ಬುಧವಾರ, ಅಕ್ಟೋಬರ್ 19, 2022

ಟಿಬೆಟಿಯನ್ ಘುಮ್ ಮೊನಸ್ಟರಿ

ದಾರ್ಜೀಲಿಂಗ್ ಸುತ್ತಮುತ್ತಲಿನ ಪ್ರಾಕೃತಿಕ ಸೌಂದರ್ಯವಂತೂ ವರ್ಣಿಸಲಸದಳ. ಅದರ ಜೊತೆಯಲ್ಲಿ, ದಸರಾ ಸಮಯದಲ್ಲಿ ದಾರ್ಜೀಲಿಂಗ್ ಪ್ರವಾಸ ಹೋದದ್ದು, ಅಲ್ಲಿನ ಅನೇಕ ಧರ್ಮಗಳ ಹಬ್ಬಗಳ ಆಚರಣೆಯ ಕುರಿತಾಗಿಯೂ ತಿಳಿಯಲು ಸಹಾಯಕವಾಯಿತು. ಅಂತದೇ ಒಂದು ದೇವಿ ಪೂಜೆಯ ಆಚರಣೆಯ ವಿಶೇಷತೆ ಕಂಡದ್ದು ಅಲ್ಲಿನ ಟಿಬೆಟಿಯನ್ ಘುಊಮ್ಮೊನಸ್ಟರಿಯಲ್ಲಿ.   

ದಾರ್ಜೀಲಿಂಗ್ ನಲ್ಲಿರುವ ಟಿಬೆಟಿಯನ್ ಘುಮ್ ಮೊನಸ್ಟರಿಗೆ (ಮಠ) ಭೇಟಿ ಇತ್ತ ಕ್ಷಣ. ಭವಿಷ್ಯದ ಬುದ್ಧ ಎಂದು ಕರೆಯಲಾಗುವ ಗೌತಮ ಬುದ್ಧನ ಉತ್ತರಾಧಿಕಾರಿ, 'ಮೈತ್ರೇಯ' ಬುದ್ಧನ ದೇವಾಲಯವಿದು. ಟಿಬೆಟಿಯನ್ ಶೈಲಿಯಲ್ಲಿ ನಿರ್ಮಾಣವಾಗಿರುವ ಈ ಧರ್ಮಮಠದ ಬಾಗಿಲಿನ ಕಮಾನಿನಲ್ಲಿ ಗರುಡನ ಕೆತ್ತನೆಯಿದೆ.  ಮೈತ್ರೇಯ ಬುದ್ಧನ ೧೫ ಅಡಿ ಎತ್ತರದ ಸಿಂಗರಿಸಿದ ಅದ್ಭುತ ಮೂರ್ತಿಯನ್ನು ಟಿಬೆಟಿನ್ನಿಂದಲೇ ಮಣ್ಣನ್ನು ತರಿಸಿ ಮಾಡಿದ ಮೂರ್ತಿಯಂತೆ! ಇದರ ಮುಂದಿರುವ ಎರಡು ದೊಡ್ಡ ಎಣ್ಣೆಯ ದೀಪಗಳು ಈ ವರೆಗೆ ಆರಿದ ದಾಖಲೆಯಿಲ್ಲ ಎನ್ನುತ್ತಾರೆ ಅಲ್ಲಿನ ಬೌದ್ಧ ಸನ್ಯಾಸಿಯೊಬ್ಬರು. ದೀಪದ  ಸುತ್ತಲಿನ ಗೋಡೆಗಳಮೇಲೆ ಬುದ್ಧನ ಕುರಿತಾದ ವರ್ಣರಂಜಿತ ಕಿರುಚಿತ್ರಗಳು,ಅಲ್ಲಿ ಟಿಬೆಟಿಯನ್ ಬೌದ್ಧರು ಸಾಲಾಗಿ ಕುಳಿತುಕೊಂಡು ಒಂದೇ ರಾಗದಲ್ಲಿ ಮಂತ್ರ ಪಠನೆ ಮಾಡುತ್ತಿದ್ದುದು, ಡ್ರಮ್ಸ್ ಮತ್ತು ಸಿಂಬಲ್ಸ್ ಬಡಿತ, ಪೈಪ್ಮಾದರಿಯ ಸಂಗೀತ ವಾದ್ಯಗಳ ನುಡಿಸುತ್ತ ಮಾಡಿದ ಪ್ರಾರ್ಥನೆ ಎಲ್ಲವೂ ಸೇರಿ ಒಂದು ರೀತಿಯ ಮಾಂತ್ರಿಕ ಭಾವನೆ ನೀಡುತ್ತಿತ್ತು. 







ದಶೈನ್(ದಸರಾ) ಹಬ್ಬದ ಆಚರಣೆಯ ಪ್ರಯುಕ್ತವಾಗಿ ಅಲ್ಲಿ ದೇವಿ ತಾರಾ ಕುರಿತಾದ ೧ ಲಕ್ಷ ಮಂತ್ರ ಪಠನೆ ಕಾರ್ಯಕ್ರಮ ನಡೆಯುತ್ತಿತ್ತು. ತಾರಾ ದೇವಿ ಯನ್ನು ವಜ್ರಯಾನ ಬೌದ್ಧ ಧರ್ಮದಲ್ಲಿ ಸ್ತ್ರೀ ಬುದ್ಧನಾಗಿ ಚಿತ್ರಿಸಲಾಗಿದೆ. 'ವಿಮೋಚನೆಯ ತಾಯಿ' ಎಂದು ಅವಳನ್ನುಕರೆಯುತ್ತಾರೆ . ಸಾಧನೆಗೆ ಬೇಕಾದ ಸದ್ಗುಣವನ್ನು ಈಕೆ ಪ್ರತಿನಿಧಿಸುತ್ತಾಳೆ ಎಂದು ನಂಬಲಾಗಿದೆ. 




ಪ್ರಾರ್ಥನೆಯ ನಂತರ ನೆರೆದವರಿಗೆ ಟಿಬೆಟಿಯನ್ ಹೋಲಿ ಟೀ ಅನ್ನು ವಿತರಿಸಲಾಗುತ್ತದೆ. ಟಿಬೆಟಿಯನ್ ಪಾಕಪದ್ಧತಿಯ ಪ್ರಕಾರ ತಯಾರಿಸಲಾಗುವ 'ಪವಿತ್ರ ಟೀ' ಅನ್ನು ಕುಡಿಯಲು ಪೇಯವಾಗಿ ನೀಡುತ್ತಾರೆ. ಟೀ ಮತ್ತು ವಿವಿಧ ಬಗೆಯ ಗಿಡಮೂಲಿಕೆ ಸೊಪ್ಪುಗಳನ್ನು ಹಾಕಿ ಕುದಿಸಿ ಘಾಡವಾದ ಡಿಕಾಕ್ಷನ್ ಮಾಡಿ, ಅದನ್ನು ಬಿದಿರಿನ ಬೆತ್ತಳಿಕೆಯ ಮಾದರಿಯ ಬೊಂಬಿನೊಳಗೆ ಹಾಕಿ,  ಅದಕ್ಕೆ ಯಾಕ್ ಮೃಗದ ಹಾಲು, ಬೆಣ್ಣೆ ಮತ್ತು ಉಪ್ಪು ಹಾಕಿ, ಬೆಣ್ಣೆಯ ಎಣ್ಣೆಯಂಶ ಸಂಪೂರ್ಣ ಮಿಳಿತಗೊಳ್ಳುವಲ್ಲಿಯವರೆಗೆ, ಸಾಕಷ್ಟು ಸಮಯವಾದವರೆಗೆ ಕಡೆದು ಬಿಸಿ ಬಿಸಿ ಹಬೆಯಾಡುತ್ತಿರುವಾಗಲೇ ಕುಡಿಯಲು ಕೊಡುತ್ತಾರೆ. ನಾವು ಹೋದ ದಿನದಂದು, ಮಾನಸ್ಟ್ರಿಯ ಹೊರಗಡೆ ಸ್ವಯಂ ಸಂಘವೊಂದು ಚಳಿಯಿಂದ ಕೊರೆಯುತ್ತಿರುವವರಿಗಾಗಿ ಬಿಸ್ಕೀಟು ಮತ್ತು ಚಹಾ ವಿತರಿಸಿ ತಮ್ಮ ಸೇವೆಯನ್ನು ನಡೆಸುತ್ತಿದ್ದರು.


ಯಾವುದೇ ಮೊನಸ್ಟರಿ ಹೊರಾಂಗಣದಲ್ಲಿ ಟಿಬೆಟಿಯನ್ ಬೌದ್ಧರು ಪ್ರಾರ್ಥನೆಗಾಗಿ ಬಳಸುವ ಪ್ರಾರ್ಥನಾ ಚಕ್ರವಿರುತ್ತದೆ. ಕಬ್ಬಿಣ, ಮರದ ತುಂಡುಗಳಿಂದ ಕೆಲವೊಮ್ಮೆ ಕಲ್ಲಿನ ಕೆತ್ತೆನೆಯಲ್ಲೂ ಈ ಸುರುಳಿನ ಚಕ್ರವನ್ನು ನೋಡಬಹುದು, ಇದನ್ನು ಮಣಿ ಚಕ್ರ ಎಂದು ಕರೆಯುತ್ತಾರೆ. ನಮ್ಮಲ್ಲಿನ ಜಪಮಾಲೆ ಇದ್ದಂತೆ. ಅದರ ಮೇಲೆ 'ಓಂ ಮಣಿ ಪದ್ಮೇ ಹಮ್" ಎಂಬ ಪ್ರಾರ್ಥನೆಯ ಬೀಜಮಂತ್ರವನ್ನು ಬರೆದಿರುತ್ತಾರೆ. ಜೊತೆಗೆ ಅಷ್ಟಮಂಗಲ ರಕ್ಷಕರ ಚಿಹ್ನೆ ಕೂಡ ಚಿತ್ರಿತವಾಗಿರುತ್ತದೆ. ಈ ಪ್ರಾರ್ಥನಾ ಚಕ್ರವನ್ನು ತಿರುಗಿಸುತ್ತಾ, ಈ ಮಂತ್ರವನ್ನು ಹೇಳಿದರೆ, ಸುಖ ಶಾಂತಿ ಲಭಿಸುತ್ತದೆ ಎಂಬ ನಂಬಿಕೆಯಿದೆ. 


ಬೌದ್ಧ ಧರ್ಮದಲ್ಲಿ ನೀರೆಂಬ ಪವಿತ್ರ ವಸ್ತುವಿಗೆ ಅತ್ಯಂತ ಪ್ರಾಶಸ್ತ್ಯ. ನೀವು ಯಾವುದೇ ಬೌದ್ಧ ಮೊನಾಸ್ಟರಿಗೆ ಹೋದರೂ ಅಲ್ಲಿ ಬುದ್ಧನ ಎದುರು ಏಳು ಬಟ್ಟಲುಗಳಲ್ಲಿ ನೀರನ್ನು ಇಟ್ಟಿರುತ್ತಾರೆ. ಇವು ಸಾಂಕೇತಿಕವಾಗಿ, ಕುಡಿಯಲು ನೀರು (ಅರ್ಘ್ಯ), ಸ್ನಾನಕ್ಕೆ ನೀರು (ಪದ್ಯಮ್), ಹೂವು (ಪುಷ್ಪ), ಧೊಪದೃವ್ಯ, ಬೆಳಕು, ಸುಗಂಧದ್ರವ್ಯ ಮತ್ತು ಆಹಾರ ವನ್ನು ಸೂಚಿಸುತ್ತವೆ. ಸಾಂಕೇತಿಕ ರೂಪದ ಅರ್ಪಣೆಗಳಲ್ಲದೆ, ಅನೇಕರು ಅನೇಕ ಬಗೆಯ ಬಿಸ್ಕೀಟು, ಚಾಕಲೇಟು, ವಿಧವಿಧವಾದ ಧಾನ್ಯಗಳಿಂದ ಮಾಡಿದ ಕೇಕ್, ಸಿಹಿತಿಂಡಿಗಳು, ವಿಧವಿಧವಾದ ಪೇಯಗಳನ್ನು ಕೂಡ ನೈವೇದ್ಯಕ್ಕೆ ನೀಡುತ್ತಾರೆ. ಹೀಗಿದ್ದಾಗ,  ಮಗಳ ಬುದ್ಧನನ್ನು ಕಮ್ಮಿ, ನೈವೇದ್ಯಗಳನ್ನು ಜಾಸ್ತಿ ನೋಡುತ್ತಿದ್ದಳು ಎಂಬುದನ್ನು ಮತ್ತೆ ಹೊಸತಾಗಿ ಹೇಳಬೇಕಿಲ್ಲ ಅಲ್ಲವೇ? 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ