ಬಿಜಲಿ ಮಹಾದೇವ್!!

ಚಂದ್ರಖಾನಿ ಪಾಸ್ ನ ಒಟ್ಟು ೬೫ ಕಿಮೀ ಚಾರಣದ ಭಾಗವಾಗಿ, ಮೂರನೇ ದಿನದ ನಮ್ಮ ಚಾರಣ, ಮೊದಲ ನಾಲ್ಕು ಕಿಲೋಮೀಟರ್ - ಬಿಜಲಿ ಮಹಾದೇವ್ ಎಂಬ ಧಾರ್ಮಿಕ ಪ್ರೇಕ್ಷಣೀಯ ಪುಣ್ಯ ಸ್ಥಳಕ್ಕೆ ಮೂಲಕ ಹಾದು, ನಂತರಕ್ಕೆ ಏಳು ಕಿಲೋಮೀಟರ್ ಸೋಲಾಟಂಕಿ ಎಂಬ ಬೇಸ್ ಕ್ಯಾಮ್ಪ್ ತಲುಪುವ ಯೋಜನೆಯೊಂದಿಗೆ ಕೂಡಿತ್ತು.  ೬೫೦೦ ಫೀಟ್ ಎತ್ತರದಲ್ಲಿರುವ ಚಾನ್ಸರಿ ಎಂಬ ಹಳ್ಳಿಯಿಂದ ನಮ್ಮ ಆ ದಿನದ ಚಾರಣವನ್ನು ಪ್ರಾರಂಭಿಸಿದೆವು. ಅಲ್ಲಿಯವರೆಗೆ ಹಿಂದಿನ ಬೆಸ್ಕ್ಯಾಮ್ಪ್ ನಿಂದ ಮಿನಿ ಬಸ್ಸಿನಲ್ಲಿ ೩೦ ಕಿಮೀ ಗಳ ಪ್ರಯಾಣ ಬೆಳೆಸಿದ್ದೆವು. ಏಕಕಾಲಕ್ಕೆ ಒಂದೇ ವಾಹನ ಹೋಗಲು ಸಾಧ್ಯವಿರುವ ಕೊರಕಲು ರಸ್ತೆ, ಮೇಲೇರಿದ ಹಾಗೆಯೂ ಜೀವ ಝಲ್ಲೆನಿಸುತ್ತದೆ. ರಸ್ತೆಯ ತುತ್ತತುದಿಯಲ್ಲಿ ಬಸ್ಸಿನ ಒಂದು ಚಕ್ರ ಇರುತ್ತದೆ, ಕೆಳಗಡೆ ಪ್ರಪಾತ. ಅಷ್ಟಾದರೂ ಎದುರುಬದರು ವಾಹನವನ್ನು ದಾಟಿಸಿಕೊಳ್ಳುವ ಅಲ್ಲಿನ ವಾಹನ ಚಾಲಕರಿಗೆ ಒಂದು ಸಲಾಂ.  

ಕಲು ಜಿಲ್ಲೆಯ ಸುತ್ತಮುತ್ತಲೂ ಎತ್ತರೆತ್ತರಕಣಿವೆಗಳೇ ಎಲ್ಲವೂ ಅವುಗಳ ಮೇಲಿರುವ ಹಳ್ಳಿಗಳು!  ಮರದಿಂದ ಮಾಡಿದ ಸಣ್ಣ ಸಣ್ಣ ಹಳೆಯ ಮನೆಗಳು, ಅಲ್ಲಲ್ಲಿ ಇತ್ತೀಚಿನ ಸಿಮೆಂಟ್ ಮನೆಗಳು, ಹೆಚ್ಚಾಗಿ ಕಲ್ಲಿನ ಹೆಂಚುಗಳನ್ನು ಮನೆಯ ಮೇಲೆ ಮುಚ್ಚಿಗೆಯ ರೂಪದಲ್ಲಿ ಹಾಕುತ್ತಾರೆ, ಹಿಮಪಾತದಿಂದ ಸುರಕ್ಷಿತವಾಗಿರಲು. ಕೆಲವರದ್ದು ದನ, ಕುರಿ ಪಶು ಸಂಗೋಪನೆ ಎಂಬುದು ಜಾನುವಾರುಗಳ ನೋಡಿ ತಿಳಿಯುತ್ತದೆ. ಕೆಲವರದ್ದು ಮನೆ ಸುತ್ತಲೇ ಎಲ್ಲೆಲ್ಲಿ ಜಾಗ ಸಿಗುತ್ತದೆಯೋ ಅಲ್ಲೆಲ್ಲ ಉಳುಮೆ ಮಾಡಿ ತರಕಾರಿ ಗೆಡ್ಡೆಗೆಣಸು ಬೆಳೆದುಕೊಳ್ಳುವ ಜೀವನೋಪಾಯದ ಪ್ರಕ್ರಿಯೆ.. ಕುಲು ಕಣಿವೆಯ ಶೀತ ಹವೆ ಸೇಬು ಬೆಳೆಗೆ ಹೇಳಿ ಮಾಡಿಸಿದ ಜಾಗ. ಅಂತೆಯೇ ದಾಳಿಂಬೆ ಕೂಡ.  ಹಾಗಾಗಿ ಸೇಬು ಪ್ಲಾಟ್ ಗಳು ಅಲ್ಲಲ್ಲಿ ರಸ್ತೆ ಪಕ್ಕದಲ್ಲಿ ಕಾಣಸಿಗುತ್ತದೆ,  ಸಾಕಷ್ಟು  ಮನೆಗಳ ಆವರಣದಲ್ಲಿ ನಮ್ಮ ಮನೆಗಳಲ್ಲಿ ತುಳಸಿ ಇದ್ದಂತೆ, ಒಂದಾದರೂ ಸೇಬು ಅಥವಾ ದಾಳಿಂಬೆ ಮರವನ್ನು ಕಂಡೆವು. ನಮ್ಮ ಕೊಡಚಾದ್ರಿ, ಆಗುಂಬೆ ಘಾಟಿ ರಸ್ತೆಗಳಂತೆ ಅಲ್ಲಿನ ಟಾರೋಡಿನ ಸಿಮೆಂಟಿನ ರಸ್ತೆಗಳು, ಏರು ತುಸು ಜಾಸ್ತಿಯೇ! ತುಸುದೂರ ಹತ್ತುವಾಗಲೇ ಏದುಸಿರು ಪ್ರಾರಂಭವಾಗುತ್ತದೆ, ಫಿಟ್ನೆಸ್ ಅಭ್ಯಾಸವಿಲ್ಲದೆ ಹೋದರೆ... ಇಲ್ಲಿಂದ ಹೊರಟ ನಮ್ಮ ಪಯಣ, ಭಕ್ತಿಯ ಧಾರ್ಮಿಕ ರೂಪದ ಆಸ್ಥೆಯಾಗಿ ಇತರ ಯಾತ್ರಿಗಳ ಜೊತೆ ಆ ಭಕ್ತಿಯ ಅನುಭವಿಸುತ್ತ ಚಾರಣದ ರೂಪದಲ್ಲಿ ಸಾಗುತ್ತಿದ್ದುದರಿಂದ ನಮಗೆ ಇದೊಂದು ವಿಶೇಷ ಚಾರಣವೆನಿಸಿತು. 




ಬಿಜಲಿ ಮಹಾದೇವ್ ಕುಲು ಮನಾಲಿ ಮತ್ತಿನ್ನಿತರ ಹಿಮಾಚಲ ಪ್ರದೇಶದ ಸ್ಥಳೀಯರಿಗೆ ಒಂದು ವಿಶೇಷ ಮಾನ್ಯತಾ ಸ್ಥಳ. ೭೨ ಜ್ಯೋತಿರ್ಲಿಂಗಗಳ ಪೈಕಿ ಇದೂ ಒಂದು ಎಂಬ ಮಾತಿದೆ. ಪಾರ್ವತಿ ಮತ್ತು ಬಿಯಾಸ್ ನದಿಯ ಸಂಗಮವಾಗುವ ಸ್ಥಳದ ಮೇಲಿನ ಬೆಟ್ಟದಲ್ಲಿ, ಕಾಶ್ವರಿ ಎಂಬ ಊರಿನಲ್ಲಿ ಈ ಮಂದಿರವಿದೆ.ಚಾನ್ಸಾರಿ ಗ್ರಾಮದಿಂದ ಕಡಿದಾದ, ಅಂಕುಡೊಂಕಾದ ಪರ್ವತ ರಸ್ತೆಯ ಮೂಲಕ ಟ್ರೆಕ್ಕಿಂಗ್ ಮೂಲಕ ದೇವಾಲಯವನ್ನು ತಲುಪಬಹುದು.  ಶಿವನಿಗಾಗಿ ಕಟ್ಟಿರುವ ಈ ಮಂದಿರ ಸಮುದ್ರ ಮಟ್ಟಕ್ಕಿಂತ ೨೪೬೦ ಮೀಟರ್ ಎತ್ತರದಲ್ಲಿದೆ. ಈ ಮಂದಿರದ ಕುರಿತಾಗಿ ಅನೇಕ ಕಥೆಗಳಿವೆ. ಈಗಿರುವ ದೇವಾಲಯ ೨೦ ನೇ ಶತಮಾನದಲ್ಲಿ ಮಾಡಿದ್ದಾದರೂ, ಹಿಂದೆ ಪಾಂಡವರು ತಮ್ಮ ವನವಾಸದ ಸಮಯದಲ್ಲಿ ಈ ದೇವಾಲಯವನ್ನು ನಿರ್ಮಿಸಿದರು ಎಂದು ನಂಬಲಾಗಿದೆ. ಹಿಂದೆ  ಕುಲಂತ ಎಂಬ ರಾಕ್ಷಸನೊಬ್ಬ  ಬಿಯಾಸ್ ನದಿಯ ಹರಿವನ್ನು ಒಂದು ದೊಡ್ಡ ಡ್ರಾಗನ್ ರೀತಿಯ ಸರೀಸೃಪದ ರೂಪದಲ್ಲಿ ತಡೆಹಿಡಿದು, ಪ್ರವಾಹ ತಂದು,  ಮಾನವರಿಗೆ ತೊಂದರೆ ನೀಡಲು ಮುಂದಾಗುತ್ತಿದ್ದಾಗ, ಇಲ್ಲಿ ವಾಸಿಸುವ ಜನರನ್ನು ರಕ್ಷಿಸಲು ಮತ್ತು ರಾಕ್ಷಸನನ್ನು ಕೊನೆಗೊಳಿಸಲು ಶಿವನು ಬಂದನು. ಆ ಡ್ರಾಗನ್ ಬಾಲಕ್ಕೆ ಬೆಂಕಿ ಹಚ್ಚಿ ಹಿಂದಿರುಗಿ ನೋಡಲು ಹೇಳಿ, ಶಿವನು ತನ್ನ ತ್ರಿಶೂಲದಿಂದ ರಾಕ್ಷಸನನ್ನು ಕೊಂದು ಹಾಕಿದ ಎಂಬ ಕಥೆಯಿದೆ. ಮಹಾದೇವನ ಪರ್ವತವು ಸತ್ತ ರಾಕ್ಷಸನ ದೇಹದಿಂದ ರೂಪುಗೊಂಡಿದೆ ಎಂದು ನಂಬಲಾಗಿದೆ. ಮಹಾದೇವನ ಆದೇಶದಂತೆ, ಪ್ರತಿ 12 ವರ್ಷಗಳಿಗೊಮ್ಮೆ, ಇಂದ್ರನ ಅನುಮತಿಯೊಂದಿಗೆ ದೇವಾಲಯದ ಮೇಲೆ ಆಕಾಶದಿಂದ ಪ್ರಭಲವಾದ ಮಿಂಚು ಬೀಳುತ್ತದೆ. ಅದು ನೇರಕ್ಕೆ ಅಲ್ಲಿರುವ ಶಿವಲಿಂಗಕ್ಕೆ ತಾಗಿ, ಶಿವಲಿಂಗ ಒಡೆದು ಹೋಗುತ್ತದೆ. ಶಿವನು ತನ್ನ ಮೇಲೆ ಮಿಂಚಿನ ಶಕ್ತಿಯನ್ನು ಪಡೆದುಕೊಂಡು ಜನರ ಜೀವ ಉಳಿಸುತ್ತಾನೆ ಎಂಬ ನಂಬಿಕೆ ಇಲ್ಲಿಯಭಕ್ತರದ್ದು. ಇಲ್ಲಿನ ವಿಶೇಷ ಎಂದರೆ, ಹಾಗೆ ಸೀಳಿ ಹೋದ ಲಿಂಗಕ್ಕೆ, ಆ ದೇವಸ್ಥಾನದ ಪ್ರಧಾನ ಅರ್ಚಕರು, ಎಲ್ಲರ ಮನೆಯಿಂದ ಬೇಡಿ ತಂದ ಬೆಣ್ಣೆಯ ಸವರಿ ಕೂಡಿಸುತ್ತಾರೆ, ಮತ್ತು ಆ ಲಿಂಗ ಮಾಂತ್ರಿಕವಾಗಿ ತನ್ನ ಮೊದಲಿನ ರೂಪ ಪಡೆದು ಅಷ್ಟೇ ಗಟ್ಟಿಯಾಗಿ ಇರುತ್ತದೆ ಎಂಬುದು ಇಂದಿಗೂ ನಡೆದುಕೊಂಡು ಬರುತ್ತಿರುವ ಪ್ರತೀತಿ. ಹಾಗಾಗಿ ಇಲ್ಲಿಯ ಶಿವನಿಗೆ ಮಾಖಾನ್ ಮಹದೇವ್ ಎಂಬ ಇನ್ನೊಂದು ಹೆಸರೂ ಕೂಡ ಇದೆ.  ಅದೇನೇ ಇರಲಿ, ಜನರ ಧಾರ್ಮಿಕತೆ ಮತ್ತು ಒಗ್ಗಟ್ಟಿನ ಮೂಲ ಪ್ರತಿಯಾಗಿ ಶಿವನು ಇಲ್ಲಿ ನೆಲೆಸಿ, ಕುಲು ಜನರ ರಕ್ಷಿಸುತ್ತಿದ್ದಾನೆ ಎಂಬ ನಂಬಿಕೆಯೇ, ಇಲ್ಲಿಯ ಜನರನ್ನು ಯಾವುದೇ ಸಮಸ್ಯೆಯಿಂದ ಹೆದರದಂತೆ ಮಾನಸಿಕವಾಗಿ ದೃಢವಾಗಿಡುತ್ತದೆ. 


ಚಳಿಗಾಲದಲ್ಲಿ ಹಿಮಪಾತ ಹೆಚ್ಚಾಗುವುದರಿಂದ ದೇವಾಲಯದ ಬಾಗಿಲುಗಳನ್ನು ಮುಚ್ಚಲಾಗುತ್ತದೆ, ಆದರೆ ಚಾರಣವು ತೆರೆದಿರುತ್ತದೆಯಂತೆ. ಈ ಸಮಯದಲ್ಲಿ, ಇಡೀ ದೇವಾಲಯವು ಹಿಮದ ಬಿಳಿ ಹಾಳೆಯಿಂದ ಆವೃತವಾಗಿರುತ್ತದೆ ಎನ್ನುತ್ತಾರೆ ಅಲ್ಲಿನ ಲೋಕಲ್ ಗೈಡ್. ಹಿಮಪಾತವಾಗುವ ಸ್ಥಳವಾದರೂ, ಶಿವರಾತ್ರಿಯ ಹಬ್ಬಕ್ಕೆ ಅಲ್ಲಿಗೆ ಪ್ರಪಂಚದಾದ್ಯಂತದ ಪ್ರವಾಸಿಗರು ಮತ್ತು ಭಕ್ತರು ಆಧ್ಯಾತ್ಮಿಕ ಸಾಮರಸ್ಯವನ್ನು ನೋಡಲು ಮತ್ತು ಅನುಭವಿಸಲು ಬರುತ್ತಾರಂತೆ. ವಿಶೇಷ ಪೂಜೆ, ಬಿಸಿಬಿಸಿ ಪ್ರಸಾದ ವಿತರಣೆ ಇರುತ್ತದೆಯಂತೆ. ಅಲ್ಲಿಯೇ ಉಳಿಯುವುದಾದರೆ ಯಾವುದಾದರೂ ಟ್ರಾವೆಲ್ ಏಜೆನ್ಸಿ ಮುಖಾಂತರ ಮುಂಚೆಯೇ ಟೆಂಟ್ ಬುಕಿಂಗ್ ಅವಶ್ಯಕ. ಸ್ಥಳೀಯರು ಹೋಟೆಲ್, ತಿಂಡಿ ಗಳ ಅಂಗಡಿಗಳನ್ನು ಇಟ್ಟಿರುವುದರಿಂದ, ಊಟ ತಿಂಡಿಗೆ ಸಮಸ್ಯೆಯಾಗುವುದಿಲ್ಲ. ಅಷ್ಟು ಎತ್ತರದ ಸ್ಥಳಕ್ಕೆ ಸಾಮಗ್ರಿಗಳ ಸಾಗಾಣಿಕೆಗೆ, ಕುದುರೆಯನ್ನು ಬಳಸುವುದು ಇಲ್ಲಿ ಸಾಮಾನ್ಯದ ವಿಷಯ. ಮಹಾದೇವನ ದರ್ಶನಕ್ಕೆ ಪಾದಯಾತ್ರೆ ಒಂದೇ ಸಧ್ಯದ ಮಾರ್ಗ ಆದ್ದರಿಂದ ಕುಲು ಮನಾಲಿ ಊರುಗಳಲ್ಲಿ ಓಡಾಡುವ  ಪ್ರವಾಸಿಗರು ಮುತ್ತಿ ಹಾಕುವಷ್ಟು ಪ್ರಸಿದ್ಧ, ಓಡಾಟದ ಸ್ಥಳವಲ್ಲ ಇದು. ಶ್ರದ್ಧೆ ಭಕ್ತಿಯಿಂದ ಬರುವ ಸ್ಥಳೀಯ ಹಿಮಾಚಲ ಪ್ರದೇಶದ ಭಕ್ತರು ಮತ್ತು ಹೊರಗಿನ  ಚಾರಣಿಗರನ್ನು ಮಾತ್ರವೇ ಇಲ್ಲಿ ಕಾಣಬಹುದು. ಅಂತೆಯೇ ವಿಶೇಷ ದಿನಗಳಲ್ಲಿ, ಭಕ್ತರಿಗೆ ದರ್ಶನಕ್ಕೆ ಹೋಗಲು ದುಡ್ಡು ಕೊಟ್ಟು ಬಳಸುವ ಕುದುರೆ ಸವಾರಿ ಸಿಗಬಹುದು. ಅತೀ ಕಷ್ಟವೂ ಅಲ್ಲದ, ಸುಲಭವೆಂದು ತೆಗೆದು ಹಾಕಲೂ ಆಗದ, ಪ್ರಶಾಂತವಾದ ಈ ಚಾರಣಕ್ಕೆ ಕನಿಷ್ಠ ೨-೩ ಗಂಟೆ, ಗರಿಷ್ಟ ಅರ್ಧ ದಿನ ಬೇಕು ನಿಧಾನವಾಗಿ ಸಾಗಿ ಮರಳಿ ಬರಲು ಒಂದಿಡೀ ದಿನವೇ ಬೇಕು. ನಾವು ಹೋದ ಸಮಯಕ್ಕೆ ಅಲ್ಲಿ ಹಿಮ ಬೀಳುತ್ತಿರಲಿಲ್ಲವಾದ್ದರಿಂದ, ನಮ್ಮ ಚಾರಣ ಅತೀ ಹೆಚ್ಚು ಸವಾಲಿನದ್ದಾಗಿರಲಿಲ್ಲ. 



ಈ ದೇವಾಲಯದ ಆವರಣದಲ್ಲಿ ೩೬೦ ಡಿಗ್ರಿ ಸುತ್ತಲೂ ಕುಲು ಕಣಿವೆಯ ಅದ್ಭುತವಾದ ವಿಹಂಗಮ ನೋಟ ನೋಡಲು ಸಿಗುತ್ತದೆ. ಹಿಮಾಲಯ ಶ್ರೇಣಿಯ ಹಿಮದಿಂದ ಆವೃತವಾದ ಶಿಖರಗಳನ್ನು ನೋಡಲು ಅದೆಷ್ಟು ಅದ್ಭುತವೆನಿಸುತ್ತದೆ. ದೇವಾಲಯದ ಎಡಭಾಗದಿಂದ, ಪಾರ್ವತಿ ಮತ್ತು ಬಿಯಾಸ್ದೇ ನದಿಯ ಸಂಗಮ ನೋಡಲು ಕಾಣಸಿಗುತ್ತದೆ. ಸಾಂಪ್ರದಾಯಿಕ ಪಹಾಡಿ ವಾಸ್ತುಶೈಲಿಯನ್ನು ಸೂಚಿಸುವ ಪ್ರಭಾವಶಾಲಿ ಮರ ಮತ್ತು ಕಲ್ಲಿನ ರಚನೆಯೊಂದಿಗೆ ದೇವಾಲಯದ ವಾಸ್ತುಶೈಲಿಯು ಸರಳವಾದರೂ ವಿಶಿಷ್ಟವಾಗಿದೆ. ಈ ದೇವಾಲಯವು ಗರ್ಭಗುಡಿ, ಮಂಟಪ ಮತ್ತು ಚಿನ್ನದ ಬಣ್ಣದ ಶಿಖರದೊಂದಿಗೆ ಗುಮ್ಮಟದ ಆಕಾರದ ಛಾವಣಿಯನ್ನು ಒಳಗೊಂಡಿದೆ. ಹೊರಗಡೆ ನಂದಿಯ ಮೂರ್ತಿಯಿದೆ. ಮತ್ತು ದೇವಸ್ಥಾನದ ಹೊರಭಾಗದಲ್ಲಿ ಅತ್ಯಂತ ಎತ್ತರವಾದ ಕಲ್ಲಿನ ಕಂಬವಿದೆ. ಚಪ್ಪಲಿ ತೆಗೆದಿಟ್ಟು, ಕಾಲು ತೊಳೆದು ಹೋಗುವ ವ್ಯವಸ್ಥೆ ಇದೆ. ನೀರು ಅತ್ಯಂತ ಶುದ್ಧ ಮತ್ತು ಲವಂಶದಿಂದ ಕೂಡಿದ್ದು ಕುಡಿಯಲು ಅತ್ಯಂತ ರುಚಿ. ದೇವಾಲಯದ ಸುತ್ತಲಿನ ಹಚ್ಚ ಹಸುರಿನ ಹುಲ್ಲುಗಾವಲಿನಲ್ಲಿ, ಕುದುರೆಗಳು ಮೇಯುತ್ತಿರುವುದು, ಮೇಕೆಗಳ ಹಿಂಡು ದಾಟುತ್ತಿರುವುದು, ದನಗಳ ಹಿಂಡು ಎಲ್ಲವೂ ಕಾಣಸಿಗುವುದು ಎಷ್ಟು ಸುಂದರ ವೆನಿಸುತ್ತದೆ. 

ಚಾರಣದ ಪ್ರಾರಂಭದ ಹಳ್ಳಿಗಳಲ್ಲಿ ಅಂಗಡಿ ಮುಗ್ಗಟ್ಟುಗಳು ಸಿಗುವುದರಿಂದ ನೀರು ಮತ್ತು ಆಹಾರಕ್ಕೆ, ಯಾವುದೇ ರೀತಿಯ ತೊಂದರೆ ಎಲ್ಲಿಯೂ ಆಗುವುದಿಲ್ಲ. ಪ್ರಾರಂಭವಾದ ಸಮಯದಿಂದ ಹಿಡಿದು, ಕೊನೆಗೆ ಬಿಜಲಿ ಮಹಾದೇವ್ ದಿಬ್ಬದ ವರೆಗೆ, ದಟ್ಟ ದೇವದಾರು, ಪೈನ್ ಮರಗಳ ಕಾಡಿನ ಹಸಿರು ನಮ್ಮನ್ನು ತಂಪಾಗಿಡುತ್ತದೆ. ಪಕ್ಕದಲ್ಲೇ ಹರಿಯುವ ಬಿಯಾಸ್ ನದಿಯ ಜುಳು ಜುಳು ನಾದ, ಸಣ್ಣ ಸಣ್ಣ ಹಕ್ಕಿಗಳ ಕಲರವ, ಚಾರಣವನ್ನು ನಿಶ್ಯಬ್ಧತೆಯಿಂದ ಕೇವಲ ನಿಸರ್ಗದ ಧ್ವನಿಗಳಿಗೆ ಕಿವಿಯಾಗಿ ಮಾರುಹೋಗುವಂತೆ ಮಾಡುತ್ತದೆ. ನಮ್ಮ ಗುಂಪಿನವರು ಕಳೆದ ಮೂರು ದಿನಗಳಿಂದ ನಡೆಯುತ್ತಿದವರಾದ್ದರಿಂದ, ಕೆಲವರಿಗೆ ಸುಸ್ತಾಗಿ ಚಾರಣ ಮಂದಗತಿಯಲ್ಲಿ ಸಾಗುತ್ತಿತ್ತು.  ಆದರೆ ನಮ್ಮ ಗುಂಪಿನ ಉತ್ಸಾಹಿ ಹುಡುಗರು ಹಿರಿಯರಿಗೆ ಸಹಾಯ ಮಾಡುತ್ತಾ ಸಾಗುತ್ತಿದ್ದುದ್ದರಿಂದ, ಚಾರಣ ಅತ್ಯಂತ ಯಶಸ್ವೀ ಚಾರಣವಾಯಿತು. ಎತ್ತರೆತ್ತರ ಮೆಟ್ಟಿಲುಗಳು, ಕಡಿದಾದ ಕಲ್ಲಿನ ಹಾದಿಗಳು, ನಮ್ಮನ್ನು ಕೆಲಕಾಲದಲ್ಲಿಯೇ ಬೆವರಿಳಿಸಿಬಿಡುತ್ತದೆ ಹಾಗಾಗಿ ಎರಡು ಲೀಟರ್ ನೀರು ಈ ಚಾರಣಕ್ಕೆ ಅತ್ಯವಶ್ಯಕ. ನಮ್ಮ ಚಾರಣದ ಸಮಯದಲ್ಲಿ, ಆಗಾಗ ಅಲ್ಲಲ್ಲಿ ಭಕ್ತರ ಗುಂಪುಗಳು ಸಿಗುತ್ತಿದ್ದು, ಅವರೆಲ್ಲ ಶ್ರದ್ಧಾ ಭಕ್ತಿಯಿಂದ ಬಿಜಲಿ ಮಹಾದೇವನ ನೆನೆಯುತ್ತ ಭಜನೆ, ಕೀರ್ತನೆಗಳನ್ನು ಹಾಡುತ್ತ ಹೋಗುತ್ತಿದ್ದುದ್ದು, ನಮ್ಮ ಚಾರಣವನ್ನು ಇನ್ನಷ್ಟು ಮತ್ತಷ್ಟು ಉತ್ಸಾಹಭರಿತವನ್ನಾಗಿಸುತ್ತಿತ್ತು. ದೇವಾಲಯಕ್ಕೆ ಭೇಟಿ ಕೊಟ್ಟು, ಶಿವನ ಕುರಿತಾದ ಲಿಂಗಾಷ್ಟಕಮ್ ಮತ್ತಿನ್ನಿತರ ಭಜನೆಗಳನ್ನು ಎಲ್ಲರೂ ಒಕ್ಕೊರಲಿನಿಂದ ಭಜಿಸಿ, ಸುತ್ತಲಿನ ಜಾಗವೆಲ್ಲ ಓಡಾಡಿ ತುಸು ಹೊತ್ತು ವಿರಮಿಸಿ, ಅಲ್ಲಿಯೇ ಊಟ ಮಾಡಿ, ಬಿಜಲಿ ಮಹಾದೇವನಿಗೆ ನಮಸ್ಕರಿಸಿ, ನಮ್ಮ ಮುಂದಿನ ಹಾದಿ ಹಿಡಿದು ಹೋದೆವು. ಚಂದ್ರಖಾನಿ ಪಾಸ್ ನಮ್ಮ ಗುರಿಯಾಗಿದ್ದರೂ ಸಹ, ಅಲ್ಲಿಗೆತಲುಪುವಲ್ಲಿನ ಪ್ರತಿ ಸ್ಥಳ, ಪ್ರತಿ ಅನುಭವ ನಮಗೆ ವಿಶಿಷ್ಟವಾಗಿತ್ತು. ಅದರಲ್ಲೂ ಬಿಜಲಿ ಮಹಾದೇವ್ ದೇವಾಲಯದ ಭೇಟಿ ನಮಗೆ ಸದಾ ನೆನಪಿನಲ್ಲಿ ಉಳಿಯುವಂತದ್ದು! 



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶೈಕ್ಷಣಿಕ ಪ್ರವಾಸಗಳ ಮಹತ್ವ

ಶರಣರ ಸಾವು ಮರಣದಲಿ ಕಾಣು

ಪ್ಲಾಸ್ಟಿಕ್ ಫ್ರೀ ಜುಲೈ ಕ್ಯಾಲೆಂಡರ್