ಶುಕ್ರವಾರ, ಡಿಸೆಂಬರ್ 11, 2015

ಮರೆಯಲಾಗದ ಘಟನೆಗಳು...

'ಮರೆಯಲಾಗದ' ಎನ್ನುವುದಕ್ಕಿಂತ ಮರೆಯಲೇ ಇಷ್ಟವಿಲ್ಲದ ಕೆಲವು ಸಂದರ್ಭಗಳನ್ನು ಇಲ್ಲಿ ಬರೆಯಲಿಚ್ಚಿಸುತ್ತೇನೆ. ನನ್ನ ಬ್ಲಾಗ್ನಲ್ಲಿ, ನನ್ನದೇ ಆದ ಜಾಗ ಇರುವುದರಿಂದ ಈ ಕೆಲವು ಘಟನೆಗಳನ್ನು ಶೇಖರಿಸಿಡಲೇನು ಅಡ್ಡಿ ನನಗೆ?? ಹಂಚಿಕೊಳ್ಳುತ್ತಿದ್ದೇನೆ, ಭಾವನೆಗಳು ಇಮ್ಮಡಿಗೊಳ್ಳಲಿ ಎಂದು :) :)

ಘಟನೆ ೧. 
     ಮಗಳನ್ನು ಅವಳ ಪ್ಲೇ ಹೋಂ ಗೆ ಕರೆದುಕೊಂಡು ಹೋಗುವ ಸಂದರ್ಭ. ಸಾನ್ವಿಗೆ ಆಗ ೨ ವರ್ಷ ೩ ತಿಂಗಳು  ಇದ್ದಿತ್ತೇನೋ. ಹೋಗುವ ದಾರಿ ಬದಿಯಲ್ಲಿ ಕೆಲವೊಂದು ಕಡೆ ಇರುವ ಮರಗಳ ನೆರಳು ಬೀಳುವ ಜಾಗ ಅವಳಿಗೆ ಹಾಯ್ ಎನಿಸುತ್ತಿತ್ತೇನೋ.. ಸುಡು ಬಿಸಿಲಿಗೆ ಬಂದ ತಕ್ಷಣ, "ಅಮ್ಮಾ , ಬಿಸ್ಲು ..." ಎಂದಳು. ಎಷ್ಟಂದರೂ ಅಮ್ಮ ಅಲ್ಲವೇ, ಮಗಳೇ ನೆರಳಿಗೆ ಬಾ ಎಂದು ಸೂಚನೆ ನೀಡಿದೆ. ಸರಿ ಆ ಮರದ ನೆರಳೆನೋ ಮುಗಿಯಿತು, ಮತ್ತೆ ಮುಂದೆ ಸ್ವಲ್ಪ ಹಾದಿ ಬಿಸಿಲು. ಬಿಸಿಲು ನೆರಳುಗಳ ಅನುಭವದ ವ್ಯತ್ಯಾಸ ಸರಿಯಾಗಿ ತಿಳಿದ ಅವಳು ನಂತರದಲ್ಲಿ ಹೇಳಿದ ಎರಡು ಸಾಲು, ನನ್ನಲ್ಲಿ ದಿಗ್ಭ್ರಮೆ ಮೂಡಿಸಿತು. "ಅಮ್ಮಾ, ಬಿಸ್ಲು.. ಇಲ್ಲೆಲ್ಲಾ ಯಾಕೆ ಮರ ಇಡಲ್ಲೇ ನೀನು?? ಜಾಸ್ತಿ ಮರ ತಪ್ಪನ ಅಡ್ಡಿಲ್ಯಾ ?? ಅವಾಗ ಬಿಸ್ಲು ಹೋಗ್ತು". (ಒಹ್! ನಮಗೆ ಈ ವಿಷಯ ತಿಳಿದೇ ಇರಲಿಲ್ಲವಲ್ಲ..!!!)



ಘಟನೆ ೨. 
      ಮನೆಯ ಬಾಲ್ಕನಿ ಇಂದ ಹೊರಗಡೆ ನೋಡುತ್ತಾ ಇರುವುದು ಸಾನ್ವಿಯ ಒಂದು ದಿನನಿತ್ಯದ ವಾಡಿಕೆ. ಅವಳಲ್ಲಿ ನಿಂತು ನೋಡುತ್ತಿರುವಾಗ ನಾನವಳ ಕಣ್ತಪ್ಪಿಸಿ ಒಳಗೆ ಓಡಿ ಬಾಕಿ ಇರುವ ಕೆಲಸಗಳನ್ನು ಮುಗಿಸಿಕೊಳ್ಳುವುದು ಕೂಡ ನನ್ನ ವಾಡಿಕೆ ;) ಹೀಗೆ ಏನೋ ಮನೆ ಕೆಲಸ ಮಾಡಿಕೊಳ್ಳುತ್ತಿದ್ದೆ, ಸಾನ್ವಿ ಜೋರು ಜೋರಾಗಿ ಏನೋ ಕೂಗುತ್ತಿದ್ದಳು, ಇಣುಕಿದೆ ಕುತೂಹಲದಿಂದ. ಸುಮಾರು ದೂರದಲ್ಲಿ ರಸ್ತೆ ಅಂಚಿನಲ್ಲಿ ಎಸೆದ ಕಸಗಳ ಮದ್ಯೆ ದನವೊಂದು ಮೇಯುತ್ತಿತ್ತು...ಕಸವನ್ನೇ!! "ಏಯ್ ತಿನ್ನಡ, ಕವರ್ ತಿನ್ನಡ, ಅಂಬುಚ್ಚೀ (ದನ).... ಕವರ್ ಬಾಯಿಗ್ ಹಾಕಡ... ಅದು ಚಿಚ್ಚಿ (ಕೊಳಕು), ಹೊಟ್ಟೆ ಅಬ್ಬು (ನೋವು) ಆಗ್ತು ನಿಂಗೆ ತಿನ್ನಡ ಎಯ್ ಅಂಬುಚ್ಚೀ..". ಪಾಪ ಈ ಹಿತೈಷಿಯ ಕೋರಿಕೆ ಅದಕ್ಕೇನು ತಿಳಿದೀತು?? ತಿಳುವಳಿಕೆಯ ಅವಶ್ಯಕತೆ ಇರುವುದು ಹಸುವಿಗಲ್ಲ :( :( 


ಘಟನೆ ೩. 
       ಅಜ್ಜ ಅಜ್ಜಿ ಬೆಂಗಳೂರಿಗೆ ಬಂದು ವಾಪಸ್ ಹೋಗುವಾಗ ಮೊಮ್ಮಗಳಿಗೆ ಬೇಜಾರಾದರೂ ಹೇಳಿಕೊಳ್ಳುವಷ್ಟು ಪ್ರತಿಕ್ರಿಯೆ ನೀಡಲು ಬರುವುದಿಲ್ಲ. ಅವಳ ಗಮನ ಬೇರೆ ಕಡೆ ಹರಿಸಬೇಕೆಂದು ನಾನು ಅವಳಿಗೆ ಬಸ್ ಕಂಡಕ್ಟರ್ ಯಾರು, ಏನು ಕೇಳುತ್ತಾನೆ ಎಲ್ಲದರ ಬಗ್ಗೆ ಕಥೆ ಹೇಳುತ್ತಿದ್ದೆ. ಮಗಳಿಗೆ ಥಟ್ಟನೆ ಎಲ್ಲೋ ಏನೋ ಹೊಳೆದಂತಾಗಿ, ತನ್ನ ಜೇಬಿನಿಂದ ಅಜ್ಜಿ ಹೊರಡುವಾಗ ಭರಪೂರ ಪ್ರೀತಿ ಮಾಡಿ ಕೈಗೆ ಇತ್ತ ಹತ್ತು ರೂಪಾಯೀಯ ನೋಟನ್ನು ಹೊರತೆಗೆದು ನನ್ನಲ್ಲಿ ಕೇಳಿದಳು . "ಅಮ್ಮಾ, ಇದು ಕೊಟ್ರೆ ಕಂಡಕ್ಟರ್ ಮಾಮ ನಂಗೆ ಸಾಗರ ಅಜ್ಜ ಮನೆಗೆ ಕರ್ಕ ಹೋಗ್ತ್ನಾ?" ಯಾವುದರ ಬೆಲೆ ಬಗ್ಗೆ ತಿಳಿಸಲಿ ಎಂದೇ ತಿಳಿಯಲಿಲ್ಲವಾಯಿತು ನನಗೆ. 

ಘಟನೆ ೪.
       ಸಾಮಾನ್ಯವಾಗಿ ಮಗಳು ಏಳುವಷ್ಟರಲ್ಲಿ, ಅವಳ ಅಪ್ಪ ಆಫೀಸಿಗೆ ಪಲಾಯನ ಮಾಡಿಯಾಗಿರುತ್ತದೆ. ವೀಕೆಂಡ್ ನ ಎರಡು ದಿನಗಳು ಅಪ್ಪ ಸಿಕ್ಕು, ಮತ್ತೆ ಸೋಮವಾರ ಬೆಳಗಿನ ಜಾವದಲ್ಲಿ ಕಾಣದಿದ್ದಾಗ, ಮಗಳ ಸಹಜವಾದ ಪ್ರಶ್ನೆ, "ಅಪ್ಪ ಎಲ್ಲೋದ??" ಎಂದು. "ಅಪ್ಪ ಆಫೀಸಿಗೆ ಹೋದ" ಎಂಬ ಬದಲಾವಣೆ ಇಲ್ಲದ ಉತ್ತರದಿಂದ ಬೇಸತ್ತು ಒಂದು ದಿನ ಮಗಳು ತನ್ನ ಸಂಭಾಷಣೆಯನ್ನು ಮುಂದುವರೆಸಿದಳು.
ಸಾನ್ವಿ : "ಅಮ್ಮಾ, ಅಪ್ಪ ಎಲ್ಲೋದ??"
ನಾನು : "ಅಪ್ಪ ಆಫೀಸ್ ಹೊಯ್ದ್ನಲೇ.."
ಸಾನ್ವಿ : "ಅಪ್ಪ ಬರೇ ಆಫೀಸ್ ಹೋಗಿ ಹೋಗಿ ಇಡ್ತ್ನಲೇ.. :("
ನಾನು : "ಮತ್ತೆ, ಆಫೀಸ್ ಹೋಗಿ, ಕೆಲಸ ಮಾಡಲ್ಲೆ ಅಂದ್ರೆ, ಯಾರೂ ದುಡ್ಡು ಕೊಡ್ತ್ವಲ್ಲೇ ಮರಿ, ಸಾನ್ವಿಗೆ ಫ್ರೂಟ್ಸ್ ತರಕ್ಕೆ, ಟಾಯ್ಸ್ ತರಕ್ಕೆ ಎಲ್ಲಾ ದುಡ್ಡು ಬೇಕಲೇ ನಮ್ಗೆ.." (ಮಗಳನ್ನು convince ಮಾಡಿದೆ ಎಂಬ ಅಶಾಭಾವನೆಯಲ್ಲಿ ಉತ್ತರಿಸಿದೆ)
ಒಂದು ನಿಮಿಷದ ಯೋಚನೆಯ ನಂತರ..
ಸಾನ್ವಿ : "ದುಡ್ಡು ನಂಗಕ್ಕೆ, ಆಟಮ್ ಕೊಡ್ತಲ!!??"
ನಾನು : "ಯಾರು ಕೊಡ್ತಾ??!!!"
ಸಾನ್ವಿ : "ಅದೇ, ಅಪ್ಪ ತಣ್ಣ cold ರೂಮಲ್ಲಿ ಹೋಗಿ ದುಡ್ಡು ತಗಬತ್ನಲ.."
ತಣ್ಣ cold ರೂಮು ಎಂದರೆ AC ರೂಮ್ ಎಂದು, ಆಟಮ್ ಎಂದರೆ ATM ಮಷೀನ್ ಬಗ್ಗೆ ಅವಳು ಹೇಳಿದ್ದು ಎಂದು ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ..
ತಕ್ಷಣದಲ್ಲಿ ಅನಿಸಿದ್ದು, ಮಕ್ಕಳ ಮನಸ್ಸು ಎಷ್ಟು ನೇರ, ದಿಟ್ಟ, ನಿರಂತರ..!!

ಇದೇ ಘಟನೆಗೆ ಸಂಬದಿಸಿದಂತೆ ಮಗಳ ಜೊತೆಗಿನ ಇನ್ನೊಂದು ಸಂಭಾಷಣೆಯೂ, ನನ್ನನು ಅವಕ್ಕಾಗಿಸಿತು.


     ಭಿಕ್ಷುಕನೊಬ್ಬ ಮನೆ ಬಾಗಿಲಿಗೆ ಬಂದು, ಅಮ್ಮಾ ತಾಯೇ ಎಂದು ಬಿಕ್ಷೆ ಕೇಳುತ್ತಿದ್ದ.. ೨.೫ ವರ್ಷದಿಂದ ಮಕ್ಕಳ ಪ್ರಶ್ನೆಗಳ ಹಾವಳಿ ಇದ್ದಿದ್ದೇ ಬಿಡಿ. ಪ್ರಶ್ನೆಗಳ ಸುರಿಮಳೆ ಶುರವಾಯಿತು.
ಸಾನ್ವಿ : "ಅಂವ ಯಾಕೆ ಅಮ್ಮಾ ಅಂತ ಕೂಗ್ತಿದ್ದ??"
ನಾನು : "ಅವ್ನು ಬಿಕ್ಷುಕ ಮರಿ, ಅವನು ತಂಗೆ ಊಟ, ತಿಂಡಿ, ಇಲ್ಲಾ ಚೂರು ದುಡ್ಡು ಬೇಕು, ಕೊಡಿ ಪ್ಲೀಸ್ ಅಂತ ಕೇಳ್ತಿದ್ದ.. "'
ಸಾನ್ವಿ : "ಅವನಮ್ಮ ಎಲ್ಲೋದ?"
ನಾನು : "ಅವನಮ್ಮ ಮನೆಲಿದ್ದ, but ಅವನು ಬಡವ ದುಡ್ಡಿಲ್ಲ ಅವನತ್ರ, ಅದಿಕ್ಕೆ ಅವ್ನು ನಮ್ ಹತ್ರ ಕೇಳ್ತ"
ಸಾನ್ವಿ : "ಯಾಕೆ ಹಂಗೆ ಕೇಳ್ತಾ..??"
ನಾನು : "ಯಾಕಂದ್ರೆ ಅವನತ್ರ ಸಾನ್ವಿ ಮನೆ ತರ ಮನೆ ಇಲ್ಲ, ಫುಡ್ ಇಲ್ಲ, cot ಇಲ್ಲ, ಆಟಾಡಕ್ಕೆ ಟಾಯ್ಸ್ ಏನೂ ಇಲ್ಲ ಅದಿಕ್ಕೆ." (ಮಗಳ ಜಗತ್ತಿನ ಮೂಲಭೂತ ವಸ್ತುಗಳಿಗೆ ಹೋಲಿಸಿ ವಿವರಿಸುವ ಪ್ರಯತ್ನ ನನ್ನದಾಗಿತ್ತು)

ಸಾನ್ವಿ : "ಅಂವ ಯಾಕೆ ಮನೇಲಿ ಊಟ ಮಾಡಲ್ಲೇ?"
ನಾನು : "ಊಟಕ್ಕೆ ಮಾಡಕ್ಕೆ ಬೇಕಾಗ ಅನ್ನ, ತರಕಾರಿ ಎಲ್ಲ ತಂದ್ಕಳಕ್ಕೆ ಅವನತ್ರ ದುದ್ದಿಲ್ಲೇ ಅದಿಕ್ಕೆ.."
ಸ್ವಗತ...
ಅಷ್ಟರೊಳಗಾಗಿ ತಿರುಗಿ ನಡೆದಿದ್ದ ಬಿಕ್ಷಕನೆಡೆಗೆ, ಮುಗ್ದ ಮಗು ಹೇಳಿದ ಮಾತು ನನಗೆ ನಿಂತಲ್ಲೇ ಮೈ ಜುಮ್ ಎನ್ನಿಸಿತು.
ಸಾನ್ವಿ : "ಅವನಿಗೆ ಹೇಳ್ತಿ ನಾನು, ಆಫೀಸಿಗೆ ಹೋಗಿ ಕೆಲಸ ಮಾಡು... ದುಡ್ಡು ಕೊಡ್ತ... ಅವಾಗ ಅವನಮ್ಮ food ಮಾಡ್ತಾ...ಪಿಗ್ಗಿ ಬ್ಯಾಂಕ್ ಅಲ್ಲಿ ಕಾಯಿನ್ ಹಾಕು, ಮತ್ತೆ ಟಾಯ್ಸ್ ತಗಳ್ಳಕ್ಕು ಅಂತ.. "
ಜೀವನದ ಸೂತ್ರಗಳು, ಎಷ್ಟೊಂದು ಸರಳ ಭಾಷೆಯಲ್ಲಿ... !!


ಘಟನೆ ೫ :
ನನ್ನ ಅಕ್ಕನ ಮಗ ರಜೆಗೆಂದು ನಮ್ಮ ಮನೆಗೆ ಬಂದಿದ್ದಾನೆ. ಎರಡು ದಿನದಿಂದಷ್ಟೇ ಸಾನ್ವಿಗೆ ಅವಳ ಅಜ್ಜ ಅಜ್ಜಿ ಬಂದಿದ್ದು, ಈಗ ಅದರ ಜೊತೆ ಅಣ್ಣನ ಬರುವಿಕೆಯಿಂದ ಅವಳಿಗಾದ  ಸಂತೋಷ ಅಷ್ಟಿಷ್ಟಲ್ಲ, ಎಷ್ಟರ ಮಟ್ಟಿಗೆಂದರೆ, ಹಗಲಿಡೀ ಕುಣಿದು ನಲಿದು ರಾತ್ರಿ ಮಲಗೋಣ ನೆಡಿ ಎಂದರೆ "ಅಣ್ಣನ ಜೊತೆಯೇ ನಾನು ಮಲಗುವುದು" ಎಂದು ಹಠ ಮಾಡಿ ತನ್ನ ಕೋರಿಕೆಯನ್ನು ಗಿಟ್ಟಿಸಿಕೊಂಡಳು. ಆದರೆ ೩ ವರ್ಷವೂ ತುಂಬದ ಇವಳಿಗೆ ಅವಳಮ್ಮ ಅಂದರೆ ನಾನು, ಇನ್ನೂ ಅವಳ ಅವಿಭಾಜ್ಯ ಅಂಗ. ನಿದ್ದೆ ಬಂದ ಮೇಲೆ ಅವಳನ್ನು ಎತ್ತಿ ವಾಪಾಸು ನಮ್ಮ ರೂಮಿಗೆ ಕರೆತಂದು ಮಲಗಿಸಿದರಾಯಿತು, ಅವಳಿಗೇನು ವ್ಯತ್ಯಾಸವಾಗುವುದಿಲ್ಲ ಎಂಬ ಅಭಿಪ್ರಾಯದಿಂದ ಅಜ್ಜ, ಅಜ್ಜಿ, ಅಣ್ಣ ಮತ್ತು ನಾನು ಎಲ್ಲರೂ ಅವಳ ಪಕ್ಕಕ್ಕೆ ಮಲಗಿದೆವು. ಇನ್ನೇನು ನಿದ್ರೆ ಅವರಿಸಬೇಕು ಎನ್ನುವಷ್ಟರಲ್ಲಿ, ಮಗಳ ಕೋರಿಕೆ ನಮ್ಮನ್ನು ಆಶ್ಚರ್ಯ ಚಕಿತರನ್ನಾಗಿಸಿತು..! "ಫ್ಯಾಮಿಲಿ ದದ್ದಕ್ಕೆ (ದದ್ದ ಎಂದರೆ ನಮ್ಮ ಆಡು ಭಾಷೆಯಲ್ಲಿ ನಿದ್ರೆ ಎಂದರ್ಥ) ಅಪ್ಪನೂ ಬರಕ್ಕು.... " ಎಂದವಳನ್ನು ಕಂಡು, ನನಗೆ ಕಣ್ಣಂಚಿನಲ್ಲಿ ನೀರು.. ಅತ್ತ ಅಪರೂಪಕ್ಕೆ ಸಿಕ್ಕ ಪ್ರೀತಿ ಪಾತ್ರರಾದ, ಅಜ್ಜ, ಅಜ್ಜಿ, ಅಣ್ಣನನ್ನು ಬಿಡಲೂ ಮನಸಾಗದೆ, ಇತ್ತ ಅಪ್ಪನನ್ನು ಬಿಡಲಾಗದೆ ಕಷ್ಟಪಡುತ್ತಿದ್ದ ಮನಸ್ಸಿನಿಂದ ಹೊರಟ ಮಾತು.. !! ಕೌಟುಂಬಿಕ ಭಾಂದವ್ಯ ಮಕ್ಕಳಿಗೆ ಎಷ್ಟರ ಮಟ್ಟಿಗೆ ಆಳವಾಗಿ ಮನಸ್ಸಿನಲ್ಲಿರುತ್ತದೆ. ಅವಳು ಬಳಸಿದ ಆ ಫ್ಯಾಮಿಲಿ ಎಂಬ ಶಬ್ದವೇ ನಮ್ಮಲ್ಲಿ ಸಂತಸವನ್ನು ಉಂಟು ಮಾಡಿತು :) :)

     

   

ಘಟನೆ ೬ :


ಟಿ.ವಿ ಯಲ್ಲಿ ಇಂದು ಯಾವ ಚಾನಲ್ಲು ತಿರುಗಿಸಿ ಹಾಕಿದರೂ, ವರ್ಧಾ ಚಂಡಮಾರುತಕ್ಕೆ ತತ್ತರಿಸಿದ ಚೆನ್ನೈ ಬಗೆಗಿನ ನ್ಯೂಸ್ ಕಂಡುಬರುತ್ತಿತ್ತು. ಆ ಬಿರುಗಾಳಿ, ಮಳೆ, ಜನರ ಕಷ್ಟ ಎಲ್ಲಾ ವಿಷಯಗಳೂ ಟಿ.ವಿ ಯಲ್ಲಿ ಪುಂಖಾನುಪುಂಖವಾಗಿ ವರದಿಯಾಗುತ್ತಿತ್ತು. ನನ್ನ ಮಗಳು ಕೂಡ ತಲೆಯೆತ್ತಿ ಟಿ.ವಿಯಲ್ಲಿ ಬರುತ್ತಿರುವುದನ್ನು ನೋಡುತ್ತಾ ಪ್ರಶ್ನಿಸಲು ಪ್ರಾರಂಭಿಸಿದಳು. ಅಮ್ಮ ಯಾಕೆ ಅಲ್ಲಿ ಬೋಟ್ ಎಲ್ಲ ಬಿದ್ದೋಯ್ದು?, ಮರ ಎಲ್ಲಾ ಕಿತ್ತೊಯ್ದು, ಬೀಚ್ ಯಾಕೆ ಒದ್ದೆ ಆಯ್ದು, ಯಾಕೆ ಜನರೆಲ್ಲ ಬಲೂನ್ ಬೋಟಲ್ಲಿದ್ದ? ಹೀಗೆ ಹತ್ತು ಹಲವು ಪ್ರಶೆಗಳನ್ನು ಕೇಳತೊಡಗಿದಳು. ಕುಳಿತು ವಿವರಿಸಿದೆ. ಗಾಳಿ ಮಳೆಯ ಆರ್ಭಟ, ನಮ್ಮಲ್ಲಿ ಹೊರಗೆ ಬೀಳುತ್ತಿದ್ದ ಕೇವಲ ಜುಮುರು ಮಳೆ, ಟಿ.ವಿ ಯಲ್ಲಿ ಜನ ತತ್ತರಿಸಿದ್ದ ಬಗೆ ಎಲ್ಲವನ್ನೂ ಹೋಲಿಕೆ ಮಾಡಿ ತಿಳಿಸಿದೆ. "ಪಾಪ ಜನ ಎಷ್ಟು ಕಷ್ಟದಲ್ಲಿಯಿದ್ದ ನೋಡು, ಮನೆ ಎಲ್ಲ ಬಿದ್ದೋದ್ರೆ, ಅವರಿಗೆ safe  ಆಗಿ ಇರಲು ಜಾಗವೂ ಇಲ್ಲ, ಚಳಿ ಥಂಡಿ ಬೇರೆ" ಎಂದೆಲ್ಲಾ.. ಅದನ್ನೆಲ್ಲ ಮತ್ತೆ ವೀಕ್ಷಿಸಿ ನಂತರದಲ್ಲಿ ಅವಳು ಹೇಳಿದ ಮಾತು, ನನ್ನನ್ನು ಮೂಕ ವಿಸ್ಮಿತಳನ್ನಾಗಿ ಮಾಡಿತು.. ನನ್ನ ಪುಟ್ಟ ಕಂದ, ತನ್ನ ಪುಟ್ಟ ಮೆದುಳಿನಲ್ಲಿ ಎಷ್ಟೆಲ್ಲಾ ಯೋಚಿಸಿದ್ದಳೆಂದರೆ, "ಅಮ್ಮಾ, ನಾ ಹಂಗರೆ, ಸವೆ ವವ ಚುಕಿನುವವಂತು ಅಂತ ಸ್ವಾಮೀ ಹತ್ರ ಹೇಳ್ತಿ, ಅವಾಗ ಅವ್ರಿಗೆಲ್ಲ ಮಳೆ ಹೋಗ್ತು, ಮತ್ತೆ ಚಳಿ ಆಗ್ತಲ್ಲೆ..ಎಲ್ಲಾ ಪ್ರಾಬ್ಲೆಮ್ ಹೋಗಿ ಅವ್ರೆಲ್ಲ ಹ್ಯಾಪಿ ಹ್ಯಾಪಿ ಆಗ್ತಾ... "!! "ಸರ್ವೇ ಭವಂತು ಸುಖಿನಃ - ಅಂದರೆ ಪ್ರಪಂಚದಲ್ಲಿ ಯಾರಿಗೂ ಕಷ್ಟ(problem) ಆಗದೆ ಎಲ್ಲರೂ ಸಂತೋಷವಾಗಿರಲಿ (happy happy)" ಎಂದು ಹಿಂದೆ ಅವಳಿಗೆ ಅರ್ಥ ಹೇಳಿಕೊಟ್ಟದ್ದನ್ನು ಮನನ ಮಾಡಿಕೊಂಡು ಅದನ್ನೇ ಇಲ್ಲಿ ಪ್ರಯೋಗಿಸಿದಳು...!!! ಈಗ ನಮ್ಮದೂ ಕೂಡ ಅದೇ ಕೋರಿಕೆಯಾಗಿದೆ.!!

ಘಟನೆ ೭ : ಎಂತಾದರೂ ಆಗು ಮೊದಲು ಮಾನವನಾಗು...

ಈ ಸರ್ತಿ ಕ್ರಿಸ್ತಮಸ್ ರಜೆಗೆಂದು ಅಕ್ಕನ ಮನೆಗೆ ಹೋದಾಗ ನಡೆದ ನಮ್ಮ ಮಕ್ಕಳ ಕುರಿತಾದ ಎರಡು ಬೇರೆ ಬೇರೆ ಘಟನೆಗಳಿವು. ಈ ಘಟನೆಯಲ್ಲಿ ನಮ್ಮ ಮಕ್ಕಳಲ್ಲದೆ ಬೇರೆ ಯಾವ ಮಕ್ಕಳಿದ್ದರೂ ಇಷ್ಟೇ ರೋಮಾಂಚನವಾಗುತ್ತಿತ್ತೇನೋ ನಮಗೆ..!!


ಟೌನ್ಷಿಪ್ ನಲ್ಲಿರುವ ಅಪಾರ್ಟ್ಮೆಂಟ್ ಗಳಿಗೆ ಹೊಂದಿಕೊಂಡಂತೆ ಮಕ್ಕಳ ಪಾರ್ಕ್ಗಳು ಸಾಕಷ್ಟಿವೆ.  ಎಲ್ಲಾ ಪೋಷಕರೂ ತಮ್ಮ ಮಕ್ಕಳನ್ನು ಕರೆದು ತಂದು ಅಥವಾ ಮಕ್ಕಳೇ ಅಲ್ಲಿಗೆ ಬಂದು ಆಡಿಕೊಳ್ಳುವುದು ರೂಢಿ. ನನ್ನ ಅಕ್ಕನ ಮಗನೂ ಸ್ವಲ್ಪ ಹೊತ್ತು ಆಡಿಕೊಳ್ಳಲು ಹೋಗಿದ್ದ. ಆಡುತ್ತಿದ್ದ ಅವನಿಗೆ ತಕ್ಷಣಕ್ಕೆ ಏನು ಯೋಚನೆ ಬಂದಿತೋ ಏನೋ, ದಡಬಡನೆ ಮನೆಗೆ ಬಂದು ರೊಟ್ಟಿನ ಬಾಕ್ಸ್ ಒಂದನ್ನು ತೆಗೆದುಕೊಂಡು ಹೋಗಿ, ಆ ಪಾರ್ಕ್ ನಲ್ಲಿ ಬಿದ್ದಿದ್ದ ಸಣ್ಣ ಪುಟ್ಟ ಕಸಗಳನ್ನೆಲ್ಲ ಹೆಕ್ಕಿ, ಬಾಕ್ಸ್ ನಲ್ಲಿ ತುಂಬಿಕೊಂಡು ಹೋಗಿ, ಹತ್ತಿರದ ಕಸದ ಬುಟ್ಟಿಗೆ ಹಾಕಿ ಬಂದನಂತೆ. ಒಂದು ೬ ವರ್ಷದ ಮಗು ಸ್ವಂತಿಕೆಯಿಂದ ಮಕ್ಕಳ ಪಾರ್ಕ್ ಸ್ವಚ್ಛವಾಗಿಲ್ಲದನ್ನು ಗಮನಿಸಿ, ಅದನ್ನು ಸ್ವಚ್ಛಗೊಳಿಸುವ ಯೋಚನೆ ಮಾಡಬಹುದೆಂದರೆ, ನಾವು ಹಿರಿಯರು ಖಂಡಿತವಾಗಿಯೂ ಯೋಚಿಸಬೇಕಾದ್ದೇ!! ತನ್ನದು garbage truck, ಅದು ಕಸವನ್ನು ತೆಗೆದು ಹಾಕಿ, ಎಲ್ಲಾ ಮಕ್ಕಳಿಗೂ ಆಡಲು clean park  ಕೊಡುತ್ತದೆ ಎಂಬುದು ಅವನ ಸಮರ್ಥನೆ. ಸ್ವಚ್ಛತೆಯ 'ಅರಿವು' ಎಂದರೆ ಇದೇ ಅಲ್ಲವೇ..


ಇನ್ನೊಂದು ಘಟನೆಯೆಂದರೆ, ನಾನು ಮತ್ತು ನನ್ನ ಮಗಳು ಸಾನ್ವಿ, ಹೈದೆರಾಬಾದ್ ನ ಸ್ಥಳೀಯ ರೈಲಲ್ಲಿ ಪ್ರಯಾಣಿಸುತ್ತಿದ್ದೆವು, ಹೆಚ್ಚಿನ ಜನರು MMTS ಟ್ರೈನ್ ಬಳಸುವುದರಿಂದ, ಕಷ್ಟದಲ್ಲಿ ನಮಗೆ ಸೀಟ್ ದೊರಕಿತ್ತು.ಎಲ್ಲಾ  ಕಡೆಗೂ ತನ್ನ ಪುಟ್ಟ ಕಂಗಳಿಂದ ನೋಡುತ್ತಿದ್ದ ಮಗಳು ತಕ್ಷಣಕ್ಕೆ ನನ್ನ ಬಳಿ ಹೇಳಿದಳು. "ಅಮ್ಮಾ , ಏಳು ನೀನು ಅಲ್ಲಿ ಬೇಬಿ ಕರ್ಕೊಂಡಿರೋ ಆ ಆಂಟಿಗೆ ಜಾಗ ಬಿಡು". ತಕ್ಷಣಕ್ಕೆ ಸುತ್ತಲೂ ಕಣ್ಣಾಡಿಸಿ ಅಂತೂ ಆ ಮಹಿಳೆಯನ್ನು ಕರೆದೆನಾದರೂ ಆಕೆ ಮುಂಬರುವ ನಿಲ್ದಾಣದಲ್ಲಿ ಇಳಿಯುವವಳಾದ್ದರಿಂದ ಆಕೆಗೆ ಜಾಗದ ಅವಶ್ಯಕತೆ ಬೀಳಲಿಲ್ಲ. ಆದರೆ ವಿಪರಿಮೀತ ಸಂತೋಷವಾದ್ದೆಂದರೆ ಹಿಂದೊಮ್ಮೆ ನಾನು ಚಿಕ್ಕ ಪಾಪುವಿದ್ದ ತಾಯಿಯಿಬ್ಬರಿಗೆ ಸ್ಥಳ ಬಿಟ್ಟುಕೊಟ್ಟಿದ್ದನ್ನು ಪ್ರಶ್ನಿಸಿ ಒಲ್ಲದ ಮನಸ್ಸಿನಿಂದ ಓಕೆ ಎಂದಿದ್ದ ಮಗಳು ಇಂದು ತಾನೇ ಸ್ವತಃ ಸಹಾಯ ಮಾಡಲು ಮನಸ್ಸು ಮಾಡಿದ್ದು.


ಘಟನೆ ೮ : ಮಗಳೆಂಬ  ವರದಾನ 

ವಿದ್ಯಾಭ್ಯಾಸದ ಸಮಯದಿಂದಲೂ, ಅಪ್ಪಾಜಿ ಅಮ್ಮನ್ನ ಬಿಟ್ಟು ಹೊರಡೋದು ಅಂದ್ರೆ ನಂಗೆ ಕಣ್ಣಂಚಲ್ಲಿ ನೀರು. ಈ ಸರ್ತಿ ಬೇಸಿಗೆ ರಜೆ ಮುಗಿಸಿ ಸಾಗರದಿಂದ ವಾಪಸು ಬೆಂಗಳೂರಿಗೆ ಹೊರಡೋ ಸಮಯ. ಅಪ್ಪಾಜಿ ಅಮ್ಮ ನಮ್ಮನ್ನು ಕಳುಹಿಸಲು ಬಂದಿದ್ದರು. ಟಾಟಾ ಬೈಬೈ ಎಲ್ಲ ಮುಗಿಯಿತು. ಟ್ರೈನ್ ತಾನು ಯಾರಿಗೂ ನಿಲ್ಲುವುದಿಲ್ಲ ಎನ್ನುತ್ತಾ ಹೊರಟೇ ಬಿಟ್ಟಿತು. ನನ್ನ ಎಮೋಷನ್ಸ್ ಬಗ್ಗೆ ಚೆನ್ನಾಗಿ ತಿಳಿದಿರುವ ನನ್ನ ಯಜಮಾನರು, "ಮಗಳೆದುರು ಚಿಕ್ ಮಗು ತರ ಅಳ್ಬೇಡ ಮತ್ತೆ, ನಾನು ಬೆಳಿಗ್ಗೆಯೇ ನಿಮ್ಮನ್ನು ರೈಲ್ವೆ ಸ್ಟೇಷನ್ ನಿಂದ ಕರ್ಕೊಂಡ್ ಬರಕ್ಕೆ ಬಂದಿರ್ತೀನಿ" ಎಂದು ಫೋನಿನಲ್ಲಿ ಸಮಾಧಾನಿಸಿದ್ದೂ ಆಯಿತು. ಟ್ರೈನಿನಲ್ಲಿ ಮಗಳ ಮಂಗಾಟ ನಡೆದಿತ್ತು. ಎಲ್ಲೆಲ್ಲೋ ಹತ್ತಿ, ಹಾರಿ ಜಿಗಿದು ತನ್ನ ಪರಾಕ್ರಮ ಪ್ರದರ್ಶನವನ್ನು ಅಲ್ಲಿದ್ದವರಿಗೂ ತೋರಿಸುತ್ತಿದ್ದಳು. "ಅಮ್ಮ ಇಲ್ನೋಡೇ..." ಎಂದು ಕ್ಷಣ ಕ್ಷಣಕ್ಕೆ ಕೂಗುತ್ತ ಕರೆಯುತ್ತಿದ್ದಳು. "ಹ್ಮ್ ಹ್ಮ್.." ಎಂದು ನಾನು ತಲೆಯಾಡಿಸುತ್ತಿದ್ದರೂ ಮನಸ್ಸು ಮೌನಕ್ಕೆ ಶರಣಾಗಿತ್ತು. ಸ್ವಲ್ಪ ಸಮಯ ತನ್ನ ಸರ್ಕಸ್ ಶೋ ತೋರಿಸಿದ ಇವಳು, ಒಂದು ಕ್ಷಣ ನನ್ನ ಹತ್ತಿರಕ್ಕೆ ಬಂದು ಕೊರಳ ಸುತ್ತ ಕೈ ಚಾಚಿ ಹಿಡಿದುಕೊಂಡು "ಅಮ್ಮ ಎಂತಾತು..?" ಎಂದು ಕೇಳಿದ್ದೇ.. ಅನಿರೀಕ್ಷಿತವಾಗಿ ಬಂದ ಈ ಪ್ರಶ್ನೆಗೆ ತಕ್ಷಣಕ್ಕೆ "ಏನಿಲ್ಲ ಯಾಕೆ?" ಎಂದು ನಾನು ಆಶ್ಚರ್ಯದಿಂದ ಮರುಪ್ರಶ್ನಿಸಿದೆ. "ನೀ ಯಾಕೆ ಖುಷಿ ಮಾಡ್ತಿಯಿಲ್ಲೆಮ್ಮ..?"(ನೀ ಯಾಕೆ ಖುಷಿಯಿಂದಿಲ್ಲ..) ಎಂದು ಕೇಳಿದಳು. ಅವಳನ್ನು ಪಕ್ಕಕ್ಕೆ ಕೂರಿಸಿಕೊಂಡು ಅವಳಿಗರ್ಥವಾಗುವ ರೀತಿಯಲ್ಲಿ ತಿಳಿಸಿದೆ. "ನಾನು ಇಷ್ಟೆಲ್ಲಾ ದಿನ ನನ್ನ ಅಪ್ಪಾಜಿ ಅಮ್ಮನ ಜೊತೆ ಇದ್ದು, ಈಗ ಒಂದೇ ಸರ್ತಿಗೆ ಅವ್ರನ್ನ ಬಿಟ್ಟು ಹೊರ್ಟ್ನಲ್ಲ ಅದಕ್ಕೆ ಸ್ವಲ್ಪ ಬೇಜಾರಾಯ್ತು ಮರಿ..", ಒಂದು ಕ್ಷಣ ಆ ಪುಟ್ಟ ಮನಸ್ಸು ಏನು ಯೋಚಿಸಿತೋ ಏನೋ, "ಅಮ್ಮ ನಿಂಗೆ ಖುಷಿ ಮಾಡಕ್ಕೆ ನಾ ಏನ್ ಮಾಡ್ಲಿ..?" 'ದಿಗ್ಭ್ರಮೆ' ಶಬ್ದದ ಅನುಭವ ಆದಂತಾಯಿತು. "ಓಕೆ..ಕ್ಯಾನ್ ಯು ಪ್ಲೀಸ್ ಗಿವ್ ಮಿ ಆ ಹಗ್ ಮರಿ..ಐ ವಿಲ್ ಬಿ ಆಲ್ರೈಟ್.." ಎಂದೊಂದು ಪರಿಹಾರ ಸೂಚಿಸಿದೆ. ಪ್ರೀತಿಯ ಆಲಿಂಗನ ಮಗಳಿಂದ..ಎಂತಹ ಅಪರಿಮಿತ ಸಂತೋಷವದು  
ಮತ್ತೆ ನಿನ್ನೆ ಹೆಚ್ಚು ಕಮ್ಮಿ ಇಂತದ್ದೇ ಸಂದರ್ಭ ಮರುಕಳಿಸಿತು. ಈ ಸರ್ತಿ ಅಪ್ಪಾಜಿ ಅಮ್ಮ ಬೆಂಗಳೂರಿಗೆ ಬಂದು ವಾಪಸು ಸಾಗರಕ್ಕೆ ಹೊರಟಿದ್ದರು. ಅವರನ್ನು ಬಸ್ ಹತ್ತಿಸಿ ವಾಪಸು ಮನೆಗೆ ಬಂದದ್ದಾಯಿತು. ಒಳಗೆ ಬಂದ ಮಗಳಿಗೆ ಆತಂಕ, "ಕ್ಯಾನುಗಿವ್ ಮಿ ಹಗ್.." ಎಂದೇನೋ ತನ್ನ ತೊದಲು ಮಾತಿನಲ್ಲಿ ಹೇಳಿದಳು. ತಕ್ಷಣಕ್ಕೆ ಅವಳ ಮಾತು ಅರ್ಥವಾಗಲಿಲ್ಲ. ಹತ್ತಿರಕ್ಕೆ ಬಂದದ್ದೇ, ನನ್ನನು ಅಪ್ಪಿಕೊಂಡಳು. ಈ ಸರ್ತಿ ಅರ್ಥವಾಯಿತು.. ತನ್ನಮ್ಮನಿಗೆ ಅವಳ ಅಪ್ಪ ಅಮ್ಮ ಹೋದ್ದು ಬೇಜಾರಾಗಿರಬಹುದೆಂದು ತಾನು ತಿಳಿದುಕೊಂಡ ಪರಿಹಾರವನ್ನು ನೀಡಿಯಾಗಿತ್ತು ಆ ನನ್ನ ಕೂಸು..ಈ ಸರ್ತಿ ಆನಂದ ಭಾಷ್ಪ ಕೂಡ ನನ್ನ ಒಂದು ಮಾತೂ ಕೇಳಲಿಲ್ಲ..!!!

ಘಟನೆ ೭ : ಯಕ್ಷಗಾನ 



Toddler age ಎಂಬ ವಾಕ್ ಸ್ವಾತಂತ್ರ್ಯದ ವಯಸ್ಸಿನಲ್ಲಿರುವ ನನ್ನ ಮಗಳು ಈಗ ಸಾಕಷ್ಟು ಉದ್ದ ಕಥೆಗಳನ್ನು ಕೇಳಿ, ನೋಡಿ ಅರ್ಥ ಮಾಡಿಕೊಂಡು ತನ್ನ ಮನಸ್ಸಿನ ಬೆತ್ತಳಿಕೆಯಿಂದ ನೂರಾರೂ ಪ್ರಶ್ನೆಗಳ ಬಾಣಗಳನ್ನು ಎಸೆಯುತ್ತಲೇ ಇರುತ್ತಾಳೆ. ಬಾಲ ಗಣೇಶ್ ಎಂಬ ಒಂದು ಅನಿಮೇಟೆಡ್ ಕಥೆಯ ಸಂಚಿಕೆಯನ್ನು ನೋಡುತ್ತಿದ್ದ ಇವಳಿಗೆ, ಈ ಮುಂಚೆಯೇ ಈಶ್ವರನ, ತನ್ನ ಸ್ವಂತ ಮಗನ ಮೇಲೆ ಬರುವ ವಿಪರೀತ ಕೋಪ ಮತ್ತು ಮಗನ ರುಂಡವನ್ನೇ ಕತ್ತರಿಸದ ಬಗೆಗಿನ ಕಠೋರತೆ ಇಷ್ಟವಾಗಿರಲಿಲ್ಲ.. ಯಾವಾಗಲೂ ಒಂದು ಬಗೆಯ ಅಸಮಾಧಾನ ಈಶ್ವರನ ಕುರಿತು ಇದ್ದೇ ಇತ್ತು. ಇದಕ್ಕೆ ಸಾಲದೆಂಬಂತೆ, ಕಳೆದ ವಾರ ವೀಕ್ಷಿಸಿದ ಯಕ್ಷಗಾನ ಮೇಳವೊಂದರಲ್ಲಿ ನಡೆದ ಪ್ರಸಂಗ, 'ಧಕ್ಷ  ಯಾಗ'. ಪ್ರಸಂಗದ ಪ್ರಾರಂಭದಲ್ಲೇ ಧಕ್ಷ ಮಹಾರಾಜನಿಗೆ ತನ್ನ ಅಳಿಯನಾದ ಈಶ್ವರ ಸರಿಯಾಗಿ ಆಸ್ಥಾನದಲ್ಲಿ ಸ್ವಾಗತ/ಗೌರವ ಕೊಡಲಿಲ್ಲ ಎಂಬ ಅಸಮಾಧಾನ ವ್ಯಕ್ತವಾಗುತ್ತದೆ. ಧಕ್ಷ ಮಹಾರಾಜನ ಪಾತ್ರ ಮಾಡಿದವರು ತುಂಬಾ ಚೆನ್ನಾಗಿಯೇ ಆ ಪಾತ್ರವನ್ನು ನಿರ್ವಹಿಸಿದರು. ಈಶ್ವರನ ಬಗೆಗಿನ ಅಸಮಾಧಾನ ಮತ್ತು ಅಹಂಕಾರದಿಂದ ಆಡುವ ಮೂದಲಿಕೆ ಎಲ್ಲವೂ ಕಣ್ಣು ಕಟ್ಟುತ್ತಿದ್ದವು. ಹೀಗೆ ಮೂದಲಿಸುವ ಡೈಲಾಗ್ ಒಂದರಲ್ಲಿ ಈಶ್ವರನು ಕೇವಲ ತನ್ನ ಭಕ್ತರ ಚಿತಾ ಭಸ್ಮವನ್ನು ಮೈಗೆ ತೊಡೆದು ಕೊಂಡಿರುತ್ತಾನೆಂದೂ, ಸ್ನಾನವೇ ಮಾಡುವುದಿಲ್ಲವೆಂದು ಹಾಸ್ಯ ಮಾಡುತ್ತಾರೆ. ಮಗಳು ಸಾನ್ವಿಗೆ ತಲೆಗೆ ಹೊಕ್ಕಿದ್ದಷ್ಟೇ.. 'ಈಶ್ವರ ಸ್ನಾನವನ್ನೂ ಮಾಡುವುದಿಲ್ಲ"!!! ಮನೆಗೆ ವಾಪಸು ಬಂದ ನಂತರದಿಂದ ಶುರುವಾದವು ಬೆತ್ತಳಿಕೆ ಬಾಣಗಳು. ಛೀ.. ಈಶ್ವರ ಸ್ನಾನ ಮಾಡದಿಲ್ಯಾ? ನಂತರದಲ್ಲಿ ಬಂದ ಪ್ರಶ್ನೆ, ನನ್ನನ್ನು ಅವಕ್ಕಾಗಿಸಿತು. "ಅಂವ ಯಾಕೆ ಗಣಪತಿಗೆಲ್ಲ ತಲೆ ಕಟ್ ಮಾಡ್ತ, ಚಿಛಿ ಮೈ, ಸ್ನಾನ ಮಾಡದಿಲ್ಲೆ..ಅಂವ ಯಾಕೆ ಸ್ವಾಮಿ ಆಯ್ದ? ಅಂವ ಸ್ವಾಮಿ ಆಗದ್ ಬೇಡ, ನಂಗಿಷ್ಟ ಇಲ್ಲೆ"!! ನಮ್ಮ ಕ್ಯಾಬಿನೆಟ್ ಮಿನಿಸ್ಟರ್ ಗಳ ಆಯ್ಕೆಗೆ ಕೂಡ ಇಷ್ಟರ ಮಟ್ಟಿಗೆ ಅಸಮಾಧಾನ ಬಂದದ್ದು ಸುಳ್ಳು. ಈಗ ಆ ಶಿವನನ್ನು ಶಿವನೇ ಕಾಪಾಡಬೇಕು!! 

ಘಟನೆ ೮ : ಫುಟಬಾಲ್ ಮ್ಯಾಚು 



ಫೀಫಾ ವರ್ಲ್ಡ್ ಕಪ್ ಮ್ಯಾಚು, ಡೆನ್ಮಾರ್ಕ್ ಫ್ರಾನ್ಸ್ ಮಧ್ಯೆ ಪೈಪೋಟಿ, ಸಾನ್ವಿಯ ಅಪ್ಪ ಫುಲ್ ತಲೆ ಕೆಡೆಸಿಕೊಂಡು ಮ್ಯಾಚ್ ನೋಡ್ತಾ ಇರೋ ಸಂದರ್ಭ..
ತನ್ನೆಲ್ಲ ಆಟ ಮುಗಿಸಿ ಮಗಳು ಎಂಟ್ರಿ ಕೊಟ್ಟಿದ್ದೇ, ಏನೋ ಗಲಾಟೆ ಮಾಡ್ಕೊಂಡು ಇದ್ಲು ತನ್ನ ಕಡೆ ಎಲ್ಲರ ಗಮನ ಬರಲಿ ಅಂತ.. ಇನ್ನು ಅವಳು ನಮಗೆ ಟಿ.ವಿ ನೋಡಲು ಬಿಡಬೇಕೆಂದರೆ ಅವಳನ್ನ ಹೇಗಾದರೂ ಎಂಗೇಜ್ ಮಾಡಲೇ ಬೇಕು. ಸರಿ ನನ್ನದೊಂದು ಸಣ್ಣ ಪ್ರಯತ್ನ ನಡೆಯಿತು ಫುಟ್ ಬಾಲ್ ಮ್ಯಾಚ್ ಅರ್ಥ ಮಾಡಿಸಿಬಿಡನ ಅವಾಗ ನಮ್ಮ ಜೊತೆ ಅವಳೂ ನೋಡ್ತಾಳೆ ಎಂದು.. ;) :P 


"ಅಲ್ನೋಡು ಮರಿ, ಎರಡು ಟೀಮ್ ಇರತ್ತೆ, ಬಾಲನ್ನ ಕೈಯಲ್ಲಿ ಮುಟ್ಟದೆ, ಕಾಲಲ್ಲೇ ಕಿಕ್ ಮಾಡ್ತಾ, ಒಂದು ಟೀಮ್ ಅವ್ರು ಮತ್ತೊಂದು ಟೀಮ್ ಅವ್ರಿಗೆ ಸಿಗದಂತೆ ಬಾಲ್ನ ಪಾಸ್ ಮಾಡ್ತಾ ಗೋಲ್ ಏರಿಯಾ, ಅಲ್ಲಿ ಮೆಶ್ ತರ ಇದ್ಯಲ ಅಲ್ಲಿ ಕಾಯ್ತಾ ಇರೋ ಒಬ್ಬ ಪ್ಲೇಯರನ್ನೂ ತಪ್ಪಿಸಿ ಬಾಲನ್ನ ಕಾಲಲ್ಲಿ ದೂಡಬೇಕು.. " ಅಂತೆಲ್ಲ ಒಂದಷ್ಟು ಅವಳಿಗರ್ಥವಾಗೋ ಹಾಗೆ ತಿಳಿಸಿದೆ.. ಸ್ವಲ್ಪ ಹೊತ್ತು ನೋಡಿ, "ಅಯ್ಯೋ ಆ ರೆಡ್ ಮನುಷ್ಯ ಬೀಳದ್ ಬೇಡಾಗಿತ್ತು.., ಹೋತಾ ಅಮ್ಮ ಬಾಲ್ ಈಗ ಗೋಲ್ ಒಳಗೆ?.., ಯಾಕೆ ಎಲ್ರೂ ಒಂದೇ ಕಡೆ ಓಡ್ತಿದಾರೆ?.." ಅಂತೆಲ್ಲ ತನ್ನ ಪುಟ್ಟ ಮನಸ್ಸಿನ ಸಂಶಯಗಳನ್ನೆಲ್ಲ ನಾನಾ ಪ್ರಶ್ನೆಗಳ ಮೂಲಕ ನಾನ್ ಸ್ಟಾಪ್ ಕೇಳ್ತಾನೆ ಇದ್ಲು..ನಮ್ಮದೂ ಕೂಡ ಅರ್ಥ ಮಾಡಿಸೋ ಪ್ರಯತ್ನ ಮುಂದುವರೆದಿತ್ತು..
ಅದಾಗಿ ಹತ್ತು ನಿಮಿಷ ಸುಮ್ನೆ ಕೂತು ನೋಡಿದ್ಲು..ಆಮೇಲೆ ಸಡನ್ ಆಗಿ "ಈ ಆಟ ಸರಿ ಇಲ್ಲೇ,.." ಅಂದ್ಲು! ಒಂದ್ ಕಡೆ ಟೈಟ್ ಮ್ಯಾಚ್, ಇನ್ನೊಂದ್ ಕಡೆ ಮಗಳ ವತಾರ.. ಅವಳಪ್ಪನ ಮೌನ ಮುರೀತು. "ಯಾಕೆ ರಾಣಿ?" ಅಂತ ಕೇಳಿದ್ದಕ್ಕೆ ಇವಳ ಉತ್ತರ - "ಅವ್ರೆಲ್ಲ ಟರ್ನ್ ತಗಂಡು ಆಡಕ್ಕಾಗಿತ್ತು, ಒಂದ್ ಸಲ ರೆಡ್ ಅವ್ರು ಮಾತ್ರ ಆಡಕ್ಕೂ..ಒಂದು ಸಲ ವೈಟ್ ಅವ್ರು ಮಾತ್ರ ಆಡಕ್ಕೂ..ಹಂಗೆ ಆಟ ಅಡಕ್ಕು, ಅವಾಗ ಫೈಟ್ ಆಗ್ತಲ್ಲೆ.. ಸರಿ ಇಲ್ಲೇ ಈ ಆಟ.." ಎಂದು ನಾವು ದೊಡ್ಡವರು ಮಕ್ಕಳ ಕೋಳಿ ಜಗಳಕ್ಕೆ ಕೊಡುವ ಪರಿಹಾರವನ್ನು ಕೊಟ್ಟು ಎದ್ದು ಹೊರಟೇ ಬಿಟ್ಲು.. ಈಗ ಮುಖ ಮುಖ ನೋಡಿಕೊಳ್ಳೋ ಸರದಿ ನಮ್ದು...


ಘಟನೆ ೯  : Be Present

ಮಗಳಿಗೆ ನಿನ್ನ ಸಂಜೆ ಸಾಂಬಾರಿಗೆ ಬೀಟ್ರೂಟ್ ಹೆಚ್ಚಲುಕೊಟ್ಟಿದ್ದೆ. ಹೆಚ್ಚುವಾಗ ಕೈ ಸ್ವಲ್ಪ ಗಾಯ ಮಾಡಿಕೊಂಡಳು. ಗಾಯಕ್ಕೆ ರಿಪೇರಿ ಕೆಲಸ ಮುಗಿದ ನಂತರ, 

" ಅಮ್ಮ ನಾನು ಸುಮಾರ್ ಸಲ ತರಕಾರಿ ಹೆಚ್ಚಕ್ಕಿದ್ದಲ್ಲಿ ಕೈ ಗಾಯ ಮಾಡ್ಕತ್ತಿ, ತುರಿಮಣೆಲಿ ಕ್ಯಾರೆಟ್ ತುರಿಯಕಿದ್ದಲ್ಲಿ, ಮೆಟಗತ್ತಿ ಮಣೆಲಿ ಕಾಯಿ ಹೆರ್ಯಕ್ಕಿದ್ದಲ್ಲಿ ಕೈ ತುರ್ಕತ್ತಿ, ನಂಗೆ ಯಾಕೆ ಸರಿ ಬರ್ತಾ ಇಲ್ಲೆ ??" ಎಂದು ಕೇಳಿದಳು. 

ಮಗಳು ತನ್ನ ಬಗ್ಗೆ ತಾನು ಬೇಸರಿಸಿಕೊಳ್ಳುವುದು ಬೇಡವೆಂದು, 

" ಪರ್ವಾಗಿಲ್ಲೆ ಪುಟಿ, ಇಷ್ಟು ವರ್ಷ ನಾ ಅಡಿಗೆ ಮಾಡಿದ್ನಲೆ, ನಂಗೂ ಒಂದೊಂದು ಸಲ ಹಂಗಾಗ್ತು, ಪ್ರಾಕ್ಟೀಸ್ ಆಗ್ತಾ ಆಗ್ತಾ ತಪ್ಪು ಕಮ್ಮಿ ಆಗುತ್ತಾ ಹೋಗ್ತು" ಎಂದೆ. 

10 ಸೆಕೆಂಡುಗಳ ಪಾಸ್.. 

ಆಮೇಲೆ ಆ ಕಡೆಯಿಂದ ಪ್ರಶ್ನೆ ಬಂತು.

 "ನಿಂಗೆ ಹೆಂಗೆ ಗೊತ್ತಿದ್ದು ನೀ ಮಾಡ್ತಾ ಇರದು ಸರಿ ಇದ್ದು ಅಂತ? ತಪ್ತಪ್ way ನೇ, ಪ್ರಾಕ್ಟೀಸ್ ಮಾಡಿದ್ಯೇನ.. "

 ಮತ್ತೊಂದೆರಡು ಸೆಕೆಂಡುಗಳ ಪಾಸ್, 

" ನಂಗೊತ್ತಾತು, ಅದು ತರಕಾರಿ ಕಟ್ ಮಾಡಕ್ಕಿದ್ದಲ್ಲಿ,  ತುರಿಯಕಿದ್ದಲ್ಲಿ, ಮೈಂಡಿಗೆ ಹೇಳಕ್ಕು be ready ಅಂತ, ಕೈ ಮತ್ತು ಕಣ್ಣು ಎರಡನ್ನೂ ಒಟ್ಟಿಗೆ ರೆಡಿ ಇಟ್ಟಕಳಕ್ಕು.. ಎರಡು ಟುಗೆದರ್ ಒಂದೇ ಸ್ಪೀಡಲ್ಲಿ ಹೋದ್ರೆ, ಅವಾಗ ಕೈತುರ್ಕತಲ್ಲೆ next time try ಮಾಡ್ತಿ ನಾನು without ಕೈ ತುರಿಯಿಂಗ್" ಎಂದು ಎದ್ದು ಹೋದಳು! 

"Be Present" ಅನ್ನುವ phrase, ಯಾರೋ  ದೊಡ್ಡ ಜ್ಞಾನಿಗಳು ಹೇಳಿದರೆ ಮಾತ್ರ wow ಎನಿಸುವ ನಮ್ಮಂತವರಿಗಾಗಿ...

#ಸಾನ್ವಿಸ್ಟೋರಿ #bepresent #practiceright

5 ಕಾಮೆಂಟ್‌ಗಳು:

  1. 3rd and last incidents are awesome. Big msg from small child. V so called grownups ve forgot these basic knowledge of life, kids are our teachers need to learn many things from them.

    ಪ್ರತ್ಯುತ್ತರಅಳಿಸಿ
  2. 3rd and last incidents are awesome. Big msg from small child. V so called grownups ve forgot these basic knowledge of life, kids are our teachers need to learn many things from them.

    ಪ್ರತ್ಯುತ್ತರಅಳಿಸಿ