ಮಹಾಕುಂಭಮೇಳ - ಭಂಡಾರ್/ಲಂಗಾರ್ (ತಿಂಡಿಗಳ ಭಂಡಾರ)
ಭಂಡಾರ್/ಲಂಗಾರ್
ಮಹಾಕುಂಭಮೇಳದ ಒಳ ಹೊಕ್ಕ ಮೇಲೆ ಊಟ ತಿಂಡಿಯ ತಲೆಬಿಸಿಯಿಲ್ಲ. ಯಾವ ಒಬ್ಬ ಯಾತ್ರಿಕ ಕೂಡ ಅಲ್ಲಿ ಉಪವಾಸವಿರದಂತೆ, ಪ್ರತಿದಿನ ಬೆಳಿಗ್ಗೆ ೭ ರಿಂದ ೧೧ ರವರೆಗೆ, ಸಂಜೆ ೭ ರಿಂದ ರಾತ್ರೆ ೧೧ ವರೆಗೆ, ನೂರಕ್ಕೂ ಹೆಚ್ಚು ಅಖಾಡಗಳು ಭಕ್ತರಿಗಾಗಿ ಪ್ರಸಾದವನ್ನು ಹಂಚುತ್ತಾರೆ. ಇದಕ್ಕೆ ಭಂಡಾರ್, ಲಂಗಾರ್, ಪ್ರಶಾದ್ ಎಂತಲೂ ಕರೆಯುತ್ತಾರೆ. ಕರೆದು ಕರೆದು ಪ್ರಸಾದ ನೀಡುತ್ತಾರೆ.
ಈ ಪ್ರಸಾದ ಸ್ವೀಕರಿಸಲು ಯಾವುದೇ ರೀತಿಯ ಬಡವ ಬಲ್ಲಿದ ಎಂಬ ತಾರತಮ್ಯವಿಲ್ಲ. ಬೇಡುವ ಭಿಕ್ಷುಕ, ಶ್ರೀಮಂತ ಉದ್ಯಮಿ, ಇನ್ಯಾವುದೋ ಸ್ವಾಮೀಜಿ ಎಲ್ಲರೂ ಒಂದೇ ಸರತಿಯಲ್ಲಿಯೇ ಪ್ರಸಾದ ತಿನ್ನುವಾಗ ಮನುಷ್ಯತ್ವದ ಮೌಲ್ಯ ಕಾಣಸಿಗುತ್ತದೆ. ತಿಂದದ್ದಕ್ಕೆ ಹಣವನ್ನು ನೀಡಲು ಹೋದರೆ "ಬೇಡ ಇದು ಭಕ್ತರಿಗಾಗಿಯೇ ನಾವು ಮಾಡುತ್ತಿರುವುದು" ಎಂದು ದೇಣಿಗೆಯನ್ನೂ ನಿರಾಕರಿಸುವ ಸ್ವಯಂಸೇವಕರ ಪ್ರಾಮಾಣಿಕತೆ ಮೆಚ್ಚುಗೆಯಾಗುತ್ತದೆ.
ದೊನ್ನೆಗಳಲ್ಲಿ ಬಿಸಿ ಬಿಸಿ ಪೋಹಾ (ಅವಲಕ್ಕಿ), ಶಿರಾ, ಹಲ್ವಾ, ವಿವಿಧ ಬಗೆಯ ಧಾನ್ಯಗಳಿಂದ ಮಾಡಿದ ಕಿಚಡಿಗಳು, ಪೂರಿ ಭಾಜಿ, ಅನ್ನ-ದಾಲ್, ರೋಟಿ-ದಾಲ್ ಇತ್ಯಾದಿಯಾಗಿ ಹಾದಿ ಬದಿಗೆ ಅಲ್ಲೊಂದು ಇಲ್ಲೊಂದು ಅಖಾಡಗಳಲ್ಲಿ, ನಾವು ಓಡಾಡಲು ಇದ್ದ ಎರಡೂ ದಿನಗಳೂ ರುಚಿ ರುಚಿಯಾದ ಪ್ರಸಾದಗಳನ್ನು ಹೊಟ್ಟೆ ತುಂಬಾ ತಿಂದು ಕೃತಾರ್ಥರಾದೆವು.
ಒಂದೊಂದು ಅಖಾಡದವರೂ ಕೂಡ ೫-೧೦ ಸಾವಿರ ಜನರಿಗೆ ಪ್ರತಿದಿನ ಪ್ರಸಾದ ತಯಾರು ಮಾಡಿಕೊಳ್ಳುವ ಸಾಮಗ್ರಿ ಸಲಕರಣೆ ಎಲ್ಲದರ ನಿರ್ವಹಣೆ ಯೋಚಿಸಿ ನನಗೆಂತೂ ಒಮ್ಮೆ ಮೈಪುಳಕವಾಯಿತು. ಕುಂಭ ಮೇಳದ ತುಂಬಾ ಅನೇಕ ಸಂಸ್ಥೆಗಳ ಛತ್ರಗಳಿದ್ದೂ, ಅನ್ನದಾಸೋಹಗಳು ನಡೆಯುತ್ತಲೇ ಇರುತ್ತವೆ. ನಾವೆಂತೂ ೩೦೦ ಮೀಟರ್ ಗೆ ಒಂದೊಂದು ಕಡೆ ಕರೆದು ಕರೆದು ಕೊಡುತ್ತಿದ್ದ ಭಂಡಾರ್ ಪ್ರಸಾದವನ್ನು ಚೆನ್ನಾಗಿ ತಿಂದು ತೃಪ್ತಿಗೊಂಡೆವು. ಬೆಳಗ್ಗಿನ ಬಿಸಿಬಿಸಿ ಪೋಹಾದ ರುಚಿ, ಆಹಾ! ಆದರೆ, ಕಸದ ಬುಟ್ಟಿಗಳು ಹತ್ತಿರದಲ್ಲೇ ಇದ್ದರೂ ಕಸವನ್ನು ನೆಲಕ್ಕೇ ಬಿಸಾಡುವ ಮನಸ್ಥಿತಿಯ ಜನರು ಅದೆಷ್ಟೇ ಗಲೀಜು ಮಾಡಿದರೂ, ಮತ್ತೆ ೨೦ ನಿಮಿಷಗಳಲ್ಲಿ ಆ ಜಾಗವನ್ನು ಸ್ವಚ್ಛ ಸುಂದರಗೊಳಿಸುತ್ತಿದ ಕಾರ್ಮಿಕರ ಕರ್ತವ್ಯದ ಬಗ್ಗೆ ಬಣ್ಣಿಸಲು ಪದಗಳು ಸಾಲದು!
ಮಹಾಕುಂಭಮೇಳದಲ್ಲಿ ಸಿಗುವ ಒಂದೊಂದು ಅನುಭವಗಳೂ ಅನನ್ಯ ಮತ್ತು ವಿಶೇಷ. ಒಂದು ಹಣ್ಣಿನ ತಳ್ಳೋ ಗಾಡಿ ಇಟ್ಟುಕೊಂಡವ ಕೂಡ ತನ್ನಲ್ಲಿದ್ದ ಹಣ್ಣುಗಳಲ್ಲಿ ಸ್ವಲ್ಪ ಭಾಗವನ್ನು, ಅಲ್ಲಿದ್ದ ಕಾರ್ಮಿಕರಿಗೆ ನೀಡಿ ತೃಪ್ತಿ ಪಡುವ ನಿಜವಾದ ಚಿತ್ರಣವನ್ನು ಕಣ್ಣಾರೆ ಕಂಡು ಬಂದೆ ನಾನು!
ಈ ಪ್ರಸಾದ ಆಹಾರದ ಹೊರತಾಗಿ, ಮಹಾಕುಂಭ ಮೇಳದ ತುಂಬಾ ಇನ್ನೂ ಸಾಕಷ್ಟು ತಿಂಡಿ ಕುರುಕಲು ಮಾರಾಟದ ಅಂಗಡಿಗಳು ಇವೆ. ಸ್ಥಳೀಯ ಪ್ರಸಿದ್ಧ ತಿಂಡಿಯಾದ ಬಿಸಿ ಬಿಸಿ ಸಮೋಸದಿಂದ ಹಿಡಿದು ಕಾಂಟಿನೆಂಟಲ್, ಫಾಸ್ಟ್ಫುಡ್ ವರೆಗೆ ಎಲ್ಲಾ ಬಗೆಯ ತಿಂಡಿಗಳು ಸಿಗುತ್ತವೆ. ಹತ್ತಾರು ಬಗೆಯ ತಿಂಡಿಗಳ ಸಣ್ಣ ಪುಟ್ಟ ಕೈಗಾಡಿಗಳು, ಹಾಲಿನ ಡೈರಿಗಳು, ಹೋಟೆಲುಗಳು ಧಾರಾಳವಾಗಿ ಲಭ್ಯ.
೧೦೦ ಮೀಟರ್ಗೆ ಒಂದೊಂದು ಚಾ ಅಂಗಡಿ ಸಿಗುತ್ತದೆ. ಉಸುಳಿ ಚಾಟ್, ಕಬ್ಬಿನಹಾಲು, ಕಾರ್ನ್, ಸಮೋಸ, ಕರಿದ ಹುರಿದ ಕಡಲೆಬೀಜ, ಚುರುಮುರಿ ವಾಟ್ ನಾಟ್!? ಕುಂಭಮೇಳದ ರಸ್ತೆ ಬದಿಗಳಲ್ಲಿ ಕಾಣಸಿಗುವುದೇ ಬಗೆಬಗೆಯ ತಿಂಡಿಗಳು.
ಇನ್ನು ಉತ್ತರಭಾರತದ ಪ್ರದೇಶಗಳು ಅಲ್ಲಿನ ಅನೇಕ ತಿಂಡಿಗಳಿಗೆ ಪ್ರಸಿದ್ಧ. ಪ್ರಯಾಗರಾಜ್ ಊರಿನ ತುಂಬಾ ತಿಂಡಿಗಳ ಅಂಗಡಿಗಳದ್ದೇ ಕಾರುಬಾರು. ಬೆಳಿಗ್ಗೆ ಮುಂಚೆ ಎದ್ದು ನೋಡಿದರೆ ಬಿಸಿಬಿಸಿ ಜಿಲೇಬಿ ಅಂಗಡಿಯವನ ಮುಂದೆ ಜನ ಸಾಲುಗಟ್ಟಿ ನಿಂತಿರುತ್ತಾರೆ. ಕಚೋರಿ, ಸಮೋಸ, ಜಿಲೇಬಿ, ಜಹಾಂಗೀರ್, ವಿವಿಧ ಬಗೆಯ ಟಿಕ್ಕಿಗಳು, ತರಹೇವಾರಿಸ್ವೀಟುಗಳು, ಪೂರಿ ಭಾಜಿ ಹೀಗೆ ಸ್ವಾಮಿ ಕಾರ್ಯ ಸ್ವಕಾರ್ಯ ಎರಡೂ ಆಗುವಂತೆ, ಆಧ್ಯಾತ್ಮಿಕ ತಿರುಗಾಟದ ಜೊತೆಜೊತೆಯಲ್ಲಿಯೇ, ಚುಮು ಚುಮು ಚಳಿಗೆ ಬಿಸಿಬಿಸಿಯಾಗಿ ತಿಂದು ಕುಡಿದು ಮಜಾ ಮಾಡಲು ಅಡ್ಡಿಯಿಲ್ಲ!
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ