತ್ತನೆ ಮಾಡಿ ನಿರ್ಮಿಸಲಾಗಿದೆ. ಏಳು ಕುದುರೆಗಳು ವಾರದ ಏಳು ದಿನಗಳನ್ನು ಪ್ರತಿಬಿಂಬಿಸುತ್ತದೆ ಎನ್ನುತ್ತಾರೆ. ಈ ದೇವಾಲಯದಲ್ಲಿದ್ದ, ಬೆಳಗಿನ ಮಧ್ಯಾಹ್ನದ ಮತ್ತು ಸಂಜೆಯ ಸೂರ್ಯನ ಮೂರ್ತಿಗಳ ಪ್ರತಿಕೃತಿಯನ್ನು ಈಗಿನ ವಸ್ತು ಸಂಗ್ರಹಾಲಯದಲ್ಲಿ ಸಂರಕ್ಷಿಸಿ ಇಡಲಾಗಿದೆ. 

ಈ ಕಲ್ಲಿನ ರಥದ ಶಿಲ್ಪಕಲೆ ನೋಡಿ ಮುಗಿಯುವಂತದ್ದೇ ಅಲ್ಲ! ರಾಜ ಮನೆತನದ ಜೀವನಶೈಲಿ, ಪ್ರಾಣಿಗಳ ಕಡುಬಯಕೆಗಳು, ಪೌರಾಣಿಕ ಕಥೆಗಳು , ಸಂಗೀತಗಾರ ಚಿತ್ರಗಳು, ಕೃಷ್ಣ ಶಿವ ಇಂದಿರ ವಿಷ್ಣು ನರಸಿಂಹ ಸೇರಿದಂತೆ ಹಿಂದೂ ದೇವರುಗಳ ಶಿಲ್ಪಗಳು ಇತ್ಯಾದಿ ಶಿಲ್ಪ ಕಲೆಗಳನ್ನು ಒಳಗೊಂಡಿದೆ ನರ್ತನ ಶಾಲೆ ಕಲ್ಲಿನ ಕೆತ್ತನೆ ಕುಸುರಿಗಳು , ಕುದುರೆ ಮತ್ತು ಸವಾರ, ಆನೆ ಸಿಂಹಗಳ ಸಮಾಗಮ ಮುಂತಾದ ಶಿಲ್ಪಗಳು ಅನನ್ಯವೆನಿಸುತ್ತದೆ. ಹೀಗೆ ದೇವಾಲಯದ ಸುತ್ತಲಿನ ಆವರಣವನ್ನು ತಾಳ್ಮೆಯಿಂದ ನೋಡುತ್ತಾ ಹೋದರೆ, ಎರಡು ಗಂಟೆಗಳಿಗಿಂತಲೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹಿಂದೂ ಪುರಾಣಗಳನ್ನು ವಿಸ್ತರಿಸಿರುವ ಶಿಲ್ಪ ಕಲೆಗಳು, ಮಿಥುನ ಶಿಲ್ಪಗಳ ಸಾಲು, ಚಕ್ರಗಳ ಮೇಲಿನ ಸೂಕ್ಷ್ಮ ಕೌಶಲ್ಯ ಕೆತ್ತನೆಗಳನ್ನು ಇಲ್ಲಿ ನೋಡಬಹುದು. ದೇವಾಲಯದ ಸ್ವಲ್ಪ ಪಕ್ಕದಲ್ಲಿರುವ ಸಂಗ್ರಹಾಲಯದಲ್ಲಿ, ಎಲ್ಲಾ ಪ್ರಮುಖ ಮೂರ್ತಿಗಳ, ಕೊನಾರ್ಕ್ ದೇವಾಲಯ ಹುಟ್ಟಿದ್ದರ ಕುರಿತಾದ ಪೌರಾಣಿಕ ಕತೆಗಳು, ನಿರ್ಮಾಣದ ಕುರಿತಾದ ಸಮಗ್ರ ಮಾಹಿತಿ ದೊರೆಯುತ್ತದೆ. ಈ ಐತಹಾಸಿಕತೆಗೆ ಸಂಬಂಧ ಪಟ್ಟಂತೆ 15 ನಿಮಿಷಗಳ video show ಕೂಡಾ ಇದೆ. Worth visiting! 
 
 ಈ ದೇವಾಲಯ ಮೂಲ ರೂಪದಲ್ಲಿದ್ದಾಗ, ಸೂರ್ಯೋದಯದ ಮೊದಲ ಕಿರಣ, ಸೂರ್ಯದೇವನ ಪದತರದಲ್ಲಿ ಬೀಳುತ್ತಿತ್ತು ಎಂಬ ಐತಿಹಾಸಿಕ ಮಾಹಿತಿಯ ಮೇರೆಗೆ, ದೇವಸ್ಥಾನದ ಮುಖ್ಯದ್ವಾರದ ಮೇಲೆ ಬೀಳುವ, ಮೊದಲ ಸೂರ್ಯನ ಕಿರಣವನ್ನು ನೋಡಲು ನೋಡಲು ದೇಶ ವಿದೇಶಗಳಿಂದ ಜನರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಅದಷ್ಟೇ ಅಲ್ಲದೆ ಖಗೋಳಶಾಸ್ತ್ರಕ್ಕೆ ಹೊಂದಿಕೊಂಡಂತೆ, ಇಲ್ಲಿನ ಚಕ್ರಗಳ ಮೇಲೆ ಸೂರ್ಯನ ನೆರಳುಗಳು ತೋರಿಸುವ ಸಮಯ, ನಿಖರವಾಗಿರುವುದರಿಂದ, ಇದೊಂದು ಅತ್ಯಂತ ಕೌತುಕ ಸ್ಥಳವಾಗಿದೆ. ದೇವಾಲಯದ ಮೇಲಿರುವ ಆಯಾಸ್ಕಾಂತಗಳ ವ್ಯವಸ್ಥೆಯಿಂದಾಗಿ, ಇಲ್ಲಿ ಪ್ರತಿಷ್ಠಾಪಿಸಲಾಗಿದ್ದ ಅಜಾನುಬಾಹುಮೂರ್ತಿಗಳು, ನೆಲದ ಮೇಲೆ ನಿಲ್ಲದೆ ಗಾಳಿಯಲ್ಲಿ ತೇಲುತ್ತಿದ್ದವು ಎಂದು ತಿಳಿಸುತ್ತಾರೆ. 

ಭಾರತದ ಅಪ್ರತಿಮ ಸಾಂಸ್ಕೃತಿಕ ಪರಂಪರೆಯನ್ನು  ತೋರ್ಪಡಿಸುವ ಸುಂದರ ಕೆತ್ತನೆಯ ಕೋನಾರ್ಕ್ ದೇವಾಲಯದ ಚಕ್ರವನ್ನು ಭಾರತೀಯ ರಿಸರ್ವ್ ಬ್ಯಾಂಕ್ 2018 ರಲ್ಲಿ ಘೋಷಿಸಿದ ಹತ್ತು ರೂಪಾಯಿಯ ನೋಟಿನ ಮೇಲೆ ನಾವು ಕಾಣಬಹುದು. ಈ ಬಾರಿಯ G20 ಶೃಂಗಸಭೆ ಭಾರತದಲ್ಲಿ ನಡೆದಿದ್ದು , ಮುಖ್ಯ  ವೇದಿಕೆಯ ಹಿಂಬಾಗಕ್ಕೆ ಕೊನಾರ್ಕ ಚಕ್ರವನ್ನೇ backdrop ಆಗಿ ಬಳಸಿಕೊಂಡಿದ್ದು ಇದರ ವಿಶೇಷತೆಯನ್ನು ಸಾರುತ್ತದೆ. ನಮ್ಮ ಸಂಸ್ಕೃತಿ ನಮ್ಮ  ಹೆಮ್ಮೆ . ಅದೇ  ಗೌರವದಿಂದ, ರಥಚಕ್ರದ ಮಂಡಲ ಚಿತ್ರ ಒಂದನ್ನು ಬರೆದ ಖುಷಿ ನನ್ನದು 🤗🤗

ಶನಿವಾರ, ನವೆಂಬರ್ 4, 2023

'ಮದುವೆಯ ಮನೆ' - ಓಡಿಶಾದ ಮನೆ ಮನೆಗಳಲ್ಲೂ ಚಿತ್ರಕಲೆ

ಓಡಿಸಾ ಪ್ರವಾಸದ ಸಂದರ್ಭದಲ್ಲಿ ನಾವು ಜನರ ಇನ್ನೊಂದು ವಿಶಿಷ್ಟ ಸಂಪ್ರದಾಯ ವನ್ನು ಗಮನಿಸಿದವು. ನಮ್ಮ ಮಲೆನಾಡ ಕಡೆ ಹಸಿ ಚಿತ್ತಾರವಿದ್ದಂತೆ, ಮಹಾರಾಷ್ಟ್ರದ ವರ್ಲಿ ಚಿತ್ರಕಲೆ, ಬಿಹಾರದ ಮಧುಬನಿ ಇದ್ದಂತೆ, ಶುಭ ಸಾಂಕೇತಿಕ ವಸ್ತುಗಳ ಚಿತ್ರಕಲೆಯ ಪರಂಪರೆ ಮದುವೆ ಸಾಂಪ್ರದಾಯಿಕ ಪರಂಪರೆಯೊಂದಿಗೆ ಬೆಸೆದುಕೊಂಡಿದೆ. ಯಾರ ಮನೆಯಲ್ಲಿ ಮದುವೆಯ ಆಚರಣೆ ಇರುತ್ತದೆಯೋ, ಅವರ ಮನೆಯ ಹೊರಗಿನ ಗೋಡೆಯ ಮೇಲೆ, ಕಳಶದ ಮೇಲಿರುವ ತೆಂಗಿನ ಕಾಯಿ, ಬಾಳೆ ಮರ, ಮೀನು, ವಾದ್ಯಗಳು ಇತ್ಯಾದಿ ನಿಸರ್ಗ ಆರಾಧನೆಯ ಫಲವಂತಿಕೆಯ ಸಾಂಕೇತಿಕ ವಸ್ತುಗಳ ಪೈಂಟಿಂಗ್ ಮಾಡಿಸುತ್ತಾರೆ. ಸಮೃದ್ಧಿ ಮತ್ತು ಶುಭವನ್ನು ಸೂಚಿಸುವ, ಈ ರೀತಿಯ ಪೇಂಟಿಂಗಳನ್ನು, ನೋಡಲು ನಿಜವಾಗಿಯೂ ಖುಷಿಯಾಗುತ್ತಿತ್ತು. ವಧು ವರರ ಹೆಸರುಗಳನ್ನು ಸೂಚಿಸಿ ಮದುವೆಯ ಮಾಹಿತಿಯನ್ನು ನೀಡಲು ಕೂಡ ಈ ರೀತಿಯ ಸಂಪ್ರದಾಯ ಬೆಳೆದು ಬಂದಿರಬಹುದು. ಪ್ರದೇಶದಿಂದ ಪ್ರದೇಶಕ್ಕೆ ಆಚರಣೆಗಳು ಬದಲಾದರೂ, ಮನುಷ್ಯನ ಖುಷಿ ಮತ್ತು ಸಂಭ್ರಮಾಚರಣೆಗೆ, ಚಿತ್ರಕಲೆ, ಹಾಡು-ನೃತ್ಯ ಇನ್ನಿತರ ಕಲೆಗಳ ಮುಖೇನ ನಡೆಸಿಕೊಂಡು ಹೋಗುವ ಇಂತಹ ಪುಟ್ಟ ಪುಟ್ಟ ಸಂಪ್ರದಾಯಗಳು, ಆ ಪ್ರದೇಶದ ಸಂಸ್ಕೃತಿಯ ಉಳಿವಿಗೆ ಸಹಾಯಕ ಅಂಶಗಳಾಗಿರುತ್ತವೆ. 


#marriagepainting #artandculture #odisha