ವಿಶ್ವ ಭೂಮಿ ದಿನ

"ಯೇ, ಮಣ್ಣಲ್ಲಿ ಆಡಬೇಡಿ ಛೀ ಕೊಳಕು.." ಅಂತೇನಾದರೂ ನಮ್ಮ ಅಪ್ಪ ಅಮ್ಮ ಅವಾಗ ಹೇಳಿಬಿಟ್ಟಿದ್ದರೆ, ಮಣ್ಣು ಮಳೆಯ ಒಡನಾಟ ಇಲ್ಲದೇ ಜೀವ ಅದೆಷ್ಟು ಚೈತನ್ಯ ಹೀನಾವಾಗುತ್ತಿತ್ತೋ, ಜೀವನದ ಅದೆಷ್ಟು ಸಂತೋಷವನ್ನು ನಾವು ಕಳೆದುಕೊಂಡು ಬಿಡುತ್ತಿದ್ದೆವೋ ಏನೋ..!! ಮಲೆನಾಡಿನ ಪರಿಸರದಲ್ಲಿ ನಮ್ಮ ಬಾಲ್ಯವಾದ್ದರಿಂದ, ಮಣ್ಣು, ನೀರು, ತೋಟ - ಗದ್ದೆ, ಮಳೆ ಝರಿ, ಕಾಡು ಮೇಡು, ಹಕ್ಕಿ-ಜೀರುಂಡೆ ಎಲ್ಲವೂ ಉಸಿರಾಡುವ ಗಾಳಿಯಷ್ಟೇ ನಮಗೆ ಸಹಜವಾಗಿ ಹೋಗಿತ್ತು. ಅಂಗಾಲು ಮಣ್ಣಿಗೆ ಆಂಟಿಯೇ ಬೆಳೆದಿದ್ದು ನಾವು ಎಂದರೂ ತಪ್ಪಿಲ್ಲ. ಆಗಿನ ಕಾಲಕ್ಕೆ ಅದೆಷ್ಟು ಮಹಾ ಆಟಿಕೆಗಳಿರುತ್ತಿದ್ದವು ನಮಗೆ? ಎಲ್ಲಿ ನೋಡಿದರಲ್ಲಿ ಮಣ್ಣೇ ಮಣ್ಣು ಕಾಣಿಸುತ್ತಿತ್ತು. ಪುಟ್ಟಮಕ್ಕಳ ವಯಸ್ಸಿನಲ್ಲಿ, ಒಂದಷ್ಟು ಮಣ್ಣು ನೀರು ಇದ್ದ ಜಾಗಕ್ಕೆ ನಾವು ಓಡಿದರೆ, ಎಲ್ಲಾ ಆಟ ಮುಗಿದ ಮೇಲೆ, ಕೆಸರು ಹೊಂಡದಿಂದ ನಮ್ಮನ್ನು ಎತ್ತಿ ತಂದು ಸ್ನಾನ ಹೊಡೆಸುವುದು ದೊಡ್ಡವರಿಗೂ ಅಷ್ಟೇ ಸಹಜವಾದ ಕೆಲಸವಾಗಿತ್ತು. ಮಣ್ಣು ನುಣುಪು-ಒರಟು ಎಂಬಿತ್ಯಾದಿ ಸೂಕ್ಷ್ಮಗಳು ಎಂದೂ ನಮ್ಮನ್ನು ಭಾದಿಸಲಿಲ್ಲ. ಗಂಟೆಗಟ್ಟಲೆ ಮಣ್ಣನ್ನು ಕಲಸಿ, ಕೈಯಿಂದ ಕೈಗೆ ಸುರಿಯುತ್ತ ಆಡುತ್ತಿದ್ದೆವು. ಅಜ್ಜನ ಮನೆಗೆ ಹೋದರೆ, ಸೂರ್ಯ ಹುಟ್ಟುವುದಕ್ಕೂ ಮುಂಚೆ, ಅಂಗಳ ಬಳಿಯಲು ಸಗಣಿ ಮತ್ತು ಕೆಮ್ಮಣ್ಣು ಸೇರಿಸಿ, ನೀರಿನ ಜೊತೆ ಹದವಾಗಿ ಮಿಶ್ರಣ ಮಾಡಿ ಕೈಯಲ್ಲಿ ಹರಡಿಕೊಂಡ...