ಗುರುವಾರ, ಆಗಸ್ಟ್ 15, 2019

some-ಬಂಧಗಳು

 ಉತ್ತರಾಖಂಡದ ಕೆಲವು ಸ್ಥಳಗಳಿಗೆ ಟ್ರೆಕ್ಕಿಂಗ್ ಹೋಗಲು ಏಜೆನ್ಸಿ ಒಂದರಿಂದ ಬುಕ್ ಮಾಡಿಕೊಂಡಿದ್ದೆವು. ಹೃಷಿಕೇಶ್ ಹತ್ತಿರದ ತಪೋವನ್ ಎಂಬ ಸ್ಥಳದಿಂದ ನಮ್ಮ ಪಿಕ್ಅಪ್ ನಿಗದಿಯಾಗಿತ್ತು. ಹರಿದ್ವಾರದಿಂದ ಚಾರಣಿಗರನ್ನೆಲ್ಲ ಕರೆದುಕೊಂಡು ಹೊರ

ಟ ಟಿ.ಟಿ ಯಲ್ಲಿ ಸ್ಥಳವಿಲ್ಲದ್ದರಿಂದ, ಅವರದ್ದೇ ಇನ್ನೊಂದು ವಾಹನ, ಹಿಂದಕ್ಕಿದ್ದ ಟಾಟಾ ಸುಮೋದಲ್ಲಿ ನನ್ನನ್ನು ಮತ್ತು (ಲಕ್ಷ್ಮಿ) ಚಿನ್ನಕ್ಕಳನ್ನು ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಿದ್ದರು.ಅನೇಕ ಸ್ಥಳಗಳಿಗೆ ಫ್ಯಾಮಿಲಿ ಟ್ರಿಪ್ಸ್ ಓಡಾಡಿದ್ದೆ ಆದರೆ ಮನೆಯಿಂದ ಈ ರೀತಿಯಾಗಿ ಒಬ್ಬಳೇ ಹೊರಟಿದ್ದು ಇದೇ ಮೊದಲ ಅನುಭವ. ಚಾರಣದ ಸ್ಥಳ, ಚಾರಣಿಗರ ಸಂಗಡ, ಅಲ್ಲಿ ದೊರಕಬಹುದಾದ ಸುರಕ್ಷೆ, ವ್ಯವಸ್ಥೆ ಅವ್ಯವಸ್ಥೆಗಳ ಕುರಿತು ಒಂದು ಚೂರು ಅಳುಕು ಇದ್ದದ್ದೂ ನಿಜ.. ಮಳೆಯ ಪರಿಣಾಮವಾಗಿ (ಮಳೆ ಹೆಚ್ಚಾದಾಗ ಯಾವ ಸಮಯಕ್ಕೆ ಯಾವ ರಸ್ತೆಗೆ ಯಾವ ಗುಡ್ಡಗಳು ಕುಸಿದು ಬೀಳುತ್ತವೆ ಎಂದು ಹೇಳಲಾಗದಂತಹ ಪರಿಸ್ಥಿತಿ) ಸುಧೀರ್ಘ 1.5 ತಾಸಿನ ಕಾಯ್ವಿಕೆಯ ನಂತರ ಬಂದು ತಲುಪಿದ ಗಾಡಿಯನ್ನು ಹತ್ತಿ ಕುಳಿತೆವು. ಪಕ್ಕಕ್ಕೆ ನೋಡಿದರೆ ಇಬ್ಬರು ದೈತ್ಯಾಕಾರದ ವ್ಯಕ್ತಿಗಳು. ಮಳೆಯ ರೈನ್ಕೋಟ್, ಬೆನ್ನಿಗೆ ಹೊತ್ತಿದ್ದ ದೊಡ್ಡ ಬ್ಯಾಗ್, ನಮ್ಮ ನೀರಿನ ಬಾಟಲ್, ಕ್ಯಾಮೆರಾ ಎಲ್ಲವನ್ನೂ ಒಂದು ಹಂತಕ್ಕೆ  ಜೋಡಿಸಿ ಎತ್ತಿಟ್ಟು, ಕುಳಿತುಕೊಳ್ಳಲು ಸ್ಥಳವನ್ನೆಲ್ಲ ಸರಿ ಮಾಡಿಕೊಂಡದ್ದಾಯಿತು. ನಮಗೋ ಆ ಕಡೆ ಈ ಕಡೆ ಪ್ರಕೃತಿಯ ಸೌಂದರ್ಯ ನೋಡಿ ಮನಸ್ಸು ಹುಚ್ಚೆದ್ದು ಕುಣಿಯುತ್ತಿತ್ತು. ನಾನು ಚಿನ್ನಕ್ಕ ಒಂದಷ್ಟು ಹೇಳಿಕೊಂಡು ಸಂಭ್ರಮ ಪಟ್ಟೆವು. ತಿರುಗಿ ನೋಡಿದರೆ ಇವರಿಬ್ಬರದು ಮುಖದಲ್ಲಿನ ಒಂದು ಗೆರೆಯೂ ಅಲ್ಲಾಡದಂತಹ ಗಂಭೀರ ಮೌನ!  ನಮ್ಮಿಬ್ಬರದು ನಿಲ್ಲದ ಸಂಭಾಷಣೆಯಾದರೆ, ಈ ಅಜಾನುಭಾಹುಗಳದ್ದು ಕಿಟಕಿಯಾಚೆಗಿನ ಕೇವಲ ಕಣ್ಣೋಟದ ಚಟುವಟಿಕೆಯಷ್ಟೇ.. ಈ ಗಂಭೀರ ವದನರನ್ನು ನೋಡಿ, ಕಡೆಗೂ ಸಾಕಾಗಿ, ಚಾರಣಿಗರನ್ನು ಪರಸ್ಪರ ಪರಿಚಯ ಮಾಡಿಕೊಳ್ಳುವುದು ಉತ್ತಮವೆನಿಸಿ, ಮೌನ ಮುರಿದದ್ದಾಯಿತು. ಪರಸ್ಪರ ಪರಿಚಯದ ನಾಲ್ಕು ಸಾಲುಗಳು ವಿನಿಮಯಗೊಂಡವು. ಸೌಮ್ಯ ಯಾರು, ಲಕ್ಷ್ಮಿ ಯಾರು, ಅಜಯ್ ಯಾರು, ತುಷಾರ್ ಯಾರು ಎಂಬೆಲ್ಲ ಕನ್ಫ್ಯೂಷನ್ ನೀಗಿಸಿ, ನಾವು ಕರ್ನಾಟಕದವರು ಎಂದೆಲ್ಲ ತಿಳಿಸಿ ಅವರ ಊರ್ಯಾವುದೆಂದು ಕೇಳಿದಾಗ, 'ಹಮ್ ಲೋಗ್ ಕುರುಕ್ಷೇತ್ರ್ ಸೆ ಹೈ.." ಎಂದ ಅವರಲ್ಲೊಬ್ಬ.. ಅಷ್ಟೇ ನೋಡಿ! ನನಗೋ ಡಿಡಿ ನ್ಯಾಷನಲ್ ನಲ್ಲಿ ಬರುತ್ತಿದ್ದ ಮಹಾಭಾರತ್ ಹಾಡಿನ ಟೈಟಲ್ ಮ್ಯೂಸಿಕ್, ಆ ಯುದ್ಧದ ಚಿತ್ರಗಳು, ವಿಲ್ಲನ್ಗಳು ಎಲ್ಲಾ ಟಕಟಕಟಕ ಎಂದು ನನ್ನ ಕಂಪ್ಯೂಟರ್ ಕೀ ಬೋರ್ಡ್ ಕುಟ್ಟುವ ಶಬ್ಧದಂತೆ ಒಂದಾದ ಮೇಲೊಂದರಂತೆ ತಲೆಯಲ್ಲಿ ಓಡತೊಡಗಿದವು.. ಅಂತೂ ಸಾವರಿಸಿಕೊಂಡು ವಾಸ್ತವಕ್ಕೆ ಮರಳಿ ಮಾತನ್ನು ಮುಂದುವರೆಸಿ, ಅಷ್ಟಿಷ್ಟು ಸುದ್ದಿ ಹೇಳುತ್ತಾ ಮುಂದುವರೆಯಿತು ನಮ್ಮ ನಾಲ್ಕು ಜನರ ಪ್ರಯಾಣ. ಹಿಂದಿ ಸುಲಲಿತವಾಗಿ ಮಾತನಾಡಬಲ್ಲವರಾದ್ದರಿಂದ ನಮಗೆ ಭಾಷೆಯ ಸಮಸ್ಯೆ ತಲೆದೋರಲಿಲ್ಲ. ನಂತರಕ್ಕೆ ತಿಳಿದ ವಿಷಯವೆಂದರೆ ಅವರಿಬ್ಬರೂ ಹರ್ಯಾಣ ಬಿಟ್ಟು ಹೆಚ್ಚು ಹೊರಗೆ ಹೋದವರಲ್ಲ. ಕರ್ನಾಟಕವಂತೂ ಉಂಹೂಂ ಈ ಕಡೆಗೂ ತಲೆ ಹಾಕಿಯೂ ಮಲಗಿಲ್ಲ.. ಕನ್ನಡ ಈ ಹಿಂದೆ ಕೇಳಿಯೇ ಇಲ್ಲ.. ಆಲೈಸಿದರೂ, ನಮ್ಮ ಮಾತುಕತೆ ಅವರಿಗೆ ಒಂದಾಕ್ಷರವೂ ಅರ್ಥವಾಗುತ್ತಿರಲಿಲ್ಲ. ಭಾಷೆಯ ಸಮಸ್ಯೆಗಾಗಿ ಅವರಿಬ್ಬರು ಅಷ್ಟು ಮೌನ ಯೋಗಿಗಳಾದ್ದು.. :) ಅಂದೇ ರೋಡಿನ 12 ತಾಸಿನ ಪ್ರಯಾಣವಿದ್ದುದರಿಂದ ರಾತ್ರೆ ಪಾಂಡುಕೇಶ್ವರ್ ತಲುಪುವಷ್ಟರಲ್ಲಿ ಅವರಿಬ್ಬರು ಒಳ್ಳೆ ಸ್ನೇಹಿತರಾದರು. ನಾಡು-ನುಡಿ, ಆಚರಣೆ-ಸಂಸ್ಕೃತಿ ಎಲ್ಲವೂ ಭಿನ್ನವಾಗಿದ್ದರಿಂದ ಹಾದಿಯುದ್ದಕ್ಕೂ ನಮಗೆ ಮಾತನಾಡಲು ಚರ್ಚಿಸಲು ಅನೇಕ ವಿಷಯಗಳು ದೊರೆತವು. ಮುಂದಿನ 5 ದಿನಗಳು ಇತರ 25 ಚಾರಣಿಗರ ಜೊತೆ ಇವರುಗಳು ನಮ್ಮ ಜೊತೆ ಚೆನ್ನಾಗಿಯೇ ಬೆರೆತರು. ಇವರೆಲ್ಲರ ಜೊತೆ ಸಂಜೆ ಕೂತು ಹರಟುತ್ತಿದ್ದೆವು. ನಗು-ತಮಾಷೆ, ಕಾಲೆಳೆಯುವುದು ಎಲ್ಲವೂ ನಮ್ಮ ಪ್ರವಾಸದ ಚಾರಣದ ಪ್ರಯಾಸವನ್ನು ಮರೆಸುತ್ತಿತ್ತು. ಮೊದಲ ದಿನ ಮೊದಲ ಕ್ಷಣ ಮ್ಯಾಮ್ ಎಂದು ಮಾತನಾಡಿಸಿದವರು, ಕಡೆಗೆ ಸೌಮ್ಯ ಲಕ್ಷ್ಮೀ ಎಂದು ಹೆಸರಿಡಿದು ಕರೆಯುತ್ತಿದ್ದರು. ಇನ್ನೂ ಹೆಚ್ಚಿನ ಪರಿಚಯವಾದಂತೆ ಸಲಿಗೆ ಯಿಂದಲೇ ಒಂದಷ್ಟು ನಮ್ಮಿಂದ ಕನ್ನಡ ಪದಗಳನ್ನು ಕಲಿತರು. 'ತುಂಬಾ ಚೆನ್ನಾಗಿದೆ' ಎಂದು ಹೇಳಲು ಕಲಿತದ್ದು ಮೊದಲ ಪಾಠ. ಅದು ಸರಿ ಕೂಡ. ಏಕೆಂದರೆ ಅಲ್ಲಿನ ಪ್ರಕೃತಿ ಸೌಂದರ್ಯವನ್ನು, ಮೇಲೆ ಮೇಲೆ ಹತ್ತಿದಂತೆ ಗೋಚರವಾಗುತ್ತಿದ್ದ ಆ ಸೊಬಗನ್ನು ಹೊಗಳಲು ಒಂದೆರಡು ಭಾಷೆಯ ಪದಗಳು ಸಾಲುತ್ತಿರಲಿಲ್ಲ. ಹೀಗೆ ಒಂದೊಂದೇ ಕನ್ನಡ ಪದಗಳನ್ನು ನಮ್ಮಿಂದ ಕಲಿಯುವುದು, ನಮ್ಮ ಹಿಂದಿ ವ್ಯಾಕರಣ ತಪ್ಪಿದಾಗ ಸರಿಮಾಡುವುದು ಎಲ್ಲವೂ ಜೊತೆಜೊತೆಯಲ್ಲೇ ಸಾಗಿತ್ತು. ಒಂದು ದಿನ ತುಷಾರ್ ಮತ್ತು ಅಜಯ್ ಇಬ್ಬರೂ ನಮ್ಮ ಬಳಿ ಬಂದು, ಹಿರಿಯ ಕಿರಿಯ ಸಹೋದರ ಸಹೋದರಿಯರಿಗೆ ಕನ್ನಡದಲ್ಲಿ ಏನು ಹೇಳುತ್ತಾರೆ ಎಂದು ಕೇಳಿಕೊಂಡು 4-5 ಸಲ ಅಭ್ಯಾಸಿಸಿ ಆ ನಂತರಕ್ಕೆ ನನಗೆ 'ಅಕ್ಕಾ..' ಎಂದೂ ಲಕ್ಷ್ಮಿಗೆ 'ಚಿನ್ನಕ್ಕ' ಎಂದೂ ಕರೆಯಲಾರಂಭಿಸಿದ್ದರು. ಒಂದೊಳ್ಳೆಯ ಸ್ನೇಹ ದೊರೆತಿತ್ತು ಅವರಿಬ್ಬರು ಸಹೋದರರಿಂದ..ಜೊತೆಗೆ ಅದೊಂದು ರೀತಿಯ ಖುಷಿ ನಮಗೆ ಕನ್ನಡದಲ್ಲಿ ಕರೆಸಿಕೊಳ್ಳಲು. ಆದರೆ ಬಳಕೆಯೇ ಇಲ್ಲದ ಪದಗಳನ್ನು ಮತ್ತೆ ಮತ್ತೆ ಮರೆಯುತ್ತಿದ್ದರವರು. ಅವರ ಪೇಚಾಟ ನೋಡಿ 'Its OK, aap hamhe sis ya deedi bulaasakteho' ಎಂದಿದ್ದೆ ಒಂದು ದಿನ. 'I can, but u seem so happy when I call u so Akka..' ಎಂದಿದ್ದ (ತೀರಾ ಪುಟ್ಟಕ್ಕಿಲ್ಲದ) ಆ ಹುಡುಗ ತುಷಾರ್. ವಾಪಸು ಹರಿದ್ವಾರಕ್ಕೆ ಮರಳುವಾಗ ಜೋಷಿಮಠ ಎಂಬ ಊರು ಸಿಗುತ್ತದೆ. ಅಲ್ಲಿ ನಮ್ಮ ಶಂಕರಾಚಾರ್ಯರ ಮಠವಿದೆ. ಅದು ನಮ್ಮ ಟ್ರಿಪ್ ಪ್ಯಾಕೇಜ್ ನ ಇಟರ್ನರಿ ಯಲ್ಲಿರಲಿಲ್ಲ. ಆದರೆ ನಮ್ಮಿಬ್ಬರಿಗೆ ಅದನ್ನೊಂದು ನೋಡುವ ಆಸೆ. ಹೇಳಿಕೊಂಡಿದ್ದೆವು ಮುಂಚಿತವಾಗಿಯೇ ಒಮ್ಮೆ ಸಾಧ್ಯವಾದರೆ ಅಲ್ಲಿಗೆ ಹೋಗಬೇಕೆಂದು. ನಮ್ಮಗಳ ಆಸೆ ನೆರವೇರಿಸಲು ಪುನ್ಹ ಇವರುಗಳೇ ನಮ್ಮ ಜೊತೆಗಾರರಾಗಿ ಹರಿದ್ವಾರಕ್ಕೆ ಬರುವ ಗಾಡಿಗೆ ಬಂದು, ನಮ್ಮ ಜೊತೆ ಶಂಕರಾಚಾರ್ಯರ ಮಠಕ್ಕೆ ಭೇಟಿ ನೀಡಿ, ಅವರ ಅರಿವಿಗೆ ಗೊತ್ತಾಗುವಷ್ಟು ನಮ್ಮಷ್ಟೇ ಆಸಕ್ತಿಯಿಂದ ತಿಳಿದುಕೊಂಡರು. ಬೆಂಗಳೂರಿನ ಟ್ರಾಫಿಕ್ ನ್ನು ದಾಟಿಕೊಂಡು ಎಡೆಬಿಡದೆ ನಡೆಯಲು ಅಭ್ಯಾಸವಾಗಿರುವ ನನ್ನ ನಡಿಗೆಗೆ ಅವರಿಬ್ಬರೂ ಯಾವಾಗಲೂ ಹೌಹಾರಿ ಹೋಗುತ್ತಿದ್ದರು. ಎಲ್ಲಿ ನಾನು ಯಾವುದಾದರೂ ಗಾಡಿಗೆ ಗುದ್ದಿಕೊಳ್ಳೋತ್ತೇನೋ ಎಂಬ ಅಳುಕು ಅಜಯ್ ಗೆ.. ಒಂದೆರಡು ಸಲ ಆಳೆತ್ತರದ ಆ ಮನುಷ್ಯ ನನ್ನ ನಡಿಗೆಯ ಸ್ಪೀಡಿಗೆ ಬಂದು, ಕೈಹಿಡಿದು ರಸ್ತೆ ಬದಿಗೆ ಎಳೆದು ಕೊಳ್ಳುತ್ತಿದ್ದ :P ಚಾರಣ ಮುಗಿಸಿದ ನಂತರ ಟ್ರೆಕ್ ಏಜೆನ್ಸಿಯವರು ನಮ್ಮನ್ನು ಹರಿದ್ವಾರಕ್ಕೆ ಬಿಟ್ಟು ಹೋಗುತ್ತಾರೆ. ರಾತ್ರಿ ಅಲ್ಲೇ ಹೊಟೇಲವೊಂದರಲ್ಲಿ ತಂಗಿದ್ದು,  ಮರುದಿನ ಡೆಹ್ರಾಡೂನ್ ನಿಂದ ಬೆಂಗಳೂರಿಗೆ ಫ್ಲೈಟ್ ನಲ್ಲಿ ಪ್ರಯಾಣಿಸುವುದು ನಮ್ಮಿಬ್ಬರ ಪ್ಲಾನ್ ಆಗಿತ್ತು. ಮಳೆ ಎಲ್ಲೆಡೆ ಹೆಚ್ಚಾಗಿತ್ತು. ಈ ಸಹೋದರರು ಮಾತ್ರ ತಮ್ಮ ತಮ್ಮಲ್ಲಿಯೇ ಚರ್ಚಿಸಿಕೊಂಡು,ಹರಿದ್ವಾರದಿಂದ 5 ತಾಸಿನಲ್ಲಿ ತಮ್ಮ ಊರಿಗೆ ಅಂದೇ ಬಸ್ಸಿನಲ್ಲಿ ಪಯಾಣಿಸಬಹುದಾಗಿದ್ದರೂ ಹೋಗದೇ, ನಮ್ಮ ಜೊತೆ ಅಂದು ಅಲ್ಲಿಯೇ ತಂಗಿ, ಊಟ ,ರಾತ್ರೆಯ ಹರಿದ್ವಾರದ  ರಸ್ತೆಗಳಲ್ಲಿ ಓಡಾಟ, ಅಲ್ಲಿನ ಪ್ರಸಿದ್ಧ ಬಿಸಿ ಬಿಸಿ ದೂಧ್, ಚಾಟ್ಸ್ ಎಲ್ಲವಕ್ಕೂ ಸಾಥ್ ನೀಡಿ ಮರುದಿನ ಬೆಳಿಗ್ಗೆ ಮುಂಜಾವಿನಲ್ಲಿ ಟಾಟಾ ಬೈಬೈ ಹೇಳಿ  ಮುಂದೆ ಸಾಗಿದರು. ಅಷ್ಟಕ್ಕೂ ಮುಗಿದಿರಲಿಲ್ಲ ಆ ತಮ್ಮಂದಿರ ಕೇರಿಂಗ್!! ಸುಪ್ರಸಿದ್ಧ ಗಂಗಾರತಿ ಒಮ್ಮೆ ನೋಡಬೇಕೆಂಬುದು ನನ್ನ ಬಹುದಿನಗಳ ಆಸೆಯಾಗಿತ್ತು. ಹರಿದ್ವಾರದ ಸಂಜೆಯ ಆರತಿ ತುಂಬಾ ಫೇಮಸ್. ಅದು ಹಿಂದಿನ ದಿನ ನಾವು ತಲುಪುವ ಸಮಯ ತಡವಾದ್ದರಿಂದ ನಮಗೆ ಸಿಗಲಿಲ್ಲ. ಬೆಳಗ್ಗೆ ಒಂದು ಚಿಕ್ಕದಾಗಿ ಆರತಿ ಇರುತ್ತದೆ ಎಂಬ ಮಾಹಿತಿಯ ಪಡೆದುಕೊಂಡು, ಬೆಳಿಗ್ಗೆ 5 ಗಂಟೆಗೆ ಹರ್ ಪೌರಿ ಘಾಟ್ ಗೆ ನಾನು ಒಬ್ಬಳೇ ಹೊರಟಿದ್ದೆ. ಸೈಕಲ್ ಟಾಂಗಾ ಅಲ್ಲಿನ ಸರ್ವೇಸಾಮಾನ್ಯ ಸವಾರಿ. ಆರತಿ ನೋಡಿ ಮತ್ತೆ ವಾಪಸು ಹೋಟೆಲ್ ಗೆ ಬರುವವರೆಗೆ, ತಾನು ಬಸ್ಸಿನಲ್ಲಿ ಊರಿಗೆ ಪ್ರಯಾಣಿಸುತ್ತಿದ್ದರೂ, ಮೊಬೈಲಿನ ಚಾಟ್ ಕಿಟಕಿಯಲ್ಲಿದ್ದು ಕ್ಷಣಕ್ಷಣಕ್ಕೆ ನನ್ನ ಕಾಯ್ದಿದ್ದ ತಮ್ಮ ತುಷಾರ್!









ಇಷ್ಟೆಲ್ಲ ಕಥೆ ಏಕೆ ನೆನಪಿನ ಬುಟ್ಟಿಗೆ ಹಾಕಿದೆಯೆಂದರೆ, ಇಂದು ರಕ್ಷಾಬಂಧನ ಹಬ್ಬ, ಕನ್ನಡದಲ್ಲಿ 'ರಕ್ಷಾಬಂಧನದ ಶುಭಾಷಯಗಳು' ಎಂದು ಬರೆದು ಮೆಸೇಜ್ ಕಳಿಸಿದ್ದಾನೆ ತುಷಾರ್. ಬೆಂಗಳೂರಿಗೆ ಬನ್ನಿ ಎಂದು ಆಹ್ವಾನವಿತ್ತು ಬಂದವಳಿಗೆ, ನಾವು ಆ ಕಡೆಗೆಲ್ಲ ಬರುವ ಚಾನ್ಸ್ ಇಲ್ಲ ಎಂದು ಅಜಯ್ ಹೇಳಿದ್ದನಾದರೂ, MBA ಮಾಡಲು ಅಣಿಯಾಗುತ್ತಿರುವ ತುಷಾರ್ 'ಅಕ್ಕ, I will try to come to Bangalore and meet u' ಎಂದು ತಿಳಿಸಿದ್ದಾನೆ.. ಸಂಬಂಧಗಳು ಎಲ್ಲಿ ಹೇಗೆ ಹುಟುತ್ತವೆಯೋ, ಏನಾದರಾಗಲಿ ಈ ಒಂದು ಪ್ರವಾಸದಿಂದ ಮನಸ್ಸು ತುಂಬಾ ಖುಷಿ ನೆನಪುಗಳ ಜೊತೆಯಲ್ಲಿ ಎರಡು ಪುಟ್ಟ ಪುಟ್ಟ ಅಲ್ಲ ದೊಡ್ಡ ದೊಡ್ಡ ತಮ್ಮಂದಿರನ್ನು ಪಡೆದು ಬಂದಿದ್ದೇನೆ. ಖುಷಿ ಖುಷಿ :) :)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ