ಮಹಾಕುಂಭಮೇಳ - ಅಖಾಡಗಳು

 ಅಖಾಡಗಳು 

ನಮ್ಮದೇ ಜ್ಞಾನದ ಮಿತಿಯಲ್ಲಿ, ನಾವಿರುವ ಪ್ರದೇಶದ ಆಚರಣೆ ನಂಬಿಕೆಗಳಲ್ಲಿ ಬದುಕನ್ನು ಸಾಗಿಸುವ ನಮಗೆ, ನಿತ್ಯಜೀವನದಲ್ಲೆಲ್ಲೂ ಕಾಣಿಸಿಕೊಳ್ಳದೇ  ಮಹಾಕುಂಭಮೇಳದಲ್ಲಿ ಕಾಣಸಿಗುವ ಸಾಧು ಸಂತರು, ಕಲ್ಪವಾಸಿಗಳು, ಅಘೋರಿಗಳ ಬದುಕು, ಆಚರಣೆ, ಪೂಜಾ ವಿಧಿವಿಧಾನಗಳು ಇತ್ಯಾದಿ ಹೊಸ ಬಗೆಯ ಅನುಭೂತಿಯನ್ನು ನೀಡುತ್ತದೆ. ಗಮ್ಯ ಒಂದೇ ಆದರೂ ದೇಶದ ನಾನಾ ಪ್ರದೇಶದಿಂದ ಬಂದು, ಇಲ್ಲಿ ಒಟ್ಟುಸೇರಿ ನಡೆಸುವ ಇಷ್ಟು ಬೃಹತ್ಆಧ್ಯಾತ್ಮಿಕ ಸಂಭವಕ್ಕೆ ಸರಿಸಾಟಿಯಾದ್ದು ಯಾವುದೂ ಇಲ್ಲವೆನಿಸಲು ಪ್ರಾರಂಭವಾಗುತ್ತದೆ. ಅಖಾಡ  ಎಂದರೆ ಆಶ್ರಮ ಎನ್ನಬಹುದು. ಮಹಾ ಕುಂಭ ಮೇಳಕ್ಕೆ ದೇಶದ ನಾನಾ ಕಡೆಯಿಂದ ಸಾಧು ಸಂತರು, ನಾಗ ಸಾಧುಗಳು, ಅಘೋರಿಗಳು ಬಂದಿಳಿದು ಅವರವರ ಪಂಗಡಕ್ಕೆ ಒಂದೊಂದು ಅಖಾಡ ಮಾಡಿಕೊಂಡು ಅದರೊಳಗೆ ವಾಸ್ತ್ಯವ್ಯ ಹೊಂದಿರುತ್ತಾರೆ. ಒಂದೊಂದು ಅಖಾಡಗಳೂ ಒಂದೊಂದು ಮಂಟಪಗಳೂ ಅನನ್ಯ ಮತ್ತು ವಿಶಿಷ್ಟ. ಮುಖ್ಯವಾಗಿ ಸೆಕ್ಟರ್ ೧೮, ೧೯ ಮತ್ತು ೨೦ ರಲ್ಲಿ ಇರುವ ಅನೇಕ ಪ್ರಮುಖ, ಆಚರಣೆಯಲ್ಲಿ ಅತ್ಯಂತ ಪುರಾತನವೆನಿಸಕೊಂಡಿರುವ ಅಖಾಡಗಳಿಗೆ ಭೇಟಿ ಕೊಡಬಹುದು.  ಸೆಕ್ಟರ್ ೩ ರಲ್ಲಿ ರುದ್ರಾಕ್ಷಿಗಳಿಂದಲೇ ಮಾಡಿರುವ ೧೨ ಜ್ಯೋತಿರ್ಲಿಂಗಗಳಿವೆ, ಸೆಕ್ಟರ್ ೧೬ ರಲ್ಲಿ ಕಿನ್ನರ ಅಖಾಡವಿದೆ, ತಿರುಗಾಡಲು ಹೆಚ್ಚು ಸಮಯವಿಲ್ಲದಿದ್ದಲ್ಲಿ, ಸ್ವಸ್ತಿಕ ದ್ವಾರದ ಮುಖ್ಯ ರಸ್ತೆಯ ಅಖಾಡಗಳನ್ನಾದರೂ ಒಮ್ಮೆ ಓಡಾಡಿಬಿಡಿ. ಅನೇಕ ಪುರಾತನ ಪಂಚದಶಾನಾಮ್ ಜುನಾ ಅಖಾಡ, ನಿರಂಜನ್ ಅಖಾಡ ದಂತಹ ಪ್ರಸಿದ್ಧ ನಾಗಾಸಾಧುಗಳ, ಸಂತರ ಅಖಾಡಗಳಿವೆ ಇಲ್ಲಿ. ಅನೇಕ ನಾಗಾಸಾಧುಗಳು, ಅಘೋರಿಗಳು, ಸಾಧು ಸಂತರು ಮತ್ತು ಸಿದ್ಧರುಗಳ ದರ್ಶನಕ್ಕೆ ಅವಕಾಶವಿರುತ್ತದೆ. ಸೋಶಿಯಲ್ ಮೀಡಿಯಾಗಳ ಹಾವಳಿಗೆ ಕೆಲವರು ಇದಾಗಲೇ ಒಗ್ಗಿದ್ದರೆ, ಕೆಲವರು ಅಸಹನೆ ವ್ಯಕ್ತಪಡಿಸುತ್ತಾರೆ. ಹಾಗಾಗಿ ಅವರನ್ನು ಗೌರವಿಸಿ ಅನುಮತಿಯಿದ್ದಲ್ಲಿ, ಅವರ ಫೋಟೋ ತೆಗೆಯುವ, ಮಾತನಾಡಿಸುವ ಸೌಜನ್ಯ ನಮಗಿರಬೇಕು. ಸದಾ ನಿಂತೇ ಇರುವ ಖಡೇಶ್ವರ್ ನಾಗ್ ಬಾಬಾ, ಸಾವಿರಾರು ರುದ್ರಾಕ್ಷಿಗಳ ಪೋಣಿಸಿ ಧರಿಸಿಕೊಂಡಿರುವ ರುದ್ರಾಕ್ಷ್ ಬಾಬಾ, ಸದಾ ಒಂದು ಕೈಯನ್ನು ಎತ್ತಿಕೊಂಡೇ  ತಪಸ್ಸ್ಯೆಗಯ್ಯುತ್ತಿರುವ ಬಾಬಾ, ಐಐಟಿ ಬಾಬಾ, ಅತ್ಯಂತ ಕಿರಿಯ ವಯಸ್ಸಿನ ೮ ವರ್ಷದ ಬಾಬಾ, ಮೂರಡಿಯ ಚೋಟು ಬಾಬಾ, ತಲೆಯಮೇಲೆ ಪಾರಿವಾಳ ಸಲಹಿಟ್ಟುಕೊಂಡ ಬಾಬಾ,  ತಲೆಯಮೇಲೆ ಧಾನ್ಯಗಳ ಹಸಿರು ಪೊದೆಯನ್ನು ಬೆಳೆಸಿಕೊಂಡ ಆಂಜ್ವಾಲೆ ಬಾಬಾ,  ಎಲ್ಲೇ ಪ್ರವಾಸ ಮಾಡುವದಾದರೂ ತಾನೇ ಸ್ವತಃ ಅಂಬಾಸೆಡರ್ ಕಾರನ್ನು ಓಡಿಸುವ ಕಾರ್ ಬಾಬಾ,   IAS ಕೋಚಿಂಗ್ ನೀಡುವ ಮೌನಿ ಬಾಬಾ ಹೀಗೆ ಸಾಕಷ್ಟು ತಮ್ಮ ತಮ್ಮ ಅನನ್ಯ  ಜೀವನಶೈಲಿ ಮತ್ತು ರೂಪಧಾರಣೆಗೆ ಹೆಸರಾಗಿರುವ, ಸೋಶಿಯಲ್ ಮೀಡಿಯಾ ಮೂಲಕ ಪ್ರಸಿದ್ಧರಾಗಿರುವ ಅನೇಕ ಸಾಧು ಸಂತರು ನಮಗೆ ನೋಡಲು ಕಂಡರು. ನಾಗಾಸಾಧುಗಳಲ್ಲಿ ಕೆಲವರು ಪೂಜೆ ಪಾರಾಯಣಗಳಲ್ಲಿ ನಿರತರಾಗಿದ್ದರೆ, ಕೆಲವರು ಜನರನ್ನು ಆಶೀರ್ವದಿಸಿ ಮುಕ್ತವಾಗಿ ಮಾತನಾಡುತ್ತಾರೆ. ಜನರ ಸಮಸ್ಯೆಗಳ ಕೇಳಿ ಅದಕ್ಕೆ ಸಮಾಧಾನ ಪರಿಹಾರಗಳನ್ನು ನೀಡುವುದರೊಂದಿಗೆ, ಸಾಮಾಜಿಕ ಸಮಸ್ಯೆಗಳ ಸಮಗ್ರ ಮಾಹಿತಿ ಇಂತಹ ಒಂದು ಮೇಳಗಳಲ್ಲಿ ಸಾಧು ಸಂತರ ಬಲದಿಂದ ತಿಳಿಯಲು ಸಾಧ್ಯವಾಗುತ್ತಿತ್ತಂತೆ.  ಪ್ರತೀ ಅಖಾಡಗಳಿಗೂ ಪೋಲೀಸರ ರಕ್ಷಣೆ, ಹೋಮ-ಹವನ, ಚಳಿಯಿಂದ ರಕ್ಷಿಸಿಕೊಳ್ಳಲು ಬೇಕಾಗುವ ಕಟ್ಟಿಗೆಗಳಿಂದ ಹಿಡಿದು, ಎಲ್ಲಾ ಸಣ್ಣ ಸಣ್ಣ ವಿಷಯಗಳ ವ್ಯವಸ್ಥೆಗಳನ್ನೂ ಅತ್ಯಂತ ಆಸ್ಥೆಯಿಂದ ಮಾಡಿಟ್ಟಿರುವುದು ಪ್ರಶಂಸನೀಯವೆನಿಸುತ್ತದೆ. ಮಹಾಕುಂಭದ ಬೆಳಗು ಅತ್ಯಂತ ಆಪ್ತವಾಗಿರುತ್ತದೆ. ಅಖಾಡಗಳಲ್ಲಿನ ಪೂಜೆ ಪುನಸ್ಕಾರಗಳು, ಮಂತ್ರಧ್ಘೋಷಗಳು ಮನಸ್ಸನ್ನು ಪ್ರಶಾಂತ ಮತ್ತು ಪರವಶಗೊಳಿಸುತ್ತದೆ. ನಾವು ಯಾವ ಅಖಾಡಕ್ಕೆ ಹೋಗಿಯಾದರೂ ಕೂರಬಹುದು ಯಾವ ಪೂಜೆಯಲ್ಲಿಯಾದರೂ ಭಾಗಿಯಾಗಬಹುದು, ಧಾರ್ಮಿಕ ವಿಷಯಗಳಲ್ಲಿ ಆಸಕ್ತಿ ಇರುವವರು, ದೇಶದಾದ್ಯಂತ ಓಡಾಡಿ ಸಾಧುಸಂತರನ್ನುಭೇಟಿ ಮಾಡಲು ಅವಕಾಶ ಸಿಗದಿದ್ದವರು, ಈ ಒಂದು ಕುಂಭಮೇಳದಲ್ಲಿ ಎಲ್ಲರೂ ಒಂದೇ ಕಡೆ ಸಿಗುವ ಅವಕಾಶಕ್ಕಾಗಿ ಹಾತೊರೆದು ಬರುತ್ತಾರೆ.  ಇಲ್ಲಿ ಮಾತ್ರ ಎಲ್ಲರೂ ಸಮಾನರು! ಸ್ವಾಮೀಜಿಗಳ ಭೇಟಿ ಮತ್ತು ಆಶೀರ್ವಾದಕ್ಕೆ ಯಾವುದೇ ತಾರತಮ್ಯವಿರುವುದಿಲ್ಲ. ಅನೇಕ ಯಾತ್ರಾರ್ಥಿಗಳು ತಮ್ಮ ತಮ್ಮ ಪ್ರದೇಶದಿಂದ ಸ್ಥಾಪಿಸಲ್ಪಟ್ಟ ಅಖಾಡಗಳಿಗೆ ಹೋಗಿ ತಾವು ನಡೆದುಕೊಳ್ಳುವ ಸಂತರನ್ನು ಕಂಡು, ಆಶೀರ್ವಾದ ಪಡೆದು ಪುನೀತರಾಗುತ್ತಾರೆ. 



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶೈಕ್ಷಣಿಕ ಪ್ರವಾಸಗಳ ಮಹತ್ವ

ಶರಣರ ಸಾವು ಮರಣದಲಿ ಕಾಣು

ಪ್ಲಾಸ್ಟಿಕ್ ಫ್ರೀ ಜುಲೈ ಕ್ಯಾಲೆಂಡರ್