ಮಹಾ ಕುಂಭ ಮೇಳ - ಕೋಟಿ ಜನರ ಮಧ್ಯೆ ನಾವು ಕಳೆದು ಹೋಗಲ್ವಾ?

' ಕುಂಭ್ ಮೇ ಬಿಚ್ದಾ ಹುವಾ' ಅನ್ನೋ ವಾಕ್ಯ ಆವಾಗಿನ ಕಾಲದ ಸಿನಿಮಾಗಳ ಪ್ರಭಾವದಿಂದ ಪ್ರಸಿದ್ಧಗೊಂಡು, ಜನರ ಮನಸ್ಸಿನಲ್ಲಿ ಒಂದು ರೀತಿಯ ಕಳವಳ ಇಂದಿಗೂ ಬೇರೂರಿದೆ. ವಯಸ್ಸಾದ ಹಿರಿಯರನ್ನ, ಕುಂಭದ ಜನಜಂಗುಳಿಯಲ್ಲಿ ಅವರ ಮಕ್ಕಳು ಬಿಟ್ಟೋಡಿದ ಘಟನೆಗಳೂ ಸಾಕಷ್ಟು ಪ್ರಚಲಿತದಲ್ಲಿದ್ದವು. ಈ ಸರ್ತಿ ಇದು ೧೪೪ ವರ್ಷಗಳಿಗೆ ಒಮ್ಮೆ ಮಾತ್ರ ಬರುವ 'ಮಹಾ ಕುಂಭ ಮೇಳ'. ಇದಕ್ಕೆ ನಡೆಸಿದ ತಯಾರಿ? ನಮ್ಮಗಳ ಕಲ್ಪನೆಗೂ ಮೀರಿದ್ದು! ೪೫ ದಿನಗಳ ಈ ಕಾರ್ಯಕ್ರಮಕ್ಕೆ ಹರಿದು ಬರುತ್ತಿರುವ ಜನಪ್ರವಾಹ ನೋಡಿದರೆ, ೪೦ ಕೋಟಿ ಅಲ್ಲ ಅದಕ್ಕಿಂತಲೂ ಜಾಸ್ತಿ ಆಗುವ ಸಾಧ್ಯತೆ ಇದೆ. ಇಷ್ಟೆಲ್ಲಾ ಜನರು ಸೇರುವ ಜಾಗ, "ಕೋಟಿ ಜನರ ಮಧ್ಯೆ ನಾವು ಕಳೆದು ಹೋಗಲ್ವಾ?" ಎಂಬ ಅಳುಕು ಅನೇಕರ ಮನಸ್ಸಿನಲ್ಲಿ ಅತ್ಯಂತ ಸಹಜ. ಆದರೆ ಮಹಾಕುಂಭವೆಂಬ ಬೃಹತ್ ಆಧ್ಯಾತ್ಮಿಕ ಕಾರ್ಯಕ್ರಮಕ್ಕೆ ಡಿಜಿಟಲ್ ತಾಂತ್ರಿಕತೆಯ ಅತ್ಯಂತ ಸಮರ್ಪಕ ರಕ್ಷಣಾಕವಚ ನೀಡಿರುವುದು, ಉತ್ತರಪ್ರದೇಶ ಸರ್ಕಾರದ ಅತ್ಯಂತ ಯಶಸ್ಸಿನ ವ್ಯವಸ್ಥೆ! ಕುಂಭ ಮೇಳಕ್ಕೆ ಹೋಗಿ ೫೦ ಲಕ್ಷ ಜನರ ಮಧ್ಯೆ ನಿಂತುಕೊಂಡು ಅಲ್ಲಿನ ಅತ್ಯದ್ಭುತ ವ್ಯವಸ್ಥೆಗಳನ್ನು ನೋಡಿ ಹೇಳುತ್ತಿದ್ದೇನೆ - ಕಳೆದು ಹೋಗಲೇಬೇಕು ಎಂತಾದರೆ..ಕಳೆದು ಹೋಗುವುದು ಮನಸ್ಸು - ಅಲ್ಲಿನ ದೈವಿಕತೆಗೆ, ಶ್ರದ್ಧಾ ಭಕ್ತಿಗಳಿಗೆ!  



ಈ ಕೆಳಗಿನ ಮಾಹಿತಿಗಳು ಮಹಾಕುಂಭಮೇಳಕ್ಕೆ ಹೋಗುವ ಯಾತ್ರಿಕರಿಗಾಗಿ, ಹೋಗದಿದ್ದವರೂ ಓದಿ ತಿಳಿದುಕೊಳ್ಳಬಹುದು.  

೧. ೪೦೦೦ ಹೆಕ್ಟೇರು ಜಾಗದಲ್ಲಿ ನಡೆಯುತ್ತಿರುವ ಬ್ರಹತ್ ಮಹಾಕುಂಭಮೇಳ ಕಾರ್ಯಕ್ರಮದಲ್ಲಿ, ೧೦ ಮುಖ್ಯ ವಲಯಗಳಲ್ಲಿ 'ಖೊಯಾ-ಪಾಯಾ' (ಕಳೆದುಹೋದ- ಕಂಡುಕೊಂಡ) ಆಫೀಸುಗಳನ್ನು ಮಾಡಿದೆ. ಗುರುತಿಗಾಗಿ, ಆ ಆಫೀಸುಗಳ ಮೇಲೆ ಎತ್ತರಕ್ಕೆ ದೊಡ್ಡದಾದ ಬಲೂನುಗಳನ್ನು ಹಾರಿಸಿದ್ದಾರೆ.

೨. ೧೯೨೦ ಇದು ಅಲ್ಲಿನ ತುರ್ತು ಸಹಾಯಕ ಸಂಖ್ಯೆ. ನಮಗೇ ಅವಶ್ಯಕತೆಯಿದ್ದಲ್ಲಿ ಅಥವಾ ನಮ್ಮ ಸುತ್ತಮುತ್ತಲು ಮತ್ಯಾರೋ ಅಸಹಾಯಕರು ಕಳೆದು ಹೋಗಿ ಪೇಚಾಡುತ್ತಿದ್ದರೆ, ಅವರಿಗೆ ಸಹಾಯ ಮಾಡಲು, ಈ ನಂಬರಿಗೆ ಕರೆ ಮಾಡಿ, ಅವಶ್ಯಕ ಮಾಹಿತಿ ಹೇಳಿ-ಕೇಳಿ ಮಾಡಬಹುದು. ಭಾಷೆ ಬಾರದಿದ್ದರೂ ಚಿಂತೆಯಿಲ್ಲ. ಮಹಾಕುಂಭಮೇಳದ ತುಂಬಾ ನಾವು ಯಾವ ಸೆಕ್ಟರ್, ಯಾವ ಮಾರ್ಗದಲ್ಲಿದ್ದೇವೆ ಎಂಬ ಫಲಕಗಳು ಸಾಕಷ್ಟು ಕಡೆ ಕಾಣಸಿಗುತ್ತವೆ. ಕನಿಷ್ಠಪಕ್ಷ ಆ ಫಲಕಗಳ ಮಾಹಿತಿ ನೀಡಿದರೂ ಸಾಕು, ಸ್ವಯಂಸೇವಕರು ಸಹಾಯಕ್ಕೆ ಬರುತ್ತಾರೆ.  ಮಹಾಕುಂಭಮೇಳದ ತುಂಬಾ, ನಾನು ಕಂಡಂತೆ, ಕಲಿಯಲು ಸಿಗುವ ಪಾಠವೇ 'ಇತರರಿಗೆ ನಮ್ಮಕೈಲಾದಷ್ಟು ಸಹಾಯ ಮಾಡುವುದು'  

೩.  ಅಷ್ಟು ಲಕ್ಷ ಜನರ ಮಧ್ಯೆ,ನೀವೇ ನಿಮ್ಮ ಗುಂಪಿನವರಿಂದ ಬೇರ್ಪಟ್ಟಿರಿ ಅಂತಾದರೆ, ಧೈರ್ಯಗೆಡುವ ಅವಶ್ಯಕತೆ ಖಂಡಿತಾ ಇಲ್ಲ. ಹತ್ತಿರದ 'ಖೋಯಾ-ಪಾಯ' ಕೇಂದ್ರಗಳಿಗೆ ಹೋಗಿ ನಿಮ್ಮ  ಮತ್ತು ನಿಮ್ಮ ಸಂಬಂಧಿತರ ವಿವರಣೆ ನೀಡಿದರೆ ಸಾಕು. ಸಮಯ ವ್ಯರ್ಥ ಮಾಡದೇ, ತ್ವರಿತಗತಿಯಲ್ಲಿ ಇಲ್ಲಿನ ಕೇಂದ್ರ ತಮ್ಮ ಕರ್ತವ್ಯ ನಿಭಾಯಿಸುತ್ತದೆ. ಇಡೀ ಜಾತ್ರೆ ತುಂಬಾ ಸ್ಪೀಕರ್ಗಳನ್ನು ಅಳವಡಿಸಿದ್ದಾರೆ. ಧ್ವನಿವರ್ಧಕಗಳ ಮೂಲಕ ವಿವರಗಳನ್ನು ಘೋಷಿಸಿ, ಕುಟುಂಬಗಳನ್ನು ಒಂದುಗೂಡಿಸುವ ಕೆಲಸವನ್ನು ಇವರುಗಳು ಮಾಡುತ್ತಾರೆ. ಸಾಮಾಜಿಕ ಮಾಧ್ಯಮ, ವಾಟ್ಸಪ್ಪ್ ಗ್ರೂಪ್ಗಳು ಎಲ್ಲಾ ರೀತಿಯ ವ್ಯವಸ್ಥೆಗಳನ್ನೂ ಮಾಡಿಕೊಂಡಿರುವ ಈ ಕೇಂದ್ರಗಳು, ಕೆಲವೇ ಕ್ಷಣಗಳಲ್ಲಿ ಕುಂಭಮೇಳದ ಮೂಲೆ ಮೂಲೆಗೂ ಮಾಹಿತಿ ಹಂಚಿಕೆ ರವಾನಿಸಿ ಕಳೆದುಹೋದವರನ್ನು ಅವರ ಸಂಬಂಧಿತರಿಗೆ ತಲುಪಿಸುವ ವ್ಯವಸ್ಥೆ ಇದೆ. 

೪.ಅಷ್ಟೊಂದು ಜನರ ಮಧ್ಯೆ ಕಳೆದೋದಾಗ, ಶಾರೀರಿಕವಾಗಿ ಮಾನಸಿಕವಾಗಿ ಕುಂದುವುದು ಸಹಜ. ಆದರೆ ಹೆದರಬೇಕಾಗಿಲ್ಲ. ಈ ಕೇಂದ್ರಗಳಲ್ಲಿ ಅಗತ್ಯ ಎಲ್ಲಾ ವ್ಯವಸ್ಥೆಗಳೂ ಇವೆ. ಪುನರೇಕೀಕರಣ ಟೇಬಲ್, ಕಾಯಲು ತಂಗುವ ಕೊಠಡಿಗಳು, ವಿಶ್ರಾಂತಿ ವೈದ್ಯಕೀಯ ಕೊಠಡಿಗಳು, ಸಮಾಲೋಚನಾ ಕೊಠಡಿಗಳು, ಮಹಿಳೆಯರು ಪುರಷರು ಮತ್ತು ಮಕ್ಕಳಿಗೆ ಬೇಕಾದ ಆಹಾರ ವಸತಿ ವ್ಯವಸ್ಥೆಗಳನ್ನು ಮಾಡಲಾಗಿದೆಯಂತೆ. 

೫.ಕಳೆದುಹೋದಾಗ 'ಖೋಯಾ-ಪಾಯಾ' ಕೇಂದ್ರ ಎಲ್ಲಿದೆ ಎಂದು ಹೇಗೆ ಹುಡುಕುವುದು ಎಂದು ಗಾಬರಿಯಾಗಿದ್ದರೆ, ಅದಕ್ಕೂ ಚಿಂತೆಯಿಲ್ಲ. ೫೦೦೦೦ ಪೊಲೀಸರು ತಮ್ಮ ಕರ್ತವ್ಯದಲ್ಲಿರುತ್ತಾರೆ ಮಹಾಕುಂಭಮೇಳದಲ್ಲಿ. ೧೦೦-೨೦೦ ಮೀಟರ್ ಗೆ ನಿಮಗೆ ಒಬ್ಬರಾದರೂ ಎಡವುತ್ತಾರೆ. ಅವರ ಬಳಿ ನಿವೇದಿಸಿದರೂ ಸಾಕು. ವಿನಮ್ರತೆಯಿಂದ ನಮ್ಮ ಅವಹಾಲು-ಕೋರಿಕೆಗಳನ್ನು ಕೇಳಿ, ಯೋಗ್ಯ ರೀತಿಯಲ್ಲಿ ಸಹಾಯ ಮಾಡುತ್ತಾರೆ.  


೬. ಇಲ್ಲಿ ಲಗತ್ತಿಸಿರುವ ಸೆಕ್ಟರ್ ಮ್ಯಾಪ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಸೇವ್ ಮಾಡಿಟ್ಟುಕೊಳ್ಳಿ. ಅಷ್ಟು ದೊಡ್ದ ಜಾಗದಲ್ಲಿ ನಾವಿಲ್ಲಿದ್ದೇವೆ ಎಂದು ಅರಿಯಲು ಅತ್ಯಂತ ಸಹಾಯಕ.


ಇನ್ನು, ಜೊತೆಗಾರರು ಕಳೆದು ಹೋಗಬಾರದು ಎಂದು, ವೇಲುಗಳನ್ನು ಒಬ್ಬರಿಗೊಬ್ಬರು ಕಟ್ಟಿಕೊಂಡು, ಅಂಗವಸ್ತ್ರಗಳನ್ನು ಮಕ್ಕಳ ಕೈತೋಳಿಗೆ ಕಟ್ಟಿಕೊಂಡು ನಡೆಯುವ ಪಾಲಕಾರು, ಹಗ್ಗವೊಂದನ್ನು ಹಿಡಿದುಕೊಂಡು ೮-೧೦ ಮಂದಿ ಜನರು ಒಟ್ಟಿಗಿದ್ದು ನಡೆಯಲು ಅನುಕೂಲ ಮಾಡಿಕೊಂಡವರು ಹೀಗೆ ಅನೇಕ ಬಗೆಯ ಗುಂಪುಗಳನ್ನು ಕಂಡೆವು. ಉಪಾಯ ಯಾವುದೇ ಇರಲಿ, ಯಾತ್ರೆ ಸಂತೃಪ್ತಗೊಂಡರೆ ಅದೇ ಎಲ್ಲರ ಪಾಲಿನ ಯಶಸ್ವೀ ಮಹಾ ಕುಂಭ ಮೇಳ!

'ಖೊಯಾ-ಪಾಯಾ' ಕೇಂದ್ರದ ಪರಿಕಲ್ಪನೆ ಮತ್ತು ಇತಿಹಾಸ. 

ಈ ಖೋಯಾ-ಪಾಯಾ ಪರಿಕಲ್ಪನೆ ಪ್ರಯಾಗರಾಜ್ ಗೆ ಹೊಸತೇನಲ್ಲ. ೭೦-೮೦ ವರ್ಷಗಳ ಹಿಂದಿನಿಂದಲೂ ಪ್ರಯಾಗರಾಜ್ ನಲ್ಲಿ ಜಾತ್ರೆ-ಮೇಳಗಳ ಕಾರ್ಯಕ್ರಮದಲ್ಲಿ ಈ ರೀತಿಯ ಕೇಂದ್ರಗಳು ಇದ್ದೇ ಇವೆಯಂತೆ. ಇದನ್ನು ಮೊದಲ ಬಾರಿಗೆ ಜಾರಿಗೆ ತಂದವರು - ಪ್ರಯಾಗ್ ರಾಜ್ ನ ನಿವಾಸಿ, ರಾಜಾರಾಮ್ ತಿವಾರಿ. ಇವರು ತಮ್ಮ ೧೮ ನೇ ವಯಸ್ಸಿನಲ್ಲಿ ಹೀಗೆಯೇ ಒಂದು ಮೇಳದಲ್ಲಿ, ಮಹಿಳೆಯೊಬ್ಬಳು ತನ್ನ ಕುಟುಂಬದಿಂದ ಬೇರ್ಪಟ್ಟಾಗ ಹುಡುಕಿ ಅವರನ್ನು ಸಂಧಿಸಲು ಸಹಾಯ ಮಾಡಿದ್ದರಂತೆ. ಆಗೆಲ್ಲ ಧ್ವನಿವರ್ಧಕಗಳೂ ಇಲ್ಲದ ಸಮಯವದು. ಅದೇ ಒಂದು ಘಟನೆಯ ನಂತರ ಅವರು ಆ ಒಂದು ಸಹಾಯ ರೀತಿಯನ್ನು, ಅನೇಕ ಮಾಘ ಮೇಳ, ಅರ್ಧ ಕುಂಭ ಮೇಳ ಮತ್ತು ಕುಂಭಮೇಳಗಳಲ್ಲಿ ತಮ್ಮ ಸೇವೆಯನ್ನಾಗಿ ಪ್ರಾರಂಭಿಸಿದರಂತೆ. ಕರ್ಮಯೋಗದ ಒಂದು ಮನಸ್ಸಿದ್ದಲ್ಲಿ ಹಾದಿಗಳು ಸಾವಿರವಂತೆ. ಇವರು ಸಾಯುವವರೆಗೂ   ಮಾಡಿದ ಈ ಸೇವೆಯಲ್ಲಿ ಈ  ವರೆಗೆ ೧೪ ಲಕ್ಷಕ್ಕೂ ಹೆಚ್ಚು ಹಿರಿಯರು ಮತ್ತು ೨೧೦೦೦ ಕ್ಕೂ ಹೆಚ್ಚು ಮಕ್ಕಳು ತಮ್ಮ ಸಂಬಂಧಿತರನ್ನು ಮತ್ತೆ ಸಂಧಿಸಿದ್ದಾರೆ. ಜಾತ್ರೆಯಲ್ಲಿ ಶಿಬಿರವೊಂದನ್ನ ಸ್ಥಾಪಿಸಿ, ಕಳೆದು ಹೋದವರು ಮತ್ತು ಅವರನ್ನು ಹುಡುಕಿ ಬರುವವರಿಗೆ ಸಂಧಿಸುವ ಸ್ಥಳವನ್ನಾಗಿ ಪ್ರಾರಂಭಿಸಿದ ಇವರ ಪರಿಕಲ್ಪನೆ,  ಮುಂದಕ್ಕೆ ಉತ್ತರಪ್ರದೇಶದ ಸರ್ಕಾರ ಕೈಗೆತ್ತಿಕೊಂಡಿತು. ಈಗ ಸರ್ಕಾರದ ಖೋಯಾ -ಪಾಯಾ ಕೇಂದ್ರಗಳು ಡಿಜಿಟಲ್ ಆಗಿವೆಯಾದ್ದರಿಂದ ಅಧೈರ್ಯಗೊಳ್ಳದೆ ಯಾತ್ರಿಕರು ತಮ್ಮ ಯಾತ್ರೆಯನ್ನು ಕೈಗೊಳ್ಳಬಹುದಾಗಿದೆ.    


  

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶೈಕ್ಷಣಿಕ ಪ್ರವಾಸಗಳ ಮಹತ್ವ

ಶರಣರ ಸಾವು ಮರಣದಲಿ ಕಾಣು

ಪ್ಲಾಸ್ಟಿಕ್ ಫ್ರೀ ಜುಲೈ ಕ್ಯಾಲೆಂಡರ್