ಶನಿವಾರ, ಮೇ 23, 2020

ಕೊರೋನಾ ಅನುಭವ - ಮಾಹಿತಿ

"ಮಗನಿಗೆ ಕೆಮ್ಮು ಜಾಸ್ತಿ ಆಗುತ್ತಲಿತ್ತು. ಜ್ವರ ಶುರುವಾಗಿತ್ತು. ಆಸ್ಪತ್ರೆಗೆ ಫೋನಾಯಿಸಿ ವಿಚಾರಿಸಿದಾಗ ರೋಗದ ಎಲ್ಲ ಲಕ್ಷಣಗಳನ್ನೂ ವಿಚಾರಿಸಿ, ಕೊರೋನಾ ಸೋಂಕು ರೋಗವೇ ಹೌದೆಂದು ಖಾತ್ರಿ ಮಾಡಿದರು. ಆ ಸಮಯಕ್ಕೆ ಇಂಗ್ಲಾಂಡ್ದಲ್ಲಿ ಅದೆಷ್ಟು ಸೋಂಕಿತರ ಸಂಖ್ಯೆ ಹೆಚ್ಚಿತ್ತೆಂದರೆ, ಎಲ್ಲ ಆಸ್ಪತ್ರೆಗಳಲ್ಲಿಯೂ ಕೊರೋನಾ ರೋಗಿಗಳೇ ತುಂಬಿಕೊಂಡಿರುತ್ತಿದ್ದರು . ಆಸ್ಪತ್ರೆಗೆ ಮಕ್ಕಳನ್ನು ಕರೆದುಕೊಂಡು ಹೋದರೆ ಇನ್ನೂ ಹೆಚ್ಚಿನ ರೋಗಾಣುಗಳಿಗೆ ನಮ್ಮನ್ನು ನಾವೇ ತೆರೆದಿಟ್ಟ ಲೆಕ್ಕ. ತೀರಾ ಉಸಿರಾಟದ ಸಮಸ್ಯೆ ಇಂದ ಒದ್ದಾಡುತ್ತಿರುವವರ ಮಧ್ಯೆ, ಆಗಿನ್ನೂ ಶುರುವಿನ ಹಂತದಲ್ಲಿದ್ದ ನನ್ನ ಮಗುವಿನ ಲಕ್ಷಣವನ್ನು ಗಮನಿಸಿ, ಆಸ್ಪತ್ರೆಯವರು ನಾವು ಮನೆಯಲ್ಲಿಯೇ ಇರಬಹುದಾದ ಆಯ್ಕೆ ನೀಡಿದ್ದರು. ಡಾಕ್ಟರ್ ನೀಡಿದ ಸಲಹೆಯಂತೆ, ಅವರು ಕೊಟ್ಟ ಸೂಚನೆಗಳ ಮೇರೆಗೆ, ನಾವು ಮಗುವನ್ನು ಮನೆಯಲ್ಲೇ ಕ್ವಾರಂಟೈನ್ ಮಾಡಿಕೊಂಡು ಚೇತರಿಸ್ಕೊಳ್ಳುವ ತೀರ್ಮಾನಕ್ಕೆ ಬಂದೆವು. ಎರಡು ಮಕ್ಕಳೊಂದಿಗೆ ೧೪ ದಿನಗಳು ನಮ್ಮನ್ನು ನಾವೇ ಮನೆಯಲ್ಲಿ ಸಂಪೂರ್ಣವಾಗಿ ಕೂಡಿಟ್ಟುಕೊಂಡೆವು. ಒಂದು ಕಾಲು ಹೊರಗೆ ಹೋಗಲಿಲ್ಲ, ಒಂದು ಕಾಲು ಒಳಗೆ ಬರಲಿಲ್ಲ. ಮಗ ೪.೫ ವರ್ಷದವ, ಮಗಳು ೨.೫ ವರ್ಷದವಳು..ಮಗನಿಗೆ ಹಬ್ಬಿರುವ ಸೋಂಕು ಮನೆಯಲ್ಲಿ ಸುಲಭವಾಗಿ ಎಲ್ಲರಿಗೂ ಹಬ್ಬುವ ಸಾಧ್ಯತೆ ಇದ್ದಿದ್ದರಿಂದ, ನಾವಿಬ್ಬರು ಯೋಚಿಸಿಕೊಂಡು, ಒಂದೊಂದು ಮಗುವನ್ನು ಒಬ್ಬೊಬ್ಬರು ನೋಡಿಕೊಳ್ಳುವ ಜವಾಬ್ಧಾರಿಯನ್ನು ಹಂಚಿಕೊಂಡೆವು. ಮನೆ ಎರಡು ಫ್ಲೋರಿನದಾದ್ದರಿಂದ, ಮಗನನ್ನು ಬಿಟ್ಟುಕೊಂಡು ನಾನು ಮೇಲ್ಗಡೆ  ಒಂದು ರೂಮಿನಲ್ಲಿ ಇರಲಾರಂಭಿಸಿದೆ. ಕೆಳಗಡೆ ಫ್ಲೋರಿನಲ್ಲಿ ಸಣ್ಣದೊಂದು ಕೋಣೆಯಲ್ಲಿ, ನನ್ನ ಗಂಡ ಮತ್ತು ಸಣ್ಣ ಮಗಳು ಇರುತ್ತಿದ್ದರು. ಮಕ್ಕಳಿಬ್ಬರೂ ತುಂಬಾ ಸಣ್ಣವರಾಗಿದ್ದರಿಂದ, ಅವರನ್ನು ಒಬ್ಬರಿಗೊಬ್ಬರು ಸಂಪರ್ಕದಲ್ಲಿಡದೇ ಕಾಪಾಡಿಕೊಳ್ಳುವುದು ಚ್ಯಾಲೆಂಜಿಂಗ್ ಇತ್ತು. ನಾವೆಂತೂ ಮಹಡಿಯ ಎರಡೂ ಬದಿಗೂ ಗೇಟ್ ಮಾದರಿಯಲ್ಲಿ ತಡೆಯನ್ನು ಹಾಕಿಟ್ಟಿದ್ದೆವು. ಏನೇ ಮಾತು ಕಥೆ ಒಂದಷ್ಟು ಹಾಡು ಆಟ ಇದ್ದರೂ ಎಲ್ಲವೂ ದೂರದಿಂದ ನಿಂತಲ್ಲಿಯೇ ವಿನಿಮಯ ಮಾಡಿಕೊಳ್ಳುತ್ತಿದ್ದೆವು. ಆದರೆ ಆ ಬೇರ್ಪಡಿಕೆ ಮಾತ್ರ ಯಾರ್ಯಾರಿಗೂ ಬೇಡ..!

ಮಗನನ್ನು ಒಂದೇ ಕೊಣೆಯಲ್ಲಿ ಎಂಟು ದಿನಗಳ ಕಾಲ ಬಿಟ್ಟುಕೊಂಡಿದ್ದೆ. ಆ ಎಂಟು ದಿನಗಳ ಮಗನ ಆರೋಗ್ಯ ಪರಿಸ್ಥಿತಿ ಮಾತ್ರ ಭಾರೀ ಭಯಾನಕವಾಗಿತ್ತು..ಒಂದು ವಾಕ್ಯ ಹೇಳಿ ಮುಗಿಸಲಿಕ್ಕೆ, ಅವನು ಕಮ್ಮಿ ಎಂದರೂ ಹತ್ತು ಸಲ ಕೆಮ್ಮುತ್ತಿದ್ದ. ರಾತ್ರಿ ಹಗಲು ನಿದ್ದೆ ಇರುತ್ತಿರಲಿಲ್ಲ. ಜ್ವರ ಬಂದರೆಂತೂ ಸುಮಾರಿಗೆ ಯಾವ ಪ್ಯಾರಾಸೆಟಮೋಲ್ ಹಾಕಿದರೂ ಪರಿಣಾಮ ಕಾಣಿಸುತ್ತಲೇ ಇರುತ್ತಿರಲಿಲ್ಲ. ಐಬುಪ್ರೊಫೇನ್ ಬಳಸುವಂತಿರಲಿಲ್ಲ. ೪೦ ಡಿಗ್ರಿ ಫ್ಯಾರನೇಟ್ ವರೆಗೆ ಏರಿಕೊಂಡೇ ಇರುತ್ತಿತ್ತು. ಆತಂಕ ಅಗಾಧವಾಗಿರುತ್ತಿತ್ತು. ಬಿಸಿನೀರು, ಕಷಾಯ ಎಲ್ಲವೂ ನಿರಂತರವಾಗಿ ನಡೆದೇ ಇತ್ತು. ಜೇಷ್ಠಮಧು, ಇದ್ದಷ್ಟು ಕಲ್ಲುಸಕ್ಕರೆ ಎಲ್ಲವೂ ನೀಡುತ್ತಿದ್ದೆವು. ಮಗ ತುಂಬಾ  ಸಣ್ಣವನಾದ್ದರಿಂದ ಇಡೀ ದಿನ ಅವನಿಗೆ ಮಾಸ್ಕ್ ಹಾಕಿಸಿ ಇಡಲು ಆಗುತ್ತಿರಲಿಲ್ಲ. ಆದರೆ ಶಾಲೆಯಲ್ಲಿ ಮಕ್ಕಳಿಗೆ ಕೆಮ್ಮುವಾಗ ಸೀನುವಾಗ ಕೈಯನ್ನು ಬಾಯಿಗೆ ಅಡ್ಡ ಹಿಡಿಯಬೇಕು ಎನ್ನುವುದನ್ನು ಸರಿಯಾಗಿ ಕಲಿತಿದ್ದ ಮಗ, ಬೈ ಡೀಫಾಲ್ಟ್ ಆಗಿ, ಕೆಮ್ಮು ಬಂದಾಗಲೆಲ್ಲ ಕೈ ಇಂದ ಬಾಯಿಗೆ ತಡೆ ಹಿಡಿಯುತ್ತಲೇ ಇರುತ್ತಿದ್ದ. ನಾನು ಮಾತ್ರ ಯಾವಾಗಲೂ ಮಾಸ್ಕ್ ಹಾಕಿಕೊಂಡೆ ಇರುತ್ತಿದ್ದೆ. ಪದೇ ಪದೇ ಕೈ ತೊಳೆಯುತ್ತಲೇ ಇರುವುದೇ ನಮ್ಮ ಕೆಲಸವಾಗಿತ್ತು. ಸತತ ಕೈ ಸ್ವಚ್ಚತೆಯಿಂದಾಗಿ ಕೈಯ ಚರ್ಮದ  ರೂಪವೇ ಬದಲಾಗಿ ಹೋಗಿತ್ತು. ಮಗನಿಗೆ ಡೈನೋಸಾರ್ ಟಾಯ್ಗಳು ಪ್ರಿಯವಾಗಿದ್ದರಿಂದ, ಅವುಗಳನ್ನು ವಾಷಿಂಗ್ ಸ್ಟೇಷನ್ ಲಿ ತೊಳೆಸುವುದು ಎಂಬಿತ್ಯಾದಿ ಕಾಲ್ಪನಿಕ ಆಟಗಳನ್ನು ಆಡಿಸುತ್ತಿದ್ದೆ. ಅದೇ ನೆಪದಲ್ಲಿ ಅವನ ಕೈ ಕ್ಲೀನ್ ಆಗುತ್ತಿತ್ತು. ದಿನಕ್ಕೆ ಎರಡು ಮೂರು ಸಾರಿ ನಮ್ಮ ಉಡುಗೆಗಳನ್ನು ಬದಲಾಯಿಸಿಕೊಂಡು ಡಿಸ್ಇಂಫೆಕ್ಟಾನ್ಟ್ ಹಾಕಿ ತೊಳೆದು ತೊಳೆದು ಇಡುತ್ತಿದ್ದೆ.. ಬೆಡ್ ಶೀಟು ದಿನಂಪ್ರತಿ.. ನಾವು ಮುಟ್ಟುವ ವಸ್ತುಗಳನ್ನು, ನೆಲವನ್ನು, ಎಲ್ಲವನ್ನು ದಿನಕ್ಕೆರಡು ಬಾರಿ ಒರೆಸಿ ಕ್ಲೀನ್ ಮಾಡುತ್ತಿದ್ದೆ..ಅವನು ಪ್ರತಿಸಲ ಬಾತ್ರೂಮ್ ಟಾಯ್ಲೆಟ್ಗೆ ಹೋಗಿ ಬಂದಾಗಲೂ, ನಾನು ಇಡೀ ಬಾತ್ರೂಮನ್ನೂ ಫಿನಾಯಿಲ್ ಹಾಕಿ ತಿಕ್ಕಿ ತಿಕ್ಕಿ ತೊಳೆಯುತ್ತಿದ್ದೆ..ಊಟ, ತಿಂಡಿ, ಅಡುಗೆ, ಮಧ್ಯೆ ಮಧ್ಯೆ ಮಕ್ಕಳಿಗೆ  ಕೊಡಲು ತಿಂಡಿ ಎಲ್ಲವನ್ನು ಗಂಡನೇ ಮಾಡಿ ತಂದು ಬಾಗಿಲ ಬಳಿ ಇಟ್ಟು ಹೋಗುತ್ತಿದ್ದ. ನಾವು ಒಳಗಡೆ ತೆಗೆದುಕೊಂಡು ತಿಂದು ತೊಳೆದು ಕೊಟ್ಟರೂ ಮತ್ತೊಮ್ಮೆ ಅವೆಲ್ಲ ಪಾತ್ರೆಗಳನ್ನು ಅವನು ತೊಳೆದಿಟ್ಟುಕೊಳ್ಳಬೇಕಾಗುತ್ತಿತ್ತು. ಮಕ್ಕಳೆದುರು ಆತಂಕದ ವಿಚಾರ ಮಾತನಾಡುತ್ತಿರಲಿಲ್ಲ.. ಮಕ್ಕಳಿಗೆ ತಾಳ್ಮೆಯಿಂದ ಕುಳಿತು ತಿಳಿಸಿ ಹೇಳುವುದು ಸಹಕಾರಿ ಆಗುತ್ತಿತ್ತು.. ಮನೆಗೆ ಬೇಕಾದ ಸಾಮಾನುಗಳನ್ನು ತರಲು ಕೂಡ ಹೊರಗೆ ಹೋಗುವಂತಿರಲಿಲ್ಲ. ಆತ್ಮೀಯ ಗೆಳೆಯರು ಈ ಸಮಯದಲ್ಲಿ ಸಾಕಷ್ಟು ಸಹಾಯ ಮಾಡಿದರು. ಪಟ್ಟಿ ಮಾಡಿ ಆರ್ಡರ್ ಮಾಡಿದ ಸಾಮಾನುಗಳನ್ನು ಮನೆಬಾಗಿಲಿಗೆ ತಂದು ಇಟ್ಟು ಹೋಗುತ್ತಿದ್ದರು. ಅವರು ದಾಟಿದ ಮೇಲೆ ನಾವು ಬಾಗಿಲು ತೆಗೆದು ಚೀಲಗಳನ್ನು ಒಳಗೆ ತೆಗೆದಿಟ್ಟುಕೊಳ್ಳುತ್ತಿದ್ದೆವು.. ಈ ಸಮಯದಲ್ಲಿ ನನಗೂ ಸೋಂಕು ತಾಗದೇ ಇರುವುದು ಅಸಂಭವವಿತ್ತು. ನನಗೆ ಸ್ವಲ್ಪ ಕೆಮ್ಮು, ಅಸಾಧ್ಯ ಮೈಕೈ ನೋವು ಪ್ರಾರಂಭವಾಗಿತ್ತು. ನೋವೆಂದರೆ ಅದು ಸಾಮಾನ್ಯ ವೇದನೆಯಾಗಿರಲಿಲ್ಲ. ತಿಂಗಳ ಮುಟ್ಟಿನ ಸಮಯದಲ್ಲಿ ನಮಗೆ ಎಷ್ಟು ಸೊಂಟ ಮತ್ತು ಕಾಲು ನೋವು ಬರುತ್ತದೆಯೋ, ಅದಕ್ಕಿಂತ ಮೂರ್ನಾಲ್ಕು ಪಟ್ಟು ಹೆಚ್ಚು..! ಬಿಸಿನೀರು ಬಳಕೆ ಸ್ವಲ್ಪ ಹಿತ ಕೊಡುತ್ತಿತ್ತು. ಮಕ್ಕಳಿಗೆ ಗ್ಯಾಡ್ಜೆಟ್ಸ್ ಸ್ಕ್ರೀನಿಂಗ್ ಅಭ್ಯಾಸ ಮಾಡಿಸದ ಕಾರಣ, ಮಗನಿಗೆ ಅವನ ತೊಂದರೆಯನ್ನು ಮರೆಸಿ ಹೇಗಾದರೂ ಸಮಯ ಸಾಗಿಸಬೇಕಾಗುತ್ತಿತ್ತು.. ರೂಮಿನ ಕಿಟಕಿಯಿಂದ ಬೈನೋಕ್ಯುಲರ್ ಹಿಡಿದು ಹಕ್ಕಿಗಳ ಚಲನವಲನಗಳನ್ನು ಗಮನಿಸುತ್ತಾ ಸಮಯ ಸಾಗಿ ಸುತ್ತಿದ್ದೆವು. ತಂಗಿಯ ನೆನಪಾದರೂ, ತನ್ನಿಂದ ತಂಗಿಗೆ ಇಷ್ಟು ಜಾಸ್ತಿ ಕೆಮ್ಮು ಬರುವುದು ಬೇಡ ಎಂದು ತನಗೆ ತಾನೇ ಸಮಾಧಾನ ತಂದುಕೊಳ್ಳುತ್ತಿದ್ದ ಪುಟ್ಟ ಮಗ..ನಾವು ಇಬ್ಬರೂ ವೃತ್ತಿಯಲ್ಲಿರುವವರಾದ್ದರಿಂದ ಕೆಲಸವೂ ವಿಪರಿಮೀತ ಬಾಕಿ ಇತ್ತು. ಇಲ್ಲಿ ಕೊರೋನಾ ಸೋಂಕಿನಿಂದ ಬಳಲುತ್ತಿರುವವರಿಗೆ ೧೪ ದಿನಗಳ ಕಾಲ ರಜೆ ಸಿಗುತ್ತದೆ. ನಮಗೆ ಎಲ್ಲ ರಜೆಯನ್ನು ಒಟ್ಟಿಗೆ ಹಾಕಿ ಖಾಲಿ ಮಾಡಿಕೊಳ್ಳುವಂತಿರಲಿಲ್ಲ. ಮನೆಯಲ್ಲಿ ಯಾರಿಗೆ ಎಷ್ಟರ ಮಟ್ಟಿಗೆ ಈ ಖಾಯಿಲೆ ಗಂಭೀರತೆ ತೋರುವುದು ಎಂಬುದನ್ನು ಮುಂಚೆನೇ ಊಹೆ ಮಾಡಲು ಸಾಧ್ಯವಿಲ್ಲವಲ್ಲ, ಹಾಗಾಗಿ ಒಂದು ವಾರ ಹಾಗೋ ಹೀಗೋ ಮಗನನ್ನು ರೂಮಿನಲ್ಲಿ ಸಂಭಾಳಿಸಿಕೊಂಡವಳು ಆಮೇಲೆ ಅವನಿಗೆ ಸ್ವಲ್ಪ ಕಡಿಮೆಯಾಗುತ್ತಿರುವ ಲಕ್ಷಣ ಸಿಕ್ಕಾಗ ಎಲ್ಲರೂ ಕೆಳಗಡೆ ಒಟ್ಟಿಗೆ ಇರಲಾರಂಭಿಸಿದೆವು. ಮಕ್ಕಳನ್ನು ಆಡಲು ಬಿಟ್ಟುಕೊಂಡು ಅಲ್ಪಸ್ವಲ್ಪ ಕೆಲಸ ಮಾಡಿ ಮುಗಿಸಿಕೊಳ್ಳುತ್ತಿದ್ದೆವು.. ಮಕ್ಕಳು ನಾವು ಎಲ್ಲಾ ಪರಸ್ಪರ ಒಟ್ಟಿಗಿರುವುದು ಅವರಲ್ಲಿ ಖುಷಿಯ ಹಾರ್ಮೋನ್ಸ್ ಹೆಚ್ಚುತ್ತಿತ್ತು..

ಮಗಳಿಗೆ ಇಲ್ಲಿ ಇಂಗ್ಲಾಂಡಿನಲ್ಲಿ ಆಗಿನ್ನೂ ಕೊರೋನಾ ಹರಡುತ್ತಿರುವ ಕಾಲದಲ್ಲೇ ಒಮ್ಮೆ ಸಾಕಷ್ಟು ಕೆಮ್ಮು ಬಂದಿತ್ತು. ನಮಗೆ ತಿಳಿಯುವಷ್ಟರಲ್ಲೇ ಅವಳು ಕೊರೋನಾಕ್ಕೆ ಇಮ್ಮ್ಯೂನ್ ಆಗಿ ಹುಷಾರಾಗಿದ್ದಳು ಎಂದು ಈಗ ನಮಗೆ ಅನಿಸುತ್ತಿದೆ. ಮನೆಮಂದಿಯ ಎಲ್ಲರ ಪ್ರಾರ್ಥನೆ ನಮ್ಮ ಜೊತೆಗಿದೆ.. ನಮಗೂ ಕೂಡ ಅಷ್ಟೇ, ಪ್ರತಿದಿನದ ಬೆಳಗಿಗೆ ಗ್ರಾಟಿಟ್ಯುಡ್ ಭಾವವಿದೆ. ಸಧ್ಯಕ್ಕೆ ಮಗನ ಆರೋಗ್ಯ ಸುಧಾರಿಸಿದೆ. ನಾವೂ ಕೂಡ ಸುಧಾರಿಸಿದ್ದೇವೆ. ಮನೆಯಿಂದಲೇ ನಮ್ಮ ಕೆಲಸ ನಡೆದಿದೆ..ಎಲ್ಲರಿಗೂ ಒಂದೇ ಮಾದರಿಯ ತೊಂದರೆ ಎಂದು ಹೇಳಲಾಗದು. ನನ್ನ ಕೆಲವು ಫ್ರೆಂಡ್ಸ್ ಗಳ ಪೈಕಿ ಕೆಲವರಿಗೆ ಕೆಮ್ಮಾದರೆ, ಕೆಲವರಿಗೆ ಕೇವಲ ಜ್ವರ, ಕೆಲವರಿಗೆ ಮೈಕೈ ನೋವಾದರೆ ಕೆಲವರಿಗೆ ಉಸಿರಾಡಲಿಕ್ಕೆ ಕಷ್ಟವಾಗಿ ಕೃತಕ ಆಮ್ಲಜನಕದ ವ್ಯವಸ್ಥೆಯವರೆಗಿನ ಗಂಭೀರತೆ.. ಎಲ್ಲರದ್ದೂ ಹೋರಾಟ..ಆತ್ಮಸ್ಥೈರ್ಯ ಮತ್ತು ಉತ್ತಮ ಆರೋಗ್ಯ ಸ್ಥಿತಿ ಇದ್ದರೆ ಖಂಡಿತ ಹೋರಾಟ ಯಶಸ್ವಿಯಾಗುತ್ತದೆ. ಇನ್ನೂ ಕೂಡ ಇಲ್ಲಿನ ಎಲ್ಲ ದುಸ್ಥಿತಿ ಪ್ರತಿನಿತ್ಯ ನ್ಯೂಸ್ ನಲ್ಲಿ ಕೇಳಿ ಕಾಣುತ್ತಿದ್ದೇವೆ.. ಗುಣವಾದವರ ಸಂಖ್ಯೆ, ಸತ್ತವರ ಸಂಖ್ಯೆ ಯಾವುದನ್ನೂ ನಾವು ತಲೆಕೆಡಿಸಿಕೊಳ್ಳುತ್ತಿಲ್ಲ.. ಮಾಸ್ಕ್ ಹಾಕಿಕೊಳ್ಳುವುದು, ಪದೇ ಪದೇ ಕೈ ತೊಳೆಯುತ್ತಿರುವುದು ಅತ್ಯಂತ ಪ್ರಯೋಜನವಾದ ಕೆಲಸಗಳು, ಅವೆರಡು ನಮ್ಮ ದಿನಚರಿಯಲ್ಲಿ ಈಗ ಮಿಳಿತಗೊಂಡು ಹೋಗಿದೆ. ಇವ್ಯಾವುವೂ ಈಗ ಸಂಕಟ ಅಥವಾ ತೊಂದರೆ ಎಂದು ಎನಿಸುವುದಿಲ್ಲ. ಮೂಗು, ಮುಖ, ಬಾಯಿ ಕೈ ಸ್ವಚ್ಛವಾಗಿರಿಸಿಕೊಳ್ಳುವುದು ಕೇವಲ ಕೊರೋನಾ ಒಂದೇ ಅಲ್ಲ ಯಾವುದೇ ರೀತಿಯ ವೈರಸ್ ಗಳಿಂದ ಉಂಟಾಗುವ ಸಣ್ಣ ದೊಡ್ಡ ಖಾಯಿಲೆಗೂ ಉತ್ತಮ ಶಮನ..."

ಸಂಬಂಧಿಯೊಬ್ಬರು ನನಗೆ ಮಾತನಾಡಿದ, ಹಂಚಿಕೊಂಡ ವಿಷಯವನ್ನು ಯಥಾವತ್ತಾಗಿ ಇಲ್ಲಿ ಬರೆದಿದ್ದೇನೆ. ಈಗ ಯಾರು ಇವರು, ಏನು ಎತ್ತ ಎಂಬುದು ಇಲ್ಲಿ ಮುಖ್ಯವಲ್ಲ. ಕೊರೋನಾ ಎಂಬ ಮಾರಕ ಖಾಯಿಲೆಯ ಹರಡುವಿಕೆಯ ಆತಂಕದ ಸಂದರ್ಭದಲ್ಲಿ, ಹಂಚಿಕೊಂಡ  ಒಬ್ಬೊಬ್ಬರ ಒಂದೊಂದು ಅನುಭವವೂ, ಒಂದೊಂದು ಮಾಹಿತಿಯೂ ಅತೀಮುಖ್ಯ ಮತ್ತು ಉಪಯುಕ್ತವಾಗುತ್ತದೆ. ಇಲ್ಲಿ ಮೇಲಿನ ಅನುಭವವನ್ನು ಓದಿ, ನಮಗೂ ಇದೇ ರೀತಿ ಆಗುತ್ತದೆ ಎಂಬ ಆತಂಕ, ಗಾಬರಿ ಪಡಬೇಕೆಂದಲ್ಲ, ಅಸಡ್ಡೆ ಸಲ್ಲ ಎಂಬುದು ನನ್ನ ಈ ಬರಹದ ಉದ್ದೇಶ. ಸಮರ್ಪಕ ಮಾಹಿತಿ, ಮೆಡಿಕಲ್ ವ್ಯವಸ್ಥೆ, ಪರಸ್ಪರ ಸಹಕಾರ, ಹೊಂದಾಣಿಕೆ, ಜೊತೆಗೆ ಅಗಾಧವಾದ ಆತ್ಮಸ್ಥೈರ್ಯದ ಇದ್ದರೂ, ಅನುಭವಿಸಬೇಕಾದ ನೋವು, ಆತಂಕ ಎಂಬುದು ಕೂಡ ಅಷ್ಟೇ ಪಾರದರ್ಶಕ ಸತ್ಯ. ಕೊರೋನಾ ಎಂಬುದು ಈಗ ಒಂದು ವೈಯುಕ್ತಿಕ ಆರೋಗ್ಯ ಸಮಸ್ಯೆಯಲ್ಲ..ಸೋಂಕು ತಾಗಿದರೆ ನಮ್ಮ ದೇಹ ಹೇಗೆ ಹೋರಾಡುತ್ತದೆ ಎಂಬುದರ ಖಾತ್ರಿ ನಮಗಿಲ್ಲ, ಅದು ನಮ್ಮ ನಮ್ಮ ನಿರೋಧಕ ಶಕ್ತಿಯ ಮೇಲೆ ನಿರ್ಧರಿತ..  ಆದರೆ  ಸೋಂಕು ಹರಡುವಲ್ಲಿ ನಮ್ಮ ಕೊಡುಗೆ ಇರದಿರಲಿ..🙏

1 ಕಾಮೆಂಟ್‌: