ಒಂದು ಚಪ್ಪಾಳೆ 'ನಮ್ಮ ಮೆಟ್ರೋ' ಗೆ

ಒಂದು ಕಾಲವಿತ್ತು. ಬೆಂಗಳೂರಿನಿಂದ ನಾವು ಊರಿಗೆ ಹೋಗಬೇಕೆಂದರೆ, ನಮ್ಮ ಮನೆಯಿಂದ ಸಾಕಷ್ಟು ದೂರದಲ್ಲಿರುವ ಮೆಜೆಸ್ಟಿಕ್ ಗೆ ಸಿಟಿ ಬಸ್ ಹತ್ತಿ ಕುಳಿತು, ಹೊಂಡ ಗುಂಡಿ ರಸ್ತೆಗಳನ್ನು ದಾಟುತ್ತ(ಹಾರುತ್ತ), ಒಂದೆರಡು ಗಂಟೆ ಬೆಂಗಳೂರು ದರ್ಶನ ಫ್ರೀಯಾಗಿ ಪಡೆದು, ಕಡೆಗೂ ತಲುಪಿದ ಸಮಯಕ್ಕೆ ಯಾವ ಬಸ್ ಸಿಕ್ಕರೂ ಅದೇ ನಮ್ಮ ಪುಣ್ಯ ಎಂದು ಭಾವಿಸಿ, ಊರಿಗೆ ಪ್ರಯಾಣಿಸುತ್ತಿದ್ದೆವು. ಅದರಲ್ಲೂ ಹಬ್ಬಕ್ಕೆಲ್ಲ ಊರಿಗೆ ಹೋಗುವಾಗಲೆಂತೂ ಟ್ರಾಫಿಕ್ ಜಾಮನ್ನು ನೋಡಿಬಿಟ್ಟರೆ ತಲೆತಿರುಗುತ್ತಿತ್ತು. ಬಸ್ಸು ರಾತ್ರೆ ೧೦ ಗಂಟೆಗಿದ್ದರೂ, ೬.೪೫ ಗೆ ಆಫೀಸಿನಿಂದ ಬಂದಿದ್ದೆ ಮತ್ತೆ ಬ್ಯಾಗು ಹಿಡಿದು ಓಡುವುದೇ ನಮ್ಮ ಕೆಲಸ..ಇನ್ನು, ಮೆಜೆಸ್ಟಿಕ್ಗೆ ಹೋಗುವ ಸಿಟಿ ಬಸ್ನ ಪ್ರಯಾಣದ ಸುಖ ಏನ್ ಕೇಳ್ತೀರಿ..!! ೫ ನಿಮಿಷಕ್ಕೆ ಒಂದಿಂಚು ಹಾದಿ ಸಾಗುತ್ತಿರುವ ಬಸ್ಸಿನಿಂದ ಮಧ್ಯದಲ್ಲೇ ಇಳಿದು, ಎದುರಿನ ದರ್ಶಿನಿಯಲ್ಲಿ ಸಿಂಗಲ್ ಇಡ್ಲಿ ತಿಂದು, ಒಂದು ಕಾಪಿ ಕುಡಿದು, ತೊಳೆದ ಕೈ ಒರೆಸಿಕೊಂಡು ಮತ್ತೆ ಅದೇ ಬಸ್ಸನ್ನು ನಾಲ್ಕೇ ಹೆಜ್ಜೆ ಮುಂದಕ್ಕಿಟ್ಟು ಹತ್ತಬಹುದಾದಂತಹ ಸೌಭಾಗ್ಯ.. ಆ ರೇಂಜಿಗೆ ಬಸ್ಸಿನ ವೇಗದ ಮಿತಿ. ಇದರ ಜೊತೆ, ಸರಿಯಾದ ಸಮಯಕ್ಕೆ ಬಸ್ ಸ್ಟಾಂಡ್ ತಲುಪುತ್ತೇವೋ ಇಲ್ಲವೋ ಅನ್ನೋ ಟೆನ್ಶನ್. ಕೂತ ಬಸ್ಸಲ್ಲೇ ಸರ್ಕಾರದ ವ್ಯವಸ್ಥೆಯನ್ನು ಬೈಯುತ್ತಾ, ನಮ್ಮ ನಸೀಬನ್ನು ಹಳಹಳಿಸುತ್ತ ಇರುತ್ತಿದ್ದೆವು. ಈ ಹೈರಾಣ ಸಿಟಿ ಬಸ್ಸಿನ ಪ್ರಯಾಣಕ್ಕೊಂದೇ...