ಮಂಗಳವಾರ, ಜುಲೈ 5, 2016

ಮಳೆಗಾಲಕ್ಕೆ ನಮ್ಮ ಮಕ್ಕಳು ರೇಡಿಯೇ?

ಮಳೆಗಾಲವೆಂದರೆ ತುಂತುರು ಹನಿ, ಮಣ್ಣಿನ ಆಹ್ಲಾದಕರ ವಾಸನೆ, ತಣ್ಣನೆಯ ಗಾಳಿ, ನೋಡಲು ಸುಂದರವಾಗಿ ಕಾಣುವ ತುಂಬಿಕೊಂಡ  ಕೆರೆ-ಕೊಂಡಿಗಳು, ಎಲ್ಲೆಲ್ಲೂ ಹಸಿರು, ಮಳೆಗೆ ಮೈ ಒಡ್ಡಿ ಆಡುವ ಆಟ, ನೀರು ಎರಚಾಟ, ಮಕ್ಕಳಿಗೆ ಪೇಪರ್ ದೋಣಿ ಮಾಡಿ ನೀರಿಗೆ ಬಿಡುವ ಮಜಾ, ಹೊರಗೆ ಮಳೆ ನೀರಿನ ತಟ ಪಟ ಸದ್ದು, ಒಳಗೆ ಬಿಸಿ ಬಿಸಿ ಬಜ್ಜಿ ಮತ್ತು ಕಾಫಿ...ಹೀಗೆ ಮುಂದುರೆಯುತ್ತದೆ ಮಳೆಗಾಲದ ಸಂತಸದ ಕ್ಷಣಗಳ ಪಟ್ಟಿ.. ಅಂತೆಯೇ, ಮಳೆಗಾಲವೆಂದರೆ, ಒಳಗೆ ಎತ್ತಿಟ್ಟಿದ್ದ ಛತ್ರಿ, ರೈನ್ ಕೋಟ್ ಎಲ್ಲ ಹೊರತೆಗೆಯುವ ಸಮಯ, ಒಣಗದ ಬಟ್ಟೆಗಳು, ತಣ್ಣನೆಯ ನೆಲ, ಬೆಂಡಾದ ಬಾಗಿಲುಗಳು, ಹೆಚ್ಚಾದ ಸೊಳ್ಳೆ ಕೀಟಗಳು, ಹಸಿ ಅಂಶದ ಬೂಸ್ಟ್ ಶೇಖರಗೊಂಡ ಗೋಡೆ ಮತ್ತು ಹಾಸಿಗೆಗಳು, ಕೊರೆಯುವ ಚಳಿ, ಮನೆಯಲ್ಲಿ ಒಬ್ಬರ ನಂತರ ಮತ್ತೊಬ್ಬರು ಮಲಗಲು ಅಣಿಯಾಗುವ ಕೆಮ್ಮು ನೆಗಡಿ ಜ್ವರ! ಅದರಲ್ಲೂ ಮುಖ್ಯವಾಗಿ ಮಕ್ಕಳಿಗೆ ಮಳೆಗಾಲ ಸಮೀಪಿಸಿತೆಂದರೆ ಆಟದ ಜೊತೆಗೆ ಅನಾರೋಗ್ಯದ ಪರದಾಟ! 


ಮಳೆಗಾಲದಲ್ಲಿ ಅನಾರೋಗ್ಯ - ಪ್ರಚೋದನಾ ಅಂಶಗಳು :

 ಮಳೆಗಾಲ ಶುರುವಾಯಿತೆಂದರೆ ಸಹಜವಾಗಿಯೇ, ವಾತಾವರಣದಲ್ಲಿ ತಾಪಮಾನದ ವ್ಯತ್ಯಾಸ ಉಂಟಾಗುತ್ತದೆ, ಶುಷ್ಕತೆ ಕಡಿಮೆಯಾಗಿ ಎಲ್ಲೆಡೆ ತೇವಾಂಶ ಗಾಳಿಯಲ್ಲಿ ಸೇರಿಕೊಳ್ಳುತ್ತದೆ. ಅದರಲ್ಲೂ ಮುಖ್ಯವಾಗಿ, ಮಳೆಗಾಲದ ತಂಪಾದ ವಾತಾವರಣ, ವೈರಸ್ ಮತ್ತು ಬ್ಯಾಕ್ಟೀರಿಯಾ ಗಳ ಉತ್ಪತ್ತಿ ಹಾಗೂ ಹರಡುವಿಕೆಗೆ ಸೂಕ್ತವಾಗಿರುತ್ತದೆ. ಈ ರೀತಿಯಿಂದಾಗಿ ಗಾಳಿಯಿಂದಲೇ ಅನೇಕ ರೀತಿಯ ರೋಗಾಣುಗಳು ಪಸರಿಸುತ್ತದೆ. ಇದರ ಜೊತೆಯಲ್ಲಿ ಮಳೆಗಾಲದ ಸಮಯದಲ್ಲಿ ಅಲ್ಲಲ್ಲಿ ಕಾಣ ಬರುವ ನಿಂತ ನೀರು, ಮಲೇರಿಯಾ ಡೆಂಗ್ಯೂ ಇನ್ನಿತರ ರೋಗ ಹರಡುವ ಸೊಳ್ಳೆ ಹಾಗೂ ಇತರ ಸೂಕ್ಶ್ಮಾಣು ಜೀವಿಗಳಿಗೆ ತಳಿ ಉತ್ಪಾದನೆಗೆ ಸಹಕಾರಿಯಾಗಿರುತ್ತದೆ. ಮಳೆಗಾಲದಲ್ಲಿ ಸಿಕ್ಕ ಸಿಕ್ಕಲ್ಲಿ ಕಾಲು ಹಾಕಿ ನೀರಾಡುವುದು ಮಕ್ಕಳಿಗೆ ಒಂದು ಮೋಜಿನ ಸಂಗತಿ, ಆದರೆ ಅದೇ ನೀರಿನಿಂದಲೇ ಥಂಡಿ, ಜ್ವರ, ಕಾಲೆರಾ, ಟೈಫಾಯ್ಡ್, ಅತಿಸಾರ ಬೇಧಿ, ವಾಂತಿ ಮತ್ತು ಕೆಲವು ಚರ್ಮ ಖಾಯಿಲೆಗಳು ಬರುತ್ತವೆ. ಗಾಳಿಯಲ್ಲಿರುವ ತೇವಾಂಶದಿಂದ ಉಂಟಾಗುವ ಫಂಗಸ್ ನ ಪರಿಣಾಮವಾಗಿ, ನಮ್ಮ ಆಹಾರ ಪದಾರ್ಥಗಳೂ ಕೂಡ  ಬೂಸ್ಟ್ ಹಿಡಿಯಲು ಪ್ರಾರಂಭಿಸಿ, ಅವು ಕಲುಷಿತಗೊಳ್ಳುತ್ತವೆ. ಗಮನಿಸದೇ, ನಾವು ಬಳಕೆ ಮಾಡುವ ವಿಷಮಕಾರಿ ಆಹಾರ ಪದಾರ್ಥಗಳಿಂದ ನಮ್ಮ ಆರೋಗ್ಯದಲ್ಲಿ ಏರು ಪೇರಾಗುವ ಸಾಧ್ಯತೆಗಳು ಹೆಚ್ಚು. 

ಸಾಮಾನ್ಯವಾಗಿ ಶಾಲಾ ಮಕ್ಕಳು ಮಳೆಗಾಲದ ಸಮಯದಲ್ಲಿ ಹುಷಾರು ತಪ್ಪುವುದು ಜಾಸ್ತಿ. ಏಕೆಂದರೆ ವಾತಾವರಣದಲ್ಲಿನ ಆರ್ದ್ರತೆ ಒಂದು ಮಗುವಿಗೆ ಉಂಟಾಗಿರುವ ಥಂಡಿ ಜ್ವರದ ರೋಗಾಣುಗಳನ್ನು ಸುಲಭವಾಗಿ ಗಾಳಿಯ ಮುಖಾಂತರ ಬೇರೆ ಮಕ್ಕಳಿಗೆ ಪಸರಿಸಲು ಅನುಕೂಲ ಮಾಡಿಕೊಡುತ್ತದೆ. ಮೊದಲೇ ಥಂಡಿ ಇನ್ನಿತರ ಸೋಂಕು ಖಾಯಿಲೆಗಳಿಂದ ಬಳಲುತ್ತಿರುವ ಯಾವುದೇ ಮಗುವಿನ, ಸೀನು, ಕೆಮ್ಮು ಅಥವಾ ರೋಗಾಣು ಕೈಗಳಿಂದ ಮುಟ್ಟಿದ ವಸ್ತುಗಳ ಹಂಚಿಕೆಯಿಂದಾಗಿ ಜೊತೆಗಿರುವ ಬೇರೆ ಮಕ್ಕಳಿಗೆ ಅನಾರೋಗ್ಯ ಉಂಟಾಗಲು ಕಾರಣವಾಗುತ್ತದೆ. ಅದರಲ್ಲೂ ಪ್ರತಿರಕ್ಷಣಾ ಶಕ್ತಿಯನ್ನು ಇನ್ನೂ ಪಡೆದುಕೊಳ್ಳುತ್ತಿರುವ ಚಿಕ್ಕ ಮಕ್ಕಳಲ್ಲಿ ಈ ರೀತಿಯಾಗಿ ಹರಡುವ ರೋಗಗಳು ಪದೇ ಪದೇ ಮಕ್ಕಳು ಅನಾರೋಗ್ಯದಿಂದ ಒದ್ದಾಡುವಂತೆ ಮಾಡುತ್ತದೆ. 

  ಕೈಗೊಳ್ಳಬಹುದಾದ ಮುನ್ನೆಚ್ಚರಿಕಾ ಕ್ರಮಗಳು :

೧. ಮನೆಯ ಒಳಾಂಗಣ ಸ್ವಚ್ಛತೆ ಮತ್ತು ಮುನ್ನೆಚ್ಚರಿಕೆ  : 
       ಮನೆಯನ್ನು ಸಾಧ್ಯ ವಾದಷ್ಟು ಶುಷ್ಕವಾಗಿ ಹಾಗೂ ಸ್ವಚ್ಛವಾಗಿಡಬೇಕು. ಮನೆಯೊಳಗಿನ ತಾಪಮಾನವನ್ನು ಬದಲಾಯಿಸಲು ಸಾಧ್ಯವಿದ್ದರೆ, ಉದಾ. ಹೀಟರ್ ಬಳಕೆ, ಮಕ್ಕಳಿಗೆ ಅನುಕೂಲಕರವಾದ ತಾಪಮಾನಕ್ಕೆ ಹೊಂದಿಸಿಡಿ. ಇಲ್ಲದಿದ್ದ ಪಕ್ಷದಲ್ಲಿ, ಮಳೆಗಾಲದ ಶೀತ ಗಾಳಿಯನ್ನು ತಡೆಯಲು, ಕಿಟಕಿ ಬಾಗಿಲುಗಳನ್ನು ಮುಚ್ಚಿರಿ. ಆದರೆ, ಬೆಳಕಿನ ಸಮಯದಲ್ಲಿ ಸ್ವಲ್ಪ ಹೊತ್ತು ಸೂರ್ಯನ ಕಿರಣಗಳು ರೂಮಿನ ಒಳಗೆ ತಲುಪುವಂತೆ ಮತ್ತು ಸ್ವಲ್ಪ ಮಟ್ಟಿಗೆ ತಾಜಾ ಗಾಳಿಯು ಒಳಬರಲು ಅನುಕೂಲವಾಗುವಂತೆ ಕಿಟಕಿಯನ್ನು ತೆರೆದಿಡುವುದು ಒಳ್ಳೆಯದು. ಬಾಲ್ಕನಿಯಲ್ಲಿ ಗಿಡಗಳನ್ನು ಇಡುವ ತಟ್ಟೆಯಲ್ಲಿ ಅಥವಾ ಇನ್ನಿತರ ಪಾತ್ರೆಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಿ, ಹಸಿಯಾದ ಕಾಲೊರೆಸುವ ಮ್ಯಾಟ್ ಗಳನ್ನು ಆದಷ್ಟು ಗಾಳಿಗಿರಿಸಿ ಒಣಗಿಸಿಕೊಳ್ಳಿ. ಅಡುಗೆ ಮನೆ ಸಾಧ್ಯವಾದಷ್ಟು ಸ್ವಚ್ಛವಾಗಿರಲಿ. ಕಸದ ಬುಟ್ಟಿಯಿಂದ ಕಸ ವಿಲೇವಾರಿ ನಿಯಮಿತವಾಗಿರಲಿ. ಒದ್ದೆ ಬಟ್ಟೆ, ಮಕ್ಕಳ ಶೂ ಸಾಕ್ಸ್ ಗಳು, ಛತ್ರಿ ರೈನ್ ಕೋಟ್ ಇನ್ನಿತರ ಹಸಿ ತೇವಾಂಶದ ವಸ್ತುಗಳನ್ನು ಸಾಧ್ಯವಾದಷ್ಟು ಹೊರಗಿನ ಗಾಳಿ ಮತ್ತು ಬಿಸಿಲಿಗೆ ಒಣಗಿಸಿಕೊಳ್ಳಿ. ಇಲ್ಲವಾದಲ್ಲಿ ಅವುಗಳ ಮೇಲೆ ಬ್ಯಾಕ್ಟೀರಿಯ ಮತ್ತು ಫಂಗಸ್ ಉತ್ಪತ್ತಿ ಹೆಚ್ಚಾಗುತ್ತದೆ. 
        ಇನ್ನೊಂದು ಮುಖ್ಯ ಮುನ್ನೆಚ್ಚರಿಕೆಯೆಂದರೆ, ಮನೆಯಲ್ಲಿನ ಗೋಡೆಗಳಲ್ಲಿ ಬಿರುಕು ಇದ್ದರೆ, ಮಳೆಗಾಲದ ಸಮಯದಲ್ಲಿ, ಅದರಲ್ಲಿ ನೀರಿಳಿಯುವ ಸಾಧ್ಯತೆ ಹೆಚ್ಚು. ಇದರಿಂದಾಗಿ ಎಲೆಕ್ಟ್ರಿಕ್ ವಯ್ರ್ ಗಳು ಹಾದು ಹೋಗಿರುವ ಜಾಗದಲ್ಲಿ ನೀರಿನ ಪಸೆ ಉಂಟಾದರೆ, ವಿದ್ಯುತ್ ಅಪಘಾತಗಳಾಗುವ ಸಂಭವವಿರುತ್ತದೆ. ಆದ್ದರಿಂದಲೇ, ಇಂತಹ ಅವಘಡ ಸಂಭವಿಸದಂತೆ, ಬಿರುಕುಗಳನ್ನು ಮುಚ್ಚಿಸಿ ಮತ್ತು ಎಲೆಕ್ಟ್ರಿಕ್ ವಯ್ರ್ ಗಳು ಸಡಿಲಗೊಂಡು ನೇತು ಬೀಳದಂತೆ ಬೀಳದಂತೆ ತಕ್ಕದಾದ ವ್ಯವಸ್ಥೆ ಮಾಡಿರಿ. 


೨. ಮಕ್ಕಳಿಗೆ ಉಡುಪು ಮತ್ತು ಅದರ ಸ್ವಚ್ಛತೆ :
          ಮನೆಯವರು ಮತ್ತು ಮಕ್ಕಳು ಸ್ಸಾಧ್ಯವಾದಷ್ಟು ಒಣ ಬಟ್ಟೆಯನ್ನೇ ಧರಿಸಿ. ಹತ್ತಿಯಿಂದ ಮಾರ್ಪಾಡುಗೊಂಡ (ಕಾಟನ್) ಬಟ್ಟೆಗಳು ಮತ್ತು ಸ್ವಲ್ಪ ಸಡಿಲ ರೀತಿಯ ಬಟ್ಟೆಯನ್ನು ಮಕ್ಕಳಿಗೆ ಹಾಕಿ. ಲೆದರ್ ತರಹದ ಬಟ್ಟೆಗಳು ಮತ್ತು ಶೂ ಮಳೆಗಾಲಕ್ಕೆ ಸೂಕ್ತವಲ್ಲ. ಮನೆಯ ನೆಲವು ಥಂಡಿ ಪ್ರೌಕೃತಿಯದ್ದಾಗಿದ್ದರೆ, ಆದಷ್ಟು ಮಕ್ಕಳ ಕಾಲಿಗೆ ಸಾಕ್ಸ್ ಹಾಕಿ ಅವರನ್ನು ಬೆಚ್ಚಗಿಡಿ. ಮಕ್ಕಳನ್ನು ಹೊರಗಡೆ ಕರೆದೊಯ್ಯುವಾಗ ಸಾಧ್ಯವಾದಷ್ಟು ಕೈ ಕಾಲು ಕಿವಿಗಳನ್ನು ಮುಚ್ಚುವಂತಹ ಉದ್ದನೆಯ ತೋಳಿನ ಬಟ್ಟೆಯನ್ನೇ ಹಾಕಿ. ತಲೆಯನ್ನು ಸಂರಕ್ಷಿಸುವಂತಹ ಟೊಪ್ಪಿಹಾಕಿದರೆ ಉತ್ತಮ. ಆದಷ್ಟು ಕೆಸರಿನ ಜಾಗದಲ್ಲಿ ಮತ್ತು ನಿಂತ ನೀರಿನ ಜಾಗದಲ್ಲಿ ಮಕ್ಕಳು ಕಾಲು ಹಾಕದಂತೆ ಜಾಗ್ರತೆ ವಹಿಸಿ.  ಮಕ್ಕಳ ಶಾಲಾ ಸಮವಸ್ತ್ರ ಹಾಗೂ ಇನ್ನಿತರಬಟ್ಟೆಗಳನ್ನು ಡೆಟಾಲ್ ಅಥವಾ ಇತರೆ ನಂಜು, ರೋಗ ನಿವಾರಕಗಳನ್ನು ಹಾಕಿ ತೊಳೆಯಿರಿ. ಸೆಕೆ ಮತ್ತು ಚಳಿಯ ಅನುಭವವನ್ನು ಹೇಳಲು ತಿಳಿಯದಷ್ಟು  ಚಿಕ್ಕ ಮಗುವಿದ್ದರೆ, ಅಂತಹ ಮಕ್ಕಳನ್ನು ಗಮನಿಸಿಕೊಳ್ಳುತ್ತ ಅವರ ಬಟ್ಟೆ ಮತ್ತು  ಹೊದಿಕೆಯ ಕಡಿಮೆ ಮಾಡುವಿಕೆ ಬಗ್ಗೆ ತೀರ್ಮಾನಿಸಿ. ಏಕೆಂದರೆ ಮಳೆಗಾದಲ್ಲಿ ತಾಪಮಾನ ಒಂದೇ ರೀತಿಯಿರುವುದಿಲ್ಲ. 

೩. ಸೊಳ್ಳೆ ಮತ್ತು ಕೀಟಗಳಿಂದ ರಕ್ಷಣೆ :
          ಮನೆ ಮತ್ತು ಮನೆಮಂದಿಯನ್ನು ಸೊಳ್ಳೆ ಮತ್ತು ಇನ್ನಿತರ ಮಳೆಗಾಲದಲ್ಲಿ ಉದ್ಭವಾಗುವ ಕೀಟಗಳಿಂದ ಸಂರಕ್ಷಣೆ ಮಾಡುವುದು ಅತ್ಯಂತ ಪ್ರಮುಖವಾದ ಅಂಶ. ಹಸಿಯಾದ ಮರದಿಂದ ಮಾರ್ಪಟ್ಟ ಕಿಟಕಿ ಮತ್ತು ಬಾಗಿಲುಗಳಲ್ಲಿ, ಇರುವೆಗಳು ತಮ್ಮ ಮೊಟ್ಟೆ ಇಡಲು ಪ್ರಾರಂಭಿಸುತ್ತದೆ. ಈ ತರಹದ ಸೂಚನೆಯನ್ನು ಗಮನಿಸಿ ಕೀಟನಾಶಕಗಳನ್ನು ಸಿಂಪಡಿಸಬೇಕು. ಸಾಮಾನ್ಯವಾಗಿ ಸಂಜೆಯ ಸಮಯದಲ್ಲಿ ಸೊಳ್ಳೆಯು ಮನೆಯನ್ನು ಪ್ರವೇಶಿಸುತ್ತದೆ. ಈ ಸಮಯದಲ್ಲಿ ಆದಷ್ಟು ಕಿಟಕಿ ಬಾಗಿಲುಗಳನ್ನು ಹಾಕಿರಿ. ಸೊಳ್ಳೆ ಕಾಯಿಲ್ ಬಳಕೆಯಿಂದ ಅಲೆರ್ಜಿ ಆಗುವ ಸಾಧ್ಯತೆಗಳಿರುತ್ತದೆ. ಹಾಗಾಗಿ ಸೊಳ್ಳೆ ಪರದೆಯನ್ನು ಬಳಸುವುದು ಒಳಿತು. ಮನೆಯಲ್ಲಿರುವ ಕೂಲರ್, ಹೂವುಗಳನ್ನು ಹಾಕಿಡುವ ಹೂದಾನಿ, ಟಾಯ್ಲೆಟ್ ಪಿಟ್ ಮುಂತಾದ ಜಾಗಗಳಲ್ಲಿ ಸೊಳ್ಳೆಗಳು ಮೊಟ್ಟೆ ಇಟ್ಟು ತಮ್ಮ ಸಂತತಿಯನ್ನು ಜಾಸ್ತಿ ಮಾಡುತ್ತದೆ. ಆದ್ದರಿಂದ ಇವುಗಳೆಲ್ಲವುಗಳ ನಿಯಮಿತವಾದ  ಸ್ವಚ್ಛತೆ ಮತ್ತು ಬಚ್ಚಲು ಮನೆಯ ಬಾಗಿಲುಗಳನ್ನು ಹಾಕುವ ರೂಢಿ ಮಾಡಿಕೊಳ್ಳುವುದು ತುಂಬಾ ಫಲಕಾರಿ. 

೪. ಆಹಾರ ಸಂರಕ್ಷಣೆ ಮತ್ತು ಕುಡಿಯುವ ನೀರಿನ ಪ್ರಾಮುಖ್ಯತೆ :
               ಮಳೆ ಕಾಲದಲ್ಲಿ ಸಿಗುವ ತರಕಾರಿ ಹಣ್ಣುಗಳನ್ನು ಜಾಗರೂಕತೆಯಿಂದ ಎರಡು ಸಲ ತೊಳೆದು ಬಳಸುವುದು ಒಳ್ಳೆಯದು. ಅದರಲ್ಲೂ ಹಸಿ ತರಕಾರಿಗಳ ಸೇವನೆಯ ವಿಷಯದಲ್ಲಿ ಸ್ವಚ್ಛತೆಯ ಗಮನ ಅಗತ್ಯ. ಆದಷ್ಟು ಬಿಸಿ ಪದಾರ್ಥಗಳ ಸೇವನೆ ಸೂಕ್ತವಾದದ್ದು. ಮಳೆಗಾದಲ್ಲಿ ಮಕ್ಕಳಿಗೆ ಬಿಸಿಯಾದ ಹಾಲು, ಸೂಪ್, ಕಷಾಯ ಕೊಡುವುದು ಉತ್ತಮ. ವಿಟಮಿನ್ ಸಿ ಹೇರಳವಾಗಿರವ ಆಹಾರ ಮತ್ತು ಶುಂಠಿ, ತುಳಸಿ, ಜೇನುತುಪ್ಪ, ಅರಿಶಿನ ಈ ತರಹದ ದೇಹದಲ್ಲಿನ ನಂಜನ್ನು ನಿವಾರಿಸುವ ಗಿಡಮೂಲಿಕೆಗಳನ್ನು ಆಹಾರ ತಯಾರಿಕೆಯಲ್ಲಿ ಬಳಸಿದರೆ, ಹೆಚ್ಚಿನ ಸೋಂಕು ತೊಂದರೆಯನ್ನು ಕಡಿಮೆಯಾಗಿಸಬಹುದು. 
           ಇನ್ನೊಂದು ಮುಖ್ಯವಾದ ರೋಗ ತಡೆ ಹಿಡಿಯುವ ಎಚ್ಚರಿಕೆಯೆಂದರೆ, ಆದಷ್ಟು ಹೊರಗಡೆಯ ತಿಂಡಿ ಪದಾರ್ಥಗಳನ್ನು ಮಕ್ಕಳಿಗೆ ಕೊಡದಿರುವುದು. ಹೊರಗಿನ ಆಹಾರವು ಮಳೆಗಾಲದಲ್ಲಿ ಹೆಚ್ಚಿನ ರುಚಿ ಕೊಟ್ಟರೂ, ಶುಚಿಯ ವಿಷಯದಲ್ಲಿ ಅಷ್ಟೇ ಕಳಪೆಯಾಗಿರುತ್ತದೆ. ಪುನರ್ ಬಳಸಿದ ಎಣ್ಣೆಯಿಂದ ಮಾಡುವ ಕರಿದ ತಿಂಡಿಗಳು, ಶುದ್ಧವಿಲ್ಲದ ನೀರಿನ ಬಳಕೆ, ಸ್ವಚ್ಛತೆಯೇ ಕಾಣದ ತರಕಾರಿ ಸೊಪ್ಪುಗಳನ್ನು ಬಳಸಿ ಮಾಡಿದ ತಿಂಡಿಗಳು ಇನ್ನಿತರ ಜಂಕ್ ಫುಡ್ ಗಳು, ನಮ್ಮ ಮತ್ತು ಮಕ್ಕಳ ಜೀರ್ಣ ಶಕ್ತಿಯನ್ನು ಕುಂದಿಸುವುದರ ಜೊತೆಗೆ, ನಾನಾ ಬಗೆಯ ರೋಗಗಳನ್ನು ತಂದೊಡ್ಡುತ್ತದೆ. ಹಾಗಾಗಿಯೇ ಆದಷ್ಟು ಮನೆಯಲ್ಲಿಯೇ ಶುಚಿಯಾದ ರುಚಿಯಾದ ಅಡುಗೆ ಪದಾರ್ಥವನ್ನು ಮಾಡಲು ಪ್ರಯತ್ನಿಸಿ. 
          ಹೆಚ್ಚಿನವರಲ್ಲಿ ಮಳೆಗಾಲದ ಥಂಡಿಗೆ ನೀರು ಜಾಸ್ತಿ ಕುಡಿಯುವುದು ಆರೋಗ್ಯಕ್ಕೆ ತೊಂದರೆ ಎಂಬ ತಪ್ಪು ಕಲ್ಪನೆ ಇದೆ. ನೀರು ಯಾವ ಕಾಲದಲ್ಲಿಯೇ ಆದರೂ ನಮ್ಮ ದೇಹಕ್ಕೆ ಅತಿ ಮುಖ್ಯವಾದದ್ದು. ಮಳೆಗಾದಲ್ಲೂ ಕೂಡ ನೀರನ್ನು ಚೆನ್ನಾಗಿ ಸೇವಿಸಿ, ದೇಹವನ್ನು ಹೈಡ್ರೇಟೆಡ್ ಇಡಬೇಕು. ನೀರಿನ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಸೂಕ್ಶ್ಮಾಣು ಜೀವಿಗಳು ನಮ್ಮದೇಹವನ್ನು ಸೇರುತ್ತದೆ ಎಂಬುದು ನಿಜ. ಆದ್ದರಿಂದ ಮಳೆಗಾಲದಲ್ಲಿ ಕುಡಿಯುವ ನೀರನ್ನು ಫಿಲ್ಟರ್ ಮುಖಾಂತರ  ಸೋಸಿ ಆರಿಸಿ ಕುಡಿಯುವುದು ಉತ್ತಮ, ನಿಯಮಿತವಾಗಿ ಬಳಸುವ ನೀರಿನ ಫಿಲ್ಟರ್ ನ ಸೋಸುವ ಬುರುಡೆಯನ್ನು ಅದರ ಕಾಲದ ಮಿತಿಯಲ್ಲಿ ಬದಲಾಯಿಸುವುದು ಕೂಡ ಅಷ್ಟೇ ಮುಖ್ಯವಾದದ್ದು. 

೫. ಮಕ್ಕಳ ದೈಹಿಕ ಸಂರಕ್ಷಣೆ ಮತ್ತು ಸ್ವಚ್ಛತೆ :
            ಮಕ್ಕಳು ಹೊರಗಡೆ ಮಳೆಯಲ್ಲಿ ನೆನೆಯದಂತೆ ಛತ್ರಿ ರೈನ್ ಕೋಟ್, ಹ್ಯಾಟ್ ಇತ್ಯಾದಿ ಅಗತ್ಯ ಸಲಕರಣೆಗಳನ್ನು ಸದಾ ಕಳಿಸಲು ಮರೆಯದಿರಿ. ಮಳೆಗಾಲದಲ್ಲಿ ಮಕ್ಕಳು ತಿಳಿದೋ ತಿಳಿಯದೆಯೋ ಮಳೆ ನೀರಿನಲ್ಲಿ ನೆನೆಯುವುದು ಸಹಜ. ಹೀಗೆ ಮೈ ಒದ್ದೆಯಾಗಿದ್ದರೆ, ಸೂಕ್ಶ್ಮಾಣು ಜೀವಿಗಳ ನಿವಾರಣೆಗಾಗಿ ಬಳಸುವ ಯಾವುದಾದರೂ ಲಿಕ್ವಿಡ್ ಅಥವಾ ಮನೆಯಲ್ಲೇ ತಯಾರಿಸಿದ ನೈಸರ್ಗಿಕವಾದ ಕಹಿಬೇವಿನ ರಸ, ಲಾವಂಚ, ನಿಂಬೆ ಹನಿ ಇತ್ಯಾದಿ ಗಳನ್ನು ಹಾಕಿದ ಬಿಸಿನೀರಿನ ಸ್ನಾನ ತುಂಬಾ ಸೂಕ್ತವಾದದ್ದು. ಅಂತೆಯೇ ಶಾಲೆಯಿಂದ ಮರಳಿದ ಮಕ್ಕಳ ಕೈ ಕಾಲುಗಳನ್ನು, ಬಿಸಿನೀರಿನಿಂದ ಸೋಪನ್ನು ಹಚ್ಚಿ ತಿಕ್ಕಿ ತೊಳೆದರೆ, ಚರ್ಮದ ತೊಂದರೆ ಹರಡುವುದು ತಪ್ಪುತ್ತದೆ.  ಮಕ್ಕಳಿಗೆ ಪ್ರತಿ ಸಲವೂ ಕೈಯನ್ನು ಸೋಪ್ ಹಚ್ಚಿ ತಿಕ್ಕಿ ತೊಳೆಯುವ ರೂಢಿ ಮಾಡಿಸಿದರೆ, ಅಥವಾ ಹ್ಯಾಂಡ್ ವಾಷ್ ಹಾಕಿ ಕೈ ತೊಳೆಯಲು ಮಾರ್ಗದರ್ಶನ ನೀಡಿದರೆ, ಸಾಕಷ್ಟು ಬಗೆಯ ವೈರಲ್ ಸೋಂಕು ಜ್ವರಗಳನ್ನು ತಡೆಯಬಹುದಾಗಿದೆ. ಮಳೆಗಾಲದ ಪ್ರಾರಂಭದಲ್ಲಿ ಉಂಟಾಗುವ ಧಿಡೀರ್ ವಾತಾವರಣದಲ್ಲಿನ ಬದಲಾವಣೆ ಚಿಕ್ಕ ಶಿಶುಗಳಿಗೆ ಅನಾರೋಗ್ಯವನ್ನುಂಟು ಮಾಡುತ್ತದೆ, ಮೊದಲ ಆಮ್ಲೀಯ ಮಳೆಯೂ ಕೂಡ ಚರ್ಮ ಸೋಂಕನ್ನು ತರುತ್ತದೆ. ಆದ್ದರಿಂದ ವಾತಾವರಣವು ಒಂದು ಹಂತಕ್ಕೆ ಅಚಲವಾಗುವ ವರೆಗೂ ಶಿಶುವನ್ನು ಕರೆದುಕೊಂಡು ಹೆಚ್ಚಿನ ತಿರುಗಾಟ ಮಾಡದೇ ಇದ್ದರೆ ಒಳಿತು. ಇದರ ಜೊತೆಗೆ , ಸಣ್ಣ ಮಕ್ಕಳನ್ನು ಎತ್ತಿಕೊಳ್ಳಲು ಮುಂದಾಗುವ ಭಾಂದವರಿಗೆ, ಮಗುವನ್ನು ಮುಟ್ಟಲು ಮುಂಚೆ ಹ್ಯಾಂಡ್ ಸ್ಯಾನಿಟೈಝೆರ್ ನಿಂದ ಕೈ ಒರೆಸಿಕೊಳ್ಳಲು ಅಥವಾ ಕೈ ತೊಳೆದುಕೊಳ್ಳಲು ಕೋರಿಕೊಳ್ಳುವುದಕ್ಕೆ ಸಂಕೋಚ ಮಾಡಿಕೊಳ್ಳಬೇಡಿ. ನಮ್ಮ ಮಕ್ಕಳ ಆರೋಗ್ಯ ನಮ್ಮ ಜವಾಬ್ದಾರಿ. ಮಕ್ಕಳು ಹಸಿಯಾದ ಮಣ್ಣು ಇತ್ಯಾದಿಗಳನ್ನು ಆಟವಾಡಿ ಬರುವುದರಿಂದ ಅವರ ಉಗುರುಗಳಲ್ಲಿ, ರೋಗಾಣುಗಳು ಇರುವ ಸಾಧ್ಯತೆ ಜಾಸ್ತಿ ಇರುತ್ತದೆ. ಆದ್ದರಿಂದ ನಿಯಮಿತವಾಗಿ ಉಗುರು ಕತ್ತರಿಸಿಕೊಡಿ. ರಾತ್ರಿ ಮಲಗುವ ಮುಂಚೆ, ಮೈ ಕೈಗೆ ಮನೆಯಲ್ಲೇ ತಯಾರಿಸಿದ ನೈಸರ್ಗಿಕ ಎಣ್ಣೆ (ಕಹಿಬೇವು) ಹಚ್ಚುವುದರಿಂದ, ಸೊಳ್ಳೆ ಕಚ್ಚುವುದರಿಂದ ಪಾರು ಮಾಡಬಹುದು. 
      

ಲಾಸ್ಟ್ ಡ್ರಾಪ್ :
      ಮಳೆಗಾಲದ ಈ ತರಾತುರಿಗೆ ಮುಖ್ಯವಾದ ಮತ್ತು ಪ್ರಾಥಮಿಕ ಚಿಕಿತ್ಸೆಯೆಂದರೆ ಬಿಸಿನೀರು. ಬಿಸಿ ನೀರು ಪದೇ ಪದೇ ಕುಡಿಯುವುದರಿಂದ, ಬಿಸಿನೀರಿನ ಹಬೆಗೆ  ಮೂಗು ಮತ್ತು ಮುಖವೊಡ್ಡಿ, ಉಗಿಯನ್ನು ಸೇವಿಸುವುದರಿಂದ, ಬಿಸಿನೀರಿಗೆ ಸ್ವಲ್ಪ ಉಪ್ಪು ಹಾಕಿ ಗಂಟಲು ಮತ್ತು ಬಾಯಿ ಮುಕ್ಕಳಿಸುವುದರಿಂದ, ಶೀತ ಮತ್ತು ನೆಗಡಿಯಿಂದ ಉಂಟಾಗುವ ಕಿರಿ ಕಿರಿ ಕಡಿಮೆಯಾಗುತ್ತದೆ   
          ಕೊನೆಯದಾಗಿ, ಮಳೆಗಾಲದಲ್ಲಿ ಸೋಂಕು ರೋಗಗಳು ಸರ್ವೇ ಸಾಮಾನ್ಯವಾಗಿ ಬರುತ್ತದೆ. ಆದ್ದರಿಂದ ಮಳೆಗಾಲಕ್ಕೆ ರೆಡಿ ಆಗಿರಿ. ಮಕ್ಕಳಿಗೆ ಬೇಕಾಗುವ ಥಂಡಿ, ಕೆಮ್ಮಿನ ಸಿರಪ್, ಅಗತ್ಯವಾದಲ್ಲಿ ಜ್ವರದ ತಾಪ ಇಳಿಸಲು ಹಾಕುವ ಔಷಧಿ, ವಿಟಮಿನ್ ಸಿ ಸಪ್ಪ್ಲಿಮೆಂಟ್ಸ್. ನೀಲಗಿರಿ ಎಣ್ಣೆ ಎಲ್ಲವೂ ನಿಮ್ಮಲ್ಲಿ ಸಿದ್ಧವಿರಲಿ. ಆದರೆ ತಜ್ಞರ ಮಾರ್ಗದರ್ಶನದ ಮೇರೆಗೆ ಚಿಕಿತ್ಸೆಯನ್ನು ಮಾಡಿ. ಅಸ್ವಸ್ಥತೆ ತೀವ್ರವಾಗಿದ್ದಲ್ಲಿ ತಕ್ಷಣ ತಜ್ಞರನ್ನು ಕಂಡು ಪರೀಕ್ಷಿಸಿಕೊಳ್ಳುವುದು ಒಳ್ಳೆಯದು.  






ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ