ಕಾಶಿಯ ಅತಿಥಿಯಾಗಿ!
ಉತ್ತರಪ್ರದೇಶದ ೨೦೨೪ ರ ' ದೇವ್ ದೀಪಾವಳಿ' ಹಬ್ಬಕ್ಕೆ ನಾನು ಬನಾರಸ್ನಲ್ಲಿದ್ದೆ. ಮೊದಲ ಬಾರಿ ಕಾಶಿ ನೋಡಿದ ಅನುಭವ, ಅದರಲ್ಲೂ ಸೊಲೊಟ್ರಿಪ್. ಆ ಎರಡು ದಿನದಲ್ಲಿ ಕಾಶಿಗೆ ಹರಿದು ಬಂದ ಜನಸಂಖ್ಯೆ ೧೨-೧೪ ಲಕ್ಷವಂತೆ! literally 'ಒನ್ ಇನ್ ಮಿಲಿಯನ್' ಆಗಿದ್ದೆ ನಾನಲ್ಲಿ. ದಿನಕ್ಕೆ ೧೦-೧೨ ಕಿಮೀ ನಡುಗೆ, ನಡೆದಷ್ಟೂ ನೋಡಿದಷ್ಟೂ ಚಂದ ಆ ಊರು! ಕಾಶಿ ವಿಶ್ವನಾಥನ ದರುಶನಕ್ಕೆ ಹೋಗಿ ಹೊರಬರುವಲ್ಲಿ ಅರ್ಧ ದಿನಕ್ಕಿಂತಲೂ ಹೆಚ್ಚು ಸಮಯ ಆಗಿತ್ತು. ಮುಂದಕ್ಕೆ ಸಂಧ್ಯಾಕಾಲದ ಒಳಗೆ ನಾನು ಹೋಗಬೇಕಿದ್ದ ಸ್ಥಳ ೫-೬ ಕಿಮೀ ದೂರವೂ ಇದ್ದುದ್ದರಿಂದ, ಯಾವುದಾದರೂ ಬಾಡಿಗೆ ಹಿಡಿದು ಅಕ್ಷಣಕ್ಕೆ ಹೋಗಬೇಕಿತ್ತು. ಕಾಶಿ ವಿಶ್ವನಾಥನ ದೇವಾಲಯದ ಹಾದಿಯಿಂದ ಒಂದು ಕಿಮೀ ನಡೆದು ಒಂದು ಸರ್ಕಲ್ಗೆ ಬಂದು ನೋಡಿದರೆ ಅಲ್ಲಿಂದ, ಟ್ರಾಫಿಕ್ ಸಲುವಾಗಿ ರಸ್ತೆ ಬಂದ್ ಮಾಡಲಾಗಿತ್ತು. ರಸ್ತೆ ತುಂಬಾ ಜನಜಂಗುಳಿ, ಸುಮ್ಮನೆ ನಿಂತರೆ ನಾವೇ ತಳ್ಳಿ ಹೋಗುವಷ್ಟು!
ಹತ್ತಿರವೇ ಇದ್ದ ಪೊಲೀಸೊಬ್ಬನನ್ನು ಕೇಳಲಾಗಿ, ನಾನು ೧.೫ ಕಿಮೀ ವಾಪಸು ನಡೆದು ಹೋಗಿ ಇನ್ನೊಂದು ಸರ್ಕಲ್ ನಿಂದ ಗಾಡಿ ಹಿಡಿಯಬೇಕಾಗುತ್ತದೆ ಎಂದರು. "ಅರ್ರೆ ಮುಝೆ ಧೇರ್ ಹೊರಹೀ ಹೈ ಕೊಯಿ ಶಾರ್ಟ್ಕಟ್ ಹೋಗ ಕ್ಯಾ ಚಲ್ಕೆ ಜಾನೇ ಕೇಲಿಯೇ" ಎಂದು ವಿಚಾರಿಸಿದೆ. "ಅಪ್ಕೋ ಕಂಹಾ ಜಾನಾಹೈ?" ಎಂದೆಲ್ಲ ವಿವರಗಳನ್ನು ವಿಚಾರಿಸಿದವನೇ, ಆ ಕಡೆಯಿಂದ ಬರುತ್ತಿದ್ದ ಒಂದು ಬೈಕ್ ಸವಾರನಿಗೆ ಕೈ ಅಡ್ಡ ಹಾಕಿದ. "ಓ ಛೋಟೆ, ಇಸ್ ಬಹಾನಿಯಾ ಕೋ, ಡಾಲ್ಮಂಡಿ ರೋಡ್ ತಕ್ ಚೋಡ್ ಆಯ್ ಓಯ್". ಅಂವ ಎಲ್ಲಿಗೆ ಹೊಂಟವ ಏನೇನೂ ಪ್ರಶ್ನೆ ಇಲ್ಲ! "ಯೇ ಲೇಜಾಕೆ ಚೋಡೆಗ ಆಪ್ಕೋ, ಕೋಯಿ ದಿಕ್ಕತ್ ತೊ ನಹಿ ಹೈನ ಬೈಕ್ ಮೆ ಬೈಠನೆ ಕೇಲಿಯೇ" ಎಂದು ಕೇಳಿದ. ಆ ರಸ್ತೆ ಮಧ್ಯಕ್ಕೆ ಎಲ್ಲೂ ಅಡ್ಡರಸ್ತೆ ಹಿಡಿಯುವುದೇ ಇಲ್ಲವೇ ಇಲ್ವಾ ಹಾಗಿದ್ರೆ!? ಇವನಿಗೆ ಪಾಪ ಅಲ್ಲಿಯವರೆಗೆ ಹೋಗಲಿಕ್ಕೆ ಇದೆಯೋ ಇಲ್ಲವೋ ಎಂದೆಲ್ಲಾ ಮನಸ್ಸಿಗೆ ತಕ್ಷಣಕ್ಕೆ ಯೋಚನೆ ಬಂದು, ನಾನೇ ಮತ್ತೆ ವಿಚಾರಿಸಿದೆ. "ಆಪ್ ಉಸ್ ಓರ್ ಜಾರಹೇಹೈಕ್ಯಾ?" ಎಂದು. ಹೌದೆನ್ನುತ್ತ, ಅತ್ಯಂತ ಸೌಜನ್ಯದಿಂದ ಕೂರಿಸಿಕೊಂಡ.
ನನ್ನ ಪ್ರವಾಸದ ಕುರಿತು, ಅವನ ಬಗ್ಗೆ ಅಲ್ಪಸ್ವಲ್ಪ ವಿಷಯ ವಿನಿಮಯವಾದವು. ಅಂವ ಧೀರಜ್ ಗುಪ್ತ. ಕಾಲೇಜು ಓದುವ ವಿಜ್ಞಾನ ವಿದ್ಯಾರ್ಥಿ, ಓದಿನ ಹೊರತಾಗಿ ಸಂಜೆಯ ಸಮಯಕ್ಕೆ ಅವಕಾಶ ಸಿಕ್ಕರೆ ಸ್ಟಾಂಡ್ ಅಪ್ ಕಾಮೆಡಿ ಪ್ರೋಗ್ರಾಮ್ ಕೊಡುವುದು ಮತ್ತು ಸಂಜೆಗೆ ಅವನ ಅಪ್ಪನ ಚಾಟ್ ಸೆಂಟರ್ ನಲ್ಲಿ ಆಗಾಗ ಹೋಗಿ ಸಹಾಯ ಮಾಡುವುದು ಅವನ ದಿನಚರಿ. ಕೈಕಾಲು ಹಾಕಲು ಜಾಗವಿಲ್ಲದಷ್ಟು ಜನರ ಮಧ್ಯೆ, ಎಲ್ಲ ದಿಕ್ಕಿನಿಂದ ಗಾಡಿಗಳನ್ನು ಓಡಿಸುವ ಅಲ್ಲಿಯ ಚಾಲಕರಿಗೆ ಮಾತ್ರ ದೊಡ್ಡ ಸಲಾಮ್. ಇಂವನ ಗಾಡಿಯ ಮೇಲೆ ಕೂತಷ್ಟು ಹೊತ್ತು ಜೀವ ಬಾಯಿಗೆ ಬಂದದ್ದು ಸುಳ್ಳಲ್ಲ. ಈಗ ಡಿಕ್ಕಿ ಹೊಡೀತಾನೆ, ಈಗ ಬೀಳಿಸ್ತಾನೆ ನನ್ನ ಒಟ್ರಾಶಿ ಅಂತಲೇ ಅನ್ನಿಸುತ್ತಿತ್ತು. "ಧೀರೆ ಜಾಯಿಯೇ ಛೋಟೆ ಭಾಯಿ" ಎನ್ನುತ್ತಲೇ ಇದ್ದೆ. "ಅರ್ರೆ ಬಹನ್, ಬನಾರಸ್ ಮೇ ಗಾಡಿ ಚಾಲಾನ ಸೀಕ್ಲಿಯೇ ತೋ ಪೂರಾ ವಿಶ್ವ ಮೆ ಕಂಹಿ ಪರ್ ಭೀ ಗಾಡಿ ಚಲಾಸಕ್ತೆ ಹೈ" ಅಂತಂದ ಭೂಪ. ಅಂತೂ ಎಲ್ಲೂ ಬೀಳಿಸದೆ, ಎಲ್ಲೂ ತಾಗಿಸದೇ ಭಯಂಕರ್ ಬ್ಯಾಲೆನ್ಸ್ ಅಲ್ಲಿ ಗಾಡಿ ಓಡಿಸಿ ನನ್ನನ್ನು ಇನ್ನೊಂದು ದಿಕ್ಕಿನ ಮುಖ್ಯರಸ್ತೆಗೆ ತಲುಪಿಸಿದ. ಇಳಿದು ಧನ್ಯವಾದ ಹೇಳಲಾಗಿ, "ಯನ್ಹ ಸೆ ಸೈಕಲ್ ಯಾ ಆಟೋ ಮಿಲ್ ಜಾಯಿಗೀ ಅಪ್ಕೋ. ಧೇರ್ ತೋ ನಹಿ ಹುಯಿ? ಅಪ್ಕೋ ಉಸ್ ಘಾಟ್ ತಕ್ ಭೀ ಚೋಡನಾ ಹೈ ಕ್ಯಾ" ಎಂದು ಕೇಳಿದ. "ನಹಿ ಛೋಟೆ ಭಾಯ್, ಕ್ಯೂ ತಕಲೀಫ್ ಲೇನ್ಗೆ ಆಪ್, ಮೇ ಚಲಿ ಜಾವೂನ್ಗಿ , ವೈಸೆ ಆಪಕ ರಾಸ್ತಾ ಭೀ ನಹಿ ಹೈ ವೋ" ಎಂದು ಹೇಳಿದೆ. "ತಕಲೀಫ್ ಕೀ ಕೋಯಿ ಬಾತ್ ನಹಿ ಬಹಾನಿಯ, ಹಮೇ ಬಚ್ಪನ್ ಸೆ ಸಿಖಾಯ ಜಾತಾ ಹೈಕಿ, ವಾರಾಣಸಿ ಕೆ ಪುರ್ ವಾಸಿ ಹೋಕೇ, ಯನ್ಹ ಆನೇವಾಲೇ ಕೋಯೀ ಭೀ ಅತಿಥಿಕೋ ಮನ್ ಛೋಟಾ ಕರ್ಕೆ ನಹಿ ಭೇಜನಾ ಹೈ. ಅತಿಥಿ ದೇವೋ ಭವ" ಎಂದು ಮುಗುಳ್ನಕ್ಕ. ಸಾವಿರ ಗಾಡಿಗಳ ಹಾರ್ನ್ ಗಳ ಗಲಾಟೆ ಮಧ್ಯೆಯೂ ಚಂದದ ನಿಶ್ಯಬ್ಧತೆ ಒಂದು ಹಾದು ಹೋಯಿತು. "ಭಲಾ ಹೋ ಆಪಕಿ" ಎಂದು ನನ್ನ ಹಾದಿ ಹಿಡಿದೇ.
ಯಾತ್ರಾ ಸ್ಥಳದಿಂದ, ಪ್ರವಾಸೀ ಸ್ಥಳವಾಗಿ ದಿನದಿಂದ ದಿನಕ್ಕೆ ಪ್ರಸಿದ್ಧವಾಗುತ್ತಿರುವ ವಾರಾಣಸಿ ಕಮರ್ಷಿಯಲ್ ಕೂಡ ಆಗಿದೆ. ಅದರಲ್ಲೂ ಹಬ್ಬಹರಿದಿನಗಳ ಸಮಯದಲ್ಲಿ ಪ್ರವಾಸಿಗರು ಹೆಚ್ಚೆಚ್ಚು ಬರುವುದರಿಂದ ಎಲ್ಲದರ ದುಡ್ಡು ಒಂದಕ್ಕೆ ೩-೪ ಪಟ್ಟು ಜಾಸ್ತಿಯೇ! ೪೦ ರುಪಾಯಿಗೆ ಹೋಗುವ ಹಾದಿಗೆ ೨೦೦ ರೂಪಾಯಿ ಕೊಡದಿದ್ದರೆ ಬರುವುದಿಲ್ಲ ಎನ್ನುತ್ತಿದ್ದ ಬಾಡಿಗೆ ವಾಹನ ಚಾಲಕರ ಮಧ್ಯೆಯೂ, ಇಂತಹ ಬ್ಯೂಟಿಫುಲ್ ಮನಸ್ಸುಗಳು ಹೃದಯವನ್ನು ಗೆದ್ದು ಬಿಡುತ್ತವೆ. ವಿಶ್ವದ ಅತ್ಯಂತ ಪ್ರಾಚೀನ ಊರಾದ ಕಾಶಿಯಲ್ಲಿ ಅದು ಹೇಗೆ ಸಂಸ್ಕೃತಿ ತಲೆಮಾರುಗಳಿಗೆ ಹರಿಯುತ್ತದೆ ಎಂಬುದು ಅನುಭವಕ್ಕೆ ಬರುತ್ತದೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ