ಕಂಡೆ ನಾ ಬದರಿಯ..

ಸತತವಾದ ೪ ದಿನಗಳ ವ್ಯಾಲಿ ಆಫ್ ಪ್ಲಾವರ್ಸ್ ಮತ್ತು ಹೇಮಕುಂಡದ ನಮ್ಮ ಚಾರಣ, ಅಂದಿಗೆ ಮುಗಿದಿತ್ತು. ಪಾಂಡುಕೇಶ್ವರದ ಹೋಟೆಲ್ಲಿಗೆ ಬಂದು ವಿಶ್ರಾಂತಿ ತೆಗೆದುಕೊಳ್ಳುವುದಷ್ಟೇ ಆ ದಿನಕ್ಕೆ ನಮಗುಳಿದ ಕೆಲಸ. ನಾವು ಬುಕ್ ಮಾಡಿದ್ದ ಟ್ರೆಕ್ಕಿಂಗ್ ಪ್ಯಾಕೇಜ್ ಏಜೆನ್ಸಿಯವರು, 'ಟೀಮ್ ನ ಇಚ್ಛೆಯಿದ್ದಲ್ಲಿ ಆ ದಿನ ಬದರಿನಾಥ್ ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡಬಹುದು. ವಾಹನದ ವ್ಯವಸ್ಥೆ ನೀಡಲಾಗುತ್ತದೆ. ಆದರೆ ಪ್ರಯಾಣ ಮಾತ್ರ ಸಂಪೂರ್ಣವಾಗಿ ಹವಾಮಾನದ ಮೇಲೆ ಅವಲಂಭಿತ..' ಎಂಬ ನಿಯಮಿತ ಒಕ್ಕಣೆಯನ್ನು ಮುಂಚಿತವಾಗಿಯೇ ನೀಡಿದ್ದರು. ಬದರಿನಾಥ್ಗೆ ಹೋಗುವ ಆಶಾಭಾವನೆಯಿಂದ ನಾವೆಲ್ಲರೂ ಘಾನ್ಗ್ರಿಯದಿಂದ ಪುಲ್ನವರೆಗಿನ ನಮ್ಮ ಅವರೋಹಣವನ್ನು ಸಾಧ್ಯವಾದಷ್ಟು ಚುರುಕಾಗಿ ಮುಗಿಸಿ ಬಂದಿದ್ದೆವು. ಬದರಿನಾಥ್ ಗೆ ಹೋಗುವ ಉತ್ಸಾಹ ಯಾರ ಮುಖದಲ್ಲೂ ಚಾರಣದ ಸುಸ್ತನ್ನು ಮೂಡಿಸಿರಲಿಲ್ಲ.. ಆದರೆ, 'ಹಿಂದಿನ ದಿನ ಸುರಿದ ಸತತ ಮಳೆಯ ಕಾರಣದಿಂದಾಗಿ, ಬದರಿನಾಥ್ ಗೆ ಹೋಗುವ ರಸ್ತೆಗಳು ಮುಚ್ಚಿದ್ದು, ೫೦೦ ಕ್ಕೂ ಹೆಚ್ಚು ವಾಹನಗಳು ನಿಲುಗಡೆಯಲ್ಲಿವೆ, ಸಾವಿರಾರು ಭಕ್ತರು ಕಾಯ್ವಿಕೆಯಲ್ಲಿದ್ದಾರೆ, ಯಾವಾಗ ರಸ್ತೆ ತೆರೆಯುವುದೋ ತಿಳಿಯದು, ಹೋಗಿ ನೋಡಬೇಕೀಗ, ' ಎಂದು ನಮ್ಮ ಡ್ರೈವರ್ ಕೊಟ್ಟ ಮಾಹಿತಿಗೆ ಒಮ್ಮೆ ನಿರಾಸೆಯೆನಿಸಿದರೂ, ಭರವಸೆಯನ್ನು ಕಳೆದುಕೊಳ್ಳದೆ ಎಲ್ಲರೂ ಚುರುಕಾಗಿ ಪಾಂಡುಕೇಶ್ವರ್ ಗೆ ಹೊರಟು ಬಂದೆವು. ಪಾಂಡುಕೇಶ್ವರ್ ಸಮೀಪಿಸುತ್ತಿದ್ದಂತೆಯೂ, ...