ಮಂಗಳವಾರ, ಏಪ್ರಿಲ್ 23, 2024

HPE_CSR ಸ್ವಯಂ ಸೇವೆ

HPE_CSR ಟೀಮ್ ನಿಂದ, ಸರ್ಕಾರಿ ಶಾಲಾ ಮಕ್ಕಳಿಗೆ ಟೀಮ್ ಬಿಲ್ಡಿಂಗ್ ಆಕ್ಟಿವಿಟಿ ನೀಡುವ ಸ್ವಯಂ ಸೇವೆ ನೀಡಲು ನಾವು ಕಳೆದ ಶನಿವಾರ, ೨೦ನೇ ಏಪ್ರಿಲ್, ದೊಡ್ಡಬನಹಳ್ಳಿ ಶಾಲೆಯ ಸರ್ಕಾರೀ ಪ್ರಾಥಮಿಕ ಶಾಲೆಯೊಂದಕ್ಕೆ ಭೇಟಿ ನೀಡಿದೆವು. ಬೇಸಿಗೆ ರಜೆ, ಶಾಲೆ ನಡೆಯುವ ಕಾಲವಲ್ಲ, ಎಷ್ಟು ಮಕ್ಕಳು ಬಂದಾರು ಎಂಬ ಅಳುಕಿನಿಂದಲೇ ನಾವು ೬ ಜನರ ತಂಡ ದೊಡ್ಡಬನಹಳ್ಳಿಗೆ ಭೇಟಿನೀಡಿದೆವು. ೩೮ ಮಕ್ಕಳ ಉತ್ಸಾಹದ ಪಾಲ್ಗೊಳ್ಳುವಿಕೆ ನಮ್ಮನ್ನು ಅಚ್ಚರಿ ಮಾಡಿಸಿತು ಮತ್ತು ನಮ್ಮ ಉತ್ಸಾಹ ದುಪ್ಪಟ್ಟಾಗುವಂತೆ ಮಾಡಿತು. ಮಕ್ಕಳೊಂದಿಗೆ ಮಾತುಕತೆ, ಅವರೊಂದಿಗೆ ಕೂಡಿ ನಡೆಸಿದ ಮಂಡಲ ಚಿತ್ರಕಲೆ, ನಕ್ಕು ನಲಿದು ತಿಂಡಿ ಹಣ್ಣುಗಳ ತಿಂದು, ಕಥೆ ಪುಸ್ತಕಗಳ ನೀಡಿ ಬರುವುದರೊಂದಿಗೆ, ೪ ತಾಸುಗಳ ಈ ಕಾರ್ಯಕ್ರಮ, ಮಕ್ಕಳು ಮತ್ತು ನಮ್ಮ ಪಾಲಿಗೆ ಅತ್ಯಂತ ಯಶಸ್ವೀ ಕಾರ್ಯಕ್ರಮ.  

ಸ್ವಯಂ ಸೇವೆ ಒಂದು ಕರ್ಮಯೋಗ. ಲೆಟ್ಸ್ ಗ್ರೋ ಟುಗೆದರ್ ಎಂದಾಗ ಮಾತ್ರ ನಮ್ಮ ಯಶಸ್ಸು ಎಂಬುವುದು ಪರಿಪೂರ್ಣವಾಗುವುದು. ಅದೇ ಪರಿಕಲ್ಪನೆಯಲ್ಲಿ ನಮ್ಮ HPE_CSR ಟೀಮ್, ಕಂಪೆನಿಯ ಸಹಕಾರದಿಂದ ಸಮಾಜಕ್ಕಾಗಿ, ಪರಿಸರಕ್ಕಾಗಿ ಅನೇಕ ಕಾರ್ಯಕ್ರಮಗಳ ಮೂಲಕ  ತಮ್ಮನ್ನು ತಾವೇ ಕೆಲಕಾಲದಿಂದ ತೊಡಗಿಸಿಕೊಳ್ಳುತ್ತ ಬರುತ್ತಿದೆ. ಈ ವಾರ, ನಾವು ಏಳು ಮಂದಿ, ಲೋಕೇಶ್, ಮಹಂತೇಶ್, ಅರುಣಾ, ಸೌಮ್ಯ, ಪಾರುಲ್, ಮಹೇಶ್, ದೀಪಮಾಲಾ ಈ ಸರ್ತಿಯ ಕಾರ್ಯಕ್ರಮಕ್ಕೆ ತಯಾರಾದೆವು. Child Right  Foundation NGO ಮುಖ್ಯಸ್ಥ ಕ್ರಿಸ್ಟಫರ್ ಮೂಲಕ ಸಂಪರ್ಕ ಸಿಕ್ಕಿದ ದೊಡ್ಡಬನಹಳ್ಳಿ ಶಾಲೆ ಬೆಂಗಳೂರಿನಿಂದ ಸುಮಾರು ೫೦ ಕಿಮೀ ದೂರದಲ್ಲಿದೆ. ಶಾಲೆಯಲ್ಲಿ ೧ ರಿಂದ ೭ ನೇ ತರಗತಿಯವರೆಗೆ ಸುಮಾರು ೨೦೦ ಮಕ್ಕಳಿದ್ದಾರೆ. ಮಕ್ಕಳ ಪೋಷಕರಲ್ಲಿ ಹೆಚ್ಚಿನವರು ದೈನಂದಿನ ವೇತನ ಹೊಂದಿರುವ ಕಾರ್ಮಿಕರು ಮತ್ತು ರೈತರು. ಸರ್ಕಾರೀ ಸವಲತ್ತುಗಳ ಪಡೆದುಕೊಂಡು ಶಿಕ್ಷಣ ಪಡೆಯುತ್ತಿರುವ ಈ ಮಕ್ಕಳ ಶ್ರದ್ಧೆ, ಕಲಿಯುವ ಆಸಕ್ತಿ ಮೆಚ್ಚುವಂತಿದೆ. ನಾವು ಅಲ್ಲಿಗೆ ತಲುಪುವಾಗ ಮಕ್ಕಳು ಶಾಲೆಯ ಆವರಣವನ್ನು ಸ್ವಚ್ಛಗೊಳಿಸಿ, ಗಿಡಗಳಿಗೆ ನೀರುಣಿಸುತ್ತಿದ್ದರು. ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಮಂಜುನಾಥ್ ಸರ್  ಮತ್ತು ಶಾಲೆಯ ಹಿತೈಷಿ, ನಿವೃತ್ತ ಮುಖ್ಯೋಪಾಧ್ಯಾಯರಾದ  ಶ್ರೀ ರಾಜಶೇಖರ ಹಂದೆ ಅವರು ನಮ್ಮನ್ನು ಆತ್ಮೀಯವಾಗಿ ಬರಮಾಡಿಕೊಂಡು ಶಾಲೆಯ ವ್ಯವಸ್ಥೆಗಳ ಕುರಿತು ನಾಲ್ಕೈದು ಮಾತನಾಡಿದರು. ಹಿಂದಿನ ಭೇಟಿಯಲ್ಲಿ ಮಕ್ಕಳಿಗೆ ಸಿಕ್ಕ ಸೈಕಲ್ ಬಳಕೆಯಾದ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದರು. 

ಮಕ್ಕಳೇ ನಡೆಸಿದ ಒಂದು ಸ್ವಾಗತ ಕಾರ್ಯಕ್ರಮದ ನಂತರ, ಮಕ್ಕಳಿಗೆ 'ಮಂಡಲ ಚಿತ್ರಕಲೆ' ಯ ಕುರಿತಾಗಿ ಮಾಹಿತಿ ತಿಳಿಸಿ, ನಾವು ಸಿದ್ಧವಿಟ್ಟುಕೊಂಡು ಹೋಗಿದ್ದ ಮಂಡಲ ಚಿತ್ರಕಲೆ ಕಿಟ್ ಅನ್ನು ಮಕ್ಕಳಿಗೆ ಲೋಕೇಶ್ ಮತ್ತು ಇತರರು ವಿತರಿಸಿದರು. ಮಂಡಲ ಒಂದು ಆಧ್ಯಾತ್ಮಿಕ ಚಿತ್ರಕಲೆ. ಕಣ್ಣು ಮತ್ತು ಕೈಯ ಹೊಂದಾಣಿಕೆ, ಆತಂಕವನ್ನು ಹೋಗಲಾಡಿಸಿ ಏಕಾಗ್ರತೆಯನ್ನು ಹೆಚ್ಚಿಸುವ ವೈಜ್ಞಾನಿಕ ಕಲೆಯಿದು. ಚಿತ್ರಗಳ ಮೂಲಕ ಕ್ರಿಯಾಶೀಲತೆ ಹೆಚ್ಚಿಸುವ ಈ ಚಿತ್ರಕಲೆ ವಿದ್ಯಾರ್ಥಿಗಳಿಗೆ ಅತ್ಯಂತ ಸಹಕಾರಿ. ಕಳೆದ ೫-೬ ವರ್ಷಗಳಿಂದ ತಮ್ಮ ಪ್ರವೃತ್ತಿಯಾಗಿ ಮಂಡಲ ಮತ್ತು ಹಸೆ, ವರ್ಲಿ, ಮಧುಬನಿಯಂತಹ ಜಾನಪದಚಿತ್ರಕಲೆಯನ್ನು ರೂಢಿಸಿಕೊಂಡು, ಬಳಸಿ, ಇತರರಿಗೂ ಕಲಿಸಿಕೊಡುವ ಕಾರ್ಯವನ್ನು ಮಾಡುತ್ತಿರುವ ಸೌಮ್ಯಬೀನಾ, ಮಂಡಲ ಚಿತ್ರಕಲೆಯನ್ನು ಅತ್ಯಂತ ಆಸ್ಥೆಯಿಂದ ಮಕ್ಕಳಿಗೆ ಕಲಿಸಿದರು. ವರ್ಲ್ಡ್ ಹೆರಿಟೇಜ್ ಡೇ ಸಂದರ್ಭವಾಗಿದ್ದರಿಂದ, ನಮ್ಮ ದೇಶದ ಪರಂಪರೆಯ  ಮೌಲ್ಯವನ್ನು ಎತ್ತಿ ಹಿಡಿಯಲು, ನಾವು ಸಾಮಾನ್ಯ ಜನರು ಕೊಡಬಹುದಾದ ಚಿತ್ರಮಾಧ್ಯಮ ಕೊಡುಗೆಯನ್ನು ತಮ್ಮ ಚಿತ್ರಕಲೆಯ ಪ್ರದರ್ಶನದ ಮೂಲಕ ಸೌಮ್ಯ ಮಕ್ಕಳಿಗೆ ವಿವರಿಸಿ ಹೇಳಿದರು. ಪ್ರಕೃತಿ ಮತ್ತು ಕಲೆ ಹೇಗೆ ಒಂದಕ್ಕೊಂದು ಪೂರಕ, ಪ್ರಕೃತಿಯ ಆರಾಧನೆಗೆ ಕಲೆ ಹೇಗೆ ಸಹಾಯ ಮಾಡುತ್ತದೆ ಎಂಬಿತ್ಯಾದಿ ವಿಷಯಗಳ ತಮ್ಮ ಕಾರ್ಯಾಗಾರದಲ್ಲಿ ಬಲು ಸರಳವಾದ ಉದಾಹರಣೆಯೊಂದಿಗೆ ವಿವರಿಸಿದರು. ಬಳಿಕ ತಾವು ರಚಿಸಿದ ಮಂಡಲ ಚಿತ್ರಕ್ಕೆ ಬಣ್ಣ ಹಚ್ಚುವ ಅವಧಿಯನ್ನು ಸಂಭ್ರಮಿಸಿದರು. ಮಕ್ಕಳಿಗೆ ಸಹಾಯ ಮಾಡುತ್ತಾ,  ಮಂಡಲ ಚಿತ್ರವನ್ನು, ಮಕ್ಕಳೊಂದಿಗೆ ತಾವೂ ಕುಳಿತು ಮಹಂತೇಶ್, ಪಾರುಲ್, ಅರುಣಾ ದೀಪಮಾಲಾ ಎಲ್ಲರೂ ಬರೆದದ್ದು ಮಕ್ಕಳಿಗೆ ತಮ್ಮ ಹಿಂಜರಿಕೆಯಿಂದ ಹೊರಬಂದು ತಾವೆಲ್ಲರೂ ಒಂದೇ ಎಂಬ ಆರಾಮದಾಯಕ ಭಾವನೆ ನೀಡಿತು. ಪಾರುಲ್ ಮತ್ತು ಅರುಣ, ಮಂಡಲ ಚಿತ್ರಕಲೆಯನ್ನು ತಮ್ಮದೇ ಆಲೋಚನೆಯಲ್ಲಿ ರಚಿಸಿ, ಕಲೆಯನ್ನು ಹೇಗೆ ಇನ್ನಷ್ಟು ಕ್ರಿಯಾತ್ಮಕವಾಗಿಸಬಹುದು ಎಂದು ತೋರಿಸಿಕೊಟ್ಟರು. 

ಬೇಸಿಗೆಯಾದ್ದರಿಂದ ಮಕ್ಕಳ ಸಂತೋಷವೊಂದೇ ಅಲ್ಲದೆ ಅವರ ಆರೋಗ್ಯವನ್ನೂ ಗಮನದಲ್ಲಿರಿಸ್ಕೊಂಡು, ಮಕ್ಕಳಿಗೆ ಪ್ರಿಯವಾಗುವ ಬಿಸ್ಕಿಟ್ ಚಿಪ್ಸ್ ಜೊತೆಯಲ್ಲಿ ಸಾಕಷ್ಟು ಕಲ್ಲಂಗಡಿ ಹಣ್ಣುಗಳನ್ನು ಕೊಂಡೊಯ್ದಿದ್ದೆವು. ಕಲ್ಲಂಗಡಿ ಹಣ್ಣನ್ನು ಅಲ್ಲಿಯೇ ಕುಳಿತು ಹೆಚ್ಚಿ ಹಂಚುವಲ್ಲಿ ಮಹೇಶ್, ಲೋಕೇಶ್, ಪಾರುಲ್ ಸಹಕರಿಸಿದರು. ಮಕ್ಕಳು ಮನಸೋ ಇಚ್ಛೆ ಹಣ್ಣನ್ನು ತಿಂದು ಖುಷಿ ಪಟ್ಟರು. ಆಹಾರ ಪೊಟ್ಟಣ ಸೇರಿದಂತೆ, ಕನಿಷ್ಠ ಪ್ಲಾಸ್ಟಿಕ್ ಬಳಕೆಯ, ಏಕೋ ಫ್ರೆಂಡ್ಲಿ ಸಂತೋಷಕೂಟ ನಮ್ಮದಾಗಿತ್ತು.  ಹಸಿಕಸ ಒಣಕಸ ಬೇರ್ಪಡಿಸಿ, ಕಸ ವಿಲೇವಾರಿ ಕೂಡ ನಾವು ಮಕ್ಕಳು ಎಲ್ಲರೂ ಸೇರಿ ತ್ವರಿತವಾಗಿ ಮಾಡಿ ಮುಗಿಸಿದೆವು.  ನಂತರ ಪುಟ್ಟದೊಂದು ಸಭೆ ತಯಾರು ಮಾಡಿಕೊಂಡು ಆ ದಿನದ ಕಾರ್ಯಾಗಾರದ ಕುರಿತಾಗಿ ಮಕ್ಕಳೆಲ್ಲರ ಅಭಿಪ್ರಾಯ ಕೇಳಿಕೊಂಡು, ಮಕ್ಕಳಿಗೆ ಅವರ ಚಿತ್ರಕಲೆಯ ಪ್ರಯತ್ನಕ್ಕೆ ಪ್ರತಿಫಲವಾಗಿ, ಕಥೆಪುಸ್ತಕಗಳ ಉಡುಗೊರೆ ನೀಡಿದೆವು. ವರ್ಲ್ಡ್ ಬುಕ್ ಡೇ ಹತ್ತರವಿರುವಾಗ, ಕಥೆ ಪುಸ್ತಕಗಳ ಹಂಚಿಕೆ,  ತಿಳಿಸಿದರು. ಈಗ ಸರ್ವೇಸಾಮಾಯವಾಗಿರುವ, ಮೊಬೈಲ್ ಮತ್ತು ಸೋಶಿಯಲ್ ಮೀಡಿಯಾ ಗೀಳಿನ ಮಧ್ಯೆ  ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಥೆಪುಸ್ತಕಗಳು ಅತ್ಯಂತ ಮುಖ್ಯವಾಗುತ್ತವೆಯಾದ್ದರಿಂದ, ನಮ್ಮ ಸಹಾಯಹಸ್ತವನ್ನು ಶಾಲೆಯ ಮುಖ್ಯಸ್ಥರು ಮನದಣಿಯೆ ನೆನೆದರು. ಮಕ್ಕಳ ಹೊಸ ಕಲಾಮಾಧ್ಯಮವ ಕಲಿಯುವ ಆಸಕ್ತಿ, ಮಾತುಕತೆ, ಕಥೆಪುಸ್ತಕಗಳ ಕಂಡೊಡನೆ ಹಾತೊರೆಯುವಿಕೆ ಎಲ್ಲವೂ ನಮ್ಮ ಇಡೀ ದಿನದ ಸಂಘಟನಾ ಕಾರ್ಯಕ್ರಮವನ್ನು ಸಾರ್ಥಕಗೊಳಿಸುವಂತೆ ಮಾಡಿತು. 



 

ಗುರುವಾರ, ಏಪ್ರಿಲ್ 18, 2024

ಪರಂಪರೆಯ ಪೊರೆವುದು ಹ್ಯಾಂಗ?

ಏಪ್ರಿಲ್ ೧೮, 'ವಿಶ್ವ ಪಾರಂಪರಿಕ ದಿನಾಚರಣೆ' ಅಂತಾರಪ. ವರ್ಷಪೂರ್ತಿ ಏನೇನೋ ದಿನಾಚರಣೆ ಅದ್ರಲ್ಲಿ ಇದೂ ಒಂದು. ಆದ್ರೆ ಏನು ದಿನಾಚರಣೆ ಇದು?  ಯಾವುದೋ ಇಲಾಖೆಗೆ ಸಂಬಂಧ ಪಟ್ಟಿದ್ದಿರಬೇಕು.. ಏನಂದ್ರಿ..? ನಾವೆಲ್ಲಾ ಆಚರಿಸೋ ಹಬ್ಬನಾ? ಯಾವ್ ಧರ್ಮದ ಹಬ್ಬರೀ ಇದು? ನೋಡ್ರಿ, ನಾವು ಸಾಮಾನ್ಯ ಮನುಷ್ಯರು, ಮನೇಲಿ ಕೂತೋರು, ಆಫೀಸ್ ಹೋಗೋರು, ಮಕ್ಕಳು ದೊಡ್ಡೋರು ಎಲ್ಲ ಇದೀವಿ, 'ಪಾರಂಪರಿಕ ದಿನ' ನ ಹೆಂಗೆ 'ಆಚರಣೆ' ಮಾಡ್ಬೇಕು ಅಂತೆಲ್ಲ ನಮಗೆ ಗೊತ್ತೇ ಇಲ್ಲಪಾ.. ಅಷ್ಟಕ್ಕೂ ಯಾಕೆ ಬೇಕಿದು?



ಯಾಕೆ ಬೇಕಿದು?

ನಮ್ಮ ಜೀವನದಲ್ಲಿ ನಮ್ಮ ಇರುವಿಕೆ, ನಮ್ಮ ವ್ಯಕ್ತಿತ್ವದ ಗುರುತು ಮತ್ತು ಮುಂದುವರೆಸುವ ಜೀವನ ಶೈಲಿಗೆ, ಸಂಸ್ಕೃತಿ ಮತ್ತು ಪರಂಪರೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮವರು ಹಿಂದಿನಿಂದಲೂ ಪರಂಪರೆಯನ್ನು, ಅದಕ್ಕೆ ಸಂಬಂಧ ಪಟ್ಟ ಸ್ಥಳ, ವಾಸ್ತು ಶಿಲ್ಪ, ಭೌಗೋಳಿಕ ಪುರಾವೆ, ಆಚಾರ ವಿಚಾರ, ಆಚರಣೆಗಳ ಮೂಲಕ ದಾಖಲಿಸುತ್ತಾ ಬಂದಿದ್ದಾರೆ ಮತ್ತು ಅವರ ಸಂಸ್ಕೃತಿಯನ್ನು ಮುಂದಿನ ಪೀಳಿಗೆಯವರು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುತ್ತಾರೆ ಎಂಬ ಕಾರಣಕ್ಕೆ ಅದನ್ನು ಸಂರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಪಾರಂಪರಿಕ ವಿಷಯಗಳ ಕುರಿತಾಗಿ ಮಾಹಿತಿ ಕೊರತೆ, ಅದರ ಬಗ್ಗೆ ತಿಳಿದುಕೊಳ್ಳುವ ಮತ್ತು ಆಚರಣೆ ಮಾಡುವ ನಿರಾಸಕ್ತಿಯಿಂದಾಗಿ, ನಾವು ನಮ್ಮ ಅದೆಷ್ಟೋ ಅತ್ಯಮೂಲ್ಯ ಸಂಪತ್ತನ್ನು ಕಳೆದುಕೊಳ್ಳುತ್ತಿದ್ದೇವೆ. ನಮ್ಮಲ್ಲಿ ಎಷ್ಟು ಜನರಿಗೆ ನಮ್ಮದೇ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಪ್ರಮುಖ ಪಾರಂಪರಿಕ ತಾಣಗಳ ಮಹತ್ವ ಗೊತ್ತು? ನಮಗೆ ಸಂಭಂದಿಸದ ಪಾಳು ಬಿದ್ದ ಜಾಗಗಳು ಟೂರಿಸ್ಟ್ ಪಾಯಿಂಟ್ಸ್ಗಳು ಅವೆಲ್ಲ ಎಂಬ ಕನಿಷ್ಠ ಜ್ಞಾನಕ್ಕೆ ನಮ್ಮನ್ನು ನಾವೇ ಸೀಮಿತಗೊಳಿಸಿಕೊಂಡು ಕೂತಿದ್ದೇವೆ. 



 ಈ  'ವಿಶ್ವ ಪರಂಪರೆಯ ದಿನ'ವು ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಗುರಿಯಿಂದ, ಐತಿಹಾಸಿಕ ಮಹತ್ವದ ತಾಣಗಳನ್ನು ರಕ್ಷಿಸುವ ಅಗತ್ಯವನ್ನು ಎತ್ತಿ ತೋರಿಸುವ ಪ್ರಯತ್ನವೇ ಈ ದಿನಾಚರಣೆಯ ಉದ್ದೇಶ. 1982 ರಲ್ಲಿ, ಸ್ಮಾರಕಗಳು ಮತ್ತು ತಾಣಗಳ ಅಂತರರಾಷ್ಟ್ರೀಯ ಮಂಡಳಿ (ICOMOS) ಏಪ್ರಿಲ್ 18 ಅನ್ನು ವಿಶ್ವ ಪರಂಪರೆಯ ದಿನವೆಂದು ಘೋಷಿಸಿತು. ಇದನ್ನು 1983 ರಲ್ಲಿ UNESCO ನ ಜನರಲ್ ಅಸೆಂಬ್ಲಿ ಅನುಮೋದಿಸಿತು. ಈ ವರೆಗೆ, ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (UNESCO), ಪ್ರಪಂಚದಾದ್ಯಂತದ  ಒಟ್ಟು 1,154 ಸ್ಮಾರಕಗಳನ್ನು ವಿಶ್ವ ಪರಂಪರೆಯ ತಾಣಗಳಾಗಿ ಗುರುತಿಸಿದೆ. ಅದರಲ್ಲಿ ಭಾರತದ ೪೨ ಪ್ರಮುಖ ಪಾರಂಪರಿಕ ಸ್ಥಳಗಳು ಈಗಾಗಲೇ ಪಟ್ಟಿಯಲ್ಲಿ ಸೇರಿವೆ. ಇದು ಭಾರತಕ್ಕೆ ಹೆಚ್ಚಿನ ಸಂಖ್ಯೆಯ ವಿದೇಶಿ ಪ್ರಯಾಣಿಕರನ್ನು ಆಕರ್ಷಿಸಲು ಭಾರತಕ್ಕೆ ದೊಡ್ಡ ಸಾಮರ್ಥ್ಯವನ್ನು ಒದಗಿಸುತ್ತದೆ. ಇನ್ನೂ ೫೨ ತಾಣಗಳು ಭಾರತದ ವಿಶ್ವ ಪರಂಪರೆಯ ತಾತ್ಕಾಲಿಕ ಪಟ್ಟಿಯಲ್ಲಿವೆ. ಈ ಗುರುತಿಸುವಿಕೆಯ ಹೊರತಾಗಿಯೂ, ಭಾರತ ಇನ್ನೂ ಅನೇಕ ಸಂಸ್ಕೃತಿ ಮತ್ತು ಪರಂಪರೆಯ ಪೊರೆವ, ಕಲೆ ಮತ್ತು ವಾಸ್ತುಶಿಲ್ಪ ಹೊತ್ತ ದೇವಾಲಯಗಳು, ಗುಹೆ,ಕೋಟೆ, ಅರಮನೆಗಳು, ಸ್ಮಾರಕ ಕಟ್ಟಡಗಳು ನೈಸರ್ಗಿಕ ತಾಣಗಳು, ವನ್ಯಜೀವಿ ಸಂರಕ್ಷಣಾ ಸ್ಥಳಗಳ ಹೊಂದಿರುವ ಶ್ರೀಮಂತ ದೇಶವಾಗಿದೆ.  ಈ ರೀತಿಯ ನಮ್ಮ ಪರಂಪರೆಯತಾಣಗಳು ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಿ ಜಾಗತಿಕ ಮಟ್ಟದಲ್ಲಿ ನಮ್ಮ ಪ್ರಾಮುಖ್ಯತೆಯನ್ನು ಕಂಡುಕೊಳ್ಳುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತವೆ. 

ಆಚರಣೆ ಹೇಗೆ?

ವಿಶ್ವ ಪರಂಪರೆಯ ದಿನದಂದು, ದೇಶದ ನಿವಾಸಿಗಳು ಈ ಅದ್ಭುತ ಸ್ಥಳಗಳನ್ನು ಪ್ರಶಂಸಿಸಲು, ಸಂರಕ್ಷಣೆಯ ಪ್ರಯತ್ನಗಳ ಬಗ್ಗೆ ತಿಳುವಳಿಕೆಯುಳ್ಳ ಚರ್ಚೆಗಳಲ್ಲಿ ತೊಡಗಿಸಿಕೊಳ್ಳಲು ಮತ್ತು ಅವರ ಪರಂಪರೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಲು ಭಾರತದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. 

ಒಂದು ಪ್ರದೇಶದ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಲು ವಸ್ತುಸಂಗ್ರಹಾಲಯಗಳು ಉತ್ತಮ ಅವಕಾಶ. ವಿಶ್ವ ಪರಂಪರೆಯ ದಿನದಂದು ಅನೇಕ ವಸ್ತುಸಂಗ್ರಹಾಲಯಗಳು ಮಾರ್ಗದರ್ಶಿ ಪ್ರವಾಸಗಳು ಮತ್ತು ವಿಶೇಷ ಕಾರ್ಯಕ್ರಮಗಳನ್ನು ನೀಡುತ್ತವೆ. ಅನೇಕ ಶಾಲಾ ಕಾಲೇಜುಗಳು ಈ ದಿನಕ್ಕೆ, ಪಾರಂಪರಿಕ ಸ್ಥಳಗಳ ಮಹತ್ವವನ್ನು ಸಾರುವ ಉದ್ದೇಶದಿಂದ ವಿವಿಧ ಬಗೆಯ ಶೈಕ್ಷಣಿಕ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಜಾಥಾ ನಡುಗೆಗಳ ಹಮ್ಮಿಕೊಳ್ಳುತ್ತವೆ. ಕೆಲವು ಸಾಮಾಜಿಕ ಸಂಸ್ಥೆಗಳು ವಿಶೇಷ ಪಾರಂಪರಿಕ ಪ್ರವಾಸ ಸ್ಥಳಗಳಿಗೆ ಭೇಟಿ ಮತ್ತು ಅಲ್ಲಿನ ವಾಸ್ತುಶಿಲ್ಪದ ಕುರಿತಾದ ಚರ್ಚೆ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. ನಗರದ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಸರ್ಕಾರಿ ಇಲಾಖೆಗಳ ವತಿಯಿಂದ ತಜ್ಞರ ಮಾತುಕತೆಗಳು, ನೃತ್ಯ, ಸಂಗೀತ, ಪ್ರವಾಸೀ ತಾಣಗಳ ಕುರಿತಾದ ಡಾಕ್ಯುಮೆಂಟರಿಗಳ ಪ್ರದರ್ಶನಗಳಿರುತ್ತವೆ. ಸೇವಾ ಸಂಸ್ಥೆಗಳು ಈ ದಿನದ ಪ್ರಾಮುಖ್ಯತೆ ಬಿಂಬಿಸಲು, ಚಿತ್ರಕಲೆ, ಛಾಯಾಚಿತ್ರಗ್ರಹಣ, ಶಿಲ್ಪಕಲೆ ಅಥವಾ ಕರಕುಶಲತೆಯಂತಹ ಮಾಧ್ಯಮದ ಮೂಲಕ ಕಲಾಪ್ರದರ್ಶನ, ವಿವಿಧ ಬಗೆಯ ಸ್ಪರ್ಧೆಗಳ ಚಟುವಟಿಕೆಯನ್ನು ನಡೆಸುತ್ತವೆ. ಟೀವಿ, ಪತ್ರಿಕೆ ಮಾಧ್ಯಮಗಳಲ್ಲಿ, ಪ್ರಮುಖ ಪರಂಪರಾ ತಾಣಗಳು ಮತ್ತು ಅವುಗಳ ವಿಶೇಷತೆಯ ಕುರಿತು ಮಾಹಿತಿಯನ್ನು ಹಂಚುತ್ತಾರೆ. 



ನಮ್ಮ ಆಚರಣೆ ಮತ್ತು ಕರ್ತವ್ಯಗಳೇನು?  

ಆಚರಣೆಗೂ ಮೊದಲು ಅರಿವು ಅಗತ್ಯ. ನಮ್ಮ ಪರಂಪರೆಯ ಪ್ರತಿಬಿಂಬಿಸುವ ಸ್ಥಳಗಳಿವು ಎಂಬ ಹೆಮ್ಮೆಯ ಭಾವನೆಯ ಅಗತ್ಯತೆ ಕೂಡ ಬೇಕಾಗಿದೆ. 

ಮೊದಲಿಗೆ ಸಾಧ್ಯವಾದಷ್ಟರ ಮಟ್ಟಿಗೆ ಪರಂಪರೆಯ ಸ್ಥಳಗಳ ಬಗ್ಗೆ ಮಾಹಿತಿ ಕಲೆ ಹಾಕಿ ತಿಳಿದುಕೊಳ್ಳೋಣ. ನಾವಿರುವ ಊರು ಮತ್ತು ಸುತ್ತಮುತ್ತಲಿನ ಊರುಗಳಿಂದಲೇ ತಿಳುವಳಿಕೆ ಪ್ರಾರಂಭವಾಗಲಿ. 

ಮಕ್ಕಳನ್ನು ರಜದ ದಿನಗಳಲ್ಲಿ ಬಿಡುವಿನ ಸಮಯದಲ್ಲಿ ಮಾಲ್, ರೆಸಾರ್ಟ್ ಸುತ್ತಿಸುವ ಬದಲು, ಟೀವಿ ಮುಂದೆ ಕೂರಿಸುವ ಬದಲು, ಹತ್ತಿರದ ಪ್ರಮುಖ ಐತಿಹಾಸಿಕ, ನೈಸರ್ಗಿಕ ಪ್ರವಾಸೀ ಸ್ಥಳಕ್ಕೆ ಭೇಟಿ ನೀಡಿ ಅದು ಯಾವುದಕ್ಕೆ ಪ್ರಸಿದ್ಧ ಅದರ ಹಿನ್ನಲೆ ಏನು ಎಂಬಿತ್ಯಾದಿ ಕತೆಗಳ, ವಿಷಯಗಳ ಕುರಿತು ಚರ್ಚಿಸೋಣ. ಮಕ್ಕಳಿಗೆ ಅದರ ಕುರಿತಾಗಿ ಚಿತ್ರಗಳನ್ನು ಬಿಡಿಸಲು, ಅನುಭವ ಬರವಣಿಗೆ ಮಾಡಲು ಪ್ರೋತ್ಸಾಹಿಸಬಹುದು. 

ಕಲೆ ಸಂಸ್ಕೃತಿ ನಾಡು ನುಡಿ ಪರಂಪರೆಯ ಕುರಿತಾಗಿ ಸಾವಿರಾರು ಪುಸ್ತಕಗಳು ಲೈಬರಿಯಲ್ಲಿ ಲಭ್ಯವಿರುತ್ತದೆ. ಕುಳಿತಲ್ಲಿಯೇ ಇಂಟರ್ನೆಟ್ ಮೂಲಕ ನಿಮಿಷಾರ್ಧದಲ್ಲಿ ಮಾಹಿತಿ ದೊರೆಯುತ್ತದೆ. ಟೀವಿಯಲ್ಲಿ ಬರುವ ವಿಶೇಷ ಕಾರ್ಯಕ್ರಮವನ್ನು ಮನೆಯವರೆಲ್ಲ ಒಂದುಗೂಡಿ ನೋಡಿದರೆ, ಅದುವೇ ಆಚರಣೆ ಆಗುತ್ತದೆ. 

ಮೇಲೆ ಹೇಳಿದಂತೆ ಪರಂಪರೆಯ ದಿನಾಚರಣೆಯ ಸಂಭ್ರಮೋತ್ಸವಕ್ಕೆ ಸಾಕಷ್ಟು ಕಾರ್ಯಕ್ರಮಗಳು ನಮ್ಮ ಸುತ್ತಮುತ್ತಲಿನ ಸ್ಥಳಗಳಲ್ಲಿ ನಡೆಯುತ್ತಿರುತ್ತದೆ, ಆಸಕ್ತಿಯಿಂದ ಭಾಗವಹಿಸುವುದೂ ಕೂಡ ಈ ದಿನದ ಆಚರಣೆಯ ಒಂದು ಭಾಗ. 

ಪಾರಂಪರಿಕವಾಗಿ ವಿಶೇಷತೆ  ಇರುವ ಸ್ಥಳಗಳಿಗೆ ಹೋಗಿ ಒಂದಷ್ಟು ಸೆಲ್ಫಿ ತೆಗೆದುಕೊಂಡು ಬಂದು, ದಿನಾಚರಣೆಯ ದಿನ ಸೋಶಿಯಲ್ ಮೀಡಿಯಾಕೆ ಹಾಕುವ ಪ್ರವಾಸಿಗರಾಗಬೇಡಿ. ಸಾಧ್ಯವಾದರೆ, ನೀವು ನೋಡಿದ್ದನ್ನು, ತಿಳಿದುಕೊಂಡದ್ದನ್ನು, ಮಾಹಿತಿಯುಕ್ತ ಫೋಟೋ ತೆಗೆದುಕೊಂಡು ಹಂಚುವ ಮೂಲಕ, ಅದರ ಕುರಿತು ತಿಳಿದು ಬರವಣಿಗೆ ಅಥವಾ ಮಾತಿನ ಮೂಲಕ ಇತರರೊಂದಿಗೆ ಹಂಚಿಕೊಳ್ಳುವ ಜವಾಬ್ಧಾರಿಯುವ ಪ್ರವಾಸಿಗರಾಗುವುದು ಕೂಡ ಆಚರಣೆಯೇ!

ಪ್ರಸಿದ್ಧ ಪ್ರವಾಸೀ ಸ್ಥಳಗಳಿಗೆ ಹೋದಾಗ, ಅಲ್ಲಿನ ವಿಶೇಷತೆಯನ್ನು ಕೇವಲ ಕಣ್ಣಿನಿಂದ ಆನಂದಿಸಿ, ಅಲ್ಲಿಯ  ಅವಶೇಷಗಳ ಭಗ್ನಗೊಳಿಸದೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರುವಂತೆ ಅನುಚಿತವಾಗಿ ವರ್ತಿಸದೆ, ಆವರಣವನ್ನು ಮಲಿನಗೊಳಿಸದೇ ಬರುವುದು ಕೂಡ ಆಚರಣೆಯೇ. 

ಪ್ರತಿಯೊಂದು ಸಂಸ್ಕೃತಿಯು, ಪರಂಪರೆಯೂ ತನ್ನದೇ ಆದ ಸಂಗೀತ, ಸಾಹಿತ್ಯ, ಹಬ್ಬಗಳು, ಬಟ್ಟೆ, ಆಹಾರ ಪದ್ಧತಿ ಮತ್ತು ಇತರ ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ. ನಮ್ಮ ದಿನನಿತ್ಯದ ಜೀವನದಲ್ಲಿ ಅವುಗಳನ್ನು ಹೆಚ್ಚಾಗಿ ಬಳಸಿವುದು ಮತ್ತು ಆನಂದಿಸಿವುದು, ಕುಟುಂಬ, ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಪ್ರಮುಖ ರಜಾದಿನಗಳನ್ನು ಆಚರಿಸುವುದು, ಕುಟುಂಬದ ಹಿರಿಯರಿಂದ ಮಾರ್ಗದರ್ಶನ ಪಡೆದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಕಳೆದು ಹೋಗಬಹುದಾದ ಮಾಹಿತಿಯ ಚಾಲ್ತಿಯಲ್ಲಿಡುವುದು ಕೂಡ ಆಚರಣೆಯೇ! 



ಈ ವರ್ಷದ 'ವಿಶ್ವ ಪರಂಪರೆಯ ದಿನ' ದ ಘೋಷವಾಕ್ಯ - "ವೈವಿದ್ಯತೆಯನ್ನು ಅನ್ವೇಷಿಸಿ ಮತ್ತು ಅನುಭವಿಸಿ". ಈ ವರ್ಷ ಕೇವಲ ಆಚರಣೆಯಲ್ಲ; ನಮ್ಮ ಭಾರತದ ವಿಶಾಲವಾದ ಮತ್ತು ವೈವಿಧ್ಯಮಯ ಐತಿಹಾಸಿಕ ಸಂಪತ್ತುಗಳ ಕುರಿತಾಗಿ ಆಳವಾದ ತಿಳುವಳಿಕೆಯನ್ನು ಅನ್ವೇಷಿಸಿ ಅನುಭವಿಸೋಣ!