ಮಹಾಕುಂಭಮೇಳ - ಆರಕ್ಷಕರ ವಿನಮ್ರತೆ

ವಿಮಾನದಿಂದಿಳಿದು ವಾರಾಣಸಿ ತಲುಪಿದ್ದೆವು ಆ ದಿನ ರಾತ್ರಿ. ಮರುದಿನಕ್ಕೆ ಪ್ರಯಾಗರಾಜ್ಗೆ ಹೊರಡುವ ಮುನ್ನ, ಕಾಶೀ ವಿಶ್ವನಾಥನನ್ನೊಮ್ಮೆ ಸ್ಪರ್ಶದರ್ಶನ ಮಾಡಿ ಹೊರಡುವುದು ಎಂದು ಪ್ಲಾನ್ ಆಗಿತ್ತು. ೪ ಗಂಟೆಯ ದರ್ಶನಕ್ಕೆ ಬೆಳಗಿನ ಜಾವ ೨.೩೦ ಎದ್ದು ಹೋಗಿಯಾಗಿತ್ತು. ಗಲ್ಲಿಗಲ್ಲಿಗಳ ದಾಟಿ, ಮಾತಾ ಅನ್ನಪೂರ್ಣ ಭವನದ ಪಕ್ಕದಲ್ಲಿ ಸರತಿಯಲ್ಲಿ ನಿಂತೆವು. ಕೊರೆವ ೭ ಡಿಗ್ರಿ ಚಳಿ ಇನ್ನೂ ಒಂದು ಗಂಟೆ ಕಾಯಬೇಕು ಗೇಟು ತೆರೆಯಲು. ನಮ್ಮ ಗುಂಪಿನಲ್ಲಿದ್ದ ಹಿರಿಯರೊಬ್ಬರಿಗೆ ಬಾಯಾರಿಕೆ ಆಗತೊಡಗಿತು. ಆದರೆ ಗಡಿಬಿಡಿಯಲ್ಲಿ ನೀರು ತಂದಿಲ್ಲ. ಸುತ್ತಮುತ್ತ ಎಲ್ಲಿ ನೋಡಿದರೂ ಬಾಗಿಲು ಮುಚ್ಚಿ ನಿದ್ರಿಸುತ್ತಿರುವ ಗಲ್ಲಿಗಳಷ್ಟೇ. ೩.೪೦ ಸುಮಾರಿಗೆ ಆ ರಸ್ತೆಯ ಒಬ್ಬ ಪೂಜಾಸಾಮಗ್ರಿ ಅಂಗಡಿಯವ ಬಾಗಿಲು ತೆರೆಯಲಾರಂಭಿಸಿದ. ತಕ್ಷಣವೇ ಹೋಗಿ ನೀರಿನ ಬಾಟಲಿ ಕೇಳಿದೆ. ಇಲ್ಲ ಎಂಬ ಉತ್ತರ ನಿರಾಸೆ ತಂದಿತು. ಅಕ್ಕನಿಗೆ ಬಿಕ್ಕಳಿಕೆ ಕೂಡ ಪ್ರಾರಂಭವಾಯಿತು ಈಗ ನೀರಿನ ಅವಶ್ಯಕತೆ ತುಂಬಾ ಇತ್ತು. ಭಕ್ತರ ಕ್ಯೂ ಸಂಭಾಳಿಸಲು ಅಲ್ಲಿ ಪೊಲೀಸ್ ಗಸ್ತು ಇರುತ್ತದೆ. ಇದು ವೈಯುಕ್ತಿಕ ವಿಷಯ, ಆರಕ್ಷಕರ ಸಹಾಯ ಸಿಗುವ ಸಾಧ್ಯತೆ ಕಮ್ಮಿ ಎಂದೆನಿಸಿದರೂ ಒಂದು ಪ್ರಯತ್ನ ಮಾಡಿದೆ. ಹತ್ತಿರದಲ್ಲಿ ಗಸ್ತಿನಲ್ಲಿದ್ದ ಒಬ್ಬರಿಗೆ, ನಮಗೆ ನೀರಿನ ಅವಶ್ಯಕತೆ ಇರುವುದಾಗಿ ತಿಳಿಸಿದೆ. ಒಮ್ಮೆ ನನ್ನನ್ನೂ, ಮುಂದಕ್ಕೆ ಸರತಿಯಲ್ಲಿ ನಿಂತಿರುವ ನನ್ನ ಹಿರಿಯ ಸ್ನೇಹಿತರನ್ನೂ ದುರುಗುಟ್ಟಿ ನೋಡಿದ. "ನಿಮ್ಮ ಕರ್ಮ"  ಅನ್ನೋ ಲುಕ್ಕು ಕೊಟ್ಟಂಗಾಯ್ತು. ನೀರು ತರದಿದ್ದು ನಮ್ಮಗಳದ್ದೇ ತಪ್ಪು ಅನ್ನಿಸಿ ನಿರಾಸೆಯಿಂದ ಮರಳಿ ಸ್ವಸ್ಥಾನಕ್ಕೆ ಹೋಗಿ ನಿಂತೆ.. ೫೦ ಹೆಜ್ಜೆ ಹಿಂದೆ ಹೋಗಿ, ಅಲ್ಲೆಲ್ಲೋ ಬೆಳಗಿನ ಜಾವಕ್ಕೆ ತುಸು ಹೆಚ್ಚೇ ಗಲಾಟೆಯ ಧ್ವನಿಯಲ್ಲಿ ಮಾತನಾಡುತ್ತಿದ್ದ ಗಂಡು ಹೈಕಳ ಗುಂಪನ್ನು  ಮೊದಲು ಮಾತನಾಡಿಸಿ ಶಾಂತವಾಗಿಸಿದ ಆ ಭೂಪ. ನಂತರ ನೇರವಾಗಿ ಹೂವಿನ ಅಂಗಡಿಯವನ ಬಳಿ ಹೋದ, ನೀರಿಗೆ ವಿಚಾರಿಸಿದ. ಅಂಗಡಿಯವನಿಂದ ನಮಗೆ ಸಿಕ್ಕ ಉತ್ತರವೇ ಅವನಿಗೂ ಸಿಕ್ಕಿತು - ನೀರಿನ ಬಾಟಲಿ ಸೇಲ್ ಗೆ ಇಟ್ಟಿಲ್ಲ ತಾನು ಎಂದು. ಇಡೀ ದಿನಕ್ಕೆ ಏನು ಮಾಡ್ತೀರೀ ಕುಡಿಯೋ ನೀರಿಗೆ ಎಂದು ಅಂಗಡಿಯವನನ್ನು ವಿಚಾರಿಸಿದ ಈ(ಆ)ರಕ್ಷಕ. ಆತ ತನ್ನದು ಕುಡಿಯುವ ನೀರು ಬೇರೆ ಬಾಟಲಿಯಲ್ಲಿದೆ ಎಂದು ಉತ್ತರಿಸಿದ. "ಭೈಯ್ಯಾ ಉನ್ಹೇ ಪೀನೇ ಕೇಲಿಯೇ ಪಾನಿ ತೋದೋ. ಮಹದೇವ್ ಕೀ ನಗರಿ ಹೈ ಯೇ, ಮನಾ ನಹಿ ಕರ್ತೆ.. ಬಾದ್ ಮೇ ಆಪ್ಕೋ ಅವಶ್ಯ ಭರಕೆ ದೂನ್ಗ ಮೇ" ಎಂದು ಹೇಳಿ, ಆತನಿಂದ ನೀರಿನ ಬಾಟಲಿ ಪಡೆದು ನಮ್ಮ ಹಿರಿಯಕ್ಕನಿಗೆ ನೀಡಿ ಮತ್ತೆ ತನ್ನ ಗಸ್ತನ್ನು ಮುಂದುವರೆಸಿದ! 

ಕಳೆದ ವರ್ಷ ಒಡಿಶಾ ಓಡಾಡಿದ್ದೆವು. ನಾನು ಇಷ್ಟಪಟ್ಟ ಊರುಗಳಲ್ಲಿ ಇದೂ ಒಂದು! ಪುರಿ ಜಗನ್ನಾಥದಲ್ಲಿ ನಿತ್ಯವೂ ಬರುವ ಭಕ್ತರ ಸಂಖ್ಯೆ ಲಕ್ಷವೇ!  ನಾವಿದ್ದ ಎರಡೂ ದಿನಗಳೂ, ಬೆಳಗಿನ ಹೊತ್ತು, ಜಗನ್ನಾಥ ರಥಬೀದಿಯಲ್ಲಿಯೇ ತಿರುಗಾಡಿಕೊಂಡು ಇರುತ್ತಿದ್ದೆ. ನನಗೆ ಜನರ ಮುಗ್ಧ ಭಕ್ತಿ ಭಾವಗಳನ್ನು ನೋಡಲು ಭಾರಿ ಖುಷಿ. ಅಲ್ಲಿ ನಾನು ಕಂಡಂತೆ, ಡ್ಯೂಟಿಗೆ ಮುನ್ನ ಪ್ರತಿಯೊಬ್ಬ ಪೊಲೀಸ್ ಕೂಡ, ನಿಂತ ರಸ್ತೆಯಲ್ಲಿಯೇ, ಚಪ್ಪಲಿ ಬಿಚ್ಚಿ, ಭುಜಗಳನ್ನು ಎತ್ತಿ ಕೈಗಳಿರಡನ್ನೂ ಮೇಲಕ್ಕೆ ಮುಂದಕ್ಕೆ ಚಾಚಿ, ಜಗನ್ನಾಥನಿಗೆ ನಮಿಸಿಯೇ ತಮ್ಮ ತಮ್ಮ ದಿನದ ಕರ್ತವ್ಯಕ್ಕೆ, ಗಸ್ತಿಗೆ ನಿಲ್ಲುತ್ತಿದ್ದುದು ಅತ್ಯಶ್ಚಾರ್ಯವಾಗುತ್ತಿತ್ತು. ಒಂದೆರಡು ಜನರಲ್ಲ ನಾನು ಹಾಗೆ ಕಂಡದ್ದು. ಎರಡೂದಿನ ಕಂಡ ಪ್ರತಿಯೊಬ್ಬರೂ..ದೇವಾ! ಅವರವರ ಭಕುತಿ ಹೋಗಲಿ ಬಿಡಿ ಎನ್ನೋಣ. ಆದರೆ ಮುಂದಕ್ಕೆ, ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬರುವ ಜನಸಮೂಹವನ್ನು ಅವರು ನಿರ್ವಹಿಸುವ ಬಗೆ! ಒಂದೇ ಒಂದು ರೇಗಾಟ ಇಲ್ಲ. ಜನರಿಗೆ ಅವರವರದ್ದೇ ಗ್ರಾಮ್ಯ ಭಾಷೆಯಲ್ಲಿ, ಅವರವರದ್ದೇ ಟೋನ್ ನಲ್ಲಿ, ಮಹಿಳೆಯರೆದುರಿಗೆ ಮಾತನಾಡುವಾಗ ಕೈಜೋಡಿಸಿ ತಮ್ಮ ನಿಯಮಗಳನ್ನು ಪಾಲಿಸಲು ಕೇಳುವ ವಿನಮ್ರತೆ ಅಲ್ಲಿ ಮೊದಲ ಬಾರಿಗೆ ನೋಡಿ ಆಶ್ಚರ್ಯ ಆಗಿತ್ತು. ಇದು ಹೇಗೆ ಸಾಧ್ಯ ಎಂದು ಯಾರನ್ನಾದರೂ ಕೇಳಿದರೆ "ಜಗನ್ನಾಥ್ ಚಲಾತ ಹೈ ಸಬ್ ಕುಚ್" ಎನ್ನುತ್ತಾರೆ ಅಲ್ಲಿ.. 
ಈ ಹಳೆ ಅನುಭವವನ್ನ ಮೆಲುಕು ಹಾಕಿಕೊಂಡು, ಈಗ ನೀರು ಕೊಡಿಸಿದ ಪುಣ್ಯಾತ್ಮನನ್ನು ಮನಸಾರೆ ಹಾರೈಸಿಕೊಂಡೆವು ನಾವು ಸಂಗಡಿಗರು. 


ಮುಂದಕ್ಕೆ ಪ್ರಯಾಗ್ರಾಜ್ ಹೊರಟು ನಿಂತೆವು. ಪ್ರಯಾಗರಾಜ್ ಮಹಾಕುಂಭಮೇಳದೊಳಕ್ಕೆ ಇರಬಹುದಾದ ಜನಸಂಖ್ಯೆ  ದೃಶ್ಯಿಕವಾಗಿ ಇನ್ನೂ ಸಿಗದಿದ್ದರೂ ಒಂದು ಕಲ್ಪನೆ, ಇನ್ನೂ ಊರು ಮುಟ್ಟುವುದಕ್ಕೆ ಮುಂಚೆಯೇ ಸಿಕ್ಕಿತ್ತು. ನಮ್ಮನ್ನು ಹೊತ್ತು ಹೊರಟಿದ್ದ ಟಿಟಿ ಗಾಡಿಯನ್ನು, ಇನ್ನೂ ೬ ಕಿಮೀ ಇರುವಾಗಲೇ ತಡೆದು, ದೊಡ್ಡ ಗಾಡಿಗಳನ್ನು ಒಳಗೆ ಬಿಡಲಾಗುವುದಿಲ್ಲ ಎಂದು ಇಳಿಸಿದರು. ಶೇರ್ಡ್ ಆಟೋಗಳನ್ನು ಹಿಡಿದು, ನಮ್ಮ ನಮ್ಮ ಲಗೇಜುಗಳೊಂದಿಗೆ ನಮ್ಮ ರೂಮನ್ನು ತಲುಪಿಕೊಂಡಿದ್ದೆವು ಅಂದು ನಾವು. ಕುಂಭ ಮೇಳ ಸುತ್ತಲು ಹೊರಟ ಗಳಿಗೆಯಿಂದ ಊರು ಬಿಟ್ಟು ಬರುವವರೆಗೆ ನಾವು ನೋಡಿದ್ದು ಟ್ರಾಫಿಕ್ ಟ್ರಾಫಿಕ್ ಜನಜಂಗುಳಿ. ಅದನ್ನಷ್ಟೇ ನೋಡಿ ಬಂದಿದ್ದರೆ ನಮ್ಮ ಯಾತ್ರೆ ಸಫಲವಾಗುತ್ತಿರಲಿಲ್ಲವೇನೋ. ನಾವು ಅಲ್ಲಿ ಕಂಡಿದ್ದು, ಪ್ರತಿಯೊಂದು ರಸ್ತೆಗಳಲ್ಲಿ, ಪ್ರತೀ ಹಂತದಲ್ಲಿ, ಪ್ರತೀ ಗಳಿಗೆಯಲ್ಲಿ ಇರುವ ಟ್ರಾಫಿಕ್ ಪೊಲೀಸರು, ಅಧಿಕಾರಿಗಳು, ಗಸ್ತಿನಲ್ಲಿರುವ ಪೊಲೀಸರು, ಮೇಳದೊಳಗೆ ಮುಖ್ಯ ಅಖಾಡಗಳು, ಸ್ನಾನದ ಘಟ್ಟಗಳ ಕಡೆಗೆ ರಕ್ಷಣೆಗೆಂದು ಇರುವ CRPF  ಪಡೆ, ಆರ್ಮಿ, SDRF,  NCC ಮತ್ತು ಸ್ಕೌಟ್ಸ್ ಸಂಘಟನೆಗಳ ಸ್ವಯಂಸೇವಕರ ಸಂಖ್ಯೆ! ಈ ಪರಿ ರಕ್ಷಕರ ಜನಸಂಖ್ಯೆಯನ್ನ ನೋಡಿಯೇ ಹೌಹಾರಿದ್ದೆವು ನಾವು! ಇಷ್ಟೇ ಅಲ್ಲ! ಕುಂಭ ಮೇಳದ ಒಳಗೆ, ಬ್ರಾಂಡಿಂಗ್ ಅವಕಾಶದ ನಿಟ್ಟಿನಲ್ಲಿ, ಅನೇಕ ಬಹುಪ್ರತಿಷ್ಠಿತ ಕಂಪೆನಿಗಳು ಕೇವಲ ವ್ಯಾಪಾರಕ್ಕಾಗಿ ಭಾಗವಹಿಸುವುದಲ್ಲದೆ, ಕುಂಭಮೇಳದಲ್ಲಿ ಜನರಿಗೆ ಸಹಾಯ ಮಾಡಲು, ವಿವಿಧ ಕಾರ್ಯಗಳಿಗೆ, ತಮ್ಮ ಕಂಪೆನಿಯ ಬ್ರಾಂಡಿಂಗ್ ಮಾಡುವ ಯೂನಿಫಾರ್ಮ್ ಹಾಕಿದ  ಸ್ವಯಂಸೇವಕರನ್ನು ತಯಾರು ಮಾಡಿ ತಮ್ಮ ಸೇವೆಯನ್ನು ನೀಡಿದೆ, ಅದನ್ನೂ ಒಂದೆರಡು ಕಡೆ ಕಂಡೆವು. ಇನ್ನು ಭಾರತದಾದ್ಯಂತ ಇರುವ ಅನೇಕ ಸಂಘ ಸಂಸ್ಥೆಗಳ ಕಡೆಯಿಂದ ಬಂದು ೪೫ ದಿನಗಳ ಕಾಲ ಸೇವೆಗಯ್ಯುತ್ತಿರುವ ಸ್ವಯಂಸೇವಕರ ಸಂಖ್ಯೆ ಸಾವಿರಗಳಲ್ಲಿ ಇದೆಯಂತೆ. ಇಂತಹ ಬ್ರಹತ್ ಕಾರ್ಯಕ್ರಮ ಮಾಡುವಾಗ ಕಟ್ಟುನಿಟ್ಟಾದ ವ್ಯವಸ್ಥೆ, ರಕ್ಷಣೆ ಖಂಡಿತಾ ಬೇಕು, ಅತ್ಯದ್ಭುತವಾಗಿ ಪ್ರಯಾಗರಾಜ್ ಇದಕ್ಕೆ ತಯಾರಾಗಿದ್ದನ್ನ ಕಣ್ಣಾರೆ ನೋಡಿದ್ದೂ ಕೂಡ ನಮ್ಮ  ಪ್ರವಾಸದ ಒಂದು ಪ್ರಮುಖ ಅನುಭವ. 




ಇದರ ಹೊರತಾಗಿ ಆಶ್ಚರ್ಯ ಆಗಿದ್ದೆಂದರೆ, ಈ ವ್ಯವಸ್ಥೆ ಅಷ್ಟೇ ಜನಸ್ನೇಹಿ ಕೂಡ ಆಗಿದ್ದುದ್ದು. ನಿಜವಾಗಿಯೂ ಹೇಳ್ತೇನೆ, ಉತ್ತರಪ್ರದೇಶದ ರೌಡಿಸಂ ಎಲ್ಲದರ ಬಗ್ಗೆ ಕೇಳಿದ್ದ ನಮಗೆ, ಅಲ್ಲಿನ ಆರಕ್ಷಕರ ವಿನಮ್ರತೆ ಕನಸು ಮನಸ್ಸಿನಲ್ಲಿಯೂ ನಿರೀಕ್ಷೆಯಲ್ಲಿರಲಿಲ್ಲ! ಅಲ್ಲಿ ಮಹಿಳಾ ಪೋಲೀಸರ ಆತ್ಮವಿಶ್ವಾಸದ ಮುಖಗಳು ನಮಗೇ ಒಂದು ರೀತಿಯ ಖುಷಿ ಕೊಡುತ್ತಿತ್ತು. ನಾವಿದ್ದ ಎರಡು ದಿನಗಳಲ್ಲಿ, ೪೦೦೦ ಹೆಕ್ಟೇರ್ ಮಹಾಕುಂಭ ನಡೆಯುವ ಸ್ಥಳದ ಕುರಿತಾಗಿ ಎಷ್ಟೇ ಮಾಹಿತಿ ಒಟ್ಟು ಮಾಡಿಕೊಂಡು ಹೋಗಿದ್ದರೂ ಕೂಡ, ಆ ಬ್ರಹತ್ ಜಾಗದಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ ಹೋಗಲು ಕೇಳಿ ಕೇಳಿ ಹೋಗಬೇಕಾಗುತ್ತಿತ್ತು. ಸೆಕ್ಟರ್ಗಳ ಮಾಹಿತಿಯಾಗಲಿ, ಸ್ನಾನಘಟ್ಟ, ಅಖಾಡಗಳು, ಊಟ ತಿಂಡಿಗಳು ಯಾವ ವಸ್ತು ಎಲ್ಲಿ ಸಿಗಬಹುದು  ಎಂಬಿತ್ಯಾದಿ ಮಾಹಿತಿ ಯಾವುದನ್ನಾದರೂ ಯಾವುದೇ ಪೋಲೀಸರ ಬಳಿಯೂ ಕೇಳಬಹುದು. ಎಲ್ಲಾ ಕಡೆ ಪೊಲೀಸ್ ಬೂತ್ಗಳು ಸುಲಭವಾಗಿ ಲಭ್ಯ. ಎಲ್ಲಾ ಕಡೆ ಆಂಬುಲೆನ್ಸ್ ನಿಂತಿರುತ್ತದೆ. ಅಗ್ನಿಶಾಮಕ ದಳ, ತುರ್ತು ನಿರ್ವಹಣಾ ದಳ ಎಲ್ಲವೂ ಬೇಕೆಂದಾಗ ನಿಮಿಷಗಳಲ್ಲಿ ಲಭ್ಯವಾಗುವಷ್ಟು ವ್ಯವಸ್ಥೆ. ಎರಡು ದಿನಗಳಲ್ಲಿ ಹೀಗೇ ಅನೇಕರನ್ನು ಮಾತನಾಡಿಸಿದ್ದೆ ನಾನು. ಸಿಪಾಯಿಗಳಿಂದ ಹಿಡಿದು, ಅಡ್ಮಿನಿಸ್ಟ್ರೇಟಿವ್ ಅಧಿಕಾರಿಗಳವರೆಗೆ, 'ಗಂಗಾ ಮೈಯ್ಯ ಕೀಕೃಪಾ', 'ಮಹಾದೇವ್ ಕಿ ಕೃಪಾ','ಪ್ರಯಾಗ್ರಾಜ್ನ ಕ್ಷೇತ್ರ ಮಹಿಮೆ'ಯ ಬಲವೇ ಈ ಬ್ರಹತ್ಕಾರ್ಯಕ್ರಮದ ಯಶಸ್ಸು, ನಮ್ಮದೇನಿಲ್ಲ ಎನ್ನುವವರೇ ಸಿಕ್ಕಿದರು!  ಹಗಲೂ ರಾತ್ರಿ ಲಕ್ಷ ಲಕ್ಷ ಜನರು ಎದುರಾದರೂ, ಎಲ್ಲರೊಂದಿಗೆ ತೋರ್ಪಡಿಸುವ ಅವರ ಸ್ನೇಹಭಾವ ಮತ್ತು ತಾಳ್ಮೆಗೆ ಮಾತ್ರ, ನನ್ನದೊಂದು ಸಾಷ್ಟಾಂಗ ನಮಸ್ಕಾರ!  



 ನಮ್ಮ ಸಂಗಡಿಗರು - ಹಿರಿಯರು, ಎರಡನೇ ದಿನಕ್ಕೆ ಬೆಳಗ್ಗಿನಿಂದ ಸುತ್ತಿ, ಅವರಿಗೆ ಕಾಲು ನೋವು ಸಹಜವಾಗಿತ್ತು. ಸಾಧ್ಯವಾದಾಗಲೆಲ್ಲ ಎಲೆಕ್ಟ್ರಿಕ್ ಆಟೋ, ಶೇರ್ಡ್ ಆಟೋಗಳ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೆವು. ಸಂಗಮದ ಸ್ನಾನ ಘಟ್ಟಕ್ಕೆ ಹೋಗಬೇಕೆಂದು ಆಟೋ ಮೂಲಕ ಹೊರಟಿದ್ದಾದರೂ, ಜನಜಂಗುಳಿ ಹೆಚ್ಚಾದಾಗ ನಿರ್ವಹಣೆಗೆಂದು ಮಾರ್ಗಗಳನ್ನು ಮುಚ್ಚಿ, ಬದಲೀ ಹಾದಿಯನ್ನು ಹಿಡಿಯಲು ತಿಳಿಸುತ್ತಾರೆ. ನಮಗೆ  ನಡೆಯಲು ತೊಂದರೆ ಎನಿಸಿದರೂ, ಅಷ್ಟು ದೊಡ್ಡ ಜಾಗದಲ್ಲಿ ಲಕ್ಷ ಲಕ್ಷ ಜನರ ಮ್ಯಾನೇಜ್ ಮಾಡಲು ಬ್ಯಾರಿಕೇಡ್ ಹಾಕಿ ಜನರ ಹರಿವನ್ನು ನಿಯಂತ್ರಿಸುವ ಬಗೆ ಪ್ರಶಂಸನೀಯ. ನಾವು ಹೋಗಬೇಕಾಗಿದ್ದ ಘಾಟ್ಇನ್ನೇನು ೨ ಕಿಮೀ ಇದೆ ಎಂದಾಗ, ಆ ಹಾದಿ ಆಗಷ್ಟೇ ಮುಚ್ಚಲ್ಪಟ್ಟಿತು. ಒಂದು ನಿಮಿಷ ಮುಂಚೆ ಬಂದಿದ್ದರೇ ಎಂದು ಕೈಕೈ ಹೊಸೆದುಕೊಂಡಿದ್ದಾಯಿತು. ಆಟೋದವನು ಇಲ್ಲಿಂದ ಮುಂದಕ್ಕೆ ಹೋಗಲಾರೆವು, ಬದಲೀ ಹಾದಿ ಕೂಡ ಜನಜಂಗುಳಿಯಿಂದ ಕೂಡಿರುತ್ತದೆ ಹಾಗಾಗಿ ತಾನು ಇನ್ನು ಮುಂದಕ್ಕೆ ಬರಲಾರೆ ಎಂದು ತನ್ನ ಸವಾರಿ ಕೈದು ಮಾಡಿದ. ಮಟಮಟ ಮಧ್ಯಾಹ್ನ, ನೆತ್ತಿ ಸುಡುತ್ತಿತ್ತು. ತಡಮಾಡದೇ ಓಡಿದೆ ಆ ಪೊಲೀಸರ ಬಳಿಗೆ. ನಾವು ಕರ್ನಾಟಕದಿಂದ ಬಂದಿದ್ದೇವೆ, ಹಿರಿಯರುಗಾಡಿಯೊಳಗಿದ್ದಾರೆ, ಅವರಿಗೆ ನಡೆಯಲಾಗದು, ನಾವು ನಡೆದು ಬರುತ್ತೇವೆ, ದಯವಿಟ್ಟು ಅವರಿಗೆ ವ್ಯವಸ್ಥೆ ಮಾಡಿಕೊಡಿ ಎಂದು ವಿನಂತಿಸಿಕೊಂಡೆ. ' ಬಹುತ್ ದೂರ್ ಸೆ ಆಪ್ಲೊಗ್ ಆತೇ ಹೈ ಬಹನ್ಜಿ, ಕುಂಭ್ ಸ್ನಾನ್ ಕೇಲಿಯೇ , ಹಮೆ ಪತಾ ಹೈ...ಲೇಕಿನ್, ಹಮಾರಾ ಕರ್ತವ್ಯ ಹೋತಾ ಹೈ ಔರ್ ಹಮೇ ಅಟಲ್ ರಹನ ಹೈ" ಎಂದು ತಿಳಿಸಿದರು. ನಿರಾಸೆಯಿಂದ ವಾಪಸಾಗಿ ಇನ್ನೆನೂ ಆ ಆಟೋದವನನ್ನು ಕಳಿಸಿ ನಾವು ನಡೆಯಲು ಪ್ರಾರಂಭಿಸಬೇಕು ಎನ್ನುವಷ್ಟರಲ್ಲಿ, ಮತ್ತೊಂದು ಅಧಿಕಾರಿ ಹಿರಿಯರ ಮುಖವನ್ನೊಮ್ಮೆ ನೋಡಿಕೊಂಡು, "ದಸ್ ಮಿನಟ್ ರುಖಿಯೇ, ಹಮೆ ಅಭಿ ಇನ್ಸ್ಟ್ರಕ್ಷನ್ಸ್ ಆಯೇಗಾ, ಆಪ್ಕೆ ಮಾ ಬಾಪ್ ಕೋ ಲೇಕರ್ ಅಂದರ್ ಜಾಕೆ ಸ್ನಾನ್ ಕೀಜಿಯೇ, ಪುಣ್ಯ ಪಾಯಿಯೇ.. ತಬ್ ತಕ್ ಅಂದರ್ ಹಿ ಬೈಠಿಯೇ, ಗಾಡೀ ಮೇ.." ಎಂದು ಹೇಳಿದರು. 


ಸಂಗಮ ಸ್ನಾನಘಟ್ಟಗಳಲ್ಲಿ ಹೋಗಿ ಸ್ನಾನ ಮಾಡುವುದು, ಸುರಕ್ಷಿತವಾಗಿ ಇರುವುದು ನಮ್ಮ ನಮ್ಮ ಕರ್ತವ್ಯ, ಎಲ್ಲಾ ಕಡೆ ಬ್ಯಾರಿಕೇಡ್ ಹಾಕಿದ್ದರೂ ಕೂಡ, ಅಲ್ಲಲ್ಲಿ ಒಂದಷ್ಟು ಸ್ವಯಂಸೇವಕರು ಬ್ಯಾರಿಕೇಡ್ ಮೇಲೆ ನಿಂತೇ ಇರುತ್ತಾರೆ. ಯಾತ್ರಾರ್ಥಿಗಳನ್ನು ನೋಡಿಕೊಳ್ಳುವುದೇ ಅವರ ಕೆಲಸ. ನೀರಿನ ಜಾಗದಲ್ಲಿಯಾರಾದರೂ ಕೊರೆವ ಚಳಿಯಲಿ ಮುಳುಗಿ ಏಳಲು ಪ್ರಯಾಸಪಡುತ್ತಿದ್ದರೆ ಕೊಡಲೇ ನೀರಿಗಿಳಿದು ಅವರಿಗೆ ಸಹಾಯ ಮಾಡುತ್ತಿರುವುದ ಕಣ್ಣಾರೆ ಕಂಡೆ.  ಎಲ್ಲಿ ಆಳವಿದೆ, ಎಲ್ಲಿಯವರೆಗೆ ಮಕ್ಕಳನ್ನು ತರಬಹುದು ಎಂಬಿತ್ಯಾದಿ ಮಾಹಿತಿ, ಎಲ್ಲಿಯಾದರೂ ಯಾವುದಾದರೂ ನೀರಿನಲ್ಲಿ ಕಸಗಳನ್ನು ಕಂಡರೆ ತಕ್ಷಣವೇ ಬಲೆಗಳಿಂದ ಎಳೆದು ಹಾಕುತ್ತ, ಅದೂ ಕೂಡ ಒಟ್ಟೊಟ್ಟಿಗೆ ನೂರಾರು ಜನರುನೀರಿಗಿಳಿವ ಸ್ಥಳದಲ್ಲಿ ತೀಕ್ಷ್ಣ ಮತೀಯರಾಗಿ ಕೆಲಸ ಮಾಡುತ್ತಿದ್ದ ಆ ಯುವಕರ ಕೆಲಸ ಶ್ಲಾಘನೀಯ. ಎರಡನೇ ದಿನ ನಾವು ಸ್ನಾನ ಮಾಡುವ ಘಟ್ಟದಲ್ಲಿದ್ದಾಗಲೇ, ಸ್ಕೌಟ್ಸ್ ಪಂಗಡದವರು ಗಸ್ತಿಗೆ ಬಂದು, ನದಿಯ ತಟಕ್ಕೆ ಕಾಲು ಜಾರದಂತೆ ಟೈಲ್ಸ್ನಂತೆ ಜೋಡಿಸಿಟ್ಟಿರುವ, ಮರಳನ್ನು ತುಂಬಿದ ಪ್ಲಾಸ್ಟಿಕ್ನ ಚೀಲಗಳ ಮೇಲೆ, ಗಂಗೆ ಪೂಜೆಗೆಂದು ದೀಪ, ಊದಿನ ಕಡ್ಡಿ ಹಚ್ಚಿ ಪೂಜೆ ಮಾಡುವವರಿಗೆ ಅತ್ಯಂತ ವಿನಮ್ರತೆಯಿಂದ ಬೆಂಕಿ ಚೀಲಕ್ಕೆ ತಾಗಿಸದಂತೆ ಸುರಕ್ಷತೆಯ ಕಾಪಾಡಲು ಕೇಳಿಕೊಳ್ಳುತ್ತಿದ್ದ, ಪ್ಲಾಸ್ಟಿಕ್ ಕವರ್ಗಳನ್ನು ತಂದವರಿಗೆ ಪ್ಲಾಸ್ಟಿಕ್ ಒಂದೂ ನೀರಿಗೆ ಹೋಗದಂತೆ ಜಾಗೃತೆ ವಹಿಸಲು ಕೇಳುತ್ತಿದ್ದ ಪರಿ ಮನಸ್ಸನ್ನು ಗೆದ್ದುಬಿಟ್ಟಿತು. ಇಷ್ಟೆಲ್ಲ ನೋಡಿಕೊಳ್ಳಲು ಸಾಕಷ್ಟು ಮುಂಚೆಯೇ ಇವರೆಲ್ಲರಿಗೂ ಟ್ರೈನಿಂಗ್ ಆಗಿರಬಹುದು, ಆದರೆ ಬಂದು ಮಾಡಬೇಕಲ್ಲ!? ಕೈಕಾಲು ಹಾಕಲು ಜಾಗ ಇಲ್ಲದಷ್ಟು ಜನರ ಮಧ್ಯೆಯೂ ಸ್ವಲ್ಪವೂ ತಾಳ್ಮೆಗೆಡದೆ ಪ್ರತಿಯೊಬ್ಬರ ಪ್ರಶ್ನೆಗೂ ಉತ್ತರಿಸುತ್ತಾ, ಇನ್ಸ್ಟ್ರಕ್ಷನ್ಸ್ ನೀಡುತ್ತಾ ಹೋಗುವ ಅದೆಷ್ಟು ಮಂದಿಯನ್ನು ಇಡೀ ಮಹಾಕುಂಭಮೇಳದಲ್ಲೆಲ್ಲಾ ಕಂಡೆವೋ ಲೆಕ್ಕವಿಲ್ಲ. 


ಶನಿವಾರ ಮಧ್ಯಾಹ್ನ ಕುಂಭ ಮೇಳದಲ್ಲಿ ನಾವು ಸಂಗಮ ತಟದಲ್ಲಿದ್ದಾಗಲೇ, ಗ್ಯಾಸ್ ಸಿಲಿಂಡರ್ ಸ್ಫೋಟವಾಗಿ ಟೆಂಟ್ಗಳಿಗೆ ಬೆಂಕಿ ಹತ್ತಿದ್ದು. ೨-೩ ಕಿಮೀ ದೂರದಲ್ಲಿದ್ದೆವು. ಸ್ಫೋಟ, ಬೆಂಕಿಯ ಚಿತ್ರಣ, ದಟ್ಟವಾದ ಹೊಗೆ ಇವೆಲ್ಲದಕ್ಕೂ ಸಾಕ್ಷಿಯಾದೆವು. ನಮ್ಮ ಕಣ್ಣೆದುರೇ ಕಾಣುತ್ತಿದೆ! ಆದರೆ ನಾವಿದ್ದ ಜಾಗದಲ್ಲಿ ಒಂದು ಹಾನಿಯಾದರೂ ಆತಂಕದ ಸನ್ನಿವೇಶ ಸೃಷ್ಟಿಯಾದರೆ ಕೇಳಿ? ಅಶ್ವದಳದವರು ನಿಯಮಿತವಾಗಿ ಓಡಾಡಿಕೊಂಡೇ ಇರುತ್ತಾರೆ. ಧ್ವನಿವರ್ಧಕಗಳಲ್ಲಿ ಖೋಯ ಪಾಯಾ ಘೋಷಣೆ ಬಿಟ್ಟರೆ ಬೇರೆ ಯಾವುದೇ ರೀತಿಯ ಆತಂಕದ ಘೋಷಣೆ ಇಲ್ಲ. CRPF ಸ್ಕ್ವಾಡ್ ನ ತಂಡ ನಾವಿದ್ದಲ್ಲಿಗೂ ಬಂದು ಅಲ್ಲಲ್ಲಿ ತಮ್ಮ ಪೊಸಿಶನ್ ತೆಗೆದುಕೊಂಡು ಅದಾಗಲೇ ನಿಂತಿದ್ದರು.ಪಕ್ಕದವರ್ಯಾರೋ ಅವರನ್ನು, ಏನಾಗುತ್ತಿದೆ ಎಂದು ವಿಚಾರಿಸಿದರೆ, "ಕುಚ್ ನಹಿ ಶ್ರೀಮಾನ್, ಹಮ್ ಲೋಗ್ ಹರ್ ಜಗಹ್ ರಹತೇ ಹೈ, ವನ್ಹ ಉಸ್ ತರಫ್ ಆಗ್ ಕಿ ಏಕ್ ಚೋಟಸಾ ಆಕ್ಸಿಡೆಂಟ್ಹೋಗಯಾ ಹೋಗ, ಕೊಯಿ ನೈ, ಆಪ್ ಜಾಯಿಯೇ ನ್ಹಾಯಿಯೇ.. "  ಎನ್ನುತ್ತಾ ಸಮಚಿತ್ತದಿಂದ ಉತ್ತರಿಸಿದ ಆ ಸಿಪಾಯಿ. ಆತಂಕದ ಚಹರೆ ಒಬ್ಬರದ್ದೂ ಇಲ್ಲ. ೧೦-೧೫ ನಿಮಿಷಕ್ಕೆ ಅಲ್ಲಿ ಏನೂ ನಡೆದೇ ಇಲ್ಲವೆಂಬಂತೆ ಹೊಗೆಯೂ ಕಡಿಮೆಯಾಗುತ್ತ ಬಂದಿತು. ಅಂದು ರಾತ್ರಿ ೧೦.೩೦ ತನಕ ಆರಾಮದಲ್ಲಿ ಸುತ್ತಿ ನಾವೆಲ್ಲಾ ರೂಮು ಸೇರಿಕೊಂಡೆವು. 


ನದಿಯ ತಟದಲ್ಲಿನ ಮರಳ ಹಾದಿಯಲ್ಲಿ ಮಗನೊಬ್ಬ ವೀಲ್ಚೇರಿನಲ್ಲಿ ಕುಂಭಮೇಳಕ್ಕೆ ತನ್ನ ತಾಯಿಯ ಕರೆತಂದಿದ್ದನ್ನು ನೋಡಿ ಹುಬ್ಬೇರಿಸುವಂತೆ ಆಗಿತ್ತು ನಮಗೆ. ವಾಪಸು ಕರೆದೊಯ್ಯಲು ತುಸು ಕಷ್ಟದಿಂದ ಪ್ರಯತ್ನಿಸುತ್ತಿದ್ದನ್ನೂ ದೂರದಿಂದ ನೋಡಿದ್ದೆ. ನಾವು ಪುಣ್ಯಸ್ನಾನಕ್ಕೆಂದು ನೀರಿನಲ್ಲಿ ಇಳಿದಾಗ, ಅದೇ ಅಜ್ಜಿ ಇರುವ ವೀಲ್ಚೇರನ್ನು, ಆಕಡೆ ಈಕಡೆ ಹಿಡಿದು ಮರಳ ರಾಶಿಯಿದ್ದ ನೆಲದಿಂದ, ಕಬ್ಬಿಣದ ಹಾಸಿನ ರಸ್ತೆಯವರೆಗೆ ಎತ್ತಿಕೊಂಡು  ಹೋಗಿ ಬಿಟ್ಟದ್ದು ಪೊಲೀಸರು. ಸಹಾಯ ಕೇಳಿದ್ದ ಅಥವಾ ಅವರೇ ಸ್ವಯಂ ಸಹಾಯಕ್ಕೆ ಬಂದಿದ್ದ ಗೊತ್ತಿಲ್ಲ ಏನಾದರಾಗಲೀ, ಯಾವ ಕೆಲಸಕ್ಕಾಗದರೂ ಜೈ ಎನ್ನುತ್ತಾರಲ್ಲ ಎಂಬ ಅಚ್ಚರಿ. ಪರಸ್ಪರ ಸಹಕಾರದಿಂದಲೇ ಯಾವುದಾದರೂ ಯೋಜನೆ ಯಶಸ್ವಿಗೊಳ್ಳಲು ಸಾಧ್ಯ ಎನ್ನುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಏನಿದೆ? ಶೈಲಕ್ಕ ಹೇಳುತ್ತಿದ್ದಳು, "ಸೌಮ್ಯ, ಯಾವ ಮನಸ್ಸಿಂದ ನಾವು ನೋಡ್ತ್ಯ ಹಂಗೆ ಇರ್ತು ಪ್ರಪಂಚ, ಯಾವ ಸಂಕಲ್ಪದಿಂದ ನೀ ಕೆಲಸ ಮಾಡ್ತೆ ಅದಕ್ಕೆ ತಕ್ಕಂತೆ ಯಶಸ್ಸು, ಇಲ್ಲಿ ಕೆಟ್ಟದ್ದಂತ ಏನೂ ಇಲ್ಲೇ ಮಗ"


ಚಿಕ್ಕಂದಿನಿಂದ ಸಾರ್ವಜನಿಕ ಕಾರ್ಯಕ್ರಮಗಳ ಪೆರೇಡ್ಗಳನ್ನ ಬಿಟ್ಟರೆ, ಇಷ್ಟೆಲ್ಲಾ ಪೋಲೀಸರ ಓಡಾಟ, ಕಾರ್ಯನಿರ್ವಹಿಸುವಿಕೆ ಇತ್ಯಾದಿ ಇಷ್ಟು ಹತ್ತಿರದಿಂದ ಜೀವನದಲ್ಲಿ ನೋಡಿದ್ದಿಲ್ಲ ನಾನು. ಮಹಾಕುಂಭಮೇಳ ಪ್ರವಾಸದ ಉದ್ದೇಶದಿಂದ ಹೋಗಿ, ಒಂದಿಡೀ ಊರನ್ನು ಲಕ್ಷ ಲಕ್ಷಗಟ್ಟಲೆ ಜನರನ್ನು ನಿರ್ವಹಿಸುವಷ್ಟು ಸಮರ್ಥ ಸಾವಿರಾರು ಪೊಲೀಸರನ್ನು ಒಟ್ಟಿಗೆ ನೋಡಿದ್ದು  ಮತ್ತು ಅವರ ಕಾರ್ಯಕ್ಷಮತೆ, ಅಬ್ಬಬ್ಬಾ ನನಗಂತೂ ಮತ್ತೆ ಮತ್ತೆ ನೆನಪಾಗುವ ಅಚ್ಚರಿ! ಪೊಲೀಸರೆಂದರೆ ಗಡುಸು, ಭಯ ಎಂಬುದಕ್ಕೆ ವಿರುದ್ಧವಾಗಿ ವಿನಮ್ರತೆಯ, ಸಹಾಯ ಮನೋಭಾವದ ಜನರ ಅನುಭವವೇ ನನಗೆ ಈವರೆಗೆ ಸಿಕ್ಕಿದ್ದು. ನಿಯಮಗಳ ಪರಿಪಾಲನೆಗೆ, ಜನರನ್ನು ನಿಯಂತ್ರಣಕ್ಕೆ ತರುವ ಅವರುಗಳ ಪರಿಶ್ರಮ ಸತ್ಯವಾದದ್ದು ಮತ್ತು ಪ್ರಾಮಾಣಿಕವಾದುದ್ದು. ಮಹಾಕುಂಭಮೇಳದಲ್ಲಿ ನಡೆದ ದುರ್ಘಟನೆಯ ಕೇಳಿ ಅತ್ಯಂತ ಖೇದವೆನಿಸಿದರೂ, ಪುಣ್ಯಸ್ನಾನದ ನಂಬಿಕೆ ಆಚರಣೆ ಶ್ರದ್ದೆಯಿಂದ ನಡೆಸುವವರ ಹೊರತಾಗಿ, ಆ ಸಾಧುಗಳನ್ನು, ಜನಸಮೂಹವನ್ನು ನೋಡಲೆಂದೇ ಬಂದವರು ಲಕ್ಷಗಟ್ಟಲೆ ಇರುತ್ತಾರೆ. ಇದು ಸಂಪೂರ್ಣ ಜನರ ನಿರ್ಧಾರವೇ ಹೊರತು, ವ್ಯವಸ್ಥೆಗಳ ಕೊರತೆ ಎಂದೆನಿಸುವುದಿಲ್ಲ. ಪುಣ್ಯಸ್ನಾನದ ದಿನಕ್ಕೆ ಪ್ರಾಶಸ್ತ್ಯ - ಸಾಧು ಸಂತರ ಸ್ನಾನದಿಂದಾಗಿ ಇದೆಯೇ ಹೊರತು, ಭಕ್ತಿ ನಂಬಿಕೆಗಳಿದ್ದರೆ, ಮಹಾಕುಂಭಮೇಳದ ಬೇರೆ ದಿನಗಳೂ ಕೂಡ ಅಷ್ಟೇ ಪವಿತ್ರವಾದವುಗಳು. ಕುಂಭಮೇಳದ ಪರಿಸರವನ್ನು ಅನುಭವಿಸಿ ಬಂದವಳಿಗೆ, ಅಲ್ಲಿನ ಅನಿಯಂತ್ರಿತ ಘಟನೆಗೆ ಈ ಆರಕ್ಷಕರು ಅದೆಷ್ಟು ತಕ್ಷಣ ಕಾರ್ಯಪ್ರವೃತ್ತರಾಗಿ, ಅದೆಷ್ಟು ತ್ವರಿತವಾಗಿ ಸನ್ನಿವೇಶವನ್ನು, ಶ್ರಮಪಟ್ಟು ಹತೋಟಿಗೆ ತರುವ ಪ್ರಯತ್ನ ಮಾಡಿರಬಹುದು ಎಂದು ಯೋಚಿಸಿ ಒಂದ್ ಸಲ ಮೈ ಜುಮ್ಮೆನಿದಿತು. ಯಾಕೆಂದರೆ, ಕಾಲ್ತುಳಿತಕ್ಕೆ ಸಿಲುಕಿದವರ ರಕ್ಷಿಸಲು ಶತಾಯುಗತಾಯು ಪ್ರಯತ್ನ ಮಾಡುವ ಇವರುಗಳೂ ನಮ್ಮ ಹಾಗೇ ಮನುಷ್ಯರಲ್ವಾ!?  




ಮಹಾಕುಂಭಮೇಳಕ್ಕಾಗಿಯೇ ಹೋಗುವವರಿಗಾಗಿ ಕಿವಿಮಾತು : ಸಾವಿರಾರು ಪೊಲೀಸ್ ಇದ್ದಾರೆ ಯಾತ್ರಾರ್ಥಿಗಳ ರಕ್ಷಣೆಗೆ; ನಮ್ಮ ಸುರಕ್ಷತೆ ಅವರ ಹೊಣೆ ಎಂದು ಬೇಕಾಬಿಟ್ಟಿ ಪ್ಲಾನಿಂಗ್ ಇಲ್ಲದೇ ಹೋಗಬೇಡಿ. ಅವರ ಕರ್ತವ್ಯ ಅವರು ಮಾಡುತ್ತಿದ್ದಾರೆ ಆದರೆ ಸಾಮಾಜಿಕ  ಕಳಕಳಿ ನಮಗೂ ಬೇಕು. ಸುರಕ್ಷತೆ ನೋಡಿಕೊಳ್ಳುವುದೇ ಅವರ ಕೆಲಸ ಹಾಗಾಗಿ ನಿರಾತಂಕವಾಗಿ ಇರುತ್ತೇನೆ ನಾನು ಅಲ್ಲಿ ಎಂದು, ನಿಮ್ಮ ನಿಮ್ಮ ಲಗೇಜು, ಫೋನು ಇತ್ಯಾದಿ  ಒಂದು ನಿಮಿಷಕ್ಕಾದರೂ ಬಿಟ್ಟು ಮೈ ಮರೆತಿರೋ, ನಿಮಿಷಾರ್ಧದಲ್ಲಿ ಅದಲ್ಲಿ ಇರುವುದಿಲ್ಲ. ಹೇಳಿ ಕೇಳಿ -ಜಾತ್ರೆ ಅದು! ಜಾತ್ರೆಯೆಂದರೆ ನೂರಾರು ಕಳ್ಳರೂ, ಮೋಸಗಾರರು ಕೂಡಾ ನಿಮ್ಮಷ್ಟೇ  ಉತ್ಸಾಹದಿಂದ ಅಲ್ಲಿಗೆ ಬಂದಿರುತ್ತಾರೆ. ಹಾಗಾಗಿ ನಮ್ನಮ್ಮ ಸುರಕ್ಷಿತ ಯಾತ್ರೆ ನಮ್ಮ ಜವಾಬ್ಧಾರಿ!

#mahakumbh2025 #safetyandsecurity

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶೈಕ್ಷಣಿಕ ಪ್ರವಾಸಗಳ ಮಹತ್ವ

ಶರಣರ ಸಾವು ಮರಣದಲಿ ಕಾಣು

ಪ್ಲಾಸ್ಟಿಕ್ ಫ್ರೀ ಜುಲೈ ಕ್ಯಾಲೆಂಡರ್