ಶರಣರ ಸಾವು ಮರಣದಲಿ ಕಾಣು
'ಶರಣರ ಸಾವು ಮರಣದಲಿ ಕಾಣು' ಎಂಬ ನಾಣ್ಣುಡಿ ಇದೆ. ಶರಣರು ಎಂದರೆ ಎಲ್ಲವನ್ನು ತ್ಯಜಿಸಿದ ಸಾಧು ಸನ್ಯಾಸಿ ಎಂದೇ ಅರ್ಥವಲ್ಲ. ಸಂಸಾರದಲ್ಲೇ ಇದ್ದುಕೊಂಡೂ ಯೋಗಿಯ ಜೀವನವನ್ನು ನಡೆಸುತ್ತ ಸಮಾಜಕ್ಕೆ ಒಳಿತನ್ನು ಬಯಸುವವರು ಕೂಡಾ ಶರಣರೇ. ಇದಕ್ಕೆ ಅನ್ವರ್ಥರೂಪವೆಂಬಂತೆ ಇದ್ದ ವ್ಯಕ್ತಿ ಶೈಲಜಾ ಅಡಿಗ, ನಮ್ಮ ಪ್ರೀತಿಯ ಶೈಲಕ್ಕ.
ಮಹಾಕುಂಭಮೇಳಕ್ಕೆ ಹೋಗಬೇಕೆಂದು ಪ್ಲಾನಿಂಗ್ ತಯಾರಿಯಲ್ಲಿದ್ದಾಗ, ನನ್ನ ಸಂಬಂಧಿಯ ಊರಿನಿಂದ ಒಂದು ಸಣ್ಣ ಗುಂಪೊಂದು ಹೊರಟು ನಿಂತು, ಅವರೊಡನೆ ನಾನುಸೇರಿಕೊಳ್ಳುವ ಅವಕಾಶ ಸಿಕ್ಕಿ, ನನ್ನ ಪ್ರವಾಸಕ್ಕೋಸ್ಕರ ತೆಗೆದುಕೊಳ್ಳುತ್ತಿದ್ದ ಎಲ್ಲಾ ಶ್ರಮಕ್ಕೂ ಒಂದು ಪೂರ್ಣವಿರಾಮ ನೀಡಿತು. ಮೊದಲ ಬಾರಿಗೆ ಏರ್ಪೋರ್ಟ್ನಲ್ಲಿ ಎಲ್ಲರೂ ಸಂಧಿಸಿದೆವು. ಕುಂಭಮೇಳಕ್ಕೆ ಹೋಗಬೇಕು ಎಂಬ ಆಸೆ ಮೊದಲು ಹುಟ್ಟಿದ್ದೇ ಶೈಲಕ್ಕನ ಮನಸ್ಸಿನಲ್ಲಂತೆ. ಶೈಲಕ್ಕ ಭವ್ಯಳ ಹತ್ತಿರ ತನ್ನಾಸೆ ಹೇಳಿಕೊಂಡು, ಅವರು ಅವರೂರಿನ ಸಂಗಡಿಗರ ಒಟ್ಟು ಮಾಡಿಕೊಂಡು ಹೊರಟ ಗುಂಪಿಗೆ, ಇಲ್ಲೆಲ್ಲೋ ಬೆಂದಕಾಳೂರಿನಲ್ಲಿ ಇಡೀ ದಿನ ಕಂಪ್ಯೂಟರ್ ಕೀಲಿಮಣೆ ಕುಟ್ಟುತ್ತಾ ಕುಳಿತುಕೊಳ್ಳುವ ನಾನು ಹೋಗಿ ಸೇರಿಕೊಳ್ಳುವುದು ನನ್ನ ಪಾಲಿನ ಯೋಗವೇ ಸರಿ. ಪ್ರವಾಸದಲ್ಲಿ ನನಗೆ ಅವರೆಲ್ಲರೂ ಹೊಸಬರು. ಆದರೆ ನಾವುಗಳು ಜೊತೆಗಿದ್ದ ಮೂರು ದಿನಗಳಲ್ಲಿ ಒಬ್ಬರಿಗೊಬ್ಬರು ಅದೆಷ್ಟು ಚೆನ್ನಾಗಿ ಬೆರೆತುಕೊಂಡೆವೆಂದರೆ, ಕುಂಭ ಮೇಳ ಮುಗಿಸಿ ಮರಳುವಾಗ, ನನ್ನದೇ ಕುಟುಂಬದ ಜನರಿಂದಬೇರ್ಪಡುತ್ತಿದ್ದೇನೆ ಎಂಬಷ್ಟು ಹೃದಯ ಭಾರ. ಶೈಲಕ್ಕ ನನಗಿಂತ ವಯಸ್ಸಿನಲ್ಲಿ ಖಂಡಿತಾ ಹಿರಿಯಳು ಅಮ್ಮನಂತೆ, ಆದರೆ ಎಲ್ಲೆಡೆ ನಮ್ಮಂತೆಯೇ ಅತ್ಯಂತ ಲವಲವಿಕೆಯಿಂದ ಓಡಾಡಿಕೊಂಡಿರುವ ವ್ಯಕ್ತಿಯಾದ್ದರಿಂದ, ಹೆಚ್ಚು ಸ್ನೇಹಿತೆಯಂತೆಯೇ ತೋರುತ್ತಿದ್ದಳು. ಲಘುವಾದ ಪುಟ್ಟ ದೇಹ, ಮಾತನಾಡುವಾಗ ಮಂದಸ್ಮಿತ, ಉಳಿದ ಕ್ಷಣ ಧ್ಯಾನಸ್ಥ ಮೌನ. ಆಹಾರದಲ್ಲಿ ಅತ್ಯಂತ ಶಿಸ್ತು. ದೇಹಕ್ಕೂ ಮನಸ್ಸಿಗೂ - ತನ್ನೊಳಗೆ ಇಳಿಸಿಕೊಳ್ಳುವ ಪ್ರತಿಯೊಂದು ವಿಷಯದಲ್ಲೂ ಅದ್ಭುತ ಕಂಟ್ರೋಲ್. ಕಾಶೀ ಗಲ್ಲಿಗಳಲ್ಲಿ ಒಟ್ರಾಶಿ ಒಂದಾದ ಮೇಲೊಂದು ಚಾಟ್ಸ್ ಗಳನ್ನ ನಾವು ತಿನ್ನುತ್ತಿದ್ದರೆ, ಬಿಸಿಬಿಸಿ ಕೆನೆಹಾಲ ಕುಡಿದು, "ಎಷ್ಟು ಲಾಯ್ಕ್ ಇತ್ತ" ಎಂದು ಮನಸ್ಪೂರ್ತಿಯಾಗಿ ತೃಪ್ತಿಯನ್ನು ವ್ಯಕ್ತಪಡಿಸುತ್ತಿದ್ದ ಸರಳ ವ್ಯಕ್ತಿ. ತನ್ನ ಪಾಲಿಗೆ ಸಿಕ್ಕ ಮಹಾಕುಂಭಮೇಳದ ಯೋಗ, ಯಾತ್ರೆಯುದ್ದಕ್ಕೂ ತನಗೆ ಸಿಗುತ್ತಿರುವ ಅನುಭೂತಿಗಳ ಕುರಿತಾದ ಸಂತೃಪ್ತಿ, ಎಲ್ಲವೂ ಒಳ್ಳೇದಾಗಲೆಂಬ ಆಶಯ ಮತ್ತು ಇತರರ ಕುರಿತು ಕಾಳಜಿಯ ಮಾತು ಇದಿಷ್ಟು ಬಿಟ್ಟು ಒಂದೇ ಒಂದು ನಕಾರಾತ್ಮಕ ಪದ ಕೂಡ ಅವಳ ಬಾಯಲ್ಲಿ ಬಂದದ್ದಿಲ್ಲ. ಮಿತಭಾಷಿಯಾದ ಅವಳ ಮಾತಿನ ಧಾಟಿಯಲ್ಲಿ ಅದೇನೋ ಆಕರ್ಷಣೆ. ಪ್ರಯಾಗರಾಜ್ ನಲ್ಲಿ ಒಂದು ಕ್ಷಣವೂ ದಂಡ ಮಾಡದೇ ಸುತ್ತೋಣ ಎಂಬ ನನ್ನ ಮನಸ್ಸಿನ ಒತ್ತಾಸೆಗೆ, ಅದೇ ಉತ್ಸುಕತೆ ಅವಳಲ್ಲಿಯೂ ಕಂಡಿದ್ದೆ. ೭-೮ ಡಿಗ್ರಿ ಚಳಿಯಲ್ಲಿ, ಬೆಳಿಗ್ಗೆ ೫ ಗಂಟೆಗೆ ಎದ್ದು ಕುಂಭ ಮೇಳ ಓಡಾಡಿಯೇ ಬಿಡೋಣ್ವ ಎಂದು ಮಾತನಾಡಿಕೊಂಡರೆ ಅದಕ್ಕೂ ಜೈ ಎಂದು ಖುಷಿಯಿಂದ ಕೈ ಎತ್ತಿದವಳು. ಹೋಗಿದ್ದು ೧೪೪ ವರ್ಷಗಳಿಗೆ ಒಮ್ಮೆ ಮಾತ್ರ ಸಿಗುವ ಮಹಾಕುಂಭಮೇಳ ಯಾತ್ರೆಗೆ. ಒಂದೊಂದು ಕ್ಷಣವೂ ಅತ್ಯಮೂಲ್ಯ ಮತ್ತು ವಿಶಿಷ್ಟ. ಲಕ್ಷೋಪಾದಿ ಜನರು ಹರಿದು ಬಂದಿದ್ದ ಊರಿನಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳ ತಲುಪುವುದೇ ಹರಸಾಹಸ. ಆ ತ್ವರಿತ ದಿನಚರಿಗಳ ಮಧ್ಯೆ ಏನೇನೂ ಕಡಿಮೆಯಾಗದ ನಮ್ಮಗಳ ಕತೆ, ಹರಟೆ, ನಗು, ತಮಾಷೆ.
ನನಗೆ ಸಂಗಡಿಗರೆಲ್ಲಾ ಒಬ್ಬರಿಗಿಂತ ಒಬ್ಬರು ಸಾಧಕರು, ಎಲ್ಲರದ್ದೂ ಅತಿಮಾನುಷ ಶಕ್ತಿ ಅವರವರದ್ದೇ ವೃತ್ತಿಯಲ್ಲಿ. ವಯಸ್ಸಿನಲ್ಲಿ ಅನುಭವದಲ್ಲಿ ಎಲ್ಲರೂ ನನಗಿಂತ ಹಿರಿಯರು. ಅವರುಗಳಿಂದ ಸಿಕ್ಕ ಮಾರ್ಗದರ್ಶನ ಮತ್ತು ಅನುಭವ ಕಥನ, ನನ್ನ ಪಾಲಿಗೆ ಸಿಕ್ಕ ಕುಂಭಮೇಳದ ಅನುಭವವನ್ನು ಮತ್ತಷ್ಟು ಉತ್ಕೃಷ್ಟವಾಗಿಸಿತು. "ಶೈಲಕ್ಕಂಗೆ ಯೋಗ ಧ್ಯಾನಗಳಲ್ಲಿ ಹೆಚ್ಚು ಆಸಕ್ತಿ" ಇದು ನನ್ನ ಗೆಳತಿ, ಬಂಧು ಭವ್ಯಾಳಿಂದ ಸಿಕ್ಕ - ಶೈಲಕ್ಕನ ಕುರಿತಾದ ಮೊದಲ ಪರಿಚಯ. ನನ್ನ ಯೋಗಾಭ್ಯಾಸದ ದಿನಚರಿ, ಸಸ್ಯಜನ್ಯ ಆಹಾರ ಮತ್ತು ಜೀವನ ಪದ್ಧತಿ, ಪ್ಲಾಸ್ಟಿಕ್ ವಸ್ತುಗಳ ಕಡಿಮೆಗೊಳಿಸುವ, ಕಡಿಮೆ ವಸ್ತುಗಳಲ್ಲಿ ಬದುಕುವ ನನ್ನ ಅಭ್ಯಾಸಗಳ ಬಗ್ಗೆ ಎಲ್ಲಿಲ್ಲದ ಆಸಕ್ತಿಯಿಂದ ಕೇಳುತ್ತಲಿದ್ದಳು ಅವಳು. ಯೋಗಾಭ್ಯಾಸದ ನಂತರದ ಹಂತಗಳನ್ನ, ಸಿಕ್ಕ ಸಿಕ್ಕ ಸಂದರ್ಭಗಳಲ್ಲಿಯೇ, ಚಿಕ್ಕಪುಟ್ಟ ಮಾತುಕತೆಗಳಲ್ಲಿಯೇ ಯಾವುದೋ ಒಂದು ಗುರುವೊಬ್ಬರು ನನ್ನ ಮುಂದೆ ಇದ್ದು ಅಧಿಕೃತವಾಗಿ ಉಪದೇಶಿಸುತ್ತಿದ್ದಾರೆ ಅನ್ನುವ ಮಟ್ಟಿಗೆ ಸ್ಪಷ್ಟವಾಗಿ ತಿಳಿಸಿಕೊಟ್ಟ ಗುರುವಾಕೆ. ಮೂರು ದಿನದಲ್ಲಿ ಮನಸ್ಸು ಗೆದ್ದುಬಿಟ್ಟಿದ್ದಳು ಶೈಲಕ್ಕ. ನನ್ನದು ಪಕ್ಕಾ ಸಾಗರ ಹವ್ಯಕ ಭಾಷೆ, ಅವಳದ್ದು ಕೋಟಾ ಕನ್ನಡ. ಭಾಷಾ ವಿನಿಮಯದಿಂದ ಹಿಡಿದು, ಅವಳ ಪ್ರತಿಯೊಂದು ನಡೆಯನ್ನು ಯಾಕೋ ಗಮನಿಸುವಾ ಅನ್ನುವ ವಿಚಿತ್ರ ಆಕರ್ಷಣೆ ಅವಳೆಡೆಗೆ. 'ಆನಂದ' ಅವಳೊಡನೆ ಇದ್ದಷ್ಟು ಸಮಯವೂ ಅನುಭವಕ್ಕೆ ಬರುತ್ತಿತ್ತು. ನಮ್ಮ ಹವಿಗನ್ನಡದಲ್ಲಿ ಹೇಳುವುದಾದರೆ, ನಾನು ಅವಳನ್ನ ಸೊನಕಂಡೇ ಇದ್ದೆ :D ಇಂತಿಪ್ಪ ಶೈಲಕ್ಕ ಅಸಾಮಾನ್ಯಳು ಎಂದು ತಿಳಿಯುವಷ್ಟರಲ್ಲಿ, ಸಮಯ ಮೀರಿ ಹೋಗುತ್ತದೆ ನನ್ನ ಪಾಲಿಗೆ ಎಂದು ಕನಸು ಮನಸ್ಸಿನಲ್ಲಿಯೂ ಭಾವಿಸಿರಲಿಲ್ಲ ನಾನು!
ಮಹಾಕುಂಭಮೇಳಕ್ಕೆ ಹೋಗುವ ಅಪರೂಪದಲ್ಲಿ ಅಪರೂಪದ ಯೋಗ ಅವಳಿಗೆ ಸಿದ್ಧಿಸಿದ್ದ ಖುಷಿಯ ಜೊತೆಗೆ, ಯಾತ್ರೆಯುದ್ದಕ್ಕೂ ಶೈಲಕ್ಕನಿಗೆ ಅವಳ ನಂಬಿಕೆಗೆ ಪುಷ್ಟಿಯಂಬಂತೆ,ಒಂದೊಂದೇ ಅದೃಷ್ಟ ಅವಳೆಡೆಗೆ ಬರುತ್ತಲೇ ಇತ್ತು. ಬಲವಾಗಿ ನಂಬುವ ಕಾಶೀ ವಿಶ್ವನಾಥನ ಮಂದಿರದಲ್ಲಿ, ಮಹಾದೇವನ ಮುಟ್ಟಿ ನಮಸ್ಕರಿಸುವಾಗ, ಪ್ರಸಾದದ ಮಾಲೆ ಅವಳ ಕೊರಳಿಗೇ ಬಂದು ಬಿದ್ದಿದ್ದು, ಅವಳ ಸಂತೋಷದ ಕಟ್ಟೆಯೊಡೆದು ಅಲ್ಲಿಯೇ ಕಣ್ಣೀರಾಗಿದ್ದಳು ಶೈಲಕ್ಕ. ಮಹಾಕುಂಭಮೇಳಕ್ಕೆ ಇನ್ನಷ್ಟು ಸಮಯವನ್ನು ಇಡಬೇಕಿತ್ತೇನೋ ಎಂಬ ಜಿಜ್ಞಾಸೆಯಲ್ಲಿ ಹೋದ ನಮಗೆ, ಹೋಗಿ ತಲುಪಿದ ದಿನ ಮಧ್ಯಾಹ್ನದಿಂದ ಹಿಡಿದು, ವಾಪಸು ವಿಮಾನಯಾನಕ್ಕೆ ಮರಳುವ ದಿನದ ಬೆಳಗು ಸೇರಿದಂತೆ, ಮೂರು ದಿನಗಳ ಕಾಲ ಬಿಟ್ಟೂಬಿಡದೇ, ಮೂರು ಪುಣ್ಯ ನದಿಗಳು ಸೇರುವ ತ್ರಿವೇಣಿ ಸಂಗಮದಲ್ಲಿ ಕುಂಭಸ್ನಾನ ಮಾಡುವ ಅವಕಾಶ ಸಿಕ್ಕಿದ್ದು ನಮ್ಮೆಲ್ಲರ ಪಾಲಿನ ಪುಣ್ಯ. ಅದನ್ನೂ ಕೂಡ ವಿಶೇಷ ಅನುಷ್ಠಾನವಿಟ್ಟುಕೊಂಡ ನಮ್ಮ ಪ್ರೀತಿಯ ಸಕಾಲಿಕ ಉಡುಪರು, ನಮಗೂ ಮತ್ತು ನಾವಿರುವ ಈ ಇಡೀವಿಶ್ವದ ಸಕಲ ಜೀವಚರಗಳಿಗೂ ಒಳಿತಾಗಲಿ ಎಂಬ ಸಂಕಲ್ಪ ಪೂಜೆಯೊಂದಿಗೆ ಪ್ರಸನ್ನಗೊಳಿಸಿದ್ದು, ಶೈಲಕ್ಕನನ್ನೊಳಗೊಂಡಂತೆ ಎಲ್ಲರಿಗೂ ಅತೀವ ಸಂತೋಷ ತಂದಿತ್ತು. "ತನಗೆ ಈ ಜನ್ಮಕ್ಕೆ ಸಿಕ್ಕ ಅತ್ಯಂತ ದೊಡ್ಡ ವರವಿದು, ಇನ್ನೇನೂ ಬೇಡಲಾರೆ ನಾನು ದೇವರಲ್ಲಿ ಈ ಜನುಮಕೆ, ಶ್ರೇಷ್ಠ ಮುಕ್ತಿಯಿದು " ಎಂದು ಬಾಯಿತುಂಬ ಹೇಳುತ್ತಲೇ ಬಂದಿದ್ದಳು ಶೈಲಕ್ಕ. ಅವಳನ್ನು ಇನ್ನಷ್ಟು ಸಂತೋಷಪಡಿಸಬೇಕು ಎಂದು ಆ ಮಹಾದೇವ ನಿಶ್ಚಿಯಿಸಿಯೇ ಬಿಟ್ಟಿದ್ದ ಎಂದೆನಿಸುತ್ತದೆ. ೪ ಕಿಮೀ ಉದ್ದದ ಕ್ಯೂ ಇದ್ದ ಬಡೇ ಹನುಮಾನ್ ದೇವಾಲಯಕ್ಕೂ ನಮಗೆ ಸುಲಭವಾಗಿ ಸಿಕ್ಕ ದರ್ಶನ, ಅಂತಹ ಇಡೀ ಊರಿಗೆ ಊರೇ ಟ್ರಾಫಿಕ್ಕಿನಲ್ಲಿ ಮುಳುಗಿರುವಾಗ, ಯಾವುದ್ಯಾವುದೋ ಸಹಾಯಗಳು ದೊರಕುತ್ತಾ , ಪ್ರಯಾಗರಾಜ್ ನ ಕ್ಷೇತ್ರಪಾಲ ದೇವರುಗಳಾದ ವೇಣುಮಾಧವ, ನಾಗ ವಾಸುಕಿ, ಅಲೋಕಿ ದೇವಿಯ ದರ್ಶನ ನಮಗೆ ಆರಾಮದಲ್ಲಿ ಸಿಕ್ಕು, ನಂತರ ಕುಂಭಮೇಳದಲ್ಲೂ, ಸಾಧು ಸಂತರು, ನಾಗಾಸಾಧುಗಳು ಅಘೋರಿಗಳು ಎಲ್ಲರೂ ಸಿಕ್ಕು, ವಿಶಿಷ್ಟ ಆಶ್ರಮಗಳಿಂದ ಪ್ರಸಾದಗಳು ಸಿಕ್ಕು, ಅಲ್ಲಿಯ ವೈಭವಗಳನ್ನು ಚೆನ್ನಾಗಿ ನೋಡಿ, ಅನುಭವಿಸುತ್ತ ಕಳೆದು ಹೋಗುವ ಸುಖ! ಅದೂ ಕೂಡ ನಮಗಿದ್ದ ಕಡಿಮೆ ಸಮಯದಲ್ಲಿ! 'ಅನ್ಲೆಬಿಲೀವೇಬಲ್ ಲಕ್ಕು ನಮ್ದು' ಎಂದೇ ಮಾತನಾಡಿಕೊಂಡಿದ್ದೆವು ನಾವು. ಯಾತ್ರೆ ಮುಗಿಸಿ ಒಬ್ಬರಿಗೊಬ್ಬರು ಬೀಳ್ಕೊಡುವಾಗ ಹೊಸ ಸಂಬಂಧಿಕರ ಮನೆಗಳು ಹುಟ್ಟುಕೊಂಡಿದ್ದವು ನಮಗೆ, ಮುಂದಕ್ಕೆ ಒಬ್ಬರಿಗೊಬ್ಬರು ಭೇಟಿ ಕೊಡಲು. "ನೀ ಸಿಕ್ಕಿದ್ದು ಭಾರೀ ಖುಷಿ ಆತು, ನಿನ್ನತ್ರ ಇನ್ನೂ ತುಂಬಾ ಕೇಳಕ್ಕಿದ್ದು, ಮೇದಲ್ಲಿ ಬತ್ತಿ ಅಲಾ, ಅವಾಗ ಸಿಗ್ತಿ, ನಿಮ್ಮನೆಗೆ ಬತ್ತಿ ಶೈಲಕ್ಕ" ಎಂದು ಹೇಳಿ ಟಾಟಾ ಮಾಡಿ ಹೊರಟಿದ್ದೆ ಅಲ್ಲಿಂದ.
ನಿಷ್ಕಲ್ಮಶ ಮನಸ್ಸಿನ ಶೈಲಕ್ಕ, ಮಹಾಕುಂಭ ಮೇಳದ ಯಾತ್ರೆ ಮುಗಿಸಿ, ಮನೆ ತಲುಪಿ, ತನ್ನ ಕುಟುಂಬದವರೆಲ್ಲರಿಗೂ ತನ್ನಾಸೆಯ ತಣಿವನ್ನ ಅತ್ಯಂತ ಆಸ್ಥೆಯಿಂದ ವ್ಯಕ್ತಪಡಿಸಿ, ಯಾತ್ರೆಯ ಸಂತುಷ್ಟಿಯನ್ನ, ನಾವು ಸಂಗಡಿಗರ ಕುರಿತಾಗಿಯೂ ಬಾಯಿತುಂಬಾ ಹೇಳಿ, ಮಗಳೊಡನೆ ಫೋನಿನಲ್ಲಿ ಮಾತನಾಡುತ್ತಿರುವಾಗಲೇ, ದೇವರಕೋಣೆಯಲ್ಲಿ ಕುಸಿದು ಬಿದ್ದು ದೇಹತ್ಯಾಗ ಮಾಡಿದರು. ಈ ಸುದ್ದಿ ಆಗಷ್ಟೇ ಜೊತೆಜೊತೆಯಲ್ಲಿ ಮೂರು ದಿನಗಳ ಕಾಲ ಪ್ರಯಾಣ ಮುಗಿಸಿ, ಮನಸ್ಸನ್ನು ಲೌಕಿಕ ಲೋಕಕ್ಕೆ ಸಜ್ಜುಗೊಳಿಸಿಕೊಳ್ಳುತ್ತಿದ್ದ ನಮಗೆಸಿಕ್ಕಾಗ ಹೇಗೆನಿಸಬೇಡ!? ತನ್ನ ಆಯುಷ್ಟ ೫೮ ವರ್ಷ ಎಂದು ನಾಲ್ಕು ವರ್ಷಗಳ ಹಿಂದೆ ಸಂಬಂಧಿಯೊಬ್ಬರ ಬಳಿ ಹಂಚಿಕೊಂಡವರು, ಇಚ್ಛಾಮರಣಿಯಂತೆ ೫೮ ನೆಯ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದ ಹಾಗೇಯೇ ಕೊನೆಗೊಳಿಸಿದರೆ!? ವೈದ್ಯಕೀಯವಾಗಿ ಹೃದಯಾಘಾತವದು. ಅವಳ ಆಧ್ಯಾತ್ಮಿಕ ನಂಬಿಕೆಗೆ, ಅವಳ ಪಾಲಿನ ಶ್ರೇಷ್ಠ ಮುಕ್ತಿ!
೫೮ ವರ್ಷದ ಶೈಲಜಾ ಅಡಿಗ, ದಕ್ಷಿಣ ಕನ್ನಡ ಜಿಲ್ಲೆಯ, ಕೋಟ ಊರಿನ ಶ್ರೀ ಹಿರೇ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಸದಾಶಿವ ಅಡಿಗರ ಪತ್ನಿ. ಒಬ್ಬ ಮಗ, ಒಬ್ಬ ಮಗಳು, ಪುಟ್ಪುಟಾಣಿ ಈಗಷ್ಟೇ ವರ್ಷ ದಾಟುತ್ತಿರುವ ಅವಳಿಜವಳಿ ಮೊಮ್ಮಕ್ಕಳಿಗೆ ನಲುಮೆಯ ಅಜ್ಜಿ. ಭಾರೀ ಶಿಸ್ತಿನ ಜೀವನ. ದೇವಸ್ಥಾನದ ಅರ್ಚಕರ ಮನೆ ಎಂದರೆ ಗೊತ್ತಲ್ಲಾ, ಸದಾ ಒಂದಲ್ಲ ಒಂದು ಧಾರ್ಮಿಕ ಕಾರ್ಯಕ್ರಮಗಳು, ಮನೆಗೆ ಹೋಗಿಬರುವವರು ಎನ್ನುತ್ತಾ ದಿನನಿತ್ಯ ನೂರಾರು ಜನರ ಜೊತೆ ಒಡನಾಡಿದವರು. ತೂಗಿದರೆ ೪೦ ಕೇಜಿಯೂ ಇದ್ದಾರೋ ಇಲ್ಲವೋ, ಆದರೆ ನೂರು ಜನರಿಗೆ ಅಡುಗೆ ಮಾಡುವಷ್ಟು ಸಾಮರ್ಥ್ಯ ಇವರಿಗಂತೆ! ತಮ್ಮ ಪಾಳಿಯ ದೇವಸ್ಥಾನದ ಕಾರ್ಯವೊಂದೇ ಸಮಯವಲ್ಲದೆ, ಸದಾ ಯಾರದ್ದೇ ಪಾಳಿ ಇದ್ದರೂ ಇವರ ಸಹಾಯದ ಕೈ ಇದ್ದೇ ಇರುತ್ತಿತ್ತು ಎನ್ನುತ್ತಾರೆ ಅವರ ಸುತ್ತಮುತ್ತಲಿನ ಜನರು. ೩.೩೦ ಯಿಂದ ಇವರ ದಿನಚರಿ ಪ್ರಾರಂಭಗೊಂಡು, ಮಧ್ಯಾಹ್ನ ಅನುಕೂಲವಾದರೆ ಒಂದು ಗಳಿಗೆಯ ನಿದ್ದೆ ಇಲ್ಲವಾದಲ್ಲಿ ಇಡೀ ದಿನಕ್ಕೂ ತನ್ನ ಪಾದರಸದಂತಹ ಚಟುವಟಿಕೆಗಳಲ್ಲಿಯೇ ನಿರತ ವ್ಯಕ್ತಿ. ಈ ಬಿಡುವಿಲ್ಲದ ಜೀವನಶೈಲಿಯಲ್ಲೂ ಪುಸ್ತಕದ ಲೋಕದೊಳಗೆ ಹೊಕ್ಕಿಕೊಂಡಿರುತ್ತಿದ್ದ ಜ್ಞಾನದಾಹಿಯಂತೆ ಶೈಲಕ್ಕ. ತಾನು ಭಕ್ತಿಯೋಗದಲ್ಲಿಮುಳುಗುವುದಷ್ಟೇ ಅಲ್ಲ, ೬೦ಕ್ಕೂ ಹೆಚ್ಚು ಜನರನ್ನ ಹುರಿದುಂಬಿಸಿ ಭಗವದ್ಗೀತೆ ಕ್ಲಾಸಿಗೆ ಸೇರಿಸಿ ಅವರೆಲ್ಲ ಕಲಿತು ಅದರ ಪ್ರಯೋಜನ ಪಡೆಯುವಂತೆ ಮಾಡಿದವರು. ಇನ್ನು ಭಜನೆಗಳ ಸಂಘಗಳ ಬಗ್ಗೆ ಕೇಳುವುದೇ ಬೇಡ. ಸತ್ಸಂಗ ಅಂದರೆ ಇದೇ ತಾನೇ? ಲೌಕಿಕ ಸಂಸಾರವನ್ನೂ ನಿಭಾಯಿಸಿಕೊಂಡು, ಧ್ಯಾನದ ಮೂಲಕ ತನ್ನದೇ ಆದ ಪ್ರತ್ಯೇಕ ಲೋಕವನ್ನೇ ಸೃಷ್ಟಿಸಿಕೊಂಡಿದ್ದರು. ಈ ನಿಯಂತ್ರಣ ಮತ್ತು ಸಾಮರ್ಥ್ಯ ಸಾಮಾನ್ಯ ಮನುಷ್ಯರಿಂದ ಸಾಧ್ಯವಿಲ್ಲ. ನಾನೇ ಕೇಳಿದಂತೆ ಶೈಲಕ್ಕನ ಬಳಿ ಎಲ್ಲರೂ ತಮ್ಮ ತಮ್ಮ ಸಮಸ್ಯೆಗಳನ್ನು ಬೇಸರಗಳನ್ನು ಹೇಳಿಕೊಂಡು ಅವರಿಂದ ಸಿಗುವ ಸಮಾಧಾನದ ಮಾತಿನಿಂದ, ಪ್ರೋತ್ಸಾಹದಿಂದ ತಮ್ಮ ಬೇಸರ ಮರೆತೇ ಹೋಗುತ್ತಿದ್ದರಂತೆ. ಯಾರೊಬ್ಬರ ವಿಷಯವನ್ನೂ ಇತರರೊಂದಿಗೆ ಚರ್ಚಿಸುವುದಾಗಲೀ ಅಥವಾ ಉಡಾಫೆಯಿಂದ ಮಾತನಾಡಿದ ದಾಖಲೆಯೇ ಇಲ್ಲವಂತೆ ಈ ಶೈಲಕ್ಕನದು. ಸತ್+ಜನ ಎನಿಸಿಕೊಂಡು, ತನಗೂ ಒಪ್ಪುವಂತೆ, ಸಮಾಜಕ್ಕೂ ಒಪ್ಪುವಂತೆ ಬದುಕುವುದು ಎಂದರೆ ಸಾಮಾನ್ಯದ ವಿಷಯವೇ!? ನಾಲ್ಕೈದು ವರ್ಷಗಳ ಕೆಳಗೆ, ಕಾಶೀಗೆ ಹೋದಾಗ, ಅಲ್ಲಿ ಭೇಟಿಯಾದ ಸ್ವಾಮೀಜಿಯವರ ಆದೇಶದಂತೆ, ಭಗವದ್ಗೀತೆ, ಗಜೇಂದ್ರ ಮೋಕ್ಷ, ಅನುಸ್ಮೃತಿ ಇತ್ಯಾದಿಗಳನ್ನೊಳಗೊಂಡ ಒಂದು ಪುಸ್ತಕವನ್ನು ಕನ್ನಡದಲ್ಲಿ ಬರೆದು, ೧೦೦೦ ಪ್ರತಿಗಳ ಪ್ರಕಟಿಸಿ, ಕಾರ್ಯಕ್ರಮವೊಂದನ್ನು ಮಾಡಿ ೧೦೦೦ಕ್ಕೂ ಹೆಚ್ಚು ಜನರ ಕರೆದು ಊಟ ಹಾಕಿ ಉಚಿತವಾಗಿ ಈ ಪುಸ್ತಕವನ್ನು ಹಂಚಿದ್ದರಂತೆ. ಎಲ್ಲರೂ ಈ ವಿಷಯಗಳ ಸದ್ಪ್ರಯೋಜನ ಪಡೆಯಲಿ ಎಂದು! ಪುಣ್ಯಸಂಗ್ರಹ ಅದೆಷ್ಟಿರಬಹುದು ಮಾರಾಯ್ರೆ ಇವರದ್ದು!
ಮೂರು ದಿನಗಳ ಮಟ್ಟಿಗೆ ನನ್ನ ಬದುಕಿನಲ್ಲಿ ಒಂದು ವ್ಯಕ್ತಿ ಬಂದು, ಒಳ್ಳೆಯ ಗೆಳತಿಯಂತೆ ಸಮಯ ಕಳೆದು, ಒಳ್ಳೆಯ ಗುರುವಾಗಿ ಹೊಸ ವಿಚಾರಗಳ ತಿಳಿಸಿ, ಇದ್ದಕ್ಕಿದ್ದಂತೆ ಹೊರಟು ಬಿಡುತ್ತಾರೆ ಎಂಬುದ ಕನಸುಮನಸ್ಸಿನಲ್ಲಿಯೂ ಎಣಿಸಿರಲಿಲ್ಲ, ಇನ್ನೂ ಬೇಕಿತ್ತು ಶೈಲಕ್ಕ ಎನ್ನುವ ಭಾವ. ಇನ್ನು ಅವಳ ಕರ್ಮಯೋಗದ ಪ್ರೇರಣೆ ತೆಗೆದುಕೊಳ್ಳುವುದೊಂದೇ ನಮಗೆ ಉಳಿದಿರುವುದು ಇಲ್ಲಿ. ಆದರೆ ಅಷ್ಟು ಇಷ್ಟಪಟ್ಟು ಯಾತ್ರೆ ಮಾಡಿ 'ಮಹಾಕುಂಭಮೇಳ'ದೊಂದಿಗೆ ಈ ಲೌಕಿಕ ಲೋಕದಿಂದ ಬಿಡುಗಡೆ ಅದೂ ಕೂಡ ಯಾವುದೇ ನೋವಿಲ್ಲದೆ, ಅಷ್ಟು ಸುಂದರವಾಗಿ ಪಡೆದದ್ದು ಕಂಡು ಮತ್ತೆ ಮತ್ತೆ ಅನ್ನಿಸುವುದು - 'ಶರಣರ ಸಾವು ಮರಣದಲಿ ನೋಡು' ಎಂದು!
#mahakumbh2025 #salvation
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ